ಬುಧವಾರ, ಜನವರಿ 23, 2008

ಜಂಗಮ ಬಿಂಬಗಳು - ೧

ಅದು ಅವರಿಬ್ಬರ ಕೊನೆಯ ಭೇಟಿ. ಇಬ್ಬರೂ ಕೂತು ಮಾತಾಡಿದರು. ಕಣ್ಣು ತುಂಬಿಕೊಂಡರು. ಪರಸ್ಪರ ಬೇರೆಯಾಗಿ ಹೊರಟರು. ಮರುದಿನ ಬೆಳಿಗ್ಗೆ , ಆಕೆ ಅವನಿಗೆ ಮತ್ತೆ ಸಿಕ್ಕಳು.
******
ಅವನಿಗೆ ಕನಸುಗಳು ಬೀಳುತ್ತಿಲ್ಲ ಅಂತ ಚಿಂತೆ. ನಿತ್ಯವೂ ಅದನ್ನೇ ಯೋಚಿಸುತ್ತ ಕೂರುತ್ತಿದ್ದ. ಕಣ್ಣೆದುರಿದ್ದ ನನಸೂ ಕಮರಿ ಹೋಯಿತು.
******
ಹೋಟಿಲಿನ ಹೊರಗೆ ಭಿಕ್ಷುಕಿಯಂತೆ ಕಾಣುವಾಕೆ ನಿಂತಿದ್ದಳು. ಮನದಲ್ಲೇ ಅಂದುಕೊಂಡೆ, "ಇವರ ಗೋಳು ತಪ್ಪಿದ್ದಲ್ಲ ನಿತ್ಯ". ಅಷ್ಟು ಹೊತ್ತಿಗೆ ಹೋಟೇಲಿನ ಹುಡುಗ, ಏನೋ ಪಾರ್ಸೆಲ್ ತಂದು ಆಕೆಯ ಕೈಗಿತ್ತ. ಆಕೆ ಮೆಲ್ಲನೆ ಅಲ್ಲಿಂದ ಹೊರಟಳು. ಛೇ, ತಪ್ಪು ತಿಳಿದೆನಲ್ಲಾ ಅಂತ ಬೇಸರವಾಯಿತು. ಬೈಕು ಹತ್ತ ಹೊರಟಾಗ ಎದುರಿಗೆ ಅವಳು ನಿಂತಿದ್ದಳು - ಕೈ ನನ್ನೆದುರು ಚಾಚಿ.
******
- ಇದೊಂದು ಹೊಸ ಯತ್ನ. ಮನಸ್ಸಿಗೆ, ಕಣ್ಣಿಗೆ ಕಂಡ ಒಂದಿಷ್ಟು ಜಂಗಮ ಬಿಂಬಗಳು.. ಆವಾಗಾವಾಗ, ನಿಮ್ಮ ಮುಂದೆ.
( ಇದು ನನ್ನ ನೂರನೇ ಪೋಸ್ಟು!)

ಭಾನುವಾರ, ಜನವರಿ 20, 2008

ಗಾಳಿಪಟ - ನನಗೆ ಕಂಡಂತೆ.

"ಏನ್ ಸಾರ್, ವ್ಹೀಲ್ ಚೇರ್ ಮೇಲೆ ಸೆಟ್ಲಾಗ್ ಬಿಟ್ಟಿದೀರಾ"? - ಅಸಹಾಯಕವಾಗಿ ಗಾಲಿ ಕುರ್ಚಿಯ ಮೇಲೆ ಕುಳಿತ ವೃದ್ಧನನ್ನು ಸಿಟಿ ಹುಡುಗ ಮಾತಾಡಿಸುವ ರೀತಿ ಇದು.

"ಹುಡುಗೀರು ಯಾವ್ ಏಜ್ ಆದ್ರೂ ಓಕೆ ಕಣೋ, ಎಲ್ಲಾ ಒಂದೇ..."ಅನ್ನುತ್ತಾ ಅರ್ಥಗರ್ಭಿತವಾಗಿ ನಗುತ್ತಾನೆ ಹೀರೋ..

"ಕರೆಕ್ಟಾಗಿ ಕಾಳ್ ಹಾಕ್ಬೇಕು ಮಗಾ".. ಅನ್ನುವುದು ಪ್ರೀತಿ ಬಗ್ಗೆ ನಾಯಕನಾಡುವ ಮಾತು...

ಯೋಗರಾಜ ಭಟ್ಟರ ಗಾಳಿಪಟ ಸಿನಿಮಾದ "ಉತ್ತಮ ಸಂಭಾಷಣೆ" ಗಳ ಮಧ್ಯದ ಕೆಲವು ಸಾಲುಗಳಿವು.


ಗಾಳಿಪಟ ಚಲನಚಿತ್ರದ ಕೆಲವು ಕುತೂಹಲ ಮೂಡಿಸುವ ಸೀನುಗಳನ್ನೂ, ಹಾಡುಗಳನ್ನೂ ಈ ಮೊದಲೇ ನೋಡಿದ್ದೆನಾದ್ದರಿಂದ ಮತ್ತು ಈ ಸಿನಿಮಾದ ಬಗ್ಗೆ ಎಲ್ಲರಂತೆಯೇ ನನಗೂ ಬಹಳ ನಿರೀಕ್ಷೆಗಳು ಇದ್ದಿದ್ದರಿಂದ ಮೊದಲ ದಿನವೇ ಚಿತ್ರ ವೀಕ್ಷಿಸಿದೆ.

ದಿಗಂತ್, ಕಿಟ್ಟಿ ಮತ್ತು ಗಣಿ ಬೆಂಗಳೂರಿನಲ್ಲಿ ವಾಸವಾಗಿರುವ ಮೂರು ಜನ ಸ್ನೇಹಿತರು. ಕಿಟ್ಟಿ ಸಾಫ್ಟ್‌ವೇರ್ ಇಂಜಿನಿಯರ್, ಗಣಿ ಕ್ರೆಡಿಟ್ ಕಾರ್ಡ್ ಮಾರುವಾತ , ದಿಗಂತ್ ಇನ್ನೂ ಮೆಡಿಕಲ್ ಓದುವ ಹುಡುಗ. ಎಲ್ಲರಿಗೂ ಸಿಟಿ ಜೀವನದ ಏಕತಾನತೆ ಬೇಜಾರು ಬಂದು ದಿಗಂತನ ಅಜ್ಜನ ಮನೆ, ಮೋಡಗಳೇ ತುಂಬಿಕೊಂಡಿರುವ ಹಳ್ಳಿ ಮುಗಿಲುಪೇಟೆಗೆ ಹೊರಡುತ್ತಾರೆ.

ಅವನ ಅಜ್ಜನ ಮನೆಯ ಪಕ್ಕದ ಎಸ್ಟೇಟಿನಲ್ಲಿ ಮೂರು ಜನ ಹುಡುಗಿಯರು ಇರುವ, ಬೇಟೆಯ ಹುಚ್ಚಿನ ಅನಂತನಾಗ್ ಮನೆ ಯಜಮಾನರಾಗಿರುವ ಸಂಸಾರವೊಂದಿರುತ್ತದೆ.ಅನಂತನಾಗ್ ಹಂದಿಯೊಂದರ ಬೇಟೆಯಾಡಲು ಹೋಗಿ ಕಾಲಿನ ಸ್ವಾಧೀನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮನುಷ್ಯ. ಮನೆಯ ಮೂರು ಹೆಣ್ಣು ಮಕ್ಕಳೂ ಮೂರು ತರಹದ ಗುಣ ಸ್ವಭಾವದವರು. ಈ ಹುಡುಗರು ಅವರ ಮನೆ ಸೇರಿಕೊಂಡು, ಸಿಕ್ಕ ಸಿಕ್ಕ ಹಾಗೆ ಚೇಷ್ಟೆ ಮಾಡಿಕೊಂಡು, ಹಂದಿ ಗಿಂದಿ ಓಡಿಸಿಕೊಂಡು ಒಂದಿಷ್ಟು ಕಾಲ ಹಾಯಾಗಿ ಕಾಲ ಕಳೆಯುತ್ತಾರೆ. ಈ ಮಧ್ಯೆ ಏನೇನೋ ಆಗಿ ಮೂರು ಜನ ಹುಡುಗರಿಗೂ ಈ ಮೂರು ಹುಡುಗಿಯರ ಮೇಲೆ ಪ್ರೀತಿ ಹುಟ್ಟುತ್ತದೆ. ಎರಡು ಜೋಡಿಗಳು ಮನೆಯವರನ್ನೂ ಒಲಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಬ್ಬನ ಕಥೆ ಏನಾಗುತ್ತದೆ ಅನ್ನುವುದು ಗಾಳಿಪಟದ ಕೊನೆಗೆ ತಿಳಿಯುತ್ತದೆ.

ಇದು ಸಿನಿಮಾದ ಒಟ್ಟು ಸಾರಾಂಶ.ಯೋಗರಾಜ ಭಟ್ಟರು ಮುಂಗಾರು ಮಳೆಯ ನಂತರ ನಿರ್ದೇಶಿಸಿದ ಬಹು ಚರ್ಚಿತ ಸಿನಿಮಾ ಗಾಳಿಪಟ. ಹಿಂದಿನ ಸಿನಿಮಾ ಮುಂಗಾರು ಮಳೆ ಯದ್ವಾ ತದ್ವಾ ಹಿಟ್ ಆಗಿದ್ದರಿಂದ ಭಟ್ಟರು ಹಳೆಯ ಸಿದ್ಧ ಸೂತ್ರಕ್ಕೇ ಅಂಟಿಕೊಂಡಿದ್ದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಅದೇ ಮುಂಗಾರು ಮಳೆಯ ಧಾಟಿಯ ಹಲವು ಡೈಲಾಗುಗಳು, ಮಳೆ, ಬೆಟ್ಟ, ಜಲಪಾತ. ಆದರೆ ಕೇವಲ ಅವುಗಳನ್ನು ತೋರಿಸುವ ಭರದಲ್ಲಿ ಬಿಗಿಯಾದ ಕಥೆಯನ್ನು ಹೆಣೆಯುವ ಹೊಣೆಗಾರಿಕೆಯನ್ನು ಭಟ್ಟರು ಮರೆತು ಬಿಟ್ಟಿದ್ದಾರೆ. ಇಡಿಯ ಸಿನಿಮಾದಲ್ಲಿ ಏನೂ ಕೂಡಾ ಸಂಭವಿಸುವುದೇ ಇಲ್ಲ. ಕೊನೆಗೂ!

ಮುಂಗಾರು ಮಳೆಯ ಜಪ ಮಾಡಿಕೊಂಡು ನೀವು ಥಿಯೇಟರ್‌ಗೆ ಕಾಲಿಟ್ಟರೆ ನಿರಾಸೆ ಖಚಿತ. ಏಕೆಂದರೆ ಈ ಚಿತ್ರ ಅದರ ಸನಿಹಕ್ಕೂ ಬಂದು ನಿಲ್ಲುವುದಿಲ್ಲ. ಅಲ್ಲಿನ ಬಿಗಿ ನಿರೂಪಣೆಯಿಲ್ಲ , ಅಲ್ಲಿನ ಅದ್ಭುತ ಅನ್ನಿಸುವಂತಹ ಡೈಲಾಗುಗಳಿಲ್ಲ ಮತ್ತು ಇಡಿಯ ಚಿತ್ರದಲ್ಲಿ ಏನೂ ಘಟಿಸುವುದೇ ಇಲ್ಲ. ಕ್ಲೈಮ್ಯಾಕ್ಸು ಯಾವುದೋ ಹಳೆಯ ಕನ್ನಡ ಚಿತ್ರವನ್ನು ನೆನಪಿಗೆ ತರಿಸಬಹುದಾದ ಸಾಧ್ಯತೆಗಳಿವೆ.ಗಣೇಶ್, ರಾಜೇಶ್ ಕೃಷ್ಣ, ದಿಗಂತ್ , ಡೈಸಿ ಬೋಪಣ್ಣ , ನೀತು, ಭಾವನಾ, ಅನಂತ್ ನಾಗ್, ರಂಗಾಯಣ ರಘು – ಎಲ್ಲರದೂ ಓಕೆ ಅನ್ನಿಸುವ ಅಭಿನಯ. ಗಣೇಶ್‌ಗೆ ಮಳೆಯಲ್ಲಿ ನೆನೆದುಕೊಂಡು ಡೈಲಾಗು ಹೇಳುವುದು ಮೊದಲೇ ಅಭ್ಯಾಸವಾಗಿರುವುದರಿಂದ ಎಲ್ಲರಿಗೂ ಸ್ವಲ್ಪ ಹೆಚ್ಚು ಪ್ರಿಯ ಅನ್ನಿಸಬಹುದು, ಅಷ್ಟೇ.

ಹಾಗೆಂದು ಗಾಳಿಪಟವನ್ನು ಸಾರಾಸಗಟಾಗಿ ತಿರಸ್ಕರಿಸುವ ಹಾಗಿಲ್ಲ. ಚಿತ್ರದ ಲೊಕೇಶನ್‌ಗಳು ಅದ್ಭುತ. ನವಿರು ಹಾಸ್ಯದಿಂದ ಕೂಡಿದ ಭಟ್ಟರ ಸಂಭಾಷಣೆ, ಕಾಯ್ಕಿಣಿ ಹಾಡುಗಳು, ಹರಿಕೃಷ್ಣ ಸಂಗೀತ ಮನಕ್ಕೆ ತಟ್ಟುತ್ತವೆ. ನೂರಾರು ಯಕ್ಷಗಾನ ವೇಷಧಾರಿಗಳು ಕುಣಿಯುವ “ನಧೀಂಧೀಂತನಾ" ಹಾಡಂತೂ ಕಣ್ಣಿಗೆ ಹಬ್ಬ. ಕಾಡುಹಂದಿ ನಿಮಗೆ ಗ್ರಾಫಿಕ್ಸ್ ಅನ್ನಿಸುವುದೇ ಇಲ್ಲ.

ಚಿಕ್ಕಮಗಳೂರಿನ ಎಸ್ಟೇಟು, ಹೊರಗೆ ಕಾಲಿಟ್ಟರೆ ಕೊಡಚಾದ್ರಿ ಬೆಟ್ಟ, ಅಲ್ಲಿ ನಿಂತು ನೋಡಿದರೆ ಶಿವನಸಮುದ್ರ ಜಲಪಾತ - ಹೀಗೊಂದು ಕಲ್ಪನೆ ಭಟ್ಟರಿಗೆ ಬಂದಿದ್ದಾದರೂ ಹೇಗೆ ಅಂತ! ನಿಮಗೆಲ್ಲೂ ಇದು ಅಸಹಜ ಅನ್ನಿಸುವುದಿಲ್ಲ. ಭೌಗೋಳಿಕ ಜ್ಞಾನ ಬದಿಗಿಟ್ಟು ಸಿನಿಮಾ ನೋಡುವ ಮನಸ್ಥಿತಿ ಬೇಕು ಅಷ್ಟೆ.

ಆದರೆ ಬರಿಯ ಬೆಟ್ಟ ಗುಡ್ಡ, ಜಲಪಾತ, ಮೋಡ, ಮಳೆ, ಛಾಯಾಗ್ರಹಣ ಮತ್ತು ಸಂಗೀತ ಒಂದು ಚಿತ್ರವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ಯೋಗರಾಜ ಭಟ್ಟರಿಗೆ ಆಗಿದ್ದರೆ ಚೆನ್ನಾಗಿತ್ತು.

ಇಷ್ಟಾಗಿ, ನಾನೇನೇ ಬರೆದರೂ ನೀವು ಈ ಸಿನಿಮಾ ನೋಡೇ ನೋಡುತ್ತೀರಿ, ಅದು ನನಗೆ ಗೊತ್ತು!

ಮಂಗಳವಾರ, ಜನವರಿ 01, 2008

ಹೊಸ ಸಿಂಚನ - ನವ ಲಹರಿಯ ಆಶಯದೊಡನೆ..


ಹೊಸ ವರುಷ ಕಣ್ಣೆದುರಿದೆ.

ಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.

ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು ಸಂಭ್ರಮ, ಒಂದು ನವಿರು ಭಾವ ಗರಿಗೆದರುವ ಸಮಯ. ಎಲ್ಲದನ್ನ ಸಂತಸದ ಕಣ್ಣಲ್ಲಿ ನೋಡುವ ಆತುರ.

ಹೊಸ ವರ್ಷದ ಹಿಂದಿನ ದಿನದ ಸಂಜೆಯ ಸಂತೋಷಕೂಟದಲ್ಲಿ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಅವಸರ ಆತನಿಗೆ, ಇಂತಹ ಮಧುರ ಘಳಿಗೆಯಲ್ಲಿ ಆಕೆ ತನ್ನನ್ನ ತಿರಸ್ಕರಿಸಲಾರಳು ಅನ್ನುವ ಆಶಯ. ಆರೆಂಟು ತಿಂಗಳಿಂದ ಕಣ್ಣಲ್ಲೇ ಮಾತಾಡಿದ್ದು ಸಾಕಾಗಿದೆ ಅವನಿಗೆ.

ಆಕೆಗೆ, ಅವನು ತನ್ನ ಕೈಯನ್ನ ಇಂದಾದರೂ ಹಿಡಿದು ಪ್ರೀತಿಸುವ ಸಂಗತಿಯನ್ನ ಹೇಳಬಾರದೇ ಅನ್ನುವ ಆಸೆ. ತನಗೆ ಅದನ್ನ ಹೇಳುವ ಧೈರ್ಯ ಖಂಡಿತಾ ಇಲ್ಲ, ಅದು ಆತನಿಗೂ ತಿಳಿದಿಲ್ಲವೇ?, ಹೊಸ ವರುಷ ಆ ಧೈರ್ಯ ಅವನಿಗಾದರೂ ಕೊಡಬಾರದೇ?

ಹಲವು ಕಾಲದ ಮೇಲೆ ಭೇಟಿಯಾಗುತ್ತಿರುವ ಜೀವದ ಗೆಳೆಯರ ಜೊತೆ ಕೂತು ಮಾತಾಡುವ ಸಂಭ್ರಮ ಇವನಿಗೆ. ಚಳಿಯ ರಾತ್ರಿಯಲ್ಲಿ ಯಾವುದೋ ಶಿಖರಾಗ್ರದಲ್ಲಿ ಬೆಂಕಿಯ ಸುತ್ತ ಕೂತು ಅದರ ಬೆಳಕೊಳಗೆ ಬೆಳಗು ಮಾಡುವ ಕಾತರ.. ಯಾವ ಗಲಾಟೆ, ಗೌಜೂ ಇಲ್ಲದೇ.

ಇಂದು ತನ್ನಿನಿಯ ಅಮೇರಿಕದಿಂದ ಬರುತ್ತಿದ್ದಾನೆ, ವರುಷದ ಕೆಲಸ ಮುಗಿಸಿ. ಆತ ಹೊಸವರುಷದಂದು ನನ್ನ ಜೊತೆ ಇರುತ್ತಾನೆ. ಅದಕ್ಕಿಂತ ಬೇರೇನು ಬೇಕು ಅನ್ನುವವಳು ಈ ಹುಡುಗಿ. ಅವನ ಹಿತಕರ ಅಪ್ಪುಗೆಯಲ್ಲಿ ಬೆಳಗು ಮಾಡಿದರೆ, ಅದುವೇ ಸ್ವರ್ಗ ಈಕೆಗೆ.

ಈ ಹುಡುಗನಿಗೆ ಹೊಸ ಕೆಲಸ ಸಿಕ್ಕಿದೆ, ಹೊಸ ವರುಷದಂದೇ ಸೇರಬೇಕಂತೆ, ರಜೆ ಇಲ್ಲ ಆವತ್ತು. ಅವನಿಗದು ಬಲು ಖುಷಿಯೇ! ನಾಳಿನಿಂದ ಕೆಲಸ ಹುಡುಕಿಕೊಂಡು ಫೈಲು ಹಿಡಿದು ಸುತ್ತ ಬೇಕಿಲ್ಲ. ಅಮ್ಮನನ್ನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಬೇಕು ಅಂದು ಬೆಳಗು. ಪಾಪ ಅವಳು ಬಹಳ ಕಷ್ಟ ಪಟ್ಟಿದ್ದಳು ತನ್ನ ಒಳಿತಿಗೆ. ಆಕೆಗಿದು ಹೊಸ ವರ್ಷದ ಕಾಣಿಕೆ, ತನಗೂ ಕೂಡ.

ವಾರದ ಹಿಂದಷ್ಟೇ ಹೊಸ ಬೇಕರಿ ತೆರೆದಾತ ಈಗಾಗಲೇ ಖುಷಿಯಲ್ಲಿದ್ದಾನೆ, ಕೇಜಿಗಟ್ಟಲೆ ಕೇಕು ಖಾಲಿಯಾಗಿವೆ. ನಾಡಿದ್ದು ಅರ್ಧದಿನ ಅಂಗಡಿಯನ್ನ ಮುಚ್ಚಿ, ಹೆಂಡತಿಯನ್ನ ಸಿನಿಮಾಕ್ಕೆ ಕರೆದೊಯ್ಯುವ ಆಲೋಚನೆ ಅವನಿಗೆ. ಮಾಡಿದ ಸಾಲ ಬೇಗನೆ ತೀರುವಂತೆ ಕಾಣುತ್ತಿದೆ.

ಬ್ಲಾಕ್ ಟಿಕೇಟು ಮಾರುವ ಹುಡುಗನಿಗೆ ಸ್ವರ್ಗಕ್ಕೆ ಮೂರೇ ಗೇಣು, ಮುಂದಿನೆದಡು ದಿನದಲ್ಲಿ ತುಂಬ ದುಡ್ಡು ಮಾಡಿಬಿಡಬಹುದು, ಎಲ್ಲರಿಗೂ ರಜೆ, ಸಿನಿಮಾ ನೋಡಲು ಬಂದೇ ಬರುತ್ತಾರೆ. ತಮ್ಮನಿಗೆ ಸೈಕಲ್ಲು ತೆಗೆಸಿಕೊಡಲು ತನಗೆ ಇನ್ನು ೫೦೦ ರೂಪಾಯಷ್ಟೇ ಬೇಕಾಗಿರುವುದು. ಅದನ್ನ ಹೇಗಾದರೂ ತನಗೆ ಹೊಸ ವರ್ಷ ಕೊಟ್ಟೇ ಕೊಡುತ್ತದೆ.

ರಸ್ತೆ ಬದಿಯಲ್ಲಿ ಭಜ್ಜಿ ಮಾಡುವ ಹೆಂಗಸಿಗೂ ಕೈ ತುಂಹ ಕೆಲಸ. ಮೊದಲೇ ಚಳಿ, ಜನ ತಡರಾತ್ರಿಯ ವರೆಗೂ ರಸ್ತೆಯಲ್ಲಿರುತ್ತಾರೆ. ಎಂದಿಗಿಂತ ಹೆಚ್ಚಿನ ವ್ಯಾಪಾರ ಆಗಲೇ ಬೇಕು. ಮಗಳಿಗೆ ಹೊಸ ಬಟ್ಟೆ ಕೊಡಿಸಬೇಕು. ಹೊಸ ವರ್ಷ ತನಗೇನಾದಾರೂ ಕೊಟ್ಟರೆ, ತಾನು ಮಗಳಿಗೆ ಕೊಟ್ಟೇನು.

ಹೊಸ ವರ್ಷಕ್ಕೆ ಹಲವು ಬಣ್ಣ, ಹಚ್ಚುವವರೂ ಹಲವರು.
ಬನ್ನಿ, ನಾವೂ ಏನಾದರೂ ಬಣ್ಣ ಹಚ್ಚೋಣ, ಖುಷಿಯ ಕುಂಚ ಹಿಡಿದು, ಬದುಕ ಫಲಕದಲ್ಲಿ.