ಸೋಮವಾರ, ಡಿಸೆಂಬರ್ 31, 2007

ಕಳೆದ ನಿನ್ನೆಗಳು ಮತ್ತೆ ಬರುವವು....

ಕಳೆದ ನಿನ್ನೆಗಳು ಮತ್ತೆ ಬರುವವು ಕನಸ ಬುಟ್ಟಿ ಹೊತ್ತು
ಸುಳಿವ ಬೇಸರವ ಬದಿಗಿಡು ಗೆಳೆಯಾ ಆಸೆ ಬೀಜ ಬಿತ್ತು

ಕಾವಳ ಕಳೆಯಲು ಬೆಳಕು ಹರಿವುದು ಕಳವಳ ಬೇಕಿಲ್ಲ
ನೋವೊಳು ನಗುವುದ ಕಲಿಯದೆ ಇದ್ದರೆ ಬದುಕಿಗರ್ಥವಿಲ್ಲ

ಕಟ್ಟಿದ ಮೋಡವು ಕರಗಲು ನೋಡು ಮಳೆ ತಾನಾಗೇ ಸುರಿಯುವುದು
ಮೆಟ್ಟಿದ ಬೀಜವೆ ಮೊಳಕೆ ರೂಪದಲಿ ತಲೆಯೆತ್ತಲ್ಲೇ ನಿಲ್ಲುವುದು

ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?

ಇದ್ದಲ್ಲಿಂದ ಹೊರಟು ಬಿಡು ಹೋರಾಡೋ ಛಲವನು ತೊಟ್ಟುಬಿಡು
ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು

ಮಾಲೆಯಾಗಲಿ ಬಾಳಿನ ಕೊರಳಿಗೆ ಇಂಥ ಯಶೋಸೂತ್ರ
ಸೋಲೇ ಇಲ್ಲದೆ ಸಾಗಲಿ ಮುಂದೆ ನಿನ್ನ ಯಶೋ ಯಾತ್ರ!


ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. ನಿಮ್ಮೆಲ್ಲ ಕನಸುಗಳಿಗೆ ನವ ವರುಷವು ಹೊಸ ದಾರಿ ತೋರಲಿ.

ಗುರುವಾರ, ಡಿಸೆಂಬರ್ 06, 2007

ಚಳಿಯ ಬೆಳಗಲಿ...

ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲ
ಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.

ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ

ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?

ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.

ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!

ಮುನಿಸೇನಾದರೂ ಇದೆಯೆ ?ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.


ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶೃದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.

ಶನಿವಾರ, ಡಿಸೆಂಬರ್ 01, 2007

ನಾನು ನಾನಾಗುವುದು..

ನಾನು ಏನೂ ಅಲ್ಲ..
ಹಾಗೆಂದು ಹೇಳಿದರೆ ಯಾರೂ ನಂಬುವುದಿಲ್ಲ.
ನನ್ನ ಬಗೆಗೆ ನನಗಿಂತ ಹೆಚ್ಚು
ಅವರುಗಳಿಗೆ ಗೊತ್ತು.

ಅವರ ದನಿಗಳಿಗೆ ನಾನು ಮರುಳಾಗಿದ್ದೇನೆ.
ಹೊಗಳುವಿಕೆಗೆ ಅರಳಿದ್ದೇನೆ.
ನಾನೇನಲ್ಲವೋ , ಅದೇ ನಾನಾಗಿದ್ದೇನೆ.
ಆದರೂ ನನ್ನನ್ನು ಹುಡುಕುತ್ತಿದ್ದೇನೆ.

ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ.

ನಾನು ಮತ್ತಿನ್ನೇನಾದರೂ ಆಗೋ ಬದಲು
ನಾನೇ ಆಗಿದ್ದರೆ ಚೆನ್ನಿರುತ್ತಿತ್ತು,
ಆದರೆ ಭವಿಷ್ಯ ಯಾರಿಗೆ ಗೊತ್ತು?
ಕಾಯುತ್ತೇನೆ ಮೂರೂ ಹೊತ್ತು..

ನಾನು ನಾನೇ ಆಗುವವರೆಗೂ.

ಮಂಗಳವಾರ, ನವೆಂಬರ್ 27, 2007

ಬೆಳಕಿನ ಕವನ

ಆಕಾಶ ದೀಪದ ಸುತ್ತ ಮಿಣುಕು ಹುಳ ಸುತ್ತಿತ್ತು,
ಹೊಸಬಣ್ಣ-ಬೆಳಕನು ನೋಡಿ, ಆಶ್ಚರ್ಯವದಕೆ.
ಎಂದೂ ಇಲ್ಲಿಲ್ಲದ್ದು, ಇಂದೆಂತು ಬಂದಿತೋ
ಸೋಜಿಗವೆ ಸೋಜಿಗವು, ಬೆಳಕ ಹುಳಕೆ.


ಅಂಜುತಂಜುತಲೆ ಮೆಲ್ಲನೇ ಬಳಿಸಾರಿ,
ಕೇಳಿತದು ಆಕಾಶಬುಟ್ಟಿಯನು,
ಎಲ್ಲಿಂದ ಬಂದೆಯೋ ,ಯಾರು ನೀನು,
ನಿನಗೆ ಮಾತ್ರವ ಏಕೆ ಈಸೊಂದು ಪ್ರಖರತೆಯು
ನನ್ನ ಪ್ರಭೆಯೇಕೆ ಬಲು ಮಂಕು, ನಿನ್ನ ಹಾಗಿಲ್ಲ?


ಸಣ್ಣಗೆ ನಕ್ಕಿತಾ ಆಕಾಶದೀಪವು,
ನಿನ್ನಂತೆ ನಾನಲ್ಲ,ಅಲ್ಪಾಯುಷಿಯು ನಾನು ಗೂಡುದೀಪ.
ಹಬ್ಬದಾ ದಿನ ಮಾತ್ರ ನನ್ನಿರವು ಬಾನಲ್ಲಿ
ನಾಳೆ ಮತ್ತದೇ ಹಳೆ ಕತ್ತಲಾ ಗೂಡು,
ಆಥವ ಹೊರಗೆಸೆವರು, ಬರಿ ಬಿದಿರ ಅಸ್ಥಿ.


ನೀನೋ ನಿತ್ಯ ಸಂತೋಷಿ, ಸ್ವಪ್ರಭೆಯು ನಿನಗೆನನಗೋ
,ಬೆಳಕು ಕೊಡುವಾತ ಮನುಜ
ಅವಗೆ ಬೇಕೆಂದಷ್ಟು ಹೊತ್ತು ಮಾತ್ರವೆ ನಾನು.
ನಿನ್ನಷ್ಟು ಸುಖಿಯಲ್ಲ, ನನ್ನ ಬದುಕು.


ನನ್ನ ಶ್ರೀಮಂತಿಕೆಯು ಬಾಡಿಗೆಗೆ ಬಂದಿದ್ದು
ಮಂಕು ನೀನಹೆ ಗೆಳೆಯ, ನಿನ್ನ ಬೆಳಕಲ್ಲ!
ನಾಳೆ ಮರತುಂಬ ಮತ್ತೆ ನಿನ್ನದೇ ಮಿಣುಕ ಮಣಿ,
ನನ್ನ ನೆನಪೂ ಬರದು ಇವರಾರಿಗೂ.


ಆದರೂ ನನಗಂತೂ ಸಂತಸವು ಬಹಳವಿದೆ.
ನನ್ನ ಬೆಳಕನು ಕಣ್ಣು ತುಂಬಿಕೊಳುವರು ಎಲ್ಲ.
ಇದ್ದಷ್ಟು ದಿನ ಖುಷಿಯು ಇರಲೇ ಬೇಕಲ್ಲವೇ
ಸುಮ್ಮಗೇ ಬೇಸರವ ಹುಡುಕುವುದು ಸಲ್ಲ.


ಆಗಸದೀಪದ ಮಾತ ಕೇಳಿದ ಮಿಂಚು ಹುಳ,
ಸುಮ್ಮಗೇ ಮೈಕೊಡವಿ ಸಾಗಿತಲ್ಲಿಂದ.
ಯಾವುದೋ ತಾನದ ಹಾಡ ಗುನುಗುತಿದ್ದರೆ ದೀಪ,
ನೇಸರನು ಮೂಡಿದ್ದ ದೂರ ಬೆಟ್ಟಸಾಲಲ್ಲಿ.

ಭಾನುವಾರ, ಆಗಸ್ಟ್ 26, 2007

ಹೂವು ಮಾರುವ ಹುಡುಗಿ..

ಪಾದಪಥದಂಚಿನಲಿ ಹೂವ ಮಾರುವ ಹುಡುಗಿ,
ನಾದಮಯ ದೇಗುಲವು ಅಲ್ಲೆ ಹಿಂದೆ,
ಮೋದವಿದೆ ಮೊಗದಲ್ಲಿ , ಹೂವ ಬುಟ್ಟಿಯು ಮುಂದೆ
ನಗುವ ಹೂವುಗಳಲ್ಲಿ - ಅವಳ ಥರವೆ.


ಎಳೆ ಬಿಸಿಲ ಕಿರಣಗಳು ತೂರಿ ಬರುತಿರೆ ಮರವ
ಹೊಳೆವ ಪರಿಸರ ಸುತ್ತ, ಜನದ ಸಾಲು.
ಬರುವ ಹೋಗುವ ಮಂದಿ ಹೂವ ಕೊಳ್ಳುವರಲ್ಲಿ
ಮೃದು ಪುಷ್ಪ ಮಂಜರಿಯು ಆಹಾ, ಸೊಗಸು.


ಮಳೆ ಬಂದು ಹೋಗಿಹುದು, ಬೆಳಗು ಜಾವದ ಸಮಯ
ನೀರ ಹನಿ ಸೇಚನವು ಹೂಬುಟ್ಟಿಯಾ ತುಂಬ.
ಹುಡುಗಿ ಮುಖದಲು ಕೂಡ ಮಳೆನಗುವು ಕಾಣುತಿದೆ,
ತೇಪೆ ದಾವಣಿಗಷ್ಟೆ, ಮನಸಿಗಲ್ಲವೆ ಅಲ್ಲ.

ಹೊತ್ತು ದಾಟಲು ಮೆಲ್ಲ ಹೆಗಲನೇರಿತು ಬುಟ್ಟಿ
ತಿರುವಂಚಿನಲಿ ಮಾಯ ಆಕೆ ಜೀವ.
ಕಟ್ಟೆ ಮೇಲಿಂದೆದ್ದು ನಾನೂ ಹೊರಟೆನು ಆಗ
ದೇಗುಲದ ದೇವರನು ನೋಡಲೇ ಇಲ್ಲ!

ಶುಕ್ರವಾರ, ಆಗಸ್ಟ್ 03, 2007

ಒಂದು ಅಲ್ಪ ವಿರಾಮ.

ನಮಸ್ತೇ.

ನಾನು ಸ್ವಲ್ಪ ದಿನಗಳ ಮಟ್ಟಿಗೆ ಬ್ಲಾಗಿಂಗ್ ನಿಂದ ವಿರಮಿಸುತ್ತಿದ್ದೇನೆ. ಕಾರಣ ಹಲವು. ಮುಖ್ಯವಾಗಿದ್ದು - ನಾನು ನನ್ನ HR ಪ್ರಪಂಚದಿಂದ ಹೊರ ಬಂದು ನನ್ನಿಷ್ಟದ ಮಾಧ್ಯಮ ಜಗತ್ತಿಗೆ ಹೊರಟಿದ್ದೇನೆ. ಅಲ್ಲಿಗೆ ನ್ಯಾಯ ಸಲ್ಲಿಸಬೇಕಿದೆ. ಬರವಣಿಗೆ ನನ್ನ ಉಸಿರು. ಅದಕ್ಕೇ ಬೇರೆಯದೇ ರೂಪ ಸಿಗುತ್ತಿದೆ. ಬ್ಲಾಗಿಸಲು ಸಮಯ ಸಿಗದು.
ನನ್ನ ಬರಹಗಳನ್ನ ಮೆಚ್ಚಿ ಪ್ರೋತ್ಸಾಹ ಸಲ್ಲಿಸುತ್ತಿದ್ದವರು ಹಲವರು. ಎಲ್ಲರಿಗೂ ಕೃತಜ್ಞ. ನಾನು ಬ್ಲಾಗಿಸಲು ಆರಂಭಿಸಿದಾಗ ಕನ್ನಡದಲ್ಲಿದ್ದವು ಬೆರಳೆಣಿಕೆಯ ಬ್ಲಾಗುಗಳು. ಈಗ ಅವುಗಳ ಸಂಖ್ಯೆ ಅಗಣಿತವಾಗುತ್ತಿದೆ! ಮತ್ತೆ ನಾನು ಬ್ಲಾಗಿಗನಾಗುವಾಗ
ಏನಾಗಿರುತ್ತದೋ!

ಎಲ್ಲರಿಗೂ ಮತ್ತೊಮ್ಮೆ ವಂದನೆಗಳು. ಮುಂದೆ ಯಾವಾಗಲಾದರೂ ಭೇಟಿಯಾಗೋಣ.
ಶ್ರೀನಿಧಿ.ಡಿ.ಎಸ್.

ಬುಧವಾರ, ಜುಲೈ 25, 2007

ಶಿಫಾರಸು ಪತ್ರ ಎನ್ನುವ ಹೊಸ HR ಕಥೆಯು.

ಏನೋ ಕೆಲಸದಲ್ಲಿದ್ದೆ. ಮೊಬೈಲ್ ಸದ್ದಾಯಿತು, ಎತ್ತಿಕೊಂಡೆ.

"ಶ್ರೀನಿಧಿಯವರಾ ಮಾತಾಡೋದು?"

ಹೌದು.

"ನಮಸ್ಕಾರ, ನಾನು ಸೀತಾರಾಮ್ (ಹೆಸರು ಬದಲಿಸಲಾಗಿದೆ) ಮಾತಾಡ್ತಿರೋದು, ನಿಮ್ ಹತ್ರ ಸ್ವಲ್ಪ ಮಾತಾಡ್ಬೇಕಿತ್ತಲ್ಲ.."

ಹೇಳಿ..

ಒಂದು ಕೆಲ್ಸ ಬೇಕಿತ್ತಲ್ಲ ನಮ್ ಹುಡುಗಂಗೆ?

ಅರೇ! ಅಂತಂದುಕೊಂಡೆ ಮನದಲ್ಲೇ, ಕೆಲ್ಸ ಕೇಳೋರು ಯಾರೂ ಕನ್ನಡದಲ್ಲಿ ಮಾತಾಡುವುದಿಲ್ಲ.

ಹಮ್, ಹೇಳಿ..

"ನೋಡಿ ಸಾರ್ ನಮ್ ಹುಡ್ಗ ಭಾಳ ಒಳ್ಳೇವ್ನು, ಏನೋ ಕಂಪ್ಯೂಟರ್ ಓದ್ಕಂಡಿದಾನೆ, ಒಳ್ಳೇ ಮನ್ತನ."

ಐಲಾ! ಥೇಟು ರಾಜಕಾರಣಿಗಳದೇ ಧಾಟಿ. ಅದೇ ಗತ್ತು. ಒಳ್ಳೇ ಮನೆತನ ಆದ್ರೆ ನಾನೇನು ಮಾಡ್ಲಿ, ಅವ್ನುಗೇನು ಹೆಣ್ಣು ಹುಡುಕ್ತೀನಾ ನಾನು?

ನೀವ್ಯಾರು ಮಾತಾಡ್ತಿರೋದು?

"ವಸಿ ತಡ್ಕಳಿ, ಹೇಳೋಗಂಟ ಕೇಳಿ"

ನನ್ಗೆ ಉರಿದು ಹೋಗುತ್ತಿತ್ತು.

"ನಮ್ ನಂಜುಡಪ್ನೋರ್ ಮಗ, ಶ್ರೀಕಾಂತು ನನ್ ಹತ್ರ ಬಂದಿದ್ದ, ನಿಮ್ ಕಂಪ್ನಿಯಿಂದೇನೋ ಮೇಲ್ ಬಂದಿತ್ತಂತೆ, ನಿಮ್ಮಲ್ ಕೆಲ್ಸ ಇದ್ಯಂತಲ್ಲಾ , ಅದ್ನ ಅವಂಗೆ ಕೊಡ್ಸೋಕಾಗತ್ತಾ?!!"
"ಭಾಳಾ ಕಷ್ಟಾ ಪಟ್ ಓದಿದಾನೆ ಹುಡ್ಗ, ನಾನು ನೋಡ್ತಾನೇ ಬಂದಿದೀನಿ ಅವನ್ನ. ಪರ್ವಾಗಿಲ್ಲ ನೀವು ನಿಶ್ಚಿಂತೆಲ್ ಕೆಲ್ಸ ಕೊಡ್ಬೋದು ಅವಂಗೆ..

ಅವನ ಮಾತನ್ನ ಅರ್ಧದಲ್ಲೇ ತಡೆದು ನಿಲ್ಲಿಸಿ ಹೆಚ್ಚು ಕಡಿಮೆ ಕಿರುಚಿದೆ!
"ತಾವ್ ಯಾರ್ ಸಾರ್ ಮಾತಾಡದು!?"

"ಒಹ್ ಸಾರೀ ಕಣ್ರೀ, ಹೇಳದೇ ಮರ್ತ್ ಬಿಟ್ಟಿದ್ದೆ, ನಾನು ಕುಮಾರ್ ಸ್ವಾಮಿ PA ಮಾತಾಡ್ತಿರೋದು ಈ ಕಡೆಯಿಂದ"

ಹಾನ್! ನಂಗೆ ಒಂದು ಘಳಿಗೆ ಏನು ಹೇಳಬೇಕೋ ತೋಚಲಿಲ್ಲ!

"ಏನು , ಕುಮಾರಸ್ವಾಮಿ PA ನಾ?"

"ಹೌದು ಸಾರ್, ಕುಮಾರ್ ಸ್ವಾಮಿ ಪೀಏನೇ.. ನಾನು ಅವರ ...ನಗರ ಮನೆಲೇ ಇರೋದು, ಅಲ್ಲೇ ಕೆಲ್ಸ ಮಾಡೋದು.. ನಮ್ ಹುಡ್ಗ ನಿಮ್ ನಂಬರ್ ಕೊಟ್ಟು ಮಸಿ ಮಾತಾಡಣ್ಣೋ, ನಂಗ್ಯಾಕೋ ಹೆದ್ರಿಕೆ ಅಂತಂದ, ಹಾಂಗಾಗಿ ಫೋನ್ ಮಾಡ್ದೆ"

.......... ನಾನು ಏನೂ ಹೇಳಲಿಲ್ಲ, ಅವನಾಗೇ ಮುಂದುವರೆಸಿದ.

"ಒಂದ್ ಕೆಲ್ಸ ಮಾಡ್ತೀನಿ ನಾನು , ಕುಮಾರಣ್ಣಂದು ಒಂದು ಲೆಟರ್ ಕೊಟ್ ಕಳುಸ್ತೀನಿ ನಮ್ ಹುಡ್ಗನತ್ರ, ಅದ್ನ ನೋಡ್ಬುಟ್ಟೇ ಕೆಲ್ಸ ಕೊಡಿ, ನನ್ ಮೇಲೆ ನಂಬ್ಕೆ ಬರ್ಲಿಲ್ಲ ಅಂದ್ರೆ.. "

ಏನ್ ಲೆಟರ್, ಯಾಕೆ ಲೆಟರ್?

"ಅದೇಯಾ, ಇವ್ನು ಒಳ್ಳೇ ಹುಡ್ಗ, ನನ್ನ ಶಿಫಾರಸು ಇದೆ..ಈ ತರ ಈ ತರ ಅಂತ.. ಈ ಮಮೂಲಿ ಶಿಫಾರಸು ಪತ್ರ "
ನಂಗೆ ಅಕ್ಷರಶಃ ಪರಚಿಕೊಳ್ಳುವ ಹಾಗಾಯಿತು. ಸಾಫ್ಟ್ ವೇರ್ ಕೆಲ್ಸನಾ ಗವರ್ಮೆಂಟು ಕೆಲ್ಸ ಅಂದುಕೊಂಡು ಬಿಟ್ಟಿದ್ದ ಈ ಮನುಷ್ಯ ಅನ್ನುವುದರಲ್ಲಿ ಡೌಟೇ ಇರ್ಲಿಲ್ಲ!

ಅಲ್ಲಾ ಇವ್ರೇ, ನಮ್ಮಲ್ಲಿ ಇಂಟರ್ವ್ಯೂ ಗೆ ಸುಮಾರು procedures ಇದೆ, ಅದೆಲ್ಲ ಪಾಸಾದ್ರೆ ಮಾತ್ರ ಕೆಲ್ಸ ಸಿಗತ್ತೆ.. ಟೆಸ್ಟ್ ಬರೀಬೇಕು, ಆಮೇಲೆ ಇನ್ನೇನೇನೋ ತರದ್ದೆಲ್ಲ ಇರತ್ತೆ..

"ಹೀಂಗ್ ಮಾಡಿ ಸಾರ್, ಅದೇನೇನ್ ಕ್ವಶ್ಚನ್ಸು ಇದಿಯೋ ಅದ್ನೆಲ್ಲ ಮೊದ್ಲೇ ಹೇಳ್ಬುಡಿ ನೀವು, ನಮ್ ಹುಡ್ಗಂಗೆ ಸುಲ್ಭಾ ಆಗತ್ತೆ, ಮತ್ತೆ ಸೀಯಮ್ ಕುಮಾರಣ್ಣನ್ ಲೆಟ್ರು ಹ್ಯಾಂಗೂ ಇರತ್ತಾ, ಕೆಲ್ಸ ಆರಾಮಾಗಿ ಸಿಗತ್ತೆ"

ಎಲಾ ಇವನಾ! ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ!

ಒಂದು ಕೆಲ್ಸ ಮಾಡಿ , ಅವನ್ನ ಇಂಟರ್ವ್ಯೂ ಗೆ ಕಳ್ಸಿ, ಹುಡ್ಗ ಚನಾಗಿದ್ರೆ, ಕೆಲ್ಸ ಸಿಗತ್ತೆ. ಅವ್ನಿಗೆ programming ಬಂದ್ರೆ, ಯಾರ ಶಿಫಾರಸು ಪತ್ರಾನೂ ಬೇಡ, ಕೆಲ್ಸ ಗೊತ್ತಿಲ್ಲಾ ಅಂದ್ರೆ ಕಲಾಮ್ ಶಿಫಾರಸು ಪತ್ರಾನೂ ನಡೆಯಲ್ಲ- ಅಂತಂದೆ.

ಆ ಆಸಾಮಿ ಇನ್ನೂ ಏನೇನೂ ಹಲುಬುತ್ತಿತ್ತು. "ನೋಡಿ, ನಿಮ್ಗೇ ಒಳ್ಳೇದು.. ಇಲ್ಲಾಂದ್ರೆ.. "

ನಾನು ಫೋನಿಟ್ಟೆ.

ಇವತ್ತಿನವರೆಗೂ ಯಾರೂ ಕುಮಾರಣ್ಣನ ಶಿಫಾರಸು ಪತ್ರ ಹಿಡಕೊಂಡು ಕೆಲಸ ಕೇಳುವುದಕ್ಕೆ ಬಂದಿಲ್ಲ.

ಬುಧವಾರ, ಜುಲೈ 18, 2007

ರಸ್ತೆಗಳೆಂದರೆ...

ರಸ್ತೆಗಳೆಂದರೆ ಭೂಮಿಗೆ
ಮನುಷ್ಯ ರಚಿಸಿಕೊಟ್ಟ
ಕೃತಕ ನಾಲಿಗೆಗಳು.
ಮೈಮೇಲೆಲ್ಲ ಕೆತ್ತಿದ್ದಾನೆ,ಕಡೆದಿದ್ದಾನೆ
ಸಿಮೆಂಟು,ಡಾಂಬರು ಮಣ್ಣು ಎಲ್ಲದರ ನಾಲಗೆಯ
ತನ್ನ ಸೃಷ್ಟಿಯ ರುಚಿ ತೋರಿಸಲು!

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.
ಇಲ್ಲಿ ಅವಳ ಈ ಕೃತಕ ನಾಲಗೆಯ ಗ್ರಂಥಿಗಳು
ಏನನ್ನ ಅನುಭವಿಸುತ್ತಿರಬಹುದು,
ರುಚಿ ಹೇಗಿರಬಹುದು ಎಂಬ ಸೋಜಿಗ ನನಗೆ.

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
ಶವಯಾತ್ರೆಯ ಮೆರವಣಿಗೆ,
ಅಪಘಾತದಿ ತೊಟ್ಟಿಕ್ಕುವ ರಕ್ತ,
ಪ್ರತಿಭಟನೆ ನಡೆಸುವ ಸಾಲು ಕಾಲುಗಳು
ಯಾರದೋ ಮನೆಯಿಂದ ಹೊರಬಿದ್ದ ಪಾತ್ರೆ ಪಗಡ.
ನಡು ರಾತ್ರೆ ತರಿದು ಬಿದ್ದ ಮಲ್ಲಿಗೆಯ ಮಾಲೆ..
ದಿಗಿಲಾಗುತ್ತದೆ ನನಗೆ.

ಸಮಾಧಾನ ಪಟ್ಟುಕೊಳ್ಳುತ್ತೇನೆ, ನೆನಪಿಸಿಕೊಂಡು
ಮಣ್ಣ ದಾರಿಯ ಮಳೆಯ ತಂಪು
ಹಳೆ ದಾರಿಯಲಿ ಸೈಕಲೋಡಿಸುವ ಹೊಸ ಹುಡುಗನ ಖುಷಿ
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
ಇವೆಲ್ಲದರ ರುಚಿ ಅನುಭವಿಸುವಂತದ್ದೇ,
ಅಲ್ಲವೇ?
ರಸ್ತೆಗಳೆಂದರೆ .....

ಗುರುವಾರ, ಜುಲೈ 12, 2007

ಒಂದು ಫೋನ್ ಕಾಲು ಅಥವಾ ಮತ್ತೆ HR ಕಥೆಯು.

"ನಮಸ್ತೇ, ನಾನು ಸುನೀತಾ ಹತ್ರ ಮಾತಾಡ್ತಿದೀನಾ?"

ತುಸು ಮೌನ, ನಂತರ..

ನೀವ್ ಯಾರು ಮಾತಾಡೋದು?

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಿದೀನಿ, ಜಾಬ್ ಓಪನಿಂಗ್ ಬಗ್ಗೆ ಮಾತಾಡ್ಬೇಕಿತ್ತು ಅವರ ಹತ್ತಿರ,
ನೀವ್ಯಾರು ಮಾತಾಡೋದು, ಸುನೀತಾನೇನಾ?"

ಅಲ್ಲ, ನಾನು ಅವಳ ಫ್ರೆಂಡು, ರೂಪಾ ಅಂತ..

"ಹೌದಾ, ಓಕೆ ಅವರು ಎಷ್ಟ್ ಹೊತ್ತಿಗೆ ಸಿಗ್ತಾರೆ?, ಆಮೇಲ್ ಮಾಡ್ತೀನಿ ಬಿಡಿ"

ಓಕೆ.. ಹೇಯ್ ಸುರೇಶ್, ಒಂದ್ ನಿಮಿಷಾ.. ನಾನು ಸುನೀತಾನೇ ಮಾತಾಡ್ತಿರೋದು ಇಲ್ಲಿ..

"ನಾನು ಶ್ರೀನಿಧಿ, ಸುರೇಶ್ ಅಲ್ಲ.."

ಸುಮ್ನಿರೋ ಸುರೇಶಾ, ಸಾಕು ಕಂಡಿದೀನಿ... ಪ್ರತೀ ಸಲನೂ ನೀನು ನನ್ನ ಫೂಲ್ ಮಾಡೋಕಾಗಲ್ಲ! ಆವತ್ತೇನೋ ಗೊತಾಗಿಲ್ಲ, ಏನ್ ಇವತ್ತೂ ಆಗ್ ಬಿಡ್ತೀನಿ ಅಂದ್ಕೊಂಡಿದೀಯಾ?, ಹೋಗಲೇ..

"ಹೇ, ಇಲ್ಲ ನಾನು ಶ್ರೀನಿಧಿ, ಕಾಲಿಂಗ್ ಫ್ರಾಂ.. "

ಹಾ ಹಾ, ಶ್ರೀನಿಧಿ ಅಂತೆ ಶ್ರೀನಿಧಿ!ಹೆಸ್ರು ಚನಾಗಿದೆ! ಇದೇನಿದು ಈ ಸಲ ಕಂಪನಿ, ಕೆಲ್ಸ ಅಂತ ಹೊಸ ತರಾ ತಮಾಶೆ ಮಾಡ್ತಿದೀಯಾ?! ಈ ಸಲ ನನ್ನ ಫೂಲ್ ಮಾಡೋಕಾಗಲ್ವೋ ನಿನ್ ಕೈಲಿ! ನಾನೇ ಗೆದ್ದೆ.. ಯಾಹೂ!

" ಹಲೊ, ಒಂದ್ ನಿಮಿಷ , ನನ್ ಮಾತ್ ಸ್ವಲ್ಪ ಕೇಳ್ತೀರಾ?, ನಾನು ಸತ್ಯವಾಗ್ಲೂ ಶ್ರೀನಿಧಿ ಅಂತಾನೇ ಕಾಲ್ ಮಾಡಿರೋದು, ನಂಗೆ ಸುರೇಶ ಯಾರೋ ಗೊತ್ತಿಲ್ಲ ಕಣ್ರೀ... ನಮ್ ಕಂಪ್ನಿಲಿ ಕೆಲ್ಸ ಖಾಲಿ ಇದೆ , ನೋಡಿ ನಿಮ್ ಪ್ರೊಫೈಲ್ ಲಿ ಇಂತಿಂತಾ ಪ್ರೊಜೆಕ್ಟ್ ಡೀಟೈಲ್ಸ್ ಇವೆ... ಇದು ನಿಮ್ ಮೈಲ್ ಐಡಿ.."

ಹೆ ಹೆ ಹೆ.. ಹೌದಾ?.. ನಾನು.. ನಾನು.. ತಪ್ ತಿಳ್ಕೊಂಡೆ.. ಸಾರಿ.. just a sec..

ಆ ಕಡೆಯಿಂದ ಫೋನ್ ಲೈನ್ ಕಟ್, ಮತ್ತೆ ಮಾಡಿದರೆ ಸ್ವಿಚ್ ಆಫ್..

ಮತ್ತೆ ಹೊಸ ರೆಸ್ಯೂಮು ಹುಡುಕಿ ಕೆಲ್ಸ ಮುಂದುವರಿಸಿದೆ.

ಮಂಗಳವಾರ, ಜುಲೈ 10, 2007

ಖುಷಿಗೊಂದು ಪದ್ಯ.

ಮನೆಯ ಅಂಗಳದಂಚಿನ ಒದ್ದೆ ಮೆಟ್ಟಿಲು
ಹೆಜ್ಜೆ ಹಾಕುತ್ತ ಹೋದ ಹಾಗೆ
ಕೆಳಗೆಲ್ಲ ಹಸಿರು.
ಭಟ್ಟರ ಗದ್ದೆಯಲ್ಲಿ ನೇಜಿಯ ಹುರುಪು
ಸಂಪಿಗೆ ಮರದ ತುಂಬ ಹೂ ತೇರು.
ಕೊನೆಯ ಮೆಟ್ಟಿಲ ಸಂದಿಯಲ್ಲಿ, ಅಗೋ
ಬೆಳ್ಳಿಯಣಬೆ!


ತೆಂಗಿನ ಮರದ ಬುಡದಿ
ಸಣ್ಣ ಹುಲ್ಲ ಚಿಗುರು, ಅಲ್ಲೇ ಮುಂದೆ
ಹರಿವ ಹಳ್ಳ, ಜತೆಗೆ
ಮಣ್ಣ ಚಿತ್ರವ ಬಿಡಿಸಿದೇಡಿ ಬಿಲ.
ಪಕ್ಕದ ಬಂಡೆ ಕೆಳಗೀಗ ಪುಟ್ಟ ಒರತೆ.
ಹಲಸು ಮರದಲ್ಲಿ ಅಳಿಲಿನಾಟ.
ಬಾಳೆಗಿಡಗಳ ಸುತ್ತ ಹೊಸದು ಕಂದು.

ನಿತ್ಯ ನಡೆವ ಹಳೆ ಕಾಲು ಹಾದಿಯಲೂ
ಹೊಸ ಹೆಜ್ಜೆ ಗುರುತು.
ನೀರ ದಾರಿಗೆ ಸಿಕ್ಕ ತರಗೆಲೆಯಲಿ
ಬರಿ ಕಂದು ಪದರ-
ಹುಣಸೆ ಮರದ ಗೆಲ್ಲಲಿ ಸೀತಾಳೆ ದಂಡೆ
ಕೆಸುವಿನೆಲೆ ಮೇಲೆ ಸ್ಫಟಿಕ ಬಿಂದು.
ಜೊತೆಗೆ ಹೆಸರಿರದ ಹಳದಿ ಹೂವು.

ಎದುರು ಗದ್ದೆಯ ನಾಟಿ ಹೆಂಗಸು,
ಕೊರಳೆತ್ತಿ ಹಾಡುತ್ತಿದ್ದಾಳೆ,
ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ,
ಲವಲವಿಕೆ ರಾಗ,
ಈಗಷ್ಟೇ ಶುರುವಾದ ಹನಿ ಮಳೆ
ಎಲ್ಲ ಸೇರಿ ನನ್ನೊಳಗೆ ನವೋನ್ಮೇಷ.

ಶುಕ್ರವಾರ, ಜೂನ್ 29, 2007

ಮೇ ಫ್ಲವರಿನ ಮರ

ಮೇ ಫ್ಲವರ್ ಮರಗಳ
ಸಾಲಿನ ಕೆಳಗೆ,
ಹಳೆಯ ಒಣಗಿದ ಹೂ ರಾಶಿ
ಸಣ್ಣನೆಲೆಗಳ ತರಗೆಲೆ ಪದರ
ಹಾಸಿಕೊಂಡಿವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರೂ ಇದನ್ನ ಗುಡಿಸಲು ಬರುವುದಿಲ್ಲ.

ಮರದ ಕೆಲ ಗೆಲ್ಲುಗಳಲಿನ್ನೂ,
ಹೂ ಗೊಂಚಲುಳಿದಿವೆ,
ಕೆಂಪು ಕೆಂಪು.
ಗಾಳಿಗೊಂದೊಂದು ಹೂ ಪಕಳೆ
ಅಲ್ಲೆ ತೇಲುತ್ತ ಕೆಳಬೀಳುತ್ತವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರು ಇದನ್ನ ನೋಡಲು ಬರುವುದಿಲ್ಲ.

ಮಳೆಗಾಲ ಶುರುವಾಗಿದ್ದರಿಂದ,
ಸಾಲು ಮರಗಳ ತುಂಬ ಹಸಿರ ಲವಲವಿಕೆ;
ಮಳೆ ನಿಂತ ಮೇಲೆ ಇಲ್ಲಿ
ನಡೆಯುವುದೆಂದರೆ ಬಹಳ ಖುಷಿ.
ನೀರು ತೊಟ್ಟಿಕ್ಕುತ್ತದೆ, ಹನಿ-ಹನಿಯಾಗಿ.
ಈ ಬೀದಿ ಮೂಲೆಯಲ್ಲಿದೆ
ಯಾರೂ ಈ ಸುಖ ಅನುಭವಿಸಲು ಬರುವುದಿಲ್ಲ.

ಮೇ ಫ್ಲವರಿನ ಮರ ಎಷ್ಟೇ ಚಂದ
ಕಂಡರೂ,
ಮಳೆಗಾಲದಲ್ಲದು ಹೂ ಬಿಡುವುದಿಲ್ಲ.
ಭಣಗುಡುವ ಬೇಸಗೆಯೇ ಬೇಕದಕೆ.
ಹೂ ಬಿಟ್ಟಾಗಲೂ ಅಷ್ಟೇ,
ಯಾರು ಅದರ ಚಂದ ಹೊಗಳುವುದಿಲ್ಲ.
ಈ ಬೀದಿ, ಮೂಲೆಯಲ್ಲಿದೆ.

ಬುಧವಾರ, ಜೂನ್ 27, 2007

ಎರಡು ಚಿಟುಕು ಚುಟುಕಗಳು.

ಮಳೆ.
ಕಪ್ಪು ಆಗಸದಾಚೆ ಅರ್ಧ ಬೆಳಕಿನ ಚಿತ್ರ
ಕಂಡು ಕಾಣದ ಹಾಗೆ ಬೆಳ್ಳಕ್ಕಿ ಸಾಲು
ಮೋಡಗಳ ಮುಖದಲ್ಲಿ ಯಾರವೋ ಕಣ್ಣು
ಅರಳು ಕಣ್ಣುಗಳಿಂದ ಇಳಿವ ಜಲಧಾರೆ.

ಮಾತು - ಮೌನ
ಮೌನದಲೆ ಹಿತವಿತ್ತು , ಮಾತ ಕಲಿಸಿದನವನು
ಮಾತನಾಡಲು ಕಲಿತೆ, ಮೌನ ಮರೆತಿತ್ತು
ಅವನ ಮಾತನ್ನೆಲ್ಲ ನನಗೆ ಕೊಟ್ಟನೋ ಏನೋ,
ಅವನ ಮಾತುಗಳಲ್ಲಿ ಮೌನವಿಣುಕಿತ್ತು.

ಅವನ ಮೌನಕೆ ನನ್ನ ಮಾತ ನೀಡುವ ಆಸೆ
ಕೇಳಿದರೆ ಬೇಡೆನುವ, ಮೌನದಲ್ಲೇ.
ನನಗು ಅದು ಸಮ್ಮತವೇ, ಇರಲಿ ಬಿಡು ಮಾತಿಲ್ಲೇ,
ನಾ ಬೆಳ್ಳಿಯಾದರೋ, ಅವನು ಬಂಗಾರ!.

ನನ್ನ ಕವನಗಳಲ್ಲ. ಬರೆದವರಿಗೆ ಹೆಸರು ಹೇಳಿಕೊಳ್ಳುವುದು ಬೇಕಿಲ್ಲವಂತೆ.

ಮಂಗಳವಾರ, ಜೂನ್ 26, 2007

HR- ಮತ್ತೊಂದು ಸುತ್ತು!

ಕೆಲ ದಿನಗಳ ಹಿಂದೆ ನಮ್ಮಾಫೀಸಲ್ಲಿ ಇಂಟರ್ವ್ಯೂ ನಡೆಯುತ್ತಿತ್ತು. ಒಂದು ೧೦-೧೫ ಕೆಲ್ಸ ಖಾಲಿ ಇತ್ತು. ಸಂದರ್ಶನದ ವ್ಯವಸ್ಥೆಯ ಜವಾಬ್ದಾರಿ ಎಂಬ ಕರ್ಮ ನನ್ನ ತಲೆಗಂಟಿಕೊಂಡಿತ್ತು. ಒಂದೆರಡು ವಾರ ಬರೀ ಇದೇ ಕೆಲಸ ಮಾಡಿ ಹೈರಾಣಾಗಿ ಹೋದೆ. ನಾನು ಬರುವ ಕ್ಯಾಂಡಿಡೇಟುಗಳ ಹಣೇಬರದ ಬಗ್ಗೆ ಬರೆದರೆ, "ನೀನು ವ್ಯಂಗ್ಯ ಮಾಡುತ್ತೀಯಾ, ನಮ್ಮ ಕಷ್ಟ ನಮಗೆ" ಅಂತ ಓದುಗರಾದ ನೀವೆಲ್ಲ ತರಾಟಗೆ ತೆಗೆದುಕೊಳ್ಳುತ್ತೀರಿ, ನನಗೆ ಗೊತ್ತು. ಆದರೆ ಬರೆಯದೆ ಬೇರೆ ವಿಧಿಯಿಲ್ಲ. ಇದನ್ನ ಓದಿ, ಮುಂದೆ ಇಂಟರ್ವ್ಯೂಗಳಿಗೆ ತೆರಳುವ ಯಾರಿಗಾದರೂ ಉಪಕಾರವಾದರೂ ಅಗಬಹುದು.

. ಡ್ರೆಸ್ ಕೋಡ್.

ಶುಭ ಸೋಮವಾರ ಬೆಳಗ್ಗೆ ಒಬ್ಬ ಸುಂದರಾಂಗ ಬಂದ. ಒಳ್ಳೇ ನೈಕ್ ಸ್ಪೋರ್ಟ್ಸ್ ಶೂ, ಟಿ- ಶರ್ಟು, ಜೀನ್ಸು. "ಏನಪ್ಪಾ, ಏನಾಗಬೇಕು"? "ಶ್ರೀನಿಧಿ ಅನ್ನೋರು ಕರೆದಿದ್ದಾರೆ ನನ್ನ, ಇಂಟರ್ವ್ಯೂ ಇದೆ" . ಯಮ್ಮಾ! ಪದವಿ ಮುಗಿಸಿ, ಈಗಾಗಲೇ ಕೆಲಸ ಮಾಡುತ್ತಿರುವ ಯುವಕನಿಗೆ ಸಂದರ್ಶನಕ್ಕೆ ಹೇಗೆ ಬರಬೇಕು ಅನ್ನುವ ಕಾಮನ್ ಸೆನ್ಸ್ ಕೂಡಾ ಇಲ್ಲ. "ಅಣ್ಣಾ, ಈ ಡ್ರೆಸ್ಸಲ್ಲಿ ನಿನ್ನ ಇಂಟರ್ವೂ ತಗೋಳೋದಿಲ್ಲ, ವಾಪಾಸು ಹೋಗಿ ನಾಳೆ ಬಾರಪ್ಪಾ" ಅಂದು ಕಳಿಸಿದೆ.

ಒಬ್ಬ ಮಹಾಶಯರಂತೂ ಬಾಟಾ ಚಪ್ಪಲಿ ಹಾಕಿಕೊಂಡು ಸಂದರ್ಶನಕ್ಕೆ ಬಂದಿದ್ದರು.

ಸರಳವಾದ ಫಾರ್ಮಲ್ ಡ್ರೆಸ್ ಹಾಕಿಕೊಂಡು ಇಂಟರ್ವ್ಯೂಗಳಿಗೆ ಹೋಗಬೇಕು ಅನ್ನುವ ಕಾಮನ್ ಸೆನ್ಸ್ ಎಲ್ಲರಿಗು ಇದೆ ಅಂದುಕೊಂಡಿದ್ದೆ ನಾನು. ಅದು ಸುಳ್ಳು ಅಂತ ಈಗ ಗೊತ್ತಾಗಿದೆ.

೨. ರೆಸ್ಯೂಮ್ - ಜಾತಕ.

ನಮ್ ಆಫೀಸು ಗ್ಲಾಸ್ ಬಾಗಿಲನ್ನ ಹೆಚ್ಚು ಕಡಿಮೇ ಒಡೆದೇ ಬಿಡುವ ಸ್ಪೀಡಲ್ಲಿ ತಳ್ಳಿದ ಯಾರೋ ಒಬ್ಬ. ನಾನು ಅಲ್ಲೇ ಪೇಪರ್ ಓದುತ್ತ ಕುಳಿತಿದ್ದೆ. ಕೈಲಿ ಒಂದು ಸುರುಳಿ ಸುತ್ತಿದ ಪೇಪರು - ಈ ಒಲೇ ಊದೋಕೆ ಬಳಸುವ ಊದುಕೊಳವೆಯ ಹಾಗಿನದು.
"sorry i am bit late.. i am Mr. so and so.. ಇಂಟರ್ವ್ಯೂ... "

ಓಕೆ, ನಿನ್ನ ರೆಸ್ಯೂಮು ಕೊಡು ಅಂದಿದ್ದಕ್ಕೆ ಆ ಊದುಕೊಳವೆಯನ್ನ ನನ್ ಕೈಗಿತ್ತ ಆಸಾಮಿ. ಮುಖ ನೋಡಿದೆ. ಹೆ ಹೆ ಅಂತ ಪೆಕರು ನಗೆ. ನಾನು ಆ ಹಾಳೇ ಉಲ್ಟಾ ಪಲ್ಟಾ ಮಡಚಿ - ಸರಿ ಮಾಡಿ ನಮ್ಮ ಮ್ಯಾನೇಜರಿಗೆ ಕೊಟ್ಟೆ.

ಇನ್ನು ಒಂದಿಬ್ಬರು ರೆಸ್ಯೂಮಿನ ಬಿಡಿ ಬಿಡಿ ಹಾಳೆಗಳನ್ನ ನನ್ನ ಕೈಗಿತ್ತಿದ್ದರು. ನಾನು ಎಲ್ಲ ಜೋಡಿಸಿ, ಸ್ಟೆಪ್ಲರು ಹೊಡೆದುಕೊಂಡು ಇಟ್ಟುಕೊಂಡೆ. ನನಗೆ ಬೇಕಲ್ಲ ಅದು!.

ಒಂದು ಸಣ್ಣ ಫೈಲು ಇಟ್ಟುಕೊಂಡರೆ ಒಳಿತು. ಬೇಡ, ಆ ರೆಸ್ಯೂಮನ್ನ ನೀಟಾಗಿ ಹಿಡಕೊಂಡು ಬರೋಕೆ ಏನು ರೋಗ?

೩. ಸಮಯ ಪಾಲನೆ.

ಅರ್ಧ ತಾಸು ಲೇಟಾಗಿ ಬಂದು ಟ್ರಾಫಿಕ್ ಜಾಮ್ ಸಾರ್ ಸ್ವಾರೀ.. ಅನ್ನೋದು ಉಸಿರಾಡಿದಷ್ಟು ಸಹಜ ಕಾರಣವಾಗಿ ಬಿಟ್ಟಿದೆ. ಎಷ್ಟೇ ಉತ್ತಮ ಅಭ್ಯರ್ಥಿಯಾದರೂ, ಅವನ ಬಗ್ಗೆ ಒಂದು ಅಸಹನೆ ಮನದೊಳಗೆ ಅಷ್ಟರಲ್ಲೇ ಬೇರು ಬಿಟ್ಟಾಗಿರುತ್ತದೆ.

೪. ಸಂದರ್ಶನ

" tell me about yourself please.."

"myself ramalingam, myself did BE in ... . , myself working in ... "

ಮೊದಲ ಪ್ರಶ್ನೆ ಇದೇ ಆಗಿರುತ್ತದೆ ಅನ್ನುವುದು, ಎಲ್ಲರಿಗೂ ಗೊತ್ತಿದೆ ಮತ್ತು ಇಲ್ಲೇ ಯಡವುತ್ತಾರೆ. ಇಂಗ್ಲೀಷು ನನ್ನದೂ ಚೆನ್ನಾಗಿಲ್ಲ. ಆದರೆ, ಸ್ವಲ್ಪವಾದರೂ ಸರಿ ಮಾಡಿಕೊಂಡಿರಬೇಕು ತಾನೆ?

( ಇದರ ಬಗ್ಗೆ, ವಿವರವಾಗಿ ಬೇರೆಯದೇ ಬರಹ ಬರೆಯಬೇಕು).

೫. ರಿಸಲ್ಟು

"ಸಾರ್ ನಾನು ಸೆಲೆಕ್ಟಾ?" ಅಂದ ಒಬ್ಬಾತ, ಇಂಟರ್ವ್ಯೂ ಮುಗಿದು ಹೊರ ಹೋಗುತ್ತಲೇ ಫೋನು ಅವನದು.

ಅಷ್ಟೊಂದು ಗಡಿಬಿಡಿ ಒಳ್ಳೆಯದಲ್ಲ. ಬಹಳ openings ಇದ್ರೆ, ಫೀಡ್ ಬ್ಯಾಕೂ ಸ್ವಲ್ಪ ಲೇಟ್ ಆಗತ್ತೆ.

ತಲೆಯೊಳಗೆ ಎಷ್ಟೇ ಬುದ್ಧಿ ಇದ್ದರೂ, ಹೊರಗಡೆ - ಮೇಲು ನೋಟಕ್ಕೆ ಕಾಣುವ ಹಾಗಿನ ಯಡವಟ್ಟು ಮಾಡಿಕೊಂಡರೆ - ಊಹೂಂ! ಕಷ್ಟ ಕಷ್ಟ.


ಇನ್ನೂ ತುಂಬ ಹೇಳಬೇಕು- ಮತ್ಯಾವಾಗಾದರೂ....

ಸೋಮವಾರ, ಜೂನ್ 25, 2007

ಕೆಂಪು

ಅಂಬುಲೆನ್ಸಿನ ಮೇಲೆ ತಿರುಗೋ
ಬುರುಡೆ.
ಬೈಕು ಕಾರಿನ ಬ್ರೇಕ್
ಲೈಟು.
ಟ್ರಾಫಿಕ್ ಸಿಗ್ನಲ್ಲು.

ಮುತ್ತೈದೆಯ ಭ್ರೂ ಮಧ್ಯ.
ಯೋಧನ ತಿಲಕ
ರಂಗೋಲಿ ನಡುವಿನ
ರಂಗು
ದೇವರ ಮೇಲಿನ ದಾಸವಾಳ.

ಹುಡುಗನ ಕೈಯ ಗುಲಾಬಿ,
ಅವಳ ಬಳೆಗಳು.
ಸಂಜೆ ಸೂರ್ಯ,
ಸರದೊಳಗಿನ ಹವಳ.

ಹೆಂಡಗುಡುಕನ
ಕಣ್ಣು
ಕತ್ತಿಯಂಚಿನ ರಕ್ತ.
ಸ್ಲಮ್ಮಿನಂಚಿನ ಬೆಳಕು

ಕೆಂಪಿಗೆ ಹಲವು ಬಣ್ಣ!

ಗುರುವಾರ, ಜೂನ್ 21, 2007

ಕೈಗಳು

ಮದ್ರಾಸ್ ಐ ಆದಂತಿದ್ದ ಕೆಂಪು ಕಣ್ಣುಗಳನ್ನ ಬಿಡಿಸಿ ಎದ್ದು ಕೂತ ಅವನು. ಭಾನುವಾರ ಬೆಳಗ್ಗೆ ಐದೂವರೆಗೆ ಆತನ ವೃತ್ತಿ ಜೀವನದಲ್ಲೇ ಎಂದೂ ಎದ್ದು ಗೊತ್ತಿರಲಿಲ್ಲ. ಮೊಬೈಲ್ ನಲ್ಲಿ ಮೂರು ಮೂರು ಬಾರಿ ಅಲರಾಮು ಹೊಡಕೊಂಡಿತ್ತು. ದೂರದ ಸಂಬಂಧಿ ಸುಧಾಕರ ಆತ ನಡೆಸುತ್ತಿರುವ ದೇವಸ್ಥಾನದ ಪೂಜೆಗೆ ಸಹಾಯ ಮಾಡಲು ಬಾ ಅಂದಿದ್ದರಿಂದ ಹೋಗದೆ ವಿಧಿಯಿಲ್ಲ. ಯಾಕಂದರವನ ಓದು ಮುಗಿಸಲು ಸಹಾಯ ಮಾಡಿದ್ದು ಇದೇ ಸುಧಾಕರನ ಅಪ್ಪ, ಮತ್ತು ಇವನು ಹಳ್ಳಿಯ ತನ್ನ ಮನೆಯಲ್ಲಿ ಪಿ ಯು ಸಿ ಓದಿ ಮುಗಿಸುವವರೆಗೊ, ತಂದೆಯ ಜೊತೆ ಪೌರೋಹಿತ್ಯಕ್ಕೆ ಸಹಾಯ ಮಾಡಲು ಹೋಗುತ್ತಿದ್ದ ವಿಚಾರ ಮನೆತನಕ್ಕೆಲ್ಲ ತಿಳಿದುದೇ ಆಗಿತ್ತು. ತನಗೀಗ ಅದೆಲ್ಲ ಅಭ್ಯಾಸವಿಲ್ಲ ಅಂತ ಅದೂ ಇದೂ ಕುಂಟು ನೆಪ ಹೇಳಿದರೂ ಆ ಪುಣ್ಯಾತ್ಮ ಇವನನ್ನ ಬಿಡಲು ತಯಾರಿರಲಿಲ್ಲ. ಹೇಗೋ ಎದ್ದು, ಮುಖ ತೊಳೆದು ನಿದ್ದೆಗಣ್ಣಲ್ಲೇ ಬೈಕಿನ ಕೀ ಎತ್ತಿಕೊಂಡು ಹೊರಬಿದ್ದ.

ಚಳಿಯೆಂಬುದು ಇವನ ನಿದ್ರೆಯನ್ನ ಮುರುಟಿ ಹಾಕಿತು, ಆ ಕ್ಷಣದಲ್ಲೇ.ನೆಂಟ ಹೇಳಿದ ದಾರಿಯನ್ನ ಆಗಾಗ ನೆನಪು ಮಾಡಿಕೊಳ್ಳುತ್ತಾ, ಕೆಟ್ಟ ಚಳಿಗೆ ಬೈದುಕೊಂಡು, ದೇವಸ್ಥಾನದ ಬಳಿ ಬಂದಾಗ ಗಂಟೆ ಆರೂ ಕಾಲು. ದಿನ ನಿತ್ಯ ಕಂಪೆನಿ ವಾಹನದಲ್ಲೇ ಓಡಾಡುತ್ತಿದ ಅವನಿಗೆ, ಬೆಳಗಿನ ಚಳಿಯ ಬೆಂಗಳೂರು ಹೊಸದು, ಅದೂ ಬೈಕಿನ ಮೇಲೆ. ಪ್ರತಿ ವಾರಾಂತ್ಯಗಳಲ್ಲಿ ಅವನು 'ಅವಳನ್ನು' ಕರಕೊಂಡು ಶಾಪಿಂಗ್ ಮಾಲುಗಳಿಗೆ ಹೋಗುವಾಗ ಮಾತ್ರ ಬೈಕನ್ನ ಬಳಸುತ್ತಿದ್ದ, ಮತ್ತು ಇವತ್ತು ಮೊದಲ ಬಾರಿ ಬೇರೆಯದೇ ಉದ್ದೇಶಕ್ಕೆ ಬಳಕೆ ಆಗಿತ್ತು! ಸ್ಪೀಡೋಮೀಟರು ನೋಡಿಕೊಂಡ, ೧೮ ಕಿಲೋಮೀಟರು ಪ್ರಯಾಣವಾಗಿತ್ತು. ಪ್ರಾಯಶ: ಇದು ಬೆಂಗಳೂರಿನ ಇನ್ನೊಂದು ತುದಿಯಿರಬೇಕು ಅಂತ ಆಲೋಚನೆ ಮಾಡುತ್ತ ದೇವಳದ ಬಳಿ ಬಂದ ಆತ.

ಈ ದೇವಸ್ಥಾನಕ್ಕೆ ಯಾವತ್ತೋ ಬಂದ ನೆನಪು.. ಹಾ.. ಹಿಂದೆ ಎಂಜಿನಿಯರಿಂಗ್ ಪಾಸಾದಾಗ ಅಪ್ಪನ ಜೊತೆ ಇಲ್ಲಿಗೆ ಬಂದು ಪೂಜೆ ಮಾಡಿಸಿರಬೇಕು ಅಂತಂದುಕೊಳ್ಳುತ್ತಾ, ಬೈಕನ್ನ ದೇವಸ್ಥಾನದ ಗೋಡೆ ಪಕ್ಕಕ್ಕೆ ನಿಲ್ಲಿಸಿದ. ವರ್ಷಕ್ಕೊಂದು ಕೆಲಸ ಬದಲಾಯಿಸುವ ಈ ಸಾಫ್ಟ್ ವೇರ್ ಯುಗದಲ್ಲೂ, ಈ ಪುಣ್ಯಾತ್ಮ, ಬೆಂಗಳೂರಿನ ಕೊಂಪೆಯೊಂದರಲ್ಲಿ ಕಳೆದ ಎಂಟು- ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ, ಅದೂ ದೇವಸ್ಥಾನವೆಂಬ ಅತೀ ಬೋರು ಬರುವ ಜಾಗದಲ್ಲಿ! ಬಹಳಾ ದೊಡ್ಡ ಸಾಧನೆಯೇ ಅಂತ ತಲೆ ಕೊಡವಿಕೊಂಡು ಒಳ ಹೆಜ್ಜೆ ಇಟ್ಟ.ದೇವಸ್ಥಾನದ ಬಾಗಿಲಲ್ಲೆ ಇದ್ದ ಸುಧಾಕರ, ಭರ್ಜರಿ ಮಡಿ ಉಟ್ಟುಕೊಂಡು, ದೊಡ್ಡ ಹೊಟ್ಟೆಯ ಜೊತೆಗೆ. ಆ ವೇಷದಲ್ಲಿ ಅವನಂತೂ ಹಳೆಯ ಕನ್ನಡ ಪೌರಾಣಿಕ ಸಿನಿಮಾದ ರಾಕ್ಷಸ ರಾಜನಂತೆ ಕಾಣುತ್ತಿದ್ದ. ಒಳ ಬರುತ್ತಿದ್ದ ಇವನನ್ನ ನೋಡಿ, ತನ್ನ ಅಷ್ಟೂ ಹಲ್ಲು ತೋರಿಸುತ್ತಾ ಇವತ್ತು ಮುಖ್ಯ ಅರ್ಚಕರಿಲ್ಲ, ಭಾನುವಾರ ಬಹಳ ಜನ, ನನ್ನ ಪರಿಚಯದವರಾರು ಸಿಗುವುದಿಲ್ಲ,ಇಂದು ಬಹಳಾ ಕಾರ್ಯಕ್ರಮಗಳಿರುತ್ತವಾದ್ದರಿಂದ....ಎಂದೆಲ್ಲಾ, ಹಿಂದೆ ಕರೆಯುವಾಗಲೇ ಕೊರೆದಿದ್ದ ವಿಷಯಗಳನ್ನೇ ಹೇಳಿ ಮುಗಿಸಿದ.

ಇವನೆ, ಸ್ನಾನ ಆಯ್ತಾ? ಮುಖ ನೋಡಿದರೆ ಆಗಿಲ್ಲ ಅಂತ ಗೊತ್ತಾಗುತ್ತದೆ, ತಡಿ, ಟವಲು ಕೊಟ್ಟೆ, ಬಾವಿ ಅಲ್ಲಿದೆ, ನೀನು ಸ್ನಾನ ಮಾಡುವಷ್ಟರಲ್ಲಿ ನಾನು ಅವಲಕ್ಕಿ ಉಪ್ಪಿಟ್ಟು ತಂದಿಟ್ಟು, ಮಡಿ ರೆಡಿ ಮಾಡಿದೆ" ಅಂದ, ಒಂದೇ ಉಸಿರಿನಲ್ಲಿ! "ಬಾವಿ, ಅವಲಕ್ಕಿ, ಉಪ್ಪಿಟ್ಟು, ಮಡಿ" ಇತ್ಯಾದಿ ಶಬ್ದಗಳೆಲ್ಲ ಬಹಳ ಕಾಲದ ಮೇಲೆ ಕಿವಿಗೆ ಬಿದ್ದಂತಾಗುತ್ತಿತ್ತು ಅವನಿಗೆ. ಏನೋ ಕಿರಿಕಿರಿ ಜೊತೆಗೆ.. ಒಹ್, ನಿದ್ದೆಗಣ್ಣಲ್ಲಿ ಹೊರಟು ಬಂದಾತನಿಗೆ ಮೊಬೈಲು ತರುವುದೇ ಮರೆತು ಹೋಗಿತ್ತು.. ಆಹ್, ಇದೆಲ್ಲಿಗೆ ಬಂದು ಸಿಕ್ಕಿಕೊಂಡೆನಪ್ಪಾ ಅಂತ ಆಲೋಚಿಸುತ್ತಲೇ ಬಟ್ಟೆ ಬಿಚ್ಚಿಟ್ಟು , ಕೊಟ್ಟ ಟವಲು ಸುತ್ತಿ , ಕೊಡಪಾನವನ್ನ ಗಟ್ಟಿಯಾಗಿ ಕುಣಿಕೆಗೆ ಸಿಕ್ಕಿಸಿ ಬಾವಿಗೆ ಇಳಿಸಿದ.

ಹತ್ತಾರು ವರ್ಷಗಳ ಹಿಂದೆ ಮನೆಯಲ್ಲಿ ಇದೇ ತರ ಸ್ನಾನಗಳಾಗುತ್ತಿದ್ದವು.ಮನೆಗೆ ಹೋಗದೇ ೩ ವರ್ಷ ಆಯ್ತು, ಅಬ್ಬಾ! ಈ ಬಾವಿ ಬಹಳ ಆಳ..... ಸೋಪೇ ಇಲ್ಲವಲ್ಲ?.. ಕಡೆಯ ಬಾರಿ ಹೋಗಿ ಬಂದಿದ್ದಾದರೂ ಒಂದು ದಿನದ ಮಟ್ಟಿಗೆ.. ಅಜ್ಜ ಸತ್ತಾಗಲಲ್ಲವೇ..ಸೋಪಿಲ್ಲದೇ ಕೊಳಕು ಹೋಗೋದು ಹೇಗೆ?.. ರೂಮಲ್ಲಾದರೆ ಗೀಸರ್ ಇತ್ತು, ಬೆಚ್ಚಗೆ ಸ್ನಾನ ಮಾಡಿಕೊಂಡು ಬರಬಹುದಿತ್ತು..ಅವಲಕ್ಕಿ?.. ಮನೆಲಿ ಒಂದು ಕಾಲದಲ್ಲಿ ಅದನ್ನೇ ದಿನಾ ತಿನ್ನುತ್ತಿದ್ದೆನಾ?, ಅಮ್ಮ ನೀರಲ್ಲಿ ನೆನೆ ಹಾಕಿ ಕೊಡ್ತಾ ಇದ್ದಂತೆ ನೆನಪು.. ನೀರು ಭಾರಿ ತಣ್ಣಗಿದೆ... ಅರೆ, ಜ..ಜನಿವಾರ ಎಲ್ಲಿ?!! ಯಾವತ್ತೋ ಹರಿದು ಹೋಗಿದೆ, ಅವಳ ನೆಕ್ಲೇಸ್ ಗೆ ಸಿಕ್ಕಿ! ಥತ್! ಈಗ ಇಲ್ಲಿ ಕೇಳೋ ಹಾಗೂ ಇಲ್ಲ! ಮನೆಗೆ ಸುದ್ದಿ ಹೋಗುತ್ತದೆ. ಭಟ್ಟರ ಮಗ ಜನಿವಾರ ಕಿತ್ತು ಬಿಸಾಕಿದ್ದಾನೆ ಎಂದರೆ ಅಪ್ಪ ಆತ್ಮಹತ್ಯೆ ಮಾಡಿಕೊಂಡಾರು!..ತಲೆ ವರೆಸಿ,ಮಡಿ ಉಟ್ಟು ಕೊಂಡು, ಎಚ್ಚರದಲ್ಲಿ ಶಾಲು ಹೊದ್ದುಕೊಂಡ ಮೈ ತುಂಬಾ.

ಬಾಳೆಯೆಲೆಯ ಮೇಲೆ ಉಪ್ಪಿಟ್ಟು- ಅವಲಕ್ಕಿ ಹಾಕಿಟ್ಟಿದ್ದ ಸುಧಾಕರ. ಯಾಕೋ ತಾನು ಬೇರೆ ಪ್ರಪಂಚಕ್ಕೇನಾದರೂ ಬಂದೆನಾ ಅಂತ ಅನುಮಾನ ಶುರುವಾಯ್ತು ಅವನಿಗೆ. ದಿನಾ ಬೆಳಗ್ಗೆ ಹೋಟೇಲಿನ ಇಡ್ಲಿ ವಡಾ - ಮಧ್ಯಾಹ್ನದ ನಾರ್ತ್ ಇಂಡಿಯನ್ ರೋಟಿ - ತಡ ರಾತ್ರಿಯ ಪಿಜ್ಜಾಗಳ ಲೋಕದಿಂದ ಧುತ್ತೆಂದು ಹೊರ ಬಂದು ಬಿದ್ದಂತಾಗಿತ್ತು. ಹೊಟ್ಟೆಯಲ್ಲಿ ಬೇರೇನೂ ಇಲ್ಲವಾದ್ದರಿಂದ ತಿನ್ನತೊಡಗಿದ. "ಅಪ್ಪ ಆರಾಮಿದ್ದಾರ?" ಸುಧಾಕರ ಕೇಳತೊಡಗಿದ. "ಹಮ್". ಮನೆಗೆ ಫೋನ್ ಮಾಡದೆ ತಿಂಗಳು ಆರಾಯಿತು. ತನ್ನ ಹೊಸ ಮೊಬೈಲ್ ನಂಬರ್ ಮನೆಗೆ ಕೊಟ್ಟಿದ್ದೇನಾ?, ನೆನಪಿಲ್ಲ. "ಅಮ್ಮನ ಕಾಲು ನೋವು ಹೇಗಿದೆ?" ಅರೆ, ಅಮ್ಮನಿಗೆ ಕಾಲು ನೋವು ಯಾವಗಿನಿಂದ?.. "ಈಗ ಕಡಿಮೆ ಇದೆ". "ಮೀನಾಕ್ಷಮ್ಮ ಹೋಗಿಬಿಟ್ರಂತೆ?" ಅಯ್ಯೋ ಈ ಮೀನಾಕ್ಷಮ್ಮ ಯಾರು?! ನನ್ನ ಪಕ್ಕದ ಮನೆ ನಾರಾಯಣ ಭಟ್ರ ಹೆಂಡತಿಯಾ?"ಹೌದಂತೆ, ವಯಸ್ಸಾಗಿತ್ತು ಪಾಪ".. ಇನ್ನು ಕೂತರೆ ಕೆಲಸ ಕೆಡುತ್ತದೆನಿಸಿ, "ಕೈ ಎಲ್ಲಿ ತೊಳೆಯಲಿ"ಎನ್ನುತ್ತಾ ಅಲ್ಲಿಂದೆದ್ದ.

ಈಶ್ವರ ದೇವಸ್ಥಾನ, ಜೊತೆಗೆ ಗಣಪತಿ, ಪಾರ್ವತಿ. ಸುಧಾಕರ ಅದಾಗಲೇ ದೇವರ ಮೇಲಿನ ನೈರ್ಮಾಲ್ಯ ತೆಗೆಯಲಾರಂಭಿಸಿದ್ದ, ಗಣಪತಿಯ ಮೂರ್ತಿಯ ಮೇಲಿಂದ. ಆ ವಿಗ್ರಹ ನೋಡಿದ್ದೇ, ತನ್ನ ಮೈ ಮೇಲೆ ಜನಿವಾರ ಇಲ್ಲವೆಂಬುದು ನೆನಪಾಯಿತು. ಶಾಲನ್ನು ಮತ್ತೊಮ್ಮೆ ಸರಿಪಡಿಸಿಕೊಂಡ. ಸುಧಾಕರನ ಹೊಟ್ಟೆಗೂ ಗಣಪತಿಯದ್ದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿರಲಿಲ್ಲ ಅವನಿಗೆ. "ನೀನಿಲ್ಲೇ ಕೂತು ಒಂದಾರು ದೀಪ ತಯಾರು ಮಾಡು, ನಾನೀಗ ಮನೆಗೆ ಹೋಗಿ ಹಾಲು ತಂದೆ" ಎಂದು ಅತ್ತ ಹೊರಟ ಸುಧಾಕರ. ಎಣ್ಣೆ, ಬತ್ತಿ, ದೀಪಗಳು.. ಅಪ್ಪನ ಜೊತೆಗೆ ಪೂಜೆಗೆ ಹೋದಾಗಲೂ ಇದನ್ನೇ ಮಾಡುತ್ತಿದ್ದೆನಲ್ಲ?, ಬಹಳ ಕಾಲವೇನಾಗಿಲ್ಲ ೬-೮ ವರ್ಷಗಳಷ್ಟೇ.. ಒಹ್, ಇವತ್ತು ಸಂಜೆ ಅವಳನ್ನ ಹೊಸ ಸಿನಿಮಾಕ್ಕೆ ಕರೆದೊಯ್ಯಬೇಕು.ಇಲ್ಲಿಂದ ಬೇಗ ಬಿಡುಗಡೇ ಸಿಕ್ಕಿದ್ದರೆ ಸಾಕಿತ್ತು.. ಚಿಕನ್ ತಿನ್ನದೇ ವಾರವಾಗಿದೆ. ಕೈ ಯಾಕೋ ತಣ್ಣಗಾಯ್ತು, ಎಣ್ಣೆ ಚೆಲ್ಲಿಕೊಂಡಿದ್ದ. ದೇವಸ್ಥಾನದಲ್ಲಿ ಚಿಕನ್ ನೆನಪಾದ್ದು ತಪ್ಪಾ? ಗೊತ್ತಾಗುತ್ತಿಲ್ಲ.

"ಇರ್ಲಿ ಬಿಡು, ನಾನು ಒರೆಸುತ್ತೇನೆ ನೀನು ದೀಪಾನ ಹಚ್ಚಿ ಎಲ್ಲ ದೇವರ ಮುಂದೆಯೂ ಇಡ್ತಾ ಬಾ" ಅಂತಂದ, ಸುಧಾಕರ .ಯಥಾವತ್ತಾಗಿ ಅದನ್ನ ಪಾಲಿಸಲು ಹೊರಟ. ಯಾಕೋ ಎಲ್ಲದೂ ಹೊಸತೆನಿಸುತ್ತಿತ್ತು, ದೇವರ ವಿಗ್ರಹ, ಆ ಎಣ್ಣೆಯ ಕಮಟು ವಾಸನೆ, ಕಾಲಿಗಂಟುವ ಕೊಳಕು, ಮೈಯಲ್ಲ ಹುಳ ಹರಿದಂತನಿಸಿತು. ತಾನು ಮೊದಲಿಂದ ಹೀಗಿರಲಿಲ್ಲವಲ್ಲಾ?!ಕಳೆದ ನಾಲ್ಕೆಂಟು ವರ್ಷದಲ್ಲಿ ನನ್ನ ಆಲೋಚನೆ ಯಾವತ್ತು ಬದಲಾಯಿತು?, ನನಗೇ ಗೊತ್ತಿಲ್ಲದೇ?.. ದೀಪಗಳನ್ನ ಉರಿಸುತ್ತಿದ್ದಂತೆ ಮನಸ್ಸೂ ಉರಿಯುತ್ತಿದೆಯೇನೋ ಅನ್ನಿಸಿತು ಅವನಿಗೆ."ಇನ್ನು ಭಕ್ತಾದಿಗಳು ಬರಲಾರಂಭಿಸುತ್ತಾರೆ, ಗಣಪತಿ ಪೂಜೆಗೆ ಇವತ್ತಿನ ದಿನ ಬಹಳ ವಿಶೇಷವಾದ್ದು, ನಿನಗೆ ಗೊತ್ತಲ್ಲ..".. ಏನೇನೋ ವಿವರಿಸುತ್ತಿದ್ದ ಸುಧಾಕರ.

ಅವನ ಮನಸ್ಸನ್ನ ಆ ಶಬ್ದಗಳು ಮುಟ್ಟುತ್ತಲೇ ಇರಲಿಲ್ಲ. ತಾನು ಬ್ರಾಹ್ಮಣತ್ವ ಬಿಟ್ಟು ಸಮಯ ಎಷ್ಟಾಯಿತು?, ನಾನು ಕೆಲಸದ ಜಂಜಡದಲ್ಲಿ ಬದಲಾದ್ದು ನನಗೇ ತಿಳಿದಿಲ್ಲವೆ? ಇರಲಾರದು,. ಕಂಬಳಿ ಹುಳ ಚಿಟ್ಟೆಯಾದಂತೆ, ತಾನೂ ಕೂಡಾ ಯಾವತ್ತೋ ಪೊರೆ ಕಳಚಿಕೊಂಡು ಅಲ್ಲಿಂದ ಹೊರ ಬಂದಿದ್ದೇನೆ,ರೂಪಾಂತರಗೊಂಡಿದ್ದೇನೆ. ತಿಳಿಯಲೇ ಇಲ್ಲ!...ಹೀಗೇ ಮನಸ್ಸು ಎತ್ತಲೋ ಸಾಗುತ್ತಿತ್ತು. ಅದರಿಂದ ಹೊರ ಬರುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿ, ಅಯ್ಯೋ, ಅದರಲ್ಲಿ ತಲೆ ಕೆಡಿಸಿಕೊಳ್ಳೋದು ಏನಿದೆ, ಮನೆಗೆ ಹೋದರೆ ಸಂಭಾಳಿಸೋಕೆ ತಿಳಿದಿದೆ, ಮತ್ತೇಕೆ ಚಿಂತೆ ಮಾಡಬೇಕು ಬಂದ ಕೆಲಸ ಮುಗಿಸಿ ಹೊರಡು, ಸಾಕು ಅಂತ ಆದೇಶಿಸಿದ, ಮನಸ್ಸಿಗೆ.

ಗಂಧ ತೇಯ್ದು ಕೊಡಲು ಹೇಳಿದ್ದರಿಂದ ಒಂದು ಮೂಲೆಯಲ್ಲಿ ಕೂತು ಆ ಕೆಲಸ ಮಾಡ ತೊಡಗಿದ ಅವನು. ಮತ್ತೊಬ್ಬ ಭಟ್ಟರಾರೋ ಬಂದು ಗಣಹೋಮದ ತಯಾರಿ ನಡೆಸಿದ್ದರು. ಜನ ಒಬ್ಬೊಬ್ಬರಾಗೇ ಬಂದುಕೂಡ ತೊಡಗಿದರು. ಭಾನುವಾರ ಬೆಳಗ್ಗೆ ಇಷ್ಟು ಬೇಗ ಎದ್ದು ಬರುವವರನ್ನ ನೋಡಿ ಆಶ್ಚರ್ಯ !. ಎಲ್ಲರೂ, ದೇವರಿಗೆ, ಸುಧಾಕರನಿಗೆ, ಮತ್ತು ಇವನಿಗೂ ನಮಿಸಿ ಸಾಗತೊಡಗಿದರು. ಜೀವಮಾನ ಇಡೀ ಸಿಗದಷ್ಟು ವಂದನೆ ಅರ್ಧಗಂಟೆಗಳಲ್ಲೇ ಸಿಕ್ಕಿತೇನೋ ಅಂತ ಹೆದರಿಕೆ ಆಗತೊಡಗಿತು! ಜೊತೆಗೇ ತಾನು ಈವರೆಗೆ ತನ್ನ ಟೀಮ್ ಲೀಡು, ಪ್ರೊಜೆಕ್ಟ್ ಮ್ಯಾನೇಜರ್‌ಗಳಿಗೆ ಸಲ್ಲಿಸಿದ ಗೌರವ ಅಷ್ಟೂ ವಾಪಾಸು ಬಂತು ಅಂತಲೂ ಅನಿಸಿ ಖುಷಿ ಆಯಿತು!

ಗಣಹೋಮದ ಹೊಗೆ ಸ್ವಲ್ಪ ಹೊತ್ತಿಗೇ ದೇವಸ್ಥಾನ ತುಂಬಿತು. ಆವತ್ತೊಂದು ದಿನ ಪಬ್ ಒಂದರಲ್ಲಿ ಹುಕ್ಕಾ ಸೇದುವಾಗ ಎಲ್ಲೋ ಈ ತರಹದ ಹೊಗೆ ರೂಮೆಲ್ಲಾ ತುಂಬಿಕೊಂಡದ್ದು ನೆನಪಾಯ್ತು. ಹಿಂದೆಯೇ ಅನ್ನಿಸಿತು, ಅಲ್ಲಾ ,ಅಪ್ಪನ ಜೊತೆ ಪೌರೋಹಿತ್ಯಕ್ಕೆ ಹೋಗುತ್ತಿದ್ದಾಗ ಗಣಹೋಮಕ್ಕೆ ಸಹಕರಿದ್ದು ಯಾಕೆ ನೆನಪಾಗಲಿಲ್ಲ ಮೊದಲಿಗೆ? ಅವಲಕ್ಕಿ, ಅರಳು ಹಾಕಿ, ಬೆಲ್ಲ ಮಿಶ್ರಣ, ಮೇಲೆ ತೆಂಗಿನ ಕಾಯಿ ಹೆರೆದು, ಬಾಳೆಹಣ್ಣು ಕೊಚ್ಚಿ, ಕಬ್ಬಿನ ಹೋಳು ಮಾಡಿ, ಇನ್ನೂ ಏನೇನೂ ನೆನಪಿಗೆ ಬರುತ್ತಿಲ್ಲ.. ಅದನೆಲ್ಲ ಹಾಕಿ ಪ್ರಸಾದ ತಯಾರು ಮಾಡುತ್ತಿದ್ದು ನಾನೇ ಆಗಿತ್ತು! ಅಲ್ಲೇ ನಗು ಬಂದು ಬಿಟ್ಟಿತು ಅವನಿಗೆ. ಎಷ್ಟು ಬಾಲಿಶ ಅಲ್ಲವ ಇದೆಲ್ಲ! ಆವಾಗ ತನಗಿದೆಲ್ಲ ಗೊತ್ತಾಗುತ್ತಿರಲಿಲ್ಲ, ಅಪ್ಪ ಕೊಡುವ ಹತ್ತೈವತ್ತು ರೂಪಾಯಿಗಳು ಮುಖ್ಯವಾಗಿತ್ತು ತನಗೆ. ಮೊನ್ನೆ ಯಾವುದೋ ಹೋಟೇಲಿನಲ್ಲಿ ಐವತ್ತು ರೂಪಾಯಿ ಟಿಪ್ಸ್ ಇಟ್ಟಿದ್ದೆ, ಜೊತೆಗೆ ಅವಳಿದ್ದಳಲ್ಲ, ಅನಿವಾರ್ಯವಾಗಿತ್ತು. ಮತ್ತು ಆ ಐವತ್ತು ಗಳಿಸಲು ಅಂದು ಮೂರು ತಾಸು ಹೊಗೆಯಲ್ಲಿ ಕೂರಬೇಕಾಗುತ್ತಿತ್ತು!


ತೇಯ್ದ ಗಂಧವನ್ನ ಬಟ್ಟಲೊಂದಕ್ಕೆ ತೊಡೆದಿಟ್ಟು ಮುಖ ನೋಡಿದ, ಇನ್ನೇನು ಮಾಡಲಿ ಎಂಬಂತೆ. 'ನೀನು ಆ ಪಾರ್ವತಿಯ ಗುಡಿಯ ಹೊರಗಿರುವ ಬೇಂಚಿನ ಮೇಲೆ ಕೂತು ತೀರ್ಥ - ಪ್ರಸಾದ ಕೊಡೋಕೆ ಶುರು ಮಾಡು, ಜನ ಒಂದು ಕಡೆಯಿಂದ ಬರುತ್ತಾ ಹೋಗುತ್ತಾ ಇರುತ್ತಾರೆ. ಎಲ್ಲರೂ ಏನೂ ಕೊನೇತನಕ ಇರುವುದಿಲ್ಲ, ಬ್ಯುಸಿ ಇರುತ್ತಾರೆ ನೋಡು, ದೇವರ ದರ್ಶನ ಮಾಡಿಕೊಂಡು ಹೊರಡುತ್ತಾರೆ' ಅಂದ ಸುಧಾಕರ. ಆಯಿತು ಅಂತ ಚುಟುಕಾಗಿ ಉತ್ತರಿಸಿ, ಪಾರ್ವತಿ ಗುಡಿ ಕಡೆಗೆ ಹೊರಟ. ಹಾಗೇ ಎದ್ದು ಓಡಿ ಬಿಡೋಣ ಅಂತ ಅನ್ನಿಸತೊಡಗಿತ್ತು ಅವನಿಗೆ. ತನ್ನದಲ್ಲದ ಲೋಕದೊಳಗೆ, ಗೊತ್ತಿದ್ದೂ ಗೊತ್ತಿದ್ದೂ ನಡೆದು ಬಂದು ಈಗ ದಾರಿ ತಪ್ಪಿ ಹೋಗಿದ್ದೇನೆ ಅನ್ನುವ ಅನುಭವ.

ತೀರ್ಥದ ಬಟ್ಟಲು, ಪಕ್ಕದಲ್ಲಿ ಹೂ ತುಂಬಿದ ಹರಿವಾಣ ಇಟ್ಟುಕೊಂಡು, ಹಳೆಯ ಕಬ್ಬಿಣದ ಕುರ್ಚಿಯೊಂದರಲ್ಲಿ ಕೂತವನಿಗೆ ಆಫೀಸಿನ ಮೆತ್ತ ಮೆತ್ತಗಿನ ತಿರುಗುವ ಕುರ್ಚಿ ನೆನಪಾಯಿತು. ಪಕ್ಕದ ಸೀಟಲ್ಲೇ ಕೂರುವ 'ಅವಳು' ನೆನಪಾದಳು.ಇನ್ನು ಏನೇನು ನೆನಪಾಗುತ್ತಿತ್ತೋ ಏನೋ ಯಾರೋ ಬಂದು ಭಟ್ರೇ, ತೀರ್ತಾ ಅಂದರು. ಸರಸರನೆ ಉಧ್ಧರಣೆಯಿಂದ ತೀರ್ಥ ತೆಗೆದು ಕೊಟ್ಟು ಗಂಧ,ಪ್ರಸಾದ ಕೈ ಮೇಲೆ ಹಾಕಿದ, ಯಾವುದೋ ಜನ್ಮದ ನೆನಪಿನಂತೆ.

ಮುಂದಿದ್ದದ್ದು ಬಲಿಷ್ಟ ಅಂಗೈ. ಕೂಲಿ ಕೆಲಸದವನದಿರಬೇಕು. ಜಡ್ಡು ಗಟ್ಟಿತ್ತು. ತಾನು ೨ನೇ ಕ್ಲಾಸಿನಲ್ಲಿದಾಗ ಮನೆ ಎದುರಿನ ಕೆರೆಗೆ ಬಿದ್ದು ಉಸಿರು ಕಟ್ಟಿದಾಗ ತನ್ನನ್ನ ಮೇಲಿತ್ತಿದಂತ ಕೈ. ಮಾದನೆಂದಿರಬೇಕು ಅವನ ಹೆಸರು. ತನ್ನನ್ನ ಹೆಗಲ ಮೇಲೆ ಹೊತ್ತು ತೋಟ ಸುತ್ತಿಸುತ್ತಿದ್ದ ಅವನು. ಕೌಳಿ ಹಣ್ಣು, ಬಿಕ್ಕೆ, ಮುಳ್ಳು ಹಣ್ಣು ಗಳನ್ನ ಕಿತ್ತು ಕೊಡುತ್ತಿದ್ದ , ಇಂತದ್ದೇ ಜಡ್ಡುಗಟ್ಟಿದ ಕೈಲಿ.

ಇನ್ನೊಂದು ಕೈ ಮುಂದೆ ಬಂತು ಅಷ್ಟು ಹೊತ್ತಿಗೆ, ಬೆಳ್ಳನೆಯ ಮೃದು ಹಸ್ತ. ಅದಕ್ಕೂ ತೀರ್ಥವಿತ್ತ. ಹೈಸ್ಕೂಲು ಗೆಳತಿ ಸುಮಾಳ ಕೈಯಂತಿತ್ತು ಈ ಕೈ. ಪ್ರೇಮದ ಮೊದಲ ಸ್ಪರ್ಶದ ಅನುಭೂತಿ ನೀಡಿದ ಕೈ. ತುಂಬ ಬಳೆಗಳಿದ್ದವು, ಸುಮಾಳ ಹಾಗೆಯೇ. ಮಾತು ಹಾಗೆಯೇ ಇದ್ದೀತಾ, ಏನೋ, ಈಕೆ ಮಾತಾಡುತ್ತಿಲ್ಲ. ಸಂಜೆ ಶಾಲೆ ಬಿಟ್ಟ ಮೇಲೆ ಇಂತಹದ್ದೇ ಕೈಯನ್ನಲ್ಲವೇ, ಬಿಗಿಯಾಗಿ ಹಿಡಿದುಕೊಂಡು ಗುಡ್ಡ- ಬೆಟ್ಟ ತಿರುಗಿ , ಕಣ್ಣಲ್ಲೇ ಮಾತಾಡಿಕೊಂದು ಮನೆಗೆ ಹಿಂದಿರುಗುತ್ತಿದ್ದುದು ? ಯಾಕೋ ತಲೆಯೆತ್ತಿ ಒಮ್ಮೆ ಸುಮಳ ನೆನಪ ತಂದವಳ ಮುಖ ನೋಡಬೇಕೆನಿಸಿತು. ಸಾಧ್ಯವಾಗಲಿಲ್ಲ.

ಪುಟ್ಟ ಎಳೆಯ ಕೈಯೊಂದನ್ನ ಅದರಪ್ಪ ಮುಂದೆ ಹಿಡಿಸಿದ್ದ. ತಟಕೇ ತಟಕು ನೀರು ಹಿಡಿವ , ತುಂಬಿದ ಮಳೆಗಾಲದಲ್ಲಿ ಹುಟ್ಟಿದ ತನ್ನ ತಮ್ಮನದೇ ಕೈ. ಮೂರೇ ತಿಂಗಳಿಗೆ ಏನೋ ರೋಗ ಬಂದು ಸತ್ತು ಹೋಗಿ, ತನಗಿದ್ದ ಅಣ್ಣನ ಸ್ಥಾನ ಕಸಿದುಕೊಂಡ ಆ ಮಗುವಿನಂತದ್ದೇ. ಅಮ್ಮ, ಅಪ್ಪ ಎಲ್ಲರೂ ಮಂಕು ಬಡಿದು ಸುರಿಯುತ್ತಿದ್ದ ಮಳೆಯನ್ನೇ ನೋಡುತ್ತಾ, ಮಾತೇ ಇಲ್ಲದೇ ಕೂರುವಂತೆ ಮಾಡಿದ ಪಾಪುವಿನ ತರಹದ್ದೇ ಕೈ. ಈ ಮಗು ನೂರು ವರ್ಷ ಬಾಳಲಪ್ಪಾ ಅಂತ ಹಾರಯಿಸಿ, ಒದ್ದೆಯಾದ ಕಣ್ಣೊರಿಸಿಕೊಂಡ. ಆವನು ಬದುಕಿದ್ದಿದ್ದರೆ, ಏನಾಗುತ್ತಿದ್ದನೋ ಏನೋ. ಅಪ್ಪನಿಗೆ ಸಹಾಯ ಮಾಡುತ್ತಿದ್ದನೇನೋ, ಅಲ್ಲಾ, ತನ್ನಂತೆ ಸಾಫ್ಟ್‌ವೇರ್ ಬದುಕಿಗೆ ಬಂದು ಬಿಡುತ್ತಿದ್ದನೋ. .

ಈ ಬಾರಿ ಎದುರಿಗೆ ಬಂದ ಕೈ ತನ್ನ.. ಅಲ್ಲಲ್ಲ, ತನ್ನಂತಲ್ಲ ದಿನಾ ತನ್ನನ್ನ ದುಡಿಸಿಕೊಳ್ಳುವ ಪ್ರೊಜೆಕ್ಟ್ ಮ್ಯಾನೇಜರನದು.. ಒಮ್ಮೆ ಅವನೇ ಬಂದನೇನೋ ಎಂದು ಗಾಭರಿಯಾಗಿ ಮುಖ ನೋಡಿದ. ಅಲ್ಲ, ಈತ ಯಾರೋ ಮಧ್ಯಮ ವರ್ಗದ ಸಾದಾ ಮನುಷ್ಯ. ಕೊಟ್ಟ ಪ್ರಸಾದಾದಿಗಳನ್ನ ಭಕ್ತಿಯಿಂದ ಕಣ್ಣಿಗೊತ್ತಿಕೊಂಡು ಹೋದ. ನಿತ್ಯ ವ್ಯಂಗ್ಯವಾಡುವ ಅವನೆಲ್ಲಿ, ಈ ಸಾಧು ಪ್ರಾಣಿಯೆಲ್ಲಿ ? ಬರಿಯ ಕೈಗಳಿಗೆ ಮಾತ್ರ ಹೋಲಿಕೆಗಳಿವೆ, ಆದರೆ ಮನಸ್ಸಿಗೂ, ಬದುಕಿನ ದಾರಿಗೂ ಅಲ್ಲ ಅಂತನಿಸಿತವನಿಗೆ. ದಿನನಿತ್ಯ ಪರದೆ ನೋಡಿಕೊಂಡು ಬೇರೆ ಜಗತ್ತೇ ಇಲ್ಲವೆಂದು ಬದುಕುವ ತನಗಿಂತ, ತನ್ನ ಪ್ರೊಜೆಕ್ಟ್ ಮ್ಯಾನೇಜರನಿಗಿಂತ ಆತ ಸುಖಿಯೆ ? ಇರಬಹುದು, ಇರದಿರಬಹುದು. ಮುಖ ನೋಡಿದರೆ ಏನೂ ತಿಳಿಯಲಾರದು.

ಒಂದಾದ ಮೇಲೊಂದು ಕೈಗಳು ಅವನೆದುರು ಬರುತ್ತಲೇ ಇದ್ದವು. ಅರಸಿನ ತೊಡೆದುಕೊಂಡ ನವ ವಧುವಿನ ಅಂಗೈ, ಬಳೆಯಿಲ್ಲದ ಖಾಲಿ ಕೈ, ಜಜ್ಜಿಹೋದ ಹೆಬ್ಬೆರಳಿದ್ದ ಕೈ, ಐದು ಬೆರಳೂ ಉಂಗುರ ತೊಟ್ಟ ಶ್ರೀಮಂತ ಹಸ್ತ, ಮಾಸ್ತರ ಬಳಿಯಲ್ಲಿ ಹೊಡೆತ ತಿಂದು ಕೆಂಪಾದ ಕೈ, ಮದರಂಗಿ ಹಚ್ಚಿಕೊಂಡ ಪುಟ್ಟ ಕೈ, ಶಕ್ತಿಯಿಲ್ಲದೇ ನಡುಗುವ ವೃದ್ಧ ಕೈ, ಆಗಷ್ಟೇ ಅಡುಗೆ ಮುಗಿಸಿ ಬಂದಂತ ಗೃಹಿಣಿಯ ಕೈ.. ಎಲ್ಲ ಇವನ ಮುಂದೆ ಬಂದು ಸಾಗುತ್ತಿದ್ದವು.

ಪ್ರತಿ ಕೈಯನ್ನೂ ಕೂಡಾ ಅವನಿಗೆ ಹಿಂದೆಲ್ಲೋ ನೋಡಿದಂತನಿಸುತ್ತಿತ್ತು, ತನ್ನ ಮನೆಯ, ಊರಿನ, ಸುತ್ತಮುತ್ತಲ ಎಲ್ಲರ ಕೈಗಳೂ ಬೆಂಗಳೂರಿಗೆ ಬಂದು ಇಲ್ಲಿರುವವರ ದೇಹಕ್ಕೆ ಅಂಟಿಕೊಂಡು ಬಿಟ್ಟಿರಬೇಕು ಎಂಬ ಯೋಚನೆ ಬಂದು ಮೈ ಬೆವರತೊಡಗಿತು. ಯಾವುದಾದರೂ ಕೈ ಬಂದು ತನ್ನ ಶಾಲನ್ನ ಕಿತ್ತೆಸೆದು, ನನ್ನ ನಿಜವನ್ನ ಬಯಲು ಮಾಡಿದರೆ ?, ಜನಿವಾರವಿಲ್ಲದ ತನ್ನ ಅರೆ ಬೆತ್ತಲ ಮೈಯನ್ನ ಎಲ್ಲರಿಗೂ ತೊರಿಸಿಬಿಟ್ಟರೆ. ಏನು ಮಾಡಲಿ..ತನ್ನ ಕೆಟ್ಟು ಹೋದ ಮೆದುಳನ್ನ, ಅದರೊಳಗಿನ ಹೊಲಸು ವಿಚಾರಗಳನ್ನ ಎಳೆದು ಹೊರ ಹಾಕಿ.. ನನ್ನ ಕುಲಗೆಟ್ಟ ಕೃತ್ಯಗಳನ್ನ ಖಂಡಿಸಿ ಎರಡು ಕೆನ್ನೆಗಳಿಗೂ ಬಾರಿಸಿ, ಯಾಕೆ ಹೀಗಾದೆ ಎಂದು ಕಾರಣ ಕೇಳಿದರೆ ? ನನ್ನನ್ನ ಬಟ್ಟೆಯಿದ್ದೂ ಬೆತ್ತಲು ಮಾಡಿ ಎಲ್ಲರೆದುರೂ ನಿಲ್ಲಿಸಿ 'ಛೀ, ಥೂ' ಎಂದು ಉಗಿಸಿದರೆ ?..

ಆ ಕೈಗಳ ಗುಂಪಿಂದ ನನ್ನಪ್ಪನ ಕೈ ಬಂದು ' ನಿನ್ನನ್ನ ಇಷ್ಟು ಕಷ್ಟ ಪಟ್ಟು ಬೆಳಸಿದ್ದು ಜಾತಿಕೆಡುವುದಕ್ಕೇನೋ, ಯಾಕೋ ಹೀಗೆ ಮಾಡಿ ನನ್ನ ಮಾನ ಕಳೆದೇ' ಅಂತ ಅತ್ತು ಬಿಟ್ಟರೆ ಏನು ಮಾಡಲಿ ತಾನು ?.. ಕೂತಲ್ಲಿಂದ ಏಳಲೂ ಆಗುತ್ತಿಲ್ಲ ಅವನಿಗೆ. ಅಸಹಾಯಕನಂತಾಗಿದ್ದ. ಕೈಗಳು ಮಾತ್ರ ಬಂದವರಿಗೆಲ್ಲ ತೀರ್ಥ ಪ್ರಸಾದ ವಿತರಣೆ ಮಾಡುತ್ತಿದ್ದವು. ಅಷ್ಟರಲ್ಲಿ ಒಂದು ಮಧ್ಯಮ ವಯಸ್ಸಿನ ಹೆಂಗಸಿನ ಕೈ ಮುಂದೆ ಬಂತು. 'ಮಗೂ, ತೀರ್ಥ ಕೊಡಪ್ಪಾ' ಅಂದಿತು. ಆ ಅರೆ ಸುಕ್ಕುಗಟ್ಟಿದ ಕೈ, ಆ ದನಿಯ ಮಾರ್ದವತೆ ಕೇಳಿದ ಅವನಿಗೆ ಅದು ಥೇಟ್ ತನ್ನಮ್ಮನದೇ ದನಿ ಎಂದೆನಿಸಿಬಿಟ್ಟಿತು. ತನ್ನ ತಲೆಯನ್ನ ನಿತ್ಯ ನೇವರಿಸಿದ ಕೈ, ಅಪ್ಪನೇಟಿನಿಂದ ತಪ್ಪಿಸುತ್ತಿದ್ದ ಕೈ, ತುತ್ತು ನೀಡಿ ಸಲಹಿದ ಕರುಣಾಮಯಿಯ ಕೈಯೇ ಅವನ ಮುಂದಿತ್ತು. ಎಲ್ಲವನ್ನು ಮರೆತು ಆ ಕೈಗಳನ್ನೇ ಹಿಡಿದುಕೊಂಡು ಅದರಲ್ಲಿದ್ದ ಗೆರೆಗಳನ್ನೇ ನೋಡುತ್ತಾ ನಿಂತುಬಿಟ್ಟ.

ಯಾವುದೋ ಹಳೆಯ ಲೋಕದ ಮರೆತ ದಾರಿಯನ್ನ ಆಕೆಯ ಕೈಲಿದ್ದ ಆ ಗೆರೆಗಳು ತೋರಿಸುತ್ತಿದ್ದವು.

{ಈ ಕಥೆ ಬರೆದು ವರ್ಷವಾಗುತ್ತ ಬಂತು. ಈಗ ಈ ಕಥೆ ಬರೆದಿದ್ದರೆ, ಬೇರೆಯದೇ ತರ ಬರೆಯುತ್ತಿದ್ದೆನೇನೋ. ಏನೂ ತಿದ್ದುಪಡಿ ಮಾಡದೇ ಹಾಗೆಯೇ ಹಾಕಿದ್ದೇನೆ. }

ಬುಧವಾರ, ಜೂನ್ 20, 2007

ಹಯವದನ ಮತ್ತು ಬೆಂಗಳೂರು ಸಂಜೆ.

ನಿನ್ನೆ ಸಂಜೆ "ಹಯವದನ" ನಾಟಕ ನೋಡಿದೆ, ರಂಗ ಶಂಕರದಲ್ಲಿ. ಅಭಿನಯಿಸಿದೋರು "ಬೆನಕ" ತಂಡದವರು. ರಚನೆ ಗಿರೀಶ್ ಕಾರ್ನಾಡರದು. ಟಿ.ಎಸ್.ನಾಗಾಭರಣ, ಸುಂದರ್ ರಾಜ್, ಮೈಕೋ ಚಂದ್ರು, ವಿದ್ಯಾ ವೆಂಕಟ್ರಾಮ್, ಪೂರ್ಣ ಚಂದ್ರ ತೇಜಸ್ವಿ.. ಇವರೆಲ್ಲ ಇದ್ದ ಮೇಲೆ ನಾಟಕ ಸೊಗಸಾಗೇ ಆಗಬೇಕು , ಆಯಿತು ಕೂಡ. ಜಾನಪದ- ಐತಿಹಾಸಿಕ ಕಥೆಯನ್ನ ಇವರೆಲ್ಲ ಸೇರಿ ಪ್ರಸ್ತುತ ಪಡಿಸುವ ಶೈಲಿಯೇ ಅನನ್ಯ. ಸೂತ್ರಧಾರನೇ ಒಮ್ಮೊಮ್ಮೆ ಪಾತ್ರಧಾರಿಯಾಗಿ ನಾಟಕದೊಳಗೆ ನಡೆದು ಬಿಡುತ್ತಾನೆ. ಮತ್ತೆ ಹೊರ ಬಂದು ವರ್ತಮಾನದಲ್ಲಿ ಮಾತಾಡುತ್ತಾನೆ. ಹಾಡುಗಳು ಕಥಾಹಂರದೊಳಗೆ ಬೆರೆತು ಬಿಟ್ಟಿವೆ. ನಿರ್ದೇಶನ - ಬಿ.ವಿ.ಕಾರಂತರದು.

ಬೆನಕ ತಂಡದ ಸದ್ಯ ಅಭಿನಯಿಸುತ್ತಿರುವ ಎಲ್ಲ ನಾಟಕಗಳನ್ನೂ ನೋಡಿದೆ. ಸತ್ತವರ ನೆರಳು, ಜೋಕುಮಾರ ಸ್ವಾಮಿ, ಗೋಕುಲ ನಿರ್ಗಮನ, ಹಯವದನ- ಎಲ್ಲವು ಒಂದಕ್ಕಿಂತ ಒಂದು ಚೆನ್ನಾಗಿವೆ. ಕಿರುತೆರೆಯಲ್ಲಿ, ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವವರು ಇಷ್ಟ ಪಟ್ಟು ಇಂತಹ ನಾಟಕಗಳಲ್ಲಿ ಅಭಿನಯಿಸುದನ್ನ ನೋಡಿದಾಗ ಸಂತಸವೆನಿಸುತ್ತದೆ, ಇವರು ಬೇರು ಮರೆತಿಲ್ಲವಲ್ಲ ಅಂತ. ದೊಡ್ದ ಪಾತ್ರ- ಸಣ್ಣದು ಯಾವುದಾದರೂ ಅಭಿನಯಿಸುತ್ತಾರೆ , ಸ್ಟಾರ್ ಗಿರಿಯ ಹಂಗಿಲ್ಲದೆ.

ಈ ವರುಷ ಒಳ್ಳೆಯ ನಾಟಕಗಳು ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಬೆಂಗಳೂರಲ್ಲಿ. ಹೋಗುವ ಮನಸ್ಸಿದವರಿಗೆ, ದಿನವೂ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ರವೀಂದ್ರ ಕಲಾಕ್ಷೇತ್ರ, ರಂಗ ಶಂಕರಗಳಲ್ಲಿ ನಿತ್ಯ ಜಾತ್ರೆ. ವಾರದಲ್ಲಿ ಒಂದೆರಡು ಕಡೆಗಾದರೂ ಪ್ರಯತ್ನ ಪಟ್ಟು ಹೋಗುತ್ತೇನೆ ನಾನು. ಹೆಚ್ಚಿನ ಕಾರ್ಯಕ್ರಮಗಳು ಸಂಜೆ ೬ರ ಮೇಲೆ ನಡೆಯುವುದರಿಂದ ಯಥಾಸಾಧ್ಯ ಪ್ರಯತ್ನ ಮಾಡಿ ಹೋಗಬಹುದು.

ಈ ವಾರವೂ ಅಷ್ಟೇ, ಒಳ್ಳೊಳ್ಳೇ ನಾಟ್ಕ- ಇತ್ಯಾದಿಗಳಿವೆ . ಇವತ್ತು ತೇಜಸ್ವಿ ಸಪ್ತಾಹದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಜುಗಾರಿ ಕ್ರಾಸ್ ನಾಟ್ಕ, ನಾಳೆ ೨೧ಕ್ಕೆ ಕೃಷ್ಣೇಗೌಡನ ಆನೆ, ನಾಡಿದ್ದು ತಬರನ ಕಥೆ, ಶನಿವಾರ ಯಮಳ ಪ್ರಶ್ನೆ. ಎಲ್ಲ ರವೀಂದ್ರ ಕಲಾಕ್ಷೇತ್ರದಲ್ಲಿ. ಸಮಯ - ೬.೧೫. ಇತ್ತಕಡೆ ರಂಗಶಂಕರದಲ್ಲಿ, ಇವತ್ತು ಜೋಕುಮಾರಸ್ವಾಮಿ, ನಾಳೆ, ನಾಡಿದ್ದು ಕೈಲಾಸಂ ನಾಟ್ಕ- ಬಂಡ್ವಾಳ್ವಿಲ್ದ ಬಡಾಯಿ. ಶನಿವಾರ ಭಾನುವಾರ - "ನೀನಾನಾದ್ರೆ ನಾನೀನೇನಾ" ಅನ್ನುವ - ಎಸ್.ಸುರೇಂದ್ರನಾಥ್ ನಿರ್ದೇಶನದ -ಸಂಕೇತ್ ಕಲಾವಿದರ- ಸಿಹಿಕಹಿ ಚಂದ್ರು ಮತ್ತು ಶ್ರೀನಿವಾಸ್ ಪ್ರಭು ಅಭಿನಯದ ನಾಟಕ, ೭.೩೦ಕ್ಕೆ.ಶನಿವಾರ ಸಂಜೆ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಪ್ರವೀಣ್ ಗೋಡ್ಕಿಂಡಿಯ 'ಕೃಷ್ಣಾ' ತಂಡದಿಂದ ಕೊಳಲು ವಾದನ ಕಾರ್ಯಕ್ರಮವೂ ಇದೆ.

ಬನ್ನಿ. ಭೇಟಿಯಾಗೋಣ.

ಮಂಗಳವಾರ, ಜೂನ್ 19, 2007

ಭಾವ - ೧೧

ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುತ್ತಿದ್ದರೆ , ಪಕ್ಕದಲ್ಲಿರುವ ಮಗು ಅವರನ್ನೆ ದಿಟ್ಟಿಸುತ್ತಿದೆ ಅಚ್ಚರಿಯಲ್ಲಿ. ಬದುಕು ಸುಂದರವಾಗಿದೆ ಅಲ್ಲವೆ?

ಸೋಮವಾರ, ಜೂನ್ 18, 2007

ಹಕ್ಕಿ ಕಥೆ.

ನಿನ್ನೆ ರಾತ್ರೆ ಹನ್ನೆರಡು ಗಂಟೆ ಸುಮಾರಿಗೆ ಸುಶ್ರುತ ಮೆಸೇಜು ಮಾಡಿದ. ಎಕ್ಸಾಮಿಗೆ ಓದುತ್ತಿದ್ದವನು ಹಾಗೇ ಎಲ್ಲೋ ಎದ್ದು ಹೊರಗಡೆ ಹೋಗಿರಬೇಕು. ಈ ಪರೀಕ್ಷೆ ಅಂದರೇನೇ ಹಾಗೆ, ಆ ಸಮಯದಲ್ಲಿ ನಮಗೆ, ಓದುವುದೊಂದು ಬಿಟ್ಟು ಮತ್ತೆಲ್ಲ ವಿಚಾರಗಳೂ ತಲೆಗೆ ಬರುತ್ತವೆ. ಇಲ್ಲದ ಬೇರೆ ಜಂಜಡಗಳೆಲ್ಲ ಅದೇ ಸಮಯಕ್ಕೇ ತಲೆಗೆ ಸುತ್ತಿಕೊಳ್ಳುತ್ತವೆ. ಇವನ ವಿಷಯದಲ್ಲೂ ಹಾಗೇ ಆಗಿದೆ.

" ನಮ್ಮ ಮನೆ ಎದುರು ಒಂದು ದೊಡ್ಡ ಮರ. ಅದರ ನಾಕನೇ ರೆಂಬೆಯ ಮೂರನೇ ಕವಲಿನಲ್ಲಿ ಒಂದು ಹಕ್ಕಿ ಸಂಸಾರ. ಗಂಡ, ಹೆಂಡತಿ, ಮೂರು ಮಕ್ಕಳು. ಹೆಣ್ಣು ಹಕ್ಕಿ ಮತ್ತೆ ಗರ್ಭಿಣಿ! ಅದು ಎಲ್ಲಿಗೂ ಹೋಗದೇ ಗೂಡಿನಲ್ಲೇ ಕೂತಿರುತ್ತದೆ: ಮಳೆ ನೋಡುತ್ತಾ, ಮರಿಗಳೊಡನೆ. ಇವತ್ತು ಬೆಳಗ್ಗೆ ಆಹಾರ ತರಲೆಂದು ಹೋದ ಗಂಡ, ಇನ್ನೂ ವಾಪಾಸು ಬಂದಿಲ್ಲವಂತೆ.. ಗೂಡಿನಲ್ಲಿ ಚಿಂತೆ, ಬಿಕ್ಕಳಿಕೆ,ನಿಟ್ಟುಸಿರು.. ನಾನು ಅವಕ್ಕೆ, "ನಾಳೆ ಬೆಳ್ಗೆ ಹುಡುಕೋಣ" ಅಂತ ಸಮಾಧಾನ ಮಾಡಿದ್ದೇನೆ. ನಿನ್ನ ಜೊತೆ ಅವ್ರಿಗು ಗುಡ್ ನೈಟ್ ಹೇಳಿದ್ದೇನೆ. ಸರಿ ತಾನೆ"?

ಇವನಿಗ್ಯಾಕಪಾ ಬೇಕಿತ್ತು ಇಲ್ಲದ ಉಸಾಬರಿ? ಅಲ್ದೇ ಪಾಪ ಆ ಹಕ್ಕಿಗೆ ಗುಡ್ ನೈಟ್ ಬೇರೆ ಹೇಳಿದ್ದಾನೆ. ಅದ್ಕೆ ಪಾಪ ಅದು ಗುಡ್ ನೈಟ್ ಹೇಗಾಗ ಬೇಕು? ಹಮ್, ಹಾರೈಸೋದ್ರಲ್ಲಿ ತಪ್ಪಿಲ್ಲ ಅಂದುಕೊಳ್ಳೋಣ. ಅಲ್ಲದೇ ಆ ಹಕ್ಕಿ ಸಂಸಾರಕ್ಕೆ ವಿಷ್ ಮಾಡೋ ಭರದಲ್ಲಿ ನಮ್ಮನ್ನೂ ತನ್ನ ಜೊತೆ ಎಳೆದುಕೊಂದು ಬಿಟ್ಟಿದ್ದಾನೆ! ನಾವು ಕೂಡಾ ತಿಳಿದೋ , ತಿಳಿಯದೆಯೋ ಆ ಹಕ್ಕಿ ಸಂಸಾರದ ದುಃಖದಲ್ಲಿ ಭಾಗಿಗಳಾಗಿ ಬಿಟ್ಟಿದ್ದೇವೆ, ಒಂದು "ಗುಡ್ ನೈಟ್" ಕಾಲದಲ್ಲಿ.

ನಂಗೋ ಬೆಳ್ಗೆ ತಂಕ ಪಾಪ, ಆ ಹಕ್ಕಿದೇ ಆಲೋಚ್ನೆ! ಎಲ್ ಹೋಯ್ತೋ, ಎನ್ ಆಯ್ತೋ. ಈ ಬೆಂಗಳೂರೆಂಬೋ ಮಾಯಾ ನಗರಿ ಏನ್ ಸಾಮಾನ್ಯಾನಾ? ಎಲ್ಲ ಒಂದೇ ತರ ಕಾಣೋ ಪೆಟ್ಗೆ ಪೆಟ್ಗೆ ಮನೆಗಳು. ದಾರಿ ತಪ್ಸ್ ಕೊಂಡು ಎಲ್ಲಿ ಅಲೀತಿದ್ಯೋ, ಹೆಂಡ್ತಿ ನೋಡದ್ರೆ ಗರ್ಭಿಣಿ ಅಂದಿದಾನೆ ಸುಶ್. ಮಳೆ ಬೇರೆ ಜೊತೆಗೆ. ಅಲ್ಲಾ ಇವನ್ಯಾಕಪಾ ಅದ್ರ್ ಹತ್ರ ಕೇಳೋಕೆ ಹೋಗ್ಬೇಕಿತ್ತು? ಸುಮ್ನೆ ಇದಿದ್ರೆ ಏನಾಗಿರೋದು? ಅಲ್ಲಾ, ನಾನಾಗಿದ್ರೂ ಕೇಳ್ತಿದ್ದೆ ಅನ್ನಿ, ಅದು ಬೇರೆ ವಿಚಾರ.

ಅದೇ ಹಕ್ಕಿನೇ ತಲೆ ಒಳಗೆ ಇಟ್ಕೊಂಡು ಸ್ನಾನ, ತಿಂಡಿ ಮುಗ್ಸಿ ಪ್ಯಾಂಟು- ಶರ್ಟು ಹಾಕ್ಕಂಡು ಬಸ್ಯಾಂಡಿಗೆ ಹೋಗ್ ನಿಂತೆ. ಅಲ್ಲೇ ಪಕ್ಕದಲ್ ಒಂದು ಮರ ಇದೆ. ಕೀಚ್ಲು ಧ್ವನಿ ನಿ ಯಾವ್ದೋ ಹಕ್ಕಿ ಸಣ್ಣಕೆ ಗಲಾಟೆ ಮಾಡ್ತಿತ್ತು! ಮೈ ಪುಕ್ಕ ಎಲ್ಲಾ ಕೆದ್ರೋಗಿದೆ ಪಾಪ.
"ಏನೇ ಹಕ್ಕಿ ಏನಾಯ್ತು" ಅಂದೆ.

ಏನೂ ಇಲ್ಲಾ ಮನೆ ದಾರಿ ತಪ್ಪಿದೆ ನಂಗೆ, ನಿನ್ನೆ ಆಹಾರ ಹುಡಕ್ಕೊಂಡ್ ಹೊರ್ಟಿದ್ನಾ - ಯಾವ್ದೋ ತಲೇಲಿ ಎಲ್ಲೆಲ್ಲೋ ಹಾರಿದೀನಿ. ಆಹಾರ ಸಿಗ್ತು, ಕಚ್ಕೊಂಡು ಹಾರೋಕೆ ನೋಡಿದ್ರೆ ಏನ್ ಮಾಡೋದು, ಯಾವ್ದೋ ಗೊತ್ತಿಲ್ದೇ ಇರೋ ಜಾಗ. ಹೆಂಗೆ ವಾಪಾಸು ಹೋಗೋದು ಅಂತ್ಲೂ ಗೊತಾಗ್ಲಿಲ್ಲ. . ಅಲ್ಲೇ ಒಂದು ಅರ್ಧ ಕಟ್ಟಿರೋ ಬಿಲ್ಡಿಂಗ್ ಇತ್ತು, ಸುಮ್ನೆ ವೆಂಟಿಲೇಟರ್ ಸಂದೀಲಿ ಕೂತು ರಾತ್ರಿ ಕಳ್ದೆ.. ಈಗ ಮನೆಗೆ ಹೇಗ್ ಹೋಗ್ಲಿ.. ಹೆಂಡ್ತಿ ಬೇರೆ ಗರ್ಭಿಣಿ.. ಮೂರು ಪುಟ್ ಪುಟ್ ಮಕ್ಳಿದಾರೆ..

ಓಹ್- ಇದು ಸುಶ್ ಮನೆ ಎದ್ರುಗಡೇ ಹಕ್ಕಿ! ನಂಗೆ ಭಾರೀ ಖುಶಿ ಆಗೋಯ್ತು!

ನಾನು ಅದರ ಮಾತ್ನ ಅರ್ಧಕ್ಕೆ ನಿಲ್ಸಿದವನೇ,

"ನಂಗೆ ನಿಮ್ಮನೆ ದಾರಿ ಗೊತ್ತು... ನಿಮ್ ಮನೆ ಎದ್ರಿಗೆ ಟಾರಸಿ ಮನೆ ಇಲ್ವಾ, ಅಲ್ಲೇ ಮೇಲಿರೋ ಹುಡ್ಗ ನಂಗೆ ಫ್ರೆಂಡು ಹಕ್ಕೀ, ಅವನು ನಿನ್ನೆ ರಾತ್ರೇನೇ ನೀನು ಮನೇಲ್ ಇಲ್ದಿರೋ ಕಥೆ ನಂಗೆ ಹೇಳಿದಾನೆ, ಏನೂ ಚಿಂತೆ ಮಾಡ್ಬೇಡ" ಅಂತಂದು ಅದರ ಮನೆಗೆ ಹೋಗೋ ದಾರಿ ಹೇಳಿ, ಶುಭೋದಯಾ ಅಂತ ಹಾರೈಸಿ ಕಳ್ಸಿಕೊಟ್ಟೆ. ಅಷ್ಟು ಮಾಡಿದವನೇ ಸುಶ್ ಗೆ ಮೆಸೇಜು ಬಿಟ್ಟೆ.

" ಇಲ್ಲೊಂದು ಪುಟ್ಟ ಬೆದರಿದಂತೆ ಕಾಣುವ ಹಕ್ಕಿ, ನನ್ನ ಪಕ್ಕ ಇರೋ ಮರದ ಗೆಲ್ಲ ಮೇಲೆ. ಪುಕ್ಕ ಕೆದರಿದೆ. ಕಣ್ಣಲ್ಲಿ ಚಿಂತೆ, ದೇಹ ಭಾವ ಗಾಭರಿಯದು. ಅದು ದಾರಿ ತಪ್ಪಿಸಿಕೊಂಡಿದೆಯಂತೆ. ಹೆಂಡತಿ ಗರ್ಭಿಣಿ ಬೇರೆ ಅಂತು. ನಾನು ನಿನ್ನ ಮನೆ ದಾರಿ ಹೇಳಿ, ಶುಭೋದಯ ಅಂತ ಹಾರೈಸಿ, ಅರಾಮಾಗಿ ಹೋಗು ಅವ್ರೆಲ್ಲ ಚೆನ್ನಾಗಿದಾರೆ ಅಂದೆ. ಸರಿ ತಾನೆ?"

"ಥ್ಯಾಂಕ್ಸು ಮಾರಾಯಾ, ನಾನಿನ್ನು ನಿಶ್ಚಿಂತೆಯಿಂದ ಎಕ್ಸಾಮು ಬರೀ ಬಹುದು " - ರಿಪ್ಲೈ ಬಂತು ಆ ಕಡೆಯಿಂದ.

ಇಷ್ಟು ಹೊತ್ತಿಗೆ ಗಂಡು ಹಕ್ಕಿ ಗೂಡು ಮುಟ್ಟಿರಬಹುದು. ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು.

ಓವರ್ ಟು ಸುಶ್!

ಬುಧವಾರ, ಜೂನ್ 13, 2007

ಇವತ್ತು ಬೆಳಗ್ಗೆ..

ಇಂದು ಬೆಳಗ್ಗೆ ಎಂದಿನಂತೆ BTM ಲೇ ಔಟಲ್ಲಿ ೨೦೧ ಬಸ್ಸಿಳಿದೆ, ೯ ಗಂಟೆಯ ಸಮಯ. ಟ್ರಾಫಿಕ್ ಜಾಮ್ ಯಾಕೋ ಇನ್ನು ಆಗಿರಲಿಲ್ಲ, ಆಶ್ಚರ್ಯ ಅನ್ನಿಸಿತು. ದಿನನಿತ್ಯ ಇಲ್ಲಿ ವಾಹನಗಳ ಸರತಿ ಸಾಲು ಪೇ ಪೇ ಅಂತ ಹಾರ್ನು ಬಾರಿಸಿಕೊಂಡು ನಿಂತಿರುವುದು ತೀರಾ ಸಾಮಾನ್ಯ ದೃಶ್ಯ. ನಾನು ಬಸ್ಸಿಳಿದು ರೋಡು ದಾಟಲು ಹೊರಡುವುದಕ್ಕೂ, ಸಿಗ್ನಲ್ಲು ಬೀಳುವುದಕ್ಕೂ ಸರಿಯಾಯಿತು. ೨೦೧ ಬಸ್ಸು , ಅದರ ಹಿಂದೆ ಒಂದು ಆಟೋ, ಜೀಪು.. ಎಲ್ಲ ಬ್ರೇಕು ಹಾಕಿ ನಿಂತವು ಅಲ್ಲೇ.

೪ನೇ ವೆಹಿಕಲ್ಲು ಒಂದು ಅಂಬುಲೆನ್ಸ್. ಹಾರನ್ ಮೇಲೆ ಹಾರನ್ ಬಾರಿಸುತ್ತಿದ್ದ ಆತ. ನನ್ನಷ್ಟೇ ಪ್ರಾಯದ ಹುಡುಗ ಡ್ರೈವರ್ರು. "ಅಣ್ಣಾ, ಪ್ಲೀಸ್ ಮುಂದ್ ಹೋಗಣ್ಣ, ಅರ್ಜೆಂಟ್ ಕೇಸ್ ಬೇಗ್ ಹೋಗ್ಬೇಕೂ" ಅಂತ ಮುಂದಿನ ಜೀಪ್ನವನ್ನ ಅಂಗಲಾಚುತ್ತಿದ್ದ. ಅವನೋ, "ಸಿಗ್ನಲ್ ಇದ್ಯಪ್ಪಾ, ನಾನೇನ್ ಮಾಡ್ಲಿ ಹೋಗಿ ಆ ಟ್ರಾಫಿಕ್ ಪೋಲೀಸ್ನ ಕೇಳು" ಅಂದು ಸುಮ್ಮಗಾದ. ಇಲ್ಲಿನ ಪರಿಸ್ಥಿತಿ ಹೇಗೆಂದರೆ, ಮುಂದಿನ ಯಾವ ಘಳಿಗೆಯಲ್ಲಿ ಬೇಕಾದರೂ, ಯಾವನೋ ಒಬ್ಬ ತಲೆ ಕೆಟ್ಟವನು ಅಡ್ಡಂಬಡ್ದ ನುಗ್ಗಿ, ಟ್ರಾಫಿಕ್ಕು ಚಿತ್ರಾನ್ನ ಆಗಿಬಿಡಬಹುದು. ಹಾಗೆ ಆಗಿದ್ದನ್ನ ನಾನೇ ಎಷ್ಟೋ ಸಲ ನೋಡಿದ್ದೇನೆ.

ಒಂದು ಪ್ರಯತ್ನ ಮಾಡೋಣ ಅಂತ ಸೀದಾ ಟ್ರಾಫಿಕ್ ಪೋಲಿಸ್ ಹತ್ರ ಹೋದವನೇ
"ಸಾರ್ ನೋಡಿ ಅಲ್ಲಿ,ಒಂದು ಅಂಬುಲೆನ್ಸ್ ಮಧ್ಯ ಇದೆ..ಸಿಲ್ಕ್ ಬೋರ್ಡ್ ಕಡೆ ಹೋಗೋದು, ಆ ಕಡೆ ಸಿಗ್ನಲ್ ಕ್ಲಿಯರ್ ಮಾಡಿ .. ಏನೋ ಅರ್ಜೆಂಟಿರಬೇಕು" ಅಂದೆ, ಒಂದೇ ಉಸಿರಿಗೆ.

ಅವನು ತಣ್ಣಗೆ,
"ದಿನಕ್ಕೆ ಒಂದು ೧೦೦-೨೦೦ ಅಂಬುಲೆನ್ಸ್ ಓಡಾಡ್ತಾವೆ ಇಲ್ಲಿ, ಎಲ್ಲ ಅಂಬುಲೆನ್ಸ್ ಗೂ ನಾನು ಹೋಗೋಕೆ ಬಿಡ್ತಾ ಇದ್ರೆ, ಬೇರೆಯವ್ರು ಬಂದು ವದೀತಾರೆ ಅಷ್ಟೇ, ಸುಮ್ನೇ ಹೋಗಯ್ಯೋ "ಅಂದ.

"ಇಲ್ಲಣ್ಣಾ, ನೋಡಿ ಅಣ್ಣಾ, ಪ್ಲೀಸ್".. ಅಂದೆ ನಾನು, ಆಸೆ ಬಿಡದೆ. "ನೋಡಿ ಸರ್ ಸ್ವಲ್ಪ.. ಆಗತ್ತೆ ನಿಮ್ ಹತ್ರ..."
ಅಲ್ಲಿ ಹಿಂದುಗಡೆ ಅವ್ನು ಒಂದೇ ಸಮನೆ ಮಾಡುತ್ತಿರುವ ಹಾರನ್ ಕೇಳಿಸುತ್ತಿತ್ತು.

"ಇದೊಳ್ಳೇ ಗೋಳಾಯ್ತಲ್ಲಪ್ಪಾ..ತಡಿ" ಅಂದು, ದೊಡ್ಡದಾಗಿ ವಿಸಲ್ ಊದಿ, ಆಗತಾನೇ ಹೋಗಲು ಬಿಟ್ಟಿದ್ದವರನ್ನ ತಡೆದು ನಿಲ್ಲಿಸಿ, ೨೦೧ ಬಸ್ಸಿನ ಡ್ರೈವರನಿಗೆ ಸನ್ನೆ ಮಾಡಿದ - ಮುಂದೆ ಹೋಗೋ ಅಂತ. ಅಂಬುಲೆನ್ಸ್ ಡ್ರೈವರ್ ನಂಗೊಮ್ಮೆ ಕೈ ಮಾಡಿ (ಪ್ರಾಯಶಃ ಅವನು ನನ್ನನ್ನ ನೋಡುತ್ತಿದ್ದ ಅನಿಸುತ್ತದೆ) ವೇಗವಾಗಿ ಸಾಗಿದ.

ನಾನು ಆಫೀಸಿನತ್ತ ಹೆಜ್ಜೆ ಹಾಕಿದೆ. ಇಂತಹ ಸಣ್ಣ ಸಣ್ಣ ಘಟನೆಗಳು ಮನಸ್ಸಿಗೆ ಖುಷಿ ನೀಡುತ್ತವೆ.

ಶುಕ್ರವಾರ, ಜೂನ್ 08, 2007

ಹಲಸು, ಹೊಲಸು ಮತ್ತು ಹಸಿವು.

ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸಿದ್ದಾಪುರದಿಂದ ಶಿರಸಿಗೆ ಹೊರಟಿದ್ದೆ. ಮಧ್ಯಾಹ್ನ ೧೨.೩೦ ಗಂಟೆ. ಉರಿ ಉರಿ ಬಿಸ್ಲು. ಎದುರಿಗೆ "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಕಂಡಕ್ಟರೊಬ್ಬ ಕೂಗುತ್ತಿದ್ದ. ನೋಡಿದರೆ ರಾಜಹಿಂಸೆ! ಗೊತಾಗಿಲ್ವಾ? ಅದೇ ರಾಜ ಹಂಸ ಕಣ್ರಿ! ಕೇಯಸ್ಸಾರ್ಟೀಸಿಯವರು ಹಳೆಯ ರಾಜಹಂಸವೊಂದನ್ನ ತೆಗೆದು ಈ ರೂಟಿಗೆ ಬಿಟ್ಟಿದ್ದರು ಅನಿಸುತ್ತದೆ. ವಿಲಾಸೀ ಸೀಟುಗಳೆಡೆಯಲ್ಲಿ, ಅಕ್ಕ ಪಕ್ಕ ಅಲ್ಲಿ ಇಲ್ಲಿ ಎಲ್ಲ ಜನ ತುಂಬಿಕೊಂಡಿದ್ದರು. ಕೂತರೆ ಬರಿಯ ೪೦ ಜನ ಇರಬಹುದಾದ ಆ ಬಸ್ಸಿನೊಳಗೆ ಮಿನಿಮಮ್ ೯೦ ಜನ ಇದ್ದರು. ಇದೆಲ್ಲ ಮಾಮೂಲಿ ಅಂತೀರಾ?, ಅದೂ ಸರೀನೇ ಬಿಡಿ. ನಾನು ಆ ಬಸ್ಸಿಗೆ ಕಡೆಯಯವನಾಗಿ ಹತ್ತಿದೆ, ಮತ್ತದು ನಂಗೆ ಲಾಭವೇ ಆಯಿತು. ಡ್ರೈವರು ಕ್ಯಾಬಿನ್ ಪಕ್ಕ, ಒಂದು ಕಾಲು ಮತ್ತು ಒಂದು ಕೈ ಅರಾಮಾಗೂ ಇನ್ನೊಂದು ಕಾಲು ಮತ್ತು ಕೈಯನ್ನ ಸ್ವಲ್ಪ ಕಷ್ಟ ಪಟ್ಟಾದರೂ ಇಡಬಹುದಾದಂತಹ ಜಾಗವೇ ಸಿಕ್ಕಿತು. ಅದಕ್ಕೂ ಮುಖ್ಯವಾಗಿ ಗಾಳಿ ಬರುತ್ತಿತ್ತು ನಾನು ನಿಂತ ಜಾಗದಲ್ಲಿ.

ಮದುವೆಯ ಸೀಸನ್ನು ಬೇರೆ, ಬಸ್ಸಿನ ತುಂಬ ಬಿಳಿ ಪಂಚೆ, ರೇಷ್ಮೇ ಸೀರೆಗಳೇ ತುಂಬಿದ್ದವು. ಅವರೆಲ್ಲ ಯಾವುಯಾವುದೋ ಮದುವೆಗಳಿಗೆ ಹೊರಟಿದ್ದರೂ ನನ್ನ ತರಹ ಊಟದ ಸಮಯಕ್ಕೆ ಸರಿಯಾಗಿ ಹೊರಟಿದ್ದು ನೋಡಿ ಸಮಾಧಾನವಾಯಿತು. ಬಿಸಿಲಿನ ಸುಟಿಗೆ, ಎಲ್ಲರೂ ಅರ್ಧ ಮಿಂದವರಂತೆ ಕಾಣುತ್ತಿದ್ದರು. ಕೆಂಪು, ಹಳದಿ ರವಿಕೆಗಳೆಲ್ಲ ಅರ್ಧಂಬರ್ಧ ಕಪ್ಪಾಗಿ ಕಾಣುತ್ತಿತ್ತು. ಹಣೆಯ ಮೇಲಿನ ಕುಂಕುಮ ಕರಗಿ, ಅದನ್ನ ಕರ್ಚೀಫಲ್ಲಿ ಸರಿಯಾಗಿ ವರೆಸಿಕೊಳ್ಳಲೂ ಬರದೆ, ಇಡೀ ಮುಖ ತುಂಬ ಕೆಂಪು ಮಾಡಿಕೊಂಡಿದ್ದ ದಪ್ಪ ಹೆಂಗಸೊಬ್ಬಳು ಸಿಡಿ ಮಿಡಿ ಮುಖ ಹೊತ್ತು ನಿಂತಿದ್ದಳು ನನ್ನ ಸ್ವಲ್ಪ ಹಿಂದೆ. ಅವಳಿಗೆ ಅದನ್ನ ಹೇಳ ಬೇಕೆಂದು ಹೊರಟವನು ಬಾಯಿ ಮುಚ್ಚಿ ನಿಂತುಕೊಂಡೆ, ಸುಮ್ನೆ ಯಾಕೆ ರಿಸ್ಕು ಅಂತ.

ಜನ ತುಂಬಿ ತುಳುಕುತ್ತಿದ್ದರೂ ದುರಾಸೆ ಕಂಡಕ್ಟರು "ಸಿರ್ಸಿ ಸಿರ್ಸಿ ಸಿರ್ಸಿ" ಅಂತ ಮೈ ಮೇಲೆ ಬಂದವರ ಹಾಗೆ ಕಿರುಚುತ್ತಿದ್ದ ಹೊರಗಡೆ. ಬಸ್ಸೊಳಗೆ ಇದ್ದವರಿಗೆಲ್ಲ ಅಷ್ಟು ಹೊತ್ತಿಗೇ ತಾಳ್ಮೆ ತಪ್ಪಿದ್ದರಿಂದ ಅವನಿಗೂ, ಡ್ರೈವರನಿಗೂ ಬಾಯಿಗೆ ಬಂದ ಹಾಗೆ ಬೈದರು. ಎಲ್ಲರೂ ಹೆದರುವ ಹಾಗೆ ಬಸ್ಸಿನ ಹೊರಮೈಯನ್ನ ಡಬ ಡಬಾಂತ ಬಡಿದ ಕಂಡಕ್ಟರು ರೈಟ್ ರೈಟ್ ಅಂತಂದು ಒಳಗೆ ತೂರಿಕೊಂಡ. ಎದುರುಗಡೆ ಸೀಟಲ್ಲಿ ಕೂತ ಮಾಣಿಗೆ ಅವನಮ್ಮ ಕುರ್ಕುರೇ ತೆಗೆತೆಗೆದು ಕೊಡುತ್ತಿದ್ದಳು. ನಂಗೆ ಆವಾಗ ನೆನ್ಪಾಯಿತು, ಬೆಳಗ್ಗಿಂದ ಏನೂ ಸರಿಯಾಗಿ ತಿಂದೇ ಇಲ್ಲ ನಾನು! ಲೇಟಾಗ್ತಿದೆ ಅಂತ ಗಡಿಬಿಡಿ ಗಡಿಬಿಡಿ ಲಿ ಹೊರಟು ಬಂದಿದ್ದೆ ಹೊಸನಗರದಿಂದ. ತಗಡು ಹೋಟೇಲೊಂದರ ಮತ್ತೂ ತಗಡು ಕಾಪಿ ಕುಡಿದು , ಒಂದು ವಡೆ ತಿಂದಿದ್ದೆ ಅಷ್ಟೆ.

ಈ ಹಸಿವು ಅನ್ನೋದು ನೆನ್ಪಾಗ್ದೇ ಇದ್ರೆ ಚೆನ್ನಾಗಿತ್ತು. ನೆನಪಾಗಿ ಕೆಲಸ ಕೆಟ್ಟಿತು. ಬಸ್ಸು ಬೇರೆ ಹೊರಟಾಯ್ತು, ಕೆಳಗಿಳಿದು ಏನೂ ಖರೀದಿ ಮಾಡುವ ಹಾಗೂ ಇಲ್ಲ. ಆ ಕುರುಕಲು ತಿನ್ನುವ ಹುಡುಗನ್ನ ನೋಡುತ್ತಿದ್ದರೆ ಮತ್ತೂ ಹಸಿವಾಗುತ್ತದೆ ಅಂದುಕೊಂಡು ಮುಖ ತಿರುವಿಸಿ ,ಎದುರುಗಡೆಯ ರಸ್ತೆಯನ್ನು ನೋಡುತ್ತಾ ನಿಂತುಕೊಂಡೆ.

ಬಸ್ಸು ಸಿದ್ದಾಪುರ ಪೇಟೆ ದಾಟಿ ಮುಂದುವರಿಯಿತು. ನಾನು ಕ್ಯಾಬಿನ್ ಬಾಗಿಲಿಗೆ ಹೇಗೇಗೋ ವರಗಿಕೊಂಡು ನಿಂತು ಬ್ಯಾಗನ್ನ ಅಲ್ಲೇ ಮೇಲುಗಡೆಯೆಲ್ಲೋ ತೂರಿಸಿ ನಿಟ್ಟುಸಿರು ಬಿಟ್ಟೆ. ಇನ್ನು ಇದೇ ಭಂಗಿಯಲ್ಲಿ ಹೆಚ್ಚೆಂದರೆ ಮುಕ್ಕಾಲು ತಾಸು ನಿಂತರಾಯಿತು, ಸಿರಸಿ ಬರುತ್ತದೆ ಅಂದುಕೊಂಡು ಹಾಯ್ ಎನಿಸಿತು. ಹಸಿವನ್ನ ನಿಧಾನವಾಗಿ ಮರೆಸುವ ಪ್ರಯತ್ನ ಮಾಡುತ್ತಿತ್ತು ಮೆದುಳು. ೪-೫ ಕಿಲೋಮೀಟರು ಬಂದಿರಬಹುದು, "ಘಮ್" ಅಂತ ಹಲಸಿನ ಹಣ್ಣಿನ ಪರಿಮಳ ಬಂದು ರಾಚಿತು ಮೂಗಿಗೆ! ಮೊದಲೇ ಕೆಟ್ಟ ಹಸಿವು, ಹಸಿದ ಹೊತ್ತಲ್ಲಿ ಹಲಸಿನ ಘಮ ಬಂದರೆ ಹೇಗಾಗಬೇಡ? ಸಟಕ್ಕನೆ ಹಿಂತಿರುಗಿ ನೋಡಿದರೆ....

ಎರಡನೇ ಸೀಟು, ಬಸ್ಸಿನ ಬಲ ಭಾಗದ್ದು. ಮದುವೆಗೆ ಹೊರಟ ಇಬ್ಬರು ಹೆಂಗಸರು ದಿವ್ಯವಾಗಿ ಅಲಂಕರಿಸಿಕೊಂಡು ಅಲ್ಲಿ ಪ್ರತಿಷ್ಠಾಪನೆಗೊಂಡಿದ್ದಾರೆ, ಅಲ್ಲೇ ಪಕ್ಕದ ಕಂಬ ಹಿಡಿದುಕೊಂಡು ಸುಮಾರು ೧೫-೧೬ ರ ಹುಡುಗಿಯೊಬ್ಬಳು ನಿಂತಿದ್ದಾಳೆ. ಈ ಹುಡುಗಿಗೆ ಪ್ರಾಯಶ: ಬಸ್ಸು ಹತ್ತೋಕೆ ಅರ್ಧ ಗಂಟೆ ಮೊದಲು ಎಲ್ಲೋ ಬಿಟ್ಟಿಯಾಗಿ ಮತ್ತು ಧಂಡಿಯಾಗಿ ಹಲಸಿನ ಹಣ್ಣು ತಿನ್ನಲು ಸಿಕ್ಕಿದೆ, ಮತ್ತು ಈ ಬಸ್ಸಿನ ಕುಲುಕಾಟದಿಂದಾಗಿ, ತಿಂದ ಅಷ್ಟನ್ನೂ ಕೆಳಗೇ, ಸರಿಯಾಗಿ ತನ್ನ ಕೆಳಗೇ ಕೂತ ಹೆಂಗಸಿನ ತಲೆಯ ಮೇಲೆ ಕಾರಿಕೊಂಡಿದ್ದಾಳೆ ಮತ್ತು, ನನ್ನ ದುರ್ದೈವಕ್ಕೆ ಹೀಗಾದ ಮಾರನೇ ಸೆಕೆಂಡಿಗೇ ಈ ಘನಘೋರ ದೃಶ್ಯ ನೋಡಿದೆ!

ಆ ಹೆಂಗಸಿನ ತಲೆ , ಮುಖ ಎಲ್ಲ ಸಂಪೂರ್ಣ ಹಲಸಿನ ತೊಳೆಗಳಿಂದ ತುಂಬಿ ಹೋಗಿತ್ತು ಪಾಪ! ಅರಸಿನದಲ್ಲಿ ಸ್ನಾನ ಮಾಡಿಸಿದಂತೆ ಎಲ್ಲ ಹಳದಿ ಹಳದಿ ಹಳದಿ. ಆಕೆಗೆ ತನಗೇನಾಯ್ತು ಎನ್ನುವುದು ಅರಿವಿಗೆ ಬರಲು ನಾಲ್ಕೆಂಟು ಸೆಕೆಂಡುಗಳೇ ಬೇಕಾದವು. ಅಲ್ಲಾ, ಅಷ್ಟು ಹೊತ್ತು ಬೇಕು , ಯಾಕೆ ಅಂದರೆ ಇಂತಹ ಅನುಭವಗಳೇನು ದಿನಾ ಆಗುತ್ತವೆಯೇ? ತನಗೇನಾಯ್ತು ಅಂತ ಅವಳಿಗೆ ಗೊತ್ತಾಗಿ ಬಾಯಿ ಬಿಡುವುದಕ್ಕೊ , ಹಲಸಿನ ತೊಳೆಯೊಂದು ಸೀದಾ ಆ ಹೆಂಗಸಿನ ಬಾಯೊಳಗೇ ಹೋಯಿತು! ಅಷ್ಟಾಗಿದ್ದೇ ತಡ, ಅತ್ಯಂತ ಅಸಹ್ಯವಾಗಿ ಮುಖ ಕಿವುಚಿಕೊಂಡು "ವ್ಯಾಕ್" ಅಂದು, ತನ್ನ ಹೊಟ್ಟೆಗೆ ಹೋಗಲು ಯತ್ನಿಸುತ್ತಿದ್ದ ಆ ಹಲಸಿನ ತೊಳೆಯನ್ನು, ಉದರದೊಳಗಿರುವ ಇನ್ನಿತರ ಸಶೇಷ ವಸ್ತುಗಳ ಸಮೇತವಾಗಿ ಹೊರಗಟ್ಟಿದಳು!.

ಇಷ್ಟಾಗುವಾಗ ಬಸ್ಸಿನ ತುಂಬ ಹಲಸಿನ ಪರಿಮಳ "ಪಸರಿಸಿತ್ತು"!. ಎಲ್ಲರೂ "ಏನು, ಏನು ಏನಾಯ್ತು, ಯಾಕಾಯ್ತು"ಅಂತೆಲ್ಲ ಮಾತಾಡಲು ಆರಂಭಿಸಿದರು. ಆ ಎರಡನೇ ಸೀಟು ಅದರ ಅಕ್ಕ - ಪಕ್ಕ ಸಣ್ಣ ವಾಂತಿ ಹಳ್ಳವೇ ನಿರ್ಮಾಣವಾಗಿತ್ತು. ಅಲ್ಲೇ ಹಿಂದೆಲ್ಲೋ ನಿಂತಿದ್ದ ಮುದುಕಿಯೊಬ್ಬಳು ಮುಂದಿದ್ದ ಯಾರನ್ನೋ ಸರಿಸಿ, "ಎಂತ್ ಆಯ್ತ್ ಇಲ್ಲಿ" ಅಂತ ಮೆಲ್ಲಗೆ ಯಾರದೋ ಕೈಯ ಸಂದಿಯಿಂದ ಹಣುಕಿದಳು, ಒಂದು ಕ್ಷಣ ಅಷ್ಟೆ- ಆ ಹಳದಿ ತಲೆ, ಕೆಳಗಿನ ಸಶೇಷ ವಸ್ತುಗಳಿಂದ ನಿರ್ಮಿಸಲ್ಪಟ್ಟು ವಿಕಾರವಾಗಿ ಕಾಣುತ್ತಿದ್ದ ರಾಶಿ , ಎಲ್ಲ ನೋಡಿದವಳೇ "ಸಿವನೇ" ಅಂತೊಂದು ದೊಡ್ಡ ಉದ್ಗಾರ ತೆಗೆದು, ತನ್ನ ಬಾಯನ್ನು ಯಥಾಸಾಧ್ಯ ಅಗಲಿಸಿ ಆ ರಾಶಿಗೇ ಸರಿಯಾಗಿ ಬೀಳುವಂತೆ ಕಕ್ಕಿದಳು- ತನ್ನೊಳಗಿನ ಎಲ್ಲವನ್ನೂ!

೩೦ ಸೆಕೆಂಡುಗಳೊಳಗಾಗಿ ಮೂರು ಮೂರು ವಾಂತಿಗಳು! ಎಲ್ಲರೂ ಎಲ್ಲರನ್ನೂ ಬೈಯುವವರೇ ಈಗ ಬಸ್ಸೊಳಗೆ. ಆದರೆ ಹೆಚ್ಚಿಗೆ ಬೈಗುಳಕ್ಕೆ ತುತ್ತಾದವಳು ಮೊದಲು ವಾಂತಿ ಮಾಡಿದವಳು. "ಗೊತಾಗಲ್ವಾ ವಾಂತಿ ಬರತ್ ಅಂತ, ಏನ್ ಖರ್ಮ ಇದು" "ಮದ್ವೆಗ್ ಹೊರ್ಟಿದ್ದೆ ನಾನು , ಸೀರೆ ಎಲ್ಲ ಗಲೀಜಾಯ್ತು" " ಥೂ, ಏನ್ ಜನನಪಾ , ಸ್ವಲ್ಪಾನೂ ಕಾಮನ್ ಸೆನ್ಸ್ ಇಲ್ಲ" - ಹೀಗೆ ಸೀರೀಸ್ ಆಫ್ ಬೈಗುಳಾಸ್! ವಾಂತಿಗೂ ಕಾಮನ್ ಸೆನ್ಸ್ ಗೂ ಎಲ್ಲಿಯ ಸಂಬಂಧಾನೋ ಗೊತ್ತಾಗಲಿಲ್ಲ ನಂಗೆ. ಪಾಪ, ಆ ರಶ್ಶು ಬಸ್ಸಲ್ಲಿ ಎಷ್ಟೇ ಕಾಮನ್ ಸೆನ್ಸ್ ಇದ್ರೂ, ಜನಗಳನ್ನ ತಳ್ಳಿ ಕಿಟಕಿ ಬಳಿ ಓಡೋಕೆ ತಾಕತ್ತೂ ಬೇಕಲ್ಲವೇ? ಭೀತಿಯಿಂದ ಅಕ್ಕ ಪಕ್ಕ ಇರುವವರ ಮುಖಭಾವ ಗಮನಿಸಲು ಆರಂಭಿಸಿದೆ, ಇನ್ಯಾರಾದರೂ ವಾಂತಿ ಮಾಡಿದರೆ ?! ಯಾರೇ ಸುಮ್ಮನೇ ಬಾಯಿ ಬಿಟ್ಟರೂ ಎಲ್ಲಿ ಒಳಗಿದ್ದದ್ದನ್ನ ಹೊರ ಹಾಕುತ್ತಾರೋ ಅನ್ನೋ ವಾಂತಿಫೋಬಿಯಾ ಶುರುವಾಯಿತು ನಂಗಂತೂ.

ನೀವಿದನ್ನು ಓದಲು ತೆಗೆದುಕೊಂಡಿರುವ ಸಮಯಕ್ಕಿಂತ ಎಷ್ಟೋ ಕಡಿಮೆ ಸಮಯದೊಳಗೆ ಈ "ವಾಂತಿ ಸರಪಣಿ ಕ್ರಿಯೆ" ಜರುಗಿದೆ ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳಿ. ಇಂತಹ ಒಂದು ಯಡವಟ್ಟು ಮತ್ತು ಅಸಂಗತವಾಗಿರುವ ಸನ್ನಿವೇಶವನ್ನ ನಾನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ.

ಬಸ್ಸನ್ನ ಮುಂದೆಲ್ಲೋ ನಿಲ್ಲಿಸಿದರು. ಬಿರುಬೇಸಗೆಯಲ್ಲೂ ಯಾವುದೋ ಅಂಗಡಿಯಾತ "ಅರ್ಧ ಕೊಡಪಾನ" ನೀರನ್ನ ಉದಾರವಾಗಿ ದಾನ ಮಾಡಿದ. ಅಷ್ಟರಲ್ಲೇ ಹೇಗೋ ಬಸ್ಸನ್ನ ಕ್ಲೀನು ಮಾಡಲಾಯಿತು. ಮತ್ತು ಎಲ್ಲವನ್ನೂ ಆ ಹುಡುಗಿಯೇ ಮಾಡಬೇಕಾಯಿತು. ಒಂದ ವಾಂತಿಯ ಪರಿಣಾಮವಾಗಿ ಉಳಿದವರದನ್ನೂ ಬಾಚುವ ಕೆಲಸ ಅವಳಿಗೆ. ಹಲಸಿನ ಸ್ನಾನವಾದ ಹೆಂಗಸಂತೂ ಗರ ಬಡಿದವಳ ಹಾಗೆ ಸುಮ್ಮನಾಗಿ ಹೋಗಿದ್ದಳು. ಅವಳಿಗೆ ಅಲ್ಲೇ ಹೊರಗೆ ಸಣ್ಣಗೆ ತಲೆ ಸ್ನಾನ ಮಾಡಿಸಲಾಯಿತು. ಏನೇನೋ ಸಣ್ಣಗೆ ಗೊಣಗುತ್ತಿದ್ದಳು ಅವಳು. ಜೀವಮಾನ ಪೂರ್ತಿ ಹಲಸೆಂಬ ಹೊಲಸನ್ನ ಮುಟ್ಟುವುದಿಲ್ಲ ಎಂಬ ಪ್ರತಿಜ್ಞೆ ಮಾಡಿರುತ್ತಾಳೆ ಆಕೆ, ಅದಂತೂ ಶತಃಸಿದ್ಧ.

ಮತ್ತೆ ಬಸ್ಸು ಹೊರಟಿತು. ವಾಂತಿಯಾದ ಸೀಟಿನ ಮೇಲೆ ಯಾರೂ ಅಸಹ್ಯಪಟ್ಟು ಕೂರದೇ ಇದ್ದಾಗ, ಭೂಪನೊಬ್ಬ ಶಿಸ್ತಾಗಿ ತನ್ನ ಬಳಿಯಿದ್ದ ದಿನ ಪತ್ರಿಕೆಯ ಹಾಳೆಯನ್ನ ಆ ಸೀಟಿನ ಮೇಲೆ ಹಾಸಿ ಆರಾಮಾಗಿ ಕೂತೇ ಬಿಟ್ಟ. ಆಚೀಚೆ ನಿಂತವರೆಲ್ಲ ಮಿಕಿ ಮಿಕಿ ಮುಖ ನೋಡಿಕೊಂಡರು! ಬಸ್ಸೊಳಗೆ ಹಲಸಿನ ಹಣ್ಣಿನ ಪರಿಮಳ ಇನ್ನೂ ಹರಡಿತ್ತು.
ಕೆಟ್ಟ ಹಸಿವಿಂದ ಕಂಗೆಟಿದ್ದ ನನಗೆ ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ ಗೊತ್ತಾಗದೇ ತೆಪ್ಪಗೆ ನಿಂತುಕೊಂಡೆ.

ಪೂರಕ ಓದಿಗೆ :) - ಉದಯವಾಣಿ ( ಓದೋ ಮುನ್ನ ಎಚ್ಚರಿಕೆ ಇರಲಿ)

ಶನಿವಾರ, ಜೂನ್ 02, 2007

ಸಂಜೆಗೊಂದು ಕವನ..

ಬಾನಂಚಿನಲಿ ಕೆಂಪು
ಸೂರ್ಯ ಮುಳುಗುವ ಸಮಯ,
ಮೋಡಗಳ ತುದಿಯಲ್ಲಿ ಹೊನ್ನ ಕಲಶ.
ಬಾಗಿಲಲಿ ಅವಳ ನಗು
ಗುಡುಗು ಸಿಡಿಲಿನ ಮಂತ್ರಘೋಷ.

ಸಂಧ್ಯೆಯೊಡಲಿನ ಕೆಂಪು, ಸೂರ್ಯನಾಗಲೆ ತಂಪು
ಸೇರುತಿರುವನೆ ಅವನು ಅವಳ ಒಡಲೊಳಗೆ?
ಮನತೆರೆದು, ಕೈ ಚಾಚಿ, ಬರಮಾಡಿ
ಬರ ಸೆಳೆದು
ನಗುತಿಹುದು ನೋಡಲ್ಲಿ ಸಂಧ್ಯೆ ಮೊಗವು.

ದಿನದ ಕೆಲಸವ ಮುಗಿಸಿ, ಬಳಲಿ
ಸಾಗುತಲಿರಲು, ಮಂದಹಾಸವ ಬೀರಿ
ಕರೆಯುವಳು ಅವಳೆಡೆಗೆ.
ಅವನ ಪುಣ್ಯವೆ ಪುಣ್ಯ!
ಬಳಲಿಕೆಯ ಅರಿವಿಲ್ಲ,
ಕರಗುವನು ಅವಳಲ್ಲೆ,
ಕದವ ಮುಚ್ಚಿ.

{ನನ್ನ ಗೆಳತಿ ಅಂಜಲಿ ಬರೆದಿರೋ ಕವನ ಇದು. ಅಪ್ಪಣೆಯಿಲ್ಲದಿದ್ದರೂ ಇಲ್ಲಿ ಪ್ರಕಟಿಸಿದ್ದೇನೆ. ಅವಳು ಬೈದುಕೊಂಡರೂ ಬೇಜಾರಿಲ್ಲ. }

ಗುರುವಾರ, ಮೇ 31, 2007

ಅಸಂಗತ

ಅರ್ಧ ಚಂದ್ರ ಕಾಣುತ್ತಿದ್ದಾನೆ,
ನೆತ್ತಿ ಬೋಳಾದ
ಮರದ ಎಡೆಯಿಂದ.
ನನಗೆ ಈಗೀಗ ಕಣ್ಣು ಸರಿ ಕಾಣುತ್ತಿಲ್ಲ,
ವರುಷ ಸುಮಾರಾಯಿತು.

ಮೋಟು ಕಾಂಪೌಂಡಿನೊಳಗೆ
ಹರುಕು ಕುರ್ಚಿ.
ಹರಿದ ಪೇಪರಿನೊಳಗೆ
ಏನೋ ಸುದ್ದಿ.
ರಸ್ತೆ ತುಂಬೆಲ್ಲ ಕಸ ತುಂಬಿಕೊಂಡಿದೆ.
ಬೀದಿಯಂಚಿನ ಮುದುಕ
ನಿನ್ನೆ ತೀರಿಕೊಂಡ.

ಮನೆಯೊಳಗೆ ಏನೋ ಗೊಣಗಾಟ,
ತಿಳಿಯುತ್ತಿಲ್ಲ, ಯಾಕೆಂದು.
ನಮ್ಮ ಮನೆಯೆದುರಿನ
ದೀಪವೇ ಹತ್ತಿಕೊಂಡಿಲ್ಲ,
ಬೇರೆಲ್ಲ ಕಡೆ ಬೆಳಕು.

ಮೆಟ್ಟಿಲು ಹತ್ತಬೇಕು
ಒಳಗಡೆಗೆ ನಡೆಯಲು
ಕಸುವಿಲ್ಲ,
ಹೋಗದೆ ವಿಧಿಯಿಲ್ಲ..
ಕತ್ತಲೆಂದರೆ ಹೆದರಿಕೆ ನನಗೆ.

ಮಂಗಳವಾರ, ಮೇ 29, 2007

ಕನವರಿಕೆಗಳು...

ಯಾಕೆ?

ಚಂದಿರನೆಂದರೆ ಎಲ್ಲರಿಗಿಷ್ಟ,
ಹುಣ್ಣಿಮೆ, ಬಿದಿಗೆ,
ಅಮವಾಸ್ಯೆ,
ಎಲ್ಲಕ್ಕೂ ಬರೆದಿದ್ದಾರೆ ಕವನ.
ಬೆಳದಿಂಗಳು, ಕತ್ತಲು
ಎಲ್ಲಕ್ಕೂ ಕೊಟ್ಟಿದ್ದಾರೆ ಉಪಮೆಗಳ.
ಕೇಳುವರೇ ಇಲ್ಲ ಪಾಪ,
ಅವನ ಪಕ್ಕ ನಿಂತು
ತನ್ನದೇ ಪ್ರಭೆಯೊಳಗೆ ಬೆಳಗುವ
ಒಂಟಿ ನಕ್ಷತ್ರವ.

ಅಲ್ಲವೆ?

ಅರಿವೆಂದರೇನೆಂದು
ಅರಿವಾಗೋ ಹೊತ್ತಿಗೆ,
ಉಟ್ಟರಿವೆ
ಹರಿದಿರುತ್ತದೆ.

ನನ್ನನೇ ಕೇಳಿಕೊಂಡಿದ್ದು.

ಭಾವಜೀವಿಗಳೆಂದು
ಕರೆದುಕೊಳ್ಳುವ
ಎಲ್ಲರಿಗೂ ಭಾವವೇ
ಇರುತ್ತದೆಂದೇನೂ ಇಲ್ಲ.
ಭಾವದ ಬಟ್ಟೆಯೊಳಗೆ
ಅಭಾವ ಜೀವಿಗಳೂ
ಇರಬಹುದು.
ನಾನು ಭಾವನೋ
ಅಭಾವನೋ?!

ಗುರುವಾರ, ಮೇ 24, 2007

ಮತ್ತೆ HR ಕತೆ.

ನಮ್ಮನ್ನ ಅಂದರೆ ನಮ್ಮ ಕೆಲಸವನ್ನ- ಕೆಲಸ ಮಾಡುವವರನ್ನ ಹೆಚ್ಚಿನವರು ಬೈಯುತ್ತಾರೆ. HR ಗಳು ಅಂದರೆ, ಉಳಿದ ಸಹೋದ್ಯೋಗಿಗಳಿಂದ ಬೇರೆ ಇರುವವರು,distance ಕಾಪಾಡಿಕೊಳ್ಳುವವರು, ಮ್ಯಾನೇಜುಮೆಂಟಿನ CID ಗಳು .. ಹೀಗೆ. ನಾವು ಏನೂ ಮಾಡುವಂತಿಲ್ಲ. ನಮ್ಮ ಕೆಲಸದ ಹಣೇಬರ ಅದು. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾವು ಮಾಡುವ ಕೆಲಸ ಮಾಡುತ್ತೇವೆ. ಟೆಲಿ ಮಾರ್ಕೆಟಿಂಗ್ ಗೆ ಫೋನ್ ಮಾಡುವುದಾದರೂ ಬೇಕು, ನಮ್ಮದಲ್ಲ.

ಒಂದೇ ಕೆಲ್ಸದ ಸಲುವಾಗಿ ೧೦-೨೦ ಜನಕ್ಕೆ ಫೋನಾಯಿಸುತ್ತೇವೆ, ಹತ್ತಿಪ್ಪತ್ತು ಬಗೆಯ ಉತ್ತರ ಬರುತ್ತದೆ. ಅದೆಲ್ಲ್ ಆಭ್ಯಾಸವಾಗಿದೆ, ಆದರೂ ಕೆಲವೊಮ್ಮೆ ಹೇಗೆ ಏಗುವುದೋ ತಿಳಿಯದೇ ಒದ್ದಾಡುವಂತಾಗುತ್ತದೆ.

"ನಮಸ್ಕಾರ, ನಾನು ಇಂತಿಂತವನು, ಇಂತಿಂತ ಕಡೆಯಿಂದ ಮಾತಾಡುತ್ತಿದ್ದೇನೆ, ಹೀಗೊಂದು ಕೆಲಸ ಇದೆ, ನಿಮ್ಮ ಪ್ರೊಫೈಲನ್ನ ಯಾವುದೋ ಒಂದು ಜಾಬ್ ಸೈಟಿನಲ್ಲಿ ನೋಡಿದೆ, ನಿಮ್ಗೆ ಈ ಕೆಲ್ಸದಲ್ಲಿ ಆಸಕ್ತಿ ಇದೆ ಅಂದ್ಕೋತೀನಿ"

ಉತ್ತರ ಈ ಧಾಟಿಯಲ್ಲಿ ಬರುತ್ತದೆ,

"ಯೋ , ಹೋಗಯ್ಯೋ, ಯಾಕೋ ತಲೆ ತಿಂತೀಯಾ, ನಂಗೆ ಯಾವ್ ಕೆಲ್ಸನೊ ಬ್ಯಾಡಾ ಮಾರಾಯ"

ಮತ್ತೆ ನಿಮ್ಮ profile ಯಾಕೆ ವೆಬ್ ಸೈಟ್ ಲಿ ಹಾಕಿದ್ರಿ?

"ನನ್ ಇಷ್ಟ, ಹಾಕ್ತೀನಿ, ಏನ್ ಇವಾಗ, ಫೋನ್ ಇಡು"

ಮಾರ್ಯಾದೆಯಲ್ಲಿ ಫೋನ್ ಇಟ್ಟು, ಮತ್ತೊಬ್ಬ ಕ್ಯಾಂಡಿಡೇಟ್ ಗೆ ಮಾಡಿ, ಸ್ವಲ್ಪ ಎಚ್ಚರಿಕೆಯಲ್ಲಿ ಫೋನ್ ಮಾಡಲಾಗುವುದು.
ನಮಸ್ಕಾರಾ, ನಾನು ಇಂತವನು ಅಂತವನು, ಇಂತಲ್ಲಿಂದ ಮಾತಾಡ್ತಿದೀನಿ ಸಾರ್

"ಹುಂ, ಹೇಳಿ"

ಸಾರ್ ಹೀಗೀಗೆ ಒಂದು ಕೆಲ್ಸ ಇದೆ, ನಿಮ್ ರೆಸ್ಯೂಮು ಒಂದು ವೆಬ್ ಸೈಟಲ್ಲಿ ನೋಡ್ದೆ, ಕೆಲ್ಸ ಏನಾರೂ ಚೇಂಜ್ ಮಾಡೋ ಅಲೋಚನೆ ಇದೆಯಾ? , ಇದ್ರೆ ಹೇಳಿ..

" ಹೋಗಯ್ಯಾ, ಏನ್ ಜನ ಇರ್ತಾರಪ್ಪಾ?, ನಾನು ಕೆಲ್ಸ್ದ ಚೇಂಜ್ ಮಾಡೋ ಅಲೋಚ್ನೆ ಇಲ್ದಿದ್ರೆ ರೆಸ್ಯೂಮ್ ನ ಯಾಕೋ ನೌಕ್ರಿಲೋ, ಇನ್ನೆಲ್ಲೋ ಹಾಕ್ತಿದ್ದೆ?, ಹೇಗೆ ಮಾತಾಡ್ ಬೇಕು ಅಂತನೂ ಗೊತಾಯಲ್ಲ ನಿಮ್ಗೆಲ್ಲ!, ಛೇ!"

ನಮ್ಮ ಗ್ರಹಚಾರ!.

ಶುಕ್ರವಾರ, ಮೇ 18, 2007

ಎರಡು ನನ್ನದಲ್ಲದ ಬರಹಗಳ ಬಗ್ಗೆ.

ಇಂದು ಮಧ್ಯಾಹ್ನ ಊಟ ಮಾಡಿ ಸುತ್ತುತ್ತಿದ್ದೆ, ತಂಗಿಯ ಮೆಸೇಜು ಬಂತು. ಅವಳು ಸುಖಾ ಸುಮ್ಮನೆ ಫಾರ್ವರ್ಡುಗಳನ್ನ ಕಳಿಸುವುದಿಲ್ಲವಾದ್ದರಿಂದ, ಏನಿರಬಹುದು ಅಂತ ತೆಗೆದು ನೋಡಿದೆ, ಒಂದು ಕವನ ಇತ್ತಲ್ಲಿ. ಬಹು ದಿನದ ಮೇಲೆ ಒಂದು ಗಟ್ಟಿ ಪುಟ್ಟ ಹನಿ ಓದಿದೆ.

ಚಡಪಡಿಕೆ.

ಮೌನವಾಗುಳಿವ ಶಿಲೆಯೊಳಗೆ
ಅಗಣಿತ ನೆನಪ ಭ್ರೂಣಗಳು
ಅಡಗಿ ಕುಳಿತಿವೆ;
ಶಿಲಾಬಾಲಿಕೆಯ
ಗರ್ಭಕೋಶದ ಒಳಗೆ ದಿನ ತುಂಬಿರಲೂ
ಹೆರಿಗೆಯಾಗದೆ,
ಚಡಪಡಿಸುವ ಇತಿಹಾಸಗಳಿವೆ.

ಬರೆದಿದ್ದು ಗೀತಾ ಶೆಟ್ಟಿ, ತುಪ್ಪೆ.

*********************************

ಗೆಳೆಯ ಚಿನ್ಮಯ, ಇಂಟರ್ನೆಟ್ಟು ಗೀಳಿನಾತ . ಇಡೀ ದಿನ ಪುರಸೊತ್ತು ಇತ್ತೆನ್ನಿ ಅವನಿಗೆ, ಒಂದಲ್ಲ ಒಂದು ಉಪಯುಕ್ತ ಮಾಹಿತಿಯ ಕೊಂಡಿಯನ್ನ ಕಳುಹಿಸುತ್ತಲೇ ಇರುತ್ತಾನೆ. ಇವನೇನಾದರೂ ಲಿಂಕು ಕಳುಹಿಸಿದರೆ ಉಪೇಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೋ ಒಳ್ಳೇ ಬ್ಲಾಗು, ಬರಹ, ಸರಳ ಅರ್ಥವಾಗೋ ಸೈನ್ಸು ಏನಾದರೂ ಬರುತ್ತದೆ ದಿನವೂ, ಅವನ ಕಡೆಯಿಂದ. ನಿನ್ನೆ ತನ್ನ ಎಂದಿನ ಶೈಲಿಯಲ್ಲಿ, "ದೊಸ್ತಾ ಒಂದು ಮೈಲ್ ಕಳ್ಸಿದ್ದಿ ನೋಡಲೇ" ಅಂದ. ಅವನು ಕಳಿಸಿದ್ದು, ಕನ್ನಡ ಪದ್ಯವೊಂದರ ಇಂಗ್ಲೀಷು ಅನುವಾದ! ಚಲನ ಚಿತ್ರ ಗೀತೆಗಳ ಅನುವಾದಕ್ಕೆ ಅಂತಲೇ ಒಂದು ವೆಬ್ ಸೈಟ್ ಇದೆ ಅಂತ ನಂಗೆ ಗೊತ್ತಾದ್ದೇ ನಿನ್ನೆ!
ಅವನು ಕಳುಹಿಸಿದ್ದು ಯಾರೋ ಮಾಡಿದ, ನಮ್ಮ ಅಮೃತಧಾರೆ ಸಿನಿಮಾದ, "ಹುಡುಗಾ ಹುಡುಗಾ" ಪದ್ಯದ ಅನುವಾದ. ಇಂಗ್ಲೀಷು ಅನುವಾದ ಮಾಡಿದವರ ಪಾದದ ಜೆರಾಕ್ಸು ನಂಗೆ ಅರ್ಜೆಂಟಾಗಿ ಬೇಕು.

ಮೂಲ ಪದ್ಯ:

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ದುಮಾಡೊಕು ಕಂಜೂಸು ಬುದ್ದಿ ಬೇಕಾ?
ಹನಿಮೂನಲ್ಲು ದ್ಯಾನ ಏಕಾಂತದಲ್ಲೂ ಮೌನ
ಏನೊ ಚಂದ ಹತ್ತಿರ ಬಾ ಹುಡುಗ

ಮುತ್ತಿನ ಹೊದಿಕೆ ಸುತ್ತಲು ಹೊದಿಸಿ ಅಪ್ಪಿಕೊ ಬಾರೋ ನನ್ನನ್ನ
ಚುಮುಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೊ ನನ್ನನ್ನ
ಕತ್ತಲೆ ಒಳಗೆ ಕಣ್ಣಾಮುಚ್ಚಾಲೆ ಅಪ್ಪಿಕೊ ಬಾರೊ ನನ್ನನ್ನ
ಉರುಳಿಸು ಬಾರೊ ಕೆರಳಿಸು ಬಾರೊ ಅರಳಿಸು ಬಾರೊ ನನ್ನನ್ನ ಹುಡುಗ
show me love show me life
show me everything in life
take me on a holiday
show me something everyday
make me smile and make me smile
make me smile for a while
make my dreams come to live
show me how you love ur wife

ನಾಳೆಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ
ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಏಳೆಯೋಣ
ಮದುವೆಯು ಆಯ್ತು ಮನೆ ಒಂದಾಯ್ತು ಮುದ್ದಿನ ಮಗುವನು ಪಡೆಯೋಣ.

ಇಂಗ್ಲೀಷು ಅನುವಾದ:

Boy oh boy, my sweet boy.
Do u need stingy mind to love me?..
Meditation in honeymoon, Silence in privacy.
This is not fair, oh boy, come near me boy.(2)

In this winter, put a blanket around and hug me.
In this cold cold winter, come make me warm.
Play hide and seek in the darkness with me and come hug me.
Come make me tumble and twist come make me turn.
(Boy oh boy, my sweet boy. . . . )

Show me love, show me life,
show me everything u like.
Take me on a holiday, show me something everyday.
Make me smile and make me smile, make me smile for a while.
Make my dreams come to life, show me how u life ur wife.
Who wants romantic talks,
we ll start loving from now on.
We ll jump on bed,
taste the nectar and satisfy ourselves.

We ll go from place to place and establish our love there.
We got married, got a home too, now we ll have a cute kid.
(Boy oh boy, my sweet boy. . . . )

ಭಾವನೆಗಳೇ ಇಲ್ಲದೆ ಲಾಯರು ಆಫೀಸಿನಲ್ಲೋ,(ಈ ಮಾತು ಸುಶ್ರುತನಿಗೆ ಅನ್ವಯಿಸುವುದಿಲ್ಲ)ಅಥವಾ ಯಾವುದೋ ಗವರ್ಮೆಂಟು ದಫ್ತರಿನಲ್ಲೋ ಕೆಲಸ ಮಾಡುವವರು ಬರೆದಂತಿರುವ ಈ ಅನುವಾದ ಓದಿ ಹೊಟ್ಟೇ ತುಂಬಾ ನಕ್ಕೆ, ಚಿನ್ಮಯಂಗೆ ಥ್ಯಾಂಕ್ಸು.
ಓದಿದ ನೀವೂ ಅವನಿಗೆ ಧನ್ಯವಾದ ಹೇಳುತ್ತೀರಿ!ನನಗೆ ಗೊತ್ತಿದೆ.

ಗುರುವಾರ, ಮೇ 17, 2007

ಮರುಳು ಮಾಡುವವರು.. .

(ಹಳೆಯ ಬರಹ, ಬ್ಲಾಗಿಗೆ ಹಾಕಲು ಮರೆತು ಹೋಗಿತ್ತು. ದಟ್ಸ್ ಕನ್ನಡದಲ್ಲಿ ತಿಂಗಳ ಹಿಂದೆ ಪ್ರಕಟವಾಗಿತ್ತು.)

ಮೂರ್ನಾಲ್ಕು ವರ್ಷಗಳ ಹಿಂದೆ ನಡೆದ ಕಥೆ. ನಾನು ನಮ್ಮ ಪಕ್ಕದ ಮನೆ ಶಂಕರ ಭಟ್ಟರ ಜೊತೆಗೆ ಎಲ್ಲಿಗೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಸತ್ಯನಾರಾಯಣ ಕತೆಯೋ ಯಾವುದೋ ಒಂದು. ಮಾಡೋಕೆ ಏನೂ ಕೆಲಸವಿಲ್ಲದೆ, ಅಲ್ಲೊಂದು ಕಟ್ಟೆಯ ಮೇಲೆ ಕೂತು ಹಳೇ ಪೇಪರ್ ಚೂರನ್ನ ಓದುತ್ತಿದ್ದೆ. ಅಷ್ಟರಲ್ಲಿ ಆ ಪುಣ್ಯ್ಯಾತ್ಮ ಬಂದ ಅಲ್ಲಿಗೆ.

"ಏನು ಹೆಸರು?" - ಶ್ರೀನಿಧಿ.
"ಏನು ಮಾಡ್ತಾ ಇದ್ದೀಯಾ?"- ಪೇಪರ್ ಓದುತ್ತಿದ್ದೇನೆ.
"ಈ ಸಣ್ಣ ಚೀಟೀನಾ"- ಹುಂ.

ನನಗವರ ಬಳಿ ಮಾತಾಡಲು ಇಷ್ಟವಿರಲಿಲ್ಲ. ಆ ವ್ಯಕ್ತಿ ಸುತ್ತ ಮುತ್ತಲ ಊರಿನಲ್ಲಿ,ಊರಿನ ಪೋಲೀಸ್ ಸ್ಟೇಷನಿನಲ್ಲಿ "ದೊಡ್ಡ ಮಾಂತ್ರಿಕ" ಅಂತ ಹೆಸರಾದವ್ರು. ನನಗೆ ಅಂತವರನ್ನ ಕಂಡರೆ ಮೊದಲೇ ಆಗದು, ಈಗ ನೋಡಿದರೆ ಪಕ್ಕಕ್ಕೇ ವಕ್ಕರಿಸಿದ್ದಾನೆ.
"ಎಲ್ಲಿ ಓದೋದು"- ಕಾಲೇಜಲ್ಲಿ.
"ಅಪ್ಪ ಏನ್ ಮಾಡ್ತಾರೆ"- ನಿಮಗ್ಯಾಕೆ?
"ದೊಡ್ದವ್ರ ಬಳಿ ಹೀಂಗೆ ಮಾತಾಡ್ಬಾರ್ದು, ನಾನ್ಯಾರು ಅಂತ ಗೊತ್ತಾ?"- ಗೊತ್ತು.
"ಆದ್ರೂ ಹೀಂಗೆ ಮಾತಾಡ್ತೀಯಾ?"- ಹೌದು.

ಒಮ್ಮೆ ಹೋದರೆ ಸಾಕಿತ್ತು, ಆದರೆ ಅವನಿಗೆ ಹೊತ್ತು ಹೋಗುತ್ತಿರಲಿಲ್ಲ ಅಂತ ಕಾಣುತ್ತದೆ. "ನಿನ್ನ ವಾಚಿರುವ ಕೈಯನ್ನು ನನ್ನ ಎದುರಿಗೆ ಹಿಡಿ, ನನ್ನ ಶಕ್ತಿ ಏನು ಅಂತ ತೋರಿಸ್ತೇನೆ ನಿಂಗೆ"ಸುಮ್ಮನೇ ಕೈ ಮುಂದೆ ಹಿಡಿದೆ."ನನ್ನ ಕಣ್ಣನ್ನೇ ನೋಡು"ಅಸಹ್ಯ, ಇನ್ನೇನು ಕಳಚಿ ಕೆಳಗೆ ಬೀಳುವ ತರ ಇದೆ, ಕಣ್ಣುಗಳು..ನನ್ನ ವಾಚಿನ ಮೇಲೆ ತನ್ನ ಬಲ ಕೈಯನ್ನು ಹಿಡಿದು ಹೇಳಿದ,"ನಿನ್ನ ವಾಚಿನ ಸಮಯವನ್ನು ಸ್ತಂಭಿಸುತ್ತೇನೆ ನಾನೀಗ, ನೋಡ್ತಾ ಇರು"ನಾನೇನು ಮಾತಾಡಲಿಲ್ಲ, ಸುಮ್ನೆ ನೋಡ್ತಾ ಕೂತೆ.ಎರಡು ನಿಮಿಷ ಗೊಣ ಗೊಣ ಗೊಣ ಅಂತ ಮಂತ್ರ ಪಠಣ ಆಯ್ತು.

"ಈಗ ನೋಡು, ನಿನ್ನ ಗಡಿಯಾರ ನಡೆಯುವುದನ್ನ ನಿಲ್ಲಿಸಿದೆ!" ಅಂತಂದು ಕೈ ತೆಗೆದರು.ಗಡಿಯಾರಕ್ಕೆ ಏನೆಂದರೆ ಏನೂ ಆಗಿರಲಿಲ್ಲ! ತನ್ನ ಪಾಡಿಗೆ ತಾನು ನಡೆಯುತ್ತಿತ್ತು! ಟಿಕ್ ಟಿಕ್ ಟಿಕ್... ಅವನನ್ನ ನೋಡಿ ನಕ್ಕೆ, ಮುಖ ಭಂಗ ಆಯಿತೇನೋ, ತಡಿ ಒಂದು ನಿಮಿಷ, ಮತ್ತೊಮ್ಮೆ ಹಿಡಿ ಅಂದ."ಒಂದು ನಿಮಿಷ ಅಲ್ಲಾ, ದಿನಾ ಇಡಿ ಕಾವು ಕೊಟ್ಟರೂ ನನ್ನ ಗಡಿಯಾರ ತಿರುಗುವುದನ್ನ ನಿಲ್ಲಿಸಲ್ಲ, ಯಾಕೆಂದರೆ, ನಿಮ್ಮ ಕೈಲಿರೋ ಉಂಗುರದ ಅಯಸ್ಕಾಂತದ ಬಲದಿಂದ , ತಿರುಗೋದನ್ನ ನಿಲ್ಲಿಸೋಕೆ ಇದರೊಳಗಿರೋದು ಕಬ್ಬಿಣದ ಮುಳ್ಳಲ್ಲ! ಪ್ಲಾಸ್ಟಿಕ್ಕಿದ್ದು" ಅಂತಂದು, ಅಲ್ಲಿಂದೆದ್ದು ಬಂದೆ.

ಸ್ವಲ್ಪ ದೂರ ಹೋಗಿ ಹಿಂದೆ ನೋಡಿದರೆ ಮತ್ಯಾರ ಬಳಿಯೋ "ನಿನ್ನ ವಾಚು ಹಿಡಿ" ಅನ್ನುತ್ತಿದ್ದ... ನನಗೆ ವಾಕರಿಕೆ ಬರುವಂತಾಯಿತು.

ಅದೇ ವ್ಯಕ್ತಿಯನ್ನ ಮತ್ತೊಮ್ಮೆ ನೋಡುವ- ಆತನ ಅತಿರೇಕಗಳನ್ನ ಗಮನಿಸುವ ಅವಕಾಶ ಸಿಕ್ಕಿತು ವರುಷದ ನಂತರ. ನಮ್ಮ ಊರಲ್ಲಿ ನಾಗಮಂಡಲ. ಲಕ್ಷಗಟ್ಟಲೆ ಖರ್ಚು ಮಾಡಿ ನಾಗಗಳನ್ನ ಸಂಪ್ರೀತಿ (?) ಮಾಡುವ ಕಾರ್ಯಕ್ರಮ. ಅಲ್ಲಿನ ಪೂಜಾವರ್ಗದ ಅರ್ಚಕರೊಬ್ಬರ ಬಳಿ ಇದ್ದ ೫೦,೦೦೦ ರೂಪಾಯಿಗಳನ್ನ ಆ ಗಡಿಬಿಡಿ ಗೊಂದಲದಲ್ಲಿ ಯಾರೋ ಕದ್ದಿದ್ದರು. ಊರ ಹಿರಿಯರಾದ ಈ ಮಹಾನುಭಾವರೂ ಅಲ್ಲಿಯೇ ಇದ್ದರು. ವಿಷಯ ಗೊತ್ತಾಗಿ ಬಂದು ಆ ಅಳುತ್ತಿದ್ದ ಅರ್ಚಕರಿಗೆ ಸಮಾಧಾನ ಮಾಡಿ, ಎಲ್ಲಿ, ಒಂದು ತೆಂಗಿನಕಾಯಿ ಕೊಡಿ ಅಂದರು. ನೆರೆದ ಜನರೆಲ್ಲ ಭಕ್ತಿ ಭಾವದಿಂದ, ಕಣ್ಬಿಟ್ಟುಕೊಂಡು ನೋಡುತ್ತಿದ್ದರು. ತೆಂಗಿನ ಕಾಯಿ ಕೈಯಲ್ಲಿ ಹಿಡಿದು, ಸುತ್ತೆಲ್ಲ ದುರುಗುಟ್ಟಿ ನೋಡಿ - ಮಂತ್ರ ಪಠಣ.

ಗಂಭೀರ ಮುಖಮುದ್ರೆ ಹೊತ್ತು, ಆ ತೆಂಗಿನ ಕಾಯನ್ನ ಅಲ್ಲೆ ಒಂದು ನಾಗನ ಕಲ್ಲಿನ ಬಳಿ ಇಟ್ಟು,ಹಮ್, ದುಡ್ಡು ಕದ್ದವನು ಇಲ್ಲೇ ಇದ್ದಾನೆ, ಇನ್ನು ಗಂಟೆಯೊಳಗಾಗಿ ಅದನ್ನ ತಂದಿಡದಿದ್ದರೆ, ರಕ್ತ ಕಾರಿ ಸಾಯುವುದು ಖಂಡಿತಾ ಅಂತ ಘೋಷಿಸಿದ.ಜನರೆಲ್ಲ ಇನ್ನೇನು ದುಡ್ಡು ಯಾರಾದರೋ ತಂದಿಟ್ಟು ಕಾಲಿಗೆ ಬೀಳುತ್ತಾರೋ ಅನ್ನುವ ಕುತೂಹಲದಲ್ಲಿ ನೋಡುತ್ತಿದ್ದರು. ಉಹೂಂ , ಯಾರೂ ಬರಲಿಲ್ಲ! ಗಂಟೆ, ೨ ಗಂಟೆ.. ಯಾರೂ ರಕ್ತ ಕಕ್ಕಲೂ ಇಲ್ಲ!ಮತ್ತೆ ಅಲ್ಲಿಗೆ ಬಂದ ಆತ, ಚಿಂತಿಸಬೇಡಿ, ನಿಮ್ಮ ದುಡ್ಡು ನಿಮಗೆ ಸಿಗುತ್ತದೆ. ಆತ ರಕ್ತ ಕಾರಿ ಸಾಯುವುದಂತೂ ಖಂಡಿತ ಅಂತಂದು ಅಲ್ಲಿಂದ ಜಾಗ ಖಾಲಿ ಮಾಡಿದ!

ನನಗೆ ತಿಳಿದ ಹಾಗೆ ಮುಂದೊಂದಷ್ಟು ದಿನ ಯಾವ ಪೇಪರಿನಲ್ಲೂ ಯಾರೂ ರಕ್ತ ಕಾರಿ ಸತ್ತಿದ್ದು ಬರಲಿಲ್ಲ, ಭಟ್ಟರಿಗೆ ದುಡ್ಡು ಸಿಗಲೂ ಇಲ್ಲ! ಯಾರಿಗೂ ಈ ಘಟನೆಯ ನೆನಪೂ ಇಲ್ಲ!

ಇವತ್ತು ಆ ಪುಣ್ಯಾತ್ಮನ ಮಗ, ದೊಡ್ಡ ಮದುವೆ ನಡೆಸಿ ಬಂದಿದ್ದಾರೆ, ಮುಂಬಯಿಯಲ್ಲಿ. ಅವರು ಇದೇ ತೆರನಾದ ವ್ಯವಹಾರಗಳನ್ನ ಸ್ವಲ್ಪ ಮೇಲ್ದರ್ಜೆಯಲ್ಲಿ ಮಾಡುತ್ತಾರೆ.ಸಿನಿಮಾ ನಟರು, ಬ್ಯುಸಿನೆಸ್ ಕುಳಗಳು ಇವರ ಲೆವೆಲ್ಲಿಗೆ. ಅಪ್ಪ ಊರಲ್ಲಿ ರಾಜಕಾರಣಿಗಳ ಹೋಮ ಹವನ ನಡೆಸುತ್ತಾ, ಪತ್ರಿಕೆಗಳಿಗೆ ಜ್ಯೋತಿಷ್ಯದ ಅಂಕಣ ಬರೆಯುತ್ತಾ ಹಾಯಾಗಿದ್ದಾರೆ. ಊರ ಜನ ಅವರನ್ನ ಅದೇ ಭಯ ಮಿಶ್ರಿತ ಭಾವದಿಂದ ನೋಡುತ್ತಾರೆ.

ನಮ್ಮಲ್ಲಿ ಏನೂ ಬದಲಾಗುವುದಿಲ್ಲ, ಯಾವತ್ತಿಗೂ! ಅಂತನಿಸುತ್ತದೆ ನನಗೆ.

ಬುಧವಾರ, ಮೇ 16, 2007

ಒಂದು ಸಾಲು!

ನನ್ನ ಸ್ನೇಹಿತ ಕಣಾದನಿಗೆ ಹುಟ್ಟು ಹಬ್ಬಕ್ಕೆ ಹಾರಯಿಸೋಣ ಅಂತ ಫೋನಾಯಿಸಿದ್ದೆ.
ಅವನಿಗೆ " ಹ್ಯಾಪಿ ಬರ್ತಡೇನಮ್ಮಾ" ಅಂತ ಅಂದೆ,
ಅವನು ಒಂದು ಘಳಿಗೆ ಸುಮ್ಮನಿದ್ದು,

" ಹಮ್, ನಂಗೆ ೨೫ ವರ್ಷ. ೨೩ನೇ ವರ್ಷಕ್ಕೆ ಭಗತ್ ಸಿಂಗ್ ಸತ್ತೇ ಹೋಗಿದ್ದನಲ್ಲ" ಅಂದ.
ಅವನು ಆವತ್ತು ಆಡಿದ ಮಾತು ಇನ್ನೂ ನನ್ನ ತಲೆಯೊಳಗೆ ಗುಂಗಿ ಹುಳ!

ಸೋಮವಾರ, ಮೇ 14, 2007

"ವೈಶಾಖ ಸಂಜೆ" - ಕಾವ್ಯ ಗಾಯನ , ಒಂದು ವರದಿ.

ನಿನ್ನೆ, ೧೩.೦೫.೨೦೦೭ ಭಾನುವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ "ವೈಶಾಖ ಸಂಜೆ- ಕಾವ್ಯ ಗಾಯನ" ಕಾರ್ಯಕ್ರಮ. ಬಿಸಿಲ ದಿನದ ನಂತರದ ಇಳಿ ಸಂಜೆಗೆ ಸಿ.ಅಶ್ವಥ್ ಗಾಯನದ ತಂಪು. ಭಾಗವತರು ಸಂಸ್ಥೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ, ಝೀ ಕನ್ನಡದ ಸಹಯೋಗ. ಸಿ. ಅಶ್ವಥ್ ಜೊತೆಗೆ ಸ್ವರ ಸಿಂಚನಗೈದವರು ಪಲ್ಲವಿ ಅರುಣ್, ಸುಪ್ರಿಯಾ ಆಚಾರ್ಯ ಮತ್ತು ರವಿ ಮುರೂರು. ಜೊತೆಗೆ ಎಂದಿನಂತೆ ಅಶ್ವತ್ ರವರ ಅದ್ಭುತ ಹಿನ್ನೆಲೆ ವಾದಕರ ಬಳಗ.

ಮೊದಲಿಗೆ "ಎಲ್ಲಾದರು ಇರು ಎಂತಾದರು ಇರು" ಹಾಡಿಂದ ಕಾವ್ಯ ಗಾಯನ ಆರಂಭಿಸಿದರು ಅಶ್ವಥ್, ಸಂಗಡಿಗರ ಜೊತೆಗೆ. ನಂತರ ಸುಪ್ರಿಯಾ ಆಚಾರ್ಯ "ಮುಚ್ಚುಮರೆಯಿಲ್ಲದೆಯೆ" , ಅಶ್ವಥ್ ಬಹು ಆರ್ದವಾಗಿ "ಬದುಕು ಮಾಯೆಯ ಮಾಟ" ಹಾಡಿದರು. ಪಲ್ಲವಿಯವರ ನಾಕುತಂತಿಯ "ಆವು ಈವಿನಾ" ಹಾಡಿಗೆ ಕಲಾಕ್ಷೇತ್ರ ಸ್ತಬ್ದ. ಇಷ್ಟು ಹೊತ್ತಿಗೇ ಇಡಿಯ ಕಲಾಕ್ಷೇತ್ರ ತುಂಬಿಕೊಂಡಾಗಿತ್ತು. ಭರ್ತಿ ಸಾವಿರ ಜನ. ಎಲ್ಲರೂ ನಿಧಾನಕ್ಕೆ ವೈಶಾಖದ ಸಂಜೆಯೊಳಕ್ಕೆ ಇಳಿಯುತ್ತಿದ್ದರು.

ನಮ್ಮನ್ನೆಲ್ಲ ಆಮೇಲೆ ತುಂಬಿಕೊಂಡದ್ದು ಹಾಡು ಹಾಡು ಮತ್ತು ಹಾಡು. ಶ್ರಾವಣಾ ಬಂತು, ಕವಿದಂತೆ ಮಂಜು ಈ ಹಗಲಿಗೆ, ಪಲ್ಲವಿ ತೇಲಿಸಿದ ತಪ್ಪಿ ಹೋಯಿತಲ್ಲೇ, ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಂತೆ, ಬಂಗಾರ ನೀಲ ಕಡಲಾಚೆಗೀಚೆ, ಸುಪ್ರಿಯಾ ಆಚಾರ್ಯ ಮನ ತಟ್ಟಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ, ಇಡಿಯ ತಂಡ ಹಾಡಿದ ನೂರು ದೇವರನೆಲ್ಲ ನೂಕಾಚೆ ದೂರ, ಅಶ್ವಥ್ ಕ್ಲಾಸಿಕ್- ನೀ ಹೀಂಗ ನೋಡಬ್ಯಾಡಾ ನನ್ನ..

ನಡುವೆ ಪುಟ್ಟ ವಿರಾಮ. ಲಹರಿಯ ಕ್ಯಾಸೆಟ್ ಹರವಿಕೊಂಡಿದ್ದ ಟೇಬಲ್ ಜನರಿಂದ ಮುತ್ತಲ್ಪಟ್ಟಿತ್ತು. ಏನು ಕ್ಯಾಸೆಟ್- ಸಿಡಿ ಇದೆ ಅಂತ ನೋಡೋಕೂ ಆಗಲಿಲ್ಲ. ವಿರಾಮದ ನಂತರ ಮತ್ತೆ ಭರಪೂರ ಹಾಡು ಹಬ್ಬ. ಸುಪ್ರಿಯಾ ದನಿಯಲ್ಲಿ ಅಮ್ಮಾ ನಿನ್ನ ಎದೆಯಾಳದಲ್ಲಿ, ಅಶ್ವಥ್ , ಕಾಣದ ಕಡಲಿಗೇ ಮೊದಲೆರಡು, ನಂತರ ಪ್ರಾಯಶಃ ಆ ಸಂಜೆಯ ಅತ್ಯುತ್ತಮ ಗೀತೆಗಳಲ್ಲಿ ಒಂದು-ಪಲ್ಲವಿ ಅರುಣ್‌ರ "ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ.." ಈಕೆ ಎಷ್ಟು ಸೊಗಸಾಗಿ ಈ ಗೀತೆಯನ್ನ ಹಾಡಿದರೆಂದರೆ, ಹಾಡು ನಿಂತು ಅರೆ ಕ್ಷಣ, ಸದ್ದೇ ಇಲ್ಲ, ಆಮೇಲೆ ಚಪ್ಪಾಳೆಗಳ ಸುರಿಮಳೆ.

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು, ದೀಪವು ನಿನ್ನದೇ ಗಾಳಿಯು ನಿನ್ನದೇ, ರವಿ ಮುರೂರು ಹಿಂದುಸ್ತಾನಿ ಲೇಪವಿತ್ತು ಹಾಡಿದ ಲಕ್ಷ್ಮೀನಾರಾಯಣ ಭಟ್ಟರ "ಮರೆಯಲಾರೆ ನಿನ್ನ ನೀರೆ" ಎಲ್ಲ ಹಾಡು ಚಂದವೋ ಚಂದ. ಅಶ್ವಥ್, "ಸ್ವಾತಂತ್ರ ಸಂಗ್ರಾಮ ಆಗಿ ೧೫೦ ವರ್ಷ ಆದ ನೆನಪಿಗೆ ಒಂದು ದೇಶ್ ಭಕ್ತಿ ಗೀತೆ ಹಾಡ್ಬಿಡೋಣ, ಖುಷಿಲಿ" ಅಂತ ಹೇಳಿ "ನಾವು ಭಾರತೀಯರು" ಅಂತ ಎಲ್ಲ ಸಹ ಗಾಯಕರೊಡನೆ ಉಚ್ಚ ಕಂಠದಲ್ಲಿ ಹಾಡಿ ನಮ್ಮೆಲರೊಳಗೆ ಒಂದೇ ಅನ್ನುವ ಭಾವ ತುಂಬಿದರು.

ಹೇಳಿ ಹೋಗು ಕಾರಣ, ಅದಾದ ಮೇಲೆ ಸುಗಮ ಸಂಗೀತದ ರಾಷ್ಟ್ರ ಗೀತೆ! (ಅಶ್ವತ್ ಉವಾಚ) - ಎದೆ ತುಂಬಿ ಹಾಡುವೆನು , ಇದನ್ನಂತೂ ಪಲ್ಲವಿ ಎದೆ ತುಂಬಿಯೇ ಹಾಡಿದರು. ಕೊನೆಗೆ "ಎದೆ ತುಂಬಿ ಹಾಡಿದೆನು "ಇಂದು"ನಾನು ಅಂತ ಪದ್ಯ ಮುಗಿಸಿದ್ದು ಇದಕ್ಕೆ ಸಾಕ್ಷಿ. ಈ ಎರಡು ಹಾಡುಗಳಾದ ಮೇಲೆ, ಕೊನೆಯ ಮೂರು "ಅಶ್ವಥ್ ತ್ರಿವಳಿಗಳು". ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ, ಕೋಡಗನಾ ಕೋಳಿ ನುಂಗಿತ್ತಾ ಮತ್ತು ತರವಲ್ಲ ತಗಿ ನಿನ್ನ ತಂಬೂರಿ! ಇವುಗಳಂತೂ ಕುಳಿತವರನ್ನ ಹುಚ್ಚೆಬ್ಬಿಸಿದವು. ಎರೆರೇರಾ... ಅಂತ ಅಶ್ವಥ್ ಹಾಡುತ್ತಿದ್ದರೆ ಕೂತವರ ಮೈಲೆಲ್ಲಾ ಮಿಂಚು ಸಂಚಾರ. ಒಂದು ಅದ್ಭುತ ಸಂಜೆ ನಾದದಲ್ಲಿ ಮಿಂದ ಅನುಭವ.

ಈ ಕಾರ್ಯಕ್ರಮ, ಒಂದು ಹೊಸ ಮೈಲಿಗಲ್ಲು ಸ್ಥಾಪಿಸಿತು. ಮೊದಲ ಬಾರಿಗೆ ಬೆಂಗಳೂರಲ್ಲಿ, ಪ್ರಾಯಶಃ ಕರ್ನಾಟಕದಲ್ಲಿ ಟಿಕೇಟು ಖರೀದಿಸಿ, ದುಡ್ಡು ಕೊಟ್ಟು ಜನ ಸುಗಮ ಸಂಗೀತ ಕೇಳುವುದಕ್ಕೆ ಬಂದಿದ್ದರು ಮತ್ತು ಕಾರ್ಯಕ್ರಮ ಹೌಸ್ ಫುಲ್! ವೇದಿಕೆಯ ಅಲಂಕಾರ ಕೂಡ ಬಹಳ ಹಿತಕರವಾಗಿತ್ತು. ಚೆಂದನೆಯ ಬೆಳಕು ಮತ್ತು ರಂಗ ಸಜ್ಜಿಕೆ.

ಒಟ್ನಲ್ಲಿ, ಒಂದ್ ಮಸ್ತ್ ಸಂಡೇ ಸಂಜೆ! ಬರೋಕಾಗದೇ ಇದ್ದವರಿಗೆ ನನ್ನ ಸಂತಾಪವಿದೆ.

ಈ ವರದಿ, ದಟ್ಸ್ ಕನ್ನಡದಲ್ಲಿ.

ಶುಕ್ರವಾರ, ಮೇ 11, 2007

ಯಾರದೋ ಅಜ್ಜ ಅಜ್ಜಿಗೆ ಹುಷಾರಿಲ್ಲದಿರುವುದೂ, ನಮಗೆ ಪ್ರಾಣ ಸಂಕಟವೂ!

ಮತ್ತೆ ಯಥಾ ಪ್ರಕಾರ ಇದು ಕಾರಣಗಳ ಬಗ್ಗೆ ಬರೆಯುತ್ತಿರುವ ಬರಹ.:)

ಈ ಅಜ್ಜ ಅಜ್ಜಿಗೆ ಹುಶಾರಿಲ್ಲದ ನೆವಗಳನ್ನ ಮನುಷ್ಯ ಜಾತಿಯವರು ಬಳಸುವ ಬಗ್ಗೆ ನಾನೂ ಬಹಳ ಓದಿದ್ದೆ, ನಕ್ಕೂ ಇದ್ದೆ. ನನ್ ಮಗಂದು ನನ್ ಕಾಲ್ ಬುಡಕ್ಕೇ ಇದು ಬರತ್ತೆ ಅಂತ ನಂಗೇನ್ ಗೊತ್ತಿತ್ತು?! ಈ HR ಕೆಲ್ಸ ಶುರು ಮಾಡಿದ್ ಮೇಲಂತೂ ತರಹೇವಾರಿ ಕಾರಣಗಳನ್ನ ಕೇಳಿ ಕೇಳಿ ಸಾಕಾಗಿ ಹೋಗಿ, ಜ್ವರ, ತಲೆನೋವು, ಆಕ್ಸಿಡೆಂಟಾಗುವುದು ಎಂಬ ಜನ ಸಾಮಾನ್ಯರಿಗೆ ವಿಶೇಷ ಅರ್ಥ ಹೊಂದಿರುವ ಪದಗಳೆಲ್ಲ ನನ್ನ ನಿಘಂಟಿನಲ್ಲಿ ಅರ್ಥ ಕಳೆದುಕೊಂಡಿವೆ.

ಆಕ್ಸಿಡೆಂಟ್ ಬಗ್ಗೆ ಬರೆದಿದ್ದೆನಲ್ಲ, ಅದು ಕಾರಣ ನಂಬರ್ ಒಂದಾದರೆ, ಈ ಅಜ್ಜ ಅಜ್ಜಿಯರನ್ನ ಸಾಯಿಸುವುದು ಮತ್ತು ಹಾಸಿಗೆ ಹಿಡಿಸುವುದಕ್ಕೆ ಎರಡನೇ ಸ್ಥಾನ, ನಮ್ಮ HR ಪ್ರಪಂಚದಲ್ಲಿ. ಹೇಗೆ ಈ ಪ್ರಹಸನ ನಡೆಯುತ್ತದೆ ಅನ್ನುವುದು ನಿಮ್ಮ ಅವಗಾಹನೆಗೆ.

ಒಬ್ಬ ಮಹಾಶಯ ಸಂದರ್ಶನಕ್ಕೆ ಹಾಜರಾಗುತ್ತಾನೆ, ಪರವಾಗಿಲ್ಲ ಈ ಪುಣ್ಯಾತ್ಮ ಅಂತ ಈ ಟೆಕ್ನಿಕಲ್ ಪ್ಯಾನಲ್ ನಿರ್ಧರಿಸಿದ ಮೇಲೆ ನಾವು HR ಗಳು ಹಳ್ಳಕ್ಕೆ ಬಿದ್ದು, ಅವನಿಗೆ ಆಫರು ಲೆಟರು ಕೊಡುತ್ತೇವೆ. "ನೋಡಪ್ಪಾ ನಿನಗೆ ನಾವು ಕೆಲಸ ಕೊಡುವಾ ಅಂತ ಮಾಡಿದ್ದೇವೆ, ಇಷ್ಟಿಷ್ಟು ಸಂಬಳ ಕೊಡುವ ವಿಚಾರ ಇದೆ, ಹೇಗೆ ನಿಂಗೆ ಆಗಬಹುದೋ?, ಯಾವಾಗ ಸೇರ್ತೀಯಾ ಕೆಲಸಕ್ಕೆ" ಇತ್ಯಾದಿ ಮಣ್ಣಾಂಗಟ್ಟಿ ವಿಷ್ಯಗಳು ಅವನಿಗೆ ಕೊಡೋ ಲೆಟರೊಳಗಿರುತ್ತದೆ.

ಮೂರು ನಾಲ್ಕು ಸುತ್ತು ಇಂಟರ್ವ್ಯೂ ಮುಗಿವುವ ೧೫ ದಿನಗಳ ವರೆಗೆ ಈ ಮನುಷ್ಯ ಅತ್ಯಂತ ವಿಧೇಯ. ದಿನಕ್ಕೆರಡು ಫೋನು, ಗುಡ್ ಮಾರ್ನಿಂಗು ವಿಷ್ ಮೈಲು, ಆಹಾ! . ಈ ಯಡವಟ್ಟು ರಿಕ್ವೈರುಮೆಂಟುಗಳಿಗೆ ಜನ ಹುಡುಕೋದೆ ಕಷ್ಟ, ನಮಗೂ ಖುಶಿಯೇ, ಇವನೊಬ್ಬ ಸೇರುತ್ತಾನಲ್ಲ ಕಂಪನೀನ ಅಂತ. ಆದರೇನು ಮಾಡುತ್ತೀರಿ?, ಆಫರು ಲೆಟರು ಸಿಕ್ಕಿದ ಮಾರನೇ ದಿನವೇ ಗಿರಾಕಿ ನಾಟ್ ರೀಚೆಬಲ್! ನಾವು ದಿನಾ ಹೊತ್ತಿಂದ ಹೊತ್ತಿಗೆ ಅವನ ಫೋನೊಳಗೆ ಹಿಡಿಯಲು ಒದ್ದಾಡಿ ಸಾಯಬೇಕು. ಅಂತೂ ಒಂದು ದಿನ ಫೋನಿಗೆ ಸಿಗುತ್ತದೆ ಪ್ರಾಣಿ.

ನಾವು ಮಾತಾಡುವ ಮೊದಲೇ ಬರುತ್ತದೆ ಉತ್ತರ.
"sorry sir, my grand pa is not well you know?" ನಮಗೆ ಹೇಗೆ ಗೊತ್ತಿರಬೇಕು?!

"its ok, when can join Mr... "

"ಇಲ್ಲ ಸಾರ್ ನಂಗೆ ಈಗಲೇ ಹೇಳೋಕೆ ಆಗಲ್ಲ, ನಮ್ಮಜ್ಜನ ಪರಿಸ್ಥಿತಿ criticalಉ, ಹೇಳೋಕೆ ಆಗಲ್ಲ, ಇವತ್ತು ನಾಳೇ ಅನ್ನೋ ಹಾಗಿದೆ, ನಾನೊಬ್ಬನೇ ಮೊಮ್ಮಗ you know?"

ಅಲ್ಲಿಗೆ ಅವನ ಹಣೆಬರಹ ತಿಳಿದಂತೆ. ನಿಜವಾಗಿ ಏನಾಗಿರತ್ತೆ ಅಂತೀರಾ?
ಆ ಪುಣ್ಯಾತ್ಮ ನಮ್ಮ ಕಂಪನಿಯ ಆಫರು ಲೆಟರು ಹಿಡಕೊಂಡು ಮತ್ತೆ ಒಂದು ಇಪ್ಪತ್ತು ಇಂಟರ್ವ್ಯೂ ಅಟೆಂಡು ಮಾಡಿ,
"ನೋಡಿ ನಂಗೆ ಇವರು ಇಷ್ಟು ಕೊಡುತ್ತಾರಂತೆ ಸಂಬಳಾನ, ನೀವೆಷ್ಟು ಕೊಡುತ್ತೀರಿ ಅಂತ ಚೌಕಾಸಿ ಶುರು ಮಾಡಿರುತ್ತಾನೆ. ಎಲ್ಲೋ ಕೆಲಸವೂ ಗಿಟ್ಟಿರುತ್ತದೆ.

ಮತ್ತೆ ವಾರವೋ, ಹದಿನೈದು ದಿನವೋ ಬಿಟ್ಟು ಫೋನ್ ಮಾಡಿ ನೋಡಿದರೆ,
" i am not interested in your offer, already join " ......." ಕಂಪನಿ you know? "ಅನ್ನುತ್ತಾನೆ!

ನಾವು ಮತ್ತೆ ಹೊಸದಾಗಿ ಕುರಿಯಾಗಲು ಇನ್ಯಾರಿಗಾರೂ ಫೋನು ಮಾಡುತ್ತೇವೆ.

ಗುರುವಾರ, ಮೇ 10, 2007

ಒಂದೆರಡು ಹಳೆಯ ಹನಿಗಳು

ನಿನ್ನೆ ಮನೇಲಿ ಧೂಳು ಜಾಡಿಸುವಾಗ ಹಳೆಯ ಡೈರಿ ಸಿಕ್ಕಿತು. ಯಾವಾಗಲೋ, ಅಂದ ಕಾಲತ್ತಿಲೆ ಬರೆದ ಹನಿಗಳು. ಬೈಕೋಬೇಡಿ, ಬಾಲಿಶವಾಗಿದೆ ಅಂತ. ಕ್ಲಾಸಲ್ಲಿ ಕೂತು ಪಾಠ ಕೇಳುತ್ತಿದ್ದಾಗ ಗೀಚಿದವು ಇವುಗಳೆಲ್ಲ.

ಮಾನ

ಯಾಕ್ ಸ್ವಾಮಿಗಳೆ
ನೀವು ಹತ್ತೋದಿಲ್ಲ
ವಿಮಾನ,
"ಉಳ್ಸಬೇಕಲ್ಲಯ್ಯಾ
ನಾವು
ಕಾವೀ
ಮಾನ."

ಈ ಹೊಸಗಾಲದ ಹುಡುಗರ ಇಂಗ್ಲೀಷು ನೋಡಿ ಹಿರಿಯರೊಬ್ಬರು ಬೈಕೊಂಡಿದ್ದು ಹೀಗೆ:
ಮಾತು ಮಾತಿಗೂ
ಗೋ ಯಾ
ಕಮ್ ಯಾ,
ಇವರಿಗೇನು
ಬುದ್ಧಿ
ಕಮ್ಮಿಯಾ?!

ಬದಲಾವಣೆ

ಮದುವೆಯಾಗಿ
ದೊರೆತ ಮೇಲೆ ರಮಣ,
ಹುಡುಗಿ ತೂಗುವಳು
ನೂರು
ಮಣ!

ಬುಧವಾರ, ಮೇ 09, 2007

ಅಡ್ದ "ಪಲ್ಲಕ್ಕಿ" ಉತ್ಸವ.

ಇಲ್ಲ, ನಾನು ಯಾವುದೇ ಮಠಾಧೀಶರ ವರ್ಧಂತಿಯ ಬಗ್ಗೆಯೋ, ದೇವಸ್ಥಾನಗಳ ಜಾತ್ರೆಗಳ ಬಗ್ಗೋ ಬರೆಯಲು ಹೊರಟಿಲ್ಲ. ಇದು ಬೇರೆಯದೇ ವಿಚಾರ. ಒಂದು ಸಿನಿಮಾನ ಸ್ವಲ್ಪ ಪೋಸ್ಟ್ ಮಾರ್ಟಂ ಮಾಡೋಣ ಅನ್ನಿಸಿತು. ಸಿನಿಮಾಕ್ಕೂ, ಈ ಟೈಟಲ್ ಗೂ ಏನು ಸಂಬಂಧ ಅಂತಾನಾ?! "ಪಲ್ಲಕ್ಕಿ" ಸಿನಿಮಾದ ಬಗ್ಗೆ ಹೇಳೋಕೆ ಹೊರಟಿರೋದು ನಾನು. ಮೊನ್ನೆ ಮೊನ್ನೆ ಈ ಚಲನ ಚಿತ್ರ ನೋಡಿದೆ, "ಕೊಂದ ಪಾಪ ತಿಂದು ಪರಿಹಾರ" ಅಂತ ಒಂದು ಗಾದೆ ಇದೆ ಕನ್ನಡದಲ್ಲಿ, ಗೊತ್ತಲ್ಲ?!, ಹಾಗಾಗಿ ಇದರ ಬಗ್ಗೆ ಬರಿಯೋಣ ಅನ್ನಿಸಿತು.

ಪಲ್ಲಕ್ಕಿ ಸಿನಿಮಾದ ಹೀರೋ ಪ್ರೇಮ್. ಆತ ಹಿಂದೆ ಎರಡು ಒಳ್ಳೆಯ ಚಿತ್ರಗಳಲ್ಲಿ ನಟಿಸಿದ್ದು, ಮತ್ತು ಈ ಚಿತ್ರಕ್ಕೆ "ಪಲ್ಲಕ್ಕಿ" ಅನ್ನುವ ಒಳ್ಳೆ ಹೆಸರಿದ್ದದ್ದು, ಈ ಸಿನ್ಮಾ ನೋಡಲು ಪ್ರೇರೇಪಿಸಿತು ನನ್ನ. ಜೊತೆಗೆ ಬೆಂಗಳೂರು ತುಂಬಾ ಅದರ ಸೊಗಸಾದ ಪೋಸ್ಟರುಗಳು ಬೇರೆ. ಬೆಣ್ಣೆಯಂತೆ ಕಾಣುವ ಹೀರೋಯಿನ್ನು, ಹೂವು, ಅದೂ ಇದು ಪೋಸ್ಟ್ರು ತುಂಬಾ.

ಚಿತ್ರದ ಕತೆ ಬಗ್ಗೆ ಹೇಗೆ ಹೇಳಬೇಕು ಅಂತ ತಿಳೀತಿಲ್ಲ ನಂಗೆ. ಹೀರೋ ಅಪಾಪೋಲಿಯಂತೆ ಕಂಡರೂ ಊರಿಗುಪಕಾರಿ. ಅವನ "ಏರಿಯಾ"ಕ್ಕೆ ಅವನೇ ಲೀಡರ್ರು ( ಎಲ್ಲಾ ಸಿನ್ಮಾಲೂ ಹೀಂಗೆ ಇರತ್ತೆ ಅಲ್ವಾ?) ಅವನಿಗೆ ೩ ಜನ ಸ್ನೇಹಿತರು, ಮತ್ತು ಅವರು ಯಾವಾಗಲೂ ಕಾಮಿಡಿಯನ್ನೇ ಮಾಡುವವರು! ಅವನಿಗೆ ಸಿಕ್ಕಾಪಟ್ಟೆ ಕನ್ನಡ ಪ್ರೇಮ. ಹೆಚ್ಚಿನ ಸಿನಿಮಾದಂತೆ ಇಲ್ಲೂ ಚಂದಾ ಸಂಗ್ರಹಿಸಿ,ಕನ್ನಡ ರಾಜ್ಯೋತ್ಸವದಂದು ಕನ್ನಡ ಕನ್ನಡ ಅಂತ ಹಾಡು ಹಾಡುತ್ತಾನೆ ಹೀರೋ!. ರೌಡಿಗಳನ್ನ ಚಚ್ಚುವುದರ ಬಗ್ಗೆ ಬೇರೆ ಹೇಳಬೇಕಾಗಿಲ್ಲ.

ಒಂದು ಹುಡುಗೀನ ನೋಡಿ ಮೊದಲ ನೋಟದ ಪ್ರೇಮ ಆಗಿಬಿಡುತ್ತದೆ, ಇಂಟರ್ವಲ್‌ವರೆಗೂ ಅವಳನ್ನ "ಪ್ರಪೋಸ್ ಮಾಡಲು" ಸುತ್ತುತ್ತಾನೆ, ಇಂಟರ್ವಲ್ ಗೆ ಮುಂಚೆ ಅವಳು ಇವನಿಗೆ, "ನೀನು ಏನು ಸಾಧನೆ ಮಾಡಿದ್ದೀಯಾ, ನಿಂಗೆ ಜವಾಬ್ದಾರಿ ಇದೆಯಾ" ಅಂತಾಳೆ. ಇಂಟರ್ವಲ್ ಆದ್ಮೇಲೆ ಹೀರೋಗೆ ಮೈ ಮೇಲೆ ಜವಾಬ್ದಾರಿಯ ದೇವರು ಬಂದು ಅಪ್ಪನ ರೇಷ್ಮೇ ಸೀರೆಯ ಫ್ಯಾಕ್ಟರಿ ಸೀಝ್ ಆಗಿದ್ದನ್ನ ಬಿಡಿಸಿ ಕೆಲ್ಸ ಶುರು! ಇಷ್ಟು ದಿನ ಆ ಕಡೆಗೆ ತಲೆ ಕೂಡಾ ಹಾಕದವನು ಆರಾಮಾಗಿ ಮಶೀನು ರಿಪೇರಿ ಸಹ ಮಾಡುತ್ತಾನೆ. ಮೈ ಪರಚಿಕೊಳ್ಳುವಷ್ಟು ಖುಷಿಯಾಯಿತು ನನಗೆ.

ಅಮೇಲೆ ಏನಾಗುತ್ತದೆ ಅಂತ ಹೇಳೋದು ಬೇಕಿಲ್ಲವಲ್ಲ! ಹೀರೋ ದಿನ ಬೆಳಗಾಗುವುದರೊಳಗೆ ಶ್ರೀಮಂತ! ಹೀರೋಯಿನ್‌ದು ಸ್ವಲ್ಪ ಫ್ಲಾಶ್ ಬ್ಯಾಕು, ಅಪ್ಪ- ಅಮ್ಮ ಕಣ್ಣೀರು, ಆಸ್ಪತ್ರೆಯಲ್ಲಿ ಕ್ಲೈಮಾಕ್ಸು. ನಿಮಗೆ ನಾನು ಬೇರಾವುದೋ ೭೦- ೮೦ರ ದಶಕದ ಸಿನಿಮಾ ಕಥೆ ಹೇಳುತ್ತಿದ್ದೇನೆ ಅನ್ನಿಸಿದರೆ ಅದು ನನ್ನ ತಪ್ಪಲ್ಲ. ಯಾರು ಕಥೆ ಹೇಳಿದರೋ, ಯಾಕಾದರೂ ಇದನ್ನ ಚಿತ್ರ ಮಾಡಿದ್ದಾರೋ, ದೇವರಿಗೇ ಗೊತ್ತು. ರೇಷ್ಮೆ ಸೀರೆ ಕಾರ್ಖಾನೆಯ ಕಾನ್ಸೆಪ್ಟು ಹೊಳೆದದ್ದು ರುದ್ರ ಭೀಕರ!

ನಾಯಕಿ ರಮಣೀತೋ ಚೌಧರಿ ನೋಡಲು ಚೆನ್ನಾಗಿದ್ದಾಳೆ, ಅವಳಿಗೆ "ನಟಿಸುವ" ಕೆಲಸವೇನೂ ಇಲ್ಲ ಇಲ್ಲಿ. ಪ್ರೇಮ್ ಅಳುವುದು ಥೇಟ್ ನಕ್ಕಂತೆಯೇ ಕಾಣುತ್ತದೆ ಮತ್ತು ಕೇಳಿಸುತ್ತದೆ. ನೋಡುವ ನಮಗೆ ನಗಬೇಕೋ , ಅಳಬೇಕೋ ಒಂದೂ ತಿಳಿಯುವುದಿಲ್ಲ. ಚಿತ್ರದ ಹಾಸ್ಯ ಅತ್ಯಂತ ಹಾಸ್ಯಾಸ್ಪದವೂ, ಸಂಗೀತ ಶಂಕಾಸ್ಪದವೂ ಆಗಿದೆ. ಗುರುಕಿರಣ್ ಹಿಂದಿಯ ಫನಾ ಚಿತ್ರದ ಬೀಟ್ಸುಗಳನ್ನ ಕದ್ದಿದ್ದಾರೆ! ನಾವೆಲ್ಲ ಕನ್ನಡ ಪ್ರೇಮಿಗಳಾಗಿರುವುದರಿಂದ ಫನಾ ನೋಡಿಲ್ಲ ಅಂತ ಅವರು ಅಂದುಕೊಂಡಿರಬಹುದು. ಹಾಡುಗಳು ಯಾವುವೂ ನೆನಪಿನಲ್ಲಿ ಉಳಿಯುವುದಿಲ್ಲ. ಒಂದು ಹಾಡಿನ "ಕಥಕ್ಕಳಿ" ಕೊರಿಯೋಗ್ರಫಿ ಚೆನ್ನಾಗಿದೆ.

ಚಿತ್ರ ನಿರ್ದೇಶಕರು- ಕೆ.ನರೇಂದ್ರ ಬಾಬು. ಇವರ ಹೆಸರು ಯಾಕೆ ಹೇಳಿದೆ ಅಂದರೆ, ಮುಂದೆ ಇವರು ಬೇರಾವುದಾದರೂ ಸಿನಿಮಾ ಮಾಡಿದರೆ "ಸ್ವಲ್ಪ ಎಚ್ಚರ ಇರಲಿ" ಅಂತ ಅಷ್ಟೆ. ಇನ್ನು ಯಾರಾದರೂ, "ಕನ್ನಡ ಚಿತ್ರರಂಗ ಉದ್ಧಾರ ಆಗುತ್ತಿರುವ ಈ ಸಮಯದಲ್ಲಿ ಈ ತರ ಕೆಟ್ಟ ವಿಮರ್ಶೆ ಮಾಡಬಾರದು" ಅಂತ ಬೊಂಬ್ಡಾ ಹೊಡಕೊಂಡರೆ, ನಾನೇನೂ ಮಾಡಲಾಗದು.
ಯಾರಿಗೂ ಮೂರು ತಾಸು ಸಮಯ ಮತ್ತು ದುಡ್ಡು ಬಿಟ್ಟಿ ಬರುವುದಿಲ್ಲ.

ಮಂಗಳವಾರ, ಮೇ 08, 2007

ಹಣ"ಕ್ರಾಸಿ"ನ ವಿಷಯ.

ಹೊಸ ೨ ರೂಪಾಯಿ ನಾಣ್ಯದ ಬಗೆಗಿನ ಲೇಖನ ಇದು. "ಪುಂಗವ"ಪತ್ರಿಕೆಯಿಂದ ಎತ್ತಿಕೊಂಡದ್ದು. ಚಿತ್ರ- ಲೇಖನ ಓದೋಕೆ ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಈ ಬರಹವೇ ಎಲ್ಲವುದನ್ನ ಹೇಳುವುದರಿಂದ, ನಾನು ಹೊಸದಾಗಿ ಏನನ್ನೂ ಹೇಳುವ ಅಗತ್ಯ ಕಾಣುವುದಿಲ್ಲ.
ಅಭಿಪ್ರಾಯಗಳಿಗೆ ಸ್ವಾಗತ!


ಈ ಲೇಖನವನ್ನ ಗಮನಕ್ಕೆ ತಂದವನು ಸಂದೀಪ, ಚಿತ್ರ ಜೋಡಿಸಿದ್ದು ವಿಕಾಸ. ಅವರಿಬ್ಬರಿಗೂ ಕೃತಜ್ಞ.

ಪೂರಕ ಓದಿಗಾಗಿ :

೧. ವಿಕಿಪೀಡಿಯಾ
೨. ನ್ಯೂಸ್ ಟುಡೇ



ಸೋಮವಾರ, ಮೇ 07, 2007

ನಿಯಾನು ದೀಪಗಳ ಕೆಳಗೆ.

ಬಸ್ಟ್ಯಾಂಡು ರೈಲ್ವೇ ಸ್ಟೇಶನ್ನುಗಳ
ನಿಯಾನು ದೀಪಗಳ ಕೆಳಗೊಮ್ಮೆ
ನಿಂತು ನೋಡಿದರೆ
ವಿದಾಯದ ಹಲವು ಭಾವಗಳು
ಸುಳಿಯುವುದು ಕಾಣುವುದು, ಎಂದೂ.

ಇಲ್ಲಿಯ ತನಕ ಬೆಚ್ಚಗೆ ಬೆಸೆದಿದ್ದ
ಕೈಯ ಬಿಸುಪುಗಳೆಲ್ಲ ಅನಾಥವಾಗಿ ನಿಂತಿದ್ದು,
ಅಪ್ಪುಗೆ ಆಲಿಂಗನಗಳು ಅಸಹಾಯಕರಾಗಿ
ಅಲೆಯುವುದು,
ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ
ಕಡಿದುಅಲ್ಲೆ ಬಿದ್ದಿರುವುದು

ಹುಸಿ ಮುನಿಸು, ಕಾತರ ನಿರೀಕ್ಷೆಗಳು
ಮುದುರಿ ಕುಳಿತಿರುವುದು
ಅಗಲಿದ ತುಟಿಗಳ ನಡುವಿನ ಮುತ್ತು
ಆಶ್ರಯ ಹುಡುಕುವುದು,
ಬೀಸಿದ ಕೈಗಳ ತುದಿಯ ಬೇಸರ ಅಳುತ್ತಿರುವುದು,
ಜೊತೆಗೆ ಸರಿವ ಭಾರ ಉಸಿರು.

ಕಾಣಲೇಬೇಕೆಂದಿಲ್ಲ ಇವುಗಳೆಲ್ಲ, ಎಲ್ಲರಿಗೂ.
ಆದರೆ ಕಣ್ಣಿಗೆ ಬೀಳಲೇಬೇಕು,
ಪ್ಲಾಟ್ ಫಾರಂ ಬೆಂಚಿನ ಮೇಲೆ ಬಿಟ್ಟು ಹೋದ ಒದ್ದೆ ಕರ್ಚೀಫು,
ಅಲ್ಲೆ ಪಕ್ಕದಿ ಗುಲಾಬಿಯ ಒಂಟಿ ಪಕಳೆ
ಅರೆಗತ್ತಲ ಮೂಲೆಯಲಿ ಬಿದ್ದ ಕಣ್ಣೀರ ಬಿಂದು,
ಮತ್ತು ನಿಧಾನವಾಗಿ
ದೂರ ಸಾಗುತ್ತಿರುವ ಒಂಟಿ ಪಾದಗಳು.

ಗುರುವಾರ, ಮೇ 03, 2007

ಅರಿವಿಂದ ಹೊರಗೆ. . .

ಚಕ್ರಕೆ ಪರಿಭ್ರಮಣದಿ ಸವೆವ ಭ್ರಮೆ,
ಸುಖದ ದಾರಿಯಲಿ ಸುತ್ತುವ
ಕನವರಿಕೆ

ಕುದುರೆಗೆ ಧೂಳೆಬ್ಬಿಸುವ ಹುಚ್ಚು
ಓಡುವ ಆತುರದ ಜೊತೆ
ಆಯಾಸದ ಭಯ

ಚಾಟಿಗೆ ಅಶ್ವದ ಮೈಸವರುವ ಚಪಲ!
ಏಟು ಉದ್ದೇಶವಲ್ಲ , ಮತ್ತು
ಎತ್ತಿದ ಕೈ ನೆಪ.

ಸಾರಥಿಗೆ ಖಾಲಿ ಕಣ್ಣುಗಳ ದೃಷ್ಟಿ,
ಎಲ್ಲ ಹಾದಿಯೂ ಒಂದೇ,
ಮನೆಯದನು ಬಿಟ್ಟು.

ಬತ್ತಳಿಕೆಯ ಬಾಣಕ್ಕೆ ಸ್ವಾತಂತ್ರದ ತುಡಿತ
ಶಿಂಜಿನಿಯ ದಾಟಿ ಗಾಳಿ ಸೀಳಿದರೆ,
ನೀಳ ಉಸಿರು.

ಯೋಧನಿಗೆ ಮರೀಚಿಕೆ ಮುಟ್ಟುವ ಗುರಿ
ಬಿರುದು ಹೊರುವಾಸೆ ಸುಪ್ತ
ಅಳುಕು ಬಿಡದು

ನೋಡುವಗೆ ಅಚ್ಚರಿ, ಬೆರಗು, ತಲ್ಲಣ
ನಿಜದಿ ಅಲ್ಲೇನು ಇಲ್ಲ, ಎಲ್ಲ
ಕಾಗದದ ಚಿತ್ರ.

ಬುಧವಾರ, ಮೇ 02, 2007

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ..

ಒಂದು ಪುಟ್ಟ ದಿಬ್ಬ, ನಡುವೆ ಸಂಪಿಗೆಯ ಮರ, ಮರಕ್ಕೆ ಹುಲ್ಲಿನ ಮಾಡು, ಮಾಡಿನ ಕೆಳಗೆ ಜೋತು ಬಿದ್ದ ಪುಟ್ಟ ಪುಟ್ಟ ಕೊಳಲುಗಳು, ಗಾಳಿಗೆ ಅವು ತುಯ್ದಾಡುವಾಗ ಹೊರಡುವ ಸದ್ದು, ಸುತ್ತ ಅಲ್ಲಲ್ಲಿ ಮರ, ಗಿಡಗಳು, ದೀಪಸಾಲು, ತಂಪುಗಾಳಿ , ದಿಬ್ಬದೊಳಗಿಂದ ಹೊಮ್ಮುತಿರುವ ವೇಣು ನಿನಾದ, ಮರಳ ಹಾಸಿನ ಮೇಲೆ ಅಲ್ಲಲ್ಲಿ ಕುಳಿತು ತಲೆದೂಗುತ್ತಿರುವ ಸಂಗೀತ ಪ್ರಿಯ ಜೀವಗಳು.. ಸಂಜೆಯೊಂದು ಇದಕ್ಕೂ ಮಧುರವಾಗಲು ಸಾಧ್ಯವಿಲ್ಲ! ನ ಭೂತೋ, ಮತ್ತು ಪ್ರಾಯಶಃ ನ ಭವಿಷ್ಯತಿ.

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ.. ಅನ್ನುವ ಹೆಚ್ ಎಸ್ ವೆಂಕಟೇಶ ಮೂರ್ತಿಯವರ ಈ ಸಾಲುಗಳ ಸರಿಯಾದ ಭಾವ ಸ್ಫುರಣೆ ನನಗಾಗಿದ್ದು ಮೊನ್ನೆ ಮೊನ್ನೆ. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ. ಸಂದರ್ಭ, ಸ್ಥಳ: ವಿಶ್ವ ಗೋ ಸಮ್ಮೇಲನದ ಬೃಂದಾವನ.

ಈ ನಾದವನ್ನ ಸವಿಯಲು, ಯಾರು ಬೇಕಾದರೂ , "ಯಾವಾಗ ಬೇಕಾದರೂ" ಹೋಗಬಹುದಿತ್ತು. ಹೌದು, ಯಾವಾಗ ಬೇಕಾದರೂ!! ಗೋ ಸಮ್ಮೇಲನ ನಡೆದ ೯ ದಿನಗಳಲ್ಲಿ, ಎಷ್ಟು ಹೊತ್ತಿಗೆ ಬೇಕಿದ್ದರೂ ಬೃಂದಾವನದ ಕಡೆ ಕಾಲು ಹಾಕಬಹುದಿತ್ತು, ಕಿವಿಗೊಡಬಹುದಿತ್ತು,ಮನ ತೆರೆದಿಡಬಹುದಿತ್ತು.ಇಪ್ಪತ್ತ ನಾಲ್ಕು ಘಂಟೆ ಗುಣಿಸು ೯ ದಿನ! , ವೇಣುವಿನುಣಿಸು. ಅಬ್ಬಾ!! ಕೊಳಲಿಗೆ ದನಿಯಾದವರಲ್ಲಿ ಪಂಡಿತ ವೆಂಕಟೇಶ ಗೋಡ್ಕಿಂಡಿ, ಅವರ ಶಿಷ್ಯ ಬಳಗ, ರೋಣು ಮಜುಂದಾರ್, ಇವರೆಲ್ಲ ಸೇರಿದ್ದರು. ಕಿರಣ ಗೋಡ್ಕಿಂಡಿ, ರಾಜೇಶ್ ನಾಕೋಡ್ ಸಾಥೀಗಳು. ಪ್ರವೀಣ್ ಗೋಡ್ಕಿಂಡಿಯವರ ಮಗನೂ ಒಂದು ಇಳಿ ಸಂಜೆ "ಕೃಷ್ಣಾ ನೀ ಬೇಗನೆ ಬಾರೋ" ಅಂತ ಕರೆದ, ತನ್ನ ಪುಟ್ಟ ಬೆರಳಲ್ಲಿ ಕೊಳಲು ಸವರುತ್ತಾ..

ದಿನ ಪೂರ್ತಿ ಮುರುಳಿವಾದನವಿದ್ದರೂ, ಅದಕ್ಕೆ ರಂಗು ಬಳಿಯುತ್ತಿದ್ದುದು ಸಂಜೆ ಮತ್ತು ಅದರ ಜೊತೆಗೆ ಬರುವ ನಿಷೆ. ಸುತ್ತ ಬೆಳಕು ಕಡಿಮೆ ಕಡಿಮೆಯಾಗುತ್ತ ಬಂದ ಹಾಗೆ, ಸಾಲಾಗಿ ನಿಲಿಸಿದ ಬಿದಿರ ಪುಟ್ಟ ಗೂಡುಗಳೊಳಗೆ ದೀಪ ಹೊತ್ತಿಕೊಳುತ್ತಿದ್ದ ಹಾಗೆ,ಕೃಷ್ಣನ ಮೂರ್ತಿಯ ಎದುರಿಗೆ ಬೆಳಕು ಬಿದ್ದ ಮೇಲೆ, ಕೊಳಲಿನುಸಿರ ಬಲ ಜಾಸ್ತಿಯಾಗುತ್ತಿತ್ತು. ಆಗಸದಲ್ಲಿ ತುಂಡು ಮೋಡಗಳು, ಅಲ್ಲೇ ಮೇಲೆ ನಮ್ಮ ಜೊತೆಗೇ ಬಾನ್ಸುರಿ ಕೇಳುವ ಬಾನ ರಾಜ ಚಂದಿರ.. ಇಲ್ಲಿ ಯಾರಿಗೂ ಅವಸರವಿರಲಿಲ್ಲ, ಸಂಜೆ ಬಸ್ಸಿಗೆ ಓಡಬೇಕೆಂಬ ಚಿಂತೆಯಿರಲಿಲ್ಲ, ಸಭಾಂಗಣವನ್ನ ಮತ್ತೊಬ್ಬರಿಗೆ ಬಿಟ್ಟು ಕೊಡುವ ಗಡಿಬಿಡಿಯಿರಲಿಲ್ಲ.. ಹೊತ್ತು ಕಳೆದಂತೆ ಆನಂದವೂ ಜಾಸ್ತಿ.. ಜೀವ ಉದ್ದೀಪನವಾದ ಅನುಭವ. ಸಂಗೀತವನ್ನ ನಿಜಕ್ಕೂ ಸವಿಯುವುದು ಹೇಗೆ ಅನ್ನುವದನ್ನ ನನಗೆ ಕಲಿಸಿಕೊಟ್ಟಿದ್ದು ಈ ವೃಂದಾವನೀ.

ಕೃಷ್ಣನ ಮಧುರೆಯ ಬೃಂದಾವನ ಹೀಗೆಯೇ ಇದ್ದಿರಬೇಕು. ಸುತ್ತ ಗೋಪಾಲಕರು, ಗೋವುಗಳ ಚಾಮರ ಸೇವೆ, ಗೋಪಿಕೆಯರ ಗುಂಪು, ಮರದ ತಂಪಲ್ಲಿ ನಡುವೆ ಮುರುಳೀಧರ. ಸಿದ್ಧಲಿಂಗಯ್ಯನವರು ಇತ್ತೀಚೆಗೆ ನಡೆದ ಕವಿಗೋಷ್ಠಿಯೊಂದರಲ್ಲಿ "ಬಿದಿರ ತುಂಡನ್ನು ದ್ವಾಪರದ ಭಾಗ್ಯವನ್ನಾಗಿಸಿದ ಒಬ್ಬ ಗೊಲ್ಲ" ಅಂದಿದ್ದರು. ಎಷ್ಟು ಸತ್ಯ ಆ ಸಾಲು! ಆ ಭಾಗ್ಯ ಕಲಿಯುಗಕ್ಕೂ ವಿಸ್ತರಿಸಿದೆ ಅಂತ ನನಗೆ ಖಾತ್ರಿಯಾಯಿತು, ಈ ಕಲಿಯುಗ ಬೃಂದಾವನನ್ನ ಕಂಡ ಮೇಲೆ.ಶುಕ್ರವಾರ ಸಂಜೆ- ರಾತ್ರೆ ನಾನೊಬ್ಬನೇ ಕೂತು ಕೇಳುತ್ತಿದ್ದರೆ, ಮಿತ್ರವರ್ಗ ಜೊತೆಗಿಲ್ಲವಲ್ಲಾ ಅನ್ನುವ ಖಾಲೀ ಭಾವ. ಮಾರನೇ ದಿನ ಬರಲಿದ್ದ ಸುಶ್ರುತಂಗೆ, ವಿಕಾಸಂಗೆ, ತಂಗಿಗೆ ಮೆಸೇಜು ಮಾಡೀ ಮಾಡೀ ಇಟ್ಟೆ. ಸುಶ್ರುತ ಮತ್ತು ವಿಕಾಸರು ಒದೆಯುವ ಮತ್ತು ಇತ್ಯಾದಿ ಧಮಕೀ ಹಾಕಿದ ಮೇಲೆ ಹೆದರಿ ಸುಮ್ಮನಾಗಬೇಕಾಯಿತು.

ಮರುದಿನ ಇಷ್ಟ ಮಿತ್ರರೆಲ್ಲ ಜೊತೆಗೂಡಿ ನಡುರಾತ್ರೆಯವರೆಗೂ ಮುರುಳಿಯುಲಿಯಲ್ಲಿ ಮಿಂದೆವು. ಸುಮ್ಮನೆ ಒಂದು ರೀತಿಯ ಸಮ್ಮೋಹಿನಿಗೊಳಗಾದಂತೆ ಕೇಳಿದೆ ನಾನೂ. ಮಾತಿಗಲ್ಲಿ ಜಾಗವಿರಲಿಲ್ಲ..
ಈ ಕ್ಷಣ ಕಣ್ಣು ಮುಚ್ಚಿದರೂ ನನಗೆ ಆ ಅನಾಮಧೇಯ ಕೊಳಲ ಗಾರುಡಿಗ, ಗೋಧೂಳಿ ಸಮಯ ಮತ್ತು ವಾತಾವರಣದಲ್ಲಿ, "ಧರಣಿ ಮಂಡಲ ಮಧ್ಯದೊಳಗೆ" ಹಾಡನ್ನ ತನ್ನ ಉಸಿರೊಳಗಿಂದ ವೇಣುವಿಗೆ ತಂದು, ಕೂತ ನಮ್ಮೆಲ್ಲರ ಕಣ್ಣನ್ನ ಒದ್ದೆಯಾಗಿಸಿದ್ದು ಅನುಭೂತಿಗೆ ಬರುತ್ತದೆ.

ಗುರುವಾರ, ಏಪ್ರಿಲ್ 26, 2007

ಬೇಸಗೆಯ ಮದುವೆಯೆಂದರೆ..

ಸಿಕ್ಕಾಪಟ್ಟೆ ಬಿಸ್ಲು, ಮಕ್ಳಿಗೆಲ್ಲ ರಜೆ. ಹೊರಗೆ ತಿರುಗಾಡೋಕೆ ಹೊರಟರೆ ಬೆವ್ರು- ಸೆಖೆ. ಬಿಸಿ ಗಾಳಿ. ಮನೆ ಹಂಚಿನ್ ಮೇಲೆ, ಚಪಾತಿ ಸುಡಬಹುದು. ಊರಲ್ಲಿ ಜಾತ್ರೆ ,ದಿನಾ ದೇವಸ್ಥಾನಕ್ಕೆ ಬೇರೆ ಹೋಗ್ಬೇಕು. ಹಲಸಿನ ಹಪ್ಳ ಮಾಡೋ ಚಿಂತೆ, ಮಳೆಗಾಲಕ್ ಕಟ್ಗೆ ಒಟ್ ಮಾಡೋ ಕಷ್ಟ, ಕರೆಂಟಿಲ್ದೇ ಒದ್ದಾಡೋ ರಾತ್ರೆ, ಒಂದಾ ಎರಡಾ?! ಎಲ್ಲ ಈ ಬೇಸಿಗೆಯ ಜೊತೆ ಜೊತೆಗೇ ಬರತ್ತೆ.. ಅದೇನೋ ಹೇಳ್ತಾರೆ ನಮ್ಮಲ್ಲಿ, "ಬಕನ್ ಬಾರಿ, ಮಗನ್ ಮದ್ವೆ, ಹೊಳಿಂದಚೀಗ್ ಪ್ರಸ್ಥ, ಎಲ್ಲ ಒಟ್ಟಿಗೇ ಬಂದಿತ್ತಡ" ಅಂತ.

ಹಾ! ಮದ್ವೆ ಅಂದ್ ಕೂಡ್ಲೆ ನೆನ್ಪಾಯ್ತು, ಈ ಮದ್ವೆ ಗೌಜು ಗಲಾಟೇನೂ ಬರೋದು ಬೇಸ್ಗೇಲೆ. ಪ್ರತೀ ವರ್ಷ ಎಪ್ರೀಲು ಮೇ ತಿಂಗ್ಳಲ್ಲಿ ಕಡ್ಮೆ ಅಂದ್ರೂ ೧೦ ಮದ್ವೆ ಇದ್ದಿದ್ದೆ. ಅದರಲ್ಲಿ ೪-೫ ನಮ್ಮ ಅತ್ಯಂತ ಹತ್ತಿರದೋರ್ದು. ಮನೇಲಿ ನೀರಿರಲ್ಲ , ನಮಗೇ ಪರದಾಟ , ಅದ್ರ್ ಜೊತೆಗೆ, ಒಂದಿಷ್ಟ್ ಜನ ನೆಂಟ್ರು - ನಮ್ ಮನೆ ಹತ್ರ ಅಂತ ಬಂದು ಉಳ್ಕೊಂಡಿರೋರು, ಚಿಳ್ಳೆ ಪಿಳ್ಳೆಗಳ ಸಮೇತ. ಮೂರು ಟ್ಯೂಬ್ ಲೈಟು, ಒಂದಿಷ್ಟ್ ಗ್ಲಾಸು, ಒಡಿಯೋದೆ. ನಮಗೆ ಬೈಯೋ ಹಾಂಗೂ ಇಲ್ಲ, ಬಿಡೋ ಹಾಂಗೂ ಇಲ್ಲ, ಬಿಸಿ ತುಪ್ಪ!!

ಹೊರಗಡೆ ತೋಟದಲ್ಲಿ ಕೆಲ್ಸಕ್ ಬಂದಿರೋರು ಒಂದಿಷ್ಟ್ ಜನ . ಅವ್ರ್ಗೂ ಮಾಡ್ ಹಾಕಿ, ಬಂದೊರ್ನ ಸುಧಾರ್ಸಿ, ಉಫ್,ಅಮ್ಮ ಕಂಗಾಲು. ಮದ್ವೆ ಮನೆಗೆ ಬೇರೆ ಹೋಗ್ಬೇಕು, ೨ ದಿನಾ ಮುಂಚೆ! ಮಂಗಲ ಪತ್ರ ಕೊಟ್ ಕೂಡ್ಲೆ ಧಮಕೀನೂ ಬಂದಿರುತ್ತದೆ, "ಎರಡು ದಿನ ಮುಂಚೆ ಬಂದು ಎಲ್ಲಾ ಸುಧಾರ್ಸಿಕೊಡಕು" ಅಂತ. ಏನೇ ರಗ್ಳೆ ಇದ್ರೂ, ಮದ್ವೆ ಮನೆ ಅಂದ್ರೆ ಖುಷಿನೇ ಬಿಡ್ರೀ!,ನಂಗೆ, ನಿಮ್ಗೆ ಮತ್ತೆ ಎಲ್ಲರಿಗೂ, ಅಲ್ವಾ?!

ಮದ್ವೆ ಮನೆ ಓಡಾಟದಲ್ಲಿರೋ ಸಂತೋಷ ಮತ್ ಎಲ್ಲೂ ಇಲ್ಲ! ಎಲ್ಲರೂ ಕೆಲ್ಸ ಮಾಡೋರೆ. ನಾನ್ ಹೇಳ್ತಿರೋದು ಮನೇಲೇ ನಡಿಯೋ ಮಲೆನಾಡಿನ ಮದ್ವೆ ಬಗ್ಗೆ, ಈ ಪೇಟೆ ಛತ್ರದ್ ಮದ್ವೇ ಅಲ್ಲಾ ಮತ್ತೆ. ಚಪ್ಪರ ಹಾಕೋರೇನೂ, ಪಾತ್ರೇ ಸಾಗ್ಸೋರೇನು, ಹೂವು , ಹಣ್ಣು ತರೋರೇನು, ಓಡಾಟವೇ ಓಡಾಟ. ಮಕ್ಳಿಗಂತೂ ದೊಡ್ಡೋರ್ ಕೈ ಕಾಲಡಿಗೆ ಸಿಗೋದೆ ಸಂಭ್ರಮ. ಉಮೇದಲ್ಲಿ ಕೆಲಸ ಮಾಡೋ ಯುವಕರ ಒಂದು ಪಂಗಡ ಆದ್ರೆ, ಕೆಲ್ಸ ಮಾಡ್ಸೋ ಹಿರೀರದು ಇನ್ನೊಂದು. "ತಮ್ಮಾ, ಆ ಬದಿ ಸ್ವಾಂಗೆ ಹೊಚ್ಚಿದ್ದು ಸರಿ ಆಯ್ದಿಲ್ಲೆ ನೋಡು, ಹಾನ್, ಸ್ವಲ್ಪ ಇತ್ಲಾಗ್ ತಗ, ಹಾ, ಹಾಂಗೆ.. ಈಗ್ ಸರಿ ಆತು" "ಒಲೆ ಸ್ವಲ್ ವಾರೆ ಆದಾಂಗ್ ಇದ್ದು, ಆ ತಿಮ್ಮಣ್ಣನ್ ಕರಿ", "ಬೆಳ್ಗೆ ಹಾಲ್ ತಪ್ಪವು ಯಾರು, ಬೇಗ್ ಹೋಗ್ ಬನ್ನಿ"- ಉಸ್ತುವಾರಿ ಕೆಲ್ಸ!. ಕೆಲ್ಸಾ ಮಾಡ್ತಾ ಇರೋ ಹುಡುಗ್ರು ಇವ್ರ್ ಮೇಲೆ ಸೇಡ್ತೀರ್ಸ್ಕೊಳಕ್ಕೆ ಸರಿಯಾದ್ ಟೈಮ್ ಗೆ ಕಾಯೋದಂತೂ ಸುಳ್ಳಲ್ಲ.

ಇಡೀ ಊರಿನ ಹುಡುಗ ಪಾಳಯಕ್ಕೆ ಈ ಮದ್ವೆ, ಒಂದು ನೆಪ. ಮದ್ವೆ ಮುಗಿಯೋ ತಂಕ ಇವರ ಹಾರಾಟನ ಯಾರೋ ಕೇಳೋ ಹಾಂಗಿಲ್ಲ! ಪರೀಕ್ಷೆ, ಮಾಷ್ಟ್ರು, ಅಪ್ಪ- ಯಾರ್ ಕಾಟನೂ ಇರಲ್ಲ ಬೇರೆ. ಮನೆ ಹಿಂದಿನ ಬ್ಯಾಣದ ಗೇರು , ಮಾವುಗಳೆಲ್ಲ ಇವರದೇ ಪಾಲು. ಹುಡುಗೀರ ಪ್ರಪಂಚ ಬೇರೆಯದೇ, ಹೊಸ ಬಟ್ಟೆ, ಮದರಂಗಿ, ಹೂವು, ಅಮ್ಮನ ಹೊಸ ರೇಷ್ಮೆ ಸೀರೆಯ ಚಂದ, ಬೆಂಗಳೂರಿಂದ ಬಂದ ಅಕ್ಕ ಕಲಿಸಿಕೊಟ್ಟಿರೋ ಜಡೆ ಹಾಕುವ ನೂತನ ವಿಧಾನ..

ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ , ಎಲ್ಲೋ ಒಂದು ಜೊತೆ ಕಣ್ಣು ಇನ್ನೊಂದನ್ನ ಸಂಧಿಸಿಯೇ ಸಂಧಿಸುತ್ತವೆ ಮತ್ತು ಚಿಗುರು ಪ್ರೇಮವೊಂದು ಹುಟ್ಟುತ್ತದೆ, ಮತ್ತದು ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ ! ಅದೇ ಊರಿನ್ ಹುಡ್ಗಿ ಇರಬಹುದು, ವರ್ಷಗಟ್ಲೆ ಅವಳು ಇವನ್ನ - ಇವನು ಅವಳನ್ನ ನೋಡ್ತಾ ಇದ್ರೂ, ಈ ಮದ್ವೆ ಮನೆ ಅವರಲ್ ಹೊಸ ಭಾವ ಹುಟ್ಟಿಸುತ್ತದೆ. ಎಲ್ಲೋ ಅಟ್ಟದ ಮೇಲಿನ ಬಾಳೆಗೊನೆಯನ್ನ ಕೆಳಗಿಳ್ಸೋವಾಗ, ಪಾತ್ರೆ ದಾಟಿಸುವಾಗ, ತರಕಾರಿ ಹೆಚ್ಚುವಾಗ, ತೋಟದಲ್ಲಿ ವೀಳ್ಯದೆಲೆ ಏಣಿಯನ್ನ ಅವನು ಹತ್ತಿದ್ದಾಗ, ಒತ್ತಾಯ ಮಾಡಿ ಹೋಳಿಗೆ ಬಡಿಸುವಾಗ!..

ತಲೆ ಮೇಲೆ ಸುಡೋ ಬಿಸ್ಲಿದ್ರೂ, ಗಾಳಿ ಬೀಸೋದು ನಿಲ್ಸಿದ್ರೂ, ಸಿಕ್ಕಾಪಟ್ಟೆ ಜನ ಅತ್ತಿಂದಿತ್ತ ಓಡಾಡ್ತಾ ಇದ್ರೂ, ಯಾವ್ದೋ ಒಂದು ಮಸ್ತ್ ಘಳಿಗೆಯಲ್ಲಿ ಹುಟ್ಟಿ ಬಿಡುತ್ತದೆ ಈ ಭಾವ. ದೂರದೂರಿಂದ ಬಂದ ಹುಡುಗನಾದರೆ ಅಥವ ಹುಡುಗಿಯಾದರೆ ಕತ್ತಲ ಮೂಲೆಯವರೆಗೆ ಸಾಗೀತೇನೋ, ಇಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ, ಕಣ್ಣ ಆರಾಧನೆಯಲ್ಲೇ ಕಳೆಯುತ್ತದೆ. ಪರಸ್ಪರ ನೋಟದಲ್ಲೇ ಅಚ್ಚರಿ- ನಗು.

ಮದುವೆ ಬರಿಯ ಇಬ್ಬರದಲ್ಲ , ಹಲವು ಬಂಧಗಳನ್ನ ಬೆಸೆಯುತ್ತದೆ. ನಾಲ್ಕು ವರ್ಷದಿಂದ ಮಾತಾಡ್ದೇ ಇರೋ ಗಣಪಣ್ಣ- ಮಾಬ್ಲೇಶ್ವರ ಈ ಮದುವೇಲಿ ಒಟ್ಟಿಗೇ ಅನ್ನದ ಕೌಳಿಗೆ ಹಿಡ್ದ್ರೂ ಆಶ್ಚರ್ಯ ಇಲ್ಲ! ಪಾಲಾಗಿ , ಅಡ್ಡ ಬಾಗಿಲುಗಳನ್ನ ಮುಚ್ಚಿದ್ದ ಮನೆಗಳು, ಈಗ ತೆರೆದು ಕೊಳ್ಳುತ್ತವೆ, ಎಲ್ಲರ ಮನೆಯ ಬಾಳೇ ಎಲೆಗಳೂ ಸಾಲಾಗಿ ಹಾಕಲ್ಪಡುತ್ತವೆ, ಸಾಲುಮನೆಗಳ ಅಟ್ಟದ ಮೇಲೆ ಹಾಸಿರುವ ಕಂಬಳಿಗಳು, ಇಡಿಯ ಊರಿನದು!. ಎಲ್ಲ ಕೊಟ್ಟಿಗೆಗಳ ಗಿಂಡಿ ನೊರೆ ಹಾಲು ಬಂದು ಬೀಳುವುದು ಒಂದೇ ಪಾತ್ರೆಗೆ. ವೆಂಕಣ್ಣ ನ ಮನೆಯ ಚಾಲಿಯೂ, ಗಿರಿ ಭಟ್ಟರ ಕೆಂಪಡಕೆಯೂ, ಒಂದೇ ವೀಳ್ಯದ ಬಟ್ಟಲೊಳಗೆ.

ಮದುವೆ, ಇಡಿಯ ಊರನ್ನ ಒಗ್ಗೂಡಿಸಿರುತ್ತದೆ. ಮದುವೆ ಮುಗಿದ ಮೇಲೆ, ಎಲ್ಲ ತೆರಳಿದ ಮೇಲೆ, ಊರಿಗೂರೇ ಆ ಖಾಲಿತನವನ್ನ ಅನುಭವಿಸುತ್ತದೆ. ಚಪ್ಪರ, ಮನೆಯ ಮೆತ್ತು ಎಲ್ಲ ಖಾಲಿ. ಬಾಡಿದ ಹೂವಿನ ರಾಶಿ, ಸುತ್ತಿಟ್ಟ ಚಾಪೆಗಳು, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧವಾಗಿ ನಿಂತ ಪಾತ್ರೆ- ಕಂಬಳಿಗಳ ಗಂಟು, ಪೆಚ್ಚು ಮೋರೆಯಲ್ಲಿ ಮತ್ತೆ ತೋಟದ ಕಡೆಗೆ ಹೊರಟು ನಿಂತ ಆಳು.. ಮಗಳನ್ನ ಕಳುಹಿಸಿ ಕೊಟ್ಟ ಅಪ್ಪ- ಅಮ್ಮ ಮಾತ್ರವಲ್ಲ, ಮದುವೆ ಮನೆಯಲ್ಲಿ ಸಿಕ್ಕಿದ್ದ ಹೊಸ ಗೆಳೆಯನನ್ನ ಕಳೆದುಕೊಂಡ ಹುಡುಗಿಯೂ ಅಷ್ಟೇ ನೋವನುಭವಿಸುತ್ತಾಳೆ. ಇನ್ನು ಯಾವಾಗ ಬರುವವನೋ ಅವನು..

ಎಲ್ಲರ ಮನೆಯ ಪಾತ್ರೆ ಪಗಡ, ಕಂಬಳಿಗಳು ಅವರ ಮನೆಯ ಮೇಲುಪ್ಪರಿಗೆಯಲ್ಲಿ ಕುಳಿತಾದ ಮೇಲೆ, ಕರೆದ ನೊರೆಹಾಲು ಮತ್ತೆ ತಮ್ಮ ತಮ್ಮ ಮನೆಯ ಗಿಂಡಿಗಳೊಳಗೇ ಕಲಕಲು ಶುರುವಾದ ಮೇಲೆ,
ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ.

ಸೋಮವಾರ, ಏಪ್ರಿಲ್ 23, 2007

ಮಳೆಯಲಿ ನೆನೆಯುವ ಮಜವೇ ಬೇರೆ...

ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿಬಜಾರೊಳಗೆ!
ಅವಳಲ್ಲಿದ್ದರು ನೆನೆವಳು ಇಲ್ಲಿ ನನ್ನಯ ಜೊತೆ ಜೊತೆಗೇ.
ವಾಹನಸಾಲು ಓಡುತ್ತಿದ್ದರೂ, ಕೇಳದು ಅವುಗಳ ಶಬ್ದ,
ಮತ್ತೆ ಮತ್ತೆ ಮನದೊಳಗೆ, ಏನೇನೋ ಗುಣಲಬ್ಧ.

ಹೂವ ಮಾರುವ, ಹಣ್ಣ ಕೊಳ್ಳುವ ಎಲ್ಲರು ನೋಡಲು ಖುಷಿಯೇ.
ಹೊರಗಡೆಯೆಲ್ಲ ಒದ್ದೆಯಾದರೂ, ಮನವದು ಮಾತ್ರ ಬಿಸಿಯೇ.
ದೇವರ ಪೂಜೆಯ ಅಂಗಡಿಯೊಳಗೆ ಅರಸಿನ ಕುಂಕುಮ ಗೋಪುರವು
ಮಳೆಹನಿ ತಟ ಪಟ ಅನ್ನುತಲಿದ್ದರೆ, ನೆನಪಲಿ ಅವಳಾ ನೂಪುರವು.

ಯಾರಿಗು ಇಲ್ಲಿ ಆತುರವಿಲ್ಲ, ಮಳೆ ಹೊಡೆತದ ಭಯವಿಲ್ಲ,
ಏನಿವರೆಲ್ಲರು ಪ್ರೇಮಿಗಳೇನೇ?, ನನಗದು ತಿಳಿದಿಲ್ಲ.
ರಸ್ತೆಯಂಚಿನಾ ಹೋಟೇಲೊಳಗೆ ಕಾಫಿಯ ಪರಿಮಳವು,
ಯಾಕಿವಳಿಲ್ಲ ನನ್ನ ಜೊತೆ, ಸಣ್ಣಗೆ ಏಕೋ ತಳಮಳವು.

ಮರಸಾಲಿನ ಅಡಿ ನಡೆಯುತಲಿದ್ದರೆ, ನೀರ ಧಾರೆಯೊಳಗೆ
ಬರುವಳು ಅವಳೂ ನನ್ನ ಜತೆ, ನೆನಪ ದಾರಿಯೊಳಗೆ.
ಮಳೆಯಲಿ ನೆನೆಯುವ ಮಜವೇ ಬೇರೆ, ಗಾಂಧಿ ಬಜಾರೊಳಗೆ
ಪ್ರೀತಿಯೊಳಿದ್ದರೆ ಒಮ್ಮೆ ಬಂದು ಬಿಡಿ, ಮಳೆ ಕಳೆವುದರೊಳಗೆ!

ಬುಧವಾರ, ಏಪ್ರಿಲ್ 18, 2007

ಕಡೆಯ ಘಳಿಗೆ..

ಆ ಗುಡ್ಡದಾ ತುದಿಯ ಹೆಸರಿಲ್ಲದ ಮರದ,
ತುಂಡು ಗೆಲ್ಲೊಳಗೊಂದು ಹಳದಿ ಹಣ್ಣೆಲೆಯಿತ್ತು.
ಜೋರು ಗಾಳಿಗೆ ಮರವೊಮ್ಮೆ ತೂಗಲದು
ತೊಟ್ಟ ಬಂಧವ ಕಡಿದು, ನೆಲಕೆ ಬಿತ್ತು.

ಬಿದ್ದ ಎಲೆಗೇನೋ ನೋವು, ಚಡಪಡಿಕೆ ಜೊತೆಗೆ,
ಏನ ಮಾಡಿದೆ ತಾನಿಷ್ಟು ದಿನ, ತಿಳಿಯಲೇ ಇಲ್ಲ!
ಗುಂಪಿನೊಳಗಿದ್ದೆ, ತೊನೆದಾಡುತಲಿದ್ದೆ ,
ಎಲ್ಲರಂತೆಯೇ ಇದ್ದೆ, ಈಗ ಬುಡವೆ ಕಳಚಿತಲ್ಲ!

ಸಾಧನೆಯು ಶೂನ್ಯವೇ, ಬದುಕು ಮುಗಿವುದೆ ಈಗ?
ಯಾರಿಗಾದರು ನನ್ನ ನೆನಪು ಬರಬಹುದೆ?
ಎಲೆಯಾಗಿ ಹುಟ್ಟಿದ್ದೆ ತಪ್ಪಾಗಿ ಹೋಯಿತೇ
ದೈವ ಸೃಷ್ಟಿಯನು ನಾ ಪ್ರಶ್ನಿಸಲು ಬಹುದೆ?

ಹಣ್ಣಲೆಯು ಹಾಗಲ್ಲೆ ಕೊರಗುತಾ ಬಿದ್ದಿರಲು
ಬಂತೊಂದು ಪುಟ್ಟ ಹುಳ ಅದರ ಬಳಿಗೆ
ಎಲೆಯ ಮರುಗುವ ಕಾರಣವು ತಿಳಿಯುತಲಿ
ನಕ್ಕು ಸಮಾಧಾನಿಸಿತು, ತನ್ನ ಮಾತಿನಲಿ.

ನಿನ್ನ ನಿಲುಕಿನ ಕೆಲಸ ಮಾಡಿರುವೆ ನೀನು
ಮರದ ಹಸಿರಿನುಸಿರಲಿ ನಿನ್ನದೂ ಪಾಲಿತ್ತು,
ನೆಳಲ ತಂಪನು ಮರವು ನೀಡುತಿರುವಾಗಲ್ಲಿ,
ನಿನ್ನ ಮೈಯ್ಯಿಗು ಬಿಸಿಲ ಝಳವು ಸೋಕಿತ್ತು.

ಆ ಹಕ್ಕಿ ಗೂಡಿಗೆ, ನೀನಲ್ಲವೇ ತಳಪಾಯ,
ನಿನ್ನ ಮೇಲೆಯೇ ತಾನೆ ನಾನು ನಲಿದದ್ದು?
ಇದ್ದ ಜಾಗದೊಳಗೆಯೇ, ಇಷ್ಟೆಲ್ಲ ಮಾಡಿರುವೆ
ಸಾಕಯ್ಯ ಉಪಕಾರ ನೀನು ಮಾಡಿದ್ದು

ಆ ಸಣ್ಣ ಜಂತುವಿನ ಮಾತ ಕೇಳಿದಾ ಎಲೆಗೆ,
ಧನ್ಯವೆನಿಸಿತು ಬಾಳು, ಕಡೆಯ ಕ್ಷಣದೊಳಗೆ.
ಹಿತವೆನಿಸಿ ಆ ಘಳಿಗೆ, ಸುಮ್ಮಗೇ ಇದ್ದಿರಲು
ಗಾಳಿ ತೇಲಿಸಿತದನು, ಕಣಿವೆಯೊಳಗೆ.

ಮಂಗಳವಾರ, ಏಪ್ರಿಲ್ 10, 2007

ರಿಸಲ್ಟು ಬಂತು!

ಏಪ್ರಿಲ್ ತಿಂಗಳ ಬಿಸಿಲು ಶುರುವಾಗುತ್ತಿದ್ದ ಹಾಗೇ, ರಾಜನಿಗೂ ಬಿಸಿ ಏರ ತೊಡಗಿದೆ. ಪರೀಕ್ಷೆ ಮುಗಿದು ೨೦ ದಿನಗಳಾಗಿವೆ. ಇಷ್ಟು ದಿನ ಬಿಸಿಲಲ್ಲಿ ಕ್ರಿಕೆಟ್ ಆಡಿದ್ದಾಯ್ತು, ಮುಳ್ಳು ಹಣ್ಣು ಹುಡುಕಿದ್ದಾಯ್ತು. ೧೦ನೇ ತಾರೀಕಿಗೆ ರಿಸಲ್ಟು! ೫ನೇ ಕ್ಲಾಸಿಂದ ೬ನೇ ಕ್ಲಾಸಿಗೆ ದಾಟುವ ಉತ್ತರಾಯಣ ಪರ್ವ ಕಾಲ ಅಂದರೆ ಸುಮ್ಮನೇನಾ? ಅವನಿಗೆ ಗಣಿತ ಬಿಟ್ಟು ಮತ್ತೆಲ್ಲ ವಿಷಯಗಳಲ್ಲಿ ಪಾಸಾಗುವಷ್ಟು ಅಗಣಿತ ಪ್ರತಿಭೆ ಇದೆ! ಆದರೆ ಅದು ಮಾಷ್ಟ್ರಿಗೆ ಹೇಗೆ ಗೊತ್ತಾಗಬೇಕು ಪಾಪ?

ಅವನ ಮನೆಯಿಂದ ಮೂರನೆ ಮನೆ ಆಚೆಯಿರುವ ಪದ್ಮಿನಿ ಭಾಳಾ ಜಾಣ ಹುಡುಗಿಯಂತೆ, ಹಾಗಂತ ಅವನ ಅಪ್ಪ ಅಮ್ಮ ಯಾವಾಗಲೂ ಹೇಳುತ್ತಾರೆ. ಅವಳೆದುರಿಗೆ ಮರ್ಯಾದೆ ಉಳಿಸಿಕೊಂಡರೆ ಸಾಕಾಗಿದೆ ರಾಜನಿಗೆ. ಅವಳೂ ಹಾಗೇ, ಇವನ ಬಳಿ ಮೊದಲೇ ಸರಿಯಾಗಿ ಮಾತಾಡುವುದಿಲ್ಲ, ಇನ್ನು ಫೇಲಾಗಿ ಹೋದರಂತೂ ಮುಗಿದೇ ಹೋಯಿತು. ಪುಣ್ಯಕ್ಕೆ ಇವನ ಶಾಲೆಗೆ ಬರುವುದಿಲ್ಲವಾದ್ದರಿಂದ ಗಣಿತ ಟೀಚರ್ ೨ ದಿನಕ್ಕೊಮ್ಮೆಯಾದರೂ ಪೆಟ್ಟು ಕೊಡುವುದು ಗೊತ್ತಿಲ್ಲ ಅವಳಿಗೆ. ಆ ವಿಚಾರ ಅಪ್ಪ ಅಮ್ಮನಿಗೂ ಗೊತ್ತಿಲ್ಲ, ಅದು ಬೇರೆ ವಿಷ್ಯ.

ಇನ್ನು ರಾಜನ ಸ್ನೇಹಿತ ಗಡಣ- ಸುರೇಸ, ಸೊಳ್ಳೆ ಬತ್ತಿ ಹೆಸರಿನ ಮಾರ್ಟೀನು, ಶ್ರೀನ್ವಾಸ ಎಲ್ಲ ಇವನ ತರದವರೆ. ರಾಜನಿಗೆ ಗಣಿತ ಮಾತ್ರ ಹೆದರಿಕೆಯಾದರೆ ಮಾರ್ಟೀನಿಗೆ ಇಂಗ್ಲೀಷೂ ಬರದು!ಇಂಗ್ಲೀಷು ಹೆಸರಿಟ್ಟುಕೊಂಡ ಅವನಿಗೆ ಆ ಭಾಷೆಯೇ ಯಾಕೆ ಅರ್ಥವಾಗುವುದಿಲ್ಲ ಅಂತ ಸೋಜಿಗೆ ರಾಜ, ಸುರೇಸ ಎಲ್ಲರಿಗೂ.

ಎಪ್ರೀಲು ೮ನೇ ತಾರೀಕಿಂದು ಎಲ್ಲರೂ ಸೇರಿ ಸ್ರೀನ್ವಾಸನ ಮನೆ ಹಿತ್ತಲಿನ ಮಾವಿನ ಮರದ ಮೇಲೆ ಮಂತ್ರಾಲೋಚನೆ ಮಾಡಿದ್ದಾಗಿದೆ. ರಿಸಲ್ಟಿನ ದಿನ ಏನು ಮಾಡಬೇಕೂಂತ. ರಾಜ ತಾನು ಫೇಲಾಗಬಹುದು ಎನ್ನುವ ವಿಚಾರವನ್ನೇ ಅವರ ಮುಂದಿಟ್ಟಿಲ್ಲ, ಯಾಕಂದರೆ ಅಲ್ಲಿದ್ದವರಲ್ಲಿ ಅವನೇ ಬುದ್ಧಿವಂತ ಮತ್ತು ಆ ಗೌರವವನ್ನ ಹಾಗೇ ಕಾಪಾಡಿಕೊಳ್ಳುವ ಅನಿವಾರ್ಯತೆ ಬೇರೆ ಇದೆ. ಮಾರ್ಟೀನು ತಾನು ಖಂಡಿತಾ ಫೇಲಾಗುತ್ತೇನೆ ಅಂತ ಒಪ್ಪಿಕೊಂಡಿದ್ದಾನೆ. ಮುಂದೇನು ಮಾಡುವುದು ಅಂತ ಅವನಿಗೆ ಗೊತ್ತಿಲ್ಲವಂತೆ. ಸ್ರೀನ್ವಾಸ ತಾನು ವಿಜ್ಞಾನದಲ್ಲಿ ಬರಿ ೫೦ ಮಾರ್ಕಿದ್ದು ಬರೆದಿದ್ದೇನೆ ಅಂದ. ನೂರು ಮಾರ್ಕಿದ್ದು ಬರೆದ ತನಗೇ ೫೦ ಬರುವ ವಿಶ್ವಾಸವಿಲ್ಲ ,ಇನ್ನು ಅವನು ಹೇಗೆ ಪಾಸಾದಾನು?

"ಕ್ಲಾಸಿನಲ್ಲಿ ಕೃಷ್ಣ ಮಾಷ್ಟ್ರು ಫಲಿತಾಂಶ ಓದುವಾಗ ಸುಮ್ಮನೇ ಕುಳಿತುಕೊಳ್ಳಬೇಕೆಂದೂ, ಎಲ್ಲ ಮುಗಿದ ಮೇಲೆ ಏನು ಮಾಡುವುದು ಅಂತ ನೋಡಿದರಾಯ್ತೆಂದೂ" ನಿರ್ಧಾರ ಕೈಗೊಳ್ಳಲಾಯ್ತು. ಸತ್ಯಕ್ಕಾದರೆ ಈ ನಿರ್ಧಾರದ ಒಟ್ಟೂ ಅರ್ಥ ರಾಜನಿಗಾಗಿರಲಿಲ್ಲ. ಆಗಿಲ್ಲ ಅಂತ ಹೇಳುವ ಹಾಗೂ ಇಲ್ಲ. ಸುರೇಸ ಎಲ್ಲದಕ್ಕೂ ತಲೆ ಹಾಕುತ್ತಿದ್ದ. ಅವನ ಪಾಲಿಗೆ ತಾನು ೫ನೇ ಕ್ಲಾಸಿಗೆ ಬಂದದ್ದೇ ದೊಡ್ಡ ವಿಷಯವಾಗಿತ್ತು. ಅವನಪ್ಪ ಇನ್ನು ಅವನನ್ನ ಗದ್ದೆ ಹೂಡುವಾಗ ಕರೆದುಕೊಂಡು ಹೋಗುತ್ತಾರಂತೆ.

೧೦ನೇ ತಾರೀಕು ಬೆಳಗ್ಗೆ ರಾಜನಿಗೆ ಹೊಟ್ಟೆಯೆಲ್ಲ ಸಂಕಟ. ಅಮ್ಮ ಬೇಗನೆ ಎಬ್ಬಿಸಿ,ಕಾಪಿ ಕೊಟ್ಟು, "ಸ್ನಾನ ಮಾಡಿ ಬಾ, ದೇವರಿಗೆ ಕೈ ಮುಗಿ"ಎಂದೆಲ್ಲ ಏನೋ ಹೇಳುತ್ತಿದ್ದಾರೆ. ಎಲ್ಲ ಮಾತುಗಳು ಕಿವಿಯ ಪಕ್ಕದಿಂದ ಸಾಗಿ ಗೋಡೆಗೆ ಬಡಿಯುತ್ತಿರುವ ಸದ್ದು ಮಾತ್ರ ಕೇಳುತ್ತಿದೆ ರಾಜನಿಗೆ. ಅಪ್ಪ ಪೇಪರೋದುತ್ತಿರುವವರು,ಎದ್ದು ಬಂದು ೫೦ರ ನೋಟು ಕೊಟ್ಟು "ಬರುವಾಗ ಶೆಣೈ ಮಾಮನ ಅಂಗಡಿಯಿಂದ ಚಾಕ್ಲೇಟು ತಾ, ಎಲ್ಲರಿಗೂ ಕೊಡುವಿಯಂತೆ" ಅಂದಿದ್ದಾರೆ. ದೇವರೇ ನಾನು ಪಾಸಾಗುತ್ತೇನೆ ಅಂತ ತನಗೇ ವಿಶ್ವಾಸವಿಲ್ಲ , ಅಪ್ಪನಿಗೆ ಹೇಗೆ ಆ ವಿಶ್ವಾಸ ಬಂತು ಅನ್ನುವುದು ಅವನಿಗೆ ತಿಳಿಯುತ್ತಿಲ್ಲ!

ಕ್ಲಾಸಿಗೆ ಬಂದು ಕೂತಿದ್ದಾನೆ ರಾಜ , ಅವನ ಪಕ್ಕ ವಿಷ್ಣು. ಅವ್ನೋ , ಕ್ಲಾಸಿನ ೨ನೇ ರ್‍ಯಾಂಕು ಹುಡುಗ! ಆರಾಮಾಗಿ ಕೂತು ಹಲುಬುತ್ತಿದ್ದಾನೆ. ರಾಜನಿಗೆ ಯಾಕೋ ನಂಬರ್ ಟು ಬರುವ ಅನುಭವ ಬೇರೆ ಆಗುತ್ತಿದೆ. ಸುರೇಸ, ಮಾರ್ಟೀನು ಹಿಂದಿನ ಬೇಂಚಲ್ಲಿ ಕೂತಿದ್ದಾರೆ. ಕೃಷ್ಣ ಮಾಷ್ಟ್ರು ಇನ್ನು ಬಂದಿಲ್ಲ. ಪಕ್ಕದ ೪ನೇ ಕ್ಲಾಸಲ್ಲಿ ಅವರು ಮಾತಾಡುತ್ತಿರುವುದು ಕೇಳುತ್ತಿದೆ. ಸ್ರೀನ್ವಾಸ ಮುಂದಿನ ಬೆಂಚಲ್ಲಿ ಕೂತಿದ್ದಾನೆ, ತನ್ನ ಪುಣ್ಯ, ತಾನಿರುವುದು ೪ನೇ ಬೆಂಚು.

ಕೃಷ್ಣ ಮಾಸ್ತರು ಒಂದು ದೊಡ್ದ ಹಾಳೆ ಸಮೇತ ಕ್ಲಾಸಿಗೆ ಬಂದಿದ್ದಾರೆ. ರಾಜನಿಗೆ ಅವರು ಯಮನಂತೆ ಕಾಣುತ್ತಿದ್ದಾರೆ ಈಗ. "ನಾನು ಹೆಸರು ಹೇಳುವ ಹುಡುಗರೆಲ್ಲ ಎದ್ದು ಹೊರಗಡೆಗೆ ಹೋಗಬೇಕು, ಅವರೆಲ್ಲ ಪಾಸು, ಯಾರ ಹೆಸರು ಕರೆದಿಲ್ಲವೋ, ಅವರು ಫೇಲು" ಅಂತ ಅಂದು ಹಾಳೆ ಬಿಡಿಸಿದ್ದಾರೆ. ಮೊದಲ ಹೆಸರೇ ವಿಷ್ಣು! ಅವನು ಎದ್ದು ಹೋದ. ರಾಜನಿಗೆ ಇದ್ದ ಆಧಾರವೂ ತಪ್ಪಿ ಹೋಯಿತು.ಸ್ವಾತಿ, ರಕ್ಷಾ, ಪ್ರೇಮ.. ಎಲ್ಲ ಹುಡುಗಿಯರ ಹೆಸರುಗಳೇ..ಹಮ್.. ಗಣೇಶ, ಆನಂದ.. ಅಯ್ಯೋ, ತಾನು ಖಂಡಿತಾ ಫೇಲೆಂಬುದು ರಾಜನಿಗೆ ಮನವರಿಕೆಯಾಗಿ ಹೋಯಿತು!

ಅಷ್ಟು ಹೊತ್ತಿಗೆ "ರಾಜ.ವಿ" ಅನ್ನುವ ಹೆಸರು ಕೃಷ್ಣ ಮಾಸ್ತರ ಬಾಯಲ್ಲಿ ಬಂತು ! ರಾಜನಿಗೆಏನು ಮಾಡಬೇಕೆಂದೇ ತಿಳಿಯಲಿಲ್ಲ! ತಾನು ಪಾಸು.. ದೇವರೇ.. ಆದರೆ ಅವನಿಗೆ ಕೂತಲ್ಲಿಂದ ಏಳಲೇ ಆಗುತ್ತಿಲ್ಲ. ಹೇಗೋ ಕಷ್ಟ ಪಟ್ಟು ಎದ್ದು ಹೊರಗೆ ಬಂದು ಬಿಟ್ಟ. ಆಹ್, ಅವನಿಗೆ ಏನೂ ಅನಿಸುತ್ತಲೇ ಇರಲಿಲ್ಲ ಸ್ವಲ್ಪ ಹೊತ್ತು. ಮತ್ತೆ ಕಿರುಚಬೇಕೆನ್ನಿಸಿತು. ಎರಡು ನಿಮಿಷವಾಗಿಲ್ಲ ಸ್ರೀನ್ವಾಸ ಹೊರಗೆ ಬಂದ. ರಾಜನಿಗೆ ಈಗ ಮತ್ತೂ ಖುಷಿಯಾಯಿತು. ಆರನೇ ಕ್ಲಾಸಲ್ಲಿ ಇವನೂ ಇರುತ್ತಾನೆ ಹಾಗಾದರೆ ನನ್ನ ಜೊತೆಗೆ!. ಕಡೆತನಕವೂ ಬರದಿದ್ದವರು ಮಾರ್ಟೀನು ಮತ್ತು ಸುರೇಸ.

ತಾನು ಪಾಸಾದ ಖುಷಿಯೊಳಗೆ ರಾಜನಿಗೆ ಮಾರ್ಟೀನು ಮತ್ತು ಸುರೇಸ ನೆನಪಾಗಲಿಲ್ಲ. ಆದರೆ ಜೇಬಿನೊಳಗಿನ ಅಪ್ಪ ಕೊಟ್ಟಿದ್ದ ೫೦ ರೂಪಾಯಿಯ ನೋಟು ನೆನಪಾಗಿ, ಅವನ ಖುಷಿಯು ಇಮ್ಮಡಿಯಾಯಿತು.

ಸೋಮವಾರ, ಏಪ್ರಿಲ್ 09, 2007

ಸತ್ಯ

ಅವೇ ನಮೂನೆಯ ನಾಲ್ಕು ಕಾಲುಗಳು,
ಎರಡೂ ಮಂಚದ್ದು. ಕಬ್ಬಿಣದ್ದೋ,ಮರದವೋ,
ಅಥವ ಬೇರೆಯ ತರದವೋ.
ಮೇಲಿನ ಪಟ್ಟಿಗಳು ಹಲಸಿನದೋ,ಪ್ಲೈವುಡ್ಡಿನದೋ,
ಏನೋ ಒಂದು.
ಬಣ್ಣ ಒಂದೇ- ಬಿಳಿ,
ಹಾಸಿಗೆಯೊಳಗಿನ ಹತ್ತಿಯದು.
ಹೊರ ಹೊದಿಕೆ ಬಣ್ಣವಿಲ್ಲ ಇಲ್ಲಿ,
ಅಲ್ಲೋ, ನಕ್ಷತ್ರ ಚಿತ್ತಾರ.
ಇಲ್ಲಿ ಮಾಸಿದ ಬಣ್ಣದ ಚಾದರ,
ಅಲ್ಲಿ ಬಣ್ಣಗಳದೇ ಕಲಸು ಮೇಲೋಗರ.
ಸಾಮ್ಯತೆಯೂ, ವ್ಯತಾಸವೂ ಇಷ್ಟೇ:
ಇದು ರುಗ್ಣಶಯ್ಯೆ
ಅದು ಮಧುಮಂಚ!

ಗುರುವಾರ, ಏಪ್ರಿಲ್ 05, 2007

ತೇಜಸ್ವಿ.....

ತೇಜಸ್ವಿ ಇನ್ನಿಲ್ಲವಂತೆ. ನಂಬುವುದು ಹೇಗೆ?

ಅವರ ಮಂದಣ್ಣ , ಕರಿಯಪ್ಪ, ನಾಯಿ ಕಿವಿ, ಪ್ರೊಫೆಸರ್ ಕರ್ವಾಲೋ, ಜುಗಾರಿ ಕ್ರಾಸಿನ ಸುರೇಶ,ಪ್ರೊಫೆಸರ್ ಗಂಗೂಲಿ, ಪ್ಯಾರ , ಲಕ್ಷ್ಮಣ, ಗಯ್ಯಾಳಿ ದಾನಮ್ಮಇವರೆಲ್ಲ ದಿನವೂ ಕಾಣುವಾಗ ಇವರನ್ನ ಸೃಷ್ಟಿಸಿದ ತೇಜಸ್ವಿ ಇಲ್ಲವೆಂದರೆ ನಂಬುವುದು ಹೇಗೆ?
ಮೊನ್ನೆ ಮೊನ್ನೆ ನಾನೇ ಆ ಮಂದಣ್ಣನ ಮದುವೆ ಹೋಗಿ ಬಂದಂತಿದೆ, ಜಗತ್ತನ್ನ ಮಿಲೇನಿಯಮ್ ಸೀರೀಸಿನ ಜೊತೆ, ನನ್ನಂತೆ ಎಷ್ಟೋ ಜನ ಸುತ್ತಿ ಬಂದಿದ್ದಾರೆ. ಮುಂದೆಲ್ಲಿ ಕರೆದೊಯ್ಯುತ್ತಾರೆ ಅಂತ ಕಾಯುತ್ತಿದ್ದ ನಮ್ಮನ್ನ ಬಿಟ್ಟು ಅವರೊಬ್ಬರೇ ಹೋದದ್ದು ಹೇಗೆ?

ಅವರ ತಬರನಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಅವನನ್ನ ಬಿಟ್ಟು ಅವರು ಹೊರಟದ್ದು ಹೇಗೆ?

ಪರಿಸರದ ಬಗ್ಗೆ ಸರಳವಾಗೂ ಮಾತಾಡಬಹುದು ಅಂತ ತೋರಿಸಿಕೊಟ್ಟ ತೇಜಸ್ವಿ, ಯಾರ ಸುದ್ದಿಗೂ ಬರದೇ ಅವರಪಾಡಿಗವರು ಕೂತು ಬರೆಯುತ್ತಿದ್ದ ತೇಜಸ್ವಿ, ಕಾಡಿನ ಬಗ್ಗೆ ನನ್ನಲ್ಲೊಂದು ಮೋಹ ಹುಟ್ಟಿಸಿದ ತೇಜಸ್ವಿ.. ಚಾರಣದ ಆಸಕ್ತಿ ಬೆಳೆಸಿದ ತೇಜಸ್ವಿ...

ಹೀಗೆ ಒಮ್ಮಿಂದೊಮ್ಮೆಗೇ ಎದ್ದು ಹೋಗಿಬಿಡಬಹುದಾ, ಆ ಮಾಯಾಲೋಕಕ್ಕೆ..

ನಾನು ಬಹಳ ಸಣ್ಣವನು ಅವರೆದುರು, ಆದರೆ ಅವರ ಕೃತಿಗಳ ಮೇಲೆ ಪ್ರೀತಿ ದೊಡ್ಡದಿತ್ತು.
ಹೀಗಾಗಬಾರದಿತ್ತು.....

ನನ್ನ ನಮನಗಳು, ಆ ಹಿರಿಯ ಚೇತನಕ್ಕೆ.....

ಅವರ ಪುಸ್ತಕಗಳನ್ನ ಮಕ್ಕಳಿಗೆ ಓದಲು ಕೊಡಿ, ದಯವಿಟ್ಟು. ಅದೇ ಅವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಶೃದ್ಧಾಂಜಲಿ.

ಮಂಗಳವಾರ, ಏಪ್ರಿಲ್ 03, 2007

೧೯೧೫ರಿಂದ..

ಊಟಕ್ಕೆ ಹೋಗಿದ್ದೆವು, ನಾನೂ ನನ್ನ ಕೊಲೀಗು ಪ್ರವೀಣ.

ಅವನು ಯಾವುದೋ ಅಂಗಡಿಯ ಬೋರ್ಡು ನೋಡಿ ಗೊಣಗುತ್ತಿದ್ದ.

"ಏನಾಯ್ತೋ " ?

"ಅಲ್ಲಾ, ಆ ಚಿನ್ನದಂಗಡಿ ಬೋರ್ಡು ನೋಡು since 1915 ಅಂತ ಇದೆ! "

"ಅದಕ್ಕೇನೀಗ"?

"ಅಲ್ಲೇ ಪಕ್ಕಹೋಟೇಲಿನ ಬೋರ್ಡು ನೋಡು since 1930 "

"ಅಯ್ಯೋ ಅವರು ಯಾವಾಗ ಹೋಟೇಲು ಶುರು ಮಾಡಿದರೆ ನಿಂಗೇನೋ?"

ಪ್ರವೀಣ ದೊಡ್ಡ ದನಿಯಲ್ಲಿ ಹೇಳಿದ,

"ಅಲ್ಲಾ ದೇಶ ಇಡಿ ಆವಾಗ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ರೆ, ಈ ನನ್ ಮಕ್ಳು, ಪಾಪಿಗಳು
ಚಿನ್ನದಂಗಡಿ, ಹೋಟೇಲು ಅಂತ ದುಡ್ ಮಾಡ್ತಾ ಇದ್ರಲ್ಲಯ್ಯಾ"!!

ನಾನು ಸುಮ್ಮನೇ ಬಂದೆ!! ಅವನ ಜೋಶ್ ನೋಡಿ ಸ್ವಲ್ಪ ಹೆದರಿಕೆ ಆಯ್ತು!

ಸೋಮವಾರ, ಏಪ್ರಿಲ್ 02, 2007

ಒಂದು ಗ-ಪದ್ಯ

ಮೊನ್ನೆ ಸಿಕ್ಕಾತ ಹೇಳಿದ
ಅವನ ಕನಸುಗಳು ಸತ್ತಿವೆಯಂತೆ..
ನನ್ನ ಕೇಳಿಕೊಂಡ,
ನೀನಾದರೂ ನನ್ನ ಕನಸ ಈಡೇರಿಸು ಅಂತ!
ನನಗೆ ನನ್ನ ಗುರಿಯೆ ತಿಳಿದಿಲ್ಲ,
ಕನಸಂತೂ ಮೊದಲೇ ಇಲ್ಲ.
ಇನ್ನು ಯಾರದೋ ಕನಸಿನ ಭಾರ ನಾನೇಕೆ ಹೊರಲಿ?
ಹೇಳಿಬಿಟ್ಟೆ ಅವನ ಬಳಿ ಹಾಗಂತ.

ಬೇಜಾರು ಮಾಡಿಕೊಂಡಂತೆ ಕಾಣಿಸಿತು,
ನನಗೇನು ಬೇಸರವಿಲ್ಲ..
ದಾಕ್ಷಿಣ್ಯಕೆ ಬಸಿರಾದರೆ ಹೆರಲು ಜಾಗವಿಲ್ಲ.
ನಿಮಗೂ ಸಿಗಬಹುದು ನೋಡಿ ಅವನು
ಮನೆಯ ಬಳಿಯ ಕತ್ತಲ ಮೂಲೆಯಲ್ಲಿ,
ಇಲ್ಲವೆ ನಿತ್ಯ ಟೀ ಕುಡಿಯುವ ಹೋಟೇಲಿನಲ್ಲಿ.
ಸ್ವಲ್ಪ ಜಾಗ್ರತೆಯಿರಲಿ, ಅವನು ಬಲು ಚಾಲಾಕಿ,
ವಿನಂತಿಗಿಂತ ದೊಡ್ಡ ಉರುಳು ಬೇರೊಂದಿಲ್ಲ!

ಶುಕ್ರವಾರ, ಮಾರ್ಚ್ 30, 2007

ನಗುವ ಮುಖದ ಹಿಂದೆ...


ನಾನಾಗ ಎರಡನೇ ವರ್ಷದ ಬಿ ಎ ಓದುತ್ತಿದ್ದೆ. ಎನ್ ಎಸ್ಸೆಸ್ಸು, ಸಾಂಸ್ಕೃತಿಕ ಕಾರ್ಯಕ್ರಮ ಅದೂ ಇದೂ ಮಣ್ಣಾಂಗಟ್ಟಿ ಅಂತ ಕ್ಲಾಸಿಗಿಂತ ಹೊರಗೆ ತಿರುಗುತ್ತಿದ್ದುದೇ ಹೆಚ್ಚು. ನಮ್ಮ ಟೀಮೂ ಚೆನ್ನಾಗಿಯೇ ಇತ್ತು. ಎಲ್ಲರೂ ಖುಷಿ ಖುಷಿಯಾಗಿ ತಿರುಗಾಡುತ್ತಿದ್ದೆವು, ಜಾತ್ರೆ, ನಾಟ್ಕ, ಸಮಾಜ ಸೇವೆ ....

ಒಂದು ದಿನ ನನ್ನ ಜೂನಿಯರ್ ಶಿವಪ್ಪ ಬಂದು "ಬ್ಲಡ್ ಡೊನೇಟ್" ಮಾಡೋರು ಒಂದು ನಾಲ್ಕು ಜನ ಬೇಕಾಗಿತ್ತು ಅಂದ. ಶಿವಪ್ಪ ಅಂದ್ರೆ ನಮಗೆಲ್ಲ ಅಚ್ಚುಮೆಚ್ಚು. ಇಡೀ ದಿನ ನಗು ನಗುತ್ತಾ, ಇದ್ದವರ ಕಾಲೆಳೆದುಕೊಂಡು ಕಾಲೇಜು ತುಂಬಾ ಪುಟು ಪುಟು ಓಡಾಡಿಕೊಂಡಿದ್ದವನು . ಹೃದಯ ಶ್ರೀಮಂತಿಕೆ ಇರುವಾತ. ನಮ್ಮ ಕಾಲೇಜಿನ ಕಲ್ಚರಲ್ ಟೀಮು ಅವನಿಲ್ಲದೇ ಇದ್ದರೆ ಅಪೂರ್ಣ. ಮಿಮಿಕ್ರಿ, ಮೈಮು, ನಾಟ್ಕ, ಯಾವುದಕ್ಕಾದರೂ ಸೈ! ಅವನು ಬ್ಲಡ್ ಡೊನೇಟ್ ಮಾಡೋಕೆ ಕೇಳ್ಕೋತಾ ಇದಾನೆ ಅಂದ ಮೇಲೆ ನಿರಾಕರಿಸೋ ಮಾತೇ ಇರಲಿಲ್ಲ.

ನಮ್ಮ ಕಾಲೇಜಿಗೆ ಈ ತರಹ "ರಕ್ತದಾನ ಮಾಡಿ" ಅಂತ ಮನವಿಗಳು ಯಾವಾಗಲೂ ಬರುತ್ತಿರುತ್ತವೆ. ಒಂದು ಬಾಟಲಿ ರಕ್ತಕ್ಕೆ, ೧೦೦೦ ರೂಪಾಯಿಗಳವರೆಗೆ ಚಾರ್ಜ್ ಮಾಡುತ್ತಾರೆ ಆಸ್ಪತ್ರೆಯವರು. ಯಾರಾದರೂ ದಾನಿಗಳು ದೊರಕಿದಲ್ಲಿ ಅವರ ರಕ್ತ ಪಡೆದುಕೊಂಡು, ರೋಗಿಗೆ ಬೇಕಾದ ರಕ್ತವನ್ನ ೩೫೦-೪೦೦ರೂಗಳಿಗೆ ನೀಡುತ್ತಾರೆ. ಬಡ ಕುಟುಂಬಗಳಿಗೆ ಸಾವಿರಗಟ್ಟಲೆ ಮೊತ್ತವನ್ನು ಭರಿಸುವ ಶಕ್ತಿ ಇರುವುದಿಲ್ಲ. ಕೆಲಬಾರಿ ೨೦-೩೦ ಬಾಟಲಿ ರಕ್ತದ ಅವಶ್ಯಕತೆಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಸಹಾಯಕ್ಕೆ ಬರುವುದು ದೊಡ್ಡ ಸಂಖ್ಯೆಯಲ್ಲಿ ಲಭ್ಯವಿರುವ ಕಾಲೇಜಿನ ಮಕ್ಕಳು. ಹಾಗಂತ ಎಲ್ಲ ಮಕ್ಕಳೂ ರೆಡಿ ಇರುತ್ತಾರೆ ರಕ್ತದಾನಕ್ಕೆ ಅಂತಲ್ಲ, ಒಂದಿಷ್ಟು ಜನರಾದರೂ ಸಿಗುತ್ತಾರೆ ಕಾಲೇಜುಗಳಲ್ಲಿ.

ಈ ಬಾರಿ ನಾನು, ವ್ಯಾಸ, ಮತ್ತೊಂದೆರಡು ಜನ ಹೊರಟೆವು. ಶಿವಪ್ಪ ಅದೇ ಊರಿನವನಾದ್ದರಿಂದ, ಯಾರೋ ಬಂದು ಅವನ ಬಳಿ ಕೇಳಿಕೊಂಡಿರುತ್ತಾರೆ ಅಂತ ಅಂದುಕೊಂಡೆ. ಮಂಗಳೂರಿನ ಬಸ್ಸು ಹತ್ತಿ ಕೂತಾದ ಮೇಲೆ ಗೊತ್ತಾಯಿತು, ಶಿವಪ್ಪನ ತಂದೆಯವರಿಗೇ ಹುಷಾರಿಲ್ಲವಂತೆ ಅಂತ. ಶಿವಪ್ಪನನ್ನ ನೋಡಿದೆ, ಅವನು ಎದುರುಗಡೆ ಸೀಟಲ್ಲಿ ಭಯಂಕರ ಜೋಕು ಹೇಳಿ ಯಾರನ್ನೋ ನಗಿಸುತ್ತಿದ್ದ!

ಮಂಗಳೂರಿನ ಆಸ್ಪತ್ರೆ ತಲುಪುತ್ತಿದ್ದಂತೆ ಶಿವಪ್ಪ ಹೇಳಿದ, ನನ್ನ ತಂದೆಯವರಿಗೆ ಕ್ಯಾನ್ಸರ್ ಆಗಿದೆ, ಅವರಿಗೆ ಆಪರೇಷನ್ ಮಾಡುತ್ತಾರಂತೆ, ನಾಳೆ ನಾಡಿದ್ದಿನ ಹಾಗೆ. ೪-೫ ಬಾಟಲು ರಕ್ತ ಬೇಕಾಗಬಹುದೇನೋ ಅಂತ. ಶಿವಪ್ಪನ ತಂದೆಗೆ ಕ್ಯಾನ್ಸರ್ ಅನ್ನೋದೇ ನನಗೆ ಅರಗದ ವಿಷಯವಾಗಿತ್ತು. ಅವರು ಅಡ್ಮಿಟ್ ಆಗಿ ವಾರಗಟ್ಟಲೆ ಆಗಿತ್ತಂತೆ. ನಮಗ್ಯಾರಿಗೂ ಅದರ ಸುಳಿವು ಕೂಡಾ ಇರಲಿಲ್ಲ. ಅವನು ಕಾಲೇಜಿನಲ್ಲಿ ದಿನಾ "ಗಮ್ಮತ್" ಮಾಡಿಕೊಂಡಿದ್ದ!

ರಕ್ತ ಕೊಟ್ಟಾದಮೇಲೆ ನಾವೆಲ್ಲ ಅವನ ತಂದೆಯನ್ನ ನೋಡಲು ಹೋದೆವು. ಅವರು ಆ ಆಸ್ಪತ್ರೆಯ ತೀರಾ ಸಾಮಾನ್ಯ ವಾರ್ಡಿನ ಮತ್ತೂ ಸಾಮಾನ್ಯ ಬೆಡ್ದೊಂದರ ಮೇಲೆ ಮಲಗಿದ್ದರು. ಮುಖದ ಕ್ಯಾನ್ಸರ್ ಆಗಿತ್ತು . ಮಾತಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ.. ಕಾಯಿಲೆ ಅಷ್ಟು ಉಲ್ಬಣಗೊಂಡಿತ್ತು. ನಮಗೆಲ್ಲ ಅರಿವಾಯಿತು, ಇನ್ನು ಇವರು....

ಶಿವಪ್ಪ ಅವರಿಗೆ ನಮ್ಮನ್ನೆಲ್ಲ ತೋರಿಸಿ, "ನಿಮಗೆ ರಕ್ತ ಕೊಡೋಕೆ ಬಂದಿದ್ದು ಇವರೆಲ್ಲ, ನನ್ನ ಫ್ರೆಂಡ್ಸು.." ಅಂತ ಪರಿಚಯ ಮಾಡಿಕೊಟ್ಟ... ನಾವು ಸುಮ್ಮನೆ ನೋಡುತ್ತ ನಿಂತಿದ್ದೆವು.

ಅವರಿಗೆ ಏನನ್ನಿಸಿತೋ, ಕುಳಿತಲ್ಲಿಯೇ ಕಣ್ಣ ತುಂಬ ನೀರು ತುಂಬಿಕೊಂಡು ನಮಗೆ ಕೈ ಮುಗಿದು ಬಿಟ್ಟರು.

ಶಿವಪ್ಪ ಕಂಬವೊಂದರ ಹಿಂದೆ ನಿಂತು ಕಣ್ಣೊರೆಸಿಕೊಳ್ಳುತ್ತಿದ್ದ. ನಮಗಾರಿಗೂ ಮಾತೇ ಹೊರಡಲಿಲ್ಲ..

ಅವನ ತಂದೆ ಆರ್ತ ಸ್ಥಿತಿಯಲ್ಲಿ ನಮಗೆ ಕೈ ಮುಗಿದ ಆ ಒಂದು ಕ್ಷಣವನ್ನ ನೆನಪಿಸಿಕೊಂಡರೆ ಇವತ್ತಿಗೂ ನನ್ನ ಮನಸ್ಸು ಒದ್ದೆಯಾಗುತ್ತದೆ.

ನಗುವ ಮುಖದ ಹಿಂದಿರುವ ಸತ್ಯದ ದರ್ಶನ ಒಮ್ಮೆಗೇ ಆಗುವುದಿದೆಯಲ್ಲ... ಅಬ್ಬಾ!!

ಬುಧವಾರ, ಮಾರ್ಚ್ 28, 2007

ಶಿಕ್ಷಕರೆಂದರೆ...

ಮಿತ್ರ ರಾಘವೇಂದ್ರ ಹೆಗ್ಡೆ , ನಾನು ಮೊನ್ನೆ ಸಿಕ್ಕಿ- ಸಿಕ್ಕಿದ್ದು ಹರಟುತ್ತಿದ್ದೆವು, ಎಂದಿನಂತೆ. ಮಾತು ಶಿಕ್ಷಕರು, ಅವರ ಬವಣೆಗಳು ಇತ್ಯಾದಿಗಳ ಕುರಿತು ಹೊರಳಿತು. ಅವನೂ ಕೂಡಾ ಪ್ರಾಧ್ಯಾಪಕನೇ, ಆರ್ಟ್ ಕಾಲೇಜಿನಲ್ಲಿ. ನನ್ನ ಅಪ್ಪನೂ ಕೂಡಾ ಅಧ್ಯಾಪಕರೇ ಆಗಿರುವುದರಿಂದ ಅದೂ ಇದೂ ಘಟನೆಗಳನ್ನ ಹಂಚಿಕೊಳ್ಳುತ್ತಿದ್ದೆವು.

ಅವನು ಒಂದು ದಿನ ಯಾವುದೋ ಕ್ಲಿಷ್ಟಕರ ಡಿಸೈನ್ ಮಾಡಿಕೊಂಡು ಹೋಗಿದ್ದನಂತೆ ತರಗತಿಗೆ. ಆ ಇಡೀ ಪಿರಿಯಡ್ಡು ವಿದ್ಯಾರ್ಥಿಗಳು ಅವೇ ಚಿತ್ರ ಬಿಡಿಸಬೇಕು, ಆಮೇಲೆ ಅದರ ಬಗ್ಗೆ ಮಾತಾಡೋಣ ಅನ್ನುವುದು ಪ್ಲಾನು. ಆ ಡಿಸೈನನ್ನು ಅವರೆದುರಿಗಿಟ್ಟು, ನೀವೆಲ್ಲ ಬಿಡಿಸಿ ಅಂತ ಹೇಳಿ ಮುಗಿಸುವುದರೊಳಗೆ, ಒಬ್ಬಾತ ಎದ್ದು, ಕಿಸೆಯಿಂದ ಸಟಕ್ಕನೆ ಮೊಬೈಲ್ ತೆಗೆದು, ಆ ಡಿಸೈನ್ ನ ಫೋಟೋ ತೆಗೆದು "ಸರ್ ನಾನಿದನ್ನ ಎಲ್ಲರಿಗೂ ಮೈಲ್ ಮಾಡ್ತೀನಿ ಸಾರ್, ನೀವೀಗ ಹೊಸ ವಿಷಯ ಹೇಳ್ಕೊಡಿ" ಅಂದನಂತೆ! ರಾಘುವಿನ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿತ್ತು.

ಶಿಕ್ಷಕರ ಶ್ರಮ ಹೆಚ್ಚಾಗಿ ಗಮನಕ್ಕೆ ಬಾರದೆಯೇ ಉಳಿಯುತ್ತದೆ. ಒಂದನೇ ಕ್ಲಾಸು ಓದುತ್ತಿದ್ದಾಗಿನ ಟೀಚರು, ಇನ್ನೂ ಅಲ್ಲಿಯೇ ಇರುತ್ತಾರೆ, ಹೊಸ ಮಕ್ಕಳಿಗೆ ಅ ಆ ಇ ಈ ಕಲಿಸುತ್ತಾ. ನಾವು ಯಾವುದೋ ದೊಡ್ಡ ಕಂಪನಿಯ ಕೆಲಸದೊಳಗಿರಬಹುದು.

ಗುರುರಾಜ ಕರ್ಜಗಿ ಎಂಬ ಕಲಾವಿದರಿಗೆ, ಹುಟ್ಟೂರಿನ ಶಾಲೆಯಲ್ಲ್ಲಿ ಸನ್ಮಾನ ಮಾಡಿದರಂತೆ, ಅವರ ಸಾಧನೆಗಾಗಿ. ಆಗ ಅವರು ಗುರುಗಳ ಬಗ್ಗೆ ಹೇಳಿದ ಮಾತುಗಳಿವು:

"ಶಿಕ್ಷಕರು ಎಂದರೆ ನಮಗೆಲ್ಲ ಒಂದು ತೆರನಾದ ಔದಾಸೀನ್ಯ ಭಾವ. ನಾವು ಬೆಳೆದು ಎಲ್ಲೋ ಹೋಗಿದ್ದರೂ, ಈ ಅಧ್ಯಾಪಕರುಗಳು ಅಲ್ಲೇ ಇರುತ್ತಾರಲ್ಲ ಅಂತ. ಆದರೆ ಸತ್ಯ ಅದಲ್ಲ, ಶಿಕ್ಷಕರು ಅಂದರೆ, 'ಕೈಮರ' (ದಿಕ್ಸೂಚಿ) ಇದ್ದ ಹಾಗೆ. ಅವರು ನೀವು ಈ ಕಡೆ ಹೋಗಿ , ಆ ಕಡೆ ಹೋಗಿ ಎಂದು ದಿಕ್ಕು ತೋರಿಸುತ್ತ ಸದಾ ಕಾಲ ನಿಂತಲ್ಲೇ ನಿಂತಿರುತ್ತಾರೆ. ನಾವು ಅವರು ಹೇಳಿದ ಕಡೆಗೆ ಸಾಗುತ್ತೇವೆ. ಒಂದು ವೇಳೆ ಆ ಕೈಮರದ, ದಿಕ್ಸೂಚಿಯ ದಿಕ್ಕು ಬದಲಾದರೆ, ಅಥವಾ ತಪ್ಪು ದಾರಿ ತೋರಿಸಿದರೆ ಜೀವನ ಪರ್ಯಂತ ಗುರಿ ಮುಟ್ಟದೆ ಅಲೆಯಬೇಕಾಗುತ್ತದೆ"!

ಈ ಮಾತುಗಳಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ!

ಮಂಗಳವಾರ, ಮಾರ್ಚ್ 27, 2007

ಕುಡುಕರ್ ಸಾವಾಸ ಅಲ್ಲ!

ಏನೇ ಹೇಳಿ, ಈ ಕುಡುಕರಿದಾರಲ್ಲ, ಅವರ ಸಹವಾಸ ಮಾತ್ರ ಅಲ್ಲ ನೋಡಿ. ಅವರಿಗೆ ಬೈಯೋ ಹಾಂಗೂ ಇಲ್ಲ, ಬೈದ್ರೆ ಅರ್ಥ ಆಗೋದೋ ಇಲ್ಲ!

ನಾನು ಮತ್ತು ದಯಾನಂದ ಒಂದಿನ ರಾತ್ರೆ ೧೦ ಗಂಟೆ ಸುಮಾರಿಗೆ ಯಾರದೋ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದೆವು. ದಯಾನಂದ ಬೈಕ್ ಹೊಡೀತಾ ಇದ್ದ. ಅದೂ ಇದು ಹರಟೆ ಹೊಡ್ಕೊಂಡು ಅರಾಮಾಗಿ ಬರ್ತಾ ಇದ್ವಿ. ರಸ್ತೆ ಬೇರೆ ಖಾಲಿ ಇತ್ತು. ಶಂಕರ್ನಾಗ್ ಸರ್ಕಲ್ ನ ಅರಳೀ ಮರಕ್ಕೆ ಒಂದು ಸುತ್ತು ಹೊಡೆದು ಮುಂದೆ ಬಂದ್ರೆ, ನಮ್ಮಿಂದ ಒಂದು ೧೦ ಮೀಟರ್ ದೂರದಲ್ಲಿ ಒಬ್ಬ ಕುಡುಕ ಮಹಾಶಯ, ತಾನು ಜೋಲಿ ಹೊಡೆಯುತ್ತ, ತನ್ನ ಜೊತೆ ಇರುವ ಲಡಕಾಸಿ ಸೈಕಲ್ಲನ್ನೂ ಕೂಡ ಹೇಗೋ ಬ್ಯಾಲೆನ್ಸ್ ಮಾಡುತ್ತಾ, ನಡು ರಸ್ತೆಯಲ್ಲಿ ಒದ್ದಾಡುತ್ತಿದ್ದ. ನಾವೇನಾದರೂ ಅದೇ ವೇಗದಲ್ಲಿ ಹೋಗಿದಿದ್ದರೆ ಅವನಿಗೇ ಗುರಿಯಿಟ್ಟು ಢಿಕ್ಕಿ ಹೊಡೆಯೋದು ಖಾತ್ರಿಯಾಗಿತ್ತು. ದಯಾ ಅನಿವಾರ್ಯವಾಗಿ ಬ್ರೇಕ್ ಹಾಕಿದ, ನಾವಿಬ್ಬರೂ ಬಿದ್ದೆವು, ಬೈಕ್ ಸಮೇತ.

ನಾವು ಎದ್ದು, ಬೈಕನ್ನೂ ಎಬ್ಬಿಸಿ, ಧೂಳು ಕೊಡವಿಕೊಂಡು ನಿಲ್ಲುವ ಹೊತ್ತಿಗೆ ಆ ಕುಡುಕ ನಮ್ಮ ಬಳಿಗೇ ಬಂದ, ಅವನ ತಗಡು ಸೈಕಲ್ ಜೊತೆಗೆ, ಮತ್ತು ಬಹಳ ಸವಿನಯದಲ್ಲಿ ಕೇಳಿದ,

"ನಾಯಿ ಅಡ್ಡ ಬಂತಾ ಸಾರ್?, ಭಾಳ ಬೇವರ್ಸಿಗಳು ಈ ನಾಯಿ ಮುಂಡೇವು, ಏನ್ ಮಾಡೋದು ಹೇಳಿ..
ಚೇ, ಎಲ್ಲಾದ್ರು ಪೆಟ್ಟಾಯ್ತಾ?"

ನಮಗೆ ಏನು ಉತ್ತರಿಸಬೇಕೆಂದೇ ತಿಳಿಯಲಿಲ್ಲ!

ಗುರುವಾರ, ಮಾರ್ಚ್ 22, 2007

ಸಲ್ಲಾಪ

ಗೆಳೆಯಾ ನಿನ್ನ ಒಲವ ಮಾತು, ನನ್ನ ಜೀವ ತುಂಬಿದೆ
ಪ್ರೇಮ ಭಾವ ಸುರಿದು ಒಳಗೆ, ನಾನು ಇಲ್ಲೇ ಕರಗಿದೆ

ಎಷ್ಟೇ ಕರಗಿದರು ನೀನು ಕರಗುವುದು ನನ್ನೆದೆಯ ಒಳಗೆ
ಧಮನಿಗಳ ಒಳಸೇರಿ ಹರಿಯುತ್ತಿ,ಜೀವನದ ಕೊನೆಯವರೆಗೆ.

ಅಯ್ಯೋ ಇನಿಯಾ ನಾನು ಯಾಕೆ ದೇಹದೊಳಗೆ ಹರಿಯುವೆ?
ಎದೆಯಗೂಡು ಸಾಕು ನನಗೆ, ಅಲ್ಲೆ ಮುದುಡಿಕೊಳ್ಳುವೆ!

ಆತ್ಮ ಸಖೀ, ನಿನ್ನ ಮುಗ್ಧ ಪ್ರೇಮಕೇನ ಹೇಳಲಿ
ನನ್ನ ಹೃದಯ ಬಡಿತದಲ್ಲಿ ನಿನ್ನ ಹೆಸರೇ ಕೇಳಲಿ.

ಮಾತು ಸಾಕೋ ಸುಮ್ಮನಿರೋ, ಭುಜಕೆ ಹಾಗೇ ಒರಗುವೆ
ನಿನ್ನ ತೋಳ ಬಿಸುಪಿನಲ್ಲಿ, ಜಗವನಿಲ್ಲೆ ಮರೆಯುವೆ.

ಇವತ್ತು "ವಿಶ್ವ ಕವನ ದಿನ"! ಆ ನೆಪದಲ್ಲೊಂದು ಕವನ..

ಮಂಗಳವಾರ, ಮಾರ್ಚ್ 20, 2007

ನಗುವ ಮುದುಕ

ನಾನು ನೋಡುತ್ತಿರುವ ದಿನದಿಂದಲೂ,
ಈ ಮುದುಕ ಹಾಗೆಯೇ ಇದ್ದಾನೆ
ಮಣ್ಣು ಬಣ್ಣದ ಲುಂಗಿ,ಹಳೆಯ ಹರಿದಂಗಿ.
ಜೊತೆಗೊಂದು ಬಾಗಿದ ಬಿದರ ಕೋಲು,
ಅವನಂತೆಯೇ..
ನಡೆಯುತ್ತಲಿರುತ್ತಾನೆ,
ಅವನ ಮನೆಯೆದುರಿನ ಇಳಿಜಾರ ಹಾದಿಯಲಿ.

ಸೋಜಿಗವೆಂದರೆ,
ನಾ ನೋಡಿದಾಗಲೆಲ್ಲ ಇವನು
ನಗುತ್ತಿರುತ್ತಾನೆ, ಹಲ್ಲಿಲ್ಲದ ಬಾಯ ತೋರಿಸುತ್ತಾ,
ಕನ್ನಡಕದೊಳಡಗಿದ ಗುಳಿ ಕಣ್ಣಲ್ಲಿ ದಿಟ್ಟಿಸುತ್ತಾ.
ಮಗ ಮನೆಯಲಿಲ್ಲ,ಹೆಂಡತಿ ಸತ್ತು
ದಶಕವಾಯಿತಂತೆ.
ಹೊತ್ತು ಕೂಳಿಗೆ ಗತಿ ಯಾರೋ,
ಆದರೂ ನಗುತಾನಲ್ಲ ಮುದುಕ
ಅಂತ ಆಶ್ಚರ್ಯ ನನಗೆ!

ದಿನ ಕಳೆದ ಹಾಗೆ ಗೊತ್ತಾಯಿತು,
ಅದು ನಗುವಲ್ಲ, ಮೊಗದ ಸ್ನಾಯು ಬಿಗಿದು,
ನಗುವ ರೂಪ ಪಡೆದಿದೆ!
ಹಾಗಾಗಿ ಆತ ನಗುತ್ತಲೇ ಇರುತ್ತಾನೆ,
ಎಂದೆಂದಿಗೂ..
ಅಚ್ಚಿನೊಳಗಿಂದ ಬಂದ ಮೂರ್ತಿಯಂತೆ!

ಶುಕ್ರವಾರ, ಮಾರ್ಚ್ 16, 2007

"ಹಳದೆಂದು ನೀನದನು ಕಳೆಯುವೆಯ ಮರುಳೆ"

ಅದು ಯುಗಾದಿ. ಸಿಹಿಕಹಿಯನ್ನು ಸಮಾನವಾಗಿ ಸ್ವೀಕರಿಸುತ್ತೇವೆಂಬ ಆಶಯದೊಂದಿಗೆ ಬೇವು-ಬೆಲ್ಲವನ್ನೂ ಹಂಚಿಕೊಳ್ಳುತ್ತೇವೆ. ದೇವಸ್ಥಾನದಲ್ಲೊಂದು ಪೂಜೆ ಮಾಡಿಸಿ, ಹಣ್ಣು-ಕಾಯಿ ಮನೆಗೆ ತಂದು, ಪಾಯಸದ ಊಟ ಮಾಡಿ ಮನೆಮಂದಿಯೆಲ್ಲಾ ಒಟ್ಟಾಗಿ ಕೂತು ಪಂಚಾಂಗ ಶ್ರವಣ ಮಾಡುತ್ತೇವೆ. ಆದರೆ ಎಷ್ಟು ಮನೆಗಳಲ್ಲಿ ಇವೆಲ್ಲಾ ನಿಜವಾಗಿಯೂ ನಡೆಯುತ್ತಿದೆ? ನಮ್ಮ ಯುಗಾದಿ ತೊಡಗುವುದು ಯಾವುದೋ ವ್ಯಕ್ತಿಯ ಜನ್ಮದಿನದಿಂದಲೋ, ಶಕಪುರುಷನ ಪಟ್ಟಾಭಿಷೇಕದಿಂದಲೋ ಅಲ್ಲ. ಮಾನವ ಕೇಂದ್ರಿತವಾದ `ಹುಚ್ಚಾಟ'ಗಳ ಪ್ರದರ್ಶನವೂ ಇದಲ್ಲ. ಇದಕ್ಕೊಂದು ಪಾವಿತ್ರ್ಯ ಇದೆ. ವಸಂತೋದಯದ ಕಾಲ ಇದು. ಸೂರ್‍ಯಚಂದ್ರರ ಗತಿಯನ್ನು ಅವಲಂಬಿಸಿ ಸೌರಮಾನ, ಚಾಂದ್ರಮಾನ ಎಂಬೆರಡು ಯುಗಾದಿಗಳ ಆಚರಣೆ ಹುಟ್ಟಿಕೊಂಡದ್ದು.

ಚಾಂದ್ರಮಾನ ರೀತ್ಯಾ ಹೊಸ ಸಂವತ್ಸರದ ಆರಂಭ ಚೈತ್ರ ಶುದ್ಧ ಪಾಡ್ಯದಂದು. ಇದೇ ಚಾಂದ್ರಮಾನ ಯುಗಾದಿ. ಮೇಷಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ಭೂಮಿಯ ಮೇಲೆ ನಡೆಯುವ ಹಲವು ವೈಜ್ಞಾನಿಕ ಕ್ರಿಯೆಗಳಿಗೆ ಸೂರ್ಯಚಂದ್ರರೇ ಆಧಾರವಾಗಿರುವುದರಿಂದ ಈ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವೂ ಇದೆ.ಆದರೆ ಈಗ ಏನಿದ್ದರೂ ಜನವರಿ ಒಂದೇ ಹೊಸವರ್ಷ. ಡಿಸೆಂಬರ್ ೩೧ರಂದು ರಾತ್ರಿ ಹನ್ನೆರಡರವರೆಗೆ ಕುಡಿದು ಕುಣಿಯುತ್ತಾ ಬರಲಿರುವ ವರ್ಷವನ್ನು ಸ್ವ್ವಾಗತಿಸುವುದೇ ಕ್ರಮವಾಗಿ ಬಿಟ್ಟಿದೆ. ಪಾಡ್ಯ, ಬಿದಿಗೆ ಮೂಲೆಗುಂಪಾಗಿ ನಾವು `ಸಂಡೇ' `ಮಂಡೇ'ಗಳಾಗಿದ್ದೇವೆ. ಒಂದು ನೆನಪಿರಲಿ. ಸಾವಿರಾರು ವರ್ಷಗಳ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾಷೆಗಳೇ ಹುಟ್ಟದಿದ್ದ ಕಾಲದಲ್ಲಿ ನಮ್ಮ `ಆದಿತ್ಯ'ವಾರ (`ಸನ್'ಡೇ) `ಸೋಮ'ವಾರ (`ಮೂನ್'ಡೇ) ಗಳಿದ್ದವು! ರಾಮಾಯಣದ ಕಾಲದಲ್ಲೇ ತಿಥಿ, ನಕ್ಷತ್ರ, ಋತು, ಸಂವತ್ಸರಗಳಿದ್ದವು. ಭಾರತೀಯ ಆಚರಣೆಗಳ ಪ್ರಾಚೀನತೆ ಇವುಗಳಿಂದಲೇ ಅರಿವಿಗೆ ಬರುತ್ತದೆ.

ಮುಸ್ಲಿಂ ರಾಷ್ಟ್ರಗಳಲ್ಲಿ ಈಗಲೂ ಶುಕ್ರವಾರವೇ ರಜೆ. ಕ್ರೈಸ್ತರಿಗೆ ಭಾನುವಾರ ಪವಿತ್ರ. ನಮಗೇ......? ನಾಗರಿಕರಾಗುವ ಭರದಲ್ಲಿ ಅಲ್ಲೂ ಅಲ್ಲದ, ಇಲ್ಲೂ ಸಲ್ಲದ ಎಡಬಿಡಂಗಿಗಳಾಗಿದ್ದೇವೆ. ನಾವು ಎಡವಿದ್ದೇ ಇಲ್ಲಿ. ಬೇರೆ ಸಂಸ್ಕೃತಿಯಲ್ಲಿರುವ ಒಳ್ಳೆಯದನ್ನು ಪಡೆದುಕೊಳ್ಳೋಣ. ನಮ್ಮದನ್ನು ಬಿಡದಿರೋಣ ಎಂಬ ಮನೋಧರ್ಮವೇ ಮಾಯವಾಗಿದೆ. ಬಹು ಸುಂದರವಾದ ನಮ್ಮ ಸಂಸ್ಕೃತಿಯ ಯುಗಾದಿಯಂತಹ ಆಚರಣೆಗಳನ್ನು ಪರಕೀಯರ ಅನುಕರಣೆಯಿಂದ ಮರೆತಿದ್ದೇವೆ. ಇಲ್ಲವೇ ಬಿಟ್ಟುಬಿಟ್ಟಿದ್ದೇವೆ.

ಸಿಹಿಕಹಿ ಹಂಚಿಕೊಳ್ಳುತ್ತಾ ಆರಂಭವಾಗುವ ಯುಗಾದಿ ಎಲ್ಲಿ? ಅಮಲೇರಿ ಕುಣಿಯುವ ಜನವರಿ ೩೧ ಎಲ್ಲಿ?ಕಷ್ಟನಷ್ಟಗಳೆಲ್ಲಾ `ವ್ಯಯ'ಗೊಂಡು ಸರ್ವರಿಗೂ ಜಯ ದೊರಕಲೆಂಬ ಆಶಯದೊಂದಿಗೆ `ಸರ್ವಜಿತ್' ಸಂವತ್ಸರ ಆಗಮಿಸುತ್ತಲಿದೆ. ಹೊಸ ವಸಂತೋದಯದೊಂದಿಗೆ ಹೊಸ ಕನಸುಗಳೂ ಚಿಗುರಲಿ. ಹಳೆಯ ಕನಸುಗಳು ನನಸಾಗಲಿ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ
ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

(ಬರಹ ಕೃಪೆ- ತಂಗಿ ಶ್ರೀಕಲಾ)

ಯುಗಾದಿಗೆ ಏನು ಬರೆಯೋದು ಅಂತ ಆಲೋಚನೆ ಮಾಡ್ತಾ ಇದ್ದಾಗ, ತಂಗಿ ಏನೋ ಬರೀತಿದ್ದಳಲ್ಲ ಅಂತ ನೆನಪಾಯಿತು, ಅವಳ ಬರಹ ಕದ್ದು, ಇಲ್ಲಿ ಹಾಕಿದ್ದೇನೆ! ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಗುರುವಾರ, ಮಾರ್ಚ್ 15, 2007

ಪ್ಲಾಟ್ ಫಾರಂ......

ಭೂಸಾವಾಳದ ರೈಲ್ವೇ ಸ್ಟೇಷನ್ ನ over bridge, ಭಾರತದ ದು:ಸ್ಥಿತಿಯನ್ನು ಬಿಂಬಿಸುವ ಒಂದು ಜಾಗ. ಸುಮಾರು ನೂರು- ನೂರೈವತ್ತು ಮೀಟರ್ ಉದ್ದ ಇರುವ ಈ ಸೇತುವೆ, ದಿನವೂ ಎಷ್ಟೋ ಜನರ ಕಾಲ್ತುಳಿತ ಅನುಭವಿಸುತ್ತದೆ. ಮೂರು ಮೀಟರ್ ಅಗಲದ ಈ ಸೇತುವೆ, ರೈಲು ಬಂದಾಗ ಮತ್ತಷ್ಟು ರಷ್ಶು. ಹೋಗುವುದಕ್ಕೆ ಜಾಗ ಇರುವುದಿಲ್ಲ, ಅಷ್ಟು ಅರ್ಜೆಂಟು ಎಲ್ಲರಿಗೂ. ನೂಕುನುಗ್ಗಲು. ಓಡುವವರು, ನಡೆಯುವವರು, ಕುರುಡರು, ಕುಂಟರು , ದೇಶದ ಎಲ್ಲ ಕಡೆಯ ಜನರು ಬರುತ್ತಾರೆ- ಹೋಗುತ್ತಾರೆ. ಬ್ರಿಡ್ಜ್ ಯಾವಾಗಲೂ ಧಡ್ ಧಡ್ ಸದ್ದು ಮಾಡುತ್ತಲೇ ಇರುತ್ತದೆ.

ಇದೇನೇ ಆದರೂ, ಇಲ್ಲಿನ ಒಂದು ಘಟನೆ ಮಾತ್ರ, ಒಂದು ಕ್ರೂರ ಸ್ವಪ್ನದಂತೆ ನನ್ನ ಮನಸ್ಸನ್ನು ಆವಾಗಾವಾಗ ಹಾದು ಹೋಗುತ್ತಲೇ ಇರುತ್ತದೆ.

ಆ ದಿನ , ಇನ್ನೂ ನೆನಪಿದೆ. ಎಂದಿನಂತೆ ೭.೨೦ರ ದಾದರ್ ಗಾಡಿಯನ್ನು ಹಿಡಿಯಲು ಓಡುತ್ತಿದ್ದೆ. ತನ್ನ ಮಗಳನ್ನು ಮಲಗಿಸಿ ಕುಳಿತಿದ್ದ ಒಬ್ಬ ಹೆಂಗಸು ಇದ್ದಕ್ಕಿಂದ್ದಂತೆ ಅವಳನ್ನು ಎಬ್ಬಿಸಲು ಶುರು ಮಾಡಿದಳು. ಮಗು ಏಳಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸಿದಳು, ಯಾವುದೇ response ಇಲ್ಲ! ಎದೆಯ ಮೇಲೆ ಕೈಯಿಟ್ಟಳು, ಕೈ ಮುಟ್ಟಿ ನೋಡಿದಳು, ಬಹುಶಃ ತಣ್ಣಗಿತ್ತು. ಯಾವುದೇ ಉಸಿರಾಟದ ಲಕ್ಷಣ ಸಹಃ ಕಾಣಲಿಲ್ಲ. ಒಮ್ಮೆಗೇ ತಾಯಿಯ ಮುಖಚರ್ಯೆಯೂ ಬದಲಾಯಿತು. ಜೋರಾಗಿ ಅಳತೊಡಗಿದಳು. ಮಗಳು ಈ ಭೂಮಿಯನ್ನ ತ್ಯಜಿಸಿದ್ದಳು. ರೋದನ ಇನ್ನೂ ಜೋರಾಯ್ತು. ಜನರೆಲ್ಲ ಏನಾಯ್ತೆಂದು ನೋಡಲು ಅವಳನ್ನ ಮುತ್ತಿದರು. " ರೋನಾ ಮತ್ ತೇರಿ ಬೇಟಿ ಮರ್ ಗಯಿ ಹೈ" ಎಂದ ಒಬ್ಬ. "ಹೇ ಶೋರ್ ಬಂದ್ ಕರೋ" ಅಂದ ಇನ್ನೊಬ್ಬ.

ಸ್ವಲ ಹೊತ್ತಿನಲ್ಲಿ RPF ಬಂತು. "ಏಯ್ ಚಲ್ ಹಟ್!! ಲಾಶ್ ಲೇಕೇ ಚಲ್!" ಎಂದು ಗದರಿದರು. ಅವಳು ಸುಮ್ಮನೆ ಮಗಳ ಶರೀರವನ್ನು ಹೊತ್ತು,ಸ್ಟೇಶನ್ ನಿಂದ ಹೊರ ನಡೆದಳು, ಅಳುತ್ತಾ... ನಾನು ಇವನೆಲ್ಲ ನೋಡಿ ಪ್ಲಾಟ್ ಫಾರಂ ನಂಬರ್ ೩ಕ್ಕೆ ಹೋಗಿ, trainನಲ್ಲಿ ಕುಳಿತೆ..

ಮರುದಿನ ಬೆಳಗ್ಗೆ ಎಂದಿನಂತೆ ಪ್ಲಾಟ್ ಫಾರಂ ಇವನ್ನೆಲ್ಲ ಮರೆತು, ಜನರ ಕಾಲ್ತುಳಿತ ಅನುಭವಿಸುತ್ತಾ ಬಿದ್ದುಕೊಂಡಿತ್ತು...

Life is Different than what you think, right?!

( ಈ ಘಟನೆ, ನನ್ನ ಸ್ನೇಹಿತ ನಾಣಿಯ ಅನುಭವ. ಅವನದೇ ಬರಹ ಕೂಡಾ. ನಾನು net ಗೆ ಏರಿಸಿದ್ದೇನೆ , ಅಷ್ಟೆ.)

ಗುರುವಾರ, ಮಾರ್ಚ್ 08, 2007

ಭಾವ-೧೦

ತಮ್ಮ ಪಾತ್ರೆ ಪಗಡ,ಮುರುಕಲು ಕುರ್ಚಿ ಮತ್ತಿತರ ಗಂಟು ಮೂಟೆಗಳ ಸಹಿತ ರಸ್ತೆ ಬದಿಯಲ್ಲಿ ಕುಳಿತಿದ್ದ ಆ ಅಮ್ಮ ,ಮಗಳು ಹೊಟ್ಟೆ ತುಂಬ ನಗುತಿದ್ದರು. ಬದುಕು ಸುಂದರವಾಗಿದೆ,ಅಲ್ಲವೆ?!

ಶುಕ್ರವಾರ, ಮಾರ್ಚ್ 02, 2007

ಹೋಳಿಗೊಂದು ಚಂದದ ಹಾಡು



ಹೋಲಿಗೆ ಎಂಥ ಸುಂದರ ಹಾಡು ನೋಡಿ, ಇದಕ್ಕೂ ಮಿಗಿಲಾದ , ಇಷ್ಟು ಸೊಗಸಾದ ಬಣ್ಣಗಳ ಮಿಶ್ರಣ ಇನ್ನೆಲ್ಲೂ ಕಾಣುವುದಿಲ್ಲ!


ಗೆಳೆಯ ಚಿನ್ಮಯನಿಗೆ ಧನ್ಯವಾದ! ಅವನೇ ಈ ಲಿಂಕು ಕೊಟ್ಟವನು.

ಎಲ್ಲರಿಗೂ ಹೋಳಿಯ- ಕಾಮನ ಹುಣ್ಣಿಮೆಯ ಶುಭಾಷಯಗಳು..

ಎತ್ತಣ ಮಾಮರ..

ನನ್ನ ಹಳೆಯ ಕಂಪನಿಯಲ್ಲಿದ್ದಾಗ ನಡೆದ ಘಟನೆ.

ಒಂದು ದಿನ ಮಧ್ಯಾಹ್ನ, ಯಾವ್ದೋ ನಂಬರ್ ಗೆ ಕಾಲ್ ಮಾಡಿದೆ. ಎಂದಿನಂತೆ ಕೆಲಸ ಖಾಲಿ ಇತ್ತು ( ಸಾಫ್ಟ್ ವೇರ್ ಉದ್ಯಮದಲ್ಲಿ ಯಾವಾಗಲು ಕೆಲಸಗಳು ಖಾಲಿ ಇರುತ್ತವೆ, ಬಿಡಿ). ರಿಂಗ್ ಆಯಿತು. ಫೋನ್ ಆ ಕಡೆಯಿದ್ದದ್ದು ನಡುಗುವ ದನಿ.
"ಸರ್, ಕ್ಯಾನ್ ಇ ಸ್ಪೀಕ್ ಟು ......"
"ಯಾರಪ್ಪಾ ಮಾತಡೋದು?" ಅಚ್ಚ ಕನ್ನಡದಲ್ಲಿ ಉತ್ತರ ಬಂತು.

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಾ ಇದೀನಿ. ಒಂದು ಕೆಲಸದ ವಿಚಾರವಾಗಿ ಇಂತವರ ಬಳಿ ಮಾತಾಡಬೇಕಿತ್ತು ..".

"ಹಮ್, ನಾನು ಅವನ ತಂದೆ ಕಣಪ್ಪಾ" ಅಂದ್ರು.

ಸರ್ ಹಾಗಾದರೆ ನಿಮ್ಮ ಮಗ ಬಂದ ಮೇಲೆ ಒಂದು ಫೋನ್ ಮಾಡೋಕೆ ಹೇಳಿ ಅಂತಂದು, ಮಾತು ಮುಗಿಸುವವನಿದ್ದೆ. ಅವರು,
"ಒಂದು ನಿಮಿಷ ..."ಅಂದ್ರು.

"ನಿಮಗೆ ಈ ನಂಬರ್ರು ಹೇಗೆ ಸಿಕ್ಕಿತು?"- ಅವರ ಬಯೋ ಡಾಟದಲ್ಲಿ ಇತ್ತು. ಅದರಿಂದ ತಗೊಂಡೆ"
"ಅದರಲ್ಲಿ ಬೇರೆ ವಿಳಾಸ ಇದೆಯಾ ನೋಡ್ತೀರಾ?"- ನನಗೆ ಅರ್ಥವಾಗಲಿಲ್ಲ. ಹಾ, ಏನು ಅಂದೆ. ಸಂಬಂಧ ಪಡದವರಲ್ಲಿ ಮಾತು ಲಂಬಿಸಲು ಕಿರಿಕಿರಿ ಅನ್ನಿಸುತ್ತದೆ. ದಿನಕ್ಕೆ ಇಂತಹ ಹಲವು ಫೋನ್ ಮಾಡಬೇಕು.

"ನೀನು ನಂಗೆ ಮಗ ಇದ್ದ ಹಾಗೆ ಕಣಪ್ಪ, ವಿಷಯ ಹೇಳ್ತೀನಿ ಕೇಳು, ನನ್ನ ಮಗ, ಅವರ ಅಮ್ಮನ ಹತ್ತಿರ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ, ಹ್ಯಾಗಾದರೂ ಹುಡುಕಿ ಕೊಡೋಕೆ ಆಗತ್ತಾ?, ಮಗ ಬೆಳೆದು ದೊಡ್ಡವನಾದ ಮೇಲೆ ಏನೆಲ್ಲ ಕಷ್ಟ ಪಡಬೇಕು ನೋಡು.."

ನನಗೆ ಏನು ಹೇಳಲೂ ತೋಚಲಿಲ್ಲ. "ಆಯಿತು ಸಾರ್ ನೋಡ್ತೀನಿ, ಪ್ರಯತ್ನ ಪಡ್ತೀನಿ" ಅಂದೆ , ನನ್ನ ಫೋನ್ ನಂಬರನ್ನ ಆ ಹಿರಿಯರಿಗೆ ಕೊಟ್ಟೆ.

"ನಿನಗೆ ಹೇಗಾದರೂ ಅವನನ್ನ ಕಾಂಟಾಕ್ಟ್ ಮಾಡೋಕೆ ಆಗಬಹುದು, ಈ ನಂಬರು ಸಿಕ್ಕಿದೆ ನಿಮಗೆ, ಬೇರೆ ನಂಬರು ಕಂಡು ಹಿಡಿಯೋದು ಕಷ್ಟವಲ್ಲ ಅಲ್ವೇನೋ " ಅಂದರು. ಏನು ಹೇಳೋಣ ಅವರಿಗೆ?

"ನನ್ನಿಂದ ಆದಷ್ಟು ಪ್ರಯತ್ನ ಮಾಡ್ತೀನಿ ಸಾರ್ ..", ಅಂತೆಲ್ಲ ಏನೇನೋ ಸಮಾಧಾನ ಮಾಡಿ ಫೋನ್ ಇಟ್ಟೆ. ಹೇಗಪ್ಪಾ ಇವರ ಮಗನನ್ನ ಹುಡುಕುವುದು?, ಅಂತ ಅಲೋಚನೆ ಶುರು ಮಾಡಿದೆ, ಏನೋ ಒಂದು ಸಾಹಸ ಕಾರ್ಯ ಮಾಡುತ್ತೇನೆ ಅನ್ನುವ ಖುಷಿ ಹುಟ್ಟಿಕೊಂಡಿತು.

ಒಳ್ಳೆಯ ಉಪಾಯವೂ ಹೊಳೆಯಿತು. ನಾನೂ, ಪ್ರವೀಣ ಎಲ್ಲ ಮಾತಾಡಿ ಒಂದು ಪ್ಲಾನು ರೆಡಿ ಮಾಡಿ, ಆ ಪುಣ್ಯಾತ್ಮನಿಗೆ, ಭಯಂಕರ ಆಮಿಷ ಹುಟ್ಟುವ ಹಾಗೆ, ಒಂದು ಮೇಲ್ ಮಾಡಿದೆವು. ಒಳ್ಳೆಯ ಕಂಪನಿ, ಒಳ್ಳೆಯ ಸಂಬಳ ಹಾಗೇ ಹೀಗೆ ಅಂತ . ಒಟ್ಟಿನಲ್ಲಿ ಆ ಈ- ಮೇಲ್ ನೋಡಿಯೇ ಆತ ನಮ್ಮನ್ನ ಸಂಪರ್ಕಿಸಬೇಕು , ಆ ತರ.

ದಿನಾ ನನಗೆ ಅವನ ಮೇಲ್ ಬಂತಾ ಅಂತ ನೋಡುವುದೇ ಕೆಲಸ. ಒಂದು ವಾರದ ಮೇಲೆ ರಿಪ್ಲೈ ಬಂತು!ಅದರಲ್ಲಿ ಇನ್ಯಾವುದೋ ನಂಬರನ್ನ ಕೊಟ್ಟಿದ್ದ ಅವನು. ಅದಕ್ಕೆ ಫೋನ್ ಹೊಡೆದು ಮಾತಾಡಿಸಿದೆ. ಎಲ್ಲಿದ್ದೀಯಾ ಅಂದಿದ್ದಕ್ಕೆ, "ಬೆಂಗಳೂರು"ಅನ್ನುವ ಉತ್ತರವೇ ಬಂತು. ಅವನ ಹತ್ತಿರ ಮಾತಾಡಿ ಮುಗಿಸಿದ್ದೇ, ಅವರ ತಂದೆಗೆ ಫೋನಿಸಿ, ಈ ಹೊಸ ನಂಬರು ಕೊಟ್ಟೆ. ನಾಲ್ಕು ದಿನ ಬಿಟ್ಟು ಅವರು ನನಗೆ ಫೋನ್ ಮಾಡಿ "ಮಗ ಮನೆಗೆ ಬಂದ ಕಣಪ್ಪ", ಅಂತ ತುಂಬಿದ ಕಂಠದಿಂದ ಹೇಳಿದರು. ಅವರು ಅವನ ಬಳಿ ಏನು ಮಾತಾಡಿದರೋ ನನಗೆ ಹೇಳಲಿಲ್ಲ, ನಾನು ಕೇಳಲೂ ಇಲ್ಲ.

ನಾನು ಒಬ್ಬ ಕ್ಯಾಂಡಿಡೇಟು ಕಳೆದುಕೊಂಡಿರಬಹುದು... ಇರ್ಲಿ ಬಿಡಿ ಪರ್ವಾಗಿಲ್ಲ! ಅಲ್ವಾ?

ಶುಕ್ರವಾರ, ಫೆಬ್ರವರಿ 23, 2007

ನೋಟೀಸು ಪಿರಿಯಡ್ಡು ಮತ್ತು ಉರ್ಲು !

ನಾನು ಸಾಫ್ಟ್ ವೇರ್ ಕಂಪನಿಯ hr ವಿಭಾಗದಲ್ಲಿರುವವನು. ದಿನಾ ಒಬ್ಬರಲ್ಲ ಒಬ್ಬರ ಜೊತೆ ಫೋನಿನಲ್ಲಿ ಮಾತಾಡೋದು, ಸಂದರ್ಶನಗಳನ್ನ schedule ಮಾಡೋದು ಇದ್ದಿದ್ದೇ. ದಿನಾ ಒಂದೇ ತೆರನಾದ ಕೆಲ್ಸ ಆದರೂ, ಏನಾದರೂ ವಿಶೇಷ ಘಟಿಸಿಯೇ ಘಟಿಸುತ್ತದೆ.

ಇಂಟರ್ವ್ಯೂ ಗೆ ಬಾರದ ಕ್ಯಾಂಡಿಡೇಟುಗಳು, ನಾವು ಫೋನಿಸಿದ ಕೂಡಲೇ, ತಮಗೆ accident ಆಗಿ ಬಿಟ್ಟಿದೆಯೆಂದೂ, ಸಿಕ್ಕಾಪಟ್ಟೇ ಪೆಟ್ಟಾಗಿದೆಯೆಂದೂ ಮರುಕ ಹುಟ್ಟಿಸುವ ಭಾಷೆಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ. ಎಂತವನ ಹೃದಯವೇ ಆದರೂ ಕರಗಲೇ ಬೇಕು! "ಸಾರ್, ಸೀವಿಯರ್ ವೂಂಡ್ ಸಾರ್ , ಸಾರಿ ಸಾರ್ " , "ಸರ್ ಐ ಆಮ್ ನಾಟ್ ಏಬಲ್ ಟು ವಾಕ್ ಸರ್, ಐ ವಿಲ್ ಡೆಫೆನೆಟ್ಲ್ಲಿ ಮೇಕ್ ಇಟ್ ಟುಮಾರೋ" ಅಂತೆಲ್ಲ ವದರುತ್ತಾರೆ. ಅವನಿಗೆ ಅದು ಮೊದಲ ಆಕ್ಸಿಡೆಂಟು! ಪಾಪ.. ನಮ್ಮ ಕಿಸೆಯೊಳಗೆ ಇಂತಹ ೫೦- ೬೦ ಆಕ್ಸಿಡೆಂಟುಗಳು ಈಗಾಗಲೇ ಇರುತ್ತವೆ. ಇಂಟರ್ವ್ಯೂ ಗೆ ಬರಲಾಗದ ಶೇಕಡಾ ೭೫% ಜನಕ್ಕೆ ಆಕ್ಸಿಡೆಂಟೇ ಆಗಿರುವುದು ವಿಶೇಷ. ಮತ್ತೆ ಕೆಲ ಜನರ ಸಂಬಂಧಿಕರಿಗೆ ಕಾಯಿಲೆಯಾಗಿರುತ್ತದೆ.... ನಮ್ಮ ಪ್ರವೀಣನೋ, ಸಂತೃಪ್ತಿಯೋ ಫೋನಿಟ್ಟು "ಆಕ್ಸಿಡೆಂಟು" ಅಂದರೆ ಸಾಕು, ಮುಂದೇನೂ ಯಾರೂ ಹೇಳಬೇಕಾಗಿಯೇ ಇಲ್ಲ! ಬಿದ್ದು ಬಿದ್ದು ನಗುವುದೇ ಕೆಲಸ. ನಾನು, ಪ್ರವೀಣ ಇಬ್ಬರೂ ೧೦೦ ಆಕ್ಸಿಡೆಂಟಾದ ಮೇಲೆ ಒಂದು ಸಮಾರಂಭ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ!

ಮೊನ್ನೆ ಒಬ್ಬ ಪುಣ್ಯಾತ್ಮನಿಗೆ ಫೋನ್ ಮಾಡಿದ್ದೆ "ನಿನ್ನ ಈಗಿನ ಸಂಬಳ ಎಷ್ಟು?, ಎಷ್ಟು ಬೇಕು ಎಲ್ಲ ಕೇಳಿಯಾದ ಮೇಲೆ", "What is your notice period" ಅಂದೆ. ( ಬೇರೆ ಕೆಲಸಕ್ಕೆ ಸೇರಲು ಎಷ್ಟು ದಿನ ಬೇಕು ಅಂತ) ಇದು ಎಲ್ಲ ಕಡೆಯೂ, ಎಲ್ಲರೂ ಕೇಳುವ ಅತ್ಯಂತ ಮಾಮೂಲಿ ಪ್ರಶ್ನೆ. ಅದಕ್ಕಾತ," from morning 9 to evening 6pm sir" ಅಂದು ಬಿಡಬೇಕೆ! ನಗು ತಡೆದುಕೊಂಡು , "ನೋ ನೋ, i am asking about your notice period" ಅಂತ ಮತ್ತೊಮ್ಮೆ ಬಿಡಿಸಿ ಹೇಳಿದೆ.. "sometime it varries sir, from 9am till 8-9pm sir", "i am ready to work for overtime".. ಆಹ್! ನಂಗೆ ಬರುವ ನಗು ತಡೆದುಕೊಳ್ಳಲಾಗದೆ, "i will call you later" ಅಂತಂದು ಫೋನ್ ಇಟ್ಟೆ.

ಒಂದಿನ ಬೆಳಗ್ಗೆ ಯಾರೋ ಒಬ್ಬಾತ ,ಫೋನ್ ಮಾಡಿ " ನಿಮ್ಮ ಕಂಪನಿಯ ಉರ್ಲ್ ಕೊಡಿ"ಅಂದ! ಅರೇ, ನಮ್ಮ ಕಂಪನಿ ಸಾಫ್ಟ್ ವೇರ್ ಬಿಟ್ಟು ನೇಣಿನ ಹಗ್ಗ ತಯಾರ್ ಮಾಡೋದು ಯಾವಾಗ ಶುರು ಮಾಡಿತಪ್ಪ ಅಂತ ಅಂದುಕೊಂಡು "ಸಾರಿ, i did'nt get u" ಅಂದೆ. ಅವನೋ ಮತ್ತೆ ಮತ್ತೆ " please give your ಉರ್ಲ್" ಅಂತಿದಾನೆ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು, ಅವನು ಕೇಳಿದ್ದು "url" ಅಂತ. ಯು ಆರ್ ಎಲ್ ನ ಅವನು "ಉರ್ಲ್" ಮಾಡಿ ಬಿಟ್ಟಿದ್ದ!

ಮತ್ತೆ ಯಾರದೋ ಫೋನ್ ಬರ್ತಿದೆ, ಯಾರಿಗೆ ಏನು ಬೇಕೋ, ಎಲ್ಲಿ ಯಾರಿಗೆ ಆಕ್ಸಿಡೆಂಟಾಯ್ತೋ...

ಬುಧವಾರ, ಫೆಬ್ರವರಿ 21, 2007

ಗೆಳತೀ ಎಲ್ಲಡಗಿರುವೆ?

ಎಲ್ಲಿ ಹುಡುಕಲೇ ಗೆಳತಿ ನಾನು ನಿನ್ನ?
ನಿನಗಿಂತ ಸುಲಭದಲಿ ದೊರಕುವುದು ಚಿನ್ನ!

ಕನಸೊಳಗೆ ಹುಡುಕಿದೆ, ಮನಸೊಳಗೆ ಅರಸಿದೆ
ಸಾಗರದ ಗರ್ಭದಲಿ, ಆಳದಾ ಕಣಿವೆಯಲಿ

ಹುಡುಕುಡುಕಿ ಬಳಲಿ ಬೆಂಡಾಗಿ ಹೋಗಿಹೆನು
ಬಿಟ್ಟಿಲ್ಲ ಈ ಜಗದ ಯಾವುದೇ ಮೂಲೆಯನು..

ಆಗಸದ ಆಂತರ್ಯ, ಕತ್ತಲಿನ ಸಹಚರ್ಯ
ವಿಪಿನದಾ ಒಳ ಹೊರಗು ನಿನ್ನ ಹುಡುಕುವ ಕಾರ್ಯ

ಕಳೆದುಕೊಂಡೆನೆ ನಿನ್ನ,ಅಳುವೊಂದೆ ಉಳಿದಿಹುದು
ನೀ ದೊರಕದಿದ್ದರೆ, ಸಾವೊಂದೆ ಗತಿಯಹುದು..

ನಾನಂದು ಹೀಗೆಯೇ ನಿನ್ನ ಧ್ಯಾನದೊಳಿರಲು,
ಕನ್ನಡಿಯನೊಂದನ್ನು ಒಮ್ಮೆಗೇ ನೋಡಿದೆನು

ಅರರೆ! ನಾನಲ್ಲಿ ಕಂಡುದಿನ್ನೇನು?
ನನ್ನ ದೇಹಕೆ ಇಹುದು ನಿನ್ನದೇ ಬಿಂಬ!

ನನ್ನೊಳಗೆ ನೀನೀರುವೆ ಅರಿಯದೇ ಹೋದೆನೇ!
ನಿನ್ನ ಹುಡುಕುವ ತಪ್ಪನಿನ್ನೆಂದೂ ಮಾಡೆನೇ..

(ಮೂಲ ಇಂಗ್ಲೀಷು ಕವನ, ಭಾವಾನುವಾದ).

ಮಂಗಳವಾರ, ಫೆಬ್ರವರಿ 13, 2007

ಈ ಪ್ರೀತಿ ಒಂಥರಾ. . .




ಪ್ರೀತಿ.. ಈ ಪದವೇ ಒಂದು ಸಮ್ಮೋಹಿನಿ, ಅಲ್ವಾ?! ಜಗತ್ತಲ್ಲಿ ಪ್ರಾಯಶ: ಅತ್ಯಂತ ಹೆಚ್ಚು ಚರ್ಚೆಗೊಳಗಾಗುವ, ಮತ್ತು ಇಷ್ಟೊಂದು ಚರ್ಚೆ ಮಾಡಿದ್ರೂ ಯಾರಿಗೂ ಸರಿಯಾಗಿ ಅರ್ಥ ಆಗದ ವಿಷ್ಯ ಅಂದ್ರೆ ಈ ಪ್ರೇಮ ನೋಡ್ರಿ! ಪ್ರತಿ ಒಬ್ಬರ ಬಳಿಯೂ, ಒಂದೊಂದು ತೆರನಾದ ಅಭಿಪ್ರಾಯ ಇದೆ, ಪ್ರೀತಿ,ಪ್ರೇಮದ ಬಗ್ಗೆ. ನಾನು ಏನು ಹೇಳ್ತೀನೋ, ಅದರ ಸಂಪೂರ್ಣ ವಿರುದ್ಧ ಇರಬಹುದು, ನಿಮ್ಮ ಕೋನ. ಪ್ರೀತಿ ಅನ್ನುವ ಈ ಚೇತೋಹಾರಿ ಭಾವ ಇದೆಯಲ್ಲ, ಇದು ಎಲ್ಲರ ಹೃದಯದಲ್ಲೂ ದೀಪ ಬೆಳಗಲೂ ಬಹುದು, ಅಥವ ಕಿಚ್ಚು ಹತ್ತಿಸಲೂಬಹುದು. ಅವರವರ ಭಾವಕ್ಕೆ, ಅವರವರ ಭಕುತಿಗೆ!...

ಬದುಕಿನ ಹಾದಿಯಲ್ಲಿ ಎಲ್ಲರೂ ಒಮ್ಮೆಯಾದರೂ ಪ್ರೀತಿಯ ಸಾಂಗತ್ಯವನ್ನ ಬಯಸಿರುತ್ತಾರೆ, ಬಯಸುತ್ತಾರೆ, ಎಂತವರೇ ಆಗಲಿ.. ಬಾಳ ಪಯಣದ ಪ್ರಯಾಣದಲ್ಲಿ ಸ್ನೇಹಿತರೆಂಬ ಪಯಣಿಗರು ಇದ್ದರೂ, ಕೊನೆ ತನಕ ಜೊತೆ ನೀಡುವ ಸಂಗಾತಿ ಇರಬೇಕೆಂಬ ಆಸೆ ತಪ್ಪಲ್ಲ, ಅಲ್ಲವೇ? ನಮ್ಮ ಏಳು ಬೀಳುಗಳಲ್ಲಿ ಪ್ರೀತಿ ಪಾತ್ರರು ಜೊತೆಗಿದ್ದಾಗ ಆಗುವ ಸಂತಸವೇ ಬೇರೆಯ ತೆರನಾದ್ದು. ಪ್ರೇಮಿಸೋ ಜೀವ, ಬೆನ್ನ ಮೇಲೊಮ್ಮೆ ಕೈಯಿಟ್ಟು ಹಣೆಗೊಂದು ಹೂ ಮುತ್ತು ಕೊಟ್ಟರೆ, ಅದಕ್ಕಿಂತ ಬೇರೆಯ ಸಾಂತ್ವನ ಬೇಕೆ?!


ಪ್ರೀತಿ ಅಂದರೆ ಮನಸುಗಳ ಮಿಲನ. ಪ್ರೀತಿ ಬಿಡದೆ ಕಾಡುವ ಮಗುವಿನ ಹಾಗೆ. ಪ್ರೇಮದ ಕಾರಂಜಿಯ ನೀರು ಎಂದಿಗೂ ಚಿಮ್ಮುತ್ತಲೇ ಇರುತ್ತದೆ. ಪ್ರೇಮಕ್ಕೆ ಯಾವುದೇ ರೂಪವಿಲ್ಲ, ಅದು ನೀರಿನ ಹಾಗೆ. ಹಾಕಿದ ಪಾತ್ರೆಯ ರೂಪವನ್ನೇ ಪಡೆಯುತ್ತದೆ ! ಪ್ರೀತಿ ಆಕಸ್ಮಿಕ, ಕ್ಷಣ ಮಾತ್ರದ ದೃಷ್ಟಿ ಮಿಲನ, ಜೀವನದ ಗತಿಯನ್ನೇ ಬದಲು ಮಾಡಿಬಿಡಬಹುದು!. ಪ್ರೀತಿ ಪರಿಶುದ್ಧ, ದಟ್ಟ ಕಾಡಿನ ಹಸಿರು ಗಿಡದ ಮೇಲಿನ ಇಬ್ಬನಿಯ ಹಾಗೆ.

ಪ್ರೀತಿ ಸೋನೆಮಳೆಯ ಹಾಗೆ, ಬಿಡದೆ ಸುರಿಯುತ್ತಲೇ ಇರಬೇಕು ತುಂತುರು ತುಂತುರಾಗಿ. ದಿನಗಳ ಒಳಗೆ ಪ್ರೀತಿಯನ್ನ ಬಂಧಿಸೋದಕ್ಕಿಂತಾ ದೊಡ್ಡ ಮೂರ್ಖತನ ಬೇರೊಂದಿದೆಯಾ?!ದಿನಾ ಪ್ರೀತಿ ಮಾಡ್ರೀ! ಸುಮ್ ಸುಮ್ನೆ ಯಾಕೆ ಅದ್ಕೆ ಒಂದು ದಿನ ಅಂತ ಇಟ್ಕೊಂಡು ಆಚರಣೆ ಮಾಡಿ ಅದರ ಪವಿತ್ರತೆನ ಹಾಳ್ ಮಾಡ್ತೀರ?! ಪಾಪಾ, ಈ ವಿದೇಶಿಗರಿಗೆ ಯಾವಾಗ ನೋಡಿದ್ರೂ ಸಿಕ್ಕಾಪಟ್ಟೆ ಕೆಲ್ಸ! ಅವರಿಗೆ , ಎಲ್ಲದಕ್ಕೂ ಒಂದು ದಿನ ಬೇಕು. ಅಪ್ಪಂದ್ರ ದಿನ, ಅಮ್ಮಂದ್ರ ದಿನ, ಅಜ್ಜಂದ್ರ ದಿನ .. ಹೀಗೇ! ಪ್ರೀತಿಗೂ ಒಂದು ದಿನವನ್ನ ನಿಗದಿ ಪದಿಸಿ ಬಿಟ್ಟಿದಾರೆ ಅದಕ್ಕಾಗೇನೆ. ಏನ್ ಮಾಡ್ತೀರಾ ಹೇಳಿ! ನಾವೂ ಅದ್ನ ಹಾಗೆ ಶಿರಸಾ ವಹಿ ಪಾಲಸ್ತಾ ಬಂದ್ ಬಿಟ್ಟಿದೀವಿ.

ಪ್ರೇಮಿಗಳ ದಿನದ ತನ್ನ ಅರ್ಥನೇ ಕಳದ್ಕೋತಾ ಇದೆ ಈಗ. ಪ್ರೀತಿನ ವ್ಯಕ್ತ ವಡಿಸುವ ದುಬಾರಿ ವಿಧಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಈ ಆಚರಣೆ. ಹೆಚ್ಚು ಬೆಲೆ ಬಾಳುವ ಕಾಣಿಕೆ ಕೊಡುವಾತ ನಿಜವಾದ ಪ್ರೇಮಿ! ನಾಲ್ಕು ಜನರೆದುರು, ಐ ಲವ್ ಯೂ ಅಂತ ಕಿರಿಚೋನು ಬಹಳ ಗಟ್ಟಿಗ!.. ಪ್ರೇಮವನ್ನ ಹೊರ ಪ್ರಪಂಚಕ್ಕೆ ತೋರಿಸಿಕೊಂಡು ಮಾಡೂವುದು ಒಂದು ಫ್ಯಾಷನ್ನಾಗಿ ಬಿಟ್ಟಿದೆ. ರೇಡಿಯೋ ಚಾನಲ್ಲುಗಳಲ್ಲಿ , ಟಿ.ವಿಗಳಲ್ಲಿ "ಇಂತವಳನ್ನ ಇಷ್ಟಿಷ್ಟು ವರ್ಷಗಳಿಂದ ಹೀಗೀಗೆ ಪ್ರೇಮಿಸುತ್ತಿದ್ದೇನೆ" ಅಂತ ಹೇಳಿಕೊಳ್ಳೋದು ದೊಡ್ದ ಸಾಧನೆ!

ಪ್ರೀತಿಯೂ ಕೂಡಾ ಈ ವ್ಯಾಪಾರೀ ಯುಗದಲ್ಲಿ ಹಣ ಗಳಿಸುವ ಮಾಧ್ಯಮ ಆಗಿಬಿಟ್ಟಿದೆ. ಬೆಸ್ಟ್ ಕಪಲ್ಸದೂ ಇದೂ ಅಂತ ಸ್ಪರ್ಧೆಗಳು ಶುರು ಆಗಿರುತ್ತವೆ, ಈಗಾಗಲೇ! ನಿಜಕ್ಕೂ ಪ್ರೀತಿ ಮಾಡೋರಿಗೆ ಇದೆಲ್ಲದರ ಅವಶ್ಯಕತೆ ಇದೆಯಾ?! ನಿಮ್ಮ ಒಲುಮೆಯ ಜೀವ ನಿಮಗೆ ಬೆಸ್ಟ್ ಆಗಿದ್ದರೆ ಸಾಕು, ಅದನ್ನ ಜಗತ್ತಿಗೆ ತಿಳಿಸುವ ತೋರಿಕೆ ಏಕೆ ಬೇಕು?.. ಪ್ರೀತಿಯನ್ನ ಹೊರ ಜಗತ್ತಿಗೆ ತೆರೆದಿಟ್ಟಷ್ಟೂ, ಅದರ ಬೆಲೆ ಕಡಿಮೆ ಆಗುತ್ತ ಹೋಗುತ್ತದೆ, ಅಲ್ಲವೆ? ನಮ್ಮ ಸೆಲೆಬ್ರಿಟಿಗಳು ಪ್ರೀತೀನ ಮಾಧ್ಯಮಗಳ ಬಾಯಿಗೆ ಬೇಕಂತಲೇ ಕೊಟ್ಟು ಸುಮ್ಮಗೆ ಕೂರುತ್ತಾರೆ!.

ಪ್ರೇಮಿಗಳ ದಿನ ತನ್ನ ಮೂಲ ನೆಲೆಯಿಂದ ಹೊರ ಬಂದು ಏನೇನೋ ಆಗಿ ಬಹು ಕಾಲವೇ ಆಗಿ ಬಿಟ್ಟಿದೆ! ಫಾದರ್ ವ್ಯಾಲಂಟೈನ್ ಯಾರಿಗೂ ನೆನಪಿಲ್ಲ ಈಗ. ಆತನ ತ್ಯಾಗ ಎಲ್ಲೋ ಮಾಯವಾಗೇ ಹೋಗಿದೆ. ಆತನ ಮಾತುಗಳು ಅರ್ಥ ಕಳೆದುಕೊಂದು ಬಿಟ್ಟಿವೆ, ಹೆಸರು ಮಾತ್ರಾ ಹಾಗೇ ಉಳಿದಿದೆ!.

ಹಮ್, ಈಗ ಇನ್ನು ನಾನು ಹೀಗೆಲ್ಲ ಹೇಳೋದ್ರಿಂದ, ಆಚರಣೆ ಏನ್ ಕಡ್ಮೆ ಆಗಲ್ಲ, ನಿಂತೂ ಹೋಗಲ್ಲ.. ಸುಮ್ ಸುಮ್ನೆ ಬುದ್ಧಿ ಹೇಳೋದ್ ಯಾಕೆ?..

ಆದ್ರೆ, ಪ್ರೇಮಿಗಳಾ ದಿನಾನ , ಸ್ವಲ್ಪ ಅರ್ಥಪೂರ್ಣವಾಗಿ ಆಚರಣೆ ಮಾಡೋಕೆ ನೋಡಿ. ದುಬಾರಿ ಗಿಫ್ಟುಗಳನ್ನೆಲ್ಲಾ ಕೊಡಲೇ ಬೇಕಾ? ಪ್ರೀತ್ಸೋ ಹೃದಯಕ್ಕೆ ಲಂಚ ಬೇಕಾಗಲ್ಲ ಅಂತ ಅನ್ಸತ್ತೆ! ಅರ್ಚೀಸು ಗ್ಯಾಲರಿಯ ಬೆಲೆಬಾಳುವ ಗ್ರೀಟಿಂಗ್ ಕಾರ್ಡಿಗಿಂತಾ, ಒಂದು ಪುಟ್ಟ ನವಿಲುಗರಿ ಮನಸ್ಸನ್ನ ಅರಳಿಸಬಲ್ಲದು, ಯಾವುದೋ ಪಬ್‌ನಲ್ಲಿ ಕುಣಿಯುವುದಕ್ಕಿಂತಾ, ಮರದ ನೆರಳಿನ ಕೆಳಗಿನ ಪಿಸುಮಾತು ಪ್ರೀತಿಪಾತ್ರರನ್ನ ಅರ್ಥ ಮಾಡಿಕೊಳ್ಳಲು ಸಹಕರಿಸಬಹುದು. ನರಸಿಂಹ ಸ್ವಾಮಿಯವರ ಗೀತೆಗಳದೋ, ಲಕ್ಷ್ಮಣರಾಯರ ಪ್ರೇಮ ಕವಿತೆಗಳ ಸಿ.ಡಿ ಯೋ, ದುಬಾರಿ ಶಾಪಿಂಗುಗಳಿಗಿಂತ ಬೆಲೆಬಾಳಬಹುದು! ಪ್ರೀತಿ ಬಗ್ಗೆ ಯಾರಾದ್ರೂ ಬರ್ದಿರೋ ಸೊಗಸಾದ ಪುಸ್ತಕ ಕೊಟ್ಟು ನೋಡಿ, ಅದು ನೀವು ಕೊಡೋ ಸುಗಂಧ ದ್ರವ್ಯಗಳಿಗಿಂತ ಹೆಚ್ಚು ಕಾಲ ಇರುತ್ತದೆ!

ಈ ಪ್ರೇಮದ ದಿನದ ಸಂಜೆ ನಿಮ್ಮ ನಲುಮೆಯ ಜೀವದ ಜೊತೆ, ಭುಜ ಆನಿಸಿ ಸುಮ್ಮನೆ ಕುಳಿತು ಮೌನದಲ್ಲೇ ಮಾತಾಡಿ. ನಿಮ್ಮ ಪ್ರೀತಿಯ ಜೀವ, ಬಾಳ ಮುಸ್ಸಂಜೆಯವರೆಗೂ ನಿಮ್ಮ ಜೊತೆ ಹೀಗೇ ಪಕ್ಕದಲ್ಲೇ ಇರಲಿ ಅಂತ ಆಶಿಸುತ್ತೇನೆ. . .





ಗುರುವಾರ, ಫೆಬ್ರವರಿ 08, 2007

ಹೀಗೊಂದು ಪ್ರವಾಸದ ಕಥೆ.

ಬಿದಿರ ಮಟ್ಟಿಗಳನ್ನ ದಾಟಿ ಅಲ್ಲಿಗೆ ಬಂದು ನಿಂತಾಗ , ನಡು ಮಧ್ಯಾಹ್ನ ೨ ಗಂಟೆ. ಹೊಳೆ ದಾಟಿ ಆ ಹಳ್ಳಿಗೆ ಹೋಗಬೇಕೆಂದರೆ ಗಂಟಲು ಹರಿದು ಹೋಗುವ ಥರಾ ಕಿರುಚಬೇಕು ಬೇರೆ. ಹೊಟ್ಟೆ ತುಂಬಾ ಊಟ ಆಗಿದ್ದರಿಂದ ಏನೂ ತೊಂದರೆ ಆಗಲಿಲ್ಲ! ಅರ್ಧ ತಾಸಿನ ಪ್ರಯತ್ನ, ನಾನೂ, ಅನಾ, ಡೀನು ಎಲ್ಲಾ ಬೇರೆ ಬೇರೆ ವಿಧಾನದಲ್ಲಿ ಕಿರುಚಿದೆವು! ಗೋವಿಂದ ರಾಜ್ ಅಂತೂ "ಮಾದಾ, ಕೆಂಚಾ" ಅಂತೆಲ್ಲ ಕರೆದರು, ಆ ಹೆಸರಿನವರು ಖಂಡಿತಾ ಅಲ್ಲಿರುತ್ತಾರೆ ಎಂಬ ಭರವಸೆಯಲ್ಲಿ. ಅಂತೂ ಮೊದಲಿಗೆ ದೂರದಲ್ಲೊಂದು ನಾಯಿ ಕಂಡಿತು, ನಾಯಿಯ ಬೆನ್ನ ಹಿಂದೇ ಮನುಷ್ಯಾಕೃತಿಯೂ ಬಂತು. ಆ ಆಕೃತಿಯ ಹೆಸರು ಕೃಷ್ಣ ಅಂತ ಆಮೇಲೆ ಗೊತ್ತಾಯ್ತು. ಆ ಜೀವ, ಆ ದಂಡೆಯಲ್ಲಿ ಕಟ್ಟಿದ್ದ ದೋಣಿಯೊಂದನ್ನು ಬಿಚ್ಚಿ, ಮೆಲ್ಲನೆ ನಮ್ಮ ತೀರದತ್ತ ಹುಟ್ಟು ಹಾಕತೊಡಗಿತು.


ಹಳೇ ಮರದ ದೋಣಿ ಅದು. ನಾವಾರೂ ಜನರೂ ಕಷ್ಟ ಪಟ್ಟು ಕೂತಾಯ್ತು. ಆತ ಹೇಳುತ್ತಿದ್ದ, "ನಮ್ಮರೇ ಆದ್ರೆ ೧೫ ಜನ ಹಾಕತ್ ನಾವ್" ಅಂತ! ಆ ಇರುಕಲು ದೋಣಿ ಅತ್ತಿತ್ತ ಸ್ವಲ್ಪ ಅಲುಗಾಡಿದರೂ ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುವಷ್ಟು ವಾಲಾಡುತ್ತಿತ್ತು ಬೇರೆ. ಅಂತೂ ಇಂತೂ ಆ ದಡಕ್ಕೆ ಹೋಗಿ ಉಸಿರು ಬಿಟ್ಟಾಯ್ತು.

ಆಹ್! ಎಂತ ಸುಂದರ ತಾಣ ಇದು! ಸುತ್ತುವರಿದ ಗುಡ್ಡಗಳ ಮಧ್ಯೆ, ಒಂದು ಪುಟ್ಟ, ಶಾಂತ ಊರು. ಮೂವತ್ತು ಮನೆಗಳಿವೆ, ಹೆಚ್ಚೆಂದರೆ. ದೋಣಿ ಕೃಷ್ಣ ನಮಗೆ ದಾರಿ ತೋರಿಸಿದ, ಊರೊಳಗೆ ಹೋಗಲು. ಮುಳುಗಡೆ ಊರಲ್ಲಿ ಬದುಕುವ ಕಷ್ಟಗಳ ಬಗ್ಗೂ ಹೇಳಿದ. 'ಒಂದ್ ಕಟ್ ಬೀಡಿಗೆ ೧೦ ಕಿಲೋಮೀಟರ್ ನಡೀಬೇಕು" ಅನ್ನೋದು ಅವನ ಬೇಜಾರು.



ಮೂರು ಸುತ್ತಲೂ ನೀರು, ಇನ್ನೊಂದು ಕಡೆ ನಿರ್ಭಂದಿತ ಪ್ರದೇಶ. ೨ ದಿನಗಳ ಪ್ರವಾಸಕ್ಕೆ ಹೋಗುವ ನಮಗೆ ಬಹಳ ಸಂತಸ ತರುವ ತಾಣ ಇದು.. ಎಲ್ಲೇ ಕಣ್ಣು ಹಾಯಿಸಿದರೂ ಹಸಿರು, ಹರಿಯೋ ನೀರು, ದನ ಕರು, ಗದ್ದೆ.. ಒಳ್ಳೇ ಕಥೆಗಳಲ್ಲಿ ಬರುವ ಊರಿನಂತೇ ಇದೆ . ಆದರೆ ಪಾಪ, ಅಲ್ಲಿರುವವರ ಪಾಡು ಹೇಳ ತೀರದು. ಏನೇ ಬೇಕಾದರೂ ಕಿಲೋಮೀಟರುಗಟ್ಟಲೇ ನಡೀಬೇಕು. ಇನ್ನು ಹೆಚ್ಚು ದಿನ ಇಲ್ಲ ಅವರ ಕಷ್ಟ, ಅದು ಬೇರೆ ವಿಚಾರ.

ನಮ್ಮನ್ನ ಆ ಊರಿನ ವ್ಯಕಿಯೊಬ್ಬರು ಅಲ್ಲೇ ಇರುವ ಜಲಪಾತದ ಕಡೆಗೆ ಹೋಗಲು ಸಹಕರಿಸಿದರು. ಅವರ ಸಂಬಂಧಿಕರ ಮನೆಯಲ್ಲೇ ನಮ್ಮ ಬ್ಯಾಗುಗಳನ್ನ ಇಟ್ಟು ಜಲಪಾತದ ಕಡೆ ಹೊರಟದ್ದಾಯಿತು ನೀರು ಕುಡಿದು, ದಣಿವಾರಿಸಿಕೊಂಡು. ಪ್ರಕೃತಿ ಇಲ್ಲೇ ಮನೆ ಮಾಡಿದ್ದಾಳೆ, ತನ್ನ ಸಂಸಾರ ಸಮೇತ. ಯಾಕೋ ಒಂದು ನಿಗೂಢತೆ ಇದೆ ಈ ಜಾಗದಲ್ಲಿ ಅಂತ ನನಗನ್ನಿಸಿತು. ದಟ್ಟ ಕಾಡು, ಆದರೂ ಜಲಪಾತಕ್ಕೆ ಸಾಗುವ ದಾರಿ ಸುಗಮವಾಗೇ ಇದೆ.



ಅರುಣ, ಸುಬ್ಬಿ ಮತ್ತೆ ಗೋವಿಂದ ರಾಜು ಹಿಂದೇ ಉಳಿದರು. ಗೋವಿಂದ ರಾಜು ವಾರ್ನಿಂಗು ಬೇರೆ, "come back, ಲೇಟ್ ಆದ್ರೆ ಕಷ್ಟ" ಅಂತ. ಅವರ ಬಳಿ ಆಯ್ತು ಸಾರ್ ಅಂತಲೇ ಹೇಳಿ ಮುನ್ನಡೆದದ್ದಾಯ್ತು, ನಾನು, ಡೀನು, ಅನಾ. ಜಲಪಾತದ ಪಾತ್ರದಲ್ಲೇ ಸಾಗಬೇಕು, ಪೂರ್ಣ ಪ್ರಮಾಣದ ಜಲಪಾತವನ್ನ ನೋಡಲು. ನಡು ನಡುವೆ ಪುಟ್ಟ ಪುಟ್ಟ ಮಡುಗಳು, ಝರಿಗಳು ಬೇರೆ.


ಜಲಪಾತ ಸಂಪೂರ್ಣ ಕಾಣುವವರೆಗೂ ತೆರಳಿ , ಚಿತ್ರಗಳನ್ನ ತೆಗೆದು, ಒಲ್ಲದ ಮನಸ್ಸಿನಿಂದ ಹಿಂದೆ ಬಂದು, ಸ್ನಾನದ ಶಾಸ್ತ್ರ ಮಾಡಿ ಮರಳಿ ಊರಿಗೆ ಬಂದದ್ದಾಯ್ತು. ಸಂಜೆಗತ್ತಲಲ್ಲಿ ಸಹೃದಯರೊಬ್ಬರ ಮನೆ ಅಂಗಳದಲ್ಲಿ ಕೂತು ಹರಟಿದ್ದಾಯ್ತು. ಸಂಪೂರ್ಣ ಶಾಂತ, ಈ ಪರಿಸರ. ಪ್ರಾಯಶ: ನಮ್ಮ ಗಲಾಟೆ ಇತರರಿಗೆ ಭಂಗ ತರುತ್ತಿತ್ತೋ ಏನೋ!. ನಾನೂ, ಡೀನು ಮನೆಯಿಂದ ಹೊರಟು ಹೊರಗಿನ ಗದ್ದೆ ಬಯಲಲ್ಲಿ ತಿರುಗಾಡುತ್ತಿದ್ದೆವು.. ಹೀಗೇ ಮಾತಾಡುತ್ತಾ ಮೇಲೆ ನೋಡಿದರೆ, ಬೆಟ್ಟವೊಂದರ ಮರೆಯಿಂದ ಮೂಡುತ್ತಿರುವ ಬೆಳ್ಳಿ ಚಂದ್ರ!. ನನ್ನ ಜೀವನ ಅತ್ಯಂತ ಸುಂದರ ಚಂದ್ರೋದಯ ಅದು. ಡೀನ್ ಖುಷಿಯಲ್ಲಿ ಹೇಳುತ್ತಿದ್ದರು " ಹೋದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೂ ಇಂತಹುದೇ ಚಂದ್ರೋದಯ ನೋಡಿದೆ" ಅಂತ.

ಚಂದಿರನ ಬೆಳಕಲ್ಲಿ ಎಲ್ಲ ಕೂತು ಹರಟಿ, ಸೊಗಸಾದ ಊಟವನ್ನೂ ಮುಗಿಸಿ ಮಲಗಿದೆವು, ಗೋವಿಂದರಾಜರ ಗೊರಕೆಯ ಹಿಮ್ಮೇಳದ ಜೊತೆ! ಅವರ ಗೊರಕೆ ನಿಲ್ಲಿಸಲು ನಾನು ಏನೆನೆಲ್ಲ ಪ್ರಯತ್ನ ಮಾಡಿದೆ, ಆದರೆ ಯಶಸ್ವಿಯಾಗಲಿಲ್ಲ.

ಬೆಳಗ್ಗೆದ್ದು ನೋಡಿದರೆ ಅನಾ, ಗದ್ದೆ ಬದುವಿನ ಕೂತು, ಯಾವುದೋ ಒಂದು ಬೆಟ್ಟವನ್ನೇ ದಿಟ್ಟಿಸುತ್ತಿದಳು. ( ಯಾವುದೋ ಒಂದು ಅಂತ ಯಾಕೆ ಅಂದೆ ಅಂದ್ರೆ, ಇಲ್ಲಿ ಸುತ್ತಲೂ ಬೆಟ್ಟಗಳೇ ಇರೋದು)ಏನು ನೋಡುತ್ತಿದ್ದೀಯಾ ಅಂದಿದ್ದಕ್ಕೆ, "ಹಂತ ಹಂತವಾಗಿ ಬೆಳಗಾಗುವದನ್ನ ನೋಡ್ತಾ ಇದೀನಿ, ನಿಧಾನವಾಗಿ ಬೆಳಗಾಗ್ತಾ ಇದೆ".. ಅಂತೆಲ್ಲ ಏನೋ ಅಂದಳು. ನಾನೂ ಸ್ವಲ ಹೊತ್ತು ಕೂತು ಅದನ್ನ ನೋಡಿ, ಮತ್ತೆ ಬಂದು ಮಲಗಿದೆ. ಸ್ವಲ್ಪ ಹೊತ್ತಿಗೇ ಸ್ಲೀಪಿಂಗ್ ಬ್ಯಾಗುಗಳಿಂದ ಎಲ್ಲ ಜೀವಿಗಳೂ ಹೊರ ಬಂದವು.




ಉಪಹಾರಕ್ಕೆ ಭರ್ಜರಿ ನೀರುದೋಸೆ. ಎಂದೂ ಹಾಲು ಹಾಕಿ ಮಾಡಿದ ದ್ರವ ಪದಾರ್ಥ ಕುಡಿಯದ ಡೀನ್, ಇಲ್ಲಿ ಕಷಾಯ ಕುಡಿದುಬಿಟ್ಟರು.ಆ ಹಿರಿಯರು ನಮಗೆ ಆ ಊರಿನ ದೇವಸ್ಥಾನ ತೋರಿಸುತ್ತೇನೆ ಅಂತ ಅಂದಿದ್ದರು. ಮನೆಯೊಡತಿಗೆ ವಂದನೆ ಸಲ್ಲಿಸಿ, ಅಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟಿದ್ದಾಯ್ತು.
ಜಲಪಾತದಿಂದಲೇ ಬರುವ ಹಳ್ಳ ದಾಟಿ, ದೇವಸ್ಥಾನಕ್ಕೆ ಬಂದೆವು.


ಸಣ್ಣ ಅಂದ್ರೆ ಸಣ್ಣ ದೇವಸ್ಥಾನ ಇದು. ಗರ್ಭಗುಡಿಯಲ್ಲಿರುವ ಲಿಂಗ ರಾಮಲಿಂಗೇಶ್ವರನದು. ರಾಮ- ಸೀತೆ ಇಲ್ಲಿ ಲಿಂಗ ಸ್ಥಾಪನೆ ಮಾಡಿದರೆಂದೂ, ನಂತರ ಪಾಂಡವರು ಈ ದೇವಸ್ಥಾನ ಕಟ್ಟಿದರೆಂದೂ ಊರವರು ಐತಿಹ್ಯ ಹೇಳುತ್ತಾರೆ.ಹೊರಗಡೆ ಒರಟು ಕಲ್ಲಿನಂತೆ ಕಂಡರೂ ಗರ್ಭಗುಡಿಯ ಒಳಮೈ ನುಣುಪಾಗಿದೆ. ಈ ಕುಗ್ರಾಮದಲ್ಲಿರುವ ದೇವಳವೂ, ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದು ಸ್ಪಷ್ಟವಿದೆ. ಅಂಗಳದಲ್ಲಿನ ನಂದಿ, ಗರ್ಭಗುಡಿಯ ಹೊರಗಿರುವ ಪಾರ್ವತಿ(?) ಯ ವಿಗ್ರಹಗಳು ದುರುಳರ ಹೊಡೆತಕ್ಕೆ ಸಿಕ್ಕಿವೆ.









ಇಲ್ಲಿನ ದೇವಳದ ಆವರಣದಲ್ಲಿ ವೀರಗಲ್ಲುಗಳೂ ಇವೆ. ಆ ವೀರಗಲ್ಲುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ಸಿಗಲಿಲ್ಲ.




ಇನ್ನು ವಾರ ಬಿಟ್ಟರೆ, ಅಲ್ಲಿನ ದೇವರಿಗೆ ಜಾತ್ರೆಯ ಸಂಭ್ರಮ. ನಾಲ್ಕಾರು ಜನ ಸೇರಿ ದೇವಸ್ಥಾನದ ಆವರಣವನ್ನು ಸಗಣಿ ಸಾರಿಸಿ ಶುಚಿ ಮಾಡುತ್ತಿದ್ದರು. ಒಬ್ಬ ಸಣ್ಣ ಹುಡುಗ,ನಾನು ಫೋಟೋ ತೆಗೆಯುದನ್ನೇ ಕುತೂಹಲದಿಂದ ನೋಡುತ್ತಿದ್ದ. ಅವನ ತಂಗಿಯನ್ನೂ ಕರೆತಂದು ತೋರಿಸಿದ. ಅವನ ಫೋಟೋ ತೆಗೆದು ತೋರಿಸಿದೆ. ಇಷ್ಟಗಲ ಬಾಯಿ ಬಿಟ್ಟು ನಕ್ಕ.


ನಮ್ಮ ಜೊತೆ ಬಂದವರು ಅಲ್ಲಿಂದ ನಾವು ಹೇಗೆ ಮುಂದುವರಿಯಬೇಕು ಅಂತ ದಾರಿ ತೋರಿಸಿದರು. ಅವರಿಗೆ ಮನ:ಪೂರ್ವಕ ಕೃತಜ್ಞತೆಗಳನ್ನ ತಿಳಿಸಿ, ಭಾರ ಬ್ಯಾಗುಗಳ ಜೊತೆ, ಅಲ್ಲೇ ಕೂತಿದ್ದ ನಮ್ಮ ಭಾರ ಮನಸ್ಸುಗಳನ್ನು ಹಠ ಮಾಡಿ ಎಬ್ಬಿಸಿ ಕರೆದುಕೊಂಡು ಹೊರಟೆವು, ಕಳೆದ ದಿನವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ..