ಸೋಮವಾರ, ಫೆಬ್ರವರಿ 15, 2010

ದರ್ಶನ ಭಾಗ್ಯ!

(ಹಿಂದೆ ಎಚ್.ಆರ್ ಆಗಿದ್ದಾಗಿನ ಅನುಭವಗಳನ್ನು ಬರೀತಿದ್ದೆ. ಮಾಧ್ಯಮ ಜಗತ್ತಿಗೆ ಬಂದು ಎರಡು ಎರಡೂವರೆ ವರ್ಷಗಳಾದರೂ ಹೆಚ್ಚಿಗೆ ಏನೂ ಬರೆದಿಲ್ಲ- ಇಲ್ಲಿನ ಅನುಭವಗಳ ಬಗ್ಗೆ. ಇನ್ನು ಬರೆಯಲಾಗುವುದು:)


ನನ್ನ ಅಣ್ಣ ಉಡುಪೀಲಿರ್ತಾರೆ. ಅವ್ರ ದೂರದ ಸಂಬಂಧಿಯೊಬ್ಬರ ಮಗ ಏನೋ ಬೆಂಗಳೂರಲ್ಲಿ ಸರಿಯಾದ ಕೆಲ್ಸ ಇಲ್ದೇ ಅಲೀತಿದಾನೆ ಅಂತ ನನ್ನ ಹತ್ರ ಒಂದಿನ ಫೋನ್ ಮಾಡಿದೋರು ಹೇಳಿದ್ರು. ಮನೆ ಕಡೆಗೂ ಕಷ್ಟ, ಎನಾರೂ ಕೆಲ್ಸ ಇದ್ರೆ ನೋಡೋ ಅಂದ್ರು. ಅವನನ್ನು ನಾನೂ ಯಾವ್ದೋ ಮದುವೆಲೆಲ್ಲೋ ನೋಡಿದ್ದೆ ಹಿಂದೊಮ್ಮೆ. ಅದೇನೋ ಇರಲಾರದೇ.. ಅಂತಾರಲ್ಲ, ಹಾಂಗೆ ನಾನು, ಹೌದಾ ಅವ್ನಿಗೆ ನನ್ನ ನಂಬರ್ರು ಕೊಡಿ, ಮಾತಾಡ್ತೀನಿ ಅಂದೆ.

ನಾಲ್ಕಾರು ದಿನ ಕಳೀತು. ನಾನು ವಿಶ್ಯ ಮರ್ತೇ ಬಿಟ್ಟಿದ್ದೆ. ಆಫೀಸಲ್ಲಿ ಕೂತಿದ್ದೆ. ರಿಸೆಪ್ಶನ್ ಫೋನ್ ಮಾಡಿ ಉಲಿದಳು- ನಿಮ್ಮನ್ನು ಹುಡ್ಕೊಂಡು ಯಾರೋ ಬಂದಿದಾರೆ, ಇಲ್ಲೇ ಕೂತಿದಾರೆ ಬನ್ನಿ ಅಂತ. ಪುಣ್ಯಕ್ಕೆ ಎಲ್ಲೂ ಹೊರ್ಗೆ ಹೋಗ್ದೇ ಆಫೀಸಲ್ಲೇ ಇದ್ದೆ. ಹೋಗಿ ನೋಡಿದ್ರೆ, ಅದೇ ನನ್ನ ಅಣ್ಣನ ಸಂಬಂಧೀ ಹುಡುಗ. ಫೋನೂ ಗೀನೂ ಏನೂ ಮಾಡ್ದೇ ಧಿಮ್ ರಂಗ ಅಂತ ಬಂದಿದ್ದ.

ನಮ್ ಆಫೀಸೆಲ್ಲ ಒಂದ್ ಸಲ ತೋರ್ಸಿ, ಕ್ಯಾಂಟೀನಿಗೆ ಕರ್ಕೊಂಡು ಹೋದೆ. ಜ್ಯೂಸ್ ಗೆ ಹೇಳಿ, ಅವನ್ ಹತ್ರ ಏನ್ ಮಾಡ್ಕೊಂಡ್ ಇದೀಯಾ, ಏನ್ ಕತೆ -ವಿಚಾರ್ಸ್ತಾ ಇದ್ದೆ. ಅಷ್ಟ್ ಹೊತ್ತಿಗೆ, ನಮ್ಮಲಿನ ಸ್ಟುಡಿಯೋಗೆ ಶೂಟಿಂಗ್ ಗೆ ಅಂತ ಬಂದಿದ್ದ ನಟ ರಮೇಶ್ ಅರವಿಂದ್ ಹಾಗೇ ಯಾರ್ ಜೊತೆಗೋ ಮಾತಾಡ್ತಾ ಕ್ಯಾಂಟೀನ್ ಗೆ ಬಂದ್ರು. ಈ ಪುಣ್ಯಾತ್ಮ ಯಾರೋ ರಾಷ್ಟ್ರಗೀತೆ ಹಾಡಿದ್ ಕೇಳಿದ ಹಾಗೆ ಎದ್ದು ನಿಂತು ಬಿಡೋದಾ! ಏನಾಯ್ತೋ, ಕೂತ್ಗೊಳಪ್ಪಾ ಅಂತ ಎಳೆದು ಕೂರ್ಸಿದೆ. ಆ ಕಡೆ ಟೇಬಲಿನ ಯಾರೋ ಸಣ್ಣಗೆ ನಕ್ಕಿದ್ದು ಕೇಳ್ಸಿತು.

ನಾನು ಮತ್ತೆ ಅವನ ಕೆಲ್ಸದ ಬಗ್ಗೆ ವಿಚಾರ್ಸ್ತೀನಿ, ಊಹೂಂ, ಈ ಯಪ್ಪಂಗೆ ಅದೆಲ್ಲ ತಲೆಗೇ ಹೋಗ್ತಿಲ್ಲ. ಅಣ್ಣಾ, ನಿಮ್ಮಲ್ಲಿಗೆ ಎಲ್ಲಾ ಫಿಲಂ ಸ್ಟಾರ್ಸ್ ಬರ್ತಾರಾ?- ಹೂಂ ಕಣೋ ಬರ್ತಾರೆ ಅಂದೆ. ನೀ ನೋಡಿದೀಯಾ ಅವ್ರನ್ನ?- ಹೌದು. ಏನ್ ಚಾನ್ಸಣ್ಣಾ ನಿಂದೂ.. ಮಸ್ತ್ ಅಂತ ಉಸ್ರೆಳ್ಕೊಂಡ.

ಆಮೇಲಿಂದ ೫ ನಿಮಿಷ ಆತನಿಗೆ ನಮ್ಮಲ್ಲಿ ಯಾರ್ಯಾರು ಬರ್ತಾರೆ, ಯಾಕ್ ಬರ್ತಾರೆ ಇತ್ಯಾದಿಯೆಲ್ಲ ವಿವರಿಸ್ಬೇಕಾಯ್ತು. ಹಾಗೇ ಮಾತಾಡ್ತಾ ದರ್ಶನ್ ಬಂದಿದ್ದ ಸುದ್ದಿ ಹೇಳಿದ ಕೂಡ್ಲೇ ಈ ಹುಡುಗ, ಹಾಂ! ಅಂತ ದೊಡ್ಡದಾಗಿ ಬಾಯಿಬಿಟ್ಟ. ತಾನು ದರ್ಶನ್ ದೊಡ್ಡ ಫ್ಯಾನ್ ಅಂತಲೂ, ಆತನ ಯಾವುದೇ ಚಿತ್ರಗಳನ್ನ ನೋಡದೇ ಬಿಟ್ಟಿಲ್ಲ - ಮೆಜೆಸ್ಟಿಕ್, ಕರಿಯ ಅಂತೆಲ್ಲ ಆತ ನಟಿಸಿದ ಎಲ್ಲ ಚಿತ್ರಗಳ ಹೆಸರು ಪಟ ಪಟ ವರದಿಯೊಪ್ಪಿಸಿದ.

ನಾನು ಸುಮ್ಮನೇ ಕೂತು ಜ್ಯೂಸ್ ಕುಡೀತಿದ್ದೆ. "ಒಂದೇ ಒಂದು ಫಿಲಂ ಬಿಟ್ಟಿಲ್ಲ ಅಣ್ಣಂದು. ಫಸ್ಟ್ ಡೇ, ಫಸ್ಟ್ ಶೋ. ಪಕ್ಕಾ. ಆವತ್ತೇ ನಾಲಕ್ ಸಲ ನೋಡಿದ್ದೂ ಇದೆ ಮತ್ತೆ. ಕರಿಯ ಫಿಲಂ ೨೪ ಸಲ, ಮತ್ತಿನ್ಯಾವ್ದೋ ೧೭, ಮತ್ತಿನ್ಯಾವ್ದೋ ೧೪ ಅಂತ ಉದ್ದಕ್ಕೆ ಪಟ್ಟಿ ತೆಗ್ದ.

ಅಲ್ವೋ, ಕೆಲ್ಸ ಮಾಡೋ ಕಂಪ್ನಿನೋರು ಅಷ್ಟೆಲ್ಲ ರಜೆ ಕೊಡ್ತಾರೇನೋ, ದುಡ್ ಎಲ್ಲಿಂದ ಬರತ್ತೋ ಅಂದಿದ್ದಕ್ಕೆ "ಅಣ್ಣನ್ ಫಿಲಂ ನೋಡೋಕ್ ಬಿಡ್ದೇ ಇರೋ ಕಂಪ್ನಿ ಕೆಲ್ಸ ಯಾಕಣ್ಣಾ ಬೇಕು, ಬಿಟ್ ಬಿಡ್ತೀನಿ ಅಷ್ಟೇ, ಆಗ್ಲೇ ಎರಡ್ ಕಂಪ್ನೀ ಲಿ ಅದ್ಕೇ ಗಲಾಟೆ ಮಾಡಿ ಬಿಟ್ಟಿದೀನಿ ಜಾಬ್ ನ ಅಂದ. ನಾನು ಒಟ್ಟು ಎಷ್ಟ್ ಕಂಪ್ನಿಲಿ ಕೆಲ್ಸ ಮಾಡಿದೀಯಾ ಅನ್ನೋ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ.. ಈತ ನೆಲೆ ಯಾಕೆ ಕಂಡುಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

"ಅಣ್ಣಾ, ಒಂದು ಹೆಲ್ಪ್ ಮಾಡಣ್ಣ, ನಿಮ್ ಕಂಪ್ನೀಲೇ ಏನಾರೂ ಕೆಲ್ಸ -ಸೆಕ್ಯುರಿಟೀ ಗಾರ್ಡ್ ಆದ್ರೂ ಪರ್ವಾಗಿಲ್ಲ- ಇದ್ರೆ ಕೊಡ್ಸ್ ಬಿಡು. ದರ್ಶನ್ ಬಂದಾಗ ಒಂದ್ ಸಲ ತಬ್ಗೊಂಡು, ಶೇಕ್ ಹ್ಯಾಂಡ್ ಕೊಟ್ಟು ಕಣ್ ತುಂಬ ನೋಡ್ಕಂಬಿಡ್ತೀನಿ. ಪ್ಲೀಸ್"
ನಮ್ಮಲ್ಲಿ ದರ್ಶನ್ ಫಿಲಂ ರಿಲೀಸ್ ಆಗಿದ್ ದಿನ ರಜೆ ಕೊಡ್ದಿದ್ರೆ?
"ಹೇ, ಅದ್ ಹೆಂಗಾರಾ ಹೋಗದೇ"

ಖಂಡಿತ ಕೆಲ್ಸ ಇದ್ರೆ ಕೊಡಸ್ತೀನಪಾ ಅಂತಂದು ಹೊರಡಿಸಿದೆ. ಹೊರಡೋ ಮುಂಚೆ, "ನೆಕ್ಸ್ಟ್ ಟೈಮ್ ದರ್ಶನ್ ಬರೋವಾಗ ಹೇಳು ಬಂದೋಗ್ತೀನಿ"ಅಂದ. ಆಯ್ತಪಾ ದೊರೇ ಅಂತಂದು ಕಳಿಸಿದೆ.

ಸೆಕ್ಯುರಿಟಿ ಗಾರ್ಡೇ ದರ್ಶನ್ ಮೈ ಮೇಲೆ ಬೀಳೋಕೆ ಹೋಗೋ ದೃಶ್ಯ ಕಲ್ಪಿಸಿಕೊಂಡು , ನಗು ಬಂತು.