ಸೋಮವಾರ, ಆಗಸ್ಟ್ 07, 2017

ಧಾರಾವಾಹಿಗಳಿಗೆ ಬರೆಯೋದು ಹೇಗೆ?

               ಪ್ರಾಯಶಃ ಧಾರಾವಾಹಿಗಳನ್ನು ನೋಡದ ಮಂದಿಯೇ ಇಲ್ಲವೇನೋ. ಬೇಕೋ ಬೇಡವೋ, ಮನೆಯಲ್ಲಿ ಟೀವಿ ಇದೆ ಎಂದ ಮೇಲೆ ಮುಗಿಯಿತು ಬಿಡಿ, ಸೀರಿಯಲ್ಲುಗಳ ಮಾಯಾಜಾಲದಲ್ಲಿ ನೀವು ಕೂಡ ಬಂಧಿಯಾಗೇ ಇರುತ್ತೀರಿ. ಅಥವ ನಿಮ್ಮ ಪ್ರೀತಿಪಾತ್ರರು ಯಾರೋ ಧಾರಾವಾಹಿಗಳಿಗೆ ಅಂಟಿಕೊಂಡಿರುತ್ತಾರೆ ಕೂಡ. ಕನ್ನಡದಲ್ಲೇ ದಿನಕ್ಕೀಗ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳು ನಿತ್ಯ ಪ್ರಸಾರ ಕಾಣುತ್ತವೆ. ಪ್ರೈಮ್ ಟೈಮ್ ಮನರಂಜನೆಯ ನಿತ್ಯ ಸರಕು, ಸೀರಿಯಲ್ಲುಗಳದೇ ಆಗಿದೆ. ಸಂಜೆ ಆರು ಗಂಟೆಯಿಂದ ಹನ್ನೊಂದು ಗಂಟೆಯವರೆಗಿನ ಥರಹೇವಾರಿ ಕಥೆಗಳ ಲೋಕ, ಬರವಣಿಗೆಯ ಒಂದು ಪ್ರಮುಖ ಪ್ರಕಾರ ಕೂಡ ಆಗಿದೆ. ನಿತ್ಯವೂ ಇಷ್ಟೆಲ್ಲ ಸೀರಿಯಲ್ ಗಳು ಪ್ರಸಾರ ಕಾಣುತ್ತಿದೆ ಎಂದ ಮೇಲೆ- ಅಲ್ಲಿನ ಪಾತ್ರಗಳ ಬಾಯಲ್ಲಿ ಬರುವ ಸಂಭಾಷಣೆಯನ್ನ ಬರೆಯೋರು- ಚಿತ್ರಕಥೆಯನ್ನು ಬರೆಯೋರು ಕೂಡ ಅತ್ಯಂತ ಮುಖ್ಯವಾಗುತ್ತಾರೆ. ಯಾವ ಸಾಫ್ಟ್ ವೇರ್ ಇಂಜಿನಿಯರ್ ಗೆ ಕಡಿಮೆ ಇಲ್ಲದ ಸಂಬಳ ಕೂಡ ಈ ವಿಭಾಗದಲ್ಲಿದೆ ಎಂದರೆ ಅಚ್ಚರಿಯಾಗುವುದೇನೋ?

ಧಾರಾವಾಹಿ ಪ್ರಪಂಚ:
           ಬರವಣಿಗೆಯನ್ನು ಹವ್ಯಾಸಕ್ಕಷ್ಟೇ ಸೀಮಿತವಾಗಿಡದೇ, ಅದರಲ್ಲೇ ಹೊಟ್ಟೆಪಾಡನ್ನೂ ನೋಡಿಕೊಂಡು ಬೆಳೆಯುತ್ತೇನೆ ಎಂದು ನಿರ್ಧರಿಸಿದವರಿಗೆ ಹೊಸ ಹೊಸ ಅವಕಾಶಗಳು ಖಂಡಿತಕ್ಕೂ ತೆರೆದುಕೊಳ್ಳುತ್ತವೆ. ಸಿನಿಮಾ, ಧಾರಾವಾಹಿಗಳ ಚಿತ್ರಕಥೆ/ಸಂಭಾಷಣೆ ಬರೆಯುವುದು, ಅವುಗಳಲ್ಲೊಂದು.  ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳಿಗೆ ಆಕರ್ಷಕವಾಗಿ ಚಿತ್ರಕಥೆಯನ್ನೂ- ಸಂಭಾಷಣೆಯನ್ನೂ ಹೊಸೆಯುವ ಮಂದಿಗೆ ಬೇಡಿಕೆ ಇದ್ದೇ ಇದೆ. ಸಮಯಕ್ಕೆ ಸರಿಯಾಗಿ, ನೋಡುಗರನ್ನೂ ಗಮನದಲ್ಲಿರಿಸಿಕೊಂಡು ಸೊಗಸಾಗಿ ಬರೆಯುವವರನ್ನು ಈ ಕ್ಷೇತ್ರ ಎಂದಿಗೂ ನಿರಾಕರಿಸದು. ಶ್ರದ್ಧೆಯಿಂದ ಬರೆಯುತ್ತೇನೆ ಎಂಬ ಕೆಚ್ಚಿನ ಜೊತೆಗೆ, ಸರಿಯಾದ ಸಿದ್ಧತೆ ಬೇಕು ಅಷ್ಟೇ.
ಕನ್ನಡ ಕಿರುತೆರೆ, ಈಗ ಹಿಂದೆಂದೂ ಕಂಡು-ಕೇಳದಷ್ಟು ಮಟ್ಟಕ್ಕೆ ಬೆಳೆದಿದೆ, ಸಿನಿಮಾಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಧಾರಾವಾಹಿ ಸಂಚಿಕೆಗಳು ನಿರ್ಮಾಣಗೊಳ್ಳುತ್ತಿವೆ. ಕರ್ನಾಟಕದ ಆಚೆಗೆ- ವಿದೇಶಗಳಲ್ಲೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ನಟಿಸಿದ- ನಾಯಕ ನಾಯಕಿಯರು ಸೀರಿಯಲ್ ಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ. ನೋಡುಗರ ಸ್ಪಂದನೆಯೂ ಚೆನ್ನಾಗಿದ್ದು ವಾಹಿನಿಗಳು ಕೂಡ ಜನರ ಮನಸ್ಥಿತಿಗೆ ಸ್ಪಂದಿಸುತ್ತ ಹೊಸ ಬಗೆಯ ಸೀರಿಯಲ್ಲುಗಳನ್ನ ನಿರ್ಮಾಣ ಮಾಡುವತ್ತ ಮುಂದಾಗುತ್ತಿವೆ.
             ಹೀಗಾಗಿಯೇ, ಬರವಣಿಗೆಯ ಮೇಲೆ ಹಿಡಿತ ಇರುವ ಬರಹಗಾರರಿಗೆ ನೆಲೆ ಕಂಡುಕೊಳ್ಳಲು ಇದೊಂದು ಉತ್ತಮ ಜಾಗ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದಾದ ಮೇಲೊಂದು ಧಾರಾವಾಹಿಗಳನ್ನು ನಿರ್ಮಿಸುವ ಮತ್ತು ಪ್ರಸಾರ ಮಾಡುವ ಒತ್ತಡದಲ್ಲಿರುವ ಮನರಂಜನಾ ವಾಹಿನಿಗಳು ಸದಾ ಕಾಲ ಬರಹಗಾರರ ಹುಡುಕಾಟದಲ್ಲಿರುತ್ತವೆ. ಏಕೆಂದರೆ ಎಷ್ಟೇ ಅದ್ಭುತವಾದ ನಿರ್ಮಾಣ- ಝಗಮಗಿಸುವ ಸೆಟ್ಟುಗಳು-ಎಲ್ಲ ಇದ್ದರೂ, ಧಾರಾವಾಹಿಯೊಂದರ ಆತ್ಮ ಇರುವುದು, ಅದರ ಬರವಣಿಗೆಯಲ್ಲೇ. ಅದರಲ್ಲಿ ಸತ್ವ ಇಲ್ಲವಾದರೆ, ಸೀರಿಯಲ್ ಒಂದು ಗೆಲ್ಲಲಾರದು.

ಅಧ್ಯಯನ ಅಗತ್ಯ
         ಹೀಗೆಂದ ಮಾತ್ರ ನಾಳೆ ಬೆಳಗಾಗೆದ್ದು ಸೀರಿಯಲ್ ಬರೆದುಬಿಡುತ್ತೇನೆ ಎಂದು ಎದ್ದು ಹೊರಟರೆ ಸಾಧ್ಯವಿಲ್ಲ. ಸರಿಯಾದ ಅಧ್ಯಯನ ಇದ್ದರೆ ಮಾತ್ರ ಇಲ್ಲಿ ಯಶಸ್ಸು ಸಾಧ್ಯ. ಇಲ್ಲವಾದರೆ ಬಂದ ದಾರಿಗೆ ಸುಂಕವಿಲ್ಲ- ಎಂಬ ಹಾಗೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಪ್ರತಿ ದಿನ ಕೂಡ ಸುಮಾರು ಹದಿನೈದರಿಂದ ಇಪ್ಪತ್ತು ಪುಟಗಳ ಸಂಭಾಷಣೆಯನ್ನು ಬಿಟ್ಟೂ ಬಿಡದಂತೆ ಬರೆಯುವ ತಾಳ್ಮೆ ನಿಮಗಿದೆಯೇ ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಿ, ಇಲ್ಲ ಎಂಬ ಉತ್ತರ ಬಂದರೆ, ಈ ಕ್ಷೇತ್ರ ನಿಮಗೆ ಹೇಳಿ ಮಾಡಿಸಿದ್ದಲ್ಲ, ಬಿಟ್ಟುಬಿಡಿ. ದಿನಂಪ್ರತಿ ಸುಮಾರು ಎಂಟರಿಂದ ಹತ್ತು ದೃಶ್ಯಗಳ ಚಿತ್ರೀಕರಣ ನಡೆದೇ ನಡೆಯುತ್ತದೆ ಮತ್ತು ಅದಕ್ಕಾಗಿ ಮೇಲೆ ಹೇಳಿದಷ್ಟು ಪುಟಗಳನ್ನ ಬರೆದೇ ತೀರಬೇಕಿರುತ್ತದೆ. ಇದು, ಇಲ್ಲಿರಬೇಕಾದ ಅತ್ಯಂತ ಮುಖ್ಯ ಅರ್ಹತೆಗಳಲ್ಲೊಂದು.
 ಕವಿತೆಯೊಂದನ್ನು ಸೂಕ್ಷ್ಮವಾಗಿ ಕೆತ್ತಿದಂತಹ ನಿಧಾನ, ಇಲ್ಲಿಗೆ ಸಲ್ಲುವುದಿಲ್ಲ. ಜನಮನವನ್ನು ಮುಟ್ಟುವ ಸಮರ್ಥ ಸಂಭಾಷಣೆಯನ್ನು ಬರೆಯುವ ಜೊತೆಗೆ- ಅದನ್ನ ಹೆಚ್ಚಿನ ಪ್ರಮಾಣದಲ್ಲಿ ಬರೆಯಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಾಸ್ತವ. ಅದನ್ನ ಧಿಕ್ಕರಿಸಿ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ಬಹಳ ಮಂದಿ ಇಲ್ಲಿ ಸೋಲುವ ಅಪಾಯ ಇದೆ. ಹೆಚ್ಚು ಹೆಚ್ಚು ಓದಿಕೊಂಡಷ್ಟೂ- ಸಿನಿಮಾಗಳನ್ನ/ಧಾರಾವಾಹಿಗಳನ್ನ ನೋಡಿದಷ್ಟೂ ಬರಹಗಾರನ ಜ್ಞಾನ ಹೆಚ್ಚುತ್ತದೆ. ಆಗ ಹೆಚ್ಚಿನ ಪುಟಗಳ ಸಂಭಾಷಣೆಯನ್ನೂ ಸಲೀಸಾಗಿ ಬರೆಯುವುದು ಸಾಧ್ಯ. ಏನನ್ನೇ ಓದಿಕೊಂಡರೂ, ನೋಡಿದ್ದರೂ- ಅದನ್ನೆಲ್ಲ ಬಹಳ ಸರಳವಾಗಿ ತಲುಪಿಸಬೇಕಾದ್ದು ಮುಖ್ಯ. ಗ್ರಾಂಥಿಕವಾದ,ಸಟ್ಟನೆ ಅರ್ಥವಾಗದ- ಬಹಳ ಗಂಭೀರವಾದ ಸಂಭಾಷಣೆಗಳು ನೋಡುಗರಿಗೆ ಅಷ್ಟೊಂದಾಗಿ ರುಚಿಸದು. ಇನ್ನುಕೆಲ ಬಾರಿ ಅಭಿನಯಿಸುವ ಪಾತ್ರಧಾರಿ- ಆತನ/ಆಕೆಯ ಸಂಭಾಷಣೆ ಹೇಳುವ ಪರಿಯನ್ನೂ ಗಮನಿಸಿಕೊಂಡು ಬರೆಯುವುದು ಮುಖ್ಯವಾಗುತ್ತದೆ.

ಆರಾಮಾಗಿರೋ ಸೀನೇ ಇಲ್ಲ!
              ನಿಮಗೆ ಜ್ವರ ಬಂದಿದ್ದರೂ, ಮದುವೆ ಸೀನಿನ ಡೈಲಾಗು ನಾಳೆಗೆ ಬೇಕು ಎಂದ ಮೇಲೆ- ಮುಗಿದೇ ಹೋಯಿತು. ಶತಾಯಗತಾಯ ಅದನ್ನ ಬರೆದು ಕಳಿಸಲೇಬೇಕು. ಏಕೆಂದರೆ ನಟರೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಜನ, ಸಂಭಾಷಣಕಾರ ಬರೆದು ಕಳಿಸುವ ಸೀನಿಗಾಗಿ ಸೆಟ್ ನಲ್ಲಿ ಕಾಯುತ್ತಿರುತ್ತಾರೆ. ಇದನ್ನ ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿರುವ ಆ ಹೊತ್ತಿನ ಅಗತ್ಯ. ಬಹಳ ಮಂದಿಗೆ, ಫ್ರೀಲ್ಯಾನ್ಸ್ ಬರಹಗಾರರು ಎಂದ ಮೇಲೆ- ಅಯ್ಯೋ ಬಿಡಯ್ಯ ಮಜಾ ಮಾಡ್ಕೊಂಡ್ ಇರ್ತಾರೆ, ಯಾವಾಗಲೂ ಫ್ರೀ ಟೈಮು ಎಂಬ ತಪ್ಪು ಕಲ್ಪನೆಯೊಂದಿದೆ. ಆರಾಮಾಗಿರಬಹುದು ಎಂದೇನಾದರೂ ಈ ಫೀಲ್ಡನ್ನ ಆರಿಸಿಕೊಳ್ಳುವ ಆಸೆಯಿದ್ದರೆ ಅದರಿಂದ ಹೊರಗೆ ಬನ್ನಿ! ಇದು ರಜೆಯೇ ಇಲ್ಲದ, ಮುನ್ನೂರ ಅರವತ್ತೈದು ದಿನ ಕೂಡ ಕೆಲಸವನ್ನು ಬೇಡುವ ಜಾಗ. ಹೊತ್ತಲ್ಲದ ಹೊತ್ತಿನಲ್ಲಿ ಹೊಸದೊಂದು ದೃಶ್ಯ ಬರೆದುಕೊಡುವ ಕರೆ ಬರುತ್ತದೆ. ಭಟ್ಕಳದ ಬಸ್ ಸ್ಟ್ಯಾಂಡಿನಿಂದ ತೊಡಗಿ, ಹಿಮಾಲಯದ ನದೀ ದಡದಲ್ಲಿ ಕೂತು ಕೂಡ ಸಂಭಾಷಣೆ ಬರೆದು ಕಳಿಸುವ ಅನಿವಾರ್ಯತೆಗೆ ನಾನೇ ಸಿಲುಕಿದ್ದೇನೆ. ನಿಮ್ಮ ಯಾವುದೇ ಜಂಜಡಗಳಲ್ಲಿ ನೀವು ಸಿಲುಕಿಕೊಂಡಿದ್ದರೂ- ಆ ಸಮಸ್ಯೆ ಸೀನ್ ಪೇಪರ್ ನಲ್ಲಿ ಕಾಣಿಸಬಾರದು! ್ಹಗಲು ರಾತ್ರಿಗಳ ಪರಿವೆ ಇಲ್ಲದೆಯೇ ಲ್ಯಾಪ್ ಟಾಪ್ ಮುಂದೆ ಕೂತು ಸೀನು ಕಟ್ಟುವ ಕೆಲಸ ಮಾಡುವ ಉಮೇದು ಇಲ್ಲಿ ಇರಲೇಬೇಕಾದ್ದು ಅವಶ್ಯಕ. ಹಾಗೆಂದು ನಿತ್ಯವೂ ಹೀಗೇ ಕೆಲಸವೇ ಎಂದುಕೊಳ್ಳಬೇಡಿ-ಖಂಡಿತ ಅಲ್ಲ. ಆದರೆ- ಈ ಅಂಚನ್ನೂ ತಿಳಿದುಕೊಂಡಿರಬೇಕಾದ್ದು ಅಗತ್ಯ.

ಬರೆಯುವ ಮುನ್ನ:
             ಧಾರಾವಾಹಿಯ ಸಂಭಾಷಣೆಕಾರನಾದವನು, ಚಿತ್ರಕಥೆಯನ್ನು ಬರೆಯುವವರ ಜೊತೆಗೆ ಹಾಗೂ ನಿರ್ದೇಶಕನ ಜೊತೆಗೆ ಉತ್ತಮ ಸಂವಹನ ಹೊಂದಿರಬೇಕು. ಕತೆಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಇದ್ದು, ಧಾರಾವಾಹಿಯು ಎತ್ತ ಸಾಗುತ್ತಿದೆ ಎನ್ನುವ ಅರಿವನ್ನ ಇಟ್ಟುಕೊಂಡಿರಬೇಕು. ಪಾತ್ರಗಳು-ಅವುಗಳ ಮಿತಿಯನ್ನ ಅರಿತುಕೊಂಡಿರಬೇಕು. ಯಾವ ಸನ್ನಿವೇಶ ಮುಖ್ಯವಾದದ್ದು- ಯಾವುದು ಅನಗತ್ಯ ಎನ್ನುವ ಜಾಣ್ಮೆ ಹೊಂದಿರಬೇಕಾದ್ದೂ ಅಗತ್ಯವೇ. ಪ್ರತೀ ದೃಶ್ಯದಲ್ಲೂ ಚುರುಕಾದ, ನೋಡುಗ- ಅರೇ ಎನ್ನುವಂತಹ ಸಂಭಾಷಣೆಯನ್ನು ಕಟ್ಟಿಕೊಡುವ ಪ್ರಯತ್ನವೂ ಇರಬೇಕು. ಹೀಗಿದ್ದಾಗ ಒಬ್ಬ ಉತ್ತಮ ಸಂಭಾಷಣೆಕಾರನಾಗಲು ಸಾಧ್ಯವಿದೆ.

ಚಿತ್ರಕಥೆ:
               ಸಂಭಾಷಣೆ ವಿಭಾಗ ನನಗೆ ಹೇಳಿ ಮಾಡಿಸಿದ್ದಲ್ಲ, ಆದರೆ ನಾನೊಬ್ಬ ಒಳ್ಳೆಯ ಕತೆಗಾರ ಅನ್ನುವ ಯೋಚನೆ ಇರುವವರು ಚಿತ್ರಕಥೆ ಬರೆಯುವುದರ ಬಗ್ಗೆ ಗಮನಹರಿಸಬಹುದು. ವಾಹಿನಿಗಳು ಒದಗಿಸುವ, ಅಥವ ನಿರ್ದೇಶಕನ ಮನದಲ್ಲಿರುವ ಕಥೆಯನ್ನ ವಿಸ್ತರಿಸಿ ಬರೆಯುವ ಶಕ್ತಿಯಿದ್ದಲ್ಲಿ, ಚಿತ್ರಕಥೆ ಬರೆಯುವುದು ಒಳಿತು. ಪ್ರತೀ ಸಂಚಿಕೆಗಳಿಗೆ ರೋಚಕವಾಗಿ ಸ್ಕ್ರೀನ್ ಪ್ಲೇ ಬರೆಯುವುದು ಕೂಡ ಬಹಳ ಆಸಕ್ತಿದಾಯಕ ವಿಷಯ. ನಿತ್ಯವೂ ಕೂತು ಬರೆಯುವ ಅಗತ್ಯ ಇಲ್ಲದೇ ಹೋದರೂ ಕೂಡ ಚಿತ್ರಕಥೆಯನ್ನ ಕಟ್ಟುವುದು ತುಂಬ  ಒತ್ತಡದ ಕೆಲಸ. ಧಾರಾವಾಹಿಯ ಮುಂದಿನ ಹರಿವನ್ನು ನಿರ್ಧರಿಸಬೇಕಾದ ಅನಿವಾರ್ಯತೆ ಚಿತ್ರಕಥೆಗಾರನಿಗಿರುತ್ತದೆ. ಪಾತ್ರಗಳು ಹುಟ್ಟುವುದೂ-ಸಾಯುವುದೂ ಈತನ ಕೈಯಲ್ಲೇ! ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿರುವುದರಿಂದ, ಹೊಸತನವನ್ನು ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. ಚಿತ್ರಕಥೆಯನ್ನ ಬರೆಯುವವನು ಸುತ್ತ ನಾಲ್ಕು ವಾಹಿನಿಗಳ ಧಾರಾವಾಹಿಗಳನ್ನೂ ಗಮನಿಸುತ್ತ- ಅವುಗಳಿಗಿಂತ ಭಿನ್ನವಾದ ಕಥಾಹಂದರವನ್ನು ಹುಟ್ಟುಹಾಕಬೇಕಾಗುತ್ತದೆ.
ನೋಡುಗರ ಅಭಿಪ್ರಾಯಕ್ಕೆ ತಕ್ಕ ಹಾಗೆ ಕಥೆಯನ್ನು ಬದಲಾಯಿಸುವ ಅನಿವಾರ್ಯತೆ ಕೆಲ ಬಾರಿ ಬಂದೊದಗುತ್ತದೆ. ಅಂದುಕೊಂಡ ಮಟ್ಟಕ್ಕೆ ಧಾರಾವಾಹಿ ನೋಡುಗನ ಮನಮುಟ್ಟದೇ ಹೋದರೆ, ಕಥೆಗೊಂದು ಹೊಸ ತಿರುವನ್ನ ಕೊಡುವುದು ಚಿತ್ರಕಥೆ ಬರೆವಾತನ ಕೆಲಸ. ಅದೂ ಅಲ್ಲದೇ, ತಕ್ಕನಾದ ರೇಟಿಂಗ್ ಬರದೇ ಹೋದರೆ ಆಗ ಕೂಡ ಕಥೆಯ ದಿಕ್ಕನ್ನ ಬದಲಾಯಿಸಬೇಕಾದ್ದು ಈತನದೇ ಜವಾಬ್ದಾರಿ.
ಇನ್ನೂ ಇದೆ!
             ಕೇವಲ ಧಾರಾವಾಹಿಗಳು ಮಾತ್ರವಲ್ಲದೇ ಮನರಂಜನಾ ವಾಹಿನಿಗಳಲ್ಲಿ ಇನ್ನೂ ಹಲ ಬಗೆಯ ಬರಹಗಾರರಿಗೆ ಅವಕಾಶವಿದೆ. ನಾನ್ ಫಿಕ್ಷನ್ ಶೋಗಳು- ರಿಯಾಲಿಟಿ ಶೋ ಗಳು ಕೂಡ ಬರಹಗಾರರನ್ನ ಪೋಷಿಸುತ್ತವೆ. ಡ್ಯಾನ್ಸ್ ಶೋ ಇರಲಿ, ಕಾಮಿಡಿ ಅಥವಾ ಟಾಕ್ ಶೋ ಇರಲಿ- ಅಥವಾ ಯಾವುದೇ ಬಗೆಯ ವಾರಾಂತ್ಯದ ವಿಶೇಷ ಕಾರ್ಯಕ್ರಮಗಳಿರಲಿ- ಎಲ್ಲದಕ್ಕೂ ಬರಹವೇ ಬೆನ್ನೆಲುಬು! ಯಾವನೇ ಸೆಲೆಬ್ರಿಟಿಯೊಬ್ಬ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದಾನೆ ಎಂದರೆ- ಆತನ ಹಿಂದೊಬ್ಬ ರೈಟರು ಕೂತಿದ್ದಾನೆ ಎಂತಲೇ ಲೆಕ್ಕ!
             ಇದರ ಜೊತೆಗೀಗ ಬೆಳೆಯುತ್ತಿರುವ ಯೂಟ್ಯೂಬ್-ವೀಡಿಯೋ ಅಪ್ಲಿಕೇಶನ್ ಗಳಿಂದಾಗಿ ಶಾರ್ಟ್ ಫಿಲಂ ಗಳು- ವೆಬ್ ಸೀರೀಸ್ ಗಳನ್ನ ಮಾಡುವ ಹೊಸ ಆಸಕ್ತಿ ಕೂಡ ಬೆಳೆಯುತ್ತಿದೆ. ಬರವಣಿಗೆಯನ್ನೇ ವೃತ್ತಿಯಾಗಿಸಿಕೊಳ್ಳುವ ಆಸಕ್ತಿ ಇರುವವರಿಗೆ ಇವುಗಳು ಕೂಡ ಉತ್ತಮ ಮಾರ್ಗವೇ. ಡಾಕ್ಯುಮೆಂಟರಿಗಳಿಗೆ ಸ್ಕ್ರಿಪ್ಟ್ ಬರೆಯುವುದು-ಸ್ವತಂತ್ರವಾಗಿ ಕಾರ್ಯಕ್ರಮಗಳನ್ನ ನಿರ್ಮಿಸಿ ವಾಹಿನಿಗಳಿಗೆ ಒದಗಿಸುವುದು- ಇವೇ ಮೊದಲಾದ ಸಾಧ್ಯತೆಗಳು ಕೂಡ ಬರಹಗಾರನಾದವನಿಗಿದೆ.

ದಯವಿಟ್ಟು ಗಮನಿಸಿ:
             ಇಷ್ಟೆಲ್ಲ ಓದಿದ ಮೇಲೆ ಬರವಣಿಗೆಯನ್ನ ಪ್ರವೃತ್ತಿಯಿಂದ ವೃತ್ತಿಗೆ ಬದಲಾಯಿಸಿಕೊಳ್ಳುವ ಆಸಕ್ತಿ ಕೆಲವರಿಗಾದರೂ ಬಂದಿರಬಹುದು. ಆದರೆ ಮೇಲೆ ಹೇಳಿದ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ನಿರ್ಮಾಪಕರ ಬಳಿ ಸಂಬಳದ ಬಗ್ಗೆ ಸರಿಯಾಗಿ ಮಾತನಾಡಿ! ಈ ಕ್ಷೇತ್ರಕ್ಕೆ ಬರುವ ಬಹಳ ಮಂದಿಯನ್ನ ಅನುಭವ ಸಿಗುತ್ತದೆ, ಕೆಲಸ ಮಾಡಿ. ನಾವು ಕೊಡೋದೇ ಇಷ್ಟು ಕಣ್ರೀ ಮಾಡೋದಾದರೆ ಮಾಡಿ ಎಂದು ಜೀತಕ್ಕೆ ಹಚ್ಚುವ ಮಂದಿಯೂ ಇದ್ದಾರೆ. ಹೀಗಾಗಿ ಫ್ರೀಲ್ಯಾನ್ಸರಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಗಳಿಕೆಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿ. ಇಲ್ಲದೇ ಹೋದರೆ ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಶೆ ಹೊಂದುವ ಸಾಧ್ಯತೆಯೂ ಇದೆ.

              ಕೊನೆಯದಾಗಿ- ನಿಮ್ಮ ಬರವಣಿಗೆಯ ಮೇಲೆ ನಿಮಗೆ ನಂಬಿಕೆ ಇದೆ ಎಂದಾದರೆ ಖಂಡಿತವಾಗಿಯೂ ಇದನ್ನ ವೃತ್ತಿಯಾಗಿ ಸ್ವೀಕರಿಸಬಹುದು. ಏಕೆಂದರೆ ನಿಮ್ಮ ಜ್ಞಾನ ನಿಮ್ಮ ಕೈಬಿಡದು! ಎಂದಿಗೂ. 

ಮಂಗಳವಾರ, ಆಗಸ್ಟ್ 01, 2017

ಛಾಯಾಗ್ರಹಣವೆಂಬ ಕ್ಷಣ ಕ್ಷಣದ ಧ್ಯಾನ

“It is an illusion that photos are made with the camera… they are made with the eye, heart and head.” – Henri Cartier-Bresson

ತಾನು ಸ್ಥಿರವಾಗಿದ್ದೂ, ನೋಡುಗನ ಬದುಕನ್ನ ಅಲುಗಾಡಿಸಬಲ್ಲ ವಿಶಿಷ್ಠ ಶಕ್ತಿ ಛಾಯಾಗ್ರಹಣಕ್ಕಿದೆ. ಕಾಲಪ್ರವಾಹದಲ್ಲಿ ಮಿಂಚಿ ಮರೆಯಾಗಬಹುದಾಗಿದ್ದ ಕ್ಷಣವೊಂದನ್ನು ಅನಂತವಾಗಿ ಸೆರೆಹಿಡಿದಿಡಬಲ್ಲ ಈ ಅನ್ಯೂಹ್ಯ ಕ್ರಿಯೆಯೇ ಒಂದು ಅಚ್ಚರಿ. ಭೂತಕಾಲದ ಕಿಟಕಿ, ವರ್ತಮಾನದ ಕನ್ನಡಿ ಮತ್ತು ಭವಿಷ್ಯತ್ತಿಗೆ ಬಾಗಿಲು ಛಾಯಾಗ್ರಹಣ.ಸೂಕ್ಷ್ಮ ಗಮನಿಸುವಿಕೆಗಳ ಮೂಲಕ  ಏಕಾಗ್ರತೆಯನ್ನ ಹೆಚ್ಚಿಸುವ, ಪ್ರಕೃತಿಯೊಡನೆ ನಾವೂ ಪ್ರಕೃತಿಯೇ ಆಗಿಬಿಡುವ ಸಾಧ್ಯತೆ ಇರುವ, ನಿರಂತರ ಪ್ರಯೋಗಗಳ ಮೂಲಕ ನಮ್ಮನ್ನ ನಾವು ಅರಿತುಕೊಳ್ಳುವಂತೆ ಮಾಡುವ ಶಕ್ತಿ ಫೋಟೋಗ್ರಫಿಗಿದೆ.  ನೆರಳು ಬೆಳಕುಗಳ ಬೆರಗಿನಾಟವು ಅಂತರಂಗವನ್ನು ಮುಟ್ಟುವ, ತಟ್ಟುವ ಮತ್ತು ಆ ಮೂಲಕ ಮನಸ್ಸಿನ ಕವಾಟವನ್ನು ತಣ್ಣಗೆ ತೆರೆಯುವ ಛಾಯಾಗ್ರಹಣವು ಧ್ಯಾನವೇ ಹೌದು.
            ಫೋಟೋಗ್ರಫಿಯನ್ನ ನಾನೆಂದೂ ಹವ್ಯಾಸವಾಗಿಯೇ ಪರಿಗಣಿಸಿದವನಾಗಿರಲಿಲ್ಲ. ನನ್ನ ಮೊದಲ ಆಸಕ್ತಿ ಕೂಡ ಅದಾಗಿರಲಿಲ್ಲ. ಆದರೆ ಮೆತ್ತಗೆ ಅದಾಗಿಯೇ ನನ್ನನ್ನ ಆವರಿಸಿಕೊಂಡಿತು. ಬದುಕನ್ನ ನೋಡುವ ಹೊಸದೊಂದು ಸಾಧ್ಯತೆಯನ್ನು ಕ್ಯಾಮರಾದ ಕಣ್ಣು ಕಲಿಸಿಕೊಟ್ಟಿತು. ಯಾವುದೋ ಬೆಟ್ಟದಲ್ಲಿ ಮರವೊಂದರಲ್ಲಿ ತನಗೆ ತಾನೇ ತೊನೆದುಕೊಳ್ಳುತ್ತಿರುವ ಪಾಚಿಕಟ್ಟಿಕೊಂಡಿರುವ ಗಂಟೆ, ನೀಲಿಹೂವೊಂದರ ಮೇಲೆ ಕೂತಿರುವ ದುಂಬಿ, ಸೂರ್ಯನೆದುರಾಗಿ ಕುಳಿತು ಬೆಳಕನ್ನೇ ಆಪೋಶನ ತೆಗೆದುಕೊಳ್ಳುವಂತೆ ಕೂತಿರುವ ಸನ್ಯಾಸಿ, ಹುಲ್ಲುಗರಿಕೆ ಹಾರುಹಕ್ಕಿ ನಭದ ಚುಕ್ಕಿ ಒಂದೇ ಎರಡೇ! ಎಂದು ನಾನು ಹಾರುವ ಚಿಟ್ಟೆಗಳ ಹಿಂದೆ ಹೋಗುತ್ತ ಹೋಗುತ್ತ ಧ್ಯಾನಸ್ಥ ಸ್ಥಿತಿಯನ್ನ ಅನುಭವಿಸಿದ್ದೆನೋ, ಅಂದೇ ಅಂದುಕೊಂಡೆ, ಇದು ನನ್ನೊಡನೆ ಇರಲೆಂದೇ ಬಂದಿದೆ!

           ಒಂದಂತೂ ಹೌದು. ಛಾಯಾಗ್ರಹಣವೆಂದರೆ ಕೇವಲ ಸಾಧನವೊಂದನ್ನು ಬಳಸಿ- ಚಿತ್ರವೊಂದನ್ನು ತೆಗೆಯುವ ಬರಿದೆ ತಾಂತ್ರಿಕ ಕಾರ್ಯವಂತೂ ಅಲ್ಲ. ನಮ್ಮನ್ನ ಮತ್ತೊಂದೇ ವಿಶ್ವಕ್ಕೆ ಕರೆದೊಯ್ಯುವ, ಇಂದ್ರಿಯಗಳ ಹಂಗನ್ನ ಮೀರಿದ ಅನುಭೂತಿ. ಚಿತ್ರವೊಂದನ್ನ ತೆಗೆಯುತ್ತಿರುವ ಆ ಕ್ಷಣದಲ್ಲಿ- ಆ- ಆ ಫಕ್ಕನೆ ಮಿಂಚಿ ಮರೆಯಾಗುವ ಸೆಕೆಂಡಿನಷ್ಟು ಕಾಲದಲ್ಲಿ ನಾವು, ನಾವಾಗಿರುವುದಿಲ್ಲ. ನಮ್ಮ ಗುರಿ, ಕನಸುಗಳು, ಶತ್ರುಗಳು ಮಿತ್ರರು ಬ್ಯಾಂಕ್ ಬ್ಯಾಲೆನ್ಸು ನಾಳಿನ ಚಿಂತೆ – ಯಾವುದೂ ಕೂಡ ಆ ಒಂದು ದಿವ್ಯ ಘಳಿಗೆ ನಮ್ಮ ಮನದೊಳಗೆ ಇರುವುದಿಲ್ಲ. ಆ ಕ್ಷಣಕ್ಕೆ ಅದೊಂದು ಖಾಲಿ ಕ್ಯಾನ್ ವಾಸ್. ಈಗಷ್ಟೇ ತೆಗೆದ ಚಿತ್ರವನ್ನು ತನ್ನೊಳಗೆ ಇಳಿಸಿಕೊಳ್ಳಲು ಸಿದ್ಧವಾಗಿರುವ ಹಾಳೆ. ನಿಮ್ಮ ಸುತ್ತಲಿನ ಸಂತೆಯ ಮಧ್ಯದಲ್ಲೂ ನೀವು ನೀವಾಗಷ್ಟೇ ಉಳಿದಿರುವ ಆನಂದದ ಚಣ ಅದು. ಹೊರ ಜಗತ್ತಿನ ಜೊತೆಗೆ ಆತ್ಮಸಂಪರ್ಕ ಕಡಿದು ಹೋಗಿ ಪುಟ್ಟ ನಿರ್ವಾತ ಉಂಟಾಗುವ ಹೊತ್ತು. ಅಲ್ಲಿ  ನಾನು ಮಾತ್ರವೇ ಇದ್ದೇನೆ ಮತ್ತು ನನಗೆ ಮಾತ್ರ ಅಲ್ಲೇನಾಗುತ್ತಿದೆ ಎನ್ನುವುದು ಗೊತ್ತು. ಕ್ಯಾಮರಾದ ವ್ಯೂ ಫೈಂಡರೊಳಗೆ ನನ್ನನ್ನು ನಾನು ಕಂಡುಕೊಳ್ಳುವ ಈ ಮಾಯೆಯೇ ಧ್ಯಾನವಲ್ಲವೇ?

             ಹಿಂದು ಮುಂದುಗಳ ಚಿಂತೆಯಿಲ್ಲದೇ ಈ ಕ್ಷಣದಲ್ಲಿ ಬದುಕಬೇಕೆನ್ನುವ ಯೋಗಿಗಳು ಕಂಡುಕೊಂಡ ಸತ್ಯವನ್ನೇ ಛಾಯಾಗ್ರಹಣ ಹೇಳಿಕೊಡುತ್ತದೆ! ಕಣ್ಣೆದುರಿಗಿನ ಘಟನೆಯೊಂದನ್ನು ಸಾಕ್ಷಿಪ್ರಜ್ಞೆಯಂತೆ ಗಮನಿಸುತ್ತ ಅದನ್ನು ದಾಖಲಿಸಿಕೊಳ್ಳುವ ಪುಣ್ಯವೂ ದೊರಕುವ ಈ ಹವ್ಯಾಸಕ್ಕೆ ಎಣೆಯೇ ಇಲ್ಲ! ಕ್ಯಾಮರಾದ ಹಿಂದಿನ ಧ್ಯಾನದಲ್ಲಿ ನಾನು ಬದುಕನ್ನ ಬದಲಿಸಬಲ್ಲ ಕ್ಷಣಗಳನ್ನ ಕಂಡುಕೊಂಡಿದ್ದೇನೆ. ಈಗ ತಾನೇ ಅರಳಿದ ಹೂವು, ಇನ್ನೇನು ಕರಗಿ ಹೋಗಲಿರುವ , ಆದರೂ ಮಿನುಗುತ್ತಿರುವ ಇಬ್ಬನಿಯ ಬಿಂದು, ಕಣ್ಣೆದುರೇ ಬಣ್ಣ ಬದಲಿಸುತ್ತಿರುವ ಆ ಮಾಯಾವಿ ಗೋಸುಂಬೆ, ಯಾವ ಚಿಂತೆಯೂ ಇಲ್ಲದೇ ಮಧು ಹೀರುತ್ತಿದ್ದ ಮಿಡತೆಯೊಂದನ್ನ ಸಟಕ್ಕನೆ ಹಿಡಿದು ನುಂಗಿದ ಹಸಿರು ಹಾವು- ಇವೆಲ್ಲವೂ ನಮ್ಮದೇ ಜೀವನದ ಬೇರೆ ಬೇರೆ ಅಧ್ಯಾಯಗಳನ್ನ ನಮ್ಮೆದುರಿಗೆ ತೆರೆದು ತೋರಿಸುತ್ತ ಕ್ಯಾಮರಾದೊಳಗೆ ಬಂಧಿಯಾಗುತ್ತ- ಬದುಕಿನ ಆತ್ಯಂತಿಕ ಸತ್ಯಗಳನ್ನ ಹೇಳುತ್ತವೆ. ಕೈಯೊಳಗೆ ಕ್ಯಾಮರಾ ಇಲ್ಲದೇ ಹೋಗಿದ್ದರೆ ಖಂಡಿತಕ್ಕೂ ಇವನ್ನೆಲ್ಲ ನಾನು ಗಮನಿಸುತ್ತಲೇ ಇರಲಿಲ್ಲ! ಪ್ರಾಯಶಃ ಕ್ಯಾಮರಾ ಎಂಬೀ ಸಲಕರಣೆ ಆಧುನಿಕ ಯೋಗಿಯೇ ಸರಿ! ಆ ಹೊತ್ತಿನಲ್ಲಿ- ಅಲ್ಲಿ- ಇದ್ದುಕೊಂಡು ಸುಮ್ಮಗೆ ನಡೆಯುತ್ತಿರುವ ಒಂದು ಪುಟ್ಟ ಸುಂದರ ನೈಸರ್ಗಿಕ ಕ್ರಿಯೆಗೆ ಸಾಕ್ಷಿಯಾಗುವುದರಲ್ಲಿರುವ ಭಾವವನ್ನ ಅಕ್ಷರದಲ್ಲಿ ಹಿಡಿದಿಡಲಾರದು. ಸಾಧ್ಯವಿಲ್ಲದ ಮಾತದು.

               ಸಾಗರದ ಅಲೆಗಳ ಮುಂದೆ ನಿಂತು, ಅವುಗಳ ಆಗಮನ ನಿರ್ಗಮನಕ್ಕೆ ತಕ್ಕ ಹಾಗೆ ನಮ್ಮ ಉಸಿರೂ ಕೂಡ ಬದಲಾಗುವ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ. ಮಳೆ ಹನಿಗಳ ತೊಟ್ಟಿಕ್ಕುವಿಕೆಯಲ್ಲಿನ ಸಂಗೀತ, ಹುಲ್ಲ ಎಲೆಯೊಂದರ ಮೃದುತ್ವ, ಮರಕ್ಕಂಟಿಕೊಂಡ ಪಾಚಿಯ ಹರಡುವಿಕೆಯಲ್ಲೂ ಅಡಗಿರುವ ಚಿತ್ರ, ಹಿನ್ನೀರ ಮರದ ತುಂಬ ತಾವೇ ಎಲೆಯಂತೆ ಕುಳಿತ ಹಕ್ಕಿಗಳ ಹಿಂಡು-ಒಂದೇ ಎರಡೇ? ಕ್ಯಾಮರಾ ಇಲ್ಲದೆಯೂ ಇವೆಲ್ಲವೂ ಕಾಣುತ್ತವೆ, ಅನುಭವಿಸಬಹುದು ಎಂದು ಹೇಳುವವರಿಗೆ ನನ್ನದೊಂದೇ ಉತ್ತರ. ಹೆಗಲ ಮೇಲೆ ಕ್ಯಾಮರಾ ಇದ್ದ ಕಾರಣಕ್ಕೆಯೇ ಇವೆಲ್ಲವನ್ನು ಹುಡುಕಿ ಹೊರಟಿದ್ದು ನಾನು! ಇಲ್ಲವಾದರೆ ಅವೆಲ್ಲ ಅವರ ಪಾಡಿಗೆ ಇದ್ದಲ್ಲೇ ಇರುತ್ತಿದ್ದವು, ನೋಡಲು- ಮತ್ತು ಆ ಕ್ಷಣ ಸೆರೆ ಹಿಡಿಯಲು ಅಲ್ಲಿ ನಾನು ಇರುತ್ತಿರಲಿಲ್ಲ, ಅಷ್ಟೇ.
ಜಂಗಮ ಜೀವನಕ್ಕೆ ಕ್ಯಾಮರಾಕ್ಕಿಂತ ಒಡನಾಡಿ ಬೇರೆ ಇಲ್ಲ. ಕಳೆದ ಹತ್ತು ವರುಷಗಳಲ್ಲಿ ಫೋಟೋಗಳನ್ನ ತೆಗೆಯುವ ಆಸೆಗೆ ಹಿಮಾಲಯದ ವರೆಗೂ ಹೋಗಿ ಬಂದ ನನಗೆ ಆದ ಅನುಭವಗಳೆಷ್ಟೋ, ದೊರಕಿದ ಸ್ನೇಹಿತರೆಷ್ಟೊ. ನನ್ನ ಕುಬ್ಜತನ ಏನು, ಎಂಥ ಹುಲುಮಾನವ ನಾನು ಎಂಬುದು ಅರ್ಥವಾಗಿದ್ದರೆ, ಅದಕ್ಕೆ ನನ್ನ ಈ ಛಾಯಾಗ್ರಹಣದ ಹವ್ಯಾಸವೇ ಮುಖ್ಯ ಕಾರಣ. ಉದ್ದುದ್ದ ಚಾಚಿಕೊಂಡಿರುವ ಹಿಮಪರ್ವತದೆದುರು ನಿಂತು ನೋಡಿದಾಗ, ಈ ನನ್ನ ಪುಟ್ಟ ಪೆಟ್ಟಿಗೆಯೊಳಗೆ ದಕ್ಕುವ ಹಿಮಾಲಯವಷ್ಟೇ ನನ್ನ ಹಿಮಾಲಯ- ದಕ್ಕದ್ದು ಅಗಾಧ ಎಂಬರ್ಥವಾಗಿ ನೆಲಕ್ಕೆ ಮತ್ತೂ ಹತ್ತಿರವಾಗುವ ಬಯಕೆ ತಾನಾಗೇ ಮೂಡುತ್ತದೆ.

              ನಮ್ಮ ಕಲ್ಪನೆಗಳಿಗೆ ರೆಕ್ಕೆ ಮೂಡಿಸುವ ಈ ಹವ್ಯಾಸದ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಹತ್ತಿರವಾಗುವ ಕ್ರಿಯೆ. ನಿಸರ್ಗದ ಜೊತೆಗೋ, ಜೊತೆಗಿರುವ ಒಡನಾಡಿಗಳ ಜೊತೆಗಿನ ಸಂಸರ್ಗವನ್ನು- ಫೋಟೋಗ್ರಫಿ ಇನ್ನಷ್ಟು ಹತ್ತಿರವಾಗಿಸುತ್ತವೆ. ಒಂದು ಮುಗ್ಧ ಕಿರುನಗೆ, ಕಣ್ಣ ಮಿಂಚು- ನಿಮ್ಮನ್ನ ಸೆಳೆಯುವ ಬಗೆಯೇ ಬದಲಾಗುತ್ತದೆ! ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗದ ಮಾತು ಸಗ್ಗ ಎನ್ನುವುದು ಅರ್ಥವಾಗುತ್ತದೆ. ಜನಜಂಗುಳಿಯ ಮಧ್ಯೆ ನಿಂತು ಕ್ಯಾಮರಾ ಕ್ಲಿಕ್ಕಿಸುವುದು ನನಗೆ ಅತ್ಯಂತ ಇಷ್ಟ ಕೊಡುವ ಕೆಲಸ. ಚಹದಂಗಡಿಯ ಹುಡುಗ, ಕಸ ಗುಡಿಸುತ್ತಿರೋ ಆ ಹೆಂಗಸು, ಚಪ್ಪಲಿ ಹೊಲಿಯುತ್ತಿರುವ ವೃದ್ಧ, ಹಸ್ತಸಾಮುದ್ರಿಕೆ ಹೇಳುತ್ತಿರುವ ಜ್ಯೋತಿಷಿ- ಅರೆರೆ! ನಮ್ಮ ಮಧ್ಯೆಯೇ ಎಷ್ಟೊಂದು ಜಗತ್ತುಗಳಿವೆ! ಸುಮ್ಮಗೆ ಹಾದು ಹೋಗುವಾಗ ಎಂದೂ ಕಾಣದ ಇವರುಗಳು ಯಾರೂ- ಕ್ಯಾಮರಾ ಕೈಗೆ ಬಂದ ಕೂಡಲೇ ಜೀವಂತವಾದಂತೆ ಕಾಣುತ್ತಾರೆ. ಮತ್ತು ಹೀಗೆ ಕಂಡು ಹಾಗೆ ಮರೆಯಾಗುವುದರ ಒಳಗೆ ಅವರ ಕಥೆಗಳನ್ನೂ ನಮ್ಮೊಳಗೆ ಇಳಿಸಿ ಹೋಗಿಬಿಡುತ್ತಾರೆ.
ಈ ಎಲ್ಲ ಕಾರಣಗಳಿಗಾಗಿ ನನ್ನ ಪಾಲಿಗೆ ಕ್ಯಾಮರಾ ಒಂದು ಧ್ಯಾನದ ಸಲಕರಣೆಯೇ.              ಅದಿಲ್ಲವಾಗಿದ್ದರೆ ನಾನು ಎಷ್ಟೆಲ್ಲ ಕಲಿಕೆಯನ್ನು ಕಳೆದುಕೊಂಡು ಬಿಡುತ್ತಿದ್ದೆನೋ ಏನೋ. ಬದುಕಿನ ಒಪ್ಪಓರಣಗಳನ್ನ ಮಾತ್ರವಲ್ಲದೇ ಓರೆಕೋರೆಗಳನ್ನೂ ಈ ಪುಟ್ಟ ಯಂತ್ರ ಎತ್ತಿ ಹಿಡಿದು ಸರಿದಾರಿಯನ್ನ ತೋರಿಸುತ್ತದೆ. ಸುಖದಂತೆಯೇ ದುಃಖವನ್ನೂ ಸೆರೆ ಹಿಡಿಯುತ್ತದೆ. This too Shall Pass- ಎಂಬ ಮಾತನ್ನ ವಿರೋಧಿಸಲೋ ಎಂಬಂತೆ- ಮರೆಯಾಗುವ ಮಾಂತ್ರಿಕ ಕ್ಷಣವನ್ನು ಹಿಡಿದಿಟ್ಟು ಬೀಗುತ್ತದೆ! 
            ಮುಗಿಸುವ ಮುನ್ನ, ಒಂದು ಘಟನೆಯನ್ನ ಹಂಚಿಕೊಳ್ಳಲೇ ಬೇಕು. ಹೀಗೇ ಎಲ್ಲೋ ಹೋಗಿದ್ದಾಗ- ದಾರಿಯಲ್ಲೊಬ್ಬರು ವೃದ್ಧೆ ಯಾರದೋ ಬಳಿ ಏನನ್ನೋ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ದೈನ್ಯವಿತ್ತು- ವಿನಂತಿಯಿತ್ತು. ಪಾಪ ಎದುರಿಗಿದ್ದವರ ಬಳಿ ಏನೋ ಕಷ್ಟ ಹಂಚಿಕೊಳ್ಳುತ್ತಿದ್ದರು. ಸುಮ್ಮನೆ ಕೊಂಚ ದೂರ ನಿಂತೇ ಅವರ ಚಿತ್ರವನ್ನ ಕ್ಲಿಕ್ಕಿಸುತ್ತಿದ್ದೆ. ನಾನು ಫೋಟೋ ತೆಗೆಯುವುದನ್ನ ನೋಡಿದ ಆಕೆಯ ಮುಖಚರ್ಯೆ ಬದಲಾಯಿತು. ನಾನು ಏನೂ ಕೇಳದೆಯೇ ಇದ್ದರೂ- ಅವರಾಗೇ  “ ನಮ್ಮ ಕಷ್ಟ ಪಟದಲ್ಲಿ ಯಾಕೆ ಗೊತ್ತಾಗ್ಬೇಕು ಹೇಳಿ” ಎಂದು ಅಮಾಯಕವಾಗಿ ನಕ್ಕು ಬಿಟ್ಟರು. ಈಗ ಫೋಟೋ ತೆಗೆ-ಎಂಬ ಹಾಗೆ. ಆ ನಕ್ಕ ಕ್ಷಣದಲ್ಲಿತ್ತು ಬದುಕಿನ ಸಾರ್ಥಕತೆ. ಧ್ಯಾನವನ್ನೂ ಮೀರಿದ ಭಾವ. ಮತ್ತು ಅಂತಹ ಭಾವಗಳೇ ಮತ್ತೆ ಹೊಸ ನಡಿಗೆಗೆ ಪ್ರೇರೇಪಿಸುವ ಉದ್ದೀಪನದ ಮದ್ದು!


 ವಿಶ್ವವಾಣಿಯ ಗುರು ಪುರವಣಿಯಲ್ಲಿ ಪ್ರಕಟಿತ


ಸೋಮವಾರ, ಜುಲೈ 24, 2017

ಜಯ ಜಯ ಜಗನ್ನಾಥ!

ಪುರಿಯ ಪುರಾಧೀಶ:
ಪುರಿಒಡಿಶಾ ಕರಾವಳಿಯ ಪುಟ್ಟ ಪಟ್ಟಣಸಟ್ಟನೆ ನೋಡಿದರೆನಮ್ಮ ಮಂಗಳೂರೋಉಡುಪಿಯೋಕಾರವಾರವೋ ಅನ್ನಿಸುವಂತಹ ಊರುಅದೇ ತೆಂಗುಬಾಳೆಹಸಿರು ಗದ್ದೆಗಳ ಸಾಲುಎಳನೀರು ಮಾರುವ ಪೋರರುಗೇರು ಹೂವಿನ ಘಮಭೂಲಕ್ಷಣದಲ್ಲಿ ತನ್ನಿಂದ ಸಾವಿರಾರು ಕಿಲೋಮೀಟರು ದೂರದಲ್ಲಿರುವ ಉಡುಪಿಯಂತಿರುವ ದೇಗುಲ ನಗರಿ ಪುರಿಅಲ್ಲಿರುವ ಪೊಡವಿಗೊಡೆಯನೇ ಇಲ್ಲಿರೂ ಆರಾಧ್ಯ ದೈವಅಲ್ಲಿ ಕಡೆಗೋಲು ಕೃಷ್ಣನಾದರೆಇಲ್ಲಿ ಜಗನ್ನಾಥಪುರಿಯ ದೇವಸ್ಥಾನದ ಅನ್ನಸಂತರ್ಪಣೆವಿಶ್ವವಿಖ್ಯಾತಮೋಕ್ಷಮಾರ್ಗಕ್ಕಾಗಿ ದರ್ಶನ ಮಾಡಬೇಕಿರುವ ಏಳು ಪುಣ್ಯಕ್ಷೇತ್ರಗಳಲ್ಲಿ ಈ ದೇಗುಲವೂ ಒಂದು ಎಂದು ಪುರಾಣಗಳೇ ಹೇಳುತ್ತವೆ.
ಜಗನ್ನಾಥನೆಂದರೆಜಗದ ಒಡೆಯ ಎಂದರ್ಥಆದರೆ ಈ ನಮ್ಮ ಕೃಷ್ಣನೆಂದ ಮೇಲೆ ಗೊತ್ತಲ್ಲಆತ ಒಡೆಯನಿಗಿಂತ ಜಾಸ್ತಿ ಸ್ನೇಹಿತನೇಪೂರ್ವ ಕರಾವಳಿಯ ಪುರಿಯಲ್ಲಿ ನೆಲೆ ನಿಂತ ಈ ಜಗನ್ನಾಥನೂ ಅಷ್ಟೇಸಖ ಭಾವದ ಸುಖೀ ದೇವರುನಾಡಿನೆಲ್ಲಡೆಯ ಜನ ಈ ಜಗನ್ನಾಥನ ಬೀಡಿಗೆ ಬಂದು ಆತನ ದರ್ಶನಕ್ಕೆಂದು ಸಾಲು ಹಚ್ಚಿ ನಿಂತರೆ ಬಿಡುಗಣ್ಣನಾಗಿ ಎಲ್ಲರಿಗೂ ಆಶೀರ್ವಾದ ಮಾಡುತ್ತ ನಿಲ್ಲುವ ಬಣ್ಣದ ದೇವ ಅವನಿಲ್ಲಿಹಸಿದ ಹೊಟ್ಟೆಗೆ ಇಲ್ಲವೆನ್ನದೆ ಊಟವನಿಕ್ಕುವ ಮಹಾಗುರುಇಲ್ಲಿ ಉಣ್ಣದೇ ಹೋಗುವ ಭಕ್ತರಿಲ್ಲದೇವರಿಗೆ ಕೈ ಮುಗಿಯುವುದು ಮರೆತರೂಘಮಘಮ ಕಿಚಡೀ ಹೊಟ್ಟೆಗಿಳಿಯದೇ ಹೋಗದೇನೋ.


ಪುರಾಣದಲ್ಲೇನಿದೆ?
ಇಂದ್ರದ್ಯುಮ್ನನೆಂಬ ಮಹಾರಾಜನ ಅಪರಿಮಿತ ವಿಷ್ಣುಭಕ್ತಿಪುರಿಯ ದೇಗುಲದ ಮೂಲಖುದ್ದು ವಿಷ್ಣುವೇವಿಶ್ವಕರ್ಮನೊಡಗೂಡಿ ಅಪೂರ್ಣ ಮೂರ್ತಿಗಳನ್ನ ಕೆತ್ತಿದ್ದನೆಂಬುದು ಐತಿಹ್ಯ೨೧ ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆಗೆಯಬಾರದೆಂಬ ಶರತ್ತನ್ನ ಮೀರಿ ಇಂದ್ರದ್ಯಮ್ನನ ಪತ್ನಿಬಾಗಿಲು ತೆಗೆದ ಕಾರಣಕ್ಕೆ ಮೂರ್ತಿಗಳಿಗೆ ಕೈ ಕಾಲುಗಳೇ ಮೂಡಿರಲಿಲ್ಲ.ಅಂದಿನಿಂದ ಇಂದಿನವರೆಗೂ ಜಗನ್ನಾಥ ಬಲರಾಮ ಸುಭದ್ರೆಯರು ಬಿಟ್ಟಗಣ್ಣಿನಬಣ್ಣಬಣ್ಣದ ಅಲಂಕಾರ ಹೊಂದಿರುವ ಚೆಲುವ ಚೆಲುವೆಯರುಹಾಂಮರದ ಮೂರ್ತಿಗಳು ಇವೆಲ್ಲನಮ್ಮ ಎಂದಿನ ಸಂಪ್ರದಾಯದ ಕಲ್ಲಿನ ವಿಗ್ರಹಗಳಲ್ಲ!
ಬ್ರಹ್ಮಾಂಡ ಪುರಾಣಸ್ಕಂದ ಪುರಾಣಭವಿಷ್ಯ ಪುರಾಣವೂ ಸೇರಿದಂತೆ ಹಲವು ಪುರಾಣಗಳಲ್ಲಿ ಮತ್ತೆ ಮತ್ತೆ ಪುರಿಯ ಉಲ್ಲೇಖವಿದೆಜಗನ್ನಾಥನನ್ನು ವರ್ಣಿಸುವ ಶ್ಲೋಕಗಳಿವೆಎಂದಿನಂತೆತನ್ನ ಪತ್ನಿಯರ ಜೊತೆಗಲ್ಲದೇ ಒಡಹುಟ್ಟಿದವರ ಜೊತೆಗೆ ನೆಲೆನಿಂತ ಈ ವಾಸುದೇವನಿಗೆಅಪಾರ ಗೌರವಇಂದ್ರದುಮ್ಯನ ಅಂದು ವಿಷ್ಣುವನ್ನು ಕೋರಿಕೊಂಡಂತೆಯೇಇಂದಿಗೂ ಈ ದೇಗುಲ ಕೇವಲ ಮೂರು ತಾಸುಗಳಷ್ಟೇ ಮುಚ್ಚಿರುತ್ತದೆಹಗಲಿರುಳುಳೆನ್ನದೇ ಮಂದಿರವನ್ನು ಸಂದರ್ಶಿಬಹುದಾದಅದ್ವೀತೀಯ ತಾಣ ಇದು.



ಆಧ್ಯಾತ್ಮ ಕ್ಷೇತ್ರ:
ಪುರಿಯ ಮಂದಿರದ ಬಗ್ಗೆಕಾಲನ ಹೊಡೆತಕ್ಕೋವೈರಿಗಳ ಅಟಾಟೋಪಕ್ಕೋ ಸಿಕ್ಕು ಧ್ವಂಸಗೊಂಡ ದೇವಳವನ್ನ ಮತ್ತೆ ಮತ್ತೆ ಕಟ್ಟಿಸಿದ ರಾಜರುಗಳ ಬಗ್ಗೆ ಹೇಳಹೊರಟರೆ ಅದೇ ಇನ್ನೊಂದು ಲೇಖನವಾದೀತುಈಗಿರುವ ದೇಗುಲವನ್ನು ಕಟ್ಟಿಸಿದಾತಕಳಿಂಗ ರಾಜ ಖರವೇಲವೇದಗಳಿಗಿಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ಜಗನ್ನಾಥಆ ಯಾವ ಆಡಂಬರವನ್ನೂ ಹೊರದೇ ಸರಳರಲ್ಲಿ ಸರಳನಂತೆ ನಿಂತಿದ್ದಾನೆ ಇಲ್ಲಿಆದರೆ ಆ ಸರಳತೆಯ ಹಿಂದೆ ಭಾರತದ ಭವ್ಯ ಆಧ್ಯಾತ್ಮ ಪ್ರಪಂಚದ ಹೊಳಹುಗಳಿವೆಇಲ್ಲಿನ ಮೂರು ಮೂರ್ತಿಗಳು ಸರ್ವಜ್ಞತೆ-ಸರ್ವವ್ಯಾಪಕತೆಸರ್ವಶಕ್ತತೆಯನ್ನು ಪ್ರತಿನಿಧಿಸುತ್ತವೆದೇಗುಲದ ಗೋಪುರದಲ್ಲಿನ ಸುದರ್ಶನ ಚಕ್ರಇವೆಲ್ಲವನ್ನು ಮೀರಿದ ನಾಲ್ಕನೆಯ ಆಯಾಮವನ್ನ ಸೂಚಿಸುತ್ತದೆಪದೇ ಪದೇ ಬದಲಾಗುವ ಮೂರ್ತಿಗಳುವಿಗ್ರಹಗಳಿಗಿಂತ ಮೂಲತತ್ವವೇ ಮುಖ್ಯ ಎಂಬುದನ್ನು ಸಾರುತ್ತವೆಪಾಂಡವರಾದಿಯಾಗಿಆದಿ ಶಂಕರಾಚಾರ್ಯರೂ ಸೇರಿದಂತೆ ಅದೆಷ್ಟೋ ಸಾಧಕರನ್ನ ಸೆಳೆದ ದಿವ್ಯ ಕ್ಷೇತ್ರವಿದು.
ಇಲ್ಲಿನ ಮೂರ್ತಿಗಳಿಗೆ ಕೈ-ಕಾಲುಗಳಿಲ್ಲದೇ ಇರುವುದಕ್ಕೆ ಒಂದು ಕಥೆಯಿದೆಪ್ರಾಪಂಚಿಕ ಇಹ ಭೋಗಗಳ ಈ ಜಗತ್ತಿನಲ್ಲಿ ನಮಗೆ ಯಾವ ಕೈಕಾಲುಗಳೂ ಬೇಡ ಎಂದನಂತೆ ಜಗನ್ನಾಥಎಲ್ಲವನ್ನೂ ಕಣ್ಣಿನಿಂದಲೇ ಸ್ವೀಕರಿಸುತ್ತೇನೆಸಾಕುಭಕ್ತರ ಕಣ್ಣಿಗೆ ನನ್ನ ಕಣ್ಣುಗಳು ಕಾಣಲಿನಮ್ಮ ಸಂವಹನ ಅಷ್ಟರಿಂದಲೇ ಸಾಧ್ಯ ಎಂದು ಇಂದ್ರದ್ಯುಮ್ನನಿಗೆ ಸಮಾಧಾನ ಹೇಳಿದ್ದನಂತೆ!


ವಿಶಿಷ್ಟ ಆಚರಣೆಗಳ ಸರಳ ಜಗನ್ನಾಥ:
ಪುರಿಯನ್ನು ಜಗನ್ನಾಥನು ಆವರಿಸಿಕೊಂಡಿರುವ ಪರಿ ಅನನ್ಯಇಲ್ಲಿನ ಮಂದಿಗೆ ಅವನೇ ಗುರುಊರಿಗೂರೇ ಅವನ ಧ್ಯಾನದಲ್ಲಿ ಮಗ್ನವಾದೊಂದು ಮಹಾಮೇಳದಂತೆ ಕಾಣುತ್ತದೆದೇವರನ್ನ ಸ್ನೇಹಿತನಂತೆ ಕಾಣುತ್ತಅವನನ್ನೊಂದು ನೋಡಿಕೊಂಡು ಬನ್ನಿ ಎಂದು ಏಕವಚನದಲ್ಲಿ ಜಗನ್ನಾಥನ ಬಗ್ಗೆ ಮಾತನಾಡುತ್ತ ಸಂಚರಿಸುವ ಸೈಕಲ್ ರಿಕ್ಷಾವಾಲಾಗಳುದೇವರ ಪ್ರಸಾದವನ್ನು ಉಂಡೇ ಇಲ್ಲವೇ ಇನ್ನೂ ಎಂದು ಕಣ್ಣು ಬಿಟ್ಟು ಅಚ್ಚರಿ ವ್ಯಕ್ತ ಪಡಿಸುವ ಅಂಗಡಿಯವರು, "ಜಗತ್ತಿನ ಅತ್ಯಂತ ದೊಡ್ಡ ಹೋಟೇಲು ಯಾವುದು ಗೊತ್ತಾಇದೇಜಗನ್ನಾಥನ ಮಂದಿರಎಂದು ನಗುವ ಪಾಂಡಾಗಳು.. ಹೀಗೆ ನಗರ ತುಂಬ ಜಗನ್ನಾಥನದೇ ಗುಂಗು.
ಈ ಜಗನ್ನಾಥನೂ ಅಷ್ಟೇಸಂಪ್ರದಾಯಗಳನ್ನು ಮೀರಿ ನಿಂತ ಪುಣ್ಯಾತ್ಮಅದಕ್ಕಾಗಿಯೇ ಏನೋಜನರಿಗೂ ಅವನೆಂದರೆ ಇಷ್ಟ೧೦-೧೯ ವರ್ಷಗಳಿಗೊಮ್ಮೆಇಲ್ಲಿ ದೇವ ವಿಗ್ರಹಗಳೇ ಬದಲಾಗುತ್ತವೆ. ಆಷಾಢ ಅಧಿಕಮಾಸ ಬಂದ ವರ್ಷವೆಲ್ಲಹೊಸ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ.  ವರ್ಷಕ್ಕೆ ಹದಿನೈದು ದಿನ ಆರೋಗ್ಯ ಸರಿಯಿಲ್ಲ ಎಂದು ದೇವರೂ ರಜೆ ಹಾಕುತ್ತಾರೆಹೌದು. ಆಷಾಢ ಮಾಸದ ಸೆಖೆಯಲ್ಲಿ ದೇವರುಗಳೆಲ್ಲ ಹೊರ ಬಂದು ಸ್ನಾನ ಮಾಡುತ್ತಾರೆ! ಸ್ನಾನ ಪೂರ್ಣಿಮೆಯೆಂದೇ ಹೆಸರು ಆದಿನಕ್ಕೆ. ಹದಿನೈದು ದಿನಗಳ ಸ್ನಾನ ಮತ್ತು ಮಾವಿನಹಣ್ಣಿನರಸದ ಅಭಿಷೇಕ ದಿಂದ ಸುಸ್ತಾದ ಸ್ವಾಮಿ, ಹುಷಾರು ತಪ್ಪಿ ಮುಂದಿನ ಹದಿನೈದು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡದೇರಜೆ ಹಾಕಿ ಮೂಲಿಕೆಗಳ ಔಷಧ ಸ್ವೀಕರಿಸುತ್ತ ಆರಾಮಾಗುತ್ತಾರೆಇಂಥ ದೇವ ಎಲ್ಲಿ ಸಿಕ್ಕಾನು ಹೇಳಿನಮ್ಮ ಮಧ್ಯದಿಂದಲೇ ಎದ್ದು ಹೋಗಿ ಕೂತಂತೆ ಕಾಣುವ ಜಗದ ನಾಥ ಈತ!


ಜಗನ್ನಾಥ ರಥೋತ್ಸವ:
ವಿಶ್ವಪ್ರಸಿದ್ಧ ಜಗನ್ನಾಥ ರಥೋತ್ಸವದ ಬಗ್ಗೆ ತಿಳಿಯದವರಿಲ್ಲವೇನೋ. ಪ್ರತಿ ವರುಷ, ಇಲ್ಲಿ ನಡೆಯುವ ರಥಯಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದ ಹಿಂದಿನ ಆಚರಣೆಯೂ ಮಜವಾಗಿದೆ! ಈ ಹುಷಾರಿಲ್ಲದೇ ಮಲಗಿದ್ದ ಕೃಷ್ಣ- ಬಲರಾಮ-ಸುಭದ್ರೆಯರು, ಮತ್ತೆ ಆರೋಗ್ಯವಂತರಾದ ಮೇಲೆ ಅವರಿಗೆಲ್ಲ ಏನಾದರೂ ರುಚಿ-ರುಚಿಯಾಗಿದ್ದು ತಿನ್ನಬೇಕು ಅನ್ನಿಸಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಂಡೀಚಾ ಅನ್ನುವ ತನ್ನ ಅತ್ತೇಮನೆಗೆ ಹೋಗುತ್ತಾರೆ! ದೇವರೆಂದ ಮೇಲೆ ಸುಮ್ಮನೇ ಹೋಗಲು ಸಾಧ್ಯವೇ? ಅದಕ್ಕೇ ಈ ರಥಯಾತ್ರೆ ನಡೆಯುತ್ತದೆ. ವೈಭವೋಪೇತವಾಗಿ ಅಲಂಕರಿಸಿಕೊಂಡ ಸೋದರ ಸೋದರಿಯರು, ಅಲ್ಲಿ ಹೋಗಿ ಒಂದಿಷ್ಟು ದಿನಗಳ ಕಾಲ ಇದ್ದು ಬರುತ್ತಾರೆ. ತನ್ನ ಬಾಲ್ಯಕ್ಕೆ ಮರಳುವ ಕೃಷ್ಣನ ಸಂಭ್ರಮ ಇದು. ಹೆಂಡತಿ ಲಕ್ಷ್ಮಿಯನ್ನ ದೇಗುಲದಲ್ಲೇ ಬಿಟ್ಟು- ತಾನು ಮಾತ್ರ ಅಣ್ಣ ತಂಗಿಯರೊಡಗೂಡಿ ಹೋಗುತ್ತಾನೆ ಜಗನ್ನಾಥ. ಗುಂಡೀಚ ದೇಗುಲದಲ್ಲಿ ಕೃಷ್ಣನ ಆಮೋದ ಪ್ರಮೋದಗಳ ಸಕಲ ವ್ಯವಸ್ಥೆಗಳೂ ಇದೆ! ಆತ ಅಲ್ಲಿ ಎಲ್ಲ ಮರೆತು ರಾಸಲೀಲೆಯಾಡುತ್ತಾನೆ, ಬೇಕುಬೇಕಾದ ತಿಂಡಿ ತಿನಿಸುಗಳನ್ನ ತಿನ್ನುತ್ತಾನೆ. ಸಿಟ್ಟುಗೊಂಡು ಬಂದ ಲಕ್ಷ್ಮಿಯನ್ನ ಸಮಾಧಾನಿಸಿ ಮರಳಿ ಕಳಿಸುತ್ತಾನೆ! ಎಲ್ಲ ಮುಗಿದ ಮೇಲೆ-ತಾನು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ವಾಪಸ್ಸು ಬರುತ್ತಾನೆ. ಇಲ್ಲಿನ ಮಂದಿ ಕೃಷ್ಣನೊಡಗೂಡಿ ತಾವು ಕೂಡ ಈ ರಥಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಾವೂ ಆತನ ಬಾಲ್ಯಕ್ಕೆ ಹೋಗುತ್ತಾರೆ. ಪುರಿಯ ಬೀದಿ ಬೀದಿಗಳಲ್ಲಿನ ಎಲ್ಲ ದೇಗುಲಗಳೂ ಕೃಷ್ಣನ ನೆಂಟರದೇ! ಅತ್ತೆ-ಮಾವ-ಚಿಕ್ಕಮ್ಮ-ಚಿಕ್ಕಪ್ಪ-ಹೆಂಡತಿ-ಅಣ್ಣ-ಹೀಗೆ ಎಲ್ಲ ಕಡೆಗಳಿಗೂ ಈ ಜಗನ್ನಾಥ ರಥಯಾತ್ರೆಯ ನೆಪದಲ್ಲಿ ಭೇಟಿಕೊಡುತ್ತಾನೆ. ಅಲ್ಲೆಲ್ಲ ರಥ ಸಾಗುತ್ತದೆ.


ದೇವನೊಬ್ಬ, ತಾನು ದೈವತ್ವಕ್ಕೇರಿದ್ದರೂ, ಹೀಗೆ ಮನುಷ್ಯ ಸಹಜ ಆಚರಣೆಗಳ ಮೂಲಕ ಜನಮಾನಸಕ್ಕೆ ಬಹಳ ಹತ್ತಿರವಾಗುತ್ತಾನೆ. ತಾನೂ ಕೂಡ ನಿಮ್ಮಂತೆಯೇ ಎಂಬ ಆಪ್ತತೆಯನ್ನ ಸಾಮಾನ್ಯರಲ್ಲಿ ಬಿತ್ತುತ್ತಾನೆ. ಜಗನ್ನಾಥ ಈ ಕಾರಣಕ್ಕಾಗಿಯೇ ಎಲ್ಲರಿಗೂ ಪ್ರಿಯ. ಇಷ್ಟೊಂದು ಸರಳ ದೇವರು ಭಾರತದಲ್ಲಿ ಬೇರೆಲ್ಲಿಯೂ ಇಲ್ಲವೇನೋ. ತುಂಬ ಮಡಿವಂತಿಕೆ ಇಲ್ಲದ, ತಿಂಡಿಪೋತ ದೇವರು ನಮ್ಮ ಜಗನ್ನಾಥ. ದಿನವಿಡೀ ದರ್ಶನ ನೀಡುವ, ಬಡವ ಬಲ್ಲಿದನೆಂಬ ಭೇದವಿಲ್ಲದ, ಅತ್ಯುಚ್ಚವಾದ ಆಚಾರವನ್ನೋ, ಪಾಂಡಿತ್ಯವನ್ನೋ ಬೇಡ ಈ ಮಹಾಗುರು, ಸಮಸ್ತರಿಗೂ ಆಪ್ತ. ಜಗನ್ನಾಥನ ಮಂದಿರದೊಳಗೆ ಒಮ್ಮೆ ನಡೆದಾಡಿದರೆ, ಯಾರಿಗೇ ಆದರೂ ಅದರ ಅರಿವಾಗುತ್ತದೆ.
ಮತ್ತೆ ಮತ್ತೆ ಸತ್ತು ಹುಟ್ಟುವ ಜಗನ್ನಾಥ, ಮನುಷ್ಯರಾದವರೂ ದೈವತ್ವಕ್ಕೇರಬಹುದು ಎಂಬ ಸತ್ಯವನ್ನು ಸಾರುತ್ತ ಪುರಿಯಲ್ಲಿ ನಿಂತಿದ್ದಾನೆ. ಕೈಕಾಲುಗಳ ಅಗತ್ಯವಿಲ್ಲದೆಯೇ ಜಗವನ್ನು ಮುನ್ನೆಡಬಹುದು, ಹೃದಯದಲ್ಲಿ ಭಕ್ತಿಯಿದ್ದರೆ ಸಾಕು ಎನ್ನುವ ಈ ಜಗನ್ನಾಥನಿಗೆ-ಜಗನ್ನಾಥನೇ ಸಾಟಿ!

ಸತ್ತು ಹುಟ್ಟುವ ದೇವರುಗಳು
ಜಗತ್ತಿನ ಯಾವ ದೇವಸ್ಥಾನದಲ್ಲಿಯೂ ಇಲ್ಲದ ಅತ್ಯಂತ ವಿಶೇಷ ಆಚರಣೆ ಪುರಿಯ ದೇಗುಲದಲ್ಲಿದೆ. ಅಧಿಕ ಆಷಾಢ ಮಾಸ ಬಂದ ವರ್ಷ ಅಲ್ಲಿನ ಮೂರ್ತಿಗಳನ್ನ ಬದಲಾಯಿಸಲಾಗುತ್ತದೆ. ಈ ಆಚರಣೆಗೆ ನಬಕಲೇಬರ ಎಂದು ಹೆಸರು. ನವ ಕಳೇಬರವೆಂದರೆ-ಹೊಸ ದೇಹ ಎಂದರ್ಥ. ಹನ್ನೆರಡು ಅಥವಾ ಹತ್ತೊಂಬತ್ತು ವರುಷಗಳಿಗೊಮ್ಮೆ ಬರುವ ಈ ಅಧಿಕ ಮಾಸದಲ್ಲಿ, ಹಳೆಯ ಮೂರ್ತಿಗಳನ್ನು ವಿಸರ್ಜಿಸಿ-ಹೊಸ ವಿಗ್ರಹಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮರದ ಮೂರ್ತಿಗಳಾದ ಕಾರಣಕ್ಕೆ, ಈ ವಿಹ್ರಗಗಳೂ ಕೂಡ ಜೀರ್ಣಾವಸ್ಥೆಯನ್ನು ತಲುಪಿರುತ್ತವೆ. ಈ ಹೊತ್ತಿನಲ್ಲಿ ದಾರುಬ್ರಹ್ಮವೆಂದು ಕರೆಯುವ ಬೇವಿನ ಮರದಿಂದ ಹೊಸ ಕಾಷ್ಠ ಶಿಲ್ಪಗಳನ್ನ ಕೆತ್ತಲಾಗುತ್ತದೆ. ಈ ಮರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಕೂಡ ಬಹಳ ಸೂಕ್ಷ್ಮ ಪ್ರಕ್ರಿಯೆಗಳಿದ್ದು- ಕಡುಗಪ್ಪು ಬಣ್ಣದ ಮರವೇ- ಜಗನ್ನಾಥನ ಕೆತ್ತನೆಗೆ ಬೇಕಿದ್ದರೆ, ಬಲರಾಮ ಸುಭದ್ರೆಯರಿಗೆ ಮಾಮೂಲು ಮರಗಳೇ ಸಾಕು.  ಹೊಸ ವಿಗ್ರಹಗಳು ಸಿದ್ಧವಾದ ಮೇಲೆ,  ಹಳೆಯ ಮೂರ್ತಿಗಳು ಸಾವನ್ನಪ್ಪಿದವೆಂದು ನಿರ್ಣಯಿಸಿ-ಸೂಕ್ತ ಕ್ರಿಯಾ ಕರ್ಮಗಳನ್ನೂ ನಡೆಸಲಾಗುತ್ತದೆ. ಹೊಸ ದೇಹಗಳೊಂದಿಗೆ ಹಳೆಯ ದೇವರುಗಳು ಮತ್ತೆ ಭಕ್ತರ ದರ್ಶನಕ್ಕೆ ಸಿದ್ಧವಾಗುತ್ತಾರೆ. ತೀರಾ ಇತ್ತೀಚೆಗೆ, 2015 ನೇ ಇಸವಿಯಲ್ಲಿ ನಬಕಲೇಬರ ಆಚರಣೆ ಜರುಗಿತ್ತು.

ಜಗನ್ನಾಥ ಮಹಾಪ್ರಸಾದ:
ಪುರಿಯ ದೇಗುಲದ ಮಹಾಪ್ರಸಾದ, ಅತ್ಯಂತ ವಿಶಿಷ್ಠವಾದದ್ದು. ಜಗನ್ನಾಥನಿಗೆ ಪ್ರತಿದಿನ, ತಪ್ಪದೆ, 56 ಬಗೆಯ ವಿವಿಧ ಖಾದ್ಯ-ಅನ್ನ ನೈವೇದ್ಯವನ್ನ ಸಮರ್ಪಿಸಲಾಗುತ್ತದೆ. ಛಪ್ಪನ್ನ ಭೋಗ್ ಎಂದು ಕರೆಯುವ ಈ ಆಹಾರ ಸಮ್ಮೇಳವೇ-ಬಾಯಲ್ಲಿ ನೀರೂರಿಸುವಂತದ್ದು. ಅನ್ನ, ತುಪ್ಪದಲ್ಲಿ ಕಲಸಿದ ಅನ್ನ, ಸಿಹಿಯಾದ ದಾಲ್, ಕಿಚಡಿ, ತರಕಾರಿಗಳನ್ನ ಬೆರೆಸಿ ಮಾಡಿರುವ ವೈವಿಧ್ಯಮಯ ಸಾರು/ಸಾಂಬಾರುಗಳು.. ಭಕ್ಷ್ಯಗಳು- ಹೀಗೆ ಇವೆಲ್ಲವನ್ನ ಭೋಜನಪ್ರಿಯ ಜಗನ್ನಾಥನಿಗೆ ಸಮರ್ಪಿಸಿ- ಭಕ್ತಾದಿಗಳಿಗೂ ಬಡಿಸಲಾಗುತ್ತದೆ. ನಿತ್ಯ ಇವುಗಳನ್ನ ಕಟ್ಟಿಗೆಯ ಒಲೆಯಲ್ಲೇ, ಮಡಿಕೆಗಳಲ್ಲಿಯೇ ಬೇಯಿಸಲಾಗುತ್ತದೆ. ಒಂದರ ಮೇಲೊಂದು ಮಡಿಕೆಗಳನ್ನ ಇರಿಸಿ, ಈ ಮಹಾಪ್ರಸಾದವನ್ನು ತಯಾರಿಸುವುದನ್ನು ನೋಡುವುದೇ ಒಂದು ಸೊಗಸು.

ರಥೋತ್ಸವದ ತಯಾರಿ
ಪ್ರತಿ ವರುಷದ ರಥೋತ್ಸವಕ್ಕೆ ಕೂಡ ಹೊಸ ರಥಗಳನ್ನ ನಿರ್ಮಿಸುವುದು ಜಗನ್ನಾಥ ದೇಗುಲದ ವಿಶೇಷತೆ. ಸುಮಾರು ೪೫ ಅಡಿಗಳಷ್ಟು ಎತ್ತರವಿರುವ ರಥಗಳ ನಿರ್ಮಾಣವೇ ಒಂದು ಕಲೆ. ಜಗನ್ನಾಥನ ರಥ, ನಂದಿಘೋಷ, ಬಲರಾಮನದು ತಾಲಧ್ವಜ, ಸುಭದ್ರೆಯದು ಪದ್ಮಧ್ವಜ. ನೋಡಲು ದೇಗುಲದ ಗೋಪುರಗಳನ್ನೇ ಹೋಲುವ ರಚನೆಯನ್ನ ಈ ರಥಗಳು ಹೊಂದಿದ್ದು ಜಗನ್ನಾಥನ ರಥ, ಎಲ್ಲಕ್ಕೂ ಎತ್ತರವಾಗಿದೆ. ನೂರಾರು ವರುಷಗಳಿಂದಲೂ ಒಂದೇ ರೀತಿಯಾಗಿ ಈ ರಥಗಳ ನಿರ್ಮಾಣ ನಡೆಯುತ್ತಿದ್ದು, ತಲೆತಲಾಂತರಗಳಿಂದಲೂ ಒಂದೇ ಮನೆತನದ ಮಂದಿ ಈ ಹಕ್ಕನ್ನ ಹೊಂದಿದ್ದಾರೆ. ಪ್ರತಿವರುಷ ಒಡಿಶಾದ ಕಾಡುಗಳಲ್ಲಿ ಅದಕ್ಕೆ ಬೇಕಾದ ಮರಗಳನ್ನ ಪೂಜಿಸಿ, ಕಡಿದು- ನಂತರ ಮಹಾನದಿಯಲ್ಲಿ ಮರಗಳ ತುಂಡುಗಳನ್ನ ತೇಲಿಬಿಡಲಾಗುತ್ತದೆ. ಅವುಗಳನ್ನ ಪುರಿಯಲ್ಲಿ ಸಂಗ್ರಹಿಸಿ, ಅಕ್ಷಯ ತೃತೀಯಾದ ಪುಣ್ಯದಿನದಂದು ರಥಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನೂರಾರು ಮಂದಿ ಸುಮಾರು ಎರಡು-ಮೂರು ತಿಂಗಳುಗಳ ಕಾಲ ಶ್ರಮಿಸಿ ರಥಗಳನ್ನ ಸಿದ್ಧಗೊಳಿಸುತ್ತಾರೆ. ಹದಿನಾರು ಚಕ್ರಗಳನ್ನ ಹೊಂದಿರುವ, ಕೆಂಪು ಮತ್ತು ಹಳದೀ ವಸ್ತ್ರಗಳಿಂದ ಅಲಂಕೃತವಾದ ಜಗನ್ನಾಥದ ರಥದ ದರ್ಶನವೇ ರೋಮಾಂಚನಕಾರಿ.  

ವಿದೇಶಗಳಲ್ಲೂ ರಥೋತ್ಸವ:
ಈಗ ಜಗತ್ತಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜಗನ್ನಾಥನ ರಥ ಯಾತ್ರೆಯ ದಿನದಂದೇ ಭಕ್ತರೆಲ್ಲ ಸೇರಿ ರಥ ಯಾತ್ರೆಯನ್ನ ನಡೆಸುತ್ತಾರೆ. ನ್ಯೂಯಾರ್ಕ್, ಲಂಡನ್, ಮಾಸ್ಕೋ ಸೇರಿದಂತೆ ಬಹು ಮುಖ್ಯ ನಗರಗಳಲ್ಲಿ ಜಗನ್ನಾಥನ ಯಾತ್ರೆ ಸಂಚರಿಸುತ್ತದೆ!

ಬುಧವಾರ, ಜುಲೈ 12, 2017

ತೆರಿಗೆ ಬೇನೆ!

ನಿತ್ಯ ಬೆಳಗ್ಗೆದ್ದು ಯಾರನ್ನಾದರೂ ಒಬ್ಬರನ್ನ ಕಡ್ಡಾಯವಾಗಿ ನೆನೆಸಿಕೊಳ್ಳಲೇಬೇಕು ಅಂತ ಭಗವಂತನೇನಾದರೂ ರೂಲ್ಸು ಮಾಡಿದರೆ ನಾನು ನಂಗೆ ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಟೀಚರಾಗಿದ್ದ ವಿನ್ನಿ ಟೀಚರನ್ನು ನೆನಪಿಸಿಕೊಳ್ಳುತ್ತೇನೆ. ಅನುಮಾನವೇ ಇಲ್ಲ. ಯಾಕೆಂದರೆ ಲೆಕ್ಕ ಅನ್ನುವುದು, ನನ್ನ ತಲೆಗೆ ಹೋಗುವುದು ಬಿಡಿ, ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಅಂಕಗಣಿತ, ಬೀಜಗಣಿತ, ರೇಖಾಗಣಿತ, ನೀವ್ ಯಾವ್ದೇ ಕೇಳಿ, ನಂಗೆ ಎಲ್ಲ ಕಬ್ಬಿಣದ ಕಡಲೆಯೇ. ಒಂದು ಹೆಚ್ಚು ಕಷ್ಟ, ಇನ್ನೊಂದು ಅದ್ಕಿಂತ ಹೆಚ್ಚು ಕಷ್ಟ, ಆಮೇಲಿಂದ ಅಭೂತಪೂರ್ವ ಕಷ್ಟ. ನಾನು ಹೇಗಾದರೂ ಮಾಥ್ಸಲ್ಲಿ ಗೋತಾ ಹೊಡೀತೇನೆ ಎನ್ನುವುದು ನಮ್ ಮನೇಲಿ ಬಿಡಿ, ನಮ್ಮ ಇಡೀ ವಠಾರಕ್ಕೇ ಗೊತ್ತಿತ್ತಾಗಿ ನಮ್ಮಪ್ಪ ವಿನ್ನೀ ಟೀಚರ ಬಳಿ ಏನೋ ಸಂಜೆ ಹೊತ್ತಿಗೆ ಸ್ವಲ್ಪ ಲೆಕ್ಕ ಹೇಳ್ಕೊಡಿ ಎಂದು ಕೇಳಿದ್ದರು. ಪರೀಕ್ಷೆಯ ಮುನ್ನಾದಿನದ ವರೆಗೂ ಅವರು ನನ್ನ ತಲೆಗೆ ಅದೇನೇನೋ ತುಂಬೀ ತುಂಬೀ ನನ್ನ ಉದ್ದಾರದ ಸಕಲ ಯತ್ನಗಳನ್ನ ಮಾಡಿದ್ದರು. ಇಷ್ಟಾಗಿಯೂ, ಯಾರಿಗೂ ಏನೂ ಭರವಸೆ ಇರಲಿಲ್ಲ. ಮುಂದಿನದು ದೇವರಾ ಚಿತ್ತ ಅಂತ ಸುಮ್ಮನಿದ್ದರು. ಕೊನೇಗೆ ರಿಸಲ್ಟು ಬಂದ ದಿನ ನೋಡಿದರೆ, ಕರೆಕ್ಟಾಗಿ ಮೂವತ್ತೈದು ಮಾರ್ಕು ಬಂದು ನಾನು ಗಣಿತ ಪಾಸಾಗಿದ್ದೆ! ಅಪ್ಪ ನಿರ್ದಾಕ್ಷಿಣ್ಯವಾಗಿ ಇದು ನಿನ್ನ ಸಾಧನೆಯೇನೂ ಅಲ್ಲ, ವಿನ್ನೀ ಟೀಚರಿದ್ದು ಅಂದಿದ್ದರು. ಅಲ್ಲ, ನಂಗೆ ಅದರ ಬಗ್ಗೆ ಯಾವ ಅನುಮಾನವೂ ಇರಲಿಲ್ಲ!

ಆವತ್ತೇ ಕೊನೆ.ನಾನು ಈ ಲೆಕ್ಕದ ದಿಕ್ಕಲ್ಲಿ ಮುಖ ಹಾಕಿ ನಿಂತಿದ್ದರೆ ಕೇಳಿ. ಆಮೇಲೆ ನಾನು ಓದುವ ಯಾವ ಕೋರ್ಸಿನಲ್ಲಿರೂ ಅದರ ನೆರಳೂ ಕೂಡ ಕಾಣಬಾರದೆಂಬ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು, ಶಿಕ್ಷಣಶರಧಿಯನ್ನೇನೋ ದಾಟಿಬಿಟ್ಟೆ! ಆದರೆ ನಾನು ಗಣಿತವನ್ನು ಬಿಟ್ಟರೂ, ಈ ಅಗಣಿತ ತಾರಾ ಮಂಡಲದವರೆಗೆ ವ್ಯಾಪಿಸಿರುವ ಈ ಕೂಡುಕಳೆಯಾಟ ನನ್ನನ್ನ ಬಿಡಬೇಕಲ್ಲ! ಏನೋ, ಓದ್ಕಂಡು ನನ್ನ ಪಾಡಿಗೆ ನಾನು ಯಾವ್ದೋ ಕೆಲಸ ಮಾಡುತ್ತೇನೆ, ಕಂಪನಿ ಸಂಬಳ ಕೊಡತ್ತೆ ತಗೊಂಡರಾಯ್ತು ಅಂತ ಅಂದುಕೊಂಡಿದ್ದರೆ, ವಕ್ಕರಿಸಿತು ನೋಡಿ, ಈ ಟ್ಯಾಕ್ಸು ಲೆಕ್ಕಾಚಾರ. ಭಗವಂತನೇ. ಎಲ್ಲೆಲ್ಲೋ ಪಾರಾಗಿ ತುದೀಗೆ ಹೀಗೆ ಸಿಕ್ಕಾಕ್ಕೊಂಡಿದ್ದೆ ನಾನು. ಈ ಲೆಕ್ಕ ಹಾಕದೇ ವಿಧಿಯಿಲ್ಲ ಆದರೆ ನನಗೋ, ಸುತಾರಾಂ ತಲೆಗೆ ಹೋಗುವುದಿಲ್ಲ.

ಯಾವುದೇ ಕಂಪನಿಯಾಗಿರಲಿ, ಈ ಹೆಚ್ಚಾರುಗಳು ನಾವು ಕೆಲಸಕ್ಕೆ ಸೇರುವಾಗ ಹೇಳುವ ಸಂಬಳಕ್ಕೂ ಆಮೇಲೆ ಕೈಗೆ ಬರುವ ಮನೆಗೆ ಕೊಂಡುಯ್ಯುವ ಟೇಕ್ ಹೋಮು ಸ್ಯಾಲರಿಗೂ ತಲೆಬುಡ ಹೊಂದಿಕೆಯಾದರೆ ಕೇಳಿ! ನೂರಾರು ಅಲೋವೆನ್ಸು, ಟ್ಯಾಕ್ಸುಗಳ ಕಥೆ ಹೇಳಿ ಹರಿದ ಗೋಣಿಯಲ್ಲಿ ಭತ್ತ ಹೊತ್ತ ಕಥೆಯಾಗುತ್ತದೆ ಜೀವನ. ನೋಡಿ, ಅಷ್ಟೆಲ್ಲ ಟ್ಯಾಕ್ಸು ಕಟ್ಟಾಗಬಾರದೆಂದಿದ್ದರೆ, ಅಲ್ಲೆಲ್ಲೋ ಇನ್ವೆಸ್ಟ್ ಮಾಡಿ, ಇನ್ನೆನ್ನೋ ಸಾಲ ಮಾಡಿ ಅಂತೆಲ್ಲ ತಿಳಿದವರು ಕೂರಿಸಿ ಹೇಳಿ, ಅಯ್ಯೋ, ಇನ್ನೂ ಏನೋ ಮಾಡ್ಕೊಂಡಿಲ್ಲವೇನ್ರೀ ಥೋ ನಿಮ್ಮಾ ಎಂದು ಗಾಬರಿ ಹುಟ್ಟಿಸಿಬಿಡೂತ್ತಾರೆ. ಅದಕ್ಕೆ ತಕ್ಕ ಹಾಗೆ ನೀವು ಜೀವವಿಮೆ ಅದೂ ಇದೂಂತ ಎಲ್ಲಾ ಎಳೆದು ಮೈ ಮೇಲೆ ಹಾಕ್ಕೊಂಡು ನಾಳೆಯಿಂದ ತೆರಿಗೆ ಮುಕ್ತ ಎಂದುಕೊಳ್ಳುತ್ತೀರಿ. ಆದರೆ, ಯಾವ ದ್ರಾವಿಡ ಪ್ರಾಣಾಯಾಮ ಮಾಡಿದರೂ,ಕೊನೆಗೆ ಕಟ್ಟಬೇಕಾದ ಟ್ಯಾಕ್ಸು ಚಿಲ್ಲರೆಯಲ್ಲಿ ವ್ಯತ್ಯಾಸವಾದಂತೆ ಕಾಣುತ್ತದೆಯೇ ಹೊರತು ಬೇರೇನೂ ಆಗದು!

ಆಫೀಸಿನ ಜಂಜಡದಲ್ಲೇ ಇರುವವರಿಗಾದರೂ ಹೆಚ್ಚಿನ ಸಮಸ್ಯೆ ಇಲ್ಲ, ನಿಮ್ಮ ಕೂಡು ಕಳೆ ಗುಣಿಸು ಭಾಗಿಸುಗಳನ್ನ ಅಕೌಂಟ್ಸು ವಿಭಾಗದವರೇ ಹೆಚ್ಚಿನ ಸಲ ಮಾಡಿ, ನೀವು ಬರೀ ಇಷ್ಟೂಂತ ಟ್ಯಾಕ್ಸು ಕಟ್ಟಿದರಾಯ್ತು ಅನ್ನುತ್ತಾರೆ. ನೀವು ಹಿಂದೆ ಮುಂದೆ ನೋಡದೇ ಅವರು ಹೇಳಿದ ಅಮೌಂಟನ್ನ ಸಾವಾಸ ಸಾಕಪ್ಪಾ ಅಂತ ಕಟ್ಟಿಬಿಡುತ್ತೀರಿ. ಆದರೆ ಫ್ರೀಲ್ಯಾನ್ಸರುಗಳಾದರೆ ಮುಗಿದೇ ಹೋಯಿತು ಕತೆ. ನಿಮ್ಮ ತೆರಿಗೆಗೆ ನೀವೇ ಜವಾಬ್ದಾರರು! ಯಾರೋ ಹೇಳಿದ್ದನ್ನ ನಂಬಿಕೊಂಡು ನನ್ನ ಟ್ಯಾಕ್ಸು ನಾನೇ ಕಟ್ಟಿಕೊಳ್ಳುತ್ತೇನೆ ಅಂತ ಹೊರಟೆನಪ್ಪ ಒಂದು ಸಲ. ಆ ಗರ್ವಮೆಂಟು ವೆಬ್ ಸೈಟಲ್ಲಿ ಅಸಂಖ್ಯಾತ ಫಾರ್ಮುಗಳು. ಅದರಲ್ಲಿ ತುಂಬಿಸಬೇಕಾದ ಕೋಟಿ ದಾಖಲೆಗಳು. ಒಂದೇ ಎರಡೇ! ಮೊದಲೇ ಸ್ವತಂತ್ರವಾಗಿ ಕೆಲಸ ಮಾಡುತ್ತಿರುತ್ತೀರಿ. ಮಾಡಿರೋ ಕೆಲಸಕ್ಕೆ ದುಡ್ಡು ಬರೋ ಖಾತ್ರಿಯೇ ಇಲ್ಲದೇ ಹೋದರೂ, ತೆರಿಗೆಯ ಕತ್ತರಿ ಮಾತ್ರಾ ಪಕ್ಕಾ ಲೆಕ್ಕ! ಆ ಟ್ಯಾಕ್ಸು ಈ ಟ್ಯಾಕ್ಸು ಅಂತೆಲ್ಲ ಇಷ್ಟುದ್ದ ಲಿಸ್ಟು ನೋಡಿದರೆ ಸಂಬಳಕ್ಕಿಂತ ಹೆಚ್ಚೇ ತೆರಿಗೆ ಕಟ್ಟಬೇಕು ಎನ್ನುವ ಲೆಕ್ಕ ಸಿಕ್ಕು ಕಂಗಾಲು ನಾನು. ನಾನು ಆರೆಂಟು ಜಾಲತಾಣಗಳನ್ನೆಲ್ಲ ನೋಡಿ ನನ್ನ ಉಳಿಕೆ ಬಗ್ಗೆ, ನಾನು ಮಾಡಬೇಕಾದ ಹೂಡಿಕೆ ಬಗ್ಗೆ ಅರ್ಥ ಮಾಡಿಕೊಳ್ಳಲು ಹೆಣಗಾಡಿದೆ. ಅಲ್ಲಿ ಹೇಳಿದಷ್ಟು ಇನ್ವೆಷ್ಟು ಮಾಡಿ ತೆರಿಗೆ ಉಳಿಸಬೇಕು ಎಂದರೆ, ನನ್ನನ್ನೇ ನಾನು ಹರಿಶ್ಚಂದ್ರನ ತರಹ ಮಾರಿಕೊಳ್ಳಬೇಕಿತ್ತು. ನನ್ನ ಒಟ್ಟೂ ಜೀವನದ ಬಗ್ಗೆ ನನಗೆಯೇ ಮರುಕ ಬಂದು ಹೋಯಿತು. ಈ ತೆರಿಗೆಗಳನ್ನೆಲ್ಲ ಕಟ್ಟಿಕೊಂಡು ಇನ್ನೂ ನಾನು ಬದುಕಿರುವುದೇ ಒಂದು ಭಾಗ್ಯ ಎನ್ನಿಸಿ ಆನಂದವನ್ನು ಹೊಂದಿದೆ.

ಇದೆಲ್ಲ ಆದ ಮೇಲೆ, ನಾನಾಗಿಯೇ ಇನ್ನು ಮೇಲೆ ತೆರಿಗೆ ಕಟ್ಟುವ ಸಹವಾಸಕ್ಕೆ ನೇರವಾಗಿ ಹೋಗಲಾರೆ ಎಂದು ನಿರ್ಧರಿಸಿ, ಲೆಕ್ಕ ಪರಿಶೋಧಕರ ಮೊರೆ ಹೋದೆ. ಆಮೇಲೆ ಜೀವನ ಸ್ವಲ್ಪ ಸಹಜ ಸ್ಥಿತಿಗೆ ಬಂದು ಉಸಿರಾಡುವಂತಾಗಿದ್ದಂತೂ ಹೌದು. ಅಷ್ಟಾದರೂ ಸರ್ವೀಸ್ ಟ್ಯಾಕ್ಸೆಂಬ ಶೂಲವನ್ನ ನಾವೇ ಇರಿದುಕೊಳ್ಳಬೇಕಾದ ಕತೆ ಇರುವುದರಿಂದ ಲೆಕ್ಕದ ಭೂತ ಬಂದು ನನ್ನನ್ನ ತಿವಿಯುತ್ತಲೇ ಇರುತ್ತದೆ. ನೆಟ್ಟಗೆ ಸೇವಾ ತೆರಿಗೆಯನ್ನೇ ಲೆಕ್ಕ ಮಾಡಲು ಬಾರದ ನನಗೆ, ಮತ್ತೆ ಅದರ ತುದಿ ಕೊಸರು ಕೃಷಿ ಕಲ್ಯಾಣ ಸೆಸ್ಸೂ, ಸ್ವಚ್ಚ ಭಾರತ ತೆರಿಗೆ ಅಂತೆಲ್ಲ ನೂರಕ್ಕೆ ಇಪ್ಪತ್ತು ಸೇರಿಸಿ ಹತ್ತು ಕಳೆದು ಮುಕ್ಕಾಲು ಗುಣಿಸಿ, ಉಫ್! ಇಷ್ಟಾಗಿ ಸ್ವಲ್ಪ ಹೆಚ್ಚುಕಮ್ಮಿ ಲೆಕ್ಕವಾದರೆ ಎಲ್ಲ ಅಧ್ವಾನಂ. ಸೇವಾ ತೆರಿಗೆಯ ಜಾಲತಾಣವನ್ನೊಮ್ಮೆ ನೋಡಿ, ನೂರು ನೂರಾಹತ್ತು ಬಗೆಯ ಟ್ಯಾಕ್ಸುಗಳೂ, ಅದಕ್ಕೊಂದು ಕೋಡ್ ನಂಬರೂ, ಅದಕ್ಕೊಂದಿಷ್ಟು ಪರ್ಸಂಟೇಜು ಲೆಕ್ಕಾಚಾರಗಳೂ- ಅಲ್ಲಾ, ಹುಲು ಮಾನವವರಾದ ನಾವು ಇದನ್ನೆಲ್ಲ ಮಾಡಿಯೇ ತೀರಬೇಕೆಂದರೆ ಹೇಗೆ ಸ್ವಾಮಿ? ಆದರೆ ಈ ಸೀಎಗಳಿರುತ್ತಾರಲ್ಲ, ಅವರನ್ನು ನಾನು ದೇವಮಾನವರೆಂದೇ ನಿರ್ಧರಿಸಿದ್ದೇನೆ. ನಾನು ಬೆಳಗ್ಗಿಂದ ಸಂಜೆಯವರೆಗೆ ಲೆಕ್ಕಹಾಕಿಯೂ ಮುಗಿಯದ ಟ್ಯಾಕ್ಸಿನ ಗೋಜಲನ್ನ, ಅಯ್ಯೋ ಅಷ್ಟೇಯಾ ಮಾರಾಯಾ ಎಂದು ನನ್ನ ಸೀಎ ಗೆಳೆಯ ಗಿರಿ ಫಟ್ಟಂತ ಕಣ್ಕಟ್ ಮಾಡಿದ ಹಾಗೆ ಬಗೆಹರಿಸುವುದನ್ನ ನೋಡಿ ಈಗೀಗ ಅವನು ಗೋವರ್ಧನ ಗಿರಿಧಾರಿಯ ಹಾಗೇ ಕಾಣಿಸುತ್ತಾನೆ!

ಯಾರಾದರೂ ಬಂದು ನಿಮ್ಮ ಪರ್ಸು ಕಿತ್ತುಕೊಂಡು ಹೋದರೂ ಬೇಸರವಾಗದೇನೋ. ನಾವೇ ಸರಕಾರಕ್ಕೆ ಕೈ ಎತ್ತಿ ಕೊಡುವ ದುಡ್ಡಿಗೆ ಎಷ್ಟೆಲ್ಲ ಸರ್ಕಸ್ಸು ಮಾಡಬೇಕು ಹೇಳಿ? ಸುಮ್ನೆ ಯಾರಾದ್ರೂ ಬಂದು ನೋಡು ತಮಾ ಇದು ಲೆಕ್ಕ ಅಂತೇಳಿ ಕರೆಂಟು ಬಿಲ್ಲೋ ಕೇಬಲ್ಲು ಬಿಲ್ಲಿನ ತರವೋ ಟ್ಯಾಕ್ಸು ಕಲೆಕ್ಟು ಮಾಡಿದ್ದಿದ್ದರೆ ಭಾರಿ ಒಳ್ಳೇದಾಗುತ್ತಿತ್ತು ಎಂದು ಅನ್ನಿಸಿದ್ದಿದೆ ನಂಗೆ.  ಚಾಚೂ ತಪ್ಪದೇ ಕಟ್ಟುವ ತೆರಿಗೆಯನ್ನ ಮತ್ತೇನಾದರೂ ಕೊಂಚ ತಡ ಮಾಡಿದಿರೋ, ಮತ್ತೆ ಅದರ ಒದ್ದಾಟದ ಪರ್ವವೇ ಬೇರೆ. ಅದು ಹೇಗೋ ಮಾಡಿ ಈ ಎಲ್ಲ ತೆರಿಗೆಯ ಆಘಾತಗಳಿಗೆ ನನ್ನನ್ನ ಹೊಂದಿಸಿಕೊಂಡು ಉಸಿರು ಬಿಡುತ್ತಿದ್ದರೆ, ಈಗ ಹೊಚ್ಚ ಹೊಸ GST  ಬಂದು ಕೂತಿದೆ! ಅಲ್ಲ, ಹೆಂಗ್ ಸ್ವಾಮಿ ತಡ್ಕಳದು ಜೀವ? ಮೊದಲೇ ತೆರಿಗೆ ಬೇನೆಯಿಂದ ಬಳಲುತ್ತಿರುವ ನನ್ನಂತಹ ಬಡಪಾಯಿಗಳು, ಜಾಲತಾಣಗಳಲ್ಲಿ ಓಡಾಡುತ್ತಿರುವ ನೂರಾರು ಬಗೆಯ ಹೊಸ ಲೆಕ್ಕಾಚಾರಗಳಿಂದ ಪಕ್ಕಾ ಹೃದಯಾಘಾತಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳು ಕಾಣಿಸುತ್ತಿವೆ. ತಿಂಗಳೂ ತಿಂಗಳೂ ಕಪ್ಪದ ಲೆಕ್ಕ ಸಲ್ಲಿಸಬೇಕಂತೆ ಅಂದರೆ ಇಲ್ಲ ಇಲ್ಲ ವಾರಕ್ಕೊಮ್ಮೆ ಅದೇನೋ ಫಾರ್ಮು ತುಂಬಿಸಿಟ್ಟುಕೊಳ್ಳಬೇಕಂತೆ ಅಂತ ಒಬ್ಬರಂದರೆ ಮೂರು ತಿಂಗಳಿಗೊಮ್ಮೆ ಸಲ್ಲಿಕೆ ಆದರೆ ಸಾಕಂತೆ ಅಂತ ಮಗದೊಬ್ಬನ ಪ್ರಲಾಪ. ನಾನೋ, ಹೊಸದಾಗಿ ಹಳ್ಳಿಯಿಂದ ಬಂದ ಸಿದ್ದ ಡಿವೈಡರಿನ ಮೇಲೆ ನಿಂತು ಆ ಕಡೆ ಈ ಕಡೆ ಹೋಗುವ ವಾಹನಗಳನ್ನ ನೋಡಿದ ಹಾಗೆ,ಮೂಕ ಪ್ರೇಕ್ಷಕ. ಒಬ್ಬರು ಸರಕಾರದ ವಿರೋಧ, ಮತ್ತೊಬ್ಬರು ಪರ. ನಾವೆಲ್ಲ 28 ಪರ್ಸೆಂಟು ಕಟ್ಬೇಕೂಂತ ಒಂದಿಷ್ಟು ಜನ, ಇಲ್ಲ ಇಲ್ಲ 18 ಸಾಕೂಂತ ಇನ್ನೊಂದಿಷ್ಟು ಮಂದಿ. ಎಲ್ಲ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಿ ಕಲ್ಲೊಗೆವ ಮಹಾಭಟರು. ನಾನೂ ನನ್ನೆರಡು ಜ್ಞಾನಬಿಂದುಗಳನ್ನ ಈ ಜಿ.ಎಸ್.ಟಿ ಯ ಅಗಾಧ ಸಾಗರಕ್ಕೆ ಸೇರಿಸೋಣವೆಂದರೆ, ಏನು ಮಾಡಲಿ, ಭೂಪರುಗಳ ನಡುವಿನ ಬೆಪ್ಪ ನಾನು.

ಆದರೆ, ಇದ್ದಿದ್ದರಲ್ಲಿ ಈ ಸಲ ನನ್ನಂತಹ ದಡ್ಡಶಿಖಾಮಣಿಗಳಿಗೆ ಅರ್ಥವಾಗಲಿ ಅಂತಲೇ ಏನೋ, ಕೇಂದ್ರ ಸರಕಾರ ಜೀಎಸ್ಟಿ ಹೆಸರಲ್ಲಿ ತೆರಿಗೆ ವ್ಯವಹಾರ ಸರಳವಾಗಿ ಕಾಣುವ ಹಾಗಂತೂ ಮಾಡಿದೆ. ಕಟ್ಟುವ ದುಡ್ಡಲ್ಲಿ ವ್ಯತ್ಯಾಸವಾಗುತ್ತದೆಯೋ, ಇಲ್ಲವೋ ತಿಳಿಯದೇ ಹೋದರೂ ಏನು ಮಾಡುತ್ತಿದ್ದೇನೆ ಎನ್ನುವುದಂತೂ ಅರ್ಥವಾಗುವ ಹಾಗೆ ಕಾಣುತ್ತಿದೆ. ನನ್ನ ಸೀಎ ಗೆಳೆಯನಲ್ಲಿ ಕೇಳಿದೆ, ಏನಯ್ಯ ಇದು ಜೀಎಸ್ಟಿ ಈ ಸಲ ಹೆಂಗೆ ಜೀವನ ಅಂತ. ಅವನು ಬಹಳ ಚೆನ್ನಾಗಿ ಹೇಳಿದ, “ಮೊದ್ಲು ನಿಂಗೆ ಹೆಂಗೆ ಹೊಡೀತಿದ್ರೂಂತ ಗೊತಾಗ್ತಾ ಇರ್ಲಿಲ್ಲ, ಏಟು ಎಲ್ಲಿಂದ ಬೀಳ್ತಿದೆ ಅಂತ ಅಂದಾಜಾಗ್ತಾ ಇರ್ಲಿಲ್ಲ, ಇನ್ ಮೇಲೆ ಸರಿಯಾಗಿ ಗೊತ್ತಾಗತ್ತೆ”.

ಎಲ್ಲರಿಗೂ ತೆರಿಗೆ ಬೇನೆಯ ಶುಭಾಶಯಗಳು!

ಗುರುವಾರ, ಏಪ್ರಿಲ್ 13, 2017

ಕಿರುತೆರೆಯ ಕಲ್ಯಾಣೋತ್ಸವ


ಇಂದು ಕಿರುತೆರೆಯ ಧಾರಾವಾಹಿಗಳು ಸಿನಿಮಾ ಜಗತ್ತಿಗೇ ಸ್ಪರ್ಧೆಯನ್ನು ಒಡ್ಡಿರುವುದು ಸುಸ್ಪಷ್ಟಕೆಲ ಸೀರಿಯಲ್ ಗಳು ಜನಪ್ರಿಯತೆಯಲ್ಲಿ ಚಲನಚಿತ್ರಗಳನ್ನೇ ಮೀರಿಸಿರುವುದೂ ಸುಳ್ಳಲ್ಲನಿತ್ಯದ ಕ್ಲೀಷೆಗಳಲ್ಲೇ ಇನ್ನೂ ಸುತ್ತುತ್ತಿರುವ ಆಪಾದನೆ ಇದ್ದರೂ ಕೂಡಅಪಾರ ಜನಸ್ತೋಮ –ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಧಾರಾವಾಹಿಗಳ ವೀಕ್ಷಣೆಯಲ್ಲಿ ತೊಡಗಿರುವುದಂತೂ ಸತ್ಯಚಾನಲ್ ಗಳ ರೇಟಿಂಗ್ ಗಳನ್ನು ಗಮನಿಸಿದಾಗ ಇದಂತೂ ಅರಿವಾಗುತ್ತದೆಕಳೆದೊಂದು ದಶಕದಲ್ಲಿ ಸೀರಿಯಲ್ಲುಗಳ ನಿರ್ಮಾಣದಲ್ಲಿ ಗಣನೀಯ ಏರಿಕೆಯಾಗಿದೆ.ಗುಣಮಟ್ಟದಲ್ಲೂ ಕೂಡ ಬಹಳ ಸುಧಾರಣೆಯಾಗಿದೆನಿತ್ಯ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳ ಪ್ರಸಾರ ಕನ್ನಡದಲ್ಲಾಗುತ್ತಿದೆಸಿನಿಮಾಗಳಂತೆಯೇ ಇಲ್ಲೂ ಅದ್ದೂರಿ ಸನ್ನಿವೇಶಗಳ ಚಿತ್ರೀಕರಣವಾಗುತ್ತಿದೆಅದರಲ್ಲೂ ಮದುವೆಯ ಚಿತ್ರಣವಿದ್ದರಂತೂ ಕೇಳುವುದೇ ಬೇಡಐಷಾರಾಮಿ ಕಲ್ಯಾಣ ಮಹೋತ್ಸವಗಳು ಇಂದು ಸೀರಿಯಲ್ ಗಳಲ್ಲಿ ಹಾಸುಹೊಕ್ಕಾಗಿ ಹೋಗಿವೆ!

ಸೀರಿಯಲ್ ಮದುವೆ-ಸಂಭ್ರಮಕ್ಕೆ ಕೊನೆಯಿಲ್ಲ!
ನೀವು ನೋಡಿರಬಹುದಾದ ಚಲನಚಿತ್ರಗಳಲ್ಲಿ ಬಹುಶಃ ತೊಂಬತ್ತಕ್ಕೂ ಹೆಚ್ಚು ಪ್ರತಿಶತ ಚಿತ್ರಗಳು ಮದುವೆಗಳಿಂದಲೇ ಮುಗಿದುಶುಭಂ ಕಾಣಿಸಿಕೊಳ್ಳುತ್ತವೆಹೀರೋ ಹೀರೋಯಿನ್ನುಗಳು ಏನೇನೋ ಕಷ್ಟಪಟ್ಟು ಕೊಟ್ಟಕೊನೆಗೆ ತಾಳಿ ಕಟ್ಟುವುದರ ಮೂಲಕ ಸಿನಿಮಾ ಅಂತ್ಯವಾಗುತ್ತದೆಆದರೆ ಧಾರಾವಾಹಿ ಜಗತ್ತಿನಲ್ಲಿ ಎಲ್ಲ ಶುರುವಾಗುವುದೇ ಮದುವೆಯಿಂದಸೇರೊದ್ದ ಹೀರೋಯಿನ್ನು ಅತ್ತೆ ಮನೆಗೆ ಬರುತ್ತಲೇ ನಮ್ಮ ಕಥೆ ಆರಂಭಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು ಆದರೆ ಮದುವೆಯಿಲ್ಲದ ಸೀರಿಯಲ್ ಹುಡುಕಲು ಸಾಧ್ಯವಿಲ್ಲ.ಅದೂ ಕಳೆದ ಮೂರು ನಾಲ್ಕು ವರ್ಷಗಳ್ ಈಚೆಗಂತೂ ಅದ್ದೂರಿ ವಿವಾಹವಿಲ್ಲದ ಸೀರಿಯಲ್ಲೇ ಇಲ್ಲ ಎನ್ನಬಹುದೇನೋಧಾರಾವಾಹಿಗಳಲ್ಲಿನ ಮದುವೆಗಳಲ್ಲಿನ ಅಬ್ಬರದ ಸಂಭ್ರಮವನ್ನು ನೋಡದೇ ಇರುವ ವೀಕ್ಷಕರೇ ಇಲ್ಲ ಅನ್ನಿಸುತ್ತದೆಹೀಗಾಗಿಯೇ ಚಳಿಯೇ ಇರಲಿ ಮಳೆಯೇ ಬರಲಿಆಷಾಢವೋ-ಅಧಿಕಮಾಸವೋ ತಿಂಗಳಲ್ಲಿ ಒಂದೆರಡು ಮದುವೆಯಾದರೂ ಕಿರುತೆರೆಯಲ್ಲಿ ಪಕ್ಕಾ!



ಅದ್ದೂರಿತನಕ್ಕೆ ಸರಿಸಾಟಿಯಿಲ್ಲ
ವೀಕ್ಷಕರ ಬಯಕೆಯೋಚಾನಲುಗಳ ನಿರ್ಧಾರವೋಹೆಚ್ಚು ಮಂದಿಯನ್ನ ಧಾರಾವಾಹಿಗಳ ಕಡೆಗೆ ಸೆಳೆಯುವ ಯತ್ನವೋಅದ್ದೂರಿ ಕಲ್ಯಾಣಗಳೀಗ ಟೀವಿಯಲ್ಲಿ ಸಾಮಾನ್ಯವಾಗಿ ಹೋಗಿದೆದೇವಸ್ಥಾನದಲ್ಲಿ ನಾಯಕ ನಾಯಕಿಗೆ ತಾಳಿ ಕಟ್ಟುವ ಕಾಲ ಮುಗಿದಿದೆಸಾಲು ಸಾಲು ರೆಸಾರ್ಟುಗಳೀಗ ಧಾರಾವಾಹಿಗಾಗಿ ಮದುವೆಗಾಗಿಯೇ ಬುಕ್ಕಿಂಗ್ ಆಗುತ್ತಿವೆಮಧ್ಯಮ ವರ್ಗದ ವ್ಯಥೆಯೋಶ್ರೀಮಂತರ ಕಥೆಯೋಮದುವೆಗಳು ಮಾತ್ರ ಸಂಭ್ರಮೋಪೇತವಾಗಿ ನಡೆಯಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂದು ಬಿಟ್ಟಿದೆಎರಡು ಮೂರು ಕುಟುಂಬಗಳ ನಡುವೆ -ಒಂದಲ್ಲ ಎರಡೆರಡು ಮದುವೆನೂರಾರು ಮಂದಿ ಸಹನಟರುಫಳಫಳ ರೇಷ್ಮೆಸೀರೆ ಕೋಟು ಬೂಟುಗಳ ಓಡಾಟಇವೆಲ್ಲ ನೀವು ನಿತ್ಯ ನೋಡುವ ಪ್ರಹಸನದ ಭಾಗವಾಗಿ ಹೋಗಿದೆಝಗಮಗ ಜೀವಕಳೆಯ ಮಂದಿ ತೆರೆಯ ಮೇಲೆ ಓಡಾಡುತ್ತಿದ್ದರೆ ಮನೆಮನೆಗಳ ವೀಕ್ಷಕರ ಮುಖವೂ ಬೆಳಗುತ್ತಿದೆಮದುವೆಯ ಸೀನುಗಳಿದ್ದರೆ ಖಂಡಿತಕ್ಕೂ ಅದಕ್ಕೆ ಹೆಚ್ಚಿನ ಟೀಆರ್ಪಿ ಬರುತ್ತದೆ ಎನ್ನುವುದು ಚಾನಲ್ಲುಗಳ ಒಳಗೆ ಕೂತ ಎಲ್ಲರಿಗೂ ಗೊತ್ತಿರುವ ಸತ್ಯ!

ಶಾಸ್ತ್ರ ಸಂಪ್ರದಾಯಗಳಿಗೆ ಮರು ಜೀವ!
ನಿಮ್ಮ ಮನೆಗಳ ಮದುವೆಗಳಲ್ಲಿ ನೀವು ಅದೆಷ್ಟು ಶಾಸ್ತ್ರಗಳನ್ನು ಪಾಲಿಸುತ್ತೀರೋ ಇಲ್ಲವೋನಾವು ಸೀರಿಯಲ್ ಮಂದಿ ಮಾತ್ರ ಇವುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತೇವೆಬಳೆಪೂಜೆಯಿಂದ ಮೊದಲುಗೊಂಡು ಸಕಲೆಂಟು ಶಾಸ್ತ್ರಗಳನ್ನೂ ಹುಡುಕಿ ಅದನ್ನ ತೆರೆಯಮೇಲೆ ತರುವುದರ ಬಗ್ಗೆ ಗಮನ ಹರಿಸುವುದರಲ್ಲಿ ಯಾವ ಅನುಮಾನವೂ ಇಲ್ಲಗಂಡಿಗೂ ಹೆಣ್ಣಿಗೂ ಮದುವೆಗೆ ಮೊದಲುನಂತರಅದೇನೇ ಸಂಪ್ರದಾಯಗಳಿರಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನೆರವೇರಿಸುವುದರಲ್ಲಿ ಸಿದ್ಧಹಸ್ತರುಪುರೋಹಿತರುಗಳಿಗೇ ಶಾಸ್ತ್ರ ಮರೆತರೂನಿರ್ದೇಶಕನಿಗೆ ಮರೆಯಲಾರದುನಾನೇ ಧಾರಾವಾಹಿಯೊಂದನ್ನು ಬರೆಯುವ ಸಂದರ್ಭದಲ್ಲಿ ಒಂದಿಷ್ಟು ಗ್ರಂಥಗಳುಗೂಗಲ್ಲು ಎಲ್ಲದರ ಸಹಾಯ ಪಡೆದು ಒಂದಾದ ಮೇಲೊಂದುಮದ್ವೆಗಳಲ್ಲಿ ಯಾವ ಯಾವ ಸಂಪ್ರದಾಯಗಳಿವೆ ಎಂದು ಅಭ್ಯಾಸ ಮಾಡಿದ್ದೆಹಾಂಇನ್ನೊಂದು ಮುಖ್ಯ ವಿಷಯನಾವು ವಸುದೈವ ಕುಟುಂಬಕಂ ಎಂಬ ಸೂಕ್ತಿಯಲ್ಲಿ ವಿಶ್ವಾಸ ಹೊಂದಿದವರು.ಹೀಗಾಗಿ ಉತ್ತರ ಭಾರತದ ಯಾವುದೋ ಒಂದು ಶಾಸ್ತ್ರ ಮಲೆನಾಡಿನ ಮದುವೆಯೊಳಗೆ ಸಣ್ಣದಾಗಿ ತೂರಿಕೊಳ್ಳಬಹುದುಶೈವರ ಮದುವೆಗೆ ದೃಶ್ಯ ಮಾಧ್ಯಮಕ್ಕೆ ಸುಂದರವಾಗಿ ಕಾಣಬಹುದಾದ ಮಾಧ್ವರದೊಂದು ಆಚರಣೆ ಸೇರಿಕೊಂಡಿರಬಹುದುನಮ್ಮನ್ನ ಮನ್ನಿಸಿರಿ!

ಹಾಡು ನೃತ್ಯಗಳ ಮಹಾನಂದ
ರೆಸಾರ್ಟ್ ಮದುವೆ ಎಂದಾದ ಮೇಲೆ ಮುಗಿದೇ ಹೋಯಿತುಆ ಧಾರಾವಾಹಿಯಲ್ಲಿನ ಮದುವೆಗೆ ಸೆಲೆಬ್ರಿಟಿ ಬರೋದು ಖಂಡಿತಅವರು ಬಂದ ಮೇಲೆ ನಾಲ್ಕು ಹೆಜ್ಜೆ ಡ್ಯಾನ್ಸು ಖಾಯಂಸೀರಿಯಲ್ಲಿ ನಾಯಕನಿಗೋ ನಾಯಕಿಗೋ ನಮ್ಮ ಸಿನಿಮಾ ಹೀರೋ ಫ್ರೆಂಡುಅವನ ಜೊತೆಗೆ ಬರುವ ದಂಡು ಒಂದು ಹಾಡೋನೃತ್ಯಕ್ಕೋ ಸೇರಿಕೊಳ್ಳದಿದ್ದರೆ ಯಾವ ಮಜವೂ ಇರಲಾರದುಲಾಜಿಕ್ಕಿನ ಕಥೆ ಬಿಡಿಇದು ಮ್ಯಾಜಿಕ್ಕಿನ ವಿಷಯಕನ್ನಡ ಧಾರಾವಾಹಿಗಳ ಮದುವೆಗಳಲ್ಲಿ ಹೆಚ್ಚಿನೆಲ್ಲ ಸೆಲೆಬ್ರಿಟಿ ಬಂದು ಹೆಜ್ಜೆ ಹಾಕಿ ಹೋಗಿದ್ದಾರೆಹಿಂದಿಯಲ್ಲಿ ಶಾರುಕ್ ಸಲ್ಮಾನ್ ಹೃತಿಕ್ ಕೂಡ ಇಂಥ ವಿವಾಹಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆಸೀರಿಯಲ್ ಮದುವೆಗಳ ಜನಪ್ರಿಯತೆ ಯಾವ ಮಟ್ಟಕ್ಕಿರಬಹುದು ಯೋಚಿಸಿ ನೋಡಿತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಿಕೊಳ್ಳಲು ಜನಪ್ರಿಯ ಧಾರಾವಾಹಿಯೊಂದರ ಮದುವೆಯ ವೇದಿಕೆಗಿಂತ ಉತ್ತಮ ಜಾಗ ಯಾವುದಿದೆ ಹೇಳಿ?ಹೀಗಾಗಿಯೇ ಒಂದಿಡೀ ದಿನ ಅಭ್ಯಾಸ ಮಾಡಿ ನಂತರ ಶ್ರದ್ಧಾ ಭಕ್ತಿಗಳಿಂದ ನಟನಟಿಯರು ಈ ಮದುವೆಯ ನೃತ್ಯ ವಿಶೇಷಗಳಲ್ಲಿ ಪಾಲ್ಗೊಳ್ಳುತ್ತಾರೆಇದು ಮನೆಯಲ್ಲೇ ಕೂತು ಮದುವೆ ನೋಡುವ ಮಂದಿಗೆ ಮೃಷ್ಟಾನ್ನ ಭೋಜನವೇ ಸರಿ.

ತೆರೆಯ ಹಿಂದಿನ ಶ್ರಮ
ಆದರೆ ಇಷ್ಟೆಲ್ಲವನ್ನ ಕಟ್ಟಿಕೊಡುವುದಕ್ಕೆ ತಂತ್ರಜ್ಞರ ಬಳಗ ಹಗಲು ರಾತ್ರಿಯೆನ್ನದೆ ಶ್ರಮಿಸಬೇಕುಎರಡು ಮೂರು ದಿನಗಳೊಳಾಗಿ ಹತ್ತೈವತ್ತು ದೃಶ್ಯಗಳನ್ನ ಶೂಟ್ ಮಾಡಬೇಕುನಾನೇ ಇಂತಹ ೨-೩ ಮದುವೆಗಳ ಚಿತ್ರೀಕರಣದಲ್ಲಿ ಪಾಲ್ಗೊಂಡ ಅನುಭವ ಇರುವುದರಿಂದ ಹೇಳುತ್ತಿದ್ದೇನೆಖಂಡಿತಕ್ಕೂ ಇದು ಸುಲಭವಲ್ಲದಪ್ಪನೆಯ ರೇಷ್ಮೆ ಸೀರೆಯಲ್ಲಿ ಪ್ರಖರ ಬೆಳಕಿನಲ್ಲಿ ಬೆಳಗ್ಗಿಂದ ಸಂಜೆಯವರೆಗೆ ನಗುಮೊಗ ಹೊತ್ತು ಕೂತ ನಾಯಕಿಯ ಬೆವರ ಸಂಕಟ ತೆರೆಯ ಮೇಲೆ ಕಾಣುವುದಿಲ್ಲಅಲ್ಲಲ್ಲೇ ಸೀನು ಬರೆವ ಸಂಭಾಷಣೆಕಾರಸೊಂಟ ಬಿದ್ದು ಹೋಗುವಂತೆ ಓಡಾಡುವ ಸೆಟ್ ಹುಡುಗರುಕಲಾ ನಿರ್ದೇಶಕಛಾಯಾಗ್ರಾಹಕ ತೆರೆಯ ಮೇಲೆ ಕಾಣಿಸುವುದೇ ಇಲ್ಲಇವರೆಲ್ಲರ ತೆರೆಮರೆಯ ಒದ್ದಾಟದಿಂದಲೇ ತೆರೆ ಮೇಲೆ ಸೊಗಸು ಹೆಚ್ಚುತ್ತಿರುತ್ತದೆ.

ಇನ್ನೆಷ್ಟು ದಿನ ಹೀಗೆ?
ಆದರೀಗ ವೀಕ್ಷಕ ವರ್ಗಕ್ಕೂ ಏಕತಾನತೆ ಕಾಡಲಾರಂಭಿಸಿದೆಒಂದೇ ಬಗೆಯ ಮದುವೆಗಳುಅದದೇ ಹಾಡು ನೃತ್ಯಗಳು ಬೋರಾಗಲಾರಂಭಿಸಿದೆನೈಜತೆಯಿಂದ ದೂರವೇನೋ ಅನ್ನಿಸುವ ದೃಶ್ಯಾವಳಿಗಳುಅವವೇ ಮಸಲತ್ತುಗಳು,ಮದುವೆ ನಿಲ್ಲಿಸಲು ಯಾವುದೋ ಪಾತ್ರ ಮಾಡುವ ಕಸರತ್ತುಗಳು ಆಕಳಿಕೆ ತರಿಸುತ್ತಿವೆಅದ್ದೂರಿತನವನ್ನು ಮೀರಿದ ಕಂಟೆಂಟ್ ಅನ್ನು ಜನರೀಗ ಬಯಸುತ್ತಿದ್ದಾರೆಯಾವುದೋ ಒಂದು ಧಾರಾವಾಹಿ ಈ ಸಿದ್ಧಸೂತ್ರವನ್ನು ಬದಿಗೊತ್ತಿ ಹೊಸ ದಾರಿಯನ್ನು ಹಿಡಿಯಬಹುದುಅಲ್ಲಿಯವರೆಗೆ ಸಶೇಷಹಾಂಹೇಳೋದು ಮರೆತೆಟೀವಿ ಮದುವೆಯೊಂದಕ್ಕೆ ಇತ್ತೀಚೆಗೆ ಪತ್ರಿಕೆಯಲ್ಲಿ ಅಕ್ಷತೆಯ ಸ್ಯಾಷೆ ಹಂಚಿದ್ದರು ಮೊನ್ನೆ ಮೊನ್ನೆ ತಾನೇನಂಗಂತೂ ಆ ಐಡಿಯಾ ಇಷ್ಟವಾಯಿತುಯಾರಿಗೆ ಗೊತ್ತುನಾಳೆ ನಿಮ್ಮ ಮನೆಗೇ ನುಗ್ಗಿ ಮದುವೆ ಶೂಟಿಂಗ್ ನಡೆದರೂ ಅಶ್ಚರ್ಯವಿಲ್ಲಕಾದು ನೋಡೋಣ