ಶುಕ್ರವಾರ, ಜನವರೀ 04, 2013

ಅವಸ್ಥಾಂತರ



ದುರ್ಗಾ ಬಸ್ಸು ಬೆಳಿಗ್ಗೆ ಏಳೂವರೆಗೆ ಗೋಳಿಬೈಲಿನ ಏರನ್ನು ಹತ್ತಿ ಊರೊಳಗೆ ಬರುವುದಕ್ಕೂ ನಾರಾಯಣ ಶೆಟ್ಟರು ತನ್ನ ಅಂಗಡಿಯ ಮರದ ಬಾಗಿಲುಗಳನ್ನ ತೆಗೆದು ಹೊರಗೆ ಉಪ್ಪಿನ ಮರಿಗೆಯ ಪಕ್ಕದಲ್ಲಿ ಜೋಡಿಸಿಡುವುದಕ್ಕೂ ಸರಿಯಾಗುತ್ತದೆ. ಬಸ್ ಡ್ರೈವರ್ ಅಬ್ದುಲ್ಲ ಒಂದು ಕೈಯಲ್ಲಿ ಸ್ಟೇರಿಂಗ್ ತಿರುಗಿಸುತ್ತಲೇ ಮತ್ತೊಂದು ಕೈಯಲ್ಲಿ ಪೇಟೆಯಿಂದ ತಂದ ದಿನಪತ್ರಿಕೆಯನ್ನ ಸೊಯ್ಯಂದು ಶೆಟ್ಟರ ಅಂಗಡಿಯೊಳಕ್ಕೆ ಎಸೆಯುತ್ತಾನೆ. ಒಂದು ದಿನಕ್ಕಾದರೂ ಪೇಪರನ್ನು ತಾವಾಗೇ ಓದದ ಶೆಟ್ಟರು, ಅದನ್ನ ಹೊರಗೆ ಬೆಂಚಿನ ಮೇಲಿಟ್ಟು ಇಪ್ಪತ್ತು ವರ್ಷಗಳಿಂದ ಪೂಜಿಸುತ್ತ ಬಂದಿರುವ ಲಕ್ಷ್ಮಿಯ ಫೋಟೋಗೆ ದೀಪ ಹಚ್ಚಲು ಹೋಗುತ್ತಾರೆ. ಆ ಲಕ್ಷ್ಮಿಯ ಮುಖದ ಭಾಗ ಬಿಟ್ಟು ಉಳಿದಷ್ಟೂ ಗಾಜು ದೀಪ ಮತ್ತು ಊದುಬತ್ತಿಯ ಹೊಗೆಯಿಂದ ಜಡ್ಡು ಹಿಡಿದು ಕಪ್ಪಾಗಿ ಹೋಗಿದೆ. ಅಂಗಡಿಯ ಹೊರಗಿನ ತುಂಡು ಮಣ್ಣಿನ ಜಾಗಕ್ಕೆ ನೀರೆರಚಿ, ಒಂದು ರೌಂಡು ಗುಡಿಸಿ, ಒಳಗೆಲ್ಲೋ ಇರಿಸಿದ ಎಂದೂ ಒಂದೂ ಇಲಿ ಬೀಳದ ಬೋನನ್ನು ಅದರೊಳಗಿನ ಕಮಟು ಕಾಯಿ ಚೂರು ಸಮೇತ ಎತ್ತಿ  ಬದಿಗಿಡುತ್ತಾರೆ. ಕಳೆದ ಇಪ್ಪತ್ತೆರಡು ವರ್ಷಗಳಿಂದ ಶೆಟ್ಟರು ಯಾಂತ್ರಿಕವಾಗಿ ಇವಿಷ್ಟು ಕೆಲಸವನ್ನು ಯಾವುದೇ ಬದಲಾವಣೆಯಿಲ್ಲದೇ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಇಪ್ಪತ್ತು ವರುಷಗಳಲ್ಲಿ ಅವರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಹೆಂಡತಿ ಅಚಾನಕ್ಕಾಗಿ ಸತ್ತು, ಮಗ ಸಂಜೀವ ಬೆಳೆದು ದೊಡ್ಡವನಾಗಿ, ಮದುವೆಯನ್ನೂ ಮಾಡಿಕೊಂಡು ಮಂಗಳೂರಿನ ಇನ್ಪೋಸಿಸ್ ನಲ್ಲೇ ಕೆಲಸಕ್ಕೂ ಸೇರಿಕೊಂಡು ಈಗ ಒಂದಾರು ತಿಂಗಳ ಮಟ್ಟಿಗೆ ಅಮೆರಿಕಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೆಂಡತಿ ಸಮೇತ ಹೋದವನು ವಾಪಸ್ಸು ಬರದೇ ಎರಡು ವರ್ಷ ಕಳೆದಿದೆ. ಒಂದು ಕಾಲದಲ್ಲಿ ಸಂಸಾರಸ್ಥರಾಗಿದ್ದ ಶೆಟ್ಟರು ಈಗ ಒಂಟಿಯಾಗಿ ಬದುಕು ಸಾಗಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೆಂಡತಿ ಹೋದ ಮೇಲೆ ಶೆಟ್ರು ಜಾಸ್ತಿ ಮಾತಾಡುದಕ್ಕೆ ಶುರು ಮಾಡಿದ್ದಾರೆ ಅಂದುಕೊಂಡ ಊರ ಜನ, ಮಗ ಅಮೆರಿಕಕ್ಕೆ ಹೋದ ಮೇಲೆ ಅವರು ಮೊದಲಿಗಿಂತ ಹೆಚ್ಚು ವಟವಟ ಅನ್ನುವುದಕ್ಕೆ ಆರಂಭಿಸಿದ್ದನ್ನು ಸಹಿಸಿಕೊಂಡಿದ್ದಾರೆ. ಹಾಗೆ ಸಹಿಸಿಕೊಂಡಿದ್ದಕ್ಕೆ ಶೆಟ್ಟರು ತಮ್ಮ ದಿನಸಿ ಅಂಗಡಿಯಲ್ಲಿ ಸಾಲ ಕೊಡುವುದೂ ಒಂದು ಕಾರಣ. ಯಾಕೆಂದರೆ ಬಸ್ಟ್ಯಾಂಡ್ ಪಕ್ಕ ಅಂಗಡಿಯ ಕಿಣಿ ಮಾಮ್, ಜಪ್ಪಯ್ಯ ಅಂದರೂ ಸಾಲ ಕೊಡುವ ಜನ ಅಲ್ಲ.
ಕಿಣಿ ಮಾಮ್, ಯಾನೆ ನರಸಿಂಹ ಕಿಣಿ ಗೋಳಿಬೈಲಿಗೆ ನಾರಾಯಣ ಶೆಟ್ರಿಗಿಂತ ಹಳೆಯ ತಲೆ. ಶೆಟ್ಟರು ದಿನಸಿ ಅಂಗಡಿ ಹಾಕುವ ಹತ್ತು ವರ್ಷಕ್ಕೆ ಮೊದಲೇ, ಎಮರ್ಜೆನ್ಸಿ ಕಾಲ ಮುಗಿದಾವಾಗ ಕಿಣಿ ತಮ್ಮ ವೆಂಕಟರಮಣ ಸ್ಟೋರ್ಸ್ ಅನ್ನು ಶುರು ಮಾಡಿದ್ದರು. ಮೊದಲಿಗೆ ಅಂಗಡಿಯ ಮುಂದೊಂದು ಕಡಿಮಾಡು ಇಳಿಸಿ ಚಾ ತಿಂಡಿ ಕೂಡ ಕೊಡುತ್ತಿದ್ದರಾದರೂ ಕೊನೆಗೆ ಕೈಲಾಗದೇ ಅದನ್ನ ಕೈದು ಮಾಡಿದ್ದರು. ಅಷ್ಟೊತ್ತಿಗೇ ಬಸ್ಟ್ಯಾಂಡಿನ ಮುಂದೆಯೇ ಸುಬ್ಬಣ್ಣ ಭಟ್ಟರು ಅಧಿಕೃತವಾಗಿಯೇ ಶ್ರೀ ದೇವಿ ಊಟದ ಹೋಟೇಲನ್ನು ಆರಂಭಿದ್ದರು. ಹಾಗಾಗಿ ಊರಿನ ಜನಕ್ಕೆ ಬೆಚ್ಚ ಗೋಳಿಬಜೆ ಸಿಗಲಿಕ್ಕೆ ಸಮಸ್ಯೆ ಏನೂ ಆಗಲಿಲ್ಲ. ಕಿಣಿ ಮಾಮ್ ಭಾರಿ ಲೆಕ್ಕದ ಮನುಷ್ಯ. ಇವತ್ತಿಗೂ ಅವರು ಪೇಪರು ತರಿಸುವುದಿಲ್ಲ. ಮನೆಯಲ್ಲಿ ಟಿವಿ ಕೂಡ ಇಲ್ಲ. ಹಳೆ ರೇಡಿಯೋ ಮಾತ್ರ ಸೇವೆಯಲ್ಲಿದೆ. ಇನ್ನು ಅರ್ಧ ಪೈಸೆ ಕೂಡ ಅವರ ಗಲ್ಲೆಯಿಂದ ಹೆಚ್ಚು ಕಡಿಮೆ ಆಗುವ ಚಾನ್ಸೇ ಇರಲಿಲ್ಲ. ಅಷ್ಟು ಹುಶಾರ್.ನೋಡಲಿಕ್ಕೆ ಕಡ್ಡಿಯಂತಿದ್ದರೂ ಧ್ವನಿ ಮಾತ್ರ ಕಿಲೋಮೀಟರು ದೂರಕ್ಕೂ ಕೇಳೀತು. ಕುಶಾಲಿಗೆ ಅಂತ ಕೂಡ ಅವರು ಯಾರಿಗಾದರೂ ಎರಡು ಗ್ರಾಂ ಹೆಚ್ಚಿಗೆ ತೂಕ ಮಾಡಿ ಕೊಟ್ಟವರಲ್ಲ. ಹಾಗಂತ ಮೋಸ ಮಾಡುವ ಜನವೋ, ಅದೂ ಅಲ್ಲ. ಅವರ ಕಡಕ್ ವ್ಯಾಪಾರದ ಬುದ್ಧಿಯಿಂದಲೇ ಮೇಲೆ ಬಂದಿದ್ದು ಅಂತ ಊರಲ್ಲಿ ಅವರಿಗೊಂದು ಗೌರವ ಉಂಟು. ಮಗಳನ್ನ ಮಂಗಳೂರಿನ ಪ್ರಸಿದ್ಧ ಲಾಯರೊಬ್ಬರ ಮಗನಿಗೆ ಮದುವೆ ಮಾಡಿ ಕೊಟ್ಟು, ಮಗ ಮಣಿಪಾಲದ ಬ್ಯಾಂಕೊಂದರಲ್ಲಿ ಕೆಲಸ ಹಿಡಿದು ಕೈ ತುಂಬ ದುಡಿಯಲು ತೊಡಗಿ ಅವನಿಗೂ ಮದುವೆಯಾಗಿ ಮೊಮ್ಮಕ್ಕಳು ಬಂದರೂ, ಕಿಣಿ ಮಾಮ್ ಅಂಗಡಿ ನಡೆಸುವುದು ಬಿಟ್ಟಿಲ್ಲ. ಹಾಗಂತ ಅಂಗಡಿ ನಡೆಸಲಿಕ್ಕೆ ಮನಸ್ಸಿದೆ ಅಂತಲ್ಲ. ಅವರ ಹೆಂಡತಿ ಕಳೆದ ಆರೆಂಟು ವರ್ಷಗಳಿಂದಲೇ ಅಂಗಡಿ ಯಾರಿಗಾದರೂ ಕೊಡಿ ಎಂದ ದಿನವೂ ಕೊರೆದರೂ ಇವತ್ತು ನಾಳೆ ಎಂದು ಅದನ್ನ ಮುಂದೆ ಹಾಕುತ್ತಲೇ ಬಂದಿದ್ದಾರೆ.
ಕಿಣಿ ಮಾಮ್ ಗೆ ಈಗ ವರ್ಷ ಸುಮಾರು ಅರವತ್ತೈದು ಕಳೆದಿದ್ದರೂ ಹಳೆಯ ಜಾಪು ಬಿಟ್ಟಿಲ್ಲ. ಇವತ್ತಿಗೂ ಅದೇ ಗತ್ತು. ಅಂಗಡಿಗೆ ಬಂದ ಮನುಷ್ಯ ಏನು ಐಟಮ್ ಬೇಕು ಅಂತ ಹೇಳಬೇಕು, ಇವರು ಅದನ್ನ ಪಟಪಟ ಅಂತ ಕಟ್ಟಿ ಕೊಡಬೇಕು. ದುಡ್ಡು ಕೊಟ್ಟ ಮೇಲೆ ಅವ ಹೆಚ್ಚಿಗೆ ಏನೂ ಮಾತಾಡದೇ ಹೊರಟು ನಡಿಯಬೇಕು. ಸುಮ್ಮನೆ ಮತ್ತೆ ಕಿಣಿಯವರೇ ಭಾರಿ ಸೆಕೆ ಅಲ್ವಾ, ನಾಳೆ ಮಳೆ ಬರ್ತಾದಾ ಹೇಗೆ, ಎಂಚಿನ ಅವಸ್ಥೆ ಮಾರಾಯಾರೇ ಅಂತೆಲ್ಲ ಹಲುಬಿದರೋ, “ಎಪ್ರಿಲಲ್ಲಿ ಸೆಕೆ ಇಲ್ಲದೆ ಮತ್ತೆಂತ ಚಳಿ ಆಗ್ತದನ? ಮಳೆ ನನ್ನ ಕಂಕುಳಲ್ಲಿ ಉಂಟಾ, ಬಂದ್ರೆ ಬಂದೀತು ಸುಮ್ನೆ ಹೋಗಿ ಮಾರಾಯರೇ ಅಂತ ಬೈದು ಕಳಿಸಿಯಾರು. ಆದರೆ ಎಲ್ಲರ ಹತ್ತಿರವೂ ಹಾಗೆ ಮಾಡ್ತಾರೆ ಅಂತಲ್ಲ, ಒಂದಿಷ್ಟು ಲೆಕ್ಕದ ಜನ. ಶಾಲೆಯ ಹೆಡ್ ಮಾಸ್ಟ್ರು ರಾಂಭಟ್ರು, ಹೋಟೆಲಿನ ಸುಬ್ಬಣ್ಣ, ಪೋಸ್ಟ್ ಮಾಸ್ಟರ್ ದೂಜ ಪೊರ್ಬುಲು ಹೀಗೊಂದಿಷ್ಟು ಜನ ಕಿಣಿ ಮಾಮ್ ಹತ್ರ ಕೂತು ಉಭಯ ಕುಶಲೋಪರಿ ವಿಚಾರಿಸುವುದುಂಟು. “ಕಾಂಜಿ ಪೀಂಜಿಗಳಿಗೆಲ್ಲ ನನ್ನ ಅಂಗಡಿ ಮುಂದೆ ಕೂತು ಮರ್ಲು ಕಟ್ಲಿಕ್ಕೆ ಜಾಗ ಇಲ್ಲ. ಅಂತ ಮನಸ್ಸಿದ್ದವ್ರು ಅಲ್ಲಿ ಹೋಗಿ ಆ ಶೆಟ್ಟಿಯ ಸ್ಟೋರಿನ ಮುಂದೆ ಲೇಲೆ ಹಾಕಿ, ಗಮ್ಮತ್ತು ಮಾಡಿ” ಅಂತ ಕಿಣಿ ಮಾಮ್ ಯಾವಾಗಲೋ ಹೇಳಿದ್ದರಂತೆ ಎಂಬ ಮಾತು ಬಲ್ಲ ಮೂಲಗಳಿಂದ ನಾರಾಯಣ ಶೆಟ್ಟರಿಗೆ ತಲುಪಿದ್ದು ಸುಮಾರು ಐದಾರು ವರ್ಷದ ಹಿಂದೆ. ಅಲ್ಲಿಯ ತನಕ ಮುಖ ಕಂಡಾಗ “ಮತ್ತೆ ಸೌಖ್ಯವ, ಹೆಂಡತಿ ಮಕ್ಕಳು ಹೇಗಿದ್ದಾರೆ” ಎಂದು ವಿಚಾರಿಸುವ ಮಟ್ಟಿಗೆ ಇಬ್ಬರ ಮಧ್ಯೆ ಇದ್ದ ಮಾತುಕತೆ ಕೂಡ ನಿಂತು ಹೋಗಿತ್ತು. ಕಿಣಿ ಮಾಮ್ ತಮ್ಮ ಆಪ್ತ ವಲಯದಲ್ಲಿ ತಾನು ನಾರಾಯಣ ಶೆಟ್ಟಿಗೆ ಹಾಗೆಲ್ಲ ಹೇಳಿಲ್ಲ ಮಾರ್ರೆ, ಯಾರೋ ಆಗದವ್ರು ಹೋಗಿ ಚಾಡಿ ಹೇಳಿದ್ದಾರೆ ಎಂದು ಮೆಲ್ಲಗೆ ಬೇಜಾರು ಪಟ್ಟುಕೊಂಡ ಸುದ್ದಿ ಶೆಟ್ಟರಿಗೇನೂ ಹೋಗಿ ಮುಟ್ಟಿರಲಿಲ್ಲ.
 ಆದರೆ ಆವಾಗಿನಿಂದ ಶೆಟ್ಟರಂಗಡಿ ಮತ್ತು ಕಿಣಿ ಸ್ಟೋರ್ಸ್ ಮಧ್ಯೆ ಒಂದು ಅಂತರ ಬೆಳೆದು ಬಂದಿತ್ತು. ಪಡ್ಡೆ ಹೈಕಳು ಮತ್ತು ಸುಮ್ಮನೆ ಕೆಲಸವಿಲ್ಲದೇ ತಿರುಗುವ ಹುಡುಗರು ಶೆಟ್ಟರಂಗಡಿಗೆ ಹೋಗುವವರು ಎಂತಲೂ, ಗೌರವಾನ್ವಿತರೂ, ಒಳ್ಳೆ ಕೆಲಸದಲ್ಲಿರುವ ಮಂದಿ ಕಿಣಿ ಸ್ಟೋರ್ಸಿಗೆ ಹೋಗುವುದು ಎಂದೂ ಭಾಗವಾಗಿ ಹೋಗಿತ್ತು. ಸತ್ಯಕ್ಕಾದರೆ ಶೆಟ್ಟರಂಗಡಿಯ ಹೊರಗೆ ಹಾಕಿರುವ ಎರಡು ಬೆಂಚುಗಳೇ ಇವಕ್ಕೆಲ್ಲ ಕಾರಣ. ಊರಿಗೆ ಒಂದು ಕಾಲದಲ್ಲಿ ಪೇಪರು ಬರುತ್ತಿದ್ದದ್ದು ಶೆಟ್ಟರ ಅಂಗಡಿಗೆ ಮಾತ್ರವಾದ್ದರಿಂದ ಓದುಗ ಮಹಾಶಯರೆಲ್ಲ ಅಲ್ಲೇ ಸೇರುತ್ತಿದ್ದರು. ಯಥಾ ಸಾಧ್ಯ ರಾಜಕೀಯ ವಿಮರ್ಶೆಗಳೂ, ಸರಕಾರ ಕೆಡವುವ, ಕಟ್ಟುವ ಪ್ರಮುಖ ಮಾತುಕತೆಗಳೆಲ್ಲ ಹೇಗೆ ಎಲ್ಲ ಊರುಗಳಲ್ಲಿ ಅಶ್ವತ್ಥ ಕಟ್ಟೆಯೋ ದೇವಳದ ಜಗಲಿಯಲ್ಲೋ ನಡೆದು ಗಾಳಿಯಲ್ಲಿ ತೇಲಿ ಹೋಗಿ ಮಾಯವಾಗುತ್ತದೆಯೋ ಅದೇ ಪ್ರಕಾರ ಗೋಳಿಬೈಲಿನಲ್ಲಿ ಶೆಟ್ಟರಂಗಡಿಯ ಬೆಂಚುಗಳಲ್ಲಿ ನಡೆಯುತ್ತದೆ. ಪೇಪರುಗಳಲ್ಲಿ ಜನ ಏನನ್ನಾದರೂ ಓದಿ, “ತೂಯರಾ ಶೆಟ್ರೇ, ನಾಳೆ ಗರ್ವಮೆಂಟು ಕಬ್ಬೆ ಬೀಳ್ತದಂತೆ” ಎಂದರೆ “ಅಂದಾ? ಒಳ್ಳೆದಾಯ್ತು ಬಿಡಿ ಆಗಲೇ ಬೇಕಿತ್ತು ಹಾಗೇ”  ಎನ್ನುತ್ತ, “ಶೆಟ್ರೇ ನಾಳೆಯಿಂದ ಪೆಟ್ರೋಲಿಗೆ ಬೆಂಕಿ ಬಿತ್ತು ಮಾರ್ರೆ ಮತ್ತೆ ನಾಕು ರುಪಾಯಿ ಜಾಸ್ತಿ” ಎಂದಾಗ ಅವರ ಕರ್ಮ ನಮ್ಮನ್ನು ಲಗಾಡಿ ತೆಗಿಲಿಕ್ಕೆ ಹುಟ್ಟಿದ್ದು ಇವುಗಳೆಲ್ಲ” ಎಂದು ಬೈದ ಹಾಗೆ ಮಾಡಿ ’ಮುದರ, ನಿಂಗೆ ಚಾಪುಡಿ ಸಾ ಬೇಕಂತ ಕಾಣ್ತದೆ ಅಲ್ಲ,ತಗೊಂಡು ಹೋಗಿ ಬಾರಿ ಸಮಯ ಆಯ್ತು” ಅಂತಂದು ಎರಡು ಐಟಂ ಹೆಚ್ಚು ವ್ಯಾಪಾರ ಆಗುವ ಹಾಗೆ ಮಾಡುವ ಉಪಾಯ ಶೆಟ್ಟರದು. ಅವರಿಗೆ ರಾಜಕೀಯ, ಕ್ರೀಡೆ, ಸಿನಿಮಾ ಯಾವುದರ ಬಗ್ಗೆಯೂ ಆಸಕ್ತಿ ಇರಲಿಲ್ಲ. ಗಿರಾಕಿಗಳ ಇಷ್ಟವೇ ಅವರ ಇಷ್ಟ. ಯಾವ ವಿಷಯದ ಬಗ್ಗೆ ಬೇಕಿದ್ದರೂ ಎಷ್ಟು ಹೊತ್ತು ಬೇಕಾದರೂ ಹರಟುವ ಶೆಟ್ಟರಿಗೆ ಕೊನೆ ಕೊನೆಗೆ ತಾನು ಯಾವ ವಿಷ್ಯದ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದು ಕೂಡ ಮರೆತು ಹೋಗುತ್ತಿತ್ತು. ಸಂಜೆ ಹೊತ್ತಿಗೆ ಶೆಟ್ಟರಂಗಡಿಗೆ ಹೋದರೆ ಯಾವುದೋ ಕೋಳಿ ಅಂಕ ಮುಗಿಸಿ ಬಂದು, ಬೆಂಚಿನ ಕಾಲಿಗೆ ಕಟ್ಟಿದ ಕೋಳಿಗಿಂತ ಜೋರಾಗಿ ಕಿರುಚುವ ಒಂದಿಷ್ಟು ಮಂದಿಯೋ, ಕ್ರಿಕೆಟ್ ಮ್ಯಾಚು ಮುಗಿಸಿ ಬಂದು ಜಾಫಾ ಕುಡಿಯುವ ಹುಡುಗರೋ, ಮನೆ ಕಟ್ಟಲೆಂದು ಬಾಗಲಕೋಟೆಯಿಂದ ಬಂದ ಕೆಲಸಗಾರರ ಠೋಳಿಯೋ ಕಂಡೇ ಕಾಣುತ್ತದೆ. ಹೀಗಾಗಿ ಸಂಪ್ರದಾಯಸ್ಥ ಮನಸ್ಥಿತಿಯ ಜನಕ್ಕೆ ಶೆಟ್ಟರಂಗಡಿ ಎಂದರೆ ಒಂಥರ ಗಡಂಗಿನ ಹಾಗೆ ಎಂಬಂತಾಗಿತ್ತು. ಶೆಟ್ಟರು ಗುಟ್ಟಾಗಿ ಶೇಂದಿ ಕೂಡ ಮಾರುತ್ತಾರಂತೆ ಎಂಬ ಸುದ್ದಿ ಕೂಡ ಗೋಳಿಬೈಲಿನಲ್ಲಿ ಸ್ವಲ್ಪ ಕಾಲ ಹರಡಿದ್ದೂ ಹೌದು. ಆಮೇಲೆ ಶೆಟ್ಟರು ಎಕ್ಸೈಸ್ ದಾಳಿಗೆ ಹೆದರಿ ಶೇಂದಿ ಮಾರಾಟ ಬಂದು ಮಾಡಿದರಂತೆ ಎಂಬ ಉಲ್ಟಾ ಸುದ್ದಿ ಕೂಡ ಬಂತು.
ಏನೇ ಆದರೂ ಶೆಟ್ಟರಿಗಾಗಲೀ, ಕಿಣಿ ಮಾಮ್ ಗೇ ಆಗಲಿ ಅಂತಹ ಹೇಳಿಕೊಳ್ಳುವ ವ್ಯಾಪಾರವೇನೂ ಗೋಳಿಬೈಲಿನಲ್ಲಿ ಇಲ್ಲ. ಇತ್ತೀಚಿನ ದಿನಗಳಲ್ಲಂತೂ ಊರಿಗೆ ಯಾವುದೋ ಹೊಸ ಯೋಜನೆಯಡಿ ಕಾಂಕ್ರೀಟು ರಸ್ತೆ ಬಂದ ಮೇಲೆ ಜನ ಐದೇ ಕಿಲೋಮೀಟರು ಹತ್ತಿರದ ಕೂಳೂರು ಪೇಟೆಗೇ ಹೋಗಿ ಬರುವುದನ್ನ ಅಭ್ಯಾಸ ಮಾಡಿಕೊಂಡಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ರೋಡು ಮಾಡಿ ಊರು ಹಾಳು ಮಾಡ್ತಾರೆ ಎಂದು ದೇವಿ ಹೋಟೆಲ್ಲಿನ ಭಟ್ರು ಬೈಯುವುದಕ್ಕೆ ಕೂಳೂರು ಪೇಟೆಯ ಮಸಾಲೆ ದೋಸೆ ಪಾರ್ಸಲ್ಲು ಬರುವ ಹೊಟ್ಟೆಕಿಚ್ಚೇ ಕಾರಣ ಎಂದುಕೊಂಡರೂ, ಅವರು ಹೇಳುವ ಮಾತಲ್ಲಿ ತಪ್ಪೇನೂ ಇಲ್ಲ. ಮೊದ ಮೊದಲು ಕಿಣಿ ಮಾಮ್ ಮತ್ತು ಶೆಟ್ಟರಂಗಡಿಗೆ ಮಾಲು ಹಾಕಲು ಎರಡು ಮೂರು ದಿನಕ್ಕೊಮ್ಮೆ ಬರುತ್ತಿದ್ದ ತಿಂಡಿ ತಿನಿಸಿನವನು ಎರಡು ವಾರಕ್ಕೊಮ್ಮೆ ಬರುತ್ತಾನೆ. ಆ ಪುಣ್ಯಾತ್ಮ ಟೀವಿಯೆಸ್ಸಿಂದ ಮೆಟಡೋರಿಗೆ ಬದಲಾಗಿದ್ದರೂ  ಕಿಣಿ ಮಾಮ್ ನ ಗಾಜಿನ ಬಾಟಲಿ ಸಾಲು ಬದಲಾಗಿಲ್ಲ. ನಾರಾಯಣ ಶೆಟ್ಟರ ಹಳೆಯ ಕೆಂಪು ಫೋನು ಕೂಡ ಇನ್ನೂ ಹಾಗೇ ಇದೆ. ಆದರೆ ಈಗ ಅದಕ್ಕೆ ಅಮೆರಿಕದಿಂದ ಮಗನ ಫೋನು ಬರುತ್ತದೆ ಎಂಬುದೇ ಪ್ರಮುಖ ಸೇರ್ಪಡೆ.
ನಾರಾಯಣ ಶೆಟ್ಟರ ಮಗ ಕಳೆದ ಕೆಲ ತಿಂಗಳಿಂದ ಅಪ್ಪನನ್ನ ಅಮೆರಿಕಕ್ಕೆ ಬಾ ಎಂದು ಒತ್ತಾಯ ಮಾಡುತ್ತಿದ್ದ. ಸಂಜೀವ ಅಮೆರಿಕಕ್ಕೆ ಕರೆಯುವುದನ್ನು ಮೊದಲು ತೋರಿಕೆಗೆ ಅಂದುಕೊಂಡಿದ್ದ ಶೆಟ್ಟರಿಗೆ ಕಳೆದ ಒಂದೆರಡು ವಾರದಿಂದ ಪದೇ ಪದೇ ಕೇಳುವುದು ನೋಡಿ ತಲೆಬಿಸಿಯಾಗಿತ್ತು. ತಾನು ಇನ್ನೇನು ಒಂದೆರಡು ವಾರದಲ್ಲಿ ಊರಿಗೆ ಬರುತ್ತೇನೆಂದೂ, ಬಂದವನು ಪಾಸ್ಪೋರ್ಟು ವೀಸಾ ಮಾಡಿಸಿ ಎರಡು ಮೂರು ತಿಂಗಳೊಳಗೆ ನಿಮ್ಮನ್ನ ಅಮೆರಿಕಕ್ಕೆ ಕರೆದುಕೊಂಡು ಹೋಗುತ್ತೇನೆಂದೂ ಸಂಜೀವ ಭಾರಿ ಪ್ಲಾನು ಮಾಡಿದ್ದವನಂತೆ ಹೇಳಿ ಹೆದರಿಸಿಬಿಟ್ಟಿದ್ದ. ನೀನು ವಾಪಸ್ಸು ಬರುದಿಲ್ವಾ ಮಾರಾಯ ಅಂತ ಕೇಳಿದ್ದಕ್ಕೆ ’ಇಲ್ಲಪ್ಪ ನಂಗೆ ಇಲ್ಲಿ ಗ್ರೀನ್ ಕಾರ್ಡು ಸಿಗುವ ಅಂದಾಜು ಉಂಟು ಭಾರತಕ್ಕೆ ಸದ್ಯ ಬರುದಿಲ್ಲ” ಅಂದಿದ್ದ. ಶೆಟ್ಟರು ಮಗನಿಗೆ ಹಸಿರು ಕಾರ್ಡು ಸಿಗ್ತದಂತೆ, ಅವ ಅಲ್ಲೇ ಇರುವ ಹಾಗೆ ಕಾಣ್ತದೆ ಎಂದು ತಮ್ಮ ದೋಸ್ತಿ ಬೀಡಿ ಬ್ರಾಂಚಿನ ಸೈಯದಿಗೆ ಹೇಳಿದ್ದಕ್ಕೆ ಅವ, “ಹಾ ಹಾ ಎಂತ ಶೆಟ್ರೆ ಸಂಜೀವನಿಗೆ ಹಸಿರು ರೇಷನ್ ಕಾರ್ಡ್ ಸಿಕ್ಕಿತ? ಸಂಪಾದನೆ ಕಡಿಮೆಯ ಅವನಿಗೆ? ನಮ್ಮಲ್ಲಿ ಪಾಪದವ್ರಿಗೆ ಕೊಡುದಲ್ವಾ ಅದು?”  ಅಂತ ಹೇಳಿ ತಲೆ ಕೆಡಿಸಿಟ್ಟಿದ್ದ. ಮಗ ಅಮೆರಿಕಕ್ಕೆ ಹೋಗಿ ಬಡವನಾಗಿದ್ದಾನ ಹಾಗಾದರೆ? ಅವನಿಗೇ ಗತಿ ಇಲ್ಲದಿದ್ದ ಮೇಲೆ ನಾನು ಹೋಗುವುದು ಯಾಕೆ? ಎಂಬ ವಿಚಾರಗಳಲ್ಲಿ ಬೆಳಗ್ಗಿಂದ ಶೆಟ್ಟರು ತಲೆ ಕೆಡಿಸಿಕೊಂಡಿದ್ದರು. ಪ್ರತಿದಿನವೂ ತಮ್ಮ ಅಂಗಡಿಗೆ ಬಂದು ಪೇಪರಿನ ಸುದ್ದಿಗಳನ್ನ ಪೋಸ್ಟ್ ಮಾರ್ಟಂ ಮಾಡುವ ಯಾರಲ್ಲಿಯಾದರೂ ವಿಚಾರ ಕೇಳುವ ಎಂದರೆ “ ಅಷ್ಟು ಸಾ ಗೊತ್ತಿಲ್ವ ಶೆಟ್ರೆ, ಎಂಚಿನಯೇ” ಎಂದು ಮಾರ್ಯದೆ ತೆಗೆದರೆ ಎಂದು ಸುಮ್ಮನಿದ್ದರು, ಕಳೆದ ಎರಡು ದಶಕಗಳಲ್ಲಿ ಕೇಳಿದ ಅಸಂಖ್ಯಾತ ಸುದ್ದಿ ತುಣುಕಗಳನ್ನ ಒಂದು ಕಿವಿಯ ಮೇಲೆ ಬೀಳಿಸಿಕೊಂಡು ಮತ್ತೊಂದು ಕಿವಿಯಿಂದ ಆಚೆಗೆ ಕಳಿಸಿದ್ದರ ಪರಿಣಾಮವಾಗಿ ಗ್ರೀನ್ ಕಾರ್ಡು ಎಂದರೇನೆಂಬುದು ತಕ್ಷಣಕ್ಕೆ ತನಗೆ ಗೊತ್ತಾಗಲಿಲ್ಲ ಎಂದು ಶೆಟ್ಟರಿಗೆ ಅರಿವಾಗಿತ್ತು. ಅಷ್ಟಕ್ಕೂ ಮಗ ಮತ್ತೆ ಇವತ್ತೋ ನಾಳೆಯೋ ಫೋನು ಮಾಡುತ್ತಾನೆಂಬುದು ತಿಳಿದಿದ್ದರಿಂದ ಸುಮ್ಮನಾಗಿದ್ದರು. ಅಲ್ಲಿ ಬೆಳಗ್ಗೆದ್ದ ಮಗ ಇಲ್ಲಿಯ ಸಂಜೆಗೆ ಫೋನು ಮಾಡಿದ ಕೂಡ. ಶೆಟ್ಟರ ಸಮಸ್ಯೆ ಕೇಳಿ ಜೋರು ಅಕ್ಕು, “ ಅಂಚ ಅತ್ ಅಪ್ಪ... ಹಾಗಲ್ಲ ಅದು ನಾನು ಅಮೆರಿಕದಲ್ಲೇ ಇರಬಹುದು ಅಂತ ಇಲ್ಲಿನ ಸರ್ಕಾರ ಕೊಡುವ ಕಾರ್ಡು ಅದು, ಅದ್ರ ಚಿಂತೆ ಬಿಡು, ನೀನು ಹೊರಡುವ ತಯಾರಿ ಮಾಡು.. ಇನ್ನೂ ಯಾಕೆ ನಿಂಗೆ ಅಂಗಡಿ ಸಾವಾಸ” ಎಂದು ಅದೇ ಹಳೇ ರಾಗ ತೆಗೆದ. ಶೆಟ್ಟರಿಗೆ ಎಂತ ಹೇಳ್ಬೇಕು ಅಂತ ಗೊತ್ತಾಗದೇ “ಮಗ ನಂಗೆ ಟೈಮು ಕೊಡು ನೋಡುವ ಯೋಚನೆ ಮಾಡಿ ಹೇಳ್ತೇನೆ, ಹೆಂಡತಿಗೆ ಕೇಳಿದೆ ಅಂತ ಹೇಳು” ಎಂದು ಫೋನಿಟ್ಟರು. ಮಗವಾ ಪೋನು ಮಾಡಿದ್ದು ಸಂಜೀವ ಸೌಕ್ಯ ಅಂತೆಯಾ ಪುಳ್ಳಿ ಬರ್ಲಿಕ್ಕುಂಟಾ ಎಂದು ಪುಗ್ಗೆರೆ ತಗೊಂಡು ಹೋಗಲು ಬಂದ ಸೇಸಿ ಪಿಸಿಪಿಸಿ ನಗಾಡಿದ್ದಕ್ಕೆ ರೇಗಿದ ಶೆಟ್ಟರು ಎಂತ ಇಲ್ಲ ಮಾರಾಯ್ತಿ ಸುಮ್ಮನೆ ಹೋದು ಎಂದು ಗದರಿದರು.
ಮಾರನೇ ದಿನ ಬೆಳಗ್ಗೆದ್ದು ಲೆಕ್ಕದ ಪಟ್ಟಿ ತೆಗೆದು ನೋಡಿದ ಶೆಟ್ಟರಿಗೆ ತಲೆ ಕೆಟ್ಟು ಹೋಯಿತು. ಐದು ಸಾವಿರಕ್ಕಿಂತ ಹೆಚ್ಚಿನ ದುಡ್ಡು ಬರುವುದು ಬಾಕಿ ಇತ್ತು. ಅಂದೇ ಬೇರೆ ಲೈನಿನವನು ಬರುವವನಿದ್ದ. ಎಂತ ತಟಪಟ ಮಾಡಿದರೂ ಅವನಿಗೆ ಕೊಡ್ಲಿಕ್ಕಿದ್ದ ದುಡ್ಡು ಹುಟ್ಟುವ ಹಾಗೆ ಕಾಣುವುದಿಲ್ಲ ಏನು ಮಾಡುದು ಎಂದು ಶೆಟ್ಟರು ಲೆಕ್ಕಾಚಾರ ಹಾಕುತ್ತಿರುವಾಗಲೇ ಪಂಚಾಯ್ತು ಮೆಂಬರು ದಾಮು ಬಂದ. ಶೆಟ್ಟರೆ ಒಂದು ಕೋಲ್ಡು ಕೊಡಿ ಎಂದವನೇ ಪೇಪರು ಓದಲು ಆರಂಭಿಸಿದ. “ನೋಡಿದ್ರ ಶೆಟ್ರೆ, ಭಾರತಕ್ಕೆ ವಾಲ್ ಮಾರ್ಟು ಬರ್ತದಂತೆ ನಿಮ್ಮ ಅಂಗಡಿ ಎಲ್ಲ ಲಗಾಡಿ ಹೋಗ್ಲಿಕ್ಕುಂಟು, ಒಟ್ಟಾರೆ ಪಾಪದವರಿಗೆ ಸುಕ ಇಲ್ಲ, ಸರ್ಕಾರಕ್ಕೆ ತಲೆಸಮ ಇಲ್ಲ “ ಎಂದು ಒಂದೇ ಸಮನೆ ವದರ ತೊಡಗಿದ. ಬೇರೆ ದಿನ ಆಗಿದ್ದರೆ ಶೆಟ್ರು ಅವನ ಮಾತಿಗೆ ಏನಾದ್ರೂ ಒಗ್ಗರಣೆ ಹಾಕಿ ಮಾತಿಗೆ ಮಾತು ಸೇರಿಸಿ ಹಾರ ಮಾಡಿ ಅವನಿಗೇ ತೊಡಿಸುತ್ತಿದ್ದರು. ಮೂಡು ಸರಿ ಇಲ್ಲದೇ ಹೋಗಿದ್ದಕ್ಕೆ “ಎಂತ ವಾಲ್ ಮಾರ್ಟು ಮಾರಾಯ” ಎಂದವರೇ ಬಕೆಟಿನಲ್ಲಿಟ್ಟಿದ್ದ ಜಾಫಾ ತೆಗೆದು ಅವನಿಗೆ ಕೊಟ್ಟು ಒಳಗೆ ತೂಗಾಗಿದ್ದ ಅಕ್ಕಿ ಗೋಣಿ ಸರಿ ಮಾಡಲು ಕೂತರು. ದಾಮು ಅಮೋಘವಾಗಿ ಕೊರೆದ ಮುಂದಿನ ಐದು ನಿಮಿಷಗಳ ಉಪನ್ಯಾಸದಲ್ಲಿ ಶೆಟ್ಟರಿಗೆ ಅರ್ಥವಾಗಿದ್ದು, ಅದೆಂತದೋ ನೆಹರೂ ಮೈದಾನದಷ್ಟು ದೊಡ್ಡ ಜಾಗದಷ್ಟಿರುವ ಅಂಗಡಿ ಬರುತ್ತದೆ. ಅದು ರೈತರಿಂದಲೇ ಎಲ್ಲ ಬೆಳೆ ಖರೀದಿಸಿ, ಮಾರುತ್ತದೆ. ಅಲ್ಲಿ ಬೇರೆ ಕಡೆಗಿಂತ ಕಡಿಮೆಗೆ ಎಲ್ಲ ಸಿಗ್ತದೆ, ಜನ ಒಂದೇ  ಕಡೆ ಅಷ್ಟು ಕಡಿಮೆಗೆ ಸಿಗುದಕ್ಕೆ ಅಲ್ಲಿಗೇ ಹೋಗುತ್ತಾರೆ. ಸಣ್ಣ ಪುಟ್ಟ ಅಂಗಡಿಗಳ ಕತೆ ಬರ್ಬಾದ್ ಆಗುತ್ತದೆ” ಎನ್ನುವುದಷ್ಟೆ. ಕೊನೆಗೆ “ಹೌದಾ ದಾಮು ನಿಂಗೆ ಮಂಡೆ ಸಮ ಉಂಟನ? ಒಂದು ಜಾಪಾ ಕುಡಿಲಿಕ್ಕೆ ನೀನು ಅದೆಂತೆ ವಾಲ್ ಮಾರ್ಟಿಗೆ ಹೋಗ್ತೀಯಾ? ನಿನ್ನ ಅಪ್ಪನಿಗೆ ವೀಳ್ಯದೆಲೆ ಸುಣ್ಣ ಅವರು ಕೊಡ್ತರಾ? ತುಕ್ರನ ಮಗನಿಗೆ ಬನ್ ಅಲ್ಲಿ ಸಿಗ್ತದಾ?  ಕೋಳಿಗೆ ಹಾಕುವ ಗೋದಿ ಕಡಿ ಅಲ್ಲಿ ಉಂಟಾ? ಯಾರು ಬಂದ್ರೂ ಕೂಡ ನನ್ನ ಅಂಗಡಿಯ ಸ್ಪೆಷಲ್ ನಶ್ಯದ ಪುಡಿ ಅವ್ರು ಕೊಟ್ಟಾರ” ಎಂದು ದಾಮುವಿಗೆ ಜಾಡಿಸಿದ ಶೆಟ್ಟರು ಅಮೋಘ ಶರಗಳನ್ನು ಪ್ರಯೋಗಿಸಿದ ಯೋಧನ ಹುರುಪಿನಲ್ಲಿ ಅವನ ಎದುರಿನ ಬೆಂಚಿನಲ್ಲಿ ಕೂತರು. ಜಾಫಾ ಒಂದೇ ಏಟಿಗೆ ಕುಡಿದು ಮುಗಿಸಿದ ದಾಮು, “ಅಯ್ಯ ಶೆಟ್ರೆ, ಮಂಡೆ ಸಮ ಇಲ್ಲದೇ ಇರುವುದು ನಂಗಲ್ಲ ನಿಮಗೆ. ಒಟ್ಟಾರೆ ನೀವು ಇದೇ ಗೋಳಿಬೈಲಿನಲ್ಲಿ ಕೂತು ಕೂತು ಜಡ್ಡು ಹಿಡಿಸಿಕೊಂಡಿದೀರಿ ಅಂತ ಕಾಣ್ತದೆ. ಬಾವಿ ಒಳಗಿನ ಕಪ್ಪೆ ಅಂದ್ರೆ ನೀವೆ ಮಾರ್ರೆ. ಈ ವಾಲ್ ಮಾರ್ಟ್ ಉಂಟಲ್ಲ ಅದ್ರ ಸುಮಾರು ಮರಿಗಳು ಸುಮಾರು ಆಗ್ಲೇ ಮಂಗಳೂರು ಪೇಟೆಗೆ ಬಂದಾಗಿದೆ. ಅಲ್ಲಿ ನಿಮ್ಮ ಗೋಧಿ ಕಡಿಯಿಂದ ಹಿಡಿದು ಅಕ್ಕಿ ಬೇಳೆ ಟಿವಿ ಕಪಾಟಿನವರೆಗೆ ಒಂದೇ ಕಡೆಗೆ ಸಿಗ್ತದೆ. ನಿಮ್ಮ ಅಂಗಡಿಗೆ ಜನ ಬರುದು ಕಡಿಮೆ ಆಗಿದ್ದು ಸಾ ನಿಮಗೆ ಹೊಳಿಲಿಲ್ವ ಮಾರ್ರೆ? ಎಂತ ಹೇಳ್ತೀರಿ, ಸೂಪರ್ ಫ್ರೆಶ್ ಅಂಜೆಲ್ ಮೀನು ಸಾ ಅಲ್ಲೇ ಸಿಗ್ತದೆ,ಜೀಗುಜ್ಜೆ ಬಾಳೆಕಾಯಿ ಸಾ ಅಲ್ಲೇ. ಮಲ್ಲಿಗೆ ಹೂವಿಂದ ಹಿಡಿದು ಮಲ್ಲಿಕ ಶೆರಾವತ್ ಪಿಚ್ಚರ್ ವರೆಗೆ ಎಲ್ಲದಕ್ಕೂ ಒಂದೇ ಜಾಗ. ನೀವು ಇಲ್ಲೇ ಕೂತೀರಿ ಆಯ್ತಾ? ಬಲ್ಲಿರೇನಯ್ಯ ಗೋಳಿಬೈಲಿಗೆ ಯಾರೆಂದು ಕೇಳಿದ್ದೀರಿ ಹೇಳಿಕೊಂಡು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳಿ.” ಅಂತ ಬಾಂಬೊಂದನ್ನು ಹಾಕಿ ಎದ್ದು ಹೋದ. ಸುಮಾರು ಹೊತ್ತು ಅಲ್ಲೇ ಕೂತಿದ್ದ ಶೆಟ್ಟರಿಗೆ ತಲೆ ಹನ್ನೆರಡಾಣೆ ಆಗಿತ್ತು. ಮಂಗಳೂರು, ಅಲ್ಲಿನ ಹೊಸ ಮಾಲುಗಳು ಶೆಟ್ಟರಿಗೆ ಗೊತ್ತಿಲ್ಲದ ವಿಷಯ ಏನಲ್ಲ. ಊರಿನ ಪಡ್ಡೆಗಳಲ್ಲ ರಸವತ್ತಾಗಿ ಅಲ್ಲಿನ ಕಥೆಗಳನ್ನ ವರ್ಣಿಸಿದ್ದನ್ನ ಶೆಟ್ಟರೂ ಕೇಳಿದವರೇ. ಹತ್ತಿರದ ಕೂಳೂರು ಪೇಟೆಯ ಥಳಕು ಬಳಕು ಅಂಗಡಿಗಳಿಂದಾಗಿ ತಮ್ಮ ವ್ಯಾಪಾರ ಕಡಿಮೆಯಾಗಿದ್ದೂ ಶೆಟ್ಟರ ಅನುಭವಕ್ಕೆ ಬಂದು ಬಹಳ ಕಾಲವಾಗಿದೆ. ಎಲ್ಲ ಹೇಳಿದ್ದು ಕೇಳಿದ್ದರೇ ಬಿಟ್ಟರೆ ಶೆಟ್ಟರು ಒಮ್ಮೆಯಾದರೂ ಮಂಗಳೂರಿನ ಒಂದೇ ಒಂದು ಸೂಪರ್ ಬಜಾರಿಗೋ ಮಾಲ್ ಗೋ ಹೋದವರಲ್ಲ. ಮಗನ ಮದುವೆ ಕಾಲದಲ್ಲೂ ಅವರು ಪರ್ಕಳದ ಪಾಟೀಲರಲ್ಲಿಗೇ ಹೋಗಿದ್ದು.
ಮರುದಿನವೇ ಭಾನುವಾರ. ಅಂಗಡಿಗೆ ರಜೆ. ಯಾವಾಗಲೂ ದೇವಿ ಹೋಟೇಲು ಮಾಲಿಂಗೇಶ್ವರ ದೇವಸ್ಥಾನ ಅಂತ ಕಾಲ ಕಳೆಯುವ ಶೆಟ್ಟರು ಸೀದಾ ಇಪ್ಪತ್ತು ಕಿಲೋಮೀಟರು ದೂರದ ಮಂಗಳೂರಿಗೇ ಹೊರಟರು. ಬಸ್ಸಲ್ಲಿ ಸಿಕ್ಕ ಯಾರ ಬಳಿಯೋ ಮಾಲ್ ಒಂದರ ವಿಳಾಸ ವಿಚಾರಿಸಿ, ಬಸ್ಸಿಳಿದು ಆಟೋ ಹತ್ತಿ ಹೋಗಿದ್ದೇ. ಅಲ್ಲಿ ಹೋಗಿ ನೋಡಿದರೆ ಕಂಡದ್ದೇನು. ದಾಮು ಹೇಳಿದ ಹಾಗೆ ಎಲ್ಲ ಅಲ್ಲಿಯೇ. ತಾವು ಮೂವತ್ತಕ್ಕೆ ಮಾರುವ ಅಕ್ಕಿಗೆ ಅಲ್ಲಿ ಇಪ್ಪತ್ತಾರೇ ರೂಪಾಯಿ ಅನ್ನುವ ಬೋರ್ಡು ಬೇರೆ. ಮೂರು ಫ್ಲೋರು ಮೇಲೆ ಕೆಳಗೆ ಕಂಡ ಶೆಟ್ಟರಿಗೆ ಎಂತ ಮಾಡುದು ಅಂತಲೇ ಗೊತ್ತಾಗಲಿಲ್ಲ. ಬಟ್ಟೆ ಪಾತ್ರೆ ತರಕಾರಿ ಬೇಳೆ ಕಾಳು ಐಸ್ಕ್ರೀಮು ಎಲ್ಲ ಗೌಜಿ ಸಂತೆ. ಮೈಕಲ್ಲಿ ಎಂತದೋ ಆಫರ್ ಆಫತ್ ಅಂತ ಕೂಗುವುದು ಬೇರೆ. ಊರಿನ ಜಾತ್ರೆಗೆ ಸಮೇತ ಇಷ್ಟು ಜನ ಆಗುದಿಲ್ಲ ಅಂದುಕೊಂಡ ಶೆಟ್ಟರು ಕಣ್ಣು ಕತ್ತಲೆ ಬಂದ ಹಾಗಾಗಿ ಮೆಲ್ಲ ಬಿಡಿಸಿಟ್ಟ ಹಾಸಿಗೆಯ ಮೇಲೆ ಕೂತರು. ಒಂದೇ ನಿಮಿಷದೊಳಗೆ ಬಂದ ಯುನಿಫಾರಂ ಹೆಂಗಸು. ಇದ್ರ ಮೇಲೆ ಕೂತ್ಕೊಳ್ಳಬೇಡಿ ಪ್ಲೀಸ್ ಎಂದು ನೆಗಾಡಿದ ಹಾಗೆ ಮಾಡಿ ಕಣ್ಣು ಬಿಟ್ಟು ಹೆದರಿಸಿ ಹೋಯಿತು. ಎರಡನೇ ಫ್ಲೋರಿಂದ ಮೆಲ್ಲಗೆ ಕೆಳಗಿಳಿದು ಸಂದಿಯಲ್ಲಿ ಜಾಗ ಮಾಡಿಕೊಂಡು ಹೊರಗೆ ಬಂದು ಏನು ಮಾಡುವುದು ಅಂತ ಯೋಚನೆ ಮಾಡುತ್ತಿದ್ದಾಗ ಅವರನ್ನ ಬಂದು ಮಾತಾಡಿಸಿದ್ದು ಜನಾರ್ಧನ. ಗೋಳಿಬೈಲಿನ ದೇವಸ್ಥಾನದ ಮೊಕ್ತೇಸರ ಸದಾಶಿವ ಐತಾಳರ ಮಗ. “ಹ್ವಾ ಶೆಟ್ರೆ ನಮಸ್ಕಾರ, ನೀವೆಂತ ಇಲ್ಲಿ ಮಾರ್ರೆ? ಹೋಲ್ ಸೇಲ್ ಮಾಲು ತಗೊಂಡು ಹೋಗ್ಲಿಕ್ಕೆ ಬಂದದ್ದ ಹೇಗೆ? ನಿಮ್ಮ ಕೆಲಸ ಮುಗಿತಾ? ಬೇಕಾದ್ರೆ ನಾನು ಜೀಪು ತಂದಿದ್ದೇನೆ ಅದ್ರಲ್ಲೆ ಹೋಗುವ, ಎರಡೇ ನಿಮಿಷ, ಸ್ವಲ್ಪ ಐಟಂ ತುಂಬಿಸ್ಲಿಕ್ಕುಂಟು ಎಂದವನೇ, ಉತ್ತರಕ್ಕೆ ಕಾಯದೇ ಅವನ ದೊಡ್ಡ ಕಾರಿನ ಹಿಂದಿನ ಸೀಟು, ಡಿಕ್ಕಿಗಳಲ್ಲಿ ಅಕ್ಕಿ ಮೂಟೆ ಸಕ್ಕರೆ ಚೀಲ ತರಕಾರಿ ಗೋಣಿಯನ್ನ ತುಂಬಿಸತೊಡಗಿದ. ಶೆಟ್ರು ಅವನ ಗಾಡಿಯ ಪಕ್ಕವೇ ನಿಂತವರು, ಹೊರಡುವಾ ಅಂತ ಕೇಳಿದ್ದಕ್ಕೆ ಹಾ ಹಾ ಹೋಗುವ ಎಂದು ಪೆಚ್ಚು ನಗೆ ನಕ್ಕು ಕಾರೊಳಗೆ ಅವನ ಪಕ್ಕ ಕೂತರು. “ನಾಳೆ ದೇವಸ್ಥಾನದಲ್ಲಿ ಮದುವೆ, ಹಾಗೆ ಬಂದದ್ದು” ಎಂದ ಜನಾರ್ಧನ. ಹಿಂದೆಲ್ಲ ದೇವಸ್ಥಾನದಿಂದ ಇದೇ ಐತಾಳರು ಲಿಸ್ಟು ಕಳಿಸುತ್ತಿದ್ದದ್ದು ನೆನಪಾಗಿ ಜೊತೆಗೆ ಆತ ಮಾತಿಗಾದರೂ ಅದನ್ನು ನೆನಪು ಮಾಡಿಕೊಳ್ಳದಿದ್ದದ್ದು ನೋಡಿ ಶೆಟ್ಟರ ಮಂಡೆಬಿಸಿ ಮತ್ತೂ ಜೋರಾಯಿತು. ಅದೇ ತಲೆಬಿಸಿಯಲ್ಲಿ ಸಂಜೆ ಬಂದು ಮಲಗಿದ ಶೆಟ್ಟರಿಗೆ ಎಚ್ಚರಾದದ್ದು ಮಾರನೇ ದಿನ ಬೆಳಗ್ಗೆಯೇ.
ಆ ದಿನ ಬೆಳಗ್ಗೆ ಕಿಣಿಮಾಮ್ ಗೆ ಮಂಡೆಬಿಸಿ ಜೋರಾಗಲಿಕ್ಕೆ ಕಾರಣ ಅಂಗಡಿಯ ಎದುರಲ್ಲಿ ಶೆಟ್ಟರು ಬಂದು ಕೂತಿದ್ದು. ನಾರಾಯಣ ಶೆಟ್ಟರು. ಬಂದವರೇ ಸೀದಾ ನಿಮ್ಮ ಹತ್ರ ಸ್ವಲ್ಪ ಮಾತಾಡ್ಲಿಕ್ಕೆ ಉಂಟು ಎಂದವರು ಸುಮ್ಮನೆ ಕೂತಿದ್ದಾರೆ. ಸೋಮವಾರ ಬೆಳ್ಳಂ ಬೆಳಗ್ಗೆ ಎಂಟು ಗಂಟೆಗೆ, ತಮ್ಮ ಅಂಗಡಿಯನ್ನ ಓಪನ್ ಕೂಡ ಮಾಡದೇ ಕೀ ಗೊಂಚಲ ಸಮೇತ ಬಂದಿದ್ದಾರೆ ಎಂದರೆ ಏನೋ ವಿಷಯ ಇರಲೇಬೇಕು. ಅದೂ ಕೂಡ ಕಳೆದ ನಾಲ್ಕಾರು ವರ್ಷದಲ್ಲಿ ತನ್ನ ಮುಖ ಕೂಡ ನೋಡಿಲ್ಲದ ಮನುಷ್ಯ. ಕಿಣಿ ಮಾಮ್ ಗೆ ಏನು ಹೇಳಬೇಕು ಎಂದು ತೋಚಲಿಲ್ಲ. ತನ್ನದೇ ವೃತ್ತಿಯಲ್ಲಿರುವ ತನಗಿಂತ ಕಿರಿಯ. ತಾನೇನೂ ಎಂದೂ ವೈರಿ ಎಂದು ಪರಿಗಣಿಸದೇ ಇದ್ದರೂ ಕೂಡ ಪೈಪೋಟಿ, ತಾನು ಅವನಿಗಿಂತ ನಾಕಾಣೆ ಎಂಟಾಣೆ ಕಡಿಮೆಗೆ ಮಾಲು ಕೊಟ್ಟದ್ದು ಇದೆ. ಅದು ವೃತ್ತಿ ಧರ್ಮ. ಆದದ್ದಾಗಲಿ ಅಂತ ಎದ್ದವರೇ ಬನ್ನಿ ಶೆಟ್ಟರೇ ಎಂದು ಕರೆದು, ಅಂಗಡಿಯ ಒಳಗಿನ ಅಕ್ಕಿ ಮೂಟೆಯ ಮೇಲೆ ಜಾಗ ಮಾಡಿ ಕೊಟ್ಟರು. “ಕಿಣಿ ಮಾಮ್, ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಅದನ್ನ ಹೇಳಲು ನಿಮಗಿಂತ ಸರಿಯಾದ ಜನ ನಂಗೆ ಕಾಣ್ಲಿಲ್ಲ. ಹಾಗಾಗಿ ಸೀದಾ ಎದ್ದು ನಿಮ್ಮ ಹತ್ರ ಬಂದಿದ್ದು ನಾನು” ಎಂದವರೇ ಕಿಣಿಯವರ ಮುಖ ನೋಡಿದರು, ನಾರಾಯಣ ಶೆಟ್ಟರು. ಕಿಣಿ ಮಾಮ್ ಗೆ ತಲೆ ಗುಂಯ್ ಗುಡುತ್ತಿತ್ತು. ಹುಂ, ಹೇಳಿ ಎನ್ನುವಂತೆ ತಲೆ ಹಂದಾಡಿಸಿದ ಕಿಣಿ ಮಾಮ್, ಏನಿರಬಹುದು ಈ ಮನುಷ್ಯನ ಮನಸ್ಸಲ್ಲಿ ಎನ್ನುವಂತೆ ಶೆಟ್ಟರ ಮುಖವನ್ನೇ ನೋಡಿದರು. “ನನ್ನ ಮಗ ಅಮೆರಿಕದಲ್ಲಿದ್ದಾನೆ. ನನ್ನ ಹತ್ರ ಬಾ ಅಂತ ಕರಿತಾ ಇದ್ದಾನೆ. ನಂಗೆ ಹೋಗ್ಲಿಕ್ಕೆ ಮನಸ್ಸಿಲ್ಲ. ಆದರೂ ಕೂಡ ಹೋಗ್ದೇ ಇರ್ಲಿಕ್ಕೂ ಆಗ್ತಾ ಇಲ್ಲ. ಅವ ಕರಿವಾಗ ಅಲ್ಲ ಹೇಳ್ಲಿಕ್ಕೂ ಇಲ್ಲ. ಅಲ್ಲದೇ ವೈವಾಟ್ ಕೂಡ ಅಂತದ್ದೇನೂ ಇಲ್ಲ. ನಿಮಗೆ ಗೊತ್ತಿಲ್ಲದ್ದು ಕೂಡ ಅಲ್ಲ. ವ್ಯಾಪಾರ ಮೊದಲಿಗಿಂತ ಡಲ್ ಉಂಟು. ಈಚೆದ್ದು ತೆಗೆದು ಆಚೆ ಹಾಕುದು ಅಷ್ಟೆ. ಮಗ ಒತ್ತಾಯ ಮಾಡಿ ಕರಿತಾ ಇದ್ದಾನೆ. ನಾನು ಬೇಡ ಅಂತ ಈಗ ಸುಮ್ಮನಿದ್ದು ನಾಳೆ ಹೋಗಬೇಕಿತ್ತು ಅಂತ ಆಸೆ ಆಗಿ, ಆವಾಗ ಅವ ಮನಸ್ಸು ಮಾಡದಿದ್ರೆ ಎಂತ ಮಾಡುದು ಅನ್ನುವ ಚಿಂತೆ ಬೇರೆ. ಹೀಗಾಗಿ ನನ್ನ ಅಂಗಡಿಯನ್ನು ಬಂದು ಮಾಡಿ, ಮಗನೊಟ್ಟಿಗೆ ಅಮೆರಿಕಕ್ಕೆ ಹೋಗಿ ಇರ್ತೇನೆ. ಅಲ್ಲಿ ಎಷ್ಟು ಕಾಲ ಇರುದು, ಹೇಗೆ ಏನು ಅಂತೆಲ್ಲ ಗೊತ್ತಿಲ್ಲ. ವಾಪಸ್ಸು ಬಂದರೆ ಮನೆ ಅಂತೂ ಉಂಟು. ಮಗ ಕೈ ಬಿಡ್ಲಿಕ್ಕಿಲ್ಲ. ಖರ್ಚಿಗೆ ಕೊಟ್ಟಾನು. ನಾನು ಸುಮ್ಮನೆ ಬಂದ್ ಮಾಡಿ ಹೋದ್ರೆ ಅಂಗಡಿಯ ಅಕ್ಕಿ ಬೇಳೆ ಎಲ್ಲ ಇಲಿ ತಿಂದು ಹಾಳು ಮಾಡೀತು. ಹಾಗಾಗಿ ನೀವು ನಿಮ್ಮ ಅಂಗಡಿಗೆ ಬೇಕಾದ್ದು ತಕೊಂಡ್ರೆ ನಿಮಗೆ ಹೇಗೂ ವ್ಯಾಪಾರ ಆಗಿ ಹೋಗ್ತದೆ, ವೇಸ್ಟ್ ಸಾ ಆಗುದಿಲ್ಲ. ಇದ್ಕೆ ನೀವೆಂತ ಹೇಳ್ತೀರಿ ಕಿಣಿ ಮಾಮ್ ಎಂದು ಒಂದೇ ಉಸಿರಿಗೆ ಶೆಟ್ಟರು ತಮ್ಮ ಯೋಜನೆಯನ್ನ ಹೇಳಿ ಮುಗಿಸಿದರು.  
ಕಿಣಿ ಮಾಮ್ ಗಾಜಿನ ಬಾಟಲಿನ ಮೇಲೆ ಇಲ್ಲದ ಧೂಳನ್ನು ಹುಡುಕುತ್ತ, ಬಟ್ಟೆಯಿಂದ ಕೊಡವುತ್ತ “ನೋಡಿ ಶೆಟ್ರೇ, ನೀವು ಹೀಗೆ ಸೀದ ಬಂದು ಮಾತಾಡಿದ್ದು ಭಾರಿ ಖುಷಿ ಆಯ್ತು ನಂಗೆ. ಆದ್ರೆ ನಿಮ್ಮ ಪ್ರಪೊಸಲ್ ಎಂತ ಮಾಡುದು ಅಂತ ರಪಕ್ಕೆ ಹೇಳ್ಳಿಕ್ಕೆ ಆಗುದಿಲ್ಲ. ನೀವು ಹೇಳುದು ಒಂದು ಲೆಕ್ಕದಲ್ಲಿ ಕರೆಕ್ಟ್ ಉಂಟು. ಆದ್ರೆ ಹುಟ್ಟಿ ಬೆಳೆದ ಊರು ಬಿಟ್ಟು ಹೋಗ್ಲಿಕ್ಕೆ ಆಗ್ತದಾ? ಅಲ್ಲಿ ಮಾಲಿಂಗೇಶ್ವರನ ರಥೋತ್ಸವ ಸಿಗುದಿಲ್ಲ ಗೊತ್ತುಂಟಲ್ಲ” ಎಂದು ಸುಮ್ಮನೇ ಬಾರದ ನಗುವನ್ನ ಜೋರು ನಕ್ಕು ವಾತಾವರಣ ಹಗುರ ಮಾಡಲು ನೋಡಿದರು. ಆದ್ರೆ ಶೆಟ್ರು “ ನೋಡಿ ಕಿಣಿ ಮಾಮ್, ಅದನ್ನೆಲ್ಲ ಯೋಚನೆ ಮಾಡಿದ್ದೇನೆ. ಅಷ್ಟಕ್ಕೂ ನಾನೇನು ಅಲ್ಲಿಯೇ ಇರ್ಲಿಕ್ಕೆ ಹೋಗುದಿಲ್ಲ, ಬರುವ ಅಂದಾಜುಂಟು. ನೀವು ಹೇಳಿ ಈಗ, ನನ್ನ ಅಂಗಡಿ ಮಾಲು ತಕೊಳ್ತೀರಾ? ಸ್ವಲ್ಪ ಹೆಚ್ಚು ಕಡಿಮೆ ಮಾಡುವ. ನಂಗಂತೂ ಇನ್ನು ಅದ್ರಲ್ಲಿ ಉಮೇದಿಲ್ಲ. ನೀವು ಬ್ಯಾಡ ಅಂದ್ರೆ ಮುಂದಿನ ದಾರಿ ನೋಡಬೇಕು ಎಂದು ಹೊರಟು ನಿಂತರು. ಕಿಣಿಯವರ ಅಂಗಡಿಯಿಂದ ಶೆಟ್ಟರು ಹೊರಗೆ ಬರುವುದನ್ನು ನೋಡಿದ ಬಸ್ಸು ಕಾಯುತ್ತಿದ್ದ ಮಂದಿಗೆ ಆಶ್ಚರ್ಯ ಆಘಾತಗಳು ಒಟ್ಟಿಗೇ ಆದವು. ಕಿಣಿಯವರು ಶೆಟ್ಟರನ್ನು ಉದ್ದೇಶಿಸಿ ಹೇಳಿದ “ನಿಮಗೆ ನಾನು ನಾಳೆ ಹೇಳ್ತೇನೆ” ಎಂಬ ಮಾತು ಮಾತ್ರ ಹೊರಗೆ ರಸ್ತೆಯಲ್ಲಿ ಸುಳಿದು ಎಲ್ಲರ ಕಿವಿಗಳ ಒಳ ಸೇರಿಕೊಂಡಿತು. ಈ ಅಮೋಘ ವಾಕ್ಯದ ಹಿಂದಿನ ಕಾರ್ಯ ಕಾರಣಗಳು ಏನಿರಬಹುದು ಎಂಬುದರ ಬಗ್ಗೆ ಇಡೀ ಗೋಳಿಬೈಲಿನ ವಿವಿಧ ಗುಂಪುಗಳು ದಿನವಿಡೀ ಚರ್ಚೆ ನಡೆಸಿದವು. ಶೆಟ್ಟರಾಗಲಿ, ಕಿಣಿ ಮಾಮ್ ಆಗಲಿ ಇಬ್ಬರೂ ಗುಟ್ಟನ್ನು ಬಿಟ್ಟುಕೊಡದೇ ಆ ರಾತ್ರಿಯ ಮಟ್ಟಿಗೆ ಗೋಳಿಬೈಲನ್ನ ರೋಚಕ ಊಹಾಪೋಹಗಳ ಮುಗಿಲು ಮುಸುಕಲು ಬಿಟ್ಟರು.  
ಶೆಟ್ಟರ ಮಗ ಸಂಜೀವ ಅಮೆರಿಕದಿಂದ ಬಂದು ಒಂದು ತಿಂಗಳ ಹೊತ್ತಿಗೆ, ಕಿಣಿ ಮಾಮ್, ಹೆಂಡತಿ ಮಕ್ಕಳಿಗೂ ಹೇಳದೇ ಶೆಟ್ಟರಂಗಡಿಯ ಸಾಮಾನುಗಳನ್ನ ತನ್ನ ಅಂಗಡಿಗೆ ತರಿಸಿಕೊಂಡರು. ನ ಭೂತೋ ನ ಭವಿಷ್ಯತಿ ಎಂಬ ಈ ವರ್ತಮಾನವನ್ನು ಇಡಿಯ ಗೋಳಿಬೈಲು ಕಂಗಾಲಾಗಿ ನೋಡಿತು. ಶೆಟ್ಟರು ಅದಾಗಿ ಹದಿನೈದು ದಿನಕ್ಕೇ ಮಗನ ಸಮೇತ ಊರು ಬಿಟ್ಟರು. ಹೋಗುವ ಮುನ್ನ ಕಿಣಿ ಮಾಮ್ ಬಳಿ ಬಂದು ಊರಿಗೆ ಊರೇ ನೋಡುತ್ತಿರುವ ಹಾಗೆ ಕಿವಿಯಲ್ಲೇನೋ ಅಂದು ಹೋದರು. ಕಿಣಿ ಮಾಮ್ ಗೆ ಶೆಟ್ಟರು ಬಿಟ್ಟಿಯಾಗಿ ಎಲ್ಲ ಮಾಲು ಕೊಟ್ಟಿದ್ದಾರಂತೆ ಎಂದು ಒಂದಿಷ್ಟು ಜನರಂದರೆ ಇಲ್ಲ ಕಿಣಿ ಮಾಮ್ ಕಡಕ್ ಜನ, ಅವರು ದುಡ್ಡು ಕೊಟ್ಟೇ ಕೊಟ್ಟಿರುತ್ತಾರೆ, ಪೈಸೆ ಕೂಡ ಕಡಿಮೆ ಮಾಡಿರುವುದಿಲ್ಲ ಎಂದು ಇನ್ನೊಂದು ಪಂಗಡ ಹೇಳಿತು. ಶಾಲೆ ಹೆಡ್ ಮಾಸ್ಟ್ರು ರಾಂಭಟ್ರು ’ಕಿಣಿ ಮಾಮ್, ಶೆಟ್ರು ನಿಮ್ಮ ಕಿವಿಯಲ್ಲಿ ಎಂತ ಹೇಳಿದ್ದು ಮಾರ್ರೆ?’ ಎಂದಿದ್ದಕ್ಕೆ, “ಎಂತ ಎಲ್ಲ ಅಲ್ಲಿಗೆ ಹೋಗಿ ಪತ್ರ ಬರಿತೇನೆ ಅಂದ್ರು” ಎಂದಿದ್ದನ್ನು ನಿಜವಾಗಿಯೂ ಶೆಟ್ಟರ ಪತ್ರ ಬರುವವರಿಗೆ ಅವರು ನಂಬಿರಲಿಲ್ಲ. ಕುಶಲ ಸಮಾಚಾರದ ವಿವರಗಳಿದ್ದ ಪತ್ರದ ಜೊತೆಗೆ ಒಂದು ಫೋಟೋ ಕೂಡ ಇತ್ತು. ಆ ಫೋಟೋದಲ್ಲಿ ಶೆಟ್ಟರು ತಮ್ಮ ಮಗ ಮತ್ತು ಹೊಟ್ಟೆ ದೊಡ್ಡದಾಗಿದ್ದ ಸೊಸೆಯ ಜೊತೆ ನಿಂತುಕೊಂಡಿದ್ದರು. ಅವರ ಹಿನ್ನೆಲೆಯಲ್ಲಿ ವಾಲ್ ಮಾರ್ಟ್ ಎಂಬ ಅಗಾಧ ಬೋರ್ಡೊಂದು ಕಣ್ಣಿಗೆ ರಾಚುವಂತೆ ಕಾಣುತ್ತಿತ್ತು.



(ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಗಳಿಸಿದ ಕಥೆ)

ಬುಧವಾರ, ಡಿಸೆಂಬರ್ 19, 2012

ಕೊರಗಲಾಗದವರು



ತೇರು ಎಳೆದಾಗಿದೆ
ಅರ್ಚಕರು ಹೊತ್ತಿದ್ದ ಉತ್ಸವ ಮೂರ್ತಿ
ಇಳಿದು ಮರಳಿದೆ ಗರ್ಭಗುಡಿಯ ಕತ್ತಲಿಗೆ
ಮುಗಿದಿದೆ ದೇವರ ಹೆಸರಿನ ಜಾತ್ರೆ
ಕಳಚುತ್ತಿದ್ದಾರೆ ಕಂಬದ ಮೇಲಿನ ಮೈಕು
ಬಾಡಿಗೆ ಬೆಳಕಿನ ಬಣ್ಣದ ಸರ
ಕೊನೆಯ ಐಸ್ಕ್ರೀಮು ಗಾಡಿಯೂ ಹೊರಟು
ಉಂಡೆಲೆಗಳನೂ ಎಸೆದ ಮೇಲೆ ಸಿಕ್ಕಿದೆ
ತೇರ ಬೀದಿಯ ಅಂಚಲ್ಲಿ ಕಾದ ಮಂದಿಯ ಬುಟ್ಟಿಗೆ ಒಂದಿಷ್ಟು ಅನ್ನ

ಜೊತೆಗೊಂದಿಷ್ಟು ಸಾರು ಸಾಂಬಾರು
ಇನ್ನೇನು ಹಳಸುವ ಪಲ್ಯ
ತಲೆಯ ಮೇಲೆ ಅನ್ನಬ್ರಹ್ಮನ ಹೊತ್ತು
ಹೊರಟಿದೆ ಹಸಿದ ಕಾಲುಗಳ
ಖಾಸಗಿ ಮೆರವಣಿಗೆ ಮನೆಯ ಕಡೆಗೆ

ಮೃಷ್ಟಾನ್ನದ ಕೊನೆಯ ಅಧಿಪತಿಗಳ
ಹೊಟ್ಟೆ ತುಂಬಿ ಉಳಿದ ಕೂಳು
ಈಚಲ ಚಾಪೆಗಂಟಿಕೊಂಡು ಒಣಗುತ್ತಿರುವ
ಇಳಿ ಮಧ್ಯಾಹ್ನ ಸೂರ್ಯನ ಪ್ರಭೆಗೂ
ಮೀರಿದ ಕಾಂತಿ ಸಂತೃಪ್ತ ಮುಖಗಳಲಿ ಪ್ರತಿಫಲನ

ಯಜಮಾನನಿಗೆ ಸಂಜೆ ಮತ್ತಿದೆ ಕೆಲಸ
ದೇವಳದ ಸಂಭ್ರಮ ಮುಗಿದಿಲ್ಲ ಇನ್ನೂ
ರಾತ್ರಿ ಪೂಜೆಗು ಮುನ್ನ
ಸುತ್ತ ನಾಲ್ಕೂರಿಗೆ ಕೇಳುವ ಸಿಡಿಮದ್ದು
ಆ ಕ್ಷಣ ಮಾಡುವ ಸದ್ದಿಗೆ ಅವನೆ ಮಾಲಿಕ
ನೆಮ್ಮದಿಯ ನಿದ್ದೆಗೆ ಸದ್ದು ಬೇಕಿದೆ.

ಬೆಳಗಾದರೆ ಬಿಗಿಗೊಳಿಸಬೇಕು ಡೋಲು
ಮಹಲ ಮನೆಯ ಮೋಜಿನ
ಮೇಜವಾನಿಗೂ ಮುನ್ನ ಕಡ್ಡಾಯವಾಗಿ
ಕೇಳಬೇಕಿದೆ ಇವರ ಕಡ್ಡಾಯಿ ದನಿ
ಮತ್ತೆ ಸಂಸಾರಕ್ಕಿಡೀ ಬಾಳೆತುಂಬ ಊಟ
ಸಂಪ್ರದಾಯದ ಹೆಸರಲಿ ಸೇರಿಸಿರುವ
ಕೂದಲು ಉಗುರುಗಳ ಹೆಕ್ಕಿ ಪಕ್ಕಕ್ಕಿಟ್ಟರೆ
ಇಳಿಯಬಹುದು ಗಂಟಲ ತುತ್ತು.

ಅರಸನ ಅನ್ನವನುಂಡು ನಡೆದರೆ ಮತ್ತೆ ನಾಳಿನ ಚಿಂತೆ
ಸತ್ತರಾದರೆ ಸುತ್ತಮುತ್ತ ಯಾರಾದರೂ
ತಮಟೆಗೆ ಕೆಲಸ ರಟ್ಟೆಗೆ ದುಡಿತ
ಬಲ್ಲವರು ಅನ್ನುವರು ಕಾನೂನು
ಹೀಗಿಲ್ಲ, ಇದಕ್ಕೆ ಅನುಮತಿಯಿಲ್ಲ ಹೀಗೆ ಬದುಕ
ಬೇಕಿಲ್ಲ , ನಿಷೇಧ ಜೈಲು ಅರ್ಥವಾಗದ ಮಾತು

ಯೋಜನೆಗಳೆಂಬ ತೂತುಕೊಡದ ನೀರು ಮನೆವರೆಗಿಲ್ಲ
ಬೆಳಕ ದಾರಿಯ ತೋರಿಸಲು
ಬಂದವಗೆ ತೆರಬೇಕಿದೆ ಸುಂಕ
ನಾಳಿನನ್ನಕೆ ದಿಕ್ಕು ತೋರದೆ ನಿನ್ನೆಯದೆ ಹಾದಿ
ಹಿಡಿಯುವಂತಾಗಿದೆ
ಇಷ್ಟೆಲ್ಲ ಆದರೂ ಕೊರಗಲಾದವರು ಅವರು
ಮಿಣುಕು ಕಂದೀಲಿನ ದೀಪದಲೂ
ನಕ್ಷತ್ರಗಳ ಹೊಳಪ ಹುಡುಕುವವರು.
ಕೊರಗುತ್ತಲೇ ಕೂತರೆ ಉಣಿಸಲು ಬರುವವರು ಯಾರು?

ಕಡ್ಡಾಯಿ: ಕೊರಗ ಸಮುದಾಯದವರು ಬಾರಿಸುವ ವಾದ್ಯದ ಹೆಸರು.
ಕವನಕ್ಕೊಂದು ಟಿಪ್ಪಣಿ:
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಕೊರಗ ಸಮುದಾಯದ ಜೀವನ ಶೈಲಿಯ ಕುರಿತ ಕವನ ಇದು. ಇಂದಿಗೂ ಕೂಡ ಉಭಯ ಜಿಲ್ಲೆಗಳ ಬಹಳಷ್ಟು ಕಡೆಗಳಲ್ಲಿ ಕೊರಗ ಜನಾಂಗವನ್ನು ಬಹು ನಿಕೃಷ್ಟವಾದ ಜೀವನಪದ್ದತಿಗೆ ದೂಡಲಾಗಿದೆ. ಕಾನೂನಿನ ಅಭಯಹಸ್ತ ಇನ್ನೂ ಅವರನ್ನು ತಲುಪಿಲ್ಲ. ಸತ್ತವರ ಮನೆ ಮುಂದೆ ತಮಟೆ ಬಾರಿಸುವ ಕೆಲಸ ಕೊರಗರದು. ಶ್ರೀಮಂತರ ಮನೆಗಳ ಸೀಮಂತ ಇತ್ಯಾದಿ ಸಮಾರಂಭಗಳಲ್ಲಿ ಉಗುರು, ಕೂದಲು ತುಂಬಿದ ಅನ್ನವನ್ನ ಕೊರಗರಿಗೆ ನೀಡಲಾಗುತ್ತದೆ. ಉಂಡು ಹೆಚ್ಚಾಗಿ ಉಳಿದ ಅನ್ನವನ್ನ ಒಣಗಿಸಿ ಸಂಗ್ರಹಿಸಿಟ್ಟುಕೊಳ್ಳುವ ಅನಿವಾರ್ಯತೆ ಅವರದು. ದೇವಸ್ಥಾನಗಳ ಜಾತ್ರೆಗಳಲ್ಲಿ ಅಪಾಯಕಾರಿ "ಕದೊನಿ" ಎಂಬ ಸಿಡಿಮದ್ದು ಸಿಡಿಸುವ, ಕಂಬಳಗಳಲ್ಲಿ ಡೋಲು ಬಾರಿಸುವ ಕೆಲಸಗಳನ್ನ ಕೊರಗರು ಮಾಡುತ್ತಲೇ ಬಂದಿದ್ದಾರೆ. ಆದರೆ ಅವರಿಗೂ ಅದನ್ನೆಲ್ಲ ಮಾಡದೇ ವಿಧಿಯಿಲ್ಲ. ಬೇರೆ ಸಂಪಾದನೆಯಿಲ್ಲ. ಅವರನ್ನು ರಕ್ಷಿಸುವ ಕಾನೂನಿನ ಬಗ್ಗೆ ಮಾಹಿತಿ ಅವರಿಗಿನ್ನೂ ಸಮರ್ಪಕವಾಗಿ ತಲುಪಿಲ್ಲ. ಹೀಗಾಗಿ ಇನ್ನೂ ಈ ಮುಗ್ಧ ಜನರ ಶೋಷಣೆ ಮುಂದುವರಿದಿದೆ.

ಸೋಮವಾರ, ಡಿಸೆಂಬರ್ 17, 2012

ಸೇತು ಬಂಧ



ನಾನು ಹೈಸ್ಕೂಲಿಗೆ ಹೋಗಬೇಕಿದ್ದರೆ ಮನೆಯಿಂದ ಶಾಲೆಗೆ ಸುಮಾರು ನಾಲ್ಕೈದು ಕಿಲೋಮೀಟರು ನಡೆಯಬೇಕಾಗಿತ್ತು. ಗದ್ದೆ ಹಾಡಿ ಹಳ್ಳ ತೋಡು ಸಣ್ಣ ನದಿ ಗುಡ್ಡ ಎಲ್ಲ ಹಾದುಕೊಂಡು ನಮ್ಮ ಪಯಣ ಸಾಗುತ್ತಿತ್ತು. ನಾಲ್ಕೆಂಟು ತೊರೆಗಳು ಒಟ್ಟಾಗಿ ನದಿ ಆಗುವ ಹಾಗೆ, ಎಲ್ಲೆಲ್ಲಿಂದಲೋ ಹುಡುಗರೆಲ್ಲ ಒಂದೆರಡು ನಿರ್ದಿಷ್ಟ ಸ್ಥಾನದಲ್ಲಿ ಒಟ್ಟಾಗಿ, ಕೊನೆಯ ಒಂದೆರಡು ಕಿಲೋಮೀಟರು ದೊಡ್ಡ ದಂಡೇ ಶಾಲೆಯ ಕಡೆ ನಡೆಯುತ್ತಿತ್ತು, ನದಿ ಸಮುದ್ರಕ್ಕೆ ಸೇರುವ ಹಾಗೆ. ಬೆಳ್ಳಂ ಬೆಳಗ್ಗೆ ಹರಟೆ ಹೊಡೆಯುತ್ತ,  ಅಬ್ಬ,ಬಚಾವ್.. ನನ್ನ ಹಾಗೆ ನನ್ನ ದೋಸ್ತಿಯೂ ಹೋಂ ವರ್ಕು ಮಾಡಿಲ್ಲವಲ್ಲ, ಹೊರಗೆ ನಿಲ್ಲಿಸಿದರೆ ಜೊತೆಗೊಂದು ಜನ ಗ್ಯಾರೆಂಟಿ ಎಂಬ ಅರೆ ಸಮಾಧಾನ ಹೊಂದುತ್ತ ನಮ್ಮ ನಡಿಗೆ ಸಾಗುತ್ತಿತ್ತು. ನಮ್ಮ ಈ ದಂಡು ಸೇರುವುದು ಮಾತ್ರ ಒಂದು ನಿರ್ದಿಷ್ಟ ಜಾಗದಲ್ಲಿ. ಆಚೀಚಿನ ಹಳ್ಳಿಗಳ ಹುಡುಗರೆಲ್ಲ ಬಂದು ಸೇರಿಕೊಳ್ಳುವುದು, ಮುಖ್ಯ ರಸ್ತೆಯಲ್ಲಿರುವ ಒಂದು ಪುಟ್ಟ ಸೇತುವೆಯ ಬಳಿ. ಬೆಳಗ್ಗೆ ಯಾರು ಎಷ್ಟು ಬೇಗ ಬೇಕಾದರೂ ಬಂದಿರಲಿ, ಮಳೆಯೇ ಇರಲಿ ಚಳಿ, ಬಿಸಿಲಿನ ಕಾಲವೇ ಆಗಲಿ, ಆ ಸೇತುವೆಯ ಮೇಲೆ ಕೂತು ಎಲ್ಲ ಬಂದ ಮೇಲೆ ಶಾಲೆಗೆ ಮುಂದುವರಿಯುವುದಾಗಿತ್ತು. ಆದರೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದೇ ಬಿಡುತ್ತಾರೆ ಎನ್ನುವ ಭರವಸೆ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಕಾದು ಕಾದು ಸುಸ್ತಾದ ಒಂದು ಗುಂಪು, ತಾವು ಮುಂದಕ್ಕೆ ಹೋಗಿದ್ದೇವೆ ಎಂಬುದಕ್ಕೆ ಸೂಚನೆಯಾಗಿ ಸೇತುವೆಯ ಮೂಲೆಯಲ್ಲಿ ಹತ್ತಿರದ ಮರ ಸೊಪ್ಪಿನ ಗೆಲ್ಲು ತರಿದು ನೇತು ಹಾಕಿ ಹೋಗುತ್ತಿತ್ತು. ಹಿಂದಿನಿಂದ ಬಂದ ತಂಡ ಮತ್ತೆ ಯಾರಿಗೂ ಕಾಯದೇ ಸೀದಾ ಶಾಲೆಗೆ. ಕಲ್ಲು ಗುಪ್ಪೆ, ಸೊಪ್ಪು, ಹೂ ಗೊಂಚಲು ಹೀಗೆ ಒಂದು ಗುಂಪಿಗೆ ಒಂದೊಂದು ಗುರುತು. ಹೀಗೆ, ಸುಮ್ಮನೆ ಮಲಗಿದ್ದಲ್ಲೇ ಇದ್ದ ಆ ಸೇತುವೆ ನಮ್ಮ ನಡುವಣ ಸಂದೇಶ ವಾಹಕನಾಗಿ ಕೆಲಸ ಮಾಡುತ್ತಿತ್ತು. ಕೆಲ ಬಾರಿ ಇಟ್ಟಿದ್ದ ಸೊಪ್ಪು ಕೆಳಗೆ ನದಿಗೆ ಬಿದ್ದು ಹೋಗಿ, ನಮ್ಮ ನಮ್ಮಲ್ಲಿ ಅನ್ಯಾಯವಾಗಿ ಜಗಳ ಬೇರೆ. ಸುಮ್ಮನೇ ಅಲ್ಲಿ ಕೂತು ನಾವು ಬರುತ್ತೇವೆ ಅಂತ ಕಾದು, ತಡವಾಗಿ ಶಾಲೆಗೆ ಬಂದು ಬೈಸಿಕೊಳ್ಳುವಾಗ. ಸೊಪ್ಪು ಇಟ್ಟೇ ಇಲ್ಲ ಅಂತ ಬೈಸಿಕೊಂಡವರೂ, ಇದ್ದೆಲ್ಲ ದೇವರುಗಳ ಮೇಲೆ ಆಣೆ ಹಾಕುತ್ತ ಕುತ್ತಿಗೆ ಚರ್ಮ ಎಳೆದುಕೊಳ್ಳುತ್ತ ನಾವೂ ಬಾಯಿ ಮಾಡುತ್ತಿದ್ದವು. 
ಆದರೆ ಎಂತದ್ದೇ ಜಗಳ ಆದರೂ, ಸಂಜೆ ಅದೇ ಸೇತುವೆ ನಮ್ಮನ್ನ ಒಟ್ಟು ಮಾಡುತ್ತಿತ್ತು. ಸೀಸನ್ನಿಗೆ ಅನುಸಾರವಾಗಿ ಸಿಕ್ಕಿದ್ದ ಹುಣಸೆ ಮಾವು ಯಾರದೋ ತೋಟದಿಂದ ಕದ್ದ ಕಬ್ಬು ಕೊನೆಗೆ ಎಂತದೂ ಇಲ್ಲದಿದ್ದರೆ ಹೊಳೆ ದಾಸವಾಳ ಹಣ್ಣಾದರೂ ಅಲ್ಲೇ ಪಾಲಾಗುತ್ತಿತ್ತು. ಸುಮ್ಮನೆ ಕೆಳಗೆ ಹರಿಯುವ ಹೊಳೆ ನೋಡುತ್ತ, ಯಾವುದೇ ಗೊತ್ತು ಗುರಿ ಇಲ್ಲದೇ ನೀರಿಗೆ ಕಲ್ಲೆಸೆಯುತ್ತ ಅದು ಮಾಡುವ ಬುಳಕ್ ಬುಳಕ್ ಸದ್ದು ಕೇಳುತ್ತ ಸಂಜೆಗತ್ತಲಾಗುತ್ತಿದ್ದ ಹಾಗೆ ಮನೆ ದಾರಿ ಹಿಡಿಯುತ್ತಿದ್ದೆವು. ನಮ್ಮಲ್ಲೇ ಕೆಲ ಧೈರ್ಯದ ಭೂಪರು ಶಾಲೆ ಚೀಲವನ್ನು ಅಲ್ಲೇ ಮರಕ್ಕೆ ನೇತು ಹಾಕಿ, ಯುನಿಫಾರಂ ಬಿಚ್ಚಿಟ್ಟು ಸೇತುವೆಯಿಂದ ಲಾಗ ಹೊಡೆದು ಈಜುತ್ತಿದ್ದದ್ದೂ ಉಂಟು. ಈಜಿನ ಎಬಿಸಿಡಿ ಗೊತ್ತಿಲ್ಲದ ನಾನು ಮೇಲೆ ಕೂತೇ ಸ್ನೇಹಿತರ ಹುಚ್ಚಾಕ್ಕೆ ಚಪ್ಪಾಳೆ ತಟ್ಟುತ್ತಿದ್ದೆ. ಕೊನೆಗೂ ನಾನಲ್ಲಿ  ಈಜು ಕಲಿಯುವ ಮನಸ್ಸೇ ಮಾಡಲಿಲ್ಲ ಎನ್ನುವುದು ಇವತ್ತಿಗೂ ಕೊರಗೇ. ಒಂದು ದಿನ ದೋಸ್ತಿಯೊಬ್ಬ ಅದೇ ಸೇತುವೆ ಮೇಲೆ ಕೂತು ಗಾಳ ಕೂಡ ಹಾಕುವುದನ್ನ ಕಲಿಸಿದ್ದ. ಉದ್ದ ಕೋಲಿಗೆ ಎಂಥದೋ ಕೊಕ್ಕೆ ರ ಮಾಡಿ, ಎರೆಹುಳ ಹಿಡಿದು ನೀರಿಗೆ ದಾರ ಎಸೆದು ಕೂರುತ್ತಿದ್ದ. ಮೀನು ಗಾಳಕ್ಕೆ ಸಿಕ್ಕ ಕೂಡಲೇ ಪಟಕ್ಕೆಂದು ಕೋಲೆತ್ತಿ ಮೀನು ಬಿಡಿಸಿಕೊಂಡು ಪ್ಲಾಸ್ಟಿಕ್ಕಿಗೆ ಹಾಕಿಕೊಳ್ಳುತ್ತಿದ್ದ.  ಅವನು ನನಗೆ ಗಾಳ ಹಾಕುವುದನ್ನು ಹೇಳಿಕೊಟ್ಟ ಮೊದಲ ದಿನವೇ, ಅಪ್ಪನ ಸ್ನೇಹಿತರು ಯಾರೋ ನನ್ನನ್ನ ನೋಡಿದವರು ನಿಮ್ಮ ಮಗ ದಾರಿ ತಪ್ಪಿದ್ದಾನೆ, ಶಾಲೆಗೆ ಹೋಗದೇ ಗಾಳ ಹಾಕುತ್ತ ಕೂತಿದ್ದಾನೆ ಎಂಬಿತ್ಯಾದಿ ಮಾಹಿತಿಗಳನ್ನು ಉಪ್ಪುಖಾರ ಸಮೇತ ಸೇರಿಸಿ ನಾನು ಮೀನುಗಾರಿಕೆಯೆಂಬ ಉದ್ಯಮದಲ್ಲಿ ಮುಂದುವರಿಯುವ ಸಾಧ್ಯತೆಗೆ ಕಲ್ಲು ಹಾಕಿದರು. 

ನಮ್ಮ ಗುಂಪಿನಲ್ಲೇ ಇದ್ದು, ಕೊನೆ ಕೊನೆಗೆ ಸೊಪ್ಪಿನ ಚಂಡೆ ಇಟ್ಟು ಮುಂದೆ ಹೋಗುತ್ತಿದ್ದ ಗೆಳೆಯ ಗೋಪಾಲನ ಪ್ರೇಮ ಪ್ರಕರಣ ಕೂಡ ಶುರುವಾಗಿದ್ದು ಅದೇ ಸೇತುವೆಯಲ್ಲಿ ಅಂತ ನಮಗೆ ಗೊತ್ತಾಗಿದ್ದು ಬಹಳ ಕಾಲದ ನಂತರ. ದಿನಾ ಬೇಗ ಸೇತುವೆಯ ಹತ್ತಿರ ಬಂದು ಕಾಯುತ್ತಿದ್ದ ಗೋಪಾಲನಿಗೆ ಬೇಗನೆ ಶಾಲೆಗೆ ಹೋಗುತ್ತಿದ್ದ ನಮ್ಮ ಜೂನಿಯರು, ಎಂಟನೇ ಕ್ಲಾಸು ಹುಡುಗಿಯೊಬ್ಬಳ ಜೊತೆ ನಗು ವಿನಿಮಯ ಆಗಿ ಆಗಿ, ಕೊನೆಗೆ ಆತ ನಮ್ಮ ತಂಡ ಬಿಟ್ಟು ಅವಳ ಜೊತೆಗೇ ಹೋಗಿ ಬರಲು ಆರಂಭಿಸಿದ್ದ. ಆದರೆ ಒಂದೇ ವರ್ಷದೊಳಗೆ ಮತ್ತೆ ಹತ್ತನೇ ಕ್ಲಾಸಿಗೆ ಅವನು ನಮ್ಮ ಟೀಮಿಗೇ ವಾಪಾಸಾಗಿ ಪ್ರೀತಿ ನಶ್ವರ ಎಂಬಿತ್ಯಾದಿ ಮಾತುಗಳನ್ನ ಆಡಲು ಶುರು ಮಾಡಿದ್ದ. ಆದರೆ ನಮ್ಮಗಳಿಗೆ ಆಗತಾನೇ ಲವ್ವಿನ ಬಗ್ಗೆ ಆಸಕ್ತಿ ಹುಟ್ಟಲು ಶುರುವಾಗಿದ್ದರಿಂದ ಅವನ ಉಪದೇಶಗಳಿಗೆ ಸೊಪ್ಪು ಹಾಕಲಿಲ್ಲ ಅನ್ನುವುದು ಬೇರೆ ವಿಷಯ. ನಾನೂ ಗೋಪಾಲನ ಹಾಗೆ ಒಂದಿಷ್ಟು ದಿನ ಬೇಗ ಬಂದು ಸೇತುವೆಯ ಸುತ್ತ ಠಳಾಯಿಸಿದೆ. ಒಂದೇ ಒಂದು ಮಿಕ ಕೂಡ ಬಲೆಗೆ ಬೀಳದೇ ನಿರಾಶನಾಗಿ ನನ್ನ ಪ್ರಯತ್ನ ಕೈಬಿಟ್ಟೆ. 
ಹೀಗೆ ಯಕಶ್ಚಿತ್ ಸೇತುವೆಯೊಂದು ಯಾವುದೇ ಉದ್ದೇಶಗಳಿಲ್ಲದ ಸ್ವಾರ್ಥಗಳಿಲ್ಲದ ಆ ವಯಸ್ಸಿನಲ್ಲಿ  ನಮ್ಮ ಸ್ನೇಹ ಆಟ ಪ್ರೇಮಗಳಿಗೆ ವೇದಿಕೆಯೊದಗಿಸಿತ್ತು. ಒಂದಿಷ್ಟು ದಿನ ನಾವು ಸಂಕ ಫ್ರೆಂಡ್ಸ್ ಎನ್ನುವ ಹೆಸರಲ್ಲಿ ಕ್ರಿಕೆಟ್ ಟೀಮ್ ಕೂಡ ಕಟ್ಟಿದ್ದೆವು. ಶನಿವಾರ ಭಾನುವಾರಗಳಂದು ನಡೆಯುವ ಟೂರ್ನಮೆಂಟುಗಳಲ್ಲಿ ನಾವು ಹೇಗೆ ಎದುರಾಳಿ ತಂಡಕ್ಕೆ ಮಣ್ಣು ಮುಕ್ಕಿಸಬೇಕು ಎಂದು ಪ್ಲಾನು ಮಾಡಿ, ರಣೋತ್ಸಾಹದಲ್ಲಿ ಹೋಗಿ, ವೀರೋಚಿತ ಹೋರಾಟದ ಉದ್ದೇಶ ಹೊಂದಿ ಕಣಕ್ಕಿಳಿದು ಕೊನೆಗೆ ಹೀನಾಯವಾಗಿ ಸೋತು ವಾಪಸ್ಸು ಬರುತ್ತಿದ್ದೆವು. ಮತ್ತೆ ಅದೇ ಸೇತುವೆಯ ಅಕ್ಕ ಪಕ್ಕದಲ್ಲೋ ಕೆಳಗೆ ತೆಳುವಾಗಿ ಹರಿಯುತ್ತಿದ್ದ ನೀರಲ್ಲೋ ಬಿದ್ದುಕೊಂಡು ಯಾರ ಮೇಲೆ ತಪ್ಪು ಹೊರಿಸುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆವು. ಟೀಮು ಶುರುವಾದಷ್ಟೇ ಬೇಗ ನೇಪಥ್ಯಕ್ಕೂ ಸರಿಯಿತು. ಸಖ್ಯ ಮಾತ್ರ ಮುಂದುವರಿಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರುತ್ತಿದ್ದ ಹಾಗೆ, ಸೇತು ಬಂಧ ಕಡಿಮೆಯಾಯಿತು.

ಪರೀಕ್ಷೆಗೆ ಓದಲೆಂದೇ ನಂಗೆ ಇನ್ನೊಂದು ಸೇತುವೆ ಸಹಾಯ ಮಾಡಿದೆ. ನಮ್ಮ ಮನೆಯ ಕೂಗಳತೆ ದೂರದಲ್ಲೇ ಪುಟ್ಟ ಕಾಲುವೆ ಇದೆ. ಮಳೆಗಾಲದಲ್ಲಿ ಮಾತ್ರ ನೀರು ಬಲವಾಗಿ ಹರಿಯುವ ಆ ಕಾಲುವೆಗೆ ಪ್ರತಿವರ್ಷ ಅಣೆಕಟ್ಟು ಕಟ್ಟುತ್ತಾರೆ. ಅಕ್ಟೋಬರ್ ಹೊತ್ತಿಗೆ ನೀರಿಗೆ ಒಡ್ಡು ಕಟ್ಟಿದರೆ, ಸುಮಾರು ಫೆಬ್ರವರಿ ಮಾರ್ಚ್ ತನಕವೂ ನೀರು ನಿಂತು, ಪೈರುಗಳಿಗೆ ತಂಪು ನೀಡುತ್ತವೆ. ಆ ಅಣೆಕಟ್ಟಿನ ಮೇಲಿನ ಸೇತುವೆಯಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ. ಸುತ್ತ ಮರಗಳ ನೆರಳು. ಗೋಣಿ ಚೀಲವೊಂದನ್ನ ತೆಗೆದುಕೊಂಡು, ಸೇತುವೆಯ ಕಟಾಂಜನಕ್ಕೆ ಒರಗಿಕೊಂಡು ಪುಸ್ತಕ ಹಿಡಿದು ಓದಲು ಕೂತರೆ, ಹಕ್ಕಿಗಳ ಚಿಲಿಪಿಲಿ, ನಿಂತ ನೀರಿನ ಮೇಲೆ ಹಾದು ಬರುವ ಗಾಳಿಯ ತಂಪು. ಕಟಾವಿನ ಸಂದರ್ಭದಲ್ಲಿ ಮಾತ್ರ ಆಚೀಚಿನ ಗದ್ದೆಗಳಲ್ಲಿ ಹೆಂಗಸರ ಕಚಿಪಿಚಿ. ಏನೇ ಇದ್ದರೂ, ಅಲ್ಲಿ ಕೂತರೆ ಒಂಥರಾ ಧ್ಯಾನಸ್ಥ ಸ್ಥಿತಿ. ಆದ್ರೆ ಒಳ್ಳೇ ಊಟ ಮಾಡಿಕೊಂಡು ಓದಲು ಹೋದಾವಾಗ ಅದೆಷ್ಟು ಮಧ್ಯಾಹ್ನ ಅಲ್ಲಿ ಜೊಂಪು ಹತ್ತಿದೆಯೋ ಏನೋ. ಯಾರಾದರೂ ಕೊಯ್ಲು ಮಾಡುವ ಹೆಂಗಸರೋ, ದಾರಿಹೋಕರೋ ನೋಡಿ, ಎಂತ ಮಾರ್ರೆ, ಓದ್ಲಿಕ್ಕೆ ಬಂದು ನಿದ್ರೆ ಮಾಡುದಾ ಅಂತ ನಕ್ಕರೆ, ಇಲ್ಲ ಸ್ಪಲ್ಪ ಹೀಗೆ ಎಂದು ಪೆಚ್ಚು ನಗೆ ನಕ್ಕು, ಮತ್ತೆ ಪುಸ್ತಕದೊಳಗೆ ತಲೆ ತೂರಿಸುವ ಯತ್ನ.

ಅದೇ ಸೇತುವೆ ಮೇಲಿಂದ ಸಂಜೆ ಹೊತ್ತಿಗೆ ಆಲಿಂಡಿಯಾ ರೇಡಿಯೋದ ಮಂಗಳೂರು ಆಕಾಶವಾಣಿಯ ಪ್ರಾದೇಶಿಕ ವಾರ್ತೆ , ಕೃಷಿರಂಗದ ಧ್ವನಿ ತೇಲಿ ಬರುತ್ತಿತ್ತು. ಆ ಸಂಕದ ಕೊಂಚ ಮೇಲಕ್ಕೆ ಇರುವ ಮನೆಯ ಹಸನಬ್ಬ ಸಾಹೇಬರು ಮೊದಲಿಂದಲೂ ಆಕಾಶವಾಣಿಯ ಕೇಳುಗ. ಯಾವಾಗ ಮನೆಯಲ್ಲಿ ಟಿವಿ ಬಂದು, ಆಮೇಲೆ ಡಿಶ್ ನ ಗೌಜಿ ಕೂಡ ಶುರುವಾಯಿತೋ, ಆವತ್ತಿಂದ ಸಂಜೆ ಹೊತ್ತಿಗೆ ಅವರು ತಮ್ಮ ಆರು ಶೆಲ್ಲಿನ ರೇಡಿಯೋ ಹಿಡಿದುಕೊಂಡು ಬಂದು ಇದೇ ಸಂಕದ ಮೇಲೆ ಕೂರುವುದನ್ನ ಅಭ್ಯಾಸ ಮಾಡಿಕೊಂಡರು. ಯುವವಾಣಿ ಮುಗಿಯುವ ವರೆಗೂ ಹಸನಬ್ಬ ಸೇತುವೆಯ ಸುತ್ತ ಮುತ್ತ ಓಡಾಡಿಕೊಂಡು ರೇಡಿಯೋ ಕೇಳುತ್ತಿದ್ದರು. ಕೆಲ ಬಾರಿ ಅವರಿಗೆ ನರಸಿಂಹ ಭಟ್ಟರೋ, ಯಂಕಪ್ಪ ಶೆಟ್ಟರೋ ಜೊತೆಯಾಗುತ್ತಿದ್ದದ್ದೂ ಉಂಟು. ಕೊಳ್ಳಿದೆವ್ವಗಳ ಹಾಗೆ ಬ್ಯಾಟರಿ ಬೆಳಕು ಆಕಾಶಕ್ಕೆ ತೋಟಕ್ಕೆ ಬಿಟ್ಟುಕೊಂಡು ಎರಡು ಮೂರು ಜೀವಗಳು ಅಲ್ಲಿ ಓಡಾಡುವುದು ನಮ್ಮ ಮನೆಗೆ ಕಾಣುತ್ತಿತ್ತು. ವಾರ್ತೆ ಗೀರ್ತೆ ಕೇಳಿ ಎಲ್ಲ ಹಾಳಾಗಿ ಹೋಗಿದೆ ಭಟ್ರೆ, ಒಟ್ಟಾರೆ ಯಾವುದು ಬರ್ಕತ್ತಿಲ್ಲ ಎಂದು ಹೇಳಿದ ಹಸನಬ್ಬ ಮನೆಗೆ ಹೊರಡುತ್ತಿದ್ದರು. ಒಂದು ಚಳಿಗಾಲದಲ್ಲಿ ಹಸನಬ್ಬರು ರೇಡಿಯೋ ಕೇಳುತ್ತಾ  ಓಡಾಡುತ್ತಿದ್ದವರು ಆಳುದ್ದ ನೀರಿಗೆ ಆಯತಪ್ಪಿ ಬಿದ್ದು ಬೊಬ್ಬೆ ಹೊಡಕೊಂಡರು. ರೇಡಿಯೋ ಸದ್ದಿನ ಮಧ್ಯೆ ಇವರ ಬೊಬ್ಬೆ ಯಾರಿಗೂ ಕೇಳಲಿಲ್ಲ. ಎಲ್ಲಿಗೋ ಹೋಗಿದ್ದ ಅವರ ಮಗ ಅದೇ ಹೊತ್ತಿಗೆ ಅಲ್ಲಿಗೆ ಬಂದಿದ್ದಕ್ಕೆ ಹಸನಬ್ಬ ಬಚಾವಾದರು. ಆವತ್ತಿನ ನಂತರ ಸಂಕದ ಕಡೆಯಿಂದ ರೇಡಿಯೋ ದನಿ ಕೇಳಿಲ್ಲ. ಅವರಿಗೂ ಟೀವಿ ಅಭ್ಯಾಸವಾಯಿತು ಅಂತ ಕಾಣುತ್ತದೆ.

ಈ ಎರಡು ಸೇತುವೆಗಳ ಜೊತೆಗಿನ ಒಡನಾಟ ನನಗೀಗ ಕಡಿಮೆಯಾಗಿದೆ. ನೆನಪಲ್ಲಿ ಇಟ್ಟುಕೊಳ್ಳುವಂತಹ ಹಲ ಸೇತುವೆಗಳು ಜೀವನದಲ್ಲಿ ಬಂದು ಹೋಗಿವೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯ ಸಮೀಪದ ಶಿಥಿಲ ಸೇತುವೆಯ ಚಂದ, ಉಡುಪಿಯ ಪಾಂಗಾಳದ ಹಳೆಯ ಸೇತುವೆ ಸೊಗಸು, ಮಂಗಳೂರಿನ ನೇತ್ರಾವತಿಯ ಮತ್ತು ತೀರ್ಥಹಳ್ಳಿಯ ತುಂಗಾನದಿಯ ಕಮಾನು ಸೇತುವೆಗಳು, ಒಳ್ಳೆಯ ಮಳೆಗಾಲದಲ್ಲಿ ಕಟೀಲಿನ ದೇವಸ್ಥಾನದ ಸೇತುವೆ ಮೇಲೆ ನಿಂತರಾಗುವ ಅನುಭೂತಿ , ಹೊನ್ನಾವರದ ಉದ್ದನೆಯ ಬ್ರಿಡ್ಜಿನ ಮೊದಲ ಬಾರಿಗೆ ಪ್ರಯಾಣಿಸಿದಾಗ ಆದ ರೋಮಾಂಚನ, ಮಂಗಳೂರು ಬೆಂಗಳೂರು ರೈಲು ಪ್ರಯಾಣದ ಎಡಕುಮೇರಿ ಸೇತುವೆ, ಚಂಬಲ್ ಕಣಿವೆಯ ಬರಡು ನದಿಯ ಮೇಲಿನ ರೈಲ್ವೇ ಪ್ರಯಾಣ ಹೀಗೆ ಹಲವು ಸೇತುವೆಗಳು ನೆನಪಲ್ಲಿವೆ.

ಸ್ನೇಹಿತನೊಬ್ಬನ ಮದುವೆಯ ಸಂಭ್ರಮಕ್ಕೆಂದು ದಾಂಡೇಲಿಗೆ ಹೋಗಿದ್ದೆವು. ಆತನ ಮಾವನ ಮನೆಯ ಕೆಳಗೇ ಕಾಳಿ ನದಿ ಭೋರೆಂದು ಸದ್ದು ಮಾಡುತ್ತ ಹರಿಯುತ್ತದೆ. ಮದುವೆಯ ಪ್ರಥಮ ರಾತ್ರಿಯ ಅಲಂಕಾರ, ಗೋಳು ಹೊಯ್ದುಕೊಳ್ಳುವಿಕೆ ಎಲ್ಲ ಮುಗಿದ ಮೇಲೆ ಮದುಮಕ್ಕಳನ್ನ ಅವರ ಪಾಡಿಗೆ ಬಿಟ್ಟ ನಾವು ನಾಲ್ಕೈದು ಮಂದಿ ಆ ಸೇತುವೆಯ ಮೇಲೆ ಹೋಗಿ ಕೂತಿದ್ದೆವು. ಸುಮಾರು ಮಧ್ಯರಾತ್ರಿ. ಅಮಾವಾಸ್ಯೆಯ ಹಿಂದು ಮುಂದಿನ ಸಮಯವೋ ಏನೋ. ಕತ್ತಲೆಂದರೆ ಕತ್ತಲು. ಕೆಳಗೆ ನದಿ ಸಿಕ್ಕಾಪಟ್ಟೆ ಸದ್ದು ಮಾಡಿಕೊಂಡು ಹರಿಯುತ್ತಿದೆ, ಶಬ್ದ ಕೇಳುತ್ತಿದೆ ಬಿಟ್ಟರೆ ಏನೆಂದರೆ ಏನೂ ಕಾಣುತ್ತಿಲ್ಲ! ಕಾಳಿ ಎಂಬ ಹೆಸರು ಆ ನದಿಗೇಕೆ ಇದೆ ಎಂಬುದು ಆವತ್ತು ನಮಗರ್ಥವಾಯಿತು. ಆ ಅಪರಾತ್ರಿಯಲ್ಲಿ ಅಲ್ಲಿನ ಸೇತುವೆ ಮೇಲೆ ಕೂತುಕೊಂಡು ಏನೇನೋ ಹರಟುತ್ತ ಕೂತಿದ್ದೆವು. ಯಾವುದೋ ಲಾರಿಯೊಂದು ತುತ್ತೂತ್ತೂ ತುತ್ತುತ್ತಾರ ಎಂದು ಹಾರ್ನು ಮಾಡಿಕೊಂಡು ನಮ್ಮನ್ನ ಹಾದು ಹೋಯಿತು. ಆ ಕಪ್ಪು ರಾತ್ರಿಯಲ್ಲಿ ಅವನು ಮಾಡಿದ ಲಯಬದ್ಧ ಸದ್ದು ಇನ್ನೂ ಕಿವಿಯಲ್ಲೇ ಇದೆ.
ಕುಮಾರ ಪರ್ವತ ಟ್ರೆಕ್ಕು ಮಾಡುವ ದಾರಿಯಲ್ಲಿ ಕಂಡ ತೂಗು ಸೇತುವೆಯೊಂದು ತನ್ನ ಹಲಗೆಗಳನ್ನು ಮಧ್ಯ ಮಧ್ಯ ಉದುರಿಸಿಕೊಂಡು ನಿಂತಿತ್ತು. ಗೆಳೆಯ ಸಂದೀಪ ಅದನ್ನ ಕಂಡವನೇ, ಪಟಕ್ಕನೆ, “ ಇದು ತೂಗು ಸೇತುವೆ ಅಲ್ಲ, ತೂತು ವೇ” ಅಂದ,ಮಧ್ಯದ ಎರಡು ಅಕ್ಷರಗಳನ್ನ ಎಗರಿಸಿ!

ತೂಗು ಸೇತುವೆ ಅಂದಾಗ ನೆನಪಾಯಿತು, ಕೊಡಚಾದ್ರಿ ಗುಡ್ಡದ ಕೆಳಗೆ ಹರಿಯುವ ಶರಾವತಿ ಕಣಿವೆಯ ಮೂಲೆಯಲ್ಲೆಲ್ಲೋ ಇರುವ ಚಿಕ್ಕಪ್ಪ ಮೊನ್ನೆ ಮೊನ್ನೆ ಫೋನು ಮಾಡಿದ್ದ. ಅವನ ಮನೆಯ ನೆತ್ತಿಯ ಮೇಲೆಲ್ಲೋ ಅಪರೂಪಕ್ಕೆ ಮೊಬೈಲಿಗೆ ಸಿಗ್ನಲ್ ಸಿಗುತ್ತದೆ. ಸುತ್ತ ಕಾಡು ಗುಡ್ಡಗಳು, ಸುಖ ಜೀವನ ಅವನ ಸಂಸಾರದ್ದು. ದಿನ ಬೆಳಗಾದರೆ ಹಕ್ಕಿ ಕೂಜನ, ಮಂಜು ಮುಸುಕು. ಇರಲಿ, ವಿಷಯ ಅದಲ್ಲ. ಅವನ ಫೋನು ಮಾಡಿದ್ದು ಬ್ರೇಕಿಂಗ್ ನ್ಯೂಸ್ ಒಂದನ್ನ ಕೊಡುವುದಕ್ಕೆ. ನಮ್ಮೂರಿಗೆ ತೂಗು ಸೇತುವೆ ಬಂತು ಮಾರಾಯ ಅಂದವನ ಧ್ವನಿಯಲ್ಲಿ ನಿಟ್ಟುಸಿರೂ ಸೇರಿಕೊಂಡಿತ್ತು. ಅಂತೂ ಬಂತಲ್ಲ ಅಂತ ನಾನೂ ಖುಷಿಯಾದೆ. ಲಿಂಗನಮಕ್ಕಿ ಹಿನ್ನೀರಿನಿಂದಾಗಿ “ಹೊಳಿಂದಾಚೆಗೆ” ಹೊಳಿಂದೀಚೆಗೆ” ಎಂಬ ಎರಡು ಬಗೆಯೆ ಊರುಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ. ಹಿನ್ನೀರಿನ ಈ ಕಡೆಯ ಮತ್ತು ಆ ಕಡೆಯ ಊರು ಹಳ್ಳಿಗಳು ಹೀಗೆ ವಿಭಜನೆಗೊಂಡಿವೆ. ಶರಾವತಿಯ ಹಿನ್ನೀರು ಸಾಗರ ಹೊಸನಗರ ಸೀಮೆಗಳ ತೋಟ ಊರು ಪಟ್ಟಣಗಳನ್ನ ಯಥಾಸಾಧ್ಯ ನುಂಗಿ ಸುರುಳಿ ಸುತ್ತಿಕೊಂಡು ಬಿದ್ದುಕೊಂಡಿದೆ. ನೀವು ಗೂಗಲ್ ಮ್ಯಾಪಿನಲ್ಲಿ ನೋಡಿದರೆ ನಾನು ಹೇಳುತ್ತಿರುವುದರ ಸರಿಯಾದ ಚಿತ್ರಣ ಸಿಕ್ಕೀತು. ಈ ನೀರಿನ ಚಕ್ರವ್ಯೂಹದಿಂದಾಗಿ ತೀರಾ ಎದುರುಗಡೆ ದಡದಲ್ಲಿ ಕಾಣುತ್ತಿರುವ ಮನೆಗೆ ಹೋಗಬೇಕೆಂದರೆ ಡಾಂಬರು ರಸ್ತೆಯಲ್ಲಿ ಹತ್ತಾರು ಕಿಲೋಮೀಟರು ಸುತ್ತು ಹಾಕಿಕೊಂಡು ಹೋಗಬೇಕಾದ ಸ್ಥಿತಿಯಲ್ಲಿ ಅಲ್ಲಿನ ಊರುಗಳವರು ಇದ್ದಾರೆ. ಅಲ್ಲಲ್ಲಿ ದೋಣಿ ಕಳವುಗಳಿದ್ದರೂ ಕೂಡ ಒದ್ದಾಟವೇನೂ ತಪ್ಪಿದ್ದಲ್ಲ. ಅಗಾಧ ವಿಸ್ತಾರದ ಶರಾವತಿ ಕೊಳ್ಳಕ್ಕೆ ಸೇತುವೆ ಕಟ್ಟುವುದು ಸುಲಭವೂ ಇಲ್ಲ. ಈಗ ಅಲ್ಲೆಲ್ಲೋ ನಿಟ್ಟೂರು ಹತ್ತಿರ ಹೊಳೆಯಾಚೆಯಿಂದ ಈಚೆಗೆ ದಾಟಲು ತೂಗು ಸೇತುವೆ ಕಟ್ಟಿದ್ದಾರೆ. ಹೆಚ್ಚೆಂದರೆ ಬೈಕು ಹೋಗಬಹುದು. ಆದರೂ ಅಲ್ಲಿನ ಜನಕ್ಕೆ ಅದೇ ಖುಷಿಯಾಗಿದೆ. ಏಕೆಂದರೆ ಜೀವನದ ಬಹುಮೂಲ್ಯ ಸಮಯವನ್ನು ಅವರುಗಳು ಗುಡ್ಡ ಬೆಟ್ಟಗಳನ್ನು ಹಾದು ಊರಿಂದೂರಿಗೆ ತಿರುಗುವುದರಲ್ಲೆ ಕಳೆದಿದ್ದಾರೆ. ತೂಗುವ ಸೇತುವೆಯೇ ಜೀವನಕ್ಕೆ ಸ್ಥಿರತೆ ತಂದಿದೆ.

ಮರಕುಟಕ ಅಂತೊಂದು ಸೇತುವೆ ಇದೆ, ಅದೇ ಕೊಡಚಾದ್ರಿಯ ತಪ್ಪಲಲ್ಲಿ. ಕೊಲ್ಲೂರು ಮತ್ತು ನಿಟ್ಟೂರೆಂಬ ಊರುಗಳ ಮಧ್ಯೆ. ಸೇತುವೆಯೊಂದಕ್ಕೆ ಯಾಕೆ ಅಂತಹ ವಿಚಿತ್ರ ಹೆಸರು ಇದೆಯೋ ನನಗೆ ತಿಳಿಯದು. ಬ್ರಿಟೀಷರ ಕಾಲದಲ್ಲಿ ಚಕ್ರಾ ನದಿಯ ಉಪನದಿಯೊಂದಕ್ಕೆ ಕಟ್ಟಿರುವ ಆ ಇಕ್ಕಟ್ಟಾದ ಸೇತುವೆಗೆ ಏನಿಲ್ಲ ಅಂದರೂ ನೂರು ನೂರೈವತ್ತು ವರ್ಷಗಳ ಇತಿಹಾಸ ಇದೆ ಅಂತ ಹತ್ತಿರದ ಊರುಗಳ ಜನ ಹೇಳುತ್ತಾರೆ. ಇನ್ನೇನು ಕುಸಿದೇ ಬಿಡುತ್ತದೆ ಎನ್ನುವಂತೆ ಕಾಣುವ ಆ ಸೇತುವೆ ಅಮೋಘವಾಗಿ ಅದೇ ಸ್ಥಿತಿಯನ್ನು ಹತ್ತೈವತ್ತು ವರುಷಗಳಿಂದ ಕಾಪಾಡಿಕೊಂಡಿದೆ. ಅದರ ಮೇಲಿನ ಅಲಂಕಾರಗಳೆಲ್ಲ ಉದುರಿ ಹೋಗಿ ಬರೀ ಇಟ್ಟಿಗೆ ಗಾರೆ ಕಾಣಲು ಆರಂಭಿಸಿದ ಹೊತ್ತಿಗೆ ನಮ್ಮಪ್ಪ ಅದೇ ಸೇತುವೆ ಮೇಲಿಂದ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದರಂತೆ. ಅವರು ಮೊನ್ನೆ ರಿಟೈರಾಗಿದ್ದಾರೆ.  ಯಾವುದೋ ಬ್ರಿಟಿಷ್ ವೈಸರಾಯ್ ನಿಂದ ತೊಡಗಿ, ನಿನ್ನೆ ಮೊನ್ನೆಯ ಎಂ.ಪಿ ಎಮ್ಮೆಲ್ಲೆಗಳೂ ಆ ಸೇತುವೆಯ ಮೇಲಿಂದ ಹಾದು ಹೋಗಿದ್ದಾರೆ! ನಾವೊಮ್ಮೆ ಎಲ್ಲೋ ಜಲಪಾತವೊಂದಕ್ಕೆ ಚಾರಣ ಹೋದವರು ವಾಪಸ್ಸು ನಡೆದುಕೊಂಡು ಬರುತ್ತಿದ್ದಾಗ ಅಚಾನಕ್ಕಾಗಿ ಮಳೆ ಬಂದಾಗ ಬಡ ಬಡನೆ ಓಡಿ ಹೋಗಿ ಆ ಸೇತುವೆಯ ಕೆಳಗೆ ಸೇರಿಕೊಂಡೆವು. ಯೇ ಹುಶಾರ್ರಪ್ಪ ಮೊದಲೇ ಇದು ಮರಕುಟ್ಕ ಸೇತ್ವೆ, ನಮ್ ಗ್ರಹಚಾರಕ್ಕೆ ಈಗ್ಲೆ ಕುಸ್ದು ತಲೆ ಬಿದ್ದಾತು ಅಂತ ಯಾರೋ ಕಿಚಾಯಿಸಿದರು. ಹಾಗೇ ಮೇಲೆ ನೋಡಿದರೆ, ಸೇತುವೆಯ ತಳ ಭಾಗ, ಗಟ್ಟಿಯಾಗೇ ಇತ್ತು. ಮೇಲಿನ ಶೃಂಗಾರ ಗಬ್ಬೆದ್ದು ಹೋಗಿದ್ದರೂ ಸುಣ್ಣ ಬೆಲ್ಲ ಗಾರೆಯ ಸೇತುವೆ ಜಬರ್ದಸ್ತ್ ಆಗಿ ನಿಂತಿತ್ತು. ನಾವೊಂದು ದಿಬ್ಬದ ಮೇಲೆ ನಿಂತಿದ್ದೆವು. ತಳಭಾಗದಲ್ಲಿ ಇಂಗ್ಲೀಷ್ ಪೇಪರ್ ಒಂದು ಅಂಟಿಕೊಂಡಿತ್ತು. ಮೆಲ್ಲನೆ ಆ ಶಿಥಿಲ ಪೇಪರನ್ನ ಹರಿದು ತೆಗೆದರೆ, ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆ ಪೇಪರು, 1900 ನೇ ಇಸವಿಯದ್ದಾಗಿತ್ತು. ಅದು ಹೇಗೆ ಅಷ್ಟೊಂದು ವರ್ಷ ಹಾಳಾಗದೆ ಉಳಿದಿತ್ತೋ ದೇವರೇ ಬಲ್ಲ. ಪೇಪರ್ರೇ ಉಳಿದಿದೆ ಎಂದ ಮೇಲೆ ಸೇತುವೆಗೆ ಏನೂ ತೊಂದರೆ ಇಲ್ಲ ಅಂತ ಎಲ್ಲ ಮಾತಾಡಿಕೊಂಡೆವು. ಈ ಘಟನೆ ಆಗಿದ್ದು ಹತ್ತು ವರ್ಷಗಳ ಹಿಂದೆ. ಈಗೇನೋ ಮರಕುಟಕ ಸೇತುವೆ ರಿಪೇರಿ ಆಗ್ತಿದೆ ಅಂತ ಸುದ್ದಿ.

ನಿನ್ನೆ ಆಫೀಸಿಗೆ ಹೋಗುತ್ತಿದ್ದೆ. ದಾರಿ ಮೇಲೆ ಯಾರದೋ ಫೋನು ಬಂತೆಂದು ರಸ್ತೆ ಪಕ್ಕ ಬೈಕು ನಿಲ್ಲಿಸಿಕೊಂಡು ಮಾತನಾಡುತ್ತಿದ್ದೆ. ನನ್ನ ಮುಂದೇ ಒಂದು ಪುಟ್ಟ ಸೇತುವೆಯಿತ್ತು, ಅದರ ಪಕ್ಕಕ್ಕೇ ಒಬ್ಬ ಹುಡುಗ ನಿಂತುಕೊಂಡು ಕತ್ತೆತ್ತಿ ಅತ್ತ ಇತ್ತ ನೋಡುತ್ತಿದ್ದ. ನಾನು ನೋಡುತ್ತಿದ್ದ ಹಾಗೇ, ಪಕ್ಕದ ಗಿಡವೊಂದರಿಂದ ಸಣ್ಣ ಟೊಂಗೆ ಮುರಿದು, ಸೇತುವೆಯ ಮೇಲಿಟ್ಟು ಹಾಗೇ ಮುಂದೆ ನಡೆದ.

ನಾನು ಮಾತನಾಡುತ್ತಿದ್ದವರ ಬಳಿ, ಒಂದು ನಿಮಿಷ ಮತ್ತೆ ಫೋನು ಮಾಡುತ್ತೇನೆ ಎಂದವನು ಸಂಕದ ಮೇಲಿದ್ದ ಟೊಂಗೆಯನ್ನೇ ನೋಡುತ್ತ ನಿಂತೆ.

ಗುರುವಾರ, ನವೆಂಬರ್ 29, 2012

ಕಾಫಿ ಮತ್ತು ಕಾಂತಾ ಸಂಹಿತೆ



ನಿನ್ನೆಯ ಅಚಾತುರ್ಯಕ್ಕೆ ಬೇಸರಿಸಬೇಡ
ಏನೋ ನಡೆದು ಹೋಯಿತು
ಬಿಡು, ಅಂತವಳು ಮಾಡಿದಾಗ
ಸಮಾಧಾನ
ಸುಮ್ಮನೆ ಸದ್ದು ಮಾಡಿದ್ದು ಕಾಫಿ ಟೇಬಲ್ಲು

ಗಾಜಿನ ಮೇಲೆ ಕಂಡ ಪ್ರತಿಫಲನದಲ್ಲೂ ಇಲ್ಲ
ತೇವಭಾವ
ಮರೆಯಬೇಕು ಎನ್ನುವುದಿಲ್ಲ ಆದರೆ
ನೆನಪಿಟ್ಟುಕೊಂಡು
ಚುಚ್ಚಿಕೊಳ್ಳುವುದೂ ಬೇಡ

ಎಂದಾಗ ಏನೋ ಹೇಳಲು ಹೋದ
ಮಾತು ಕಾಫಿಯ
ಹನಿಯೊಡನೆ ಸಿಕ್ಕಿ ಕೆಳಗೆಲ್ಲೋ
ಬಿದ್ದು ಕಳೆದು ಹೋಯಿತು
ಹುಡುಕಲು ಹೋಗಲಿಲ್ಲ

ಸಮಾಧಾನ ಮಾಡಿಕೋ
ರಿಲ್ಯಾಕ್ಸ್,
ಅಂತಂದು
ಹೆಗಲು ಸವರಿ ಎದ್ದು ಹೋದಾಗ
ವೈಟರ್ ಮಧ್ಯ ಬಂದಿದ್ದು ಯೋಗಾಯೋಗ


ಹೊರಗೆ ಬಿಸಿಲು ಜೋರಿದೆ.
ಅವಳ ಕಾಫಿಯ ಕಪ್ಪು ಮೂಡಿಸಿದ್ದ
ಹಸಿವರ್ತುಲ ನಿಧಾನ
ನಿಧಾನವಾಗಿ ಒಣಗುತ್ತಿದೆ
ತೃಷೆಯೂ.