ಸೋಮವಾರ, ಮೇ 16, 2011

ಫಲಕ ಪ್ರಪಂಚ

ಕತ್ತಲ ನಾಭಿಯನ್ನು ಸೀಳಿಕೊಂಡು ಸಾಗುತ್ತಿರುವ ಬಸ್ಸು, ಮಧ್ಯ ರಾತ್ರಿಯಲ್ಲೋ, ಬೆಳಗಿನ ಜಾವದಲ್ಲೋ ಎಲ್ಲೋ ಗಕ್ಕನೆ ನಿಲ್ಲುತ್ತದೆ. ಜಾಗೃತ ನಿದ್ರಾವಸ್ಥೆಯ ಆ ಸಂದರ್ಭದಲ್ಲಿ ನಾನು ಮಾಡುವ ಮೊದಲ ಕೆಲಸ ಕಿಟಿಕಿಯಾಚೆಗಿನ ಲೋಕದೊಳಕ್ಕೆ ಕಣ್ಣು ಕೀಲಿಸಿ, ಅದ್ಯಾವ ಊರೆಂದು ನೋಡುವುದು. ಗಮ್ಯಕ್ಕಿನ್ನೂ ಎಷ್ಟು ದೂರ ಎಂದರಿತುಕೊಳ್ಳುವ ಬಯಕೆಗೆ ಸಹಕರಿಸೋದು ಹೊರಗೆ ನೇತುಕೊಂಡಿರುವ ಬ್ಯಾಂಕಿನದೋ, ಹೊಟೇಲಿನದೋ, ಮತಾöವುದರದೋ ಫ‌ಲಕ. ಬಸ್ಸಿನ ಇಂಡಿಕೇಟರಿನ ಮಿಣಮಿಣ ಬೆಳಕಿನಲ್ಲಿ ಕಾಣುವ, ಕೆಂಪೋ ಕಪ್ಪೋ ಹಳದಿಯದೋ ಬೋರ್ಡಿನ ಕೆಳಭಾಗದಲ್ಲಿ ಪುಟ್ಟಗೆ ಬರೆದುಕೊಂಡಿರುವ ಆ ಊರಿನ ಹೆಸರು ನನ್ನ ಮುಂದಿನ ದೂರವನ್ನು ನೆನಪಿಸಿ-ಸಂದರ್ಭಕ್ಕೆ ತಕ್ಕ ಹಾಗೆ ಪ್ರಯಾಣವನ್ನು ಸಹ್ಯವಾಗೋ, ತಲೆಬಿಸಿ ಆಗುವ ಹಾಗೋ ಮಾಡುತ್ತದೆ.

ಕೆಲಬಾರಿ ಹಾಗೆ ಬಸ್ಸು ನಿಂತಾಗ ಬೋರ್ಡಿನಲ್ಲಿ ಊರಿನ ಹೆಸರೇ ಕಾಣುವುದಿಲ್ಲ. ಬರೀ ರಾಘವೇಂದ್ರ ಹೊಟೇಲೋ, ಮಹಾಲಕ್ಷ್ಮಿ ಸಾರಿ ಸೆಂಟರೋ ಮಾತ್ರ ಇದ್ದು ನನ್ನ ಕಿರಿಕಿರಿ ಹೆಚ್ಚು ಮಾಡುತ್ತವೆ. ಬಸ್ಸಿನ ಬೆಳಕಿನ ಪರಿಧಿಯ ಆಚೆಗೆಲ್ಲೋ ಇರುವ ಅಂಗಡಿಯ ಫ‌ಲಕದ ಮೇಲೆ ಇರುವ ಹೆಸರು ನೋಡಲು ನಿದ್ದೆಗಣ್ಣಿನಲ್ಲಿ ಅನಿವಾರ್ಯವಾಗಿ ಕೆಳಗಿಳಿಯಬೇಕು. ಊರ ಹೆಸರು ಇಲ್ಲದೇ ಇದ್ದ ಮೇಲೆ ಆ ಬೋರ್ಡಿದ್ದು ಏನು ಪ್ರಯೋಜನ?

ಬೋರ್ಡುಗಳು ಅಂದಮೇಲೆ ಅವಕ್ಕೊಂದಿಷ್ಟು ಮಾನದಂಡಗಳು ಇದ್ದೇ ಇರುತ್ತವೆ... ಅವು ಯಾವುದರ ದ್ದಾದರೂ ಆಗಿರಲಿ. ವೈನ್‌ಶಾಪಿನಿಂದ ತೊಡಗಿ ದೇವಸ್ಥಾನದ ವರೆಗೂ. ಮಧ್ಯದಲ್ಲಿ ಸಂಬಂಧಪಟ್ಟ ಪ್ರಾಪರ್ಟಿಯ ಹೆಸರು, ಕೆಳಗೆ ಅದಿರುವ ಊರು ರಸ್ತೆ ಕ್ರಾಸು ವಿವರ ಮತ್ತೆ ಅಲ್ಲೇ ಬಲಧ್ದೋ ಎಡಧ್ದೋ ಮೂಲೆಯಲ್ಲಿ ಶುರುವಾದ ವರ್ಷ ಇತ್ಯಾದಿ. ಈ ಸ್ಥಾಪನೆಯ ವರ್ಷ ಹಲವು ದುಕಾನುಗಳ ಪ್ರತಿಷ್ಠೆಯ ಪ್ರತೀಕವೂ ಹೌದು. ಹಳೆಯದಾದ ಹಾಗೆ ನಂಬಿಕೆ ಹೆಚ್ಚು. ನಂಬಿಕೆ ಹೆಚ್ಚಾದ ಹಾಗೆ, ವ್ಯಾಪಾರ ಹೆಚ್ಚು. ಇನ್ನು ಕೆಲ ಅಂಗಡಿ ಬೋರ್ಡುಗಳ ಮೇಲೆ ಪ್ರೊಪರೈಟರು ಹೆಸರೂ ಇರುತ್ತದೆ. ಇನ್ನು ಆ ಬೋರ್ಡು ತಯಾರಿಸಿದವನ ವಿವರವೂ ಪುಟ್ಟದಾಗಿ ಅಲ್ಲೇ ಲಭ್ಯ.

ನಮ್ಮೂರು ಕರಾವಳಿಯ ಬೆಲ್ಟಿನಲ್ಲಿರೋದು. ಇಲ್ಲಿನ ಎಲ್ಲ ಅಂಗಡಿಗಳೂ, ಬ್ಯಾಂಕುಗಳೂ, ಶಾಲೆಗಳೂ, ಡಾಕ್ಟ್ರ ಶಾಪುಗಳೂ, ನಾನು ನೋಡಿದಾವಾಗಿನಿಂದಲೂ ತಗಡಿನ ಬೋರ್ಡುಗಳನ್ನೇ ಹೊತ್ತುಕೊಂಡಿದ್ದವು. ಇವೆಲ್ಲ ಮಳೆಗಾಲದಲ್ಲಿ ರಪರಪಾಂತ ಹೊಡೆಯುವ ಮಳೆಯ ಪೆಟ್ಟಿಗೆ ಕಂಗಾಲಾಗಿ, ಅಕ್ಟೋಬರು ಬರುವ ಹೊತ್ತಿಗೆ ಬಿರುದು ಬಾವಲಿ ಅಲಂಕಾರಗಳನ್ನೆಲ್ಲ ಕಳೆದುಕೊಂಡು ತುಕ್ಕುಹಿಡಿದು ಹ್ಯಾಪು ಹ್ಯಾಪಾಗಿ ನಿಂತಿರುತ್ತಿದ್ದವು. ಪೈಂಟರ್‌ ಚಂದ್ರಕಾಂತನಿಗೆ ಆವಾಗ ಭರ್ಜರಿ ಕೆಲಸ. ಅವನು ಅವಕ್ಕೆಲ್ಲ ಮತ್ತೆ ಬಣ್ಣ ಬಳಿದು, ಎಲ್ಲ ಬೋರ್ಡುಗಳ ಎಡಗಡೆ ಮೂಲೆಯಲ್ಲಿ ತನ್ನ ಹೆಸರು ಬರೆದು, ಲ್ಯಾಂಡ್ಲೆ„ನು ನಂಬರು ಬರೆದಿಡುತ್ತಿದ್ದ. ಈಗಲೂ ಹುಡುಕಿದರೆ ಸಿಗಬಹುದೇನೋ. ಆದರೆ ಲ್ಯಾಂಡ್‌ ಲೈನು ಕೆಲಸ ಮಾಡೊದು ಅನುಮಾನ.

ನಮ್ಮೂರಿನ ಚಪ್ಪಲಂಗಡಿ ಹುಸೇನು, ಮೊತ್ತಮೊದಲ ಬಾರಿಗೆ ಈ ತಗಡಿನ ಬೋರ್ಡಿನ ಹಂಗು ತೊರೆದಿದ್ದ. ನಾನಾಗ ಹೈಸ್ಕೂಲಿಗೆ ಕಾಲಿಟ್ಟಿದ್ದೆ ಅನ್ನಿಸತ್ತೆ. ಒಂದು ಸಂಜೆ ಹೊತ್ತಿಗೆ ಅವನ ಅಂಗಡಿ ಹೊರಗೆ ಜನರ ಗುಂಪು.ನಾನೂ ಕುತೂಹಲದಿಂದ ಹೋಗಿ ಇಣುಕಿದರೆ ಅಲ್ಲಿ ಕುಳಿತಿತ್ತು, ಜೈ ಹಿಂದ್‌ ಫ‌ೂಟ್‌ ವೇರ್‌ ಅನ್ನುವು ಕೆಂಪು-ಬಿಳಿ ಬಣ್ಣದ ಫ‌ಲಕ. ಮುದ್ದುಮುದ್ದಾಗಿ ಸ್ಟಿಕ್ಕರ್‌ ಕಟ್ಟಿಂಗ್‌ ಮಾಡಿಸಿಕೊಂಡ ಬೋರ್ಡು. ಆತ ಅದನ್ನ ಮಂಗಳೂರಿನಿಂದ ಮಾಡಿಸಿಕೊಂಡು ತಂದ ಬಗೆಯನ್ನು ಅಲ್ಲಿ ನೆರೆದಿದ್ದ ಮಹಾ ಜನಗಳಿಗೆ ವಿವರಿಸುತ್ತಿದ್ದ. ಬೋರ್ಡಿನೊಳಗೆ ಲೈಟು ಕಲಕ್ಷನ್‌ ಕೊಟ್ಟರೆ ರಾತ್ರಿ ಪೂರಾ ಹೆಸರು ಕಾಣಿಸುತ್ತದೆಯೆಂದ ಅವನಿಗೆ ಅಲ್ಲೇ ಇದ್ದ ಬೀಡದಂಗಡಿ ದಾಸಪ್ಪಣ್ಣ, "ಹೋಗಾ ಮಾರಾಯಾ, ನಮ್ಮ ಇಡೀ ಪೇಟೆಯೇ ರಾತ್ರಿ ಎಂಟಕ್ಕೆ ಬಂದಾಗುತ್ತದೆ, ಆಮೇಲೆ ನಿನ್ನ ಬೋರ್ಡು ನೋಡಿ ಎಂತ ಪಂಜುರ್ಲಿ ದೈವ ಬರ್ತದನ ಮಧ್ಯರಾತ್ರಿಯಲ್ಲಿ ಸ್ಲಿಪ್ಪರು ತಗೊಳ್ಳಲಿಕ್ಕೆ' ಅಂತ ಛೇಡಿಸಿದ್ದ. ಅವನಂಗಡಿ ಬೋರ್ಡಿಗೆ ಕೆಲದಿನ ಎಲ್ಲರೂ ಪಂಜುರ್ಲಿ ಬೋರ್ಡು ಅಂತಲೇ ಕರೀತಿದ್ದರು.

ಆಮೇಲಾಮೇಲೆ ನಮ್ಮ ಊರಿನ ಎಲ್ಲ ಬೋರ್ಡುಗಳೂ ಹಾಗೆಯೇ ಬದಲಾಗಿದ್ದವು. ಸ್ಟಿಕ್ಕರ್‌ ಬೋರ್ಡುಗಳಲ್ಲಿ ಮಾರ್ಪಾಟೂ ಆದವು. ಕಟ್ಟಿಂಗ್‌ ಶಾಪಿನ ರಾಮಣ್ಣ ಶಾರುಖ್‌ ಖಾನ್‌ನ ಫೋಟೋವನ್ನ ತನ್ನ ಫ‌ಲಕಕ್ಕೆ ಹಾಕಿಸಿಕೊಂಡರೆ, ಜ್ಯೋತಿ ಗಿಫ್ಟ್ ಸೆಂಟರ್‌ ಹೆಸರಿನ ಪಕ್ಕ ಐಶ್ವರ್ಯಾ ರೈ ನಗುತ್ತಿದ್ದಳು. ಇವರೆಲ್ಲ ನಮ್ಮ ದೇಶದ ಅದೆಷ್ಟು ಇಂತಹ ಬೋರ್ಡುಗಳಲ್ಲಿ ನಗುತ್ತ ನಿಂತು, ಯಾರು ಯಾರಿಗೆ ಹೇಗೆಲ್ಲ ಲಾಭ ಮಾಡಿಕೊಡುತ್ತಿದ್ದಾರೋ ಏನೋ.

ಬರೀ ಬೋರ್ಡಿನಿಂದಲೇ ಲಾಭ ಮಾಡಿಕೊಳ್ಳುವುದನ್ನು ನಾನು ಸರಿಯಾಗಿ ಗಮನಿಸಿದ್ದು$ಮಾತ್ರ ಬೆಂಗಳೂರಿಗೆ ಬಂದ ಮೇಲೆಯೇ. ಒಂದು ಅಂಗಡಿಗೆ ಒಂದಕ್ಕಿಂತ ಹೆಚ್ಚು ಬೋರ್ಡುಗಳಿರಬಹುದು ಅಂತ ಗೊತ್ತಾಗಿದ್ದೂ ಇಲ್ಲಿಯೇ. ಒಂದರಲ್ಲಿ ಅಂಗಡಿ ಹೆಸರು, ಮತ್ತೂಂದರಲ್ಲಿ ಅಲ್ಲಿನ ಆಫ‌ರುಗಳ ವಿವರಣೆ.
ರಿಯಾಯಿತಿ ದರದಲ್ಲಿ ಮಾರಾಟ, ಕೇವಲ ಕೆಲವೇ ದಿನ ಎಂಬ ಶಾಶ್ವತವಾದ ಟೆಂಪರರಿ ಬೋರ್ಡುಗಳನ್ನ ಇಲ್ಲಿ ಬೇಕಷ್ಟು ಕಂಡಿದ್ದೇನೆ, ನೀವುಗಳೂ ಕಂಡಿರುತ್ತೀರಿ. ಅಮೋಘ ಆಫ‌ರುಗಳ ಆಸೆ ಹುಟ್ಟಿಸಿ, ಬನಿಯನ್ನು ಕೊಳ್ಳೋಕೆ ಬಂದವರು ಅರ್ಧ ಅಂಗಡಿ ಖರೀದಿಸಿ ಹೋಗುವಂತೆ ಮಾಡಲು ಇವುಗಳೇ ಕಾರಣ. ಹೀಗೆ, ಇಲ್ಲಿನ ಫ‌ಲಕಗಳಿಗೆ ಬರಿಯ ಗುರುತು ಹೇಳುವುದಕ್ಕಿಂತ ಗುರುತರವಾದ ಜವಾಬ್ದಾರಿ ಇದೆ.

ಜವಾಬ್ದಾರಿ ಇಲ್ಲದ ಬೋರ್ಡುಗಳಿಂದ ಗಲಾಟೆ ಆಗಿದ್ದೂ ಉಂಟು. ದೇವರ ಹೆಸರಿಟ್ಟ ಬಾರು ವೈನ್‌ ಶಾಪುಗಳ ಬಗ್ಗೆ ನಮ್ಮಲ್ಲೆಲ್ಲ ದೊಂಬಿ ಆಗಿದ್ದೂ ಇದೆ. ಆದರೆ ಈಗೀಗ ಅದನ್ನೆಲ್ಲ ಜನ ಎಷ್ಟು ಆರಾಮಾಗಿ ತಗೊಂಡಿದ್ದಾರೆಂದರೆ, ಅಂದು ಗಲಾಟೆಯಲ್ಲಿ ಬೆಂಕಿ ಹಚ್ಚಿದ ವ್ಯಕ್ತಿಯೇ ಇಂದು ಶ್ರೀ... ಬಾರ್‌ನ ಒಡೆಯ.
ಅವನಪ್ಪ$ಈಗ ಬಾರ್‌ ಇರೋ ಜಾಗದಲ್ಲಿ 20-30 ವರ್ಷಗಳಿಂದ ದೇವಪ್ಪಣ್ಣ ಅಂಡ್‌ ಸನ್ಸ್‌ ಅನ್ನೋ ಹೆಸರಿನ ದಿನಸಿ ಅಂಗಡಿ ನಡೆಸುತ್ತಿದ್ದರು. ಮಗರಾಯ ಒಂದು ರೌಂಡ್‌ ಬೊಂಬಾಯಿಯೆಲ್ಲ ತಿರುಗಿ ದುಡ್ಡು ಮಾಡಿಕೊಂಡು ಬಂದ. ಅಪ್ಪನಿಗೆ ವಯಸೂÕ ಆಗಿತ್ತು. ದಿನಸಿ ಅಂಗಡಿ ಕೆಡವಿದ ಮಗ ಇಷ್ಟದೇವರ ಹೆಸರಲ್ಲಿ ಬಾರು ಮಾಡಿಕೊಂಡು ಆರಾಮಾಗಿದ್ದಾನೆ. ಪೇಟೆಯ ಮಧ್ಯದಲ್ಲಿ ನೊರೆ ತುಂಬಿದ ಬಿಯರ್‌ ಮಗ್‌ ಹಿಡಿದ ಸುಂದರಿ ನಿಂತಿದ್ದಾಳೆ,ಫ‌ಲಕದೊಳಗೆ.

ಮೊದಲೆಲ್ಲ ಬೇಕರಿಯ ಫ್ರಿಡಿjನೊಳಗೆ, ಬಟ್ಟೆಯಂಗಡಿಯ ಕಪಾಟಿನೊಳಗೆ, ಆರಾಮಾಗಿ ಕೂತಿರುತ್ತಿದ್ದ ಕೂಲ್‌ ಡ್ರಿಂಕು, ಚಡ್ಡಿ ಬನೀನುಗಳು ಬೋರ್ಡಿಗೇ ಬಂದು ಕೂತಿವೆ. ಬರೀ ದುರ್ಗಾ ಕೂಲ್‌ ಡ್ರಿಂಕ್ಸ್‌ ಅಂದ್ರೆ ಸಾಲದು ಈಗ! ಆ ಬೋರ್ಡಲ್ಲಿ ಯಾವುದೋ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡಿನ, ಐಸ್‌ ಬಕೇಟಿನಲ್ಲಿಟ್ಟ ಬಾಟಲಿಂದ ಕಪ್ಪೋ, ಆರೆಂಜೋ ಬಣ್ಣದ ನೀರು ಹಾರುತ್ತಿರಬೇಕು- ಸದಾ ಕಾಲ. ಅವರ ಕಂಪನಿಯ ಜಾಹೀರಾತಿನ ಕೆಳಗೆ ಪುಟ್ಟದಾಗಿ, ಕೆಟ್ಟ ಕನ್ನಡದಲ್ಲಿ ಬರೆದ ಶಾಪ್‌ನ ಹೆಸರು ಕಂಡರೆ ಪುಣ್ಯ. ಅಂದು ಹುಸೇನಂಗೆ ಬೈದಿದ್ದ ದಾಸಪ್ಪಣ್ಣನೂ ಈಗ ತನ್ನ ಬೀಡಾ ಅಂಗಡಿಯ ಮೇಲೆ, ದೊಡ್ಡದೊಂದು ಸಿಗರೇಟು ಕಂಪನಿಯ ಬೋರ್ಡು ಹಾಕಿಕೊಂಡು ಬೀಡಾ ಶಾಪ್‌ ಹೆಸರನ್ನು ಕೆಳಗೆ ಸಣ್ಣಕೆ ಬರೆಸಿಕೊಂಡಿದ್ದಾರೆ. ದಸ್‌ ಪಾನ್‌ ಶಾಪೇ ಅಂತ. ದಾಸ್‌ ಹೋಗಿ ದಸ್‌ ಆಗಿ, ಅಂಗಡಿ ಶಾಪೇಯಾಗಿ ಒಟ್ಟಾರೆ ಕನ್ನಡಕ್ಕೇ ಶಾಪ ತಟ್ಟಿದಂತೆ ಕಾಣುತ್ತದೆ. ಅವರ ಹೆಸರಿನ ಕತ್ತು ಹಿಸುಕಿದ್ದನ್ನು ಹೇಳಲು ಹೋದರೆ ಆ ಸಿಗರೇಟು ಜಾಹೀರಾತಿನಿಂದಾಗಿ ತನಗೆ ಆದ ಲಾಭವನ್ನು ನನಗೆ ವಿವರಿಸಿ ನನ್ನ ಹೆಸುÅ ಎಲ್ಲರಿಗು ಗೊತ್ತುಂಟು ಮಾರ್ರೆà, ಅಷ್ಟಕ್ಕೂ ಜನ ನನ್ನ ಅಂಗಡಿ ಬೋರ್ಡು ನೋಡಿ ಬರುದಿಲ್ಲ. ನಾನು ಕೊಡೊ ಬೀಡದ ರುಚಿಗೆ ಬರುದು. ಬೋರ್ಡಿನಲ್ಲಿ ಎಂತ ಸಂಕಪಾಶಾಣ ಬರೆದಾದ್ರೂ ಸಾಯ್ಲಿ ಅವ್ರು ಎಂದು ಬಾಯಿ ಮುಚ್ಚಿಸಿದ್ದರು.

ಆದರೆ, ಬೆಂಗಳೂರಿನ ತುಂಬ ತುಂಬಿರುವ ಲಕ್ಷಗಟ್ಟಲೆ ಬೋರ್ಡುಗಳ ಕೋಟಿಗಟ್ಟಲೆ ತಪ್ಪುಗಳನ್ನು ನೋಡಿದ ಮೇಲೆ, ದಾಸಪ್ಪಣ್ಣ ಹೇಳಿದ್ದು ಸತ್ಯ ಅನ್ನಿಸಿದ್ದಂತೂ ಹೌದು. ಅತಿ ಕೆಟ್ಟ ಕನ್ನಡದಲ್ಲಿ, ತಮಗೆ ಬೇಕಾದಲ್ಲಿ ಮಹಾಪ್ರಾಣ ಅಲ್ಪಪ್ರಾಣ ಒತ್ತಕ್ಷರಗಳನ್ನು ತುಂಬಿಕೊಂಡು ಕನ್ನಡವನ್ನು ನಿಧಾನ ಕೊಲ್ಲುತ್ತಿವೆ, ಇಲ್ಲಿನ ಫ‌ಲಕ ಸಾಮ್ರಾಜ್ಯ. ಅದರ ಬಗ್ಗೆ ಬರೆಯೋಕೆ, ಮತ್ತೂಂದೇ ಪ್ರಬಂಧ ಬೇಕು. ಈಗೀಗ ಈ ಮೇಲ್‌ಗ‌ಳಲ್ಲಿ ಕೂಡ ಸ್ಪೆಲ್ಲಿಂಗು ಮಿಸ್ಟೇಕು ಹೊತ್ತಿರುವ, ಚಿತ್ರ ವಿಚಿತ್ರ ಅಸಂಬಂದ್ಧ ಬೋರ್ಡು ಬರಹಗಳ ಫಾರ್ವರ್ಡುಗಳೂ ಬರುತ್ತವೆ. ಅವುಗಳಲ್ಲಿ ಚೀನಾ, ಜಪಾನಿಂದ ಹಿಡಿದು ಅಮೆರಿಕದ ಅಪಸವ್ಯಗಳೂ ತುಂಬಿರುವುದರಿಂದ ನಮ್ಮಲ್ಲಿ ಮಾತ್ರ ಹೀಗಲ್ಲವಲ್ಲ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಗೆಳತಿಯೊಬ್ಬಳು ಇದಕ್ಕಾಗೇ ಬ್ಲಾಗೊಂದನ್ನೂ ನಡೆಸುತ್ತಿದ್ದಾಳೆ!

ನಾನು, ನನ್ನ ಗೆಳೆಯ ಹರ್ಷ ಒಂದು ದಿನ ಫ್ಲೆಕ್ಸ್‌ ಫ‌ಲಕಗಳನ್ನ ತಯಾರು ಮಾಡುವ ಅಂಗಡಿಯ ಎದುರೇ ಹಾದು ಹೋಗುತ್ತಿದೆವು. ಹರ್ಷನ ಗಮನ ಆ ಅಂಗಡಿಯ ಬೋರ್ಡಿನ ಕಡೆ ಹೋಗಿ, ಅದನ್ನ ನನಗೆ ತೋರಿಸಿ ನಕ್ಕ. ಪಲಕ ಪ್ರಪಂಚ ಎಂಬ ನಾಮಧೇಯ ಹೊತ್ತು ನಿಂತಿತ್ತು ಆ ಶಾಪ್‌. ಉತ್ತರಕರ್ನಾಟಕದ ಕಡೆ, ಪಲಕ ಅಂದ್ರೆ ರವಿಕೆ ಅಂತ ಅರ್ಥ. ತನ್ನ ಅಂಗಡಿಯ ಫ್ಲೆಕ್ಸನ್ನೇ ತಪ್ಪು$ಬರಕೊಂಡೊನು, ಉಳಿದೋರಿಗೇನು ಮಾಡಿ ಕೊಟ್ಟಾನು!

ಹೊಸ ತಂತ್ರಜಾnನ ಬಂದ ಹಾಗೆ ಬೋರ್ಡುಗಳ ಸೊಗಸು ಕೂಡ ಬದಲಾಗಿದೆ. ಒಳಗೆಲ್ಲ ಪಕಪಕ ಲೈಟು ಕುಣಿಯುವ, ಬದಲಾಗುವ ಬಣ್ಣದ, ವರ್ಣಮಯ ಫ‌ಲಕಗಳು ಅಡಿಗೊಂದಾಗಿವೆ. ಬ್ರಿಗೇಡು ಎಂಜಿ ರೋಡಿರಲಿ, ಬೆಂಗಳೂರಿನಾಚೆಗಿನ ಪುಟ್ಟ ಪಟ್ಟಣಗಳೂ, ಕೊನೆಕೊನೆಗೆ ರಾಮೋಹಳ್ಳಿ, ಸೋಮನಹಳ್ಳಿಗಳು ಕೂಡ ಇಂತಹ ಟ್ರೆಂಡೀ ಬೋರ್ಡುಗಳನ್ನ ತುಂಬಿಕೊಂಡು ಲಕಲಕಿಸುತ್ತಿವೆ. ಸಿದ್ದರಾಮ ಅಂಡ್‌ ಸನ್ಸ್‌ ಪ್ರಾವಿಷನಲ್‌ ಸ್ಟೋರ್‌ಗಳು, ಎಸ್‌ ಅಂಡ್‌ ಎಸ್‌ ಸೂಪರ್‌ ಬಜಾರ್‌ಗಳಾಗಿ ಬದಲಾಗಿ ಹೊಸ ರೂಪ ತೊಟ್ಟಿವೆ. ಈಗ ತಾನೇ ದಿನಸಿಯಂಗಡಿಗೆ ಕಾಯಕಲ್ಪ$ ಮಾಡಿದ ಯಜಮಾನನಿಗೆ ನೆತ್ತಿಯ ಫ‌ಲಕದಲ್ಲಿ ಮಿನುಗುತ್ತಿರುವ ಬಲ್ಪಿನ ಬೆಳಕು, ಉಜ್ವಲ ಭವಿಷ್ಯದ ಪ್ರತೀಕವಾಗಿ ಕಾಣುತ್ತದೆ.

ಇತ್ತೀಚಿಗೆ ಊರಿಗೆ ಹೋಗಿದ್ದೆ. ಊರಿನಲ್ಲಿ ಬಸ್ಸಿಳಿದ ಸಂತಸದಲ್ಲೇ ಹೆಜ್ಜೆ ಹಾಕುತ್ತ ಸುತ್ತಮುತ್ತ ಕಣ್ಣಾಡಿಸಿದೆ. ನೋಡಿದರೆ, ಏನೆಲ್ಲ ಬದಲಾದರೂ, ವರುಷಗಟ್ಟಲೆಯಿಂದ ಎಂಥದೂ ಬದಲಾವಣೆಯಿಲ್ಲದೆ ಹಾಗು ಹಾಗೇ ಇದ್ದ ನನ್ನ ನೆಚ್ಚಿನ ಟೈಲರಂಗಡಿಯ ಬೋರ್ಡು ಬದಲಾಗಿತ್ತು. ಕಾರ್ತಿಕ್‌ ಟೈಲರ್‌ ಎಂಬ ಅತ್ಯಂತ ಸರಳ ನಾಮಧೇಯದೊಂದಿಗೆ, ಬಸ್ಟ್ಯಾಂಡಿನ ಪಕ್ಕದಲ್ಲಿದ್ದ ಪುಟ್ಟ ಟೆನ್‌ ಬೈ ಟೆನ್‌ ಜಾಗದಲ್ಲಿ ಆ ಅಂಗಡಿ ನನಗೆ ಬುದ್ಧಿ ತಿಳಿದಾಗಿನಿಂದಲೂ ಇತ್ತು. ವರುಷಗಟ್ಟಲೆಯ ಧೂಳು ತಿಂದ ಪುಟ್ಟದೊಂದು ಮರದ ಬೋರ್ಡಲ್ಲಿ ಢಾಳು ನೀಲಿಯಲ್ಲಿ ಬರೆದ ಕಾರ್ತಿಕ್‌ ಟೈಲರ್‌ ಎಂಬ ಸೊಟ್ಟ ಅಕ್ಷರಗಳು ಯಾರಿಗಾದರೂ ಕಂಡೇ ಕಾಣುತ್ತಿತ್ತು. ಆ ಬೋರ್ಡಿನ ಬದಲು ಅಲ್ಲೀಗ, ಕಾರ್ತಿಕ್‌ ಮೆನ್ಸ್‌ ವೇರ್‌, ಸ್ಪೆಷಲಿಸ್ಟ್ಸ್ ಇನ್‌ ಸೂಟ್ಸ್‌... ಇತ್ಯಾದಿ ಇತ್ಯಾದಿ ಇಂಗ್ಲೀಷ್‌ ವಿಶೇಷಣಗಳನ್ನೆಲ್ಲ ಆರೋಪಿಸಿಕೊಂಡ ಫ‌ಳ ಫ‌ಳಿಸೋ ಫ್ಲೆಕ್ಸ್‌ ಫ‌ಲಕ ಎದ್ದು ನಿಂತಿತ್ತು.

ಸಂಜೆ ತಿರುಗಿ ಪೇಟೆ ಕಡೆ ಬಂದಾಗ ಕೇಳಿದರೆ ಅಲ್ಲಿನ ಟೈಲರ್‌ ಸಂಜೀವಣ್ಣ ಅತ್ಯಂತ ಸರಳವಾಗಿ, "ಕಾಲ ಬದಲಾಗಿದೆ ಮಾರ್ರೆ. ಗಿರಾಕಿ ಬೇಕೂಂದ್ರೆ ಹೀಗೆಲ್ಲ ಮಾಡ್ಬೇಕು ನಾನು. ಒಳಗೆ ಗೋಳಿಸೊಪ್ಪಿದ್ರೂ ತೊಂದ್ರೆಯಿಲ್ಲ, ಹೊರಗೆ ಶೃಂಗಾರ ಬೇಕಲ್ಲ... ನಿಮೆªàನಾದ್ರೂ ಬಟ್ಟೆ ಉಂಟೂ ಹೊಲೀಲಿಕ್ಕೆ? ಮೊದಲೆಲ್ಲ ಯುನಿಫಾರ್ಮಿನಿಂದ ಹಿಡಿದು ನಿಮ್ಮ ಎಲ್ಲ ಶರಟು -ಪ್ಯಾಂಟು ಹೊಲಿದುಕೊಟ್ಟಿದ್ದೆ. ಈಗೆಲ್ಲ ಬಿಡಿ, ನೀವು ಆ ಬೆಂಗಳೂರಿನ ದೊಡ್ಡ ದೊಡ್ಡ ಹೆಸರಿರೋ ಶೋ ರೂಮಿನಲ್ಲಿ ರೆಡಿಮೇಡ್‌ ಶರ್ಟು ಪ್ಯಾಂಟು ಒಂದಕ್ಕೆರಡು ಕೊಟ್ಟು ತಗೊಳ್ಳುದೇನೋ ಅಲ್ವಾ?' ಅಂದರು. ಸಂಜೀವಣ್ಣನ ಅಂಗಡಿಯ ಬೋರ್ಡು ಬದಲಾಗಿದ್ದಕ್ಕೂ, ನಾನು ಬದಲಾಗಿದ್ದಕ್ಕೂ ಎಷ್ಟು ಸಂಬಂಧ ಇದೆ ಅಂತ ಯೋಚಿಸುತ್ತ ಮನೆ ಕಡೆ ಹೊರಟೆ.

ದಾರಿಯಲ್ಲಿ ಬಸ್ಸು ನಿಲ್ಲದ ಶಿಥಿಲ ಬಸ್‌ಸ್ಟ್ಯಾಂಡಿನ ಮೇಲಿದ್ದ ಮರದ ಹಳೆಯ ಫ‌ಲಕದ ಪಕ್ಕ , ಅಲ್ಲೇ ಹುಟ್ಟಿದ್ದ ಎಳೆಯ ಅರಳಿ ಗಿಡವೊಂದು ಸಂಜೆ ಸೂರ್ಯನ ಬಿಸಿಲಿಗೆ ಮೈಕಾಯಿಸಿಕೊಳ್ಳುತ್ತಿತ್ತು.

ಸೋಮವಾರ, ಮೇ 09, 2011

ಮದುವೆ ಕರೆಯ

ಅಖಂಡ ಇಪ್ಪತ್ತಾರು ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದ ನಾನು, ಇಪ್ಪತ್ತೇಳಕ್ಕೆ ಕಾಲಿಡುತ್ತಿದ್ದ ಹಾಗೆ ಮದುವೆಯಾಗಬೇಕಾಯಿತು. ಮೆಚ್ಚಿ ಮಾಡಿದ ಪ್ರೀತಿ, ಹೆತ್ತವರೊತ್ತಾಯ ಇದಕ್ಕೆ ಕಾರಣವಾದವು. ಒಪ್ಪಿಗೆ ಕೊಟ್ಟಿದ್ದೇ ತಡ, ಗಾಣಕ್ಕೆ ಸಿಕ್ಕ ಕಬ್ಬಿನಂತಾಯಿತು ನನ್ನ ಗತಿ. ಏನಕ್ಕೂ ನನ್ನನ್ನು ಕೇಳಲು ಹೋಗದೇ ಮನೆಮಂದಿ ವಿವಾಹದ ಕೆಲಸಗಳನ್ನು ಶುರುಮಾಡಿಕೊಂಡಿದ್ದರು. ನನಗೆ ಒಂದೆಡೆ ಹೊಸ ಜೀವನ ಆರಂಭವಾಗುವ ಖುಷಿ, ಇನ್ನೊಂದೆಡೆ ಕಣ್ಣೆದುರು ಜವಾಬ್ದಾರಿಗಳ ಬೆಟ್ಟ.

ನಾನು ಭಾವೀ ಪತ್ನಿ ಜೊತೆಗೂಡಿ ಮದುವೆಯಾಗಿ ಪಳಗಿರುವ ಸ್ನೇಹಿತರುಗಳ ಬಳಿ, ವಿವಾಹದ ಹಿಂದೆ-ಮುಂದೆ ಮಾಡಿಕೊಳ್ಳಬೇಕಾದ ತಯಾರಿಗಳ ಬಗ್ಗೆ ಕೋಚಿಂಗ್ ಕ್ಲಾಸುಗಳನ್ನು ತೆಗೆದುಕೊಂಡೆ. ಮನೆ-ಅಡ್ವಾನ್ಸು, ಚಿನ್ನ-ಬಟ್ಟೆ ಖರೀದಿಗಳ ಸಲಹೆ ನೀಡಿದ ನಂತರ ಎಲ್ಲ ಹೇಳಿದ್ದು ಒಂದೇ ಮಾತು, ಮದುವೆಗೆ ಕರಿಯೋದು ಇದೆ ನೋಡು, ಅದು ಅತ್ಯಂತ ಮುಖ್ಯ ವಿಚಾರ. ಎಲ್ಲರ ಅನುಭವಕ್ಕೂ ಜನ್ಯವಾಗಿದ್ದಿದ್ದು ಏನೆಂದರೆ ಏನೇ ಹೆಸರು ಬರೆದುಕೊಂಡರೂ, ಎಕ್ಸೆಲ್ ಶೀಟಲ್ಲಿ ಹೆಸರು ಟೈಪಿಸಿ ಪ್ರಿಂಟ್ ಔಟ್ ತೆಗೆದಿಟ್ಟುಕೊಂಡರೂ, ಹತ್ತಿರದ ಗೆಳೆಯನಿಗೋ, ಎಲ್ಲೋ ಇರುವ ಅತ್ತೆಯ ತಮ್ಮನ ಮಗನಿಗೋ ಕರೆಯೋಲೆ ತಲುಪಿರುವುದಿಲ್ಲ. ಅವರೋ ಅದಕ್ಕಾಗೇ ಯುಗಪರ್ಯಂತರ ಕಾದಿದ್ದು ಮುಂದೆಲ್ಲೋ ಸಿಕ್ಕಾಗ ನೀನು ಬಿಡಪ್ಪ ದೊಡ್ಡ ಮನುಷ್ಯ- ನಮ್ಮಂತಹ ಬಡಪಾಯಿಗಳು ಎಲ್ಲಿ ನೆನಪಿರುತ್ತಾರೆ. ನಮ್ಮನ್ನೆಲ್ಲಕರೀಬೇಕು ಅಂತಿಲ್ಲ ಬಿಡು, ನೀವು ದಂಪತಿ ಚೆನ್ನಾಗಿದ್ದೀರೋ, ಅಷ್ಟು ಸಾಕು ಎಂದು ಸಾರ್ವಜನಿಕವಾಗಿ ಹಾರೈಸಿ ಸೇಡು ತೀರಿಸಿಕೊಳ್ಳುತ್ತಾರೆ.

ಹೇಗೋ ಜೀವನ ಎಲ್ಲಾ ಕಷ್ಟಪಟ್ಟು ಗಳಿಸಿರುವ ಮರ್ಯಾದೆಯನ್ನು ಖಂಡಿತ ಹಾಳು ಮಾಡಿಕೊಳ್ಳಬಾರದು ಎಂದು ನಿಶ್ಚಯಿಸಿ, ಅದನ್ನ ಉಳಿಸಿಕೊಳ್ಳೋಕೆ ಹತ್ತು ರೂಪಾಯಿ ಕೊಟ್ಟು ನೋಟ್ ಬುಕ್ಕೊಂದನ್ನು ಖರೀದಿಸಿದೆ. ಯಾವುದಕ್ಕೂ ವಿಘ್ನ ಬರದಿರಲಿ ಎಂದು ಮೊದಲಿಗೊಂದು ಓಂ ಬರೆದು ಸಮಸ್ತ ಗೆಳೆಯರ, ಸಂಬಂಧಿಗಳ ಹೆಸರು ಬರೆಯಲು ಆರಂಭಿಸಿದೆ. ಹತ್ತಿರದ ಗೆಳೆಯರು, ಈಗಿನ ಆಫೀಸು, ಹಳೇ ಆಫೀಸು ಮತ್ತು ಮತ್ತೂ ಹಳೆಯ ಆಫೀಸಿನ ಕೊಲೀಗುಗಳು, ಕಾಲೇಜು, ಪದವಿ,ಪಿಯೂಸಿ,ಹೈಸ್ಕೂಲು ಸಹಪಾಠಿಗಳು, ಅಪ್ಪನ ಕಡೆಯ ನೆಂಟರು, ಅಜ್ಜನ ಮನೆ ಹಾಯ್ಸಾಲು ಎಲ್ಲ ಬರೆದು ಮುಗಿಸಿದೆ.

ದೂರದಿಂದ ನೋಡಿದರೆ ರಾಮಜಪ ಬರೆದಂತಿದ್ದ ಹಾಳೆಗಳನ್ನು ಮಗುಚುತ್ತಿದ್ದಂತೆ ಅರಿವಾಗಿ ಹೋಯಿತು, ಈ ಜನ್ಮದಲ್ಲಿ ನನ್ನ ಮರ್ಯಾದೆ ಕೆಡೋದು ತಪ್ಪಿದ್ದಲ್ಲ ಅಂತ. ಅಲ್ಲಿ ಬರೆದಿದ್ದ ಭೂಮಂಡಲದ ಅರೆವಾಸಿ ನಿವಾಸಿಗಳನ್ನು ಕರೆಯುವುದಕ್ಕೇ ಏನಿಲ್ಲವೆಂದರೂ, ನಾಕಾರು ತಿಂಗಳಾದರೂ ಬೇಕಿತ್ತು. ಅಲ್ಲಿಯವರೆಗೆ ಮಾನದ ಬಗ್ಗೆ ವಿಚಾರ ನಡೆಸಿದ್ದ ಮನಸ್ಸು ಈ ಲಿಸ್ಟು ಕಂಡದ್ದೇ ಅದನ್ನೆಲ್ಲ ಕ್ಷಣಾರ್ಧದಲ್ಲಿ ತಳ್ಳಿ ಹಾಕಿತು. ಯಾರೋ ಏನೋ ಹೇಳ್ತಾರೆ ಅಂತೆಲ್ಲ ತಲೆಕೆಡಿಸಿಕೊಳ್ಳೋದು ತಪ್ಪೂ, ನಿನ್ನ ಲೈಫು ನಿನ್ನದು, ನಿನ್ನ ಹತ್ತಿರದ ಬಳಗವನ್ನಾದರೂ ನೆಟ್ಟಗೆ ಕರಿ. ನಿನ್ನ ಮರ್ಯಾದೆಯನ್ನು ಅವರು ರಕ್ಷಿಸುತ್ತಾರೆ ಅಂತ ಬುದ್ಧಿ ಹೇಳಿತು.

ಪುಸ್ತಕದಲ್ಲಿ ತುಂಬಿ ಹೋಗಿದ್ದ ಸಾವಿರಾರು ಹೆಸರುಗಳಲ್ಲಿ ಆಪ್ತರು, ಅನಿವಾರ್ಯರು, ಸಂಬಂಧಿಕರು ಎಂಬೆಲ್ಲ ಕ್ಲಿಷ್ಟಕರ ಸುತ್ತುಗಳನ್ನು ದಾಟಿ ಕೊನೆಯ ಹಂತಕ್ಕೆ ಬಂದ ಅದೃಷ್ಟಶಾಲಿಗಳಿಗೆ ಮಾತ್ರ ಮದುವೆಯ ಕರೆಯೋಲೆ ನೀಡಲಾಗುವುದು ಎಂದು ನಿರ್ಧರಿಸಿದೆ. ಈ ಮಧ್ಯ ಆರ್ಕುಟ್, ಫೇಸ್ ಬುಕ್ ಮತ್ತು ಜೀ ಮೇಲ್ ಕಾಂಟಾಕ್ಟುಗಳಿಂದ ಹಲವಷ್ಟು ಹೆಸರುಗಳಿಗೆ ವೈಲ್ಡ್ ಕಾರ್ಡ್ ಎಂಟ್ರಿ ದೊರಕಿತು.
ಬಡಬಡನೆ ಮದುವೆ ಕಾರ್ಡು ಅಚ್ಚು ಹಾಕಿಸಿ, ಕರ್ಮಕ್ಷೇತ್ರ ಬೆಂಗಳೂರಿನ ಬಂಧುಗಳು ಮತ್ತು ಸ್ನೇಹಿತರನ್ನು ಡೇ ಎಂಡುಗಳಲ್ಲಿ, ವೀಕೆಂಡುಗಳಲ್ಲಿ ಕರೆದಿದ್ದಾಯ್ತು. ಉಳಿದೆಲ್ಲರಿಗೆಲ್ಲ ಈ ಮೇಲ್ ಇದ್ದೇ ಇತ್ತು. ಕರೆಯೋಲೆ ಸ್ಕ್ಯಾನು ಮಾಡಿ , ಕಾಂಟಾಕ್ಟುಗಳನ್ನ ಹೆಕ್ಕಿ ತುಂಬಿ ಸೆಂಡ್ ಬಟನೊತ್ತಿದ್ದರೆ, ಅಮೇರಿಕದಲ್ಲಿದ್ದವರಿಗೂ ಕರೆದಾಯ್ತು, ಅರಕಲಗೂಡೂ ಮುಗಿದಾಯ್ತು! ಎಲ್ಲ ಆರಾಮಾಗಿ ನಡೀತಿದೆ ಎನ್ನುವಾಗ ಅಪ್ಪ ಫೋನಾಯಿಸಿ, ಮಗನೇ ಊರಿನ ಕಡೆ ಕರಿಯೋಕೆ ಹೋಗಬೇಕಲ್ಲಪ್ಪ, ಯಾವಾಗ ಬರುತ್ತೀಯಾ ಎಂದರು. ನಗರ ಜೀವನದ ಗೊಂದಲ ಗಲಿಬಿಲಿಗಳಲ್ಲಿ ಕಳೆದೇ ಹೋಗಿದ್ದ ನನಗೆ ಜ್ಞಾನೋದಯವಾಯಿತು.

ಮದುವೆಗೆಂದು ಹಾಕಿದ್ದ ರಜೆಯನ್ನು ಇನ್ನೊಂದೆರಡು ದಿನಗಳಷ್ಟು ವಿಸ್ತರಿಸಿ, ಮನೆಗೆ ಬಂದೆ. ಒಂದು ದಿನ ಶುಭ ಸಮಯ ನೋಡಿ ನಮ್ಮ ಮದ್ವೆ ಕರ್ಯದ ಕಾರ್ಯಕ್ರಮ ಆರಂಭವಾಯಿತು. ನಾಲ್ಕು ಮೂಲೆಗೂ ಅರಶಿನ ಕುಂಕುಮ ಹಚ್ಚಿಕೊಂಡಿರೋ ವಿವಾಹದ ಕರೆಯೋಲೆಗಳು ಮತ್ತು ಅಕ್ಷತೆ ತುಂಬಿರುವ ಪುಟ್ಟ ಬೆಳ್ಳಿ ಬೋಗುಣಿ ಸಮೇತ ಹೊರಟಿದ್ದೂ ಆಯಿತು.

ನನ್ನ ಭಾವ ಕೋಶದ ಭಿತ್ತಿಯಲ್ಲಿ ಹೊಸ ಚಿತ್ತಾರಗಳನ್ನು ಮೂಡಿಸಿದ ಪ್ರಯಾಣ ಅದು.ನನ್ನಪ್ಪನಿಗೆ ಅವರು ಓದುವ ಕಾಲದಲ್ಲಿ ಸಹಾಯ ಮಾಡಿದ್ದ ಯಾರೋ ಅಜ್ಜ, ಅಮ್ಮನಿಗೆ ಕಷ್ಟಕಾಲದಲ್ಲಿ ಆಶ್ರಯವಿತ್ತ ಇನ್ನಾರೋ ಹಿತೈಷಿ, ಮಗುವಾಗಿದ್ದಾಗ ಸತ್ತೇ ಹೋಗುವಂತಾಗಿದ್ದ ನನ್ನನ್ನು ಅದೇನೋ ಔಷಧಿ ಕೊಟ್ಟು ಬದುಕಿಸಿದ ಅಜ್ಜಿ, ಇವರನ್ನೆಲ್ಲ ಮದುವೆಗೆ ಕರೆಯುವ ನೆಪದಲ್ಲಿ ಭೇಟಿ ಮಾಡಿದ ಹಾಗಾಯಿತು. ನನ್ನ ನೋಟ್ ಬುಕ್ಕಿನ ಹಾಳೆಗಳಲ್ಲಿ ಬರೆದಿಟ್ಟ ಹೆಸರುಗಳ ಪರಿಧಿಯನ್ನು ಮೀರಿದ, ಆದರೂ ಯಾವುದೋ ಸಂಬಂಧದ ಮಾಯಾತಂತುಗಳ ಮೂಲಕ ನಾನು ನಾನಾಗಿರಲು ಕಾರಣರಾದ ಈ ಜೀವಗಳನ್ನು ಕಂಡ ಸಂತಸ, ಅನಿರ್ವಚನೀಯ.

ಮರೆತ ಪರಿಚಯಗಳನ್ನು ನವೀಕರಿಸಿಕೊಳ್ಳುವ ಈ ವಿಶೇಷ ತಿರುಗಾಟದಲ್ಲಿ ಅಚಾನಕ್ಕಾಗಿ ಗುವ ಆಹ್ಲಾದಗಳಂತೆ, ಅನಿವಾರ್ಯವಾಗಿ ಎದುರಿಸಲೇ ಬೇಕಾಗಿರುವ ಗ್ರಹಚಾರಗಳೂ ಇವೆ. ಹಳ್ಳಿಮನೆಗಳಲ್ಲಿ ಯಾವ ಹೊತ್ತಿಗೆ ಹೋದರೂ ಮನೆಗೊಬ್ಬರಾದರೂ ಇದ್ದೇ ಇರುತ್ತಾರೆ. ನಗರ ಸಂಪ್ರದಾಯದ ನೀವು ಮನೆಯಲ್ಲೇ ಇದ್ದೀರೋ, ನಾನು ಸಂಜೆ ಆರೂಕಾಲಿಗೆ ಸರಿಯಾಗಿ ಬರುತ್ತೇನೆ ಎಂಬಿತ್ಯಾದಿ ಔಪಚಾರಿಕ ನುಡಿಗಳಲ್ಲಿ ಬೇಕಾಗುವುದಿಲ್ಲ. ಹೀಗಾಗಿ, ನಾವು ದಾರಿಯಲ್ಲಿ ಸಿಕ್ಕ ಮನೆಗೆ ಸರಕ್ಕನೆ ನುಗ್ಗುತ್ತಿದ್ದೆವು.

ತಗೋ! ಮದುಮಗ ಹೆತ್ತವರ ಸಮೇತನಾಗಿ ಮದ್ವೆ ಕರ್ಯಕ್ ಬಂದಿದ್ದು ಗೊತ್ತಾದ್ ಕೂಡಲೇ ಮನೆಜನಕ್ಕೆ ಸಣ್ಣಕೆ ದಯ್ಯ ಮೆಟ್ಟಿಕೊಳ್ಳುತ್ತಿತ್ತು. ಮನೆತುಂಬ ಓಡಾಡೋ ಹೆಂಗಸರು ಕೂ ಹೊಡೆದು ತೋಟದಲ್ಲಿದ್ದ ಯಜಮಾನರನ್ನ ಕರೆದರೆ, ಅವರು ಬರೋದರೊಳಗೆ ಇತರರು ಮೆಲ್ಲಗೆ ಬಂದು ಜಗಲಿಯಲ್ಲಿ ಜಮಾಯಿಸುತ್ತಿದ್ದರು. ಅಪ್ಪ ಅಮ್ಮ ಅವರ ಬಳಿ ದಶಕಗಳ ಹಿಂದಿನ ರಸವಾರ್ತೆಗಳನ್ನು ಮಾತನಾಡಿದ ಮೇಲೆ ಶುರುವಾಗುವುದು ನನ್ನ ಮರ್ಯಾದೆ ಹರಾಜು ಕಾರ್ಯಕ್ರಮ.

ಕೆಲವರು ಅಯ್ಯೋ ನೀನು ಗಳಗಂಟೆ ಬಿಟ್ಕಂಡಿದ್ದಾಗ ನೋಡಿದಿದ್ನಲೋ ಅಂದರೆ, ಇನ್ನುಳಿದವರು ನಾನು ಸಣ್ಣವನಿದ್ದಾಗ ಅಲ್ಲಿಗೆ ಬಂದವನು ಹೇಗೆ ಅವರ ಮನೆ ಹಾಲಿನ ಪಾತ್ರೆಗೆ ಉಚ್ಚೆ ಹೊಯ್ದಿದ್ದೆ, ಹೇಗೆ ಯಾರದೋ ಸೀರೆ ಎಳೆದಿದ್ದೆ, ಅನ್ನದ ಪಾತ್ರೆಗೆ ಬೂದಿ ತುಂಬಿ ಮತ್ತೆ ಅಡುಗೆ ಮಾಡಿಸಿದ್ದೆ ಅನ್ನೋದನ್ನೆಲ್ಲ ಸಾಭಿನಯವಾಗಿ ಹೇಳುತ್ತಿದ್ದರು. ನಾನು ಅವರ ಅಂದಿನ ಅನ್ನಕ್ಕೆ ಕಲ್ಲು ಹಾಕಿದ್ದಕ್ಕೆ ಇಂದು ಸಂಕಟಪಡುತ್ತ ಕೂತಿದ್ದರೆ, ಅಪ್ಪ ಅಮ್ಮಂದಿರು ಅವರ ಜೊತೆಗೇ ನಕ್ಕು ನನ್ನ ಯಾತನೆ ಹೆಚ್ಚು ಮಾಡುತ್ತಿದ್ದರು.

ಆಮೇಲೆ, ತಿಂಡಿ-ತೀರ್ಥ, ಪಾನಕ ಪನಿವಾರಾದಿ ರಿವಾಜುಗಳು. ನಾವು ಕರೆಯೋಕೆ ಹೋದ ಮೊದಲ ಮನೆಯಲ್ಲಿ, ಛೇ, ನಿಂಗ ಬರದು ಮೊದಲೇ ಹೇಳಿದ್ರೆ ಎಂತಾರೂ ಮಾಡ್ಲಾಗಿತ್ತು, ಅರ್ಜೆಂಟಿಗೆ ಶೀರಾ ಮಾಡ್ಕ್ಯ ಬತ್ತಿ ಅಂತಂದ ಮನೆಯೊಡತಿ ರುಚಿಕರ ಗೋಧಿರವೆ ಶಿರಾ ಯಾನೇ ಕೇಸರೀಬಾತನ್ನು ಮಾಡಿ ತಂದಿಟ್ಟಳು. ನಾನೂ ಚೆನ್ನಾಗೇ ತಿಂದೆ. ಪಕ್ಕದಲ್ಲಿದ್ದ ಅಪ್ಪ ಸ್ವಲ್ಪ ತಿಂದರೆ ಸಾಕಿತ್ತೇನೋ ಅಂತ ಗಂಭೀರವಾಗಿ ಹೇಳಿದರು.

ಅಪ್ಪನ ಮಾತಿನರ್ಥ ತಿಳಿಯೋಕೆ, ಮುಂದಿನ ಮನೆಗೆ ಹೋಗಬೇಕಾಯಿತು. ಅಲ್ಲಿ ಉಭಯಕುಶಲೋಪರಿ ಸಾಂಪ್ರತದ ಕೆಲ ಸೀನುಗಳ ನಂತರ ಅರ್ಜೆಂಟಿಗೆ ಶೀರಾ.. ಡೈಲಾಗು ರಿಪೀಟಾಯಿತು. ಅಲ್ಲಿಗೇ ಮುಗಿಯದ ಈ ರಣಭೀಕರ ಅರ್ಜೆಂಟಿಗೆ ಶೀರಾ.. ಅಂದು ನಾವು ಹೋದ ಎಲ್ಲ ಮನೆಗಳಲ್ಲೂ ಮುಂದುವರಿಯಿತು. ನಾನು ಮದುಮಗನಾಗಿರುವುದರಿಂದ, ಸಿಹಿ ತಿನ್ನದೇ ಹೋಗಬಾರದು ಅನ್ನುವ ಕಟ್ಟಪ್ಪಣೆ ಬೇರೆ. ಶೀರಾ ಸಹವಾಸದಿಂದ ರೋಸಿ ಹೋಗಿ, ಸಂಜೆ ಹೊತ್ತಿಗಂತೂ ರವೆ ಹುರಿಯೋ ಘಮಕ್ಕೇ ಹೊಟ್ಟೆಯೆಲ್ಲ ಕಲಸಿ, ವಾಂತಿ ಬರುವ ಹಾಗಾಗಿ ಹೋಗಿತ್ತು.

ಎರಡನೇ ದಿನ ಸಂಜೆಯ ಹೊತ್ತಿಗೆ ಹತ್ತೈವತ್ತು ಮನೆಗಳ ಶೀರಾ, ಖಾರಾ, ಉಪ್ಪಿಟ್ಟು,ಚಿಪ್ಸು ಮತ್ತು ಅಸಂಖ್ಯ ಕಾಪಿ-ಚಹಾ- ಕಷಾಯ ಇತ್ಯಾದಿ ದ್ರವಾಹಾರಗಳನ್ನ ಕುಡಿದ ಹೊಟ್ಟೆ ಪುಟ್ಟಮೋರಿಯಾಗಿತ್ತು. ಆವತ್ತು ಸಂಜೆ ನಮ್ಮ ಮೂಲಮನೆಗೆ ಬಂದು, ದೇವರಿಗೆ ಕಾಯಿ ಇಡೋದು ಇತ್ಯಾದಿ ಕಾರ್ಯಕ್ರಮಗಳನ್ನೆಲ್ಲ ಮುಗಿಸಿ ಕಾಲು ಕಾಚಿ ಕೂತಾಗ ಅಂತೂ ದೊಡ್ಡ ಕೆಲಸ ಮುಗಿದ ಸಮಾಧಾನ.

ಅಪ್ಪನ ಹತ್ತಿರ ಮಾತಾಡಿ, ಕರೆಯಬೇಕಿದ್ದ ಎಲ್ಲರನ್ನೂ ಕರೆದಾಯಿತು ಅಂತ ನಿಕ್ಕೀ ಮಾಡಿಕೊಂಡೆ. ಹಾಗೇ ಮಾತನಾಡುತ್ತ ಅವರು, ಹೋಗೋದಿದ್ದರೆ ಸಣ್ಣಜ್ಜನ ಮನೆಗೊಂದು ಹೋಗಬಹುದಿತ್ತು ನೋಡು ಅಂದರು. ಅಲ್ಲೇ ಸ್ವಲ್ಪ ದೂರದಲ್ಲಿರೋ ಸಣ್ಣಜ್ಜನ ಮನೆ, ನನ್ನ ಬಾಲ್ಯದ ಬೇಸಿಗೆ ರಜೆಯ ಚೇತೋಹಾರಿ ಕ್ಷಣಗಳನ್ನ ಕಳೆದ ಜಾಗ. ಲಿಂಗನಮಕ್ಕಿ ಅಣೆಕಟ್ಟು ಬಂದಿದ್ದರಿಂದ ತಮ್ಮ ೬೦ ಅಂಕಣದ ಮನೆ ಕಳೆದುಕೊಂಡಿದ್ದ ನಮ್ಮ ದೂರದ ಸಂಬಂಧಿ ಸಣ್ಣಜ್ಜ, ಅದರ ಪುಟ್ಟದೊಂದು ಪ್ರತಿರೂಪದಂತಹ ಮನೆಯನ್ನು ಸರ್ಕಾರ ನೀಡಿದ್ದ ಜಾಗದಲ್ಲಿ ಕಟ್ಟಿಕೊಂಡಿದ್ದರು. ಅಲ್ಲಿನ ದೊಡ್ಡ ತೊಲೆಗಳು, ಕತ್ತಲ ಕೋಣೆಗಳು ನನ್ನಲ್ಲಿ ಅಚ್ಚರಿ ಮೂಡಿಸಿದ್ದವು.

ಅಪ್ಪ ಅಮ್ಮನನ್ನು ಮನೆಯಲ್ಲೇ ಬಿಟ್ಟು, ಸಂಜೆಗತ್ತಲಲ್ಲಿ ಹಳೆಯ ನೆನಪಿನ ಜಾಡಲ್ಲೇ ದಾರಿ ಹಿಡಿದು ಹೊರಟೆ. ಸಣ್ಣಜ್ಜನ ಮನೆ ತಲುಪಿ ಒಳನಡೆದರೆ, ಪಡಸಾಲೆ ಖಾಲಿ ಹೊಡೆಯುತ್ತಿತ್ತು. ಕರೆಂಟು ಹೋಗಿತ್ತು. ಒಳಗೆಲ್ಲೋ ಬೆಳಕು ಕಂಡು ನಡೆದೆ. ಅಲ್ಲಿ ವಯಸ್ಸಾದಾಕೆಯೊಬ್ಬರು ಕೂತಿದ್ದರು. ನನ್ನನ್ನ ನೋಡಿ, ಮೆಲ್ಲನೆದ್ದು ಮಬ್ಬು ಬೆಳಕಲ್ಲಿ ಗುರುತು ಹಿಡಿಯಲೆಂದು ಕಣ್ಣು ಕೀಲಿಸಿದರು. ನಾನೇನಾದರೂ ಹೇಳುವ ಮುನ್ನವೇ, ಸುರೇಂದ್ರಾ, ಅಂತೂ ಇವತ್ ಮನಿಗ್ ಬಂದ್ಯನೋ, ಮನೆ ನೆನ್ಪಾತನೋ, ಎಂತಕೋ ನಮ್ನೆಲ್ಲ ಬಿಟ್ಟಿಕ್ಕೆ ಹೋಗಿದ್ದೆ ಅಂತ ಭಾವುಕರಾಗಿ ಮಾತನಾಡುತ್ತ ನನ್ನ ಕತ್ತು ಗಲ್ಲಗಳನ್ನೆಲ್ಲ ಸವರಲು ಆರಂಭಿಸಿದರು. ನನ್ನನ್ನ ಮಾತಾಡೋಕೆ ಬಿಡದೇ, ಹ್ವಾಯ್, ಯಾರ್ ಬೈಂದ ನೋಡಿ ಇಲ್ಲಿ.. ಅಂತ ಕತ್ತಲಲ್ಲೇ ತಡಕಾಡುತ್ತ ಹಿಂದೆಲ್ಲೋ ನಡೆದರು. ಏನಾಗುತ್ತಿದೆ ಅಂತ ಅರ್ಥವಾಗದೇ ನಾನು ಕತ್ತಲಲ್ಲಿ ಕಳೆದುಹೋದವನಂತೆ ನಿಂತಿದ್ದೆ.

ನಿಂಗೆಲ್ಲೋ ಮಳ್ಳು ಅಂತ ಬಂದರು ಸಣ್ಣಜ್ಜ, ಆಕೆ ಅವರ ಹೆಂಡತಿ ಅನ್ನೋದು ತಿಳಿಯಿತು. ನನಗವರ ಗುರುತು ಸಿಕ್ಕಿರಲಿಲ್ಲ. ಸಣ್ಣಜ್ಜ ನನ್ನನ್ನ ನೋಡಿದವರೇ, ನೀ ಯಾರು ಅಂತ ತೆಳದ್ದಿಲ್ಲೆ ಅಂದರು. ನಾನು ಪ್ರವರಗಳನ್ನೆಲ್ಲ ಹೇಳಿದಮೇಲೆ, ಎಮ್ಮನೆ ಶ್ರೀಧರನ ಮಾಣಿಯನೋ ಅಂದು, ಬಾಗಿಲ ಹಿಂದೆ ಮುಸುಮುಸು ಅಳುತಿದ್ದ ಹೆಂಡತಿಯ ಕಿವಿಯಲ್ಲಿ ಇಂವ ಸುರೇಂದ್ರ ಅಲ್ದೇ, ಧರೇಮನೆ ಶ್ರೀಧರನ ಮಗ, ಮದ್ವೆ ಕರಿಯಲೆ ಬೈಂದ ಅಂತ ಗಟ್ಟಿಯಾಗಿ ಹೇಳಿದರು. ಆಕೆ ನನ್ನ ಮುಖವನ್ನು ಮತ್ತೊಮ್ಮೆ ನೋಡಿ, ಖಿನ್ನರಾಗಿ ಒಳನಡೆದರು.

ಆಮೇಲೆ ಸಣ್ಣಜ್ಜ ಹೇಳಿದ ಕಥೆಯೇನೆಂದರೆ, ಅವರ ಒಬ್ಬನೇ ಮಗ ಸುರೇಂದ್ರ ಇಪ್ಪತ್ತು ವರುಷಗಳ ಹಿಂದೆಯೇ ಮನೆ ಬಿಟ್ಟು ಬೆಂಗಳೂರಿಗೆ ಹೋದವನು ತಿರುಗಿ ಬಂದಿಲ್ಲ. ಅಲ್ಲೇ ಹುಡುಗಿ ಹುಡುಕಿಕೊಂಡು, ಮದುವೆಯಾಗಿ, ಮಕ್ಕಳೂ ಆಗಿ ಹಾಯಾಗಿದ್ದಾನೆ. ಅವರ ಮಗ ಮನೆ ಬಿಟ್ಟು ಹೋಗೋ ಹೊತ್ತಿಗೆ ನನ್ನ ಪ್ರಾಯದ ಯುವಕ. ಮಗ ಎಂದಾದರೂ ತಿರುಗಿ ಬರುತ್ತಾನೆಂದರು ನಂಬಿರೋ ಆ ಹೆಣ್ಣು ಹೃದಯಕ್ಕೆ, ಮುಸ್ಸಂಜೆ ಹೊತ್ತಿಗೆ ಬಂದ ನಾನು ಥಟ್ಟನೆ ಮಗನಂತೆಯೇ ಕಂಡಿದ್ದೆ.

ನಾನು ಮದುವೆ ಕರೆಯೋಲೆಯನ್ನ ಅವರ ಕೈಗಿತ್ತು ಬಂದು ಹಾರಯಿಸಿ ಎಂದೆ. ಸಣ್ಣಜ್ಜ, ಬೆಂಗಳೂರಲ್ಲಿಪ್ಪ ಮಗನೇ ತನ್ ಮದ್ವೆಗೆ ನಂಗಳನ್ನ ಕರಿಯಲ್ಲೆ. ನೀ ಬಂದು ನಮ್ಮ ನೆನಪು ಮಾಡ್ಕ್ಯಂಡು ಕರಿತಾ ಇದ್ದೆ ನೋಡು, ಅದೇ ಖುಷಿ ಅಂದರು. ಮಾತು ಭಾರವಾಗಿತ್ತು. ನನ್ನ ಮನಸ್ಸೂ. ಅವರ ಕಾಲಿಗೆ ನಮಸ್ಕರಿಸಿ ಹೊರಟೆ. ಅಷ್ಟು ಹೊತ್ತಿಗೆ ಅಜ್ಜಿ, ನನ್ನ ಮಳ್ ತನಕ್ಕೆ ಬೇಜಾರು ಮಾಡ್ಕ್ಯಳಡ ತಮ್ಮಾ, ಒಳಗ್ ಬಾರೋ, ಅಪರೂಪಕ್ಕೆ ನಮ್ಮನಿಗೆ ಬೈಂದೆ, ಗಡಿಬಿಡಿಲಿ ಶೀರಾ ಮಾಡಿದ್ದಿ. ಸೀ ತಿಂದ್ಕಂಡು ಹೋಗ್ಲಕ್ಕಡ ಬಾ ಎಂದು ಕರೆದರು.

ಮಂದ ಬೆಳಕಲ್ಲಿ ಅಂದು ತಿಂದ ಶೀರಾದ ರುಚಿಯನ್ನು ನಾನು ಇಂದಿಗೂ ಮರೆತಿಲ್ಲ.


ಕನ್ನಡ ಪ್ರಭ- ಅಂಕಿತ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಯುವ ವಿಭಾಗದಲ್ಲಿ ಬಹುಮಾನ ಪಡೆದ ಬರಹ. ನಿನ್ನೆಯ ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ

ಭಾನುವಾರ, ಮೇ 01, 2011

ಜೀವಯಾನವೆಂದರೆ..

ಕಾಲು ಕಾಯುವ ಪಾದರಕ್ಷೆ
ತಿಳಿಸುತ್ತದೆ ನಡೆದು
ಬಂದ ದಾರಿ
ಬೇಡದ ಭೂತಕ್ಕೆ ಹೇಳಿ ವಿದಾಯ
ಓಡಿದರೆ ಕಾಣುವುದು
ವಿಸ್ತಾರ ಹೆದ್ದಾರಿ

ಜೀವನ ಮಿಠಾಯಿ ಡಬ್ಬ
ಸಿಕ್ಕೀತು ಒಂದಲ್ಲ ಒಂದು
ಸಿಹಿ,
ತೆರೆದರೆ ಮುಚ್ಚಳ

ಸುಮ್ಮನೆ ಸಂತೈಸಿದರೆ ಸಿಗುವ
ಶಾಂತಿಗೆ
ಉದ್ದೇಶವಿಲ್ಲದ ಸಹಾಯಕ್ಕೆ
ಸಿಡುಕಿನ ಮುಖಕ್ಕೆ ದೊರಕುವ
ಕಿರುನಗೆಯ ಉತ್ತರಕ್ಕೆ
ಇಲ್ಲ ಯಾವ ನಿಘಂಟಿನಲ್ಲೂ ಅರ್ಥ

ಕಲಿತುಕೊಳ್ಳುತ್ತ ಹೋದರೆ
ಒಂದರ ನಂತರ
ಮತ್ತೊಂದ
ಕಾಣುವುದು ಹೊಳೆವ ತಾರೆಗಳ
ಹೊಸ ಆಕಾಶ

ಜೀವಯಾನ, ಎಲ್ಲ ಸಿದ್ಧತೆಗಳ
ನಂತರದ ಪಯಣ
ಅಥವ, ಸುಮ್ಮಗೆ
ಬೀಸಿದ ಗಾಳಿಗೆ ಹಾರಿದ ಪುಕ್ಕ

ಕೊನೆಗುಳಿಯುವುದು ಮಾತ್ರ
ದಕ್ಕಿದ
ನೆಮ್ಮದಿಗಳ ಲೆಕ್ಕ