ಶನಿವಾರ, ಅಕ್ಟೋಬರ್ 25, 2008

ದೀಪಗಳ ಹಬ್ಬಕ್ಕೆ ಹಾರಯಿಕೆ..




















ನನ್ನ ಪ್ರೀತಿಯ ಕವಿ ಕೆ.ಎಸ್.ನರಸಿಂಹಸ್ವಾಮಿವರ ಸಾಲುಗಳಿವು...
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ನಾನಂತೂ ಒಂದು ವಾರ ರಜಾ ಹಾಕಿ ಮನೆಗೆ ಹೊರಟಿದ್ದೇನೆ:)
ಈ ಚಂದದ ಶುಭಾಶಯ ಪತ್ರ ಕಳ್ಸಿದ್ದು ಅಮರ.

ಬುಧವಾರ, ಅಕ್ಟೋಬರ್ 15, 2008

ಬಾದರಾಯಣ ಸಂಬಂಧ

ನಮ್ಮ ಪುರಾಣಗಳ ಮೂಲಕ ಮತ್ತು ಜಾನಪದ ಕಥೆಗಳ ಮೂಲಕ, ಅದೆಷ್ಟೋ ನುಡಿಗಟ್ಟುಗಳು ನಮ್ಮ ದೈನಂದಿನ ವ್ಯವಹಾರದಲ್ಲಿ ಪ್ರಚಲಿತವಾಗಿ ಹೋಗಿದೆ. ಲಕ್ಷ್ಮಣ ರೇಖೆ, ಸುಗ್ರೀವಾಜ್ಞೆ, ರಾಮಬಾಣ, ಭೀಷ್ಮ ಪ್ರತಿಜ್ಞೆ, ಹೀಗೆ ವ್ಯಕ್ತಿವಿಶೇಷಣ ಹೊತ್ತ ಅದೆಷ್ಟೋ ನುಡಿಗಟ್ಟುಗಳು ನಮ್ಮ ನಡುವೆ ಹಾಸುಹೊಕ್ಕಾಗಿವೆ. ಮಹಾಭಾರತ, ರಾಮಾಯಣಗಳಂತಹ ಮಹಾನ್ ಗ್ರಂಥಗಳಿಂದ ಆಯ್ದುಕೊಂಡ ಮೇಲಿನ ನುಡಿಗಟ್ಟುಗಳಿಗೆ ಸಂಬಂಧಿಸಿದ ಕಥೆಯೂ ಹೆಚ್ಚಿನವರಿಗೆ ತಿಳಿದಿರುತ್ತದೆ. ಕಥೆಗಳನ್ನು ಓದದಿದ್ದರೂ, ಟಿವೀ ಸೀರಿಯಲ್ ಗಳ ಮೂಲಕವಾದರೂ ಇವುಗಳ ಪರಿಚಯ ಆಗೇ ಆಗುತ್ತದೆ. ಆದರೆ ಇನ್ನು ಕೆಲ ಶಬ್ದ ಪುಂಜಗಳು , ಯಾವುದೋ ಜಾನಪದ ಮೂಲಗಳಿಂದ ಬಂದವು, ತಮ್ಮ ಹಿಂದಿನ ಕಥೆಯನ್ನು ಕಳೆದುಕೊಂಡು, ಕೇವಲ ನುಡಿಗಟ್ಟಿಗಷ್ಟೇ ಸೀಮಿತವಾಗಿ ಬಿಡುತ್ತವೆ.

ಆಷ್ಟಕ್ಕೂ ಹಳೆಯ ಕಥೆಗಳನ್ನು ಹೇಳಲು ಇಂದು ಅಜ್ಜ ಅಜ್ಜಿಯರಿಲ್ಲ, ಕೇಳಲು ಮೊಮ್ಮಕ್ಕಳೂ ಇಲ್ಲ.ಹೀಗಾಗಿ, ಅದೆಷ್ಟೋ ಚಂದ ಕಥೆಗಳೆಲ್ಲ ಚಂದಿರನೊಳಗೆ ಸೇರಿ ಹೋಗಿವೆ, ಮರಳಿ ಬಾರದ ಹಾಗೆ. ನಾವು ನಮ್ಮ ಬ್ಯುಸಿ ಜೀವನ ಎಂಬ ವಿಷಯಕ್ಕೇ ಎಲ್ಲ ಆರೋಪಗಳನ್ನೂ ಹೊರಿಸಿ, ನಿರಾಳವಾಗಿದ್ದೇವೆ. ಇರಲಿ, ಎಲ್ಲರೂ ಹೇಳಿದ್ದನ್ನೇ ಮತ್ತೆ ಚರ್ವಿತಚರ್ವಣ ಮಾಡುವುದು ಬೇಡ. ಕಥೆ ಕೇಳಿ.

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ, ಒಂದು ಮನೆ ಇತ್ತು. ಆ ಮನೆಯಲ್ಲಿ ಹೊಸದಾಗಿ ಮದುವೆ ಆದ ಗಂಡ ಹೆಂಡತಿ ಇದ್ದರು. ಇಬ್ಬರೂ ಏನೋ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಅಭಿಪ್ರಾಯ ಭೇದಗಳು, ಇದ್ದೇ ಇರತ್ತೆ ನೋಡಿ.. ಎರಡು ಮೂರು ದಿನಗಳಾದರೂ ಇಬ್ಬರೂ ಮಾತಾಡಿಕೊಂಡಿರಲಿಲ್ಲ. ಹೀಗಿರುವಾಗ ಒಂದು ದಿನ, ಇಳಿ ಬೆಳಗಿನ ಹೊತ್ತು, ಮನೆಯೆದುರು ಎತ್ತಿನ ಗಾಡಿಯೊಂದು ಬಂದು ನಿಂತಿತು.

ಹೆಂಡತಿ ಹೊರಗೇನೋ ಕೆಲಸ ಮಾಡುತ್ತಿದ್ದವಳು ಹೋಗಿ ನೋಡಿದರೆ, ಗಾಡಿಯೊಳಗಿಂದ ಒಬ್ಬ ಇಳಿದು ಮನೆಯೆಡೆಗೇ ಬರುತ್ತಿದ್ದ. ಅವಳಿಗೆ ಅವನ ಪರಿಚಯ ಇರಲಿಲ್ಲ. ಗಂಡನ ಕಡೆಯ ಸಂಬಂಧಿ ಯಾರೋ ಇರಬೇಕು ಅಂದುಕೊಂಡು, "ಬನ್ನಿ , ಕುಳಿತುಕೊಳ್ಳಿ, ಬಾಯಾರಿಕೆಗೇನು ಬೇಕು" ಅಂತೆಲ್ಲಾ ಉಪಚಾರ ಮಾಡಿದಳು.

ಗಂಡ ಹೊರಗೆಲ್ಲೋ ಹೋದವನು ಬಂದು ನೋಡಿದ. ಹೆಂಡತಿ ಚಾವಡಿಯಲ್ಲಿ ಕೂತಿರುವ ಯಾರಿಗೋ ನೀರು, ಬೆಲ್ಲ ಕೊಡುತ್ತಿದ್ದಾಳೆ, ಚೆಂದಕೆ ಮಾತಾಡುತ್ತಿದ್ದಾಳೆ. ಹೋ, ಯಾರೋ ಇವಳ ಕಡೆಯ ನೆಂಟನಿರಬೇಕು ಅಂದುಕೊಂಡ. ಯಾರು ಅಂತ ಕೇಳಿದರೆ ಮರ್ಯಾದೆ ಪ್ರಶ್ನೆ. ಮದುವೆಲೆಲ್ಲಾದರೂ ನೋಡಿದ್ದೇನೋ ಅಂತ ನೆನಪು ಮಾಡಿಕೊಂಡ. ಊಹೂಂ, ಆಗುತ್ತಿಲ್ಲ. ಎಲ್ಲೆಲ್ಲಿಂದಲೋ ಯಾರ್ಯಾರೋ ಬಂದಿದ್ದರು, ನೆನೆಪೆಂತು ಉಳಿದೀತು. ಮತ್ತೆ ಹೆಂಡತಿಯ ಬಳಿ ಕೇಳಿದರಾಯಿತು ಅಂದುಕೊಂಡು ಸುಮ್ಮನಾದ.

ಹೆಂಡತಿಯ ಬಳಿ ಗಲಾಟೆ ಮಾಡಿಕೊಂಡಿದ್ದರೇನಂತೆ, ಬಂದ ಅತಿಥಿಯನ್ನು ಮಾತನಾಡಿಸಬೇಕಾದ್ದು ಮನೆ ಯಜಮಾನನ ಧರ್ಮ. ಹಾಗಾಗಿ ಅದೂ ಇದೂ ಉಭಯ ಕುಶಲೋಪರಿ ಮಾತುಗಳ ವಿನಿಮಯವಾದವು. ಅಷ್ಟು ಹೊತ್ತಿಗೆ ಹೆಂಡತಿ ಅಡುಗೆ ಸಿದ್ಧಪಡಿಸಿಯೂ ಆಯಿತು. ಭೋಜನಕ್ಕೆ ಬಂದ ಅತಿಥಿಯನ್ನು ಕರೆದ ಯಜಮಾನ. ಆತ ಇವನ ಬಳಿಯೇ ಕೇಳಿಕೊಂಡು, ಕೊಟ್ಟಿಗೆ ಗೆ ಹೋಗಿ ಹುಲ್ಲು ಎತ್ತಿಕೊಂಡು ಬಂದು ತನ್ನ ಎತ್ತುಗಳಿಗೆ ಅವಷ್ಟನ್ನೂ ಹಾಕಿ, ಕೈಕಾಲು ತೊಳೆದುಕೊಂಡು ಒಳಗೆ ಬಂದ.

ಹೆಂಡತಿ , ಬಂದಿರುವುದು ಗಂಡನ ಕಡೆಯ ಸಂಬಂಧಿ, ಮದುವೆಯಾದ ಮೇಲೆ ಮನೆಗೆ ಬಂದ ಮೊದಲ ಅತಿಥಿ ಅನ್ನುವ ಕಾರಣಕ್ಕೆ ಜೋರಾಗೇ ಅಡುಗೆ ಮಾಡಿದ್ದಳು. ಎಲೆ ತುಂಬ ಬಗೆ ಬಗೆಯ ಖಾದ್ಯಗಳು. ಎರಡು ಮೂರು ದಿನಗಳಿಂದ ಜಗಳದ ಕಾರಣಕ್ಕಾಗಿ ಸಪ್ಪೆ ಅಡುಗೆ ಉಂಡಿದ್ದ ಗಂಡನಿಗೆ ಭಲೇ ಖುಷಿಯಾಯಿತು. ಇವಳ ನೆಂಟ ಬಂದ ಕಾರಣಕ್ಕಾಗಿಯಾದರೂ ತನಗೆ ಒಳ್ಳೇ ಊಟ ಮಾಡುವ ಭಾಗ್ಯ ಲಭಿಸಿತಲ್ಲ ಅಂತ ಮನಸ್ಸಲೇ ಬಂದ ಪುಣ್ಯಾತ್ಮನಿಗೆ ನಮಸ್ಕರಿಸಿದ.

ಊಟ ಮಾಡುವಾಗ ಮನೆ ಯಜಮಾನನಿಗೆ ಏಕೋ ಅನುಮಾನ ಬರಲಾರಂಭಿಸಿತು. ಹೆಂಡತಿ ಆತನ ಬಳಿ ಹೆಚ್ಚೇನೂ ಮಾತಾಡುತ್ತಿಲ್ಲ, ಬರೀ ಬೇಕು, ಸಾಕುಗಳಷ್ಟೇ. ಊರ ಕಡೆ ಸುದ್ದಿ ಮಾತಾಡುತ್ತಿಲ್ಲ. ಅಪ್ಪ ಅಮ್ಮನ ಬಗ್ಗೆ ಮಾತಿಲ್ಲ.. ಹೆಂಡತಿಗೂ ಹಾಗೆ ಅನ್ನಿಸತೊಡಗಿತು, ಇದೇನು ತನ್ನ ಗಂಡನ ಬಳಿ ಈ ವ್ಯಕ್ತಿ ಏನೂ ಮಾತೇ ಆಡುತ್ತಿಲ್ಲವಲ್ಲ, ಇವರೂ ಏನೂ ಕೇಳುತ್ತಿಲ್ಲ ಅಂತ. ಅತಿಥಿ ಉಂಡು ಕೈತೊಳೆದು ಚಾವಡಿಗೆ ತೆರಳಿದ. ಹೆಂಡತಿ ಗಂಡನ ಕೈಗೆ ನೀರು ಹನಿಸುವಾಗ ಕೇಳಿಯೇ ಬಿಟ್ಟಳು, ಯಾರವರು ಅಂತ. ಗಂಡನಿಗೆ ಸಂಶಯ ನಿವಾರಣೆಯಾಗಿ ಹೋತು, ಈತ ನಮ್ಮಿಬ್ಬರ ಸಂಬಂಧಿಕನೂ ಅಲ್ಲ ಗೊತ್ತಾಯಿತು.

ಆದರೆ ಸೀದಾ ವಿಚಾರಣೆ ಮಾಡುವುದು ತಪ್ಪಾಗುತ್ತದಲ್ಲ?, ಬಂದ ಅತಿಥಿ ಹೊರಗೆ ಜಗಲಿಯಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಲವಂಗ ಇತ್ಯಾದಿಗಳನ್ನು ಹಾಕಿದ ತಾಂಬೂಲ ಮೆಲ್ಲುತ್ತ ಕುಳಿತಿದ್ದ. ಮನೆಯಜಮಾನ ಮೆಲ್ಲನೆ ಆತನ ಬಳಿ ಬಂದು ಕುಳಿತು, ತಾನೂ ಕೈಗೊಂದು ವೀಳ್ಯದೆಲೆ ಎತ್ತಿಕೊಂಡು, ಮೆಲ್ಲನೆ ಆ ಎಲೆಯ ಹಿಂದಿನ ನಾರನ್ನು ಉಗುರಿಂದ ಎತ್ತುತ್ತ, ಹೇಗೆ ಕೇಳುವುದಪ್ಪಾ ಅನ್ನುವ ತಳಮಳದೊಳಗೇ "ಸ್ವಾಮೀ, ನಿಮಗೆ ಯಾವೂರಾಯಿತು, ನಮಗೂ ನಿಮಗೂ ಹೇಗೆ ಸಂಬಂಧವಾಯಿತು ಅನ್ನುವುದು ತಿಳಿಯಲಿಲ್ಲ, ಬೇಜಾರು ಮಾಡಿಕೊಳ್ಳಬೇಡಿ, ಮನ್ನಿಸಿ" ಅಂದ.

ಬಂದ ಆ ನೆಂಟ, "ಒಂದು ನಿಮಿಷ" ಅಂದವನೇ, ಮೆಲ್ಲನೆ ತನ್ನ ಧೋತ್ರದಂಚು ಹಿಡಿದು, ಮೆಟ್ಟಿಲಿಳಿದು, ಬಾಯಿ ತುಂಬ ತುಂಬಿದ್ದ ತಾಂಬೂಲದ ರಸವನ್ನು ಬಾಳೇ ಗಿಡದ ಬಳಿ ಉಗಿದು ಬಂದು, ನಮ್ಮದೂ ನಿಮ್ಮ ಸಂಬಂಧ ಹೀಗಿದೆ ಅಂತ ಈ ಮಾತು ಹೇಳಿದ.

ಅಸ್ಮಾಕಂ ಬದರೀ ಚಕ್ರಂ,ಯುಷ್ಮಾಕಂ ಬದರೀ ತರು:
ಬಾದರಾಯಣ ಸಂಬಂಧಾಧ್ಯೂಯಂ ಯೂಯಂ ವಯಂ ವಯಂ

ಹಾಗಂದರೇನೆಂದ್ರೆ , ನನ್ನ ಎತ್ತಿನ ಗಾಡಿಯ ಚಕ್ರ ಬದರೀ ಮರದಿಂದ ಮಾಡಲ್ಪಟ್ಟಿದ್ದು, ನಿಮ್ಮ ಮನೆ ಮುಂದೂ ಒಂದು ಬದರೀ ಮರವಿದೆ! ಹಾಗಾಗಿಯೇ ಬಾದರಾಯಣ ಸಂಬಂಧದಿಂದ ನೀವು ನೀವೇ ಮತ್ತು ನಾನು ನಾನೇ ಅಂತ!

ಆತ ಎಲ್ಲಿಗೋ ಹೊರಟಿದ್ದ ಯಾತ್ರಿ.ದಾರಿಯಲ್ಲೆಲ್ಲಾದರೂ ಆಶ್ರಯ ಬೇಕಿತ್ತು, ಸುಮ್ಮನೇ ಹೋಗುತ್ತಿದ್ದವನಿಗೆ ಬದರೀ ಮರ, ಮತ್ತು ಅದರ ಪಕ್ಕಕ್ಕಿದ್ದ ಮನೆ ಕಂಡಿತು. ಒಂದು ಸಂಬಂಧವೂ ಆದಂತಾಯಿತು. ಮನೆಯ ಗಂಡ ಹೆಂಡಿರ ಗಲಾಟೆ, ಈತನಿಗೆ ಲಾಭವಾಗೇ ಪರಿಣಮಿಸಿತು.

ಆವತ್ತಿನಿಂದ ಎಲ್ಲೆಂದೆಲ್ಲಿಗೋ ಸಂಬಂಧ ಕಲ್ಪಿಸಲು ಯಾರಾದರೂ ಯತ್ನಿಸಿದರೆ ಬಾದರಾಯಣ ಸಂಬಂಧ ಅನ್ನುವ ನುಡಿಗಟ್ಟೂ ಹುಟ್ಟಿಕೊಂಡಿತು.

ದಟ್ಸ್ ಕನ್ನಡದ ಕಾಡು ಹರಟೆಗೆ ಬರೆದದ್ದು.

ಬುಧವಾರ, ಅಕ್ಟೋಬರ್ 08, 2008

ಹೀಂಗೇ ಸುಮ್ನೆ..

ಮೊನ್ನೆ ಮೊನ್ನೆ ಸುರಪುರದ ಮಡೋಸ್ ಟೇಲರ್ ರ ೨೦೦ ನೇ ಜನ್ಮದಿನ ಆಚರಿಸಲಾಯಿತು. ಕಲೆಕ್ಟರ್ ಆಗಿದ್ದ ಈತ ಹಲವು ಸುಧಾರಣಾ ಕಾರ್ಯಕ್ರಮಗಳಿಂದ ಜನಮನ ಗೆದ್ದಿದ್ದ. ಮೇಲಿನ ಕೆಂಡಸಂಪಿಗೆ ಲಿಂಕ್ ನಲ್ಲಿ ಟೇಲರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ, ನೋಡಿ. ಗುಲ್ಬರ್ಗದಇನ್ನೂರನೇ ಜನ್ಮದಿನದ ನೆನಪಿಗೆ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಾದ ರೇವೂನಾಯಕ್ ಬೆಳಮಗಿಯವರು, ಈ ಸಮಾರಂಭದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಏನ್ ಅದ್ಭುತ ಭಾಷಣ ಮಾಡಿದರು ಅಂತೀರಿ !

"ನಮ್ಮ ಜೀವನದಲ್ಲಿ ಟೈಲರುಗಳ ಪಾತ್ರ ಮುಖ್ಯಾ, ನಮ್ಮ ಮಾನ ಉಳ್ಸೋದಿಕ್ಕ ಅವರಿಲ್ದಿದ್ರೆ ಆಗಲ್ಲ,ದರ್ಜಿಗಳನ್ನ ನೆನ್ಪಿಸ್ಕೊಳ್ಳೋ ಅಂತಾ ಪ್ರೋಗ್ರಾಮು ಮಾಡ್ತಿರೋದು ನಿಜಕ್ಕೂ ಒಳ್ಳೇದು.." ಅಂತೆಲ್ಲಾ ಮಾತಾಡದ್ರು. ಜನ ಬಿದ್ದು ಬಿದ್ದು ನಗ್ತಿದ್ರೂ ಸಾಹೇಬ್ರಿಗೆ ಏನೂ ಗೊತ್ತೇ ಆಗ್ಲಿಲ್ಲ!

ಸಾಹೇಬರ ಪಿ.ಎ ಕೆಲಸ ಕಳೆದುಕೊಂಡ ಸುದ್ದಿಯೇನೂ ಬಂದಿಲ್ಲ.

************

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾತನಾಡುತ್ತ ಹೇಳಿದ್ದು-

"ಕಾಡುಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧ ಇದೆ. ಮನುಷ್ಯ ಕಾಡು ಇಲ್ಲದೇ ಬದುಕಲಾರ, ಕಾಡು ಕೂಡ ಮನುಷ್ಯ ಇಲ್ಲದೇ ಇರಲಾರದು, ಎರಡೂ ಇಂಟರ್ ಲಿಂಕ್ಡು" ಅಂತ.

ಇಂಟರ್ವ್ಯೂ ಮಾಡುತ್ತಿದ್ದವರು ತಲೆ ಚಚ್ಚಿಕೊಳ್ಳಲಿಲ್ಲ ಅಂತ ಸುದ್ದಿ.



ಗುರುವಾರ, ಅಕ್ಟೋಬರ್ 02, 2008

ಸಹಾಯ ಮಾಡಿ!!

ಮೂರು ನಾಲ್ಕು ದಿನದಿಂದ ಆರೋಗ್ಯ ಸರಿಯಿಲ್ಲ. ಜ್ವರ ಮತ್ತು ಜೋರು ನೆಗಡಿ. ಮನೆಯಿಂದ ಅಮ್ಮ ಫೋನು ಮಾಡಿದವಳು, ನನ್ನ ಧ್ವನಿಯಿಂದಲೇ ಕಂಡು ಹಿಡಿದುಬಿಟ್ಲು, ಜ್ವರ, ತಲೆನೋವು ಮತ್ತು ನೆಗಡಿ ಅಂತ. ಅಲ್ಲಿಂದ ಆರಂಭ ಮನೆಮದ್ದುಗಳ ಸಲಹೆಗಳು.

ಅಮ್ಮ: ಒಂದು ಕಾಲು ಲೋಟ ಕೊಬರಿಎಣ್ಣೆ ಕಾಸಿ, ಅದ್ಕೆ ಮೆಂತೆ ಮತ್ತೆ ಜೀರಿಗೆ ಹಾಕಿ, ಬಂಗಾರದ ಬಣ್ಣಕ್ಕೆ ಬರೋವರೆಗೆ ಫ್ರೈ ಮಾಡಿ, ಆ ಎಣ್ಣೆ ತಣಿಸಿ, ಅದ್ನ ತಲೆಗ್ ಹಾಕಿ, ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದ್ರೆ, ಕಫ ಕಡ್ಮೆ ಆಗತ್ತೆ.

ತಂಗಿ ನಯನಾ: ಬಿಸಿನೀರಿಗೆ ವಿಕ್ಸ್ ಹಾಕಿ ಇನ್ ಹೇಲ್ ಮಾಡೋದು ವೇಸ್ಟ್. ಅದರ ಬದಲು, ಉಪ್ಪು ಹಾಕಿ ಇನ್ಹೇಲ್ ಮಾಡು, ನೆಗಡಿ ಕಡ್ಮೆ ಆಗತ್ತೆ. ಜೊತೆಗೆ, ಬೆಳ್ಳುಳ್ಳು ಒಂದೆರಡು ಎಸಳು ಜಜ್ಜಿ, ಹತ್ತಿಗೆ ಅದರ ರಸ ಬಿಟ್ಕೊಂಡು, ಎರಡೂ ಕಿವಿಗೆ ಇಟ್ಕಂಡು ಬೆಚ್ಚಗೆ ಮಲಗಬೇಕು.( ಈ ಬೆಳ್ಳುಳ್ಳಿ ಮೆಥಡ್ ಏನು ಅಂತ ಕೇಳದ್ರೆ ಹೇಳ್ಲಿಲ್ಲ, ಅದ್ನೆಲ್ಲ ಹೇಳ್ಬಾರ್ದು, ಸುಮ್ನೆ ಮಾಡ್ಬೇಕು ಅಂದ್ಲು!)

ದಯಾನಂದ: ಮೂರು ನಾಲ್ಕು ಚಮಚ ಕರಿಮೆಣಸಿನ ಪುಡಿ ನೀರಲ್ ಕುದ್ಸಿ, ೬-೮ ಚಮಚ ಬೆಲ್ಲ ಹಾಕಿ, ಕುದ್ಸಿ, ಆಮೇಲೆ ಒಂದು ಲಿಂಬೆ ಹಿಂಡಿ ಅದ್ನ ಕುಡೀಬೇಕು. ಕುಡಿಯೋಕೋ ಪ್ರೊಸೀಜರ್ ಇದೆ, ಗಟ ಗಟ ಕುಡೀಬಾರ್ದು, ಬಿಸಿಬಿಸಿ ಒಂದೊಂದೇ ಗುಟುಕು ಕುಡ್ದ್ರೆ, ಜ್ವರದ ಜೊತೆ, ಕಫನೂ ಕಡ್ಮೆ ಆಗತ್ತೆ.( ಈಗ ಬ್ಲಾಗ್ ಅಪ್ ಡೇಟ್ ಮಾಡೋಕೆ ಅವನು ಮಾಡ್ಕೊಟ್ಟ ಕಷಾಯನೇ ಕಾರಣ)

ತೇಜಸ್ವಿನತ್ಗೆ: ಕ್ರೋಸಿನ್ ತಗ, ನೆಗಡಿಗೆ ಡಿ ಕೋಲ್ಡ್, ಬಿಸಿ ಆಹಾರ ತಿನ್ನು.

ನಿಮ್ಮ ಬಳಿ ಇನ್ನೇನಾದರೂ ಒಳ್ಳೇ ಸಜೆಶನ್ನುಗಳು, ಮನೆಮದ್ದು ಇದೆಯೇ? ತಿಳಿಸಿ ಪ್ಲೀಸ್!