ಮಂಗಳವಾರ, ಡಿಸೆಂಬರ್ 23, 2008

ಹ್ಯಾಪಿ ಕ್ರಿಸ್ ಮಸ್!

ಅಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು ಎಂದಿಗೂ ಮರೆತು ಹೋಗಲಾರದಂತಹವಾಗಿದ್ದವು.ಹಾಗಾಗಿಯೇ ಅವಳು ತಾನು ಕಂಡ- ಅನುಭವಿಸಿದನ್ನು ಕತೆಗಳ ರೂಪದಲ್ಲಿ ಮಕ್ಕಳಿಗಾಗಿ ಪ್ರೀತಿಯಿಂದ ಬರೆದಳು. ಮತ್ತು ಅವು ಅವಳಿಗೇ ಅಚ್ಚರಿ ತರುವಷ್ಟು ಬೇಗ ಜಗತ್ ಪ್ರಸಿದ್ಧವಾಗಿಬಿಟ್ಟವು. ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾದವು ಮತ್ತು ಇಂದಿಗೂ ಅನುವಾದಗೊಳ್ಳುತ್ತಲೇ ಇವೆ. ಆಕೆಯ ಹೆಸರು ಲಾರಾ ಇಂಗಲ್ಸ್ ವೈಲ್ಡರ್ ಮತ್ತು ಅವಳು ಬರೆದಿದ್ದು,"ಲಿಟಲ್ ಹೌಸ್"- ಕಥಾ ಸರಣಿಯನ್ನು.

ಲಾರಾ ಹುಟ್ಟಿದ್ದು 1867ರಲ್ಲಿ, ಅಮೆರಿಕದಲ್ಲಿ. ಅಕೆಯ ಬಾಲ್ಯ ಅಮೆರಿಕದ - ಪ್ರಾಂತದ ಕಾಡುಗಳ ಮಧ್ಯದ ಮನೆಯಲ್ಲಿ ಕಳೆಯಿತು. ಅಲ್ಲಿನ ಜನಪದ ಸಂಸ್ಕೃತಿ ಮತ್ತು ಕಿನ್ನರ ಲೋಕಕ್ಕೆ ಸಮ ಎನಿಸುವ ವಾತಾವರಣದಲ್ಲಿ ಲಾರಾ ಬೆಳೆದಳು.ಮುಂದೆ, ಬಹಳ ಕಾಲ ಕಳೆದ ಮೇಲೆ, ಅಮೆರಿಕ ಅಭಿವೃದ್ಧಿಯ ಭರದಲ್ಲಿ ತನ್ನ ಹಳೆಯದೆಲ್ಲವನ್ನು ಕಳೆದುಕೊಂಡು ಸಾಗುತ್ತಿದ್ದಾಗ ಆಕೆಗೆ ತನ್ನ ಬಾಲ್ಯದ ಸೊಗಸನ್ನು ಇಂದಿನ ಪೀಳಿಗೆಯ ಮಕ್ಕಳ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು.

ಹೀಗಾಗಿ, ಮೊದಲಿಗೆ, 1932ರಲ್ಲಿ, ಲಿಟಲ್ ಹೌಸ್ ಇನ್ ದಿ ಬಿಗ್ ವುಡ್ಸ್- ಅನ್ನುವ ಮಕ್ಕಳ ಕಾದಂಬರಿ ಬರೆದಳು. 1870 ಮತ್ತು 1880 ದಶಕದ ಅಮೇರಿಕ ಹೇಗಿತ್ತು- ಅಂದಿನ ಜೀವನ ಶೈಲಿ ಹೇಗಿತ್ತೆನ್ನುವುದನ್ನು ಲಾರಾ- ಬಾಲ್ಯ ಕಾಲದ ಲಾರಾನ ಮೂಲಕವೇ ಕಥೆಯಲ್ಲಿ ಹೇಳಿಸಿದಳು.

ಲಾರಾ, ಅವಳ ಅಪ್ಪ, ಅಮ್ಮ,ಅಕ್ಕ ಮತ್ತು ತಂಗಿ ಮಾತ್ರ ಒಂದು ಮರದ ದಿಮ್ಮಿಗಳನ್ನು ಜೋಡಿಸಿ ಮಾಡಿದ ಮನೆಯಲ್ಲಿ- ವಿಸ್ಕಾನ್ಸಿನ್ ಎಂಬ ಕಾಡಿನಂಚಿನಲ್ಲಿ ವಾಸಮಾಡುವ ಕಥೆ ಅದು. ಅಕೆಗೆ ತಿಳಿದ ಹಾಗೆ ಅಲ್ಲಿ ಸುತ್ತ ಮುತ್ತ ಯಾರೂ ವಾಸ ಮಾಡುವುದಿಲ್ಲ.ಮನೆಯ ಸುತ್ತು ಉದ್ದನೆಯ ಕರಿಯ ಮರಗಳಷ್ಟೇ ಕಾಣುತ್ತವೆ - ಮನುಷ್ಯರ ಸುಳಿವಿಲ್ಲ. ಯಾವಾಗಾದರೂ ವಿಶೇಷ ಸಂದರ್ಭಗಳಲ್ಲಿ -ಅಪರೂಪಕ್ಕೊಮ್ಮೆ ಬಂಡಿಯಲ್ಲಿ ಬರುವ ನೆಂಟರು ಬಿಟ್ಟರೆ ಬೇರಾರೂ ಬರುವುದೂ ಇಲ್ಲ.

ಅಪ್ಪನ ಶಿಕಾರಿ, ಅಮ್ಮನ ರುಚಿರುಚಿ ಅಡುಗೆ, ಅಕ್ಕನ ಜೊತೆಗಿನ ಕಲಿಕೆ, ಭಾನುವಾರಗಳ ಪ್ರಾರ್ಥನೆ ಮತ್ತು ಕಲಿಕೆ, ಲಾರಾ ಮತ್ತವಳ ಗೊಂಬೆ, ಚಳಿಗಾಲದ ದಿನಗಳ ಮಂಜಿನ ಹೊದಿಕೆಗಳು- ಹೀಗೆ ತನ್ನ ಸುತ್ತ ಕಂಡಿದನ್ನು ಲಾರಾ ತನ್ನ ಬಾಲ್ಯ ಸಹಜ ಕುತೂಹಲದೊಡನೆ ವಿವರಿಸುತ್ತ ಹೋಗುತ್ತಾಳೆ. ಓದುತ್ತ ಕುಳಿತ ಯಾರೇ ಆದರೂ, ಮೆಲ್ಲ ಮೆಲ್ಲನೆ ಅಮೆರಿಕೆದ, ಕಾಲದ- ಮರದ ದಿಮ್ಮಿಯ ಮನೆಯೊಳಕ್ಕೇ ಮೆಲ್ಲನೆ ಹೊರಟುಬಿಡುವಂತೆ ಮಾಡುವ ಮಾಯಾ ಶಕ್ತಿ ಬರಹದಲ್ಲಿದೆ.

ಹೀಗಾಗಿ ಪುಟ್ಟ ಹುಡುಗಿಯೊಬ್ಬಳು ತನ್ನ ಬೆರಗುಗಣ್ಣುಗಳಲ್ಲಿ ತನ್ನೆದುರಿನ ಜಗತ್ತನ್ನ ನೋಡಿ - ಅಪ್ಪ ಅಮ್ಮ- ಹೊರಗಿನ ಕಾಡು- ಪೇಟೆ-ಶಿಕಾರಿಗಳನ್ನು ವರ್ಣಿಸುತ್ತ ಹೋಗುವ ಆಕೆಯ ಮೊದಲ ಕಾದಂಬರಿಗೇ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಅಮೇಲೆ, 1943 ವರೆಗೆ ಒಟ್ಟು ಎಂಟು ಪುಸ್ತಕಗಳನ್ನು ಲಾರಾ ಬರೆದಳು. ಲಿಟಲ್ ಹೌಸ್ ಇನ್ ದಿ ಪ್ರೈರಿ, ಆನ್ ಬ್ಯಾಂಕ್ ಆಫ್ ಪ್ಲಮ್ ಕ್ರೀಕ್.. ಹೀಗೆ. ಪುಸ್ತಕಗಳೆಲ್ಲ ಅಮೆರಿಕದ ಮಕ್ಕಳಿಗಷ್ಟೇ ಅಲ್ಲ- ದೊಡ್ಡವರಿಗೂ ಹುಚ್ಚು ಹಿಡಿಸಿತು. ಕಾಲದಲ್ಲೇ ಜಗತ್ತಿನ ಇತರ ಭಾಷೆಗಳಿಗೂ ಸರಣಿ ಅನುವಾದಗೊಂಡಿತು.

ಲಾರಾ ಇಂಗಲ್ಸ್ ವೈಲ್ಡರ್ ಇರುವ ಮನೆ ಕೂಡ ಆವಾಗಲೇ ಪ್ರವಾಸೀ ತಾಣವಾಗಿ ಬಿಟ್ಟಿತು. ಲಾರಾ ತನ್ನ ತೊಂಬತ್ತರ ತುಂಬು ವಯಸ್ಸಿನಲ್ಲಿ ತೀರಿಕೊಂಡ ನಂತರ ಅವಳಿದ್ದ ಮನೆಯನ್ನು ಸ್ಮಾರಕವಾಗಿಸಲಾಯಿತು. ಇಂದಿಗೂ ಕೂಡ ಲಾರಾಳ ಮನೆಗೆ ಪ್ರವಾಸಿಗರು ತೆರಳುತ್ತಾರೆ. ಮತ್ತು ಅಕೆ ಬರೆದ ಪುಸ್ತಕಗಳನ್ನು ಜಗತ್ತಿನಾದ್ಯಂತ ಇವತ್ತಿಗೂ ಓದುತ್ತಿದ್ದಾರೆ.

ಈಗ ಯಾಕೆ ಈಕೆ ನೆನಪಾದಳು ಅನ್ನುತ್ತೀರಾ? ಲಾರಾ ಇಂಗಲ್ಸ್ ಬರೆದಿರುವ ಸರಣಿಯ ಮೊದಲ ಪುಸ್ತಕದಲ್ಲೇ, ಆಕೆ ಕ್ರಿಸ್ಮಸ್ ಸಮಯದ ಚಳಿಗಾಲವನ್ನು ವರ್ಣಿಸುತ್ತಾಳೆ. ಲಾರಾ ಇಂಗಲ್ಸ್ ವೈಲ್ಡರ್ ಕೃತಿಗಳನ್ನು ಕನ್ನಡಕ್ಕೆ ಬಹಳ ಹಿಂದೆಯೇ ಅನಂತ ನಾರಾಯಣ ಅವರು ಅನುವಾದಿಸಿದ್ದಾರೆ. ಅವರದೇ ಅನುವಾದದ, ದೊಡ್ಡ ಕಾಡಿನಲ್ಲಿ ಪುಟ್ಟ ಮನೆ ಕೃತಿಯಿಂದ ಒಂದೆರಡು ಪ್ಯಾರಾಗಳು ನಿಮಗಾಗಿ.

"ಕ್ರಿಸ್ಮಸ್ ಹತ್ತಿರವಾಯಿತು.

ಪುಟ್ಟ ಮರದ ದಿಮ್ಮಿಗಳ ಮನೆ ಈಗ ಹಿಮದ ರಾಶಿಯಲ್ಲಿ ಹೂತು ಹೋಗಿತ್ತು. ಹಿಮದ ಗಾಳಿಯು ಗೋಡೆಗಳು ಮತ್ತು ಕಿಟಕಿಗಳಿಗೆ ಹೊಡೆದು ಅಲ್ಲಿ ಹಿಮದ ಗುಡ್ಡೆಗಳಾಗಿದ್ದವು. ಬೆಳಗ್ಗೆ ಪಾ ಮುಂಬಾಗಿಲು ತೆರದರೆ ಅಲ್ಲಿ ಲಾರಾಳ ತಲೆಯ ಸಮಕ್ಕೆ ಮಂಜಿನ ಗೋಡೆ. ಪಾ ಅಗ ಗುದ್ದಲಿ ತೆಗೆದುಕೊಂಡು ಅದನ್ನೆಲ್ಲ ಬಾಚಿ ತೆಗೆದು ಕಡೆ ಹಾಕುವನು. ಅಲ್ಲಿಂದ ಅವನು ಕೊಟ್ಟಿಗೆಗೆ ಹೋಗುವ ದಾರಿಯಲ್ಲಿನ ಮಂಜನ್ನೂ ಎತ್ತಿ ಹಾಕಿದ. ಅಲ್ಲಿ ದನಗಳೂ, ಕುದುರೆಗಳೂ ಬೆಚ್ಚಗೆ ನೆಮ್ಮದಿಯಾಗಿರುತ್ತಿದ್ದವು.

ಹಗಲೆಲ್ಲ ಹೊಳೆಯುತ್ತಿತ್ತು, ತಿಳಿಯಾಗಿರುತ್ತಿತ್ತು. ಕಿಟಕಿಯ ಪಕ್ಕದ ಕುರ್ಚಿಯ ಮೇಲೆ ನಿಂತು ಲಾರ, ಮೇರಿ ಹೊರಗೆ ಹೊಳೆಯುವ ಮರಗಳ ಮೇಲೆ ಹೊಳೆಯುವ ಮಂಜನ್ನು ನೋಡುತ್ತಿದ್ದರು. ಮರಗಳ ಬತ್ತಲೆ ಕರಿಯ ಕೊಂಬೆಗಳ ಮೇಲೆಲ್ಲಾ ಮಂಜು ದಟ್ಟವಾಗಿ ಬಿದ್ದಿತ್ತು, ಅದು ಸೂರ್ಯನ ಬೆಳಕಲ್ಲಿ ಹೊಳೆಯುತ್ತಿತ್ತು. ಮಂಜಿನ ಹರಳುಗಳು ಮನೆಯ ಛಾವಣಿಯ ಅಂಚಿಂದ, ಕೆಳಗೆ ಬಿದ್ದ ಮಂಜಿನ ರಾಶಿಯವರೆಗೆ ಇಳಿಬಿದ್ದಿದ್ದವು, ಇಳಿ ಹಳುಕುಗಳಂತೂ ಲಾರಾಳ ರಟ್ಟೆ ಗಾತ್ರದವು! ಅವು ಗಾಜಿನ ಹಾಗಿದ್ದು, ಹೊಳೆ ಬೆಳಕನ್ನು ಚೆಲ್ಲುತ್ತಿದ್ದವು.

ಕೊಟ್ಟಿಗೆಯಿಂದ ಪಾ ಹಿಂದಿರುಗಿದಾಗ ಅವನ ಉಸಿರು ಗಾಳಿಯಲ್ಲಿ ಹೊಗೆಯಂತೆ ಹಾಗೆಹಾಗೆಯೇ ನಿಲ್ಲುತ್ತಿತ್ತು, ಉಸಿರು ದಟ್ಟ ಮೋಡದಂತೆ ಬಾಯಿಂದ ಬಂದು ಅವನ ಗಡ್ಡ ಮೀಸೆಗಳ ಮೇಲೆ ಹೆಪ್ಪುಗಟ್ಟಿ ಹಿಮದ ಬಿಳಿ ಹಳಕುಗಳಾಗಿ ಅಂಟಿಕೊಳ್ಳುತ್ತಿತ್ತು.

ಪಾ ಒಳಕ್ಕೆ ಬಂದು , ತನ್ನ ಬೂಟ್ಸಿಗೆ ಅಂಟಿಕೊಂಡಿದ್ದ ಮಂಜನ್ನು ಜಾಡಿಸಿ, ಲಾರಾಳನ್ನು ಬಿಗಿಯಾಗಿ ತಬ್ಬಿಗೊಂಡಾಗ, ಅವನ ಮೀಸೆಯ ಮೇಲಿನ ಮಂಜಿನ ಹಳಕುಗಳು ಕರಗಿ ಹನಿಯಾಗಿ ಉದುರುತ್ತಿದ್ದವು"

ಎಲ್ಲರಿಗೂ ಹ್ಯಾಪಿ ಕ್ರಿಸ್ ಮಸ್!

ಸೋಮವಾರ, ಡಿಸೆಂಬರ್ 15, 2008

ಮಾಯಾ ಬಜಾರ್!

ಆವತ್ತೊಂದಿನ ರಾಘವೇಂದ್ರ ಹೆಗ್ಡೆ ರಾತ್ರಿ ಒಂಬತ್ತೂವರೆಗೆ ಫೋನ್ ಮಾಡಿ," ನೋಡೋ ರಂಗಶಂಕರದಲ್ ಈಗ್ ೧೧ ಗಂಟಿಂಗೊಂದ್ ಸ್ಪೆಶಲ್ ಶೋ ಇದ್ದು, ಮಾಯಾಬಜಾರ್ ನಾಟ್ಕ" ಅಂದ. ರಂಗಶಂಕರದಲ್ಲಿ ರಾತ್ರಿ ೧೧ ಗಂಟೆಗೆ ನಾಟ್ಕ ಅಂದ್ ಮೇಲೆ ಚನಾಗೇ ಇರಬೇಕು ಅಂದಕೊಂಡು ಜೈ ಅಂದೆ ಅವನ ಹತ್ರ. ಹತ್ತೂ ಮುಕ್ಕಾಲರ ಹೊತ್ತಿಗೆ ರಂಗಶಂಕರದೆದುರು ಹೋಗಿ ನೋಡಿದರೆ ಜನವೋ ಜನ! ಸುಮಾರು ೨೫೦ ಜನ ಆಗಲೇ ಕ್ಯೂ ಹಚ್ಚಿದ್ದಾರೆ!



ತೆಲುಗು ನಾಟಕ ಅಂತೆ, ಚೆನ್ನಾಗಿ ಮಾಡುತ್ತಾರಂತೆ ಅಂತ ಅಲ್ಲಿದ್ದವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ನಾನೂ, ಹೆಗ್ಡೆಯೂ ಸಂದೀಪನೂ ಹೋಗಿ ಕೂತೆವು. ಮೊದಲ ಸೀನೇ ನಾರದ ಆಕಾಶದಿಂದ ಇಳಿದು ಬಂದ. ಆಮೇಲಾಮೇಲಂತೂ ಬಿಡಿ! ತೀರಾ ನಾವ್ ಸಿನಿಮಾದಲ್ಲಿ ಮಾತ್ರ ನೋಡಲು ಸಾಧ್ಯ ಅಂದುಕೊಂಡ ಸೀನುಗಳೆಲ್ಲ ಕಣ್ಣೆದುರು! ಮಾಯಾ-ಮಂತ್ರ-ಛೂ ಮಂತರ್! ನಮ್ಮ ಕಣ್ಣುಗಳನ್ನೇ ನಮಗೆ ನಂಬಲಾಗದ ಸ್ಥಿತಿ. ನಾಟಕ ಮುಗಿದ ಮೇಲೆ ಅಕ್ಷರಶಃ ೧೫ ನಿಮಿಷ ಚಪ್ಪಾಳೆ ಹೊಡೆದೆವು- ರಾತ್ರೆ ಒಂದೂ ಮುಕ್ಕಾಲಿಗೆ! ಮೈಗೆಲ್ಲ ಬಣ್ಣ ಬಳಿದುಕೊಂಡು,ದಿನದಲ್ಲಿ ಮೂರನೇ ಬಾರಿಗೆ ರಾತ್ರಿ ೧೧ಕ್ಕೂ ಸ್ವಲ್ಪ ಆಯಾಸ ತೋರಿಸಿಕೊಳ್ಳದೇ ನಾಟಕ ಪ್ರದರ್ಶಿಸಿದ ತಂಡಕ್ಕೆ ನಮ್ಮ ಅಭಿನಂದನೆ ಕಡಿಮೆಯೇ ಅನ್ನಿಸಿತು.




















ಬೇಕೆಂದೇ ನಾಟಕದ ಇತರ ವಿವರಗಳನ್ನು ಇಲ್ಲಿ ನೀಡುತ್ತಿಲ್ಲ. ಮತ್ತೆ ಮಾಯಾಬಜಾರ್ ರಂಗಶಂಕರಕ್ಕೆ ಬರುತ್ತಿದೆ. ಡಿಸೆಂಬರ್ ೨೫ರಂದು ಮಾಯಾ ಬಜಾರ್ ನ ಮೂರು ಪ್ರದರ್ಶನಗಳಿರುತ್ತವೆ. ಖಂಡಿತಾ ಬನ್ನಿ ಈ ನಾಟಕಕ್ಕೆ. ನಾನಂತೂ ಹೋಗುತ್ತಿದ್ದೇನೆ.

ಇವತ್ತೇ ರಂಗಶಂಕರಕ್ಕೆ ಹೋದರೆ ಟಿಕೆಟ್ ಲಭ್ಯ. ಡಿಸೆಂಬರ್ ೨೪ಕ್ಕೆ ಇದೇ ತಂಡ ಜೈ ಪಾತಳ ಭೈರವಿ ನಾಟಕವನ್ನೂ ಪ್ರದರ್ಶಿಸುತ್ತಿದೆ.


ಒಂದು ಕುಟುಂಬವೇ ನಾಟಕ ತಂಡವಾಗಿರುವ "ಸುರಭಿ" ಬಗ್ಗೆ ಮತ್ತು ನಾಟಕದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.




ಚಿತ್ರ ಕೃಪೆ:ರಂಗಶಂಕರ

ಮಂಗಳವಾರ, ಡಿಸೆಂಬರ್ 02, 2008

ನಾನೂ ಜೊತೆಗಿದ್ದೇನೆ.

ನೀಲಾಂಜಲ ಬ್ಲಾಗೊಡತಿಯ ನಿರ್ಧಾರಕ್ಕೆ ನನ್ನ ಸಹಮತವಿದೆ.

ಭಯೋತ್ಬಾದನೆಯ ಪ್ರತಿಭಟನೆಗೆ ನಮ್ಮ ಪುಟ್ಟ ಹೆಜ್ಜೆ ಇದಾಗಿರಬಹುದು, ಆದರಿದು ಸರಿಯಾದ ಹೆಜ್ಜೆ ಅನ್ನುವುದು ವಿದಿತ. ನನ್ನ ಬ್ಲಾಗಿನ ತಲೆಪಟ್ಟಿ ಕಪ್ಪಾಗಿದೆ.

ಭಾನುವಾರ, ನವೆಂಬರ್ 30, 2008

ಮಕ್ಕಳ ಮಾಯಾಲೋಕ - ನುಡಿಸಿರಿ














































ಚಿತ್ರಗಳು- ದಯಾನಂದ ಕುಕ್ಕಾಜೆ

ಶನಿವಾರ, ನವೆಂಬರ್ 29, 2008

ನುಡಿಸಿರಿಯ ಚಿತ್ರಗಳು

ನುಡಿಸಿರಿಯ ಚಿತ್ರಗಳಿಗಾಗಿ:

ಆಲ್ಬಮ್ - ಒಂದು
ಆಲ್ಬಮ್- ಎರಡು
ಆಲ್ಬಮ್- ಮೂರು

ನಿಸಾರ್ ಸಾರ್ ಮತ್ತು ಹೊಸ ಗೆಟಪ್ಪು!

ನಿತ್ಯೋತ್ಸವ ಕವಿ ನಿಸಾರ್ ಅಹಮದ್, ಯಾವತ್ತೂ ಸೂಟು ಬೂಟಿಂದ ಹೊರಗೆ ಬಂದವರಲ್ಲ. ಮಳೆಯಿರಲಿ- ಬಿಸಿಲಿರಲಿ. ಆದರೆ ಆ ಬಾರಿ ಆಳ್ವಾಸ್ ನುಡಿಸಿರಿಯಲ್ಲಿ ಅವರು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ, ಸಾರ್ವಜನಿಕವಾಗಿ ಹೊಸ ವೇಷ ಭೂಷಣದಲ್ಲಿ ಕಾಣಿಸಿಕೊಂಡರು( ಅವರೇ ಹೇಳಿದ್ದು) ಮತ್ತು ಹೀಗೆ ಮಾಡಿಸಿದ್ದಕ್ಕೆ ಮೋಹನ ಆಳ್ವರಿಗೆ ಭೇಷ್ ಅಂದರು.





ಶುಕ್ರವಾರ, ನವೆಂಬರ್ 28, 2008

ಕಾಯ್ಕಿಣಿ ಹೇಳಿದ ಕಥೆಗಳು..


ಎಂದಿನಂತೆ ಈ ಬಾರಿಯೂ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿದ್ದೇನೆ. ನಾನೋದಿದ ಸಂಸ್ಥೆ ಅನ್ನುವ ಕಾರಣವೋ, ಅಥವ ನುಡಿಸಿರಿಯ ಜಾದುವೇ ಅಂತದ್ದೋ, ಇಲ್ಲಿಗೆ ಬಂದೇ ಬರುತ್ತೇನೆ- ಪ್ರತಿ ನುಡಿಸಿರಿಗೂ. ಈ ಬಾರಿ ವಿದ್ಯಾಗಿರಿಯ ನುಡಿಸಿರಿಗೆ ಜುಮುರು ಮಳೆ ಕೂಡ ಸಾಥ್ ನೀಡಿದೆ. ಆ ಮಳೆಯ ಮಧ್ಯೆಯೇ, ಈ ಸಂಜೆ ಕಾಯ್ಕಿಣಿ ಚಂದ ಮಾತನಾಡಿದರು.

ಅದಕ್ಕೊಂದು ಒಂದು ವರದಿಯ ಥರದ ಬರಹ:


ಆಳ್ವಾಸ್ ನುಡಿಸಿರಿಯ ರತ್ನಾಕರ ವರ್ಣಿ ವೇದಿಕೆಯೆದುರಿನ ಜನ ಜಯಂತ ಕಾಯ್ಕಿಣಿಯವರ ಮಾತುಗಳಿಗೆ ಸಂಜೆ ಮಳೆಯ ಮಧ್ಯೆ ಮರುಳಾದರು. ಕಥಾ ಸಮಯ ಅನ್ನುವ ವಿಭಾಗದಡಿ ಕಾಯ್ಕಿಣಿ ಮಾತನಾಡಿದರು. ಕಥೆ ಎಂದರೇನು, ಕಥೆ ಬರೆಯೋದು ಸುಲಭಾನಾ ಅಂತೆಲ್ಲ ಮಾತನಾಡುತ್ತ ಜಯಂತರು ಮೂರು ಘಟನೆಗಳನ್ನು ನಮ್ಮ ಮುಂದಿಟ್ಟರು.


ಮರುಳ ಅನ್ನುವವನೊಬ್ಬ ಗೋಕರ್ಣದಲ್ಲಿದ್ದ. ಪ್ರತಿ ದಿನ ಬೆಳಗ್ಗೆ ಬೇಗ ಎದ್ದವನೇ, ಪೂರ್ವ ದಿಕ್ಕಿಗೆ ಮುಖ ಮಾಡಿ, "ಬಾರೋ, ಬಾರೋ" ಅಂತ ಕಿರುಚುತ್ತಿದ್ದ. ಅವನ ಕಿರುಚುವಿಕೆ ಕಡಿಮೆಯಾಗುತ್ತಿದ್ದುದ್ದು ಸೂರ್ಯ ಮೂಡಿದ ಮೇಲೆಯೇ. ಅಂತೆಯೇ, ಸಂಜೆಯಾಗುತ್ತಿದ್ದ ಹಾಗೆ ಸಮುದ್ರ ತಟಕ್ಕೆ ತೆರಳಿ, "ಹೋಗೋ ಹೋಗೋ ಕತ್ತೆ, ಹಂದಿ" ಅಂತೆಲ್ಲ ಸೂರ್ಯನನ್ನು ನೋಡಿ ಬೈಯುತ್ತಿದ್ದ. ಸೂರ್ಯ ತೆರಳಿದ ಘಳಿಗೆ ಏನೋ ಸಾಧಿಸಿದ ನೆಮ್ಮದಿ.

ಒಂದು ದಿನ ನಾನು ಮನೆಗೆ ಹೋಗುತ್ತಿದ್ದೆ.ಮುಂಬೈನ ಯಾವುದೋ ರೈಲ್ವೇ ನಿಲ್ದಾಣ. ರೈಲು ಹಳಿಗೆ ಸಿಕ್ಕು ಯಾರೋ ಛಿದ್ರ. ಆ ಶವದ ರುಂಡವನ್ನು ಕೈಲಿ ಎತ್ತಿಕೊಂಡು ಹೋಗುತ್ತಿದ್ದಾತ, ನನ್ನನ್ನು ನೋಡಿ, " ಜಬ್ ಝಿಂದಾ ತಾ, ಭಂಗೀ ಕೋ ಗಾಲೀ ದೇತಾ ಹೋಗಾ" ಅಂದು ತೆರಳಿದ.
(ಭಂಗೀ ಅಂದರೆ ಕೀಳು ಜಾತಿ)

ಒಂದಿಷ್ಟು ಜನ ಹದಿಹರೆಯದ ಹುಡುಗಿಯರು ಗುಂಪುಗುಂಪಾಗಿ ಏನೇನೋ ಹರಟುತ್ತ, ನಗುತ್ತ ದಾರಿ ಸಾಗಿಸುತ್ತಿದ್ದರು. ಎಲ್ಲಿದ್ದಳೋ ಗೊತ್ತಿಲ್ಲ, ಅವರೆದುರು ಹುಚ್ಚಿಯೊಬ್ಬಳು ಪ್ರತ್ಯಕ್ಷವಾಗಿ ಗುರಾಯಿಸಿದಳು. ಹುಡುಗಿಯರೆಲ್ಲ ಹೆದರಿ ದಿಕ್ಕಾಪಾಲು. ಅಲ್ಲಿದ್ದ ಮತ್ಯಾರೋ ನಕ್ಕರು. ಆವಾಗ ಹುಚ್ಚಿ ಅಂದಳಂತೆ,
"ಸಾರೀ ದುನಿಯಾ ಮೇರೇ ಕಪಡೇ ಪೆಹನ್ ಕೇ ಘೂಮ್ತೀ ಹೈ, ಔರ್ ಮುಝ್ ಪೇ ಹೀ ಹಸ್ತೀ ಹೈ"

ಮಂಗಳವಾರ, ನವೆಂಬರ್ 18, 2008

ಹಳೆಯ ಧಾರಾವಾಹಿಗಳ ನೆನೆದು..

ನಮ್ಮ ಮನೆಗೆ ಟಿ.ವಿ ಬಂದಿದ್ದು, ನಾನು ಮೂರನೇ ಕ್ಲಾಸಲ್ಲಿದ್ದಾಗಲೇ. ಅ ಮಟ್ಟಿಗೆ ನಾನು ಪುಣ್ಯವಂತ ಎಂತಲೇ ಅನ್ನಬಹುದು. ಏಕೆಂದರೆ ಅ ಕಾಲಕ್ಕೆ- ನನ್ನ ಹೆಚ್ಚಿನ ಕ್ಲಾಸ್ ಮೇಟುಗಳ ಮನೆಗಳಲ್ಲಿ ಟಿ.ವಿ. ಇರಲಿಲ್ಲ, ಮತ್ತು ನಾನು ದಿನಾ ಬಂದು ಹೇಳುತ್ತಿದ್ದ ದೂರದರ್ಶನದ ಕಥೆಗಳನ್ನು ನನ್ನ ಮಿತ್ರರು ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರು, ಸತ್ಯ ಹೇಳಬೇಕೆಂದರೆ ಆ ಕಥೆಗಳು- ನಾನು ಬಾಯಿ ಬಿಟ್ಟುಕೊಂಡು ಟೀವಿಯನ್ನ ಏನೂ ಅರ್ಥವಾಗದೇ ಸುಮ್ಮನೇ ದಿಟ್ಟಿಸುತ್ತಿದ್ದಾಗ ಪಾಪ ಅನ್ನಿಸಿ, ಅಥವಾ ಪದೇ ಪದೇ ಪೀಡಿಸುತ್ತಿದ್ದಾಗ ನನ್ನಪ್ಪ ಹೇಳಿದವೇ ಅಗಿದ್ದವು. ನನಗೆಲ್ಲಿಂದ ಹಿಂದಿ ಅರ್ಥವಾಗಬೇಕು?

ಕೆಲಬಾರಿ ಟಿ.ವಿಯಲ್ಲಿ ಓಡಾಡುತ್ತಿದ್ದ ಚಿತ್ರಗಳಿಗೂ, ಅಪ್ಪ ಹೇಳಿದ್ದಕ್ಕೂ ಸಂಬಂಧ ಇಲ್ಲದಂತೆ ಅನ್ನಿಸಿದರೂ, ಸುಮ್ಮನೇ ತಲೆಯಾಡಿಸುತ್ತಿದ್ದೆ, ಮಾರನೇ ದಿನ, ನಾನು ಹೀರೋ ಅಗಬೇಕಾದ್ದರಿಂದ, ಅಪ್ಪ ಹೇಳಿದ್ದನ್ನು ನೆನಪಿಟ್ಟುಕೊಂಡು ಬಂದು, ಅದನ್ನೇ ಸ್ನೇಹಿತರೆದುರು ವದರುತ್ತಿದ್ದೆ. ಅವರುಗಳಿಗೆ ಅದೆಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ, ದೇವರಿಗೇ ಗೊತ್ತು. ಏಕೆಂದರೆ- ಇವತ್ತೊಂದರ ಕಥೆಯಾದರೆ, ನಾಳೆ ಹೇಳುತ್ತಿದ್ದು ಇನ್ನೊಂದೇ ಅಗಿರುತ್ತಿತ್ತು. ಅದರೂ ಮಧ್ಯಾಹ್ನ ಊಟದ ಬುತ್ತಿ ಬಿಚ್ಚಿದಾಗ, ಭಕ್ತಿಯಿಂದ ಒಂದಿಷ್ಟು ಜನ ನನ್ನ ಸುತ್ತ ಸೇರಿರುತ್ತಿದ್ದು ಇನ್ನೂ ನೆನಪಿದೆ ನನಗೆ.

ಎರಡು ಮೂರು ವರುಷ ಕಳೆದ ಮೇಲೆ ನಾನು ಕಥೆ ಹೇಳುವ ಕಾಲ ಮುಗಿದಿತ್ತು. ನಾವೊಂದಿಷ್ಟು ಜನ ಸೇರಿ ಹಿಂದಿನ ದಿನ ನೋಡಿದ ಸೀರಿಯಲ್ ಗಳ ಬಗ್ಗೆ ಚರ್ಚೆ ಮಾಡುವಷ್ಟು ಪಾಂಡಿತ್ಯ ಬೆಳೆದಿತ್ತು - ಕಾರಣ- ದೂರದರ್ಶದಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತಿದ್ದವು. ನಾನಂತೂ ಸರಿಯಾಗಿ ಅರ್ಥವಾಗದ ಹಿಂದಿ ಕಾರ್ಯಕ್ರಮಗಳನ್ನೇ ನೋಡುತ್ತಿದ್ದವನು ಇನ್ನು ಕನ್ನಡ ಬಿಟ್ಟೇನೆಯೇ?

ನನ್ನಂತಹ ಅದೆಷ್ಟೋ ಹುಡುಗರಿಗೆ ಮತ್ತು ಅಪ್ಪ ಅಮ್ಮಂದಿರಿಗೆ ಕನ್ನಡ ಧಾರಾವಾಹಿಗಳ ಹುಚ್ಚು ಹತ್ತಿಸಿದ ಕೀರ್ತಿ 'ಗುಡ್ಡದ ಭೂತ' ಧಾರಾವಾಹಿಗೆ ಸಲ್ಲಬೇಕು. ಪ್ರತಿ ಸೋಮವಾರ ಇರಬೇಕು-ಸರಿಯಾಗಿ ನೆನಪಿಲ್ಲ- ಸಂಜೆ 7.30ಕ್ಕೆ ಸರಿಯಾಗಿ ದೂರದರ್ಶನದೆದುರು ಎಲ್ಲರೂ ಸ್ಥಾಪಿತ. ಜಾನ್ಸನ್ ಬೇಬೀ ಪೌಡರಿನದೋ- ಸೋಪಿನದೋ ಜಾಹೀರಾತು ಮುಗಿದ ಕೂಡಲೇ 'ಡೆನ್ನಾನ ಡೆನ್ನಾನ...' ಅನ್ನುವ ಟೈಟಲ್ ಸಾಂಗು. ಕೇಳುತ್ತಿದ್ದ ಹಾಗೇ- ಮೈ ರೋಮಾಂಚನ. ಭೂತದ ಕಥೆ ಬೇರೆ. ಗುಡ್ಡದ ಭೂತ ಎಂದು ಯಾರಾದರೂ ಕೂಡಲೇ ತೆಂಗಿನ ಗರಿ ಉದುರುವುದು- ಹೊರಗೆ ಒಣಗಲು ಹಾಕಿದ ಬಟ್ಟೆಗೆ ಥಟ್ಟಂತ ಬೆಂಕಿ ಹತ್ತಿಕೊಳ್ಳುವುದು- ಏನು ಕೇಳುತ್ತೀರಿ.

ಪ್ರಕಾಶ್ ರೈ ಅಭಿನಯದ ಮೊದಲ ಸೀರಿಯಲ್ ಅದು. ರಾಮಚಂದ್ರ ಅನ್ನುವ ರೋಲ್ ಮಾಡಿದ ಸಣಕಲು ಪ್ರಕಾಶ ರೈ ಇನ್ನೂ ನೆನಪಿದ್ದಾನೆ ನನಗೆ. ಈಗಿನ ಹಾಗೆ ನೂರಾರು ಎಪಿಸೋಡುಗಳಲ್ಲ- ಕೇವಲ 13 ಸಂಚಿಕೆಗಳಿಗೇ ಮುಗಿದ ಧಾರಾವಾಹಿ ಗುಡ್ಡದ ಭೂತ. ಅದು ಪ್ರಸಾರವಾಗುತ್ತಿದ್ದಷ್ಟೂ ಕಾಲ, ಯಾವತ್ತೂ ಅ ಹೊತ್ತಿಗೆ ಕರೆಂಟು ಸೈತ ಹೋಗಿರಲಿಲ್ಲ! ಮೊನ್ನೆ ಮೊನ್ನೆ ಏನನ್ನೋ ಹುಡುಕುತ್ತಿದ್ದವನಿಗೆ ಆ ಟೈಟಲ್ ಟ್ರಾಕ್ ನ ಎಂಪಿತ್ರೀ ಸಿಕ್ಕಿದಾಗ ಅದ ಖುಷಿಯಂತೂ ಹೇಳತೀರದು.

ನಮ್ಮ ಮನೆಯಲ್ಲಿ ಧಾರಾವಾಹಿಗಳನ್ನು ಅಪ್ಪ ಅಮ್ಮನೂ ಕೂತು ನೋಡುತ್ತಿದ್ದುದರಿಂದ- ನಂಗೆ, ತಂಗಿಗೆ ಯಾವ ತೊಂದರೆಯೂ ಇಲ್ಲದೇ ಅವರ ಜೊತೆ ಕೂತು ಇವುಗಳನ್ನು ನೋಡುವ ಅವಕಾಶ ಲಭ್ಯವಿತ್ತು. ಅಷ್ಟಕ್ಕೂ ದಿನಕ್ಕೆ ನೋಡುತ್ತಿದ್ದದು ಒಂದೋ- ಎರಡೋ ಸೀರಿಯಲ್ಲುಗಳನ್ನು ಮಾತ್ರ. ಎಲ್ಲಾದರೂ ಪರೀಕ್ಷೆಗಳಿದ್ದ ಸಮಯ ಓದಿಕೋ ಹೋಗಿ ಅಂದರೂ, ಅದು ಮೆತ್ತನೆ ಗದರಿಕೆಯಷ್ಟೇ ಅಗಿದ್ದು, ಧಾರಾವಾಹಿಗಳಿಗೆ ಕತ್ತರಿ ಬೀಳುತ್ತಿರಲಿಲ್ಲ.

ಎಂಥೆಂಥ ಸೊಗಸಾದ ಸೀರಿಯಲ್ ಗಳು ಅಗ. ನಾಗಾಭರಣರ ತಿರುಗುಬಾಣ, ಥ್ರಿಲ್ಲರ್ ಅದರೆ ರಮೇಶ್ ಭಟ್ ಅಭಿನಯದ ಕ್ರೇಝಿ ಕರ್ನಲ್ ಕಾಮಿಡಿ ಧಾರಾವಾಹಿ. ಬಿ.ವಿ.ರಾಜಾರಾಂ ಅಭಿನಯದ ಅಜಿತನ ಸಾಹಸಗಳು ಪತ್ತೇದಾರಿ. ಆಜಿತನ ಸಾಹಸಗಳನ್ನು ನೋಡಿ ನೋಡೀ ಅವರ ಫ್ಯಾನ್ ಅಗಿ ಹೋಗಿದ್ದೆ. ಎಷ್ಟರ ಮಟ್ಟಿಗೆಂದರೆ, ಅದೆಷ್ಟೋ ವರುಷಗಳ ನಂತರ, ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ರಾಜಾರಾಂ ಸರ್ ಅನಂದ ರಾವ್ ಸರ್ಕಲ್ ಸಮೀಪದ ಸಿಗ್ನಲ್ ನಲ್ಲಿ ಸ್ಕೂಟರ್ ನಿಲ್ಲಿಸಿಕೊಂಡಿದ್ದು ನೋಡಿ ಅಜಿತ- ಅವನ ಪತ್ತೇದಾರಿ ಬುದ್ಧಿ- ಕಣ್ಣೆದುರಿರುವ ಅತ್ಯಂತ ಸಾಮಾನ್ಯ ರಾಜಾರಾಂ - ಸಂಪೂರ್ಣ ಅಯೋಮಯವಾಗಿ ಹೋಗಿತ್ತು!

ದಿನವೂ ಧಾರಾವಾಹಿಗಳು ಪ್ರಸಾರವಾಗುವ ಕಾಲ ಬೇರೆ ಇರಲಿಲ್ಲ ಅವಾಗ, ಇವತ್ತು ಒಂದು ಧಾರಾವಾಹಿ ಬಂದು ಹೋದರೆ, ಮತ್ತೊಂದು ವಾರ ಕಾಯಬೇಕು ಅದಕ್ಕಾಗಿಯೇ. ಪ್ರತಿ ದಿನ ಕೂಡ ಬೇರೆ ಬೇರೆ ಧಾರಾವಾಹಿಗಳು. ಪ್ರತಿ ಭಾನುವಾರ ಬೆಳಗ್ಗೆ ಸಬೀನಾ ಅಂತೊಂದು ಫ್ಯಾಂಟಸಿ ಸೀರಿಯಲ್ ಬರುತ್ತಿತ್ತು. ಅದರ ಟೈಟಲ್ ಟ್ರ್ಯಾಕ್ ಗೇ ನಾನು- ತಂಗಿ ಮರುಳಾಗಿದ್ದೆವು. ಡಿಸ್ಕೋರಾಗ ಅದಿತಾಳ, ಸಾಧನೆ, ಚಕ್ರ, ಚಿಗುರು, ಬೆಳದಿಂಗಳಾಗಿ ಬಾ ಇವೆಲ್ಲ ಚಂದದ ಶೀರ್ಷಿಕೆ ಗೀತೆ- ಜೊತೆಗೆ ಕಥೆ ಹೊಂದಿದ ಧಾರಾವಾಹಿಗಳೇ.

ಮೋಡಕೆ ಮೋಡ ಬೆರೆತರೆ ನೋಡು ತುಂತುರು ಹೂ ಹಾಡು ಅನ್ನುವ ಚಕ್ರ ಧಾರಾವಾಹಿಯ ಹಾಡು ತೀರಾ ನಿನ್ನೆ ಮೊನ್ನೆ ಕೇಳಿದ್ದೇನೋ ಅನ್ನುವ ತರ ತಲೆಯೊಳಗೆ ಕೂತುಬಿಟ್ಟಿದೆ. ಅದೇ ತರ 'ಅಲ್ಲೊಂದು ಚಿಗುರು, ಇಲ್ಲೊಂದು ಚಿಗುರು', - ಚಿಗುರು ಧಾರಾವಾಹಿಯದು, ಕಾಲ ಮುಂದೆ, ನಾವು ಹಿಂದೆ ಜೂಟಾಟ ಜೂಟಾಟ ಅನ್ನೋ ಸಾಧನೆಯ ಹಾಡು.. ಎಲ್ಲಕ್ಕೂ ಮಿಗಿಲಾಗಿ, ಧಾರಾವಾಹಿ ಪ್ರಪಂಚದ ಅನೂಹ್ಯ ಸಾಧ್ಯತೆಗಳನ್ನು ತೆರೆದಿಟ್ಟ, ಮಾಯಾಮೃಗದ ಮ್ಯಾಜಿಕಲ್ ಹಾಡು, ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ...

ಮಾಯಾಮೃಗ ಪ್ರಸಾರವಾಗಬೇಕಿದ್ದರೆ ನಾನು ಹತ್ತನೇ ತರಗತಿ. ಸಂಜೆ ಕ್ಲಾಸು ಬಿಟ್ಟು ಅರ್ಧ ಗಂಟೆಗೆ ಸರಿಯಾಗಿ 4 ಕಿಲೋಮೀಟರು ದೂರದ ಮನೆಯಲ್ಲಿರಬೇಕಿತ್ತು. ಎದ್ದೂ ಬಿದ್ದೂ ಓಡಿಬರುವಷ್ಟರಲ್ಲಿ- ಮಾಯಾಮೃಗದ ಹಾಡು ಕೇಳುತ್ತಿತ್ತು. ತೀರಾ ನಮ್ಮದೇ ಮನೆಯದೇ ಕಥೆ ಇದು ಎಂದು ನಂಬಿಸಿಯೇ ಬಿಟ್ಟಿದ್ದ ಧಾರಾವಾಹಿ ಅದು. ಎಲ್ಲರಿಗೂ ಈ ಧಾರಾವಾಹಿ ಬಗ್ಗೆ ಖಂಡಿತಾ ತಿಳಿದೇ ಇರುತ್ತದೆ ಎನ್ನುವ ವಿಶ್ವಾಸವಿರುವ ನಾನು ಈ ಬಗ್ಗೆ ಏನೂ ಹೆಚ್ಚಿಗೆ ಹೇಳುವುದಿಲ್ಲ. ವಾರಪತ್ರಿಕೆಯೊಂದು ವಾರಾ ವಾರಾ ಮಾಯಾಮೃಗದ ಕಥೆ ಮುದ್ರಿಸಲೂ ಅರಂಭಿಸಿತ್ತು ಅವಾಗ.

ಮನ್ವಂತರ ಧಾರಾವಾಹಿಯೊಂದಿಗೆ ನನ್ನ ಸೀರಿಯಲ್ ಕ್ರೇಝ್ ಮುಗಿಯಿತು. ಅಮೇಲೆ ಇವತ್ತಿನವರೆಗೆ ಯಾವ ಧಾರಾವಾಹಿಯನ್ನೂ ಫಾಲೋ ಮಾಡಿಲ್ಲ, ಗರ್ವ ಮತ್ತು ಗೃಹಭಂಗ ಹೊರತು ಪಡಿಸಿ. ಮುಕ್ತ ಪ್ರಸಾರವಾಗುವಾಗ ಬೆಂಗಳೂರಿಗೆ ಬಂದಿದ್ದೆ, ನೋಡಲಾಗಲಿಲ್ಲ. ಅಲ್ಲದೇ ಅಷ್ಟು ಹೊತ್ತಿಗೆ ಅಷ್ಟೂ ಚಾನಲ್ ಗಳ ಪ್ರೈಮ್ ಟೈಮ್ ಅತ್ತೆ ಸೊಸೆಯರಿಗೇ ಮೀಸಲಾಗಿಹೋಗಿತ್ತು. ಒಮ್ಮೆ ನೋಡಿದ ಧಾರಾವಾಹಿಯನ್ನ ಮತ್ತೆ ನೋಡಬೇಕು ಎಂದು ಅನ್ನಿಸಲೇ ಇಲ್ಲ. ಧಾರಾವಾಹಿಗಳ ಸುವರ್ಣಯುಗ, ಗುಣಮಟ್ಟದ ದೃಷ್ಟಿಯಿಂದ ನೋಡಿದರೆ ಐದಾರು ವರ್ಷಗಳ ಕೆಳಗೇ ಮುಗಿದು ಹೋಗಿದೆ ಎಂದನ್ನಿಸುತ್ತದೆ.

ಕೆಲಬಾರಿ ಸಂಜೆ ಹೊತ್ತಿಗೆ ಈ ಬೆಂಗಳೂರಿನ, ನಮ್ಮ ಮನೆಯ ಬೀದಿಯಲ್ಲಿ ನಡೆಯುವಾಗ ಅನ್ನಿಸುವುದುಂಟು- ಯಾವುದರೂ ಮುಚ್ಚಿದ ಬಾಗಿಲಿನ, ಅದರೆ ತೆರೆದಿರುವ ಮನೆ ಕಿಟಕಿಯೊಳಗಿಂದ, ' ಸೆಳೆಯುತ್ತಿದೆ ಕಣ್ಣಂಚೂ, ಗಿರಿವಜ್ರದ ಹಾಗೇ' ಅನ್ನುವ ಮಾಯಾಮೃಗದ ಗೀತೆ ಮತ್ತೆ ಕೇಳಬಾರದೇ. S. ನಾನು ಓಡಿ ಹೋಗಿ, ಟಿ.ವಿ ಹಾಕಿ....

ಇದು ದಟ್ಸ್ ಕನ್ನಡಕ್ಕೆ ಬರೆದ ಅಂಕಣ. ಹಲವರು ಮೇಲ್ ಮಾಡಿ ಗುಡ್ಡದ ಭೂತ ಮತ್ತು ಇತರ ಧಾರಾವಾಹಿಗಳ ಎಂಪಿತ್ರೀ ಕೇಳಿದರು. ಈ ಲಿಂಕ್ ಲಿ ಕೆಲ ಹಳೆಯ ಧಾರಾವಾಹಿಗಳ ಹಾಡುಗಳು ಲಭ್ಯವಿದೆ.

ಶುಕ್ರವಾರ, ನವೆಂಬರ್ 07, 2008

ಮತ್ತೊಂದು ಮಳೆ ಕವನ..

ಥೋ! ಜೋರು ಮಳೆ ಸಡನ್ನಾಗಿ
ಶುರುವಾಯಿತು ಅಂತ,
ನಿಲ್ಲಿಸಿ ಬೈಕ,
ನಾನೂ ನಿಂತೆ ಅಂಗಡಿಯೊಂದರ ಪಕ್ಕ
ಸಿಡಿಮಿಡಿಗುಟ್ಟುತ್ತ,
ಅನಿರೀಕ್ಷಿತದ ಮೇಲೆ.

ಚುರುಗುಟ್ಟುವ ಹೊಟ್ಟೆ
ಅರೆಬರೆ ಒದ್ದೆ,
ಥೂ! ಅಂತೊಮ್ಮೆ ಸುರಿವ ಮಳೆಗೇ ಕ್ಯಾಕರಿಸಿ
ಹಳಿದುಕೊಳ್ಳುತ್ತ ನನ್ನ ಗ್ರಹಚಾರ
ನೋಡುತ್ತ ನಿಂತೆ ಖಾಲಿ ರಸ್ತೆ
ವಿರಳ ಸಂಚಾರ

ಪಕ್ಕದಲಿ ಅಜ್ಜಿ, ಮೊಮ್ಮಗ
ಇಬ್ಬರೂ ನಿರಾಳ
ಹುಡುಗ ನೀರ ಹರಿವಿಗೆ
ಮೆಲ್ಲನೆ,ಅಜ್ಜಿಗೆ ಕಾಣದ ಹಾಗೆ ಕಾಲದ್ದಿ
ರೋಮಾಂಚನಗೊಳ್ಳುತ್ತ
ಅಜ್ಜಿ, ಕಂಡರೂ ಕಾಣದ ಹಾಗೆ ಮಾಡುತ್ತ..

ಆ ಜಡಿಧಾರೆಯಲ್ಲೇ ರಸ್ತೆಯಲಿ
ಹೈಸ್ಕೂಲು ಹುಡುಗಿ, ಬಟ್ಟಲು ಗಣ್ಣಿನವಳು
ಚೂಡಿದಾರದ ವೇಲು ತಲೆಗೆ ಹೊದ್ದು
ಮಳೆಯ ನೋಡುತ್ತ
ಯಾವುದೋ ಹಾಡು ಗುನುಗುತ್ತ
ಪ್ರಸನ್ನವದನೆ, ಮಂದಗಮನೆ.

ರಸ್ತೆಯ ಆ ಬದಿಗೆ
ಗಿರಾಕಿಗಳಿಲ್ಲದ ಕಾಂಡಿಮೆಂಟ್ಸಿನವನು
ತನ್ನ ಕೈಯಾರೆ ಮಾಡಿದ
ಚಹವ ತಾನೆ ಹೀರುತ್ತ - ಹೊತ್ತು
ಬ್ರಹ್ಮಾನಂದ,
ರೇಡಿಯೋ ಕೇಳುತ್ತ ಮಳೆಗೆ ಮುಖ ಮಾಡಿದ್ದ.

ನನಗೆ ಯಾಕೋ ಅಲ್ಲಿ ನಿಲ್ಲಲೇ ಆಗದೆ
ಸಟಕ್ಕನೆ
ಬೈಕಿನೆಡೆಗೋಡಿ, ಕೀ ತಿರುವಿ
ಹಾಗೇ ನೆನೆಯುತ್ತಲೇ ಮನೆಗೆ
ಬರುವಷ್ಟರಲ್ಲಿ
ಮಳೆ ನಿಂತುಹೋಗಿತ್ತು.

ಶನಿವಾರ, ಅಕ್ಟೋಬರ್ 25, 2008

ದೀಪಗಳ ಹಬ್ಬಕ್ಕೆ ಹಾರಯಿಕೆ..




















ನನ್ನ ಪ್ರೀತಿಯ ಕವಿ ಕೆ.ಎಸ್.ನರಸಿಂಹಸ್ವಾಮಿವರ ಸಾಲುಗಳಿವು...
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ನಾನಂತೂ ಒಂದು ವಾರ ರಜಾ ಹಾಕಿ ಮನೆಗೆ ಹೊರಟಿದ್ದೇನೆ:)
ಈ ಚಂದದ ಶುಭಾಶಯ ಪತ್ರ ಕಳ್ಸಿದ್ದು ಅಮರ.

ಬುಧವಾರ, ಅಕ್ಟೋಬರ್ 15, 2008

ಬಾದರಾಯಣ ಸಂಬಂಧ

ನಮ್ಮ ಪುರಾಣಗಳ ಮೂಲಕ ಮತ್ತು ಜಾನಪದ ಕಥೆಗಳ ಮೂಲಕ, ಅದೆಷ್ಟೋ ನುಡಿಗಟ್ಟುಗಳು ನಮ್ಮ ದೈನಂದಿನ ವ್ಯವಹಾರದಲ್ಲಿ ಪ್ರಚಲಿತವಾಗಿ ಹೋಗಿದೆ. ಲಕ್ಷ್ಮಣ ರೇಖೆ, ಸುಗ್ರೀವಾಜ್ಞೆ, ರಾಮಬಾಣ, ಭೀಷ್ಮ ಪ್ರತಿಜ್ಞೆ, ಹೀಗೆ ವ್ಯಕ್ತಿವಿಶೇಷಣ ಹೊತ್ತ ಅದೆಷ್ಟೋ ನುಡಿಗಟ್ಟುಗಳು ನಮ್ಮ ನಡುವೆ ಹಾಸುಹೊಕ್ಕಾಗಿವೆ. ಮಹಾಭಾರತ, ರಾಮಾಯಣಗಳಂತಹ ಮಹಾನ್ ಗ್ರಂಥಗಳಿಂದ ಆಯ್ದುಕೊಂಡ ಮೇಲಿನ ನುಡಿಗಟ್ಟುಗಳಿಗೆ ಸಂಬಂಧಿಸಿದ ಕಥೆಯೂ ಹೆಚ್ಚಿನವರಿಗೆ ತಿಳಿದಿರುತ್ತದೆ. ಕಥೆಗಳನ್ನು ಓದದಿದ್ದರೂ, ಟಿವೀ ಸೀರಿಯಲ್ ಗಳ ಮೂಲಕವಾದರೂ ಇವುಗಳ ಪರಿಚಯ ಆಗೇ ಆಗುತ್ತದೆ. ಆದರೆ ಇನ್ನು ಕೆಲ ಶಬ್ದ ಪುಂಜಗಳು , ಯಾವುದೋ ಜಾನಪದ ಮೂಲಗಳಿಂದ ಬಂದವು, ತಮ್ಮ ಹಿಂದಿನ ಕಥೆಯನ್ನು ಕಳೆದುಕೊಂಡು, ಕೇವಲ ನುಡಿಗಟ್ಟಿಗಷ್ಟೇ ಸೀಮಿತವಾಗಿ ಬಿಡುತ್ತವೆ.

ಆಷ್ಟಕ್ಕೂ ಹಳೆಯ ಕಥೆಗಳನ್ನು ಹೇಳಲು ಇಂದು ಅಜ್ಜ ಅಜ್ಜಿಯರಿಲ್ಲ, ಕೇಳಲು ಮೊಮ್ಮಕ್ಕಳೂ ಇಲ್ಲ.ಹೀಗಾಗಿ, ಅದೆಷ್ಟೋ ಚಂದ ಕಥೆಗಳೆಲ್ಲ ಚಂದಿರನೊಳಗೆ ಸೇರಿ ಹೋಗಿವೆ, ಮರಳಿ ಬಾರದ ಹಾಗೆ. ನಾವು ನಮ್ಮ ಬ್ಯುಸಿ ಜೀವನ ಎಂಬ ವಿಷಯಕ್ಕೇ ಎಲ್ಲ ಆರೋಪಗಳನ್ನೂ ಹೊರಿಸಿ, ನಿರಾಳವಾಗಿದ್ದೇವೆ. ಇರಲಿ, ಎಲ್ಲರೂ ಹೇಳಿದ್ದನ್ನೇ ಮತ್ತೆ ಚರ್ವಿತಚರ್ವಣ ಮಾಡುವುದು ಬೇಡ. ಕಥೆ ಕೇಳಿ.

ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಿನಲ್ಲಿ, ಒಂದು ಮನೆ ಇತ್ತು. ಆ ಮನೆಯಲ್ಲಿ ಹೊಸದಾಗಿ ಮದುವೆ ಆದ ಗಂಡ ಹೆಂಡತಿ ಇದ್ದರು. ಇಬ್ಬರೂ ಏನೋ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದರು. ಅಭಿಪ್ರಾಯ ಭೇದಗಳು, ಇದ್ದೇ ಇರತ್ತೆ ನೋಡಿ.. ಎರಡು ಮೂರು ದಿನಗಳಾದರೂ ಇಬ್ಬರೂ ಮಾತಾಡಿಕೊಂಡಿರಲಿಲ್ಲ. ಹೀಗಿರುವಾಗ ಒಂದು ದಿನ, ಇಳಿ ಬೆಳಗಿನ ಹೊತ್ತು, ಮನೆಯೆದುರು ಎತ್ತಿನ ಗಾಡಿಯೊಂದು ಬಂದು ನಿಂತಿತು.

ಹೆಂಡತಿ ಹೊರಗೇನೋ ಕೆಲಸ ಮಾಡುತ್ತಿದ್ದವಳು ಹೋಗಿ ನೋಡಿದರೆ, ಗಾಡಿಯೊಳಗಿಂದ ಒಬ್ಬ ಇಳಿದು ಮನೆಯೆಡೆಗೇ ಬರುತ್ತಿದ್ದ. ಅವಳಿಗೆ ಅವನ ಪರಿಚಯ ಇರಲಿಲ್ಲ. ಗಂಡನ ಕಡೆಯ ಸಂಬಂಧಿ ಯಾರೋ ಇರಬೇಕು ಅಂದುಕೊಂಡು, "ಬನ್ನಿ , ಕುಳಿತುಕೊಳ್ಳಿ, ಬಾಯಾರಿಕೆಗೇನು ಬೇಕು" ಅಂತೆಲ್ಲಾ ಉಪಚಾರ ಮಾಡಿದಳು.

ಗಂಡ ಹೊರಗೆಲ್ಲೋ ಹೋದವನು ಬಂದು ನೋಡಿದ. ಹೆಂಡತಿ ಚಾವಡಿಯಲ್ಲಿ ಕೂತಿರುವ ಯಾರಿಗೋ ನೀರು, ಬೆಲ್ಲ ಕೊಡುತ್ತಿದ್ದಾಳೆ, ಚೆಂದಕೆ ಮಾತಾಡುತ್ತಿದ್ದಾಳೆ. ಹೋ, ಯಾರೋ ಇವಳ ಕಡೆಯ ನೆಂಟನಿರಬೇಕು ಅಂದುಕೊಂಡ. ಯಾರು ಅಂತ ಕೇಳಿದರೆ ಮರ್ಯಾದೆ ಪ್ರಶ್ನೆ. ಮದುವೆಲೆಲ್ಲಾದರೂ ನೋಡಿದ್ದೇನೋ ಅಂತ ನೆನಪು ಮಾಡಿಕೊಂಡ. ಊಹೂಂ, ಆಗುತ್ತಿಲ್ಲ. ಎಲ್ಲೆಲ್ಲಿಂದಲೋ ಯಾರ್ಯಾರೋ ಬಂದಿದ್ದರು, ನೆನೆಪೆಂತು ಉಳಿದೀತು. ಮತ್ತೆ ಹೆಂಡತಿಯ ಬಳಿ ಕೇಳಿದರಾಯಿತು ಅಂದುಕೊಂಡು ಸುಮ್ಮನಾದ.

ಹೆಂಡತಿಯ ಬಳಿ ಗಲಾಟೆ ಮಾಡಿಕೊಂಡಿದ್ದರೇನಂತೆ, ಬಂದ ಅತಿಥಿಯನ್ನು ಮಾತನಾಡಿಸಬೇಕಾದ್ದು ಮನೆ ಯಜಮಾನನ ಧರ್ಮ. ಹಾಗಾಗಿ ಅದೂ ಇದೂ ಉಭಯ ಕುಶಲೋಪರಿ ಮಾತುಗಳ ವಿನಿಮಯವಾದವು. ಅಷ್ಟು ಹೊತ್ತಿಗೆ ಹೆಂಡತಿ ಅಡುಗೆ ಸಿದ್ಧಪಡಿಸಿಯೂ ಆಯಿತು. ಭೋಜನಕ್ಕೆ ಬಂದ ಅತಿಥಿಯನ್ನು ಕರೆದ ಯಜಮಾನ. ಆತ ಇವನ ಬಳಿಯೇ ಕೇಳಿಕೊಂಡು, ಕೊಟ್ಟಿಗೆ ಗೆ ಹೋಗಿ ಹುಲ್ಲು ಎತ್ತಿಕೊಂಡು ಬಂದು ತನ್ನ ಎತ್ತುಗಳಿಗೆ ಅವಷ್ಟನ್ನೂ ಹಾಕಿ, ಕೈಕಾಲು ತೊಳೆದುಕೊಂಡು ಒಳಗೆ ಬಂದ.

ಹೆಂಡತಿ , ಬಂದಿರುವುದು ಗಂಡನ ಕಡೆಯ ಸಂಬಂಧಿ, ಮದುವೆಯಾದ ಮೇಲೆ ಮನೆಗೆ ಬಂದ ಮೊದಲ ಅತಿಥಿ ಅನ್ನುವ ಕಾರಣಕ್ಕೆ ಜೋರಾಗೇ ಅಡುಗೆ ಮಾಡಿದ್ದಳು. ಎಲೆ ತುಂಬ ಬಗೆ ಬಗೆಯ ಖಾದ್ಯಗಳು. ಎರಡು ಮೂರು ದಿನಗಳಿಂದ ಜಗಳದ ಕಾರಣಕ್ಕಾಗಿ ಸಪ್ಪೆ ಅಡುಗೆ ಉಂಡಿದ್ದ ಗಂಡನಿಗೆ ಭಲೇ ಖುಷಿಯಾಯಿತು. ಇವಳ ನೆಂಟ ಬಂದ ಕಾರಣಕ್ಕಾಗಿಯಾದರೂ ತನಗೆ ಒಳ್ಳೇ ಊಟ ಮಾಡುವ ಭಾಗ್ಯ ಲಭಿಸಿತಲ್ಲ ಅಂತ ಮನಸ್ಸಲೇ ಬಂದ ಪುಣ್ಯಾತ್ಮನಿಗೆ ನಮಸ್ಕರಿಸಿದ.

ಊಟ ಮಾಡುವಾಗ ಮನೆ ಯಜಮಾನನಿಗೆ ಏಕೋ ಅನುಮಾನ ಬರಲಾರಂಭಿಸಿತು. ಹೆಂಡತಿ ಆತನ ಬಳಿ ಹೆಚ್ಚೇನೂ ಮಾತಾಡುತ್ತಿಲ್ಲ, ಬರೀ ಬೇಕು, ಸಾಕುಗಳಷ್ಟೇ. ಊರ ಕಡೆ ಸುದ್ದಿ ಮಾತಾಡುತ್ತಿಲ್ಲ. ಅಪ್ಪ ಅಮ್ಮನ ಬಗ್ಗೆ ಮಾತಿಲ್ಲ.. ಹೆಂಡತಿಗೂ ಹಾಗೆ ಅನ್ನಿಸತೊಡಗಿತು, ಇದೇನು ತನ್ನ ಗಂಡನ ಬಳಿ ಈ ವ್ಯಕ್ತಿ ಏನೂ ಮಾತೇ ಆಡುತ್ತಿಲ್ಲವಲ್ಲ, ಇವರೂ ಏನೂ ಕೇಳುತ್ತಿಲ್ಲ ಅಂತ. ಅತಿಥಿ ಉಂಡು ಕೈತೊಳೆದು ಚಾವಡಿಗೆ ತೆರಳಿದ. ಹೆಂಡತಿ ಗಂಡನ ಕೈಗೆ ನೀರು ಹನಿಸುವಾಗ ಕೇಳಿಯೇ ಬಿಟ್ಟಳು, ಯಾರವರು ಅಂತ. ಗಂಡನಿಗೆ ಸಂಶಯ ನಿವಾರಣೆಯಾಗಿ ಹೋತು, ಈತ ನಮ್ಮಿಬ್ಬರ ಸಂಬಂಧಿಕನೂ ಅಲ್ಲ ಗೊತ್ತಾಯಿತು.

ಆದರೆ ಸೀದಾ ವಿಚಾರಣೆ ಮಾಡುವುದು ತಪ್ಪಾಗುತ್ತದಲ್ಲ?, ಬಂದ ಅತಿಥಿ ಹೊರಗೆ ಜಗಲಿಯಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಲವಂಗ ಇತ್ಯಾದಿಗಳನ್ನು ಹಾಕಿದ ತಾಂಬೂಲ ಮೆಲ್ಲುತ್ತ ಕುಳಿತಿದ್ದ. ಮನೆಯಜಮಾನ ಮೆಲ್ಲನೆ ಆತನ ಬಳಿ ಬಂದು ಕುಳಿತು, ತಾನೂ ಕೈಗೊಂದು ವೀಳ್ಯದೆಲೆ ಎತ್ತಿಕೊಂಡು, ಮೆಲ್ಲನೆ ಆ ಎಲೆಯ ಹಿಂದಿನ ನಾರನ್ನು ಉಗುರಿಂದ ಎತ್ತುತ್ತ, ಹೇಗೆ ಕೇಳುವುದಪ್ಪಾ ಅನ್ನುವ ತಳಮಳದೊಳಗೇ "ಸ್ವಾಮೀ, ನಿಮಗೆ ಯಾವೂರಾಯಿತು, ನಮಗೂ ನಿಮಗೂ ಹೇಗೆ ಸಂಬಂಧವಾಯಿತು ಅನ್ನುವುದು ತಿಳಿಯಲಿಲ್ಲ, ಬೇಜಾರು ಮಾಡಿಕೊಳ್ಳಬೇಡಿ, ಮನ್ನಿಸಿ" ಅಂದ.

ಬಂದ ಆ ನೆಂಟ, "ಒಂದು ನಿಮಿಷ" ಅಂದವನೇ, ಮೆಲ್ಲನೆ ತನ್ನ ಧೋತ್ರದಂಚು ಹಿಡಿದು, ಮೆಟ್ಟಿಲಿಳಿದು, ಬಾಯಿ ತುಂಬ ತುಂಬಿದ್ದ ತಾಂಬೂಲದ ರಸವನ್ನು ಬಾಳೇ ಗಿಡದ ಬಳಿ ಉಗಿದು ಬಂದು, ನಮ್ಮದೂ ನಿಮ್ಮ ಸಂಬಂಧ ಹೀಗಿದೆ ಅಂತ ಈ ಮಾತು ಹೇಳಿದ.

ಅಸ್ಮಾಕಂ ಬದರೀ ಚಕ್ರಂ,ಯುಷ್ಮಾಕಂ ಬದರೀ ತರು:
ಬಾದರಾಯಣ ಸಂಬಂಧಾಧ್ಯೂಯಂ ಯೂಯಂ ವಯಂ ವಯಂ

ಹಾಗಂದರೇನೆಂದ್ರೆ , ನನ್ನ ಎತ್ತಿನ ಗಾಡಿಯ ಚಕ್ರ ಬದರೀ ಮರದಿಂದ ಮಾಡಲ್ಪಟ್ಟಿದ್ದು, ನಿಮ್ಮ ಮನೆ ಮುಂದೂ ಒಂದು ಬದರೀ ಮರವಿದೆ! ಹಾಗಾಗಿಯೇ ಬಾದರಾಯಣ ಸಂಬಂಧದಿಂದ ನೀವು ನೀವೇ ಮತ್ತು ನಾನು ನಾನೇ ಅಂತ!

ಆತ ಎಲ್ಲಿಗೋ ಹೊರಟಿದ್ದ ಯಾತ್ರಿ.ದಾರಿಯಲ್ಲೆಲ್ಲಾದರೂ ಆಶ್ರಯ ಬೇಕಿತ್ತು, ಸುಮ್ಮನೇ ಹೋಗುತ್ತಿದ್ದವನಿಗೆ ಬದರೀ ಮರ, ಮತ್ತು ಅದರ ಪಕ್ಕಕ್ಕಿದ್ದ ಮನೆ ಕಂಡಿತು. ಒಂದು ಸಂಬಂಧವೂ ಆದಂತಾಯಿತು. ಮನೆಯ ಗಂಡ ಹೆಂಡಿರ ಗಲಾಟೆ, ಈತನಿಗೆ ಲಾಭವಾಗೇ ಪರಿಣಮಿಸಿತು.

ಆವತ್ತಿನಿಂದ ಎಲ್ಲೆಂದೆಲ್ಲಿಗೋ ಸಂಬಂಧ ಕಲ್ಪಿಸಲು ಯಾರಾದರೂ ಯತ್ನಿಸಿದರೆ ಬಾದರಾಯಣ ಸಂಬಂಧ ಅನ್ನುವ ನುಡಿಗಟ್ಟೂ ಹುಟ್ಟಿಕೊಂಡಿತು.

ದಟ್ಸ್ ಕನ್ನಡದ ಕಾಡು ಹರಟೆಗೆ ಬರೆದದ್ದು.

ಬುಧವಾರ, ಅಕ್ಟೋಬರ್ 08, 2008

ಹೀಂಗೇ ಸುಮ್ನೆ..

ಮೊನ್ನೆ ಮೊನ್ನೆ ಸುರಪುರದ ಮಡೋಸ್ ಟೇಲರ್ ರ ೨೦೦ ನೇ ಜನ್ಮದಿನ ಆಚರಿಸಲಾಯಿತು. ಕಲೆಕ್ಟರ್ ಆಗಿದ್ದ ಈತ ಹಲವು ಸುಧಾರಣಾ ಕಾರ್ಯಕ್ರಮಗಳಿಂದ ಜನಮನ ಗೆದ್ದಿದ್ದ. ಮೇಲಿನ ಕೆಂಡಸಂಪಿಗೆ ಲಿಂಕ್ ನಲ್ಲಿ ಟೇಲರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ, ನೋಡಿ. ಗುಲ್ಬರ್ಗದಇನ್ನೂರನೇ ಜನ್ಮದಿನದ ನೆನಪಿಗೆ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಾದ ರೇವೂನಾಯಕ್ ಬೆಳಮಗಿಯವರು, ಈ ಸಮಾರಂಭದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಏನ್ ಅದ್ಭುತ ಭಾಷಣ ಮಾಡಿದರು ಅಂತೀರಿ !

"ನಮ್ಮ ಜೀವನದಲ್ಲಿ ಟೈಲರುಗಳ ಪಾತ್ರ ಮುಖ್ಯಾ, ನಮ್ಮ ಮಾನ ಉಳ್ಸೋದಿಕ್ಕ ಅವರಿಲ್ದಿದ್ರೆ ಆಗಲ್ಲ,ದರ್ಜಿಗಳನ್ನ ನೆನ್ಪಿಸ್ಕೊಳ್ಳೋ ಅಂತಾ ಪ್ರೋಗ್ರಾಮು ಮಾಡ್ತಿರೋದು ನಿಜಕ್ಕೂ ಒಳ್ಳೇದು.." ಅಂತೆಲ್ಲಾ ಮಾತಾಡದ್ರು. ಜನ ಬಿದ್ದು ಬಿದ್ದು ನಗ್ತಿದ್ರೂ ಸಾಹೇಬ್ರಿಗೆ ಏನೂ ಗೊತ್ತೇ ಆಗ್ಲಿಲ್ಲ!

ಸಾಹೇಬರ ಪಿ.ಎ ಕೆಲಸ ಕಳೆದುಕೊಂಡ ಸುದ್ದಿಯೇನೂ ಬಂದಿಲ್ಲ.

************

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾತನಾಡುತ್ತ ಹೇಳಿದ್ದು-

"ಕಾಡುಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧ ಇದೆ. ಮನುಷ್ಯ ಕಾಡು ಇಲ್ಲದೇ ಬದುಕಲಾರ, ಕಾಡು ಕೂಡ ಮನುಷ್ಯ ಇಲ್ಲದೇ ಇರಲಾರದು, ಎರಡೂ ಇಂಟರ್ ಲಿಂಕ್ಡು" ಅಂತ.

ಇಂಟರ್ವ್ಯೂ ಮಾಡುತ್ತಿದ್ದವರು ತಲೆ ಚಚ್ಚಿಕೊಳ್ಳಲಿಲ್ಲ ಅಂತ ಸುದ್ದಿ.



ಗುರುವಾರ, ಅಕ್ಟೋಬರ್ 02, 2008

ಸಹಾಯ ಮಾಡಿ!!

ಮೂರು ನಾಲ್ಕು ದಿನದಿಂದ ಆರೋಗ್ಯ ಸರಿಯಿಲ್ಲ. ಜ್ವರ ಮತ್ತು ಜೋರು ನೆಗಡಿ. ಮನೆಯಿಂದ ಅಮ್ಮ ಫೋನು ಮಾಡಿದವಳು, ನನ್ನ ಧ್ವನಿಯಿಂದಲೇ ಕಂಡು ಹಿಡಿದುಬಿಟ್ಲು, ಜ್ವರ, ತಲೆನೋವು ಮತ್ತು ನೆಗಡಿ ಅಂತ. ಅಲ್ಲಿಂದ ಆರಂಭ ಮನೆಮದ್ದುಗಳ ಸಲಹೆಗಳು.

ಅಮ್ಮ: ಒಂದು ಕಾಲು ಲೋಟ ಕೊಬರಿಎಣ್ಣೆ ಕಾಸಿ, ಅದ್ಕೆ ಮೆಂತೆ ಮತ್ತೆ ಜೀರಿಗೆ ಹಾಕಿ, ಬಂಗಾರದ ಬಣ್ಣಕ್ಕೆ ಬರೋವರೆಗೆ ಫ್ರೈ ಮಾಡಿ, ಆ ಎಣ್ಣೆ ತಣಿಸಿ, ಅದ್ನ ತಲೆಗ್ ಹಾಕಿ, ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದ್ರೆ, ಕಫ ಕಡ್ಮೆ ಆಗತ್ತೆ.

ತಂಗಿ ನಯನಾ: ಬಿಸಿನೀರಿಗೆ ವಿಕ್ಸ್ ಹಾಕಿ ಇನ್ ಹೇಲ್ ಮಾಡೋದು ವೇಸ್ಟ್. ಅದರ ಬದಲು, ಉಪ್ಪು ಹಾಕಿ ಇನ್ಹೇಲ್ ಮಾಡು, ನೆಗಡಿ ಕಡ್ಮೆ ಆಗತ್ತೆ. ಜೊತೆಗೆ, ಬೆಳ್ಳುಳ್ಳು ಒಂದೆರಡು ಎಸಳು ಜಜ್ಜಿ, ಹತ್ತಿಗೆ ಅದರ ರಸ ಬಿಟ್ಕೊಂಡು, ಎರಡೂ ಕಿವಿಗೆ ಇಟ್ಕಂಡು ಬೆಚ್ಚಗೆ ಮಲಗಬೇಕು.( ಈ ಬೆಳ್ಳುಳ್ಳಿ ಮೆಥಡ್ ಏನು ಅಂತ ಕೇಳದ್ರೆ ಹೇಳ್ಲಿಲ್ಲ, ಅದ್ನೆಲ್ಲ ಹೇಳ್ಬಾರ್ದು, ಸುಮ್ನೆ ಮಾಡ್ಬೇಕು ಅಂದ್ಲು!)

ದಯಾನಂದ: ಮೂರು ನಾಲ್ಕು ಚಮಚ ಕರಿಮೆಣಸಿನ ಪುಡಿ ನೀರಲ್ ಕುದ್ಸಿ, ೬-೮ ಚಮಚ ಬೆಲ್ಲ ಹಾಕಿ, ಕುದ್ಸಿ, ಆಮೇಲೆ ಒಂದು ಲಿಂಬೆ ಹಿಂಡಿ ಅದ್ನ ಕುಡೀಬೇಕು. ಕುಡಿಯೋಕೋ ಪ್ರೊಸೀಜರ್ ಇದೆ, ಗಟ ಗಟ ಕುಡೀಬಾರ್ದು, ಬಿಸಿಬಿಸಿ ಒಂದೊಂದೇ ಗುಟುಕು ಕುಡ್ದ್ರೆ, ಜ್ವರದ ಜೊತೆ, ಕಫನೂ ಕಡ್ಮೆ ಆಗತ್ತೆ.( ಈಗ ಬ್ಲಾಗ್ ಅಪ್ ಡೇಟ್ ಮಾಡೋಕೆ ಅವನು ಮಾಡ್ಕೊಟ್ಟ ಕಷಾಯನೇ ಕಾರಣ)

ತೇಜಸ್ವಿನತ್ಗೆ: ಕ್ರೋಸಿನ್ ತಗ, ನೆಗಡಿಗೆ ಡಿ ಕೋಲ್ಡ್, ಬಿಸಿ ಆಹಾರ ತಿನ್ನು.

ನಿಮ್ಮ ಬಳಿ ಇನ್ನೇನಾದರೂ ಒಳ್ಳೇ ಸಜೆಶನ್ನುಗಳು, ಮನೆಮದ್ದು ಇದೆಯೇ? ತಿಳಿಸಿ ಪ್ಲೀಸ್!

ಗುರುವಾರ, ಸೆಪ್ಟೆಂಬರ್ 25, 2008

ಬೇರು ಬಂದಿದೆ..

ಬೇರು ಬಂದಿದೆ ಅವಳಿಗೆ
ಕಾಲಕಾಲಗಳಿಂದ
ಕೂತಲ್ಲಿಯೇ ಕೂತು
ಹೂತು
ಬೇರು ಬಂದಿದೆ ಅವಳಿಗೆ

ನಾಭಿಯಿಂದ ಹೊರಟು
ಕೆಳಗಿಳಿದು
ಬೇರು ಹೊರಟಿದೆ
ಆಳಕೆ,
ಮಣ್ಣ ಕಣಕಣದಾಚೆಗೆ

ಇರುವ ನೆಲನೆಲೆಯಾಚೆ
ಅಲ್ಲೆಲ್ಲೋ ತಾಕುತಿದೆ
ಬೇರ ತುದಿ
ಅವಳಿಗೆ ಇಲ್ಲಿ
ಸಂಚಲನ

ಹೊರಟ ಬೇರಿಗೆ
ನೂರು ದಾರಿ
ನೂರು ಟಿಸಿಲು..
ಕೂತಲ್ಲಿಯೇ
ಅವಳು
ಸರ್ವಗ್ರಾಹಿ,
ಸಮಸ್ತ ಧಾತ್ರಿ.