ಭಾನುವಾರ, ಮಾರ್ಚ್ 30, 2014

ಭಿನ್ನ ಅನುಭೂತಿ ನೀಡುವ ಉಳಿದವರು ಕಂಡಂತೆ



ಚಿತ್ರ: ಉಳಿದವರು ಕಂಡಂತೆ
ನಿರ್ದೇಶನ: ರಕ್ಷಿತ್ ಶೆಟ್ಟಿ
ತಾರಾಗಣ: ಕಿಶೋರ್, ರಕ್ಷಿತ್ ಶೆಟ್ಟಿ, ಯಜ್ಞಾಶೆಟ್ಟಿ, ರಿಶಭ್, ತಾರಾ
ರೇಟಿಂಗ್- 3.5 Stars


ಉಡುಪಿ, ನನ್ನ ಇಷ್ಟದ ಊರುಗಳಲ್ಲೊಂದು. ಸಣ್ಣವನಿದ್ದಾಗಿನಿಂದಲೂ, ಉಡುಪಿ ಎಂದರೆ ಏನೋ ಒಂದು ಆಕರ್ಷಣೆ. ಕೃಷ್ಣಮಠ, ಮಲ್ಪೆ ಬೀಚು ಮತ್ತಿತರ ಪ್ರವಾಸೀ ಆಕರ್ಷಣೆಗಳಿದ್ದರೂ, ಒಂಥರಾ Sleepy town ಅದು. ತಾನಾಯಿತು, ತನ್ನ ಪಾಡಾಯಿತು ಅಂತ ಇರೋ ಜನ, ಮಧ್ಯಾಹ್ನದ ಮೇಲೆ ಖಾಲಿ ಹೊಡೆಯುವ ರಸ್ತೆಗಳು, ರಥಬೀದಿಯ ಸೋಮಾರೀ ದನಗಳು.. ತೆಂಕಪೇಟೆ ಬಡಗುಪೇಟೆಗಳ ಹಳೆಯ ಕಾಲದ ಅಂಗಡಿ ಸಾಲು.. ಉಡುಪಿಗೆ, ಅದರದೇ ಆದ ಫ್ಲೇವರ್ ಇದೆ. ಹೀಗಾಗಿಯೇ, ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಸಿನಿಮಾವನ್ನು ಉಡುಪಿಯ ಸುತ್ತಮುತ್ತ ಚಿತ್ರೀಕರಿಸುತ್ತಿದ್ದಾರೆ ಎಂದಾಗ, ಸಹಜವಾಗಿಯೇ ಈ ಚಿತ್ರದ ಮೇಲೆ, ನನ್ನ ಆಸಕ್ತಿ ಹೆಚ್ಚಾಗಿತ್ತು.
          ಲೂಸಿಯಾ ಚಿತ್ರದ ನಂತರ, ನಾನು ಸ್ವಲ್ಪ ಹೆಚ್ಚೇ follow ಮಾಡಿದ್ದು ಉಳಿದವರು ಕಂಡಂತೆಯ ಬೆಳವಣಿಗೆಗಳನ್ನು. ಚಿತ್ರದ ಟ್ರೇಲರು, ಆಡಿಯೋ ರಿಲೀಸುಗಳ ಜೊತೆ ಜೊತೆಗೆ ಚಿತ್ರಕ್ಕೆ ಸಂಬಂಧಿಸಿದ ಎಲ್ಲ Updateಗಳನ್ನ ಗಮನಿಸುತ್ತಿದ್ದೆ. ಚಿತ್ರದ ಕಥೆಯ ಬಗ್ಗೆ, ಮತ್ತು Perspective ಮೂಲಕ ಕಥೆಯನ್ನ ಹೇಳ ಹೊರಟ ಬಗ್ಗೆ ಕುತೂಹಲವಿತ್ತು. (ಆದರೆ ಚಿತ್ರದಲ್ಲಿ  Perspective  angle ಇಲ್ಲ. ಕಥೆಯನ್ನ ಬೇರೆ ಬೇರೆ ಘಟನೆಗಳು-ಪಾತ್ರಗಳು ಜೋಡಿಸುತ್ತ ಹೋಗಿ ಪೂರ್ತಿ ಮಾಡುತ್ತವೆ.)
ಉಳಿದವರು ಕಂಡಂತೆ ಚಿತ್ರ, ಒಂದು ಘಟನೆಯ ಸುತ್ತ ಸುತ್ತುತ್ತದೆ. ಆ ಘಟನೆ ಹೇಗಾಯಿತು, ಯಾಕಾಯಿತು, ಯಾರಿಂದ ಆಯಿತು ಎನ್ನುವುದನ್ನ ನಾನ್ ಲೀನಿಯರ್ ಚಿತ್ರಕಥೆಯನ್ನ ಹೊಂದಿರುವ ಆರು ಚಾಪ್ಟರ್ ಗಳ ಮೂಲಕ ಹೇಳಲಾಗಿದೆ. ಟ್ರೇಲರ್ ನೋಡಿ, ಇದೊಂದು fast faced thriller ಅಂದುಕೊಂಡವರಿಗೆ ನಿರಾಶೆ ಕಾದಿದೆ.ಏಕೆಂದರೆ ರಕ್ಷಿತ್ ಶೆಟ್ಟಿ ಇಡಿಯ ಚಿತ್ರದ ಕಥೆಯನ್ನ ಅತ್ಯಂತ ಸಾವಧಾನವಾಗಿ, ಬಿಡಿಸಿ ಬಿಡಿಸಿ, ಪುರುಸೊತ್ತಲ್ಲಿ ಹೇಳಿದ್ದಾರೆ. ಮತ್ತು, ಅದೇ ಚಿತ್ರದ ಹೆಚ್ಚುಗಾರಿಕೆ ಕೂಡ. ಮಚ್ಚು ಕೊಚ್ಚು ವೈಭವೀಕರಣದ, ಅಸಂಬದ್ಧ ಹಾಡುಗಳ, ಅರ್ಥವಿಲ್ಲದ ಸಂಭಾಷಣೆಗಳನ್ನ ಹೊಂದಿರುವ ಚಿತ್ರಗಳು ಸಾಲು ಸಾಲಾಗಿ ಬರುತ್ತಿರುವ ಈ ಕಾಲದಲ್ಲಿ ರಕ್ಷಿತ್ ಇಂಥದ್ದೊಂದು ಕುಸುರಿ ಕೆಲಸಕ್ಕೆ ಕೈ ಹಾಕಿದ್ದು, ನಿಜಕ್ಕೂ ಶ್ಲಾಘನೀಯ.
ಚಿತ್ರದ ಪ್ರತಿಯೊಂದು ಫ್ರೇಂ ಅನ್ನೂ ಕೂಡ ಅತ್ಯಂತ ಸೊಗಸಾಗಿ ನಿರೂಪಿಸಬೇಕೆಂದು ಇಡಿಯ ಚಿತ್ರತಂಡ ಕೆಲಸ ಮಾಡಿದೆ. ಮೀನು ಮಾರುಕಟ್ಟೆಯಿಂದ ಹಿಡಿದು, ಸಣ್ಣ ನದಿಯ ಮೇಲಿನ ಸೇತುವೆ, ಕೆಳಗೆ ದಡದಲ್ಲಿ ಕಾಣುವ ದೋಣಿ, ವಿಟ್ಲಪಿಂಡಿಯ ವೇಷ ಹಾಕಿದ ಹುಡುಗರ ಮುಖದ ಬಣ್ಣ, ಹಂಗಾರಕಟ್ಟೆಯ ಸಮುದ್ರತೀರ, ಧೋ ಎಂದು ಸುರಿವ ಮಳೆಯಲ್ಲಿನ ಹೊಡೆದಾಟ, ಮೋಡ ತುಂಬಿದ ಆಗಸ, ಕೆಳಗೆ ಸಮುದ್ರದಲ್ಲಿನ ಬೋಟು..  ಎಲ್ಲ ವಾರೇ ವ್ಹಾ!. ಸಣ್ಣ ಸಣ್ಣ ಸೂಕ್ಷಗಳನ್ನ ಕೂಡ ರಕ್ಷಿತ್ ಬಿಟ್ಟಿಲ್ಲ. ಸುಮ್ಮನೆ ಒಂದು ನಿಮಿಷ ಬಂದು ಹೋಗುವ ಯಕ್ಷಗಾನದ bit, ಕಥೆಯ ಬೇರನ್ನೇ ಹೇಳುತ್ತದೆ!
ಎರಡು ದಿನಗಳಲ್ಲಿ ನಡೆಯುವ ಕಥೆಯನ್ನ, ಕೆಲ ಫ್ಲಾಶ್ ಬ್ಯಾಕ್ ವಿವರಗಳ ಮೂಲಕ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ರಕ್ಷಿತ್  ಬಹಳ ಜಾಣತನದಿಂದ ಚಿತ್ರಕಥೆ ಹೆಣೆದಿದ್ದಾರೆ. ಪ್ರೇಕ್ಷಕರಿಗೆ ಕೊಂಚ ಗೊಂದಲ ಉಂಟಾಗಬೇಕು, ಯೋಚನೆಗೆ ಒಡ್ಡಬೇಕು ಎಂಬುದೇ ಉದ್ದೇಶವಾಗಿರುವುದರಿಂದ, ನೋಡುಗ ತನ್ನ ಮನದೊಳಗೆ ಕಥೆಯನ್ನ ಜೋಡಿಸಿಕೊಂಡು ನೋಡಬೇಕಾದ್ದು ಅನಿವಾರ್ಯ. ಏನೇ ಇದ್ದರೂ, ಕೊನೆಯ ಹತ್ತು ನಿಮಿಷಗಳಲ್ಲಿ ಎಲ್ಲವನ್ನೂ ನೀಟ್ ಆಗಿ ಉಪಸಂಹಾರ ಮಾಡಲಾಗಿದೆ.
ಇನ್ನು ನಟನೆಯ ಬಗ್ಗೆ ಬಂದರೆ ರಕ್ಷಿತ್, ರಿಷಬ್, ಅಚ್ಯುತ್, ಕಿಶೋರ್, ತಾರಾ ಎಲ್ಲರೂ ಗಮನಸೆಳೆಯುತ್ತಾರೆ. ಚುರುಕು ಮುಟ್ಟಿಸುವ ಒನ್ ಲೈನರ್ ಗಳು, ಲವಲವಿಕೆಯ ಅಭಿನಯದಿಂದ ರಕ್ಷಿತ್ ಶೆಟ್ಟಿ, ಕಣ್ಣಲ್ಲೇ ಮಾತನಾಡುವ ಕಿಶೋರ್, ಹುಲಿವೇಶದ ಬಾಲುವಾಗಿ ಅಚ್ಯುತ್ ಎಕ್ಸಲೆಂಟ್ ಅಭಿನಯ. ಡೆಮಾಕ್ರಸಿಯ ಪಾತ್ರ ಮಾಡಿರೋ ಮಾಸ್ಟರ್ ಸೋಹನ್ ಈ ಚಿತ್ರದ ಅಚ್ಚರಿ. ಯಜ್ಞಾ ಶೆಟ್ರಿಗೆ ಕೆಲಸ ಹೆಚ್ಚಿಲ್ಲ, ಶೀತಲ್ ಪರವಾಗಿಲ್ಲ. ಉಳಿದಂತೆ ಹೆಚ್ಚಿನ ಸ್ಥಳೀಯ ಕಲಾವಿದರು ತಮ್ಮ ಪಾತ್ರವನ್ನು ಸಲೀಸಾಗೇ ನಿಭಾಯಿಸಿದ್ದಾರೆ.
          ಮಧ್ಯಂತರದ ನಂತರ ಚಿತ್ರ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ಮತ್ತೆ ಕಾಣಿಸಿಕೊಳ್ಳುವ ಅದೆಯ ಹಳೆ ಸೀನ್ ಗಳು ಅದಕ್ಕೆ ಕಾರಣ. ಪೇಪರ್ ಪೇಪರ್ ಹಾಡನ್ನೂ ಎಡಿಟ್ ಮಾಡಬಹುದಾಗಿತ್ತು, ಆ ಸಂದರ್ಭದಲ್ಲಿ ಹಾಡು ಬೇಕಿರಲಿಲ್ಲ. ಅದೇ ರೀತಿ ಒಟ್ಟಾರೆಯಾಗಿ ಹುಲಿವೇಷದ ಕುಣಿತದ ಅವಧಿಯೂ ಕಡಿಮೆಯಾಗಬಹುದಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಿಗೆ ಈ ಚಿತ್ರ ಉಳಿದವರಿಗಿಂತ ಹೆಚ್ಚು ಇಷ್ಟವಾಗುತ್ತದೆ. ಬೇರೆ ಪ್ರದೇಶಗಳ ಮಂದಿಗೆ ವೇಗವಾಗಿ ಆಡುವ ಮಾತುಗಳು ಡಬ್ಬಿಂಗ್ ಮಾಡದಿರುವುದರಿಂದ ಸರಿಯಾಗಿ ಅರ್ಥವಾಗದೇ ಹೋಗಬಹುದೇನೋ. ನನಗಂತೂ ಅರ್ಥವಾಗಲಿಲ್ಲ ಅನ್ನಿಸುವ ಒಂದು ಡೈಲಾಗೂ ಇರಲಿಲ್ಲ!   
          ಕರಮ್ ಚಾವ್ಲಾ ಛಾಯಾಗ್ರಹಣ ಚಿತ್ರದ ಹೀರೋ ಅಂದರೆ ತಪ್ಪಾಗಲಾರದು. ಅಜನೀಶ್ ಲೋಕನಾಥ ಹಿನ್ನೆಲೆ ಸಂಗೀತ ಸೂಪರ್. ಅವರ ಪ್ರತಿಭೆಯನ್ನ ಅರಿಯಲು ’ನಿಮಿತ್ತ’ ಚಾಪ್ಟರ್ ನ ಫೈನಲ್ ಶೋ ಡೌನ್ ಒಂದೇ ಸಾಕು. ಘಾಟಿಯಾ ಇಳಿದು, ಕಣ್ಣಾ ಮುಚ್ಚೇ, ಕಾಕಿಕ್ ಬಣ್ಣ ಕಾಂತಾ  ಹಾಡುಗಳು ಚೆನ್ನಾಗಿವೆ. ಅವುಗಳನ್ನ ಚಿತ್ರದಲ್ಲಿ ಬಳಸಿಕೊಂಡ ರೀತಿಯೂ.
ಕೊನೆಯ ಮಾತು: ಚಿತ್ರವನ್ನ ಇನ್ನೂ 10-15 ನಿಮಿಷ ಎಡಿಟ್ ಮಾಡಬಹುದಾಗಿತ್ತು. ಈಗಲೂ ರಕ್ಷಿತ್ ಈ ಬಗ್ಗೆ ಗಮನ ಹರಿಸಬಹುದು. ಅಷ್ಟಾಗಿಯೂ, ತಾಳ್ಮೆ ಮತ್ತು ಪ್ರೀತಿಯಿಂದ ಆಸ್ವಾದನೆ ಮಾಡುವವರಿಗಾಗೇ ಈ ಚಿತ್ರ ಇರೋದು. ’ನೋಡುವ’ ಸಿನಿಮಾ ಕಾಡಬೇಕೆಂಬ ಹಂಬಲ ಇದ್ದರೆ, ನಿಮ್ಮನ್ನ ನೀವು ವಿಭಿನ್ನ ಅನುಭೂತಿಗೆ ಒಳಪಡಿಸಿಕೊಳ್ಳಬೇಕೆಂದಿದ್ದರೆ, ಉಳಿದವರು ಕಂಡಂತೆ  ಚಿತ್ರವನ್ನು ತಪ್ಪದೇ ನೋಡಿ.