ಶುಕ್ರವಾರ, ಡಿಸೆಂಬರ್ 29, 2006

ಭಾವ- ೯

ಅಮ್ಮ ಕೊಟ್ಟಿದ್ದ ಒಂದು ಬಾಳೆ ಹಣ್ಣಲ್ಲೇ ಅರ್ಧ ಪಾಲು ಮಾಡಿದ ಆ ಹುಡುಗಿ, ಅದನ್ನ ಮನೆ ಎದುರಿನ ಕಂಬಕ್ಕೆ ಕೊರಳೊರೆಸುತ್ತ ನಿಂತಿದ್ದ ಕರುವಿಗೆ ತಿನ್ನಿಸ ತೊಡಗಿದಳು.. ಬದುಕು ಸುಂದರವಾಗಿದೆ, ಅಲ್ಲವೇ?...

ಬುಧವಾರ, ಡಿಸೆಂಬರ್ 20, 2006

ಬಾ ಕಂದ ಕನ್ನಡದ ಬಳಿಗೆ....

ನಾಳಿನಿಂದ ಕನ್ನಡ ಸಾಹಿತ್ಯ ಸಮ್ಮೇಳನ, ಶಿವಮೊಗ್ಗೆಯಲ್ಲಿ. ಆ ಸಂದರ್ಭದಲ್ಲೊಂದು ಆಶಯ ಕವನ, ಕನ್ನಡಕ್ಕಾಗಿ.

ಒಂದೆರಡು ಘಳಿಗೆ, ಕನ್ನಡದ ಬಳಿಗೆ
ಬಾರೋ ಕಂದಾ ನಿನ್ನ ತಾಯಿಯಿವಳು.
ಒಮ್ಮೆ ಬಂದರೆ ನೀನು, ಮತ್ತೆ ಹೋಗೆಯೋ ಹಿಂದೆ
ಬಲು ಶಕ್ತಿಯನು ಈ ತಾಯಿ ನೀಡುವಂಥವಳು.

ಕನ್ನಡದ ನವಿರು ನುಡಿ, ಸರಳ ಸುಂದರ ಬಂಧ
ಬೇರೆಲ್ಲಿ ದೊರಕುವುದೊ ಕಂದ ನಿನಗೆ?
ಪರಕೀಯ ಭಾಷೆಯದು ಬಾಡಿಗೆಯ ಒಲುಮೆ, ತಿಳಿ.
ಕನ್ನಡಮ್ಮನೆ ಬೆಳಕು, ಕೊನೆಯವರೆಗೆ.

ನಮ್ಮತನ, ನಮ್ಮ ಜನ, ನಮ್ಮದೀ ಭಾಷೆ
ಎನ್ನೋ ಹೆಮ್ಮೆಯು ಬೇಕು ಕಂದ ಎಲ್ಲರಿಗು.
ಹೊರಗಿಂದ ಬಂದವಗೆ ಗೌರವವ ಕೊಡಿ ಸಾಕು,
ಕಾಲು ನೆಕ್ಕುವ ಚಟವ ಮೊದಲು ಬಿಡಬೇಕು.

ಕನ್ನಡವ ನೀ ಬೆಳೆಸೋ ಕೈಂಕರ್ಯದಲಿ ತೊಡಗು,
ಕನ್ನಡಮ್ಮನು ನಿನ್ನ ಸಲಹುವಳು ಮಗುವೇ.
ಎಲ್ಲೆ ನೀ ಹೋದರೂ ಕನ್ನಡವು ಜೊತೆಗಿರಲಿ,
ಬದುಕ ದಾರಿಯ ತುಂಬ ನಿನಗೆ ಜಯವೇ.

ಬುಧವಾರ, ಡಿಸೆಂಬರ್ 13, 2006

ಹಬ್ಬ!

(ಇದೊಂತರಾ ಸ್ವಂತಕ್ಕೆ ಬರೆದುಕೊಂಡದ್ದು, ಮುಂದೂ ನೆನಪಿರಲಿ ನಂಗೆ ಅಂತ. ಓದಿ ಬೋರಾಗುವ ಸಾಧ್ಯತೆಗಳಿವೆ ಎಂದು ಶಾಸನ ಬದ್ಧವಾಗಿ ಎಚ್ಚರಿಸಲಾಗಿದೆ!)

ಕಳೆದ ಹದಿನೈದಿಪ್ಪತ್ತು ದಿನಗಳಿಂದ ಮೇಲಿಂದ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೆಂಗಳೂರು ತುಂಬ. ಜೊತೆಗೆ ಆಳ್ವಾಸ್ ನುಡಿಸಿರಿ ಬೇರೆ ಮೂಡುಬಿದಿರೆಯಲ್ಲಿ,ಹೋಳಿಗೆ ಮೇಲಿನ ತುಪ್ಪದ ಹಾಗೆ. ಭರತನಾಟ್ಯದಿಂದ ಹಿಡಿದು ಪಾಪ್ ಸಾಂಗುಗಳ ತನಕ, ಎಲ್ಲ ಪ್ರಕಾರಗಳನ್ನೂ ನೋಡಾಯ್ತು!

ಈ ಸಾಲು ಸಾಲು ಕಾರ್ಯಕ್ರಮಗಳ "ಓಂಕಾರ"ಆಗಿದ್ದು ಕಲಾಕ್ಷೇತ್ರದ ರಂಗೋತ್ಸವದಿಂದ. ಪಂಪ ಪ್ರಶಸ್ತಿ ವಿಜೇತರ ನಾಟಕಗಳ ಪ್ರಯೋಗ ಇತ್ತು ಅಲ್ಲಿ. ನಾನು ಅಲ್ಲಿ ಮೂರು ನಾಟಕಗಳನ್ನ ನೋಡಿದೆ. ನನ್ನ ಮೆಚ್ಚಿನ ಲೇಖಕ ತೇಜಸ್ವಿಯವರ "ಚಿದಂಬರ ರಹಸ್ಯ", ಪು.ತಿ.ನ ರ "ಗೋಕುಲ ನಿರ್ಗಮನ" ಮತ್ತು ನರಸಿಂಹ ಸ್ವಾಮಿಯವರ "ಮೈಸೂರು ಮಲ್ಲಿಗೆ". ಮೂರು ನಾಟಕಗಳೂ ಭಿನ್ನ ತಳಹದಿಯವು.

ಅಲ್ಲಿಂದ ಹೊರಟದ್ದು ಮೂಡುಬಿದಿರೆಗೆ. ಆಳ್ವಾಸ್ ನುಡಿಸಿರಿಯಲ್ಲಿ ಯಕ್ಷಗಾನ, ಯಕ್ಷಗಾನ ತಾಳಮದ್ದಲೆ, ಶ್ರೀಧರ್ ದಂಪತಿ, ಶಾರದಾ ಮಣಿಶೇಖರ್- ಭರತನಾಟ್ಯ, ೮-೧೦ ತಂಡಗಳ ಜಾನಪದ ನೃತ್ಯಗಳು, ಅಲ್ಲಿನ ವಿದ್ಯಾರ್ಥಿಗಳಿಂದ- ಮಧ್ಯಮ ವ್ಯಾಯೋಗ, ದೂತವಾಕ್ಯ, ಪಂಜರ ಶಾಲೆ- ೩ ನಾಟಕಗಳು. ಒಂದಿಷ್ಟು ಖ್ಯಾತನಾಮರ ಭಾವಗೀತೆಗಳು, ಇತ್ಯಾದಿ.

ಅದು ಮುಗಿಸಿಕೊಂಡು ಬೆಂಗಳೂರಿಗೆ ಬಂದರೆ, ಇಲ್ಲಿ ಬೆಂಗಳೂರು ಹಬ್ಬಮತ್ತು ಇತರ ಕಾರ್ಯಕ್ರಮಗಳು. ವಾರವಿಡೀ ನಮ್ಮ ಪಾಳಯ ಟೌನುಹಾಲು- ಕಲಾಕ್ಷೇತ್ರ ದಲ್ಲೇ ಟೆಂಟು ಹಾಕಿತ್ತು! ೦೨ನೇ ತಾರೀಕಿಂದ ಮೊನ್ನೆ ೧೧ರ ವರೆಗೆ.

ಶನಿವಾರ ಟೌನುಹಾಲಿನಲ್ಲಿ ಯಕ್ಷಗಾನ, ಪಕ್ಕದ ಕಲಾಕ್ಷೇತ್ರದಲ್ಲಿ ಹಿಂದೂಸ್ತಾನಿ ಸಂಗೀತ, ಬೆಳಗಿನವರೆಗೆ ಬೆಂಗಳೂರು ಹಬ್ಬದ ಪ್ರಯುಕ್ತ. ನಡು ರಾತ್ರೆ ೨ ಗಂಟೆಗೆ ಫಯಾಜ್ ಖಾನ್ ನ ಸಾರಂಗಿ ವಾದನ ಕೇಳಿದೆ. ದನದ ಕರುಳಿನಿಂದ ಮಾಡುವ ಅಪರೂಪದ ವಾದ್ಯ ಅದು. ಭಾರತದಲ್ಲಿ ಸಾರಂಗ್ ನುಡಿಸುವವರು ೩-೪ ಜನ ಇದ್ದಾರಂತೆ, ಅಷ್ಟೆ. ನಡು ರಾತ್ರಿಯಲ್ಲಿ ಒಮ್ಮೆ ಎಲ್ಲಾದರೂ ಸಾರಂಗ್ ಕೇಳಿ ನೋಡಿ, ಗೊತ್ತಾಗುತ್ತದೆ ಆವಾಗ ಆ ವಾದ್ಯದ ಶಕ್ತಿ.

ಭಾನುವಾರ ರಾತ್ರಿ ಮತ್ತೆ ಯಕ್ಷಗಾನ, ಚಿಟ್ಟಾಣಿ ತಂಡದಿಂದ. ೭೭ರ್ ಪ್ರಾಯದಲ್ಲು ಅವರ ಕುಣಿತ ನೋಡಿದರೆ ಅಬ್ಬ! ಎನಿಸದೇ ಇರದು. ಮಾರನೇ ದಿನ ಮುರುಳಿಯ ಮೋಡಿಗಾರ ಪ್ರವೀಣ್ ಗೋಡ್ಕಿಂಡಿಯವರ ಕೊಳಲು ವಾದನ, ಮಂಗಳವಾರ ಬೆನಕ ತಂಡದ ಜೋಕುಮಾರಸ್ವಾಮಿ, ಬಿ.ವಿ.ಕಾರಂತರ ರಂಗ ಪರಿಕಲ್ಪನೆಯ ನಾಟಕ ಇತ್ತು, ಟೌನ್ ಹಾಲಿನಲ್ಲಿ. ಅಲ್ಲೇ ಬದಿಯ ನಯನ ಕನ್ನಡ ಭವನದಲ್ಲಿ ವೆಂಕಟೇಶ ಗೋಡ್ಕಿಂಡಿಯವರ ಕೊಳಲು ವಾದನ. ಮಾರನೇ ದಿನ ಎ.ಡಿ.ಎ ರಂಗ ಮಂದಿರದಲ್ಲಿ "ಹೀಗಾದ್ರೆ ಹೇಗೆ" ಅನ್ನುವ ನಗೆ ನಾಟಕ, ಇದ್ದಿದ್ದು ಇಬ್ಬರೇ, ಲಕ್ಷ್ಮೀ ಚಂದ್ರಶೇಖರ್ ಮತ್ತು ಸುಂದರ್. ನಾಟಕದ co- ordination ಅದ್ಭು‍ತ!. N.S.D ಈ ನಾಟಕ ಯೋಜಿಸಿತ್ತು.

ಗುರುವಾರ ವೈಜಯಂತಿ ಕಾಶಿ ಕೂಚುಪುಡಿ ನೃತ್ಯ, ಮತ್ತೆ ಮೈಸೂರು ಸಹೋದರರಿಂದ ಪಿಟೀಲು ವಾದನ. ಆಮೇಲೆ ಪ್ರತಿಭಾ ಪ್ರಹ್ಲಾದ್ ಭರತನಾಟ್ಯ, ಎಲ್ಲವೂ ಕಲಾಕ್ಷೇತ್ರದಲ್ಲೆ. ಹೊರಗೆ ಸಂಸ ಬಯಲು ರಂಗ ಮಂದಿರದಲ್ಲಿ ಕನ್ನಡದ ಹಳೇ ಚಿತ್ರಗೀತೆಗಳನ್ನ ಹಾಡುವ ಕಾರ್ಯಕ್ರಮವೂ ಇತ್ತು, ಆವತ್ತೇ.

ಶುಕ್ರವಾರ location shift! ಅರಮನೆ ಮೈದಾನದಲ್ಲಿ ಆನೂರು ಅನಂತಕೃಷ್ಣ ತಂಡದವರಿಂದ ತಾಳವಾದ್ಯ. ಹಿತವಾದ ಚಳಿ ಜೊತೆಗೆ, ಪಕ್ಕವಾದ್ಯಗಳ ಲಹರಿ.. ನಂತರ ಕಥಕ್ ಸಾಮ್ರಾಟ ಬಿರ್ಜು ಮಹಾರಾಜ್, ಜೊತೆಗೆ ಕಿಶನ್ ಮಹರಾಜ್ ತಬ್ಲಾ, ರಾಜನ್ ಮತ್ತು ಸಾಜನ್ ಮಿಶ್ರಾ ಗಾಯನ! ಆಹಾ! ನಾನು ನೋಡಿದ ಸುಂದರ ಕಾರ್ಯಕ್ರಮಗಳಲ್ಲಿ ಒಂದು ಇದು. ಶನಿವಾರ ಲಯ ಬ್ರಹ್ಮ ಶಿವಮಣಿಯಿಂದ drums ಬಡಿತ. ಈತನ ಕೈ ಚಳಕಕ್ಕೆ ಅಷ್ಟೂ ಜನ ಬಿಟ್ಟ ಬಾಯಿ ಬಿಟ್ಟುಕೊಂಡೆ ಕುಳಿತಿದ್ದರು. ಸ್ಪೂನು, ಮರದ ಸೌಟು, ಪುಟ್ಟ ಗೆಜ್ಜೆ, ಹಳೆಯ ಸಣ್ಣ ಹಂಡೆ, ಚೈನು, ಎಲ್ಲದರಲ್ಲೂ ನಾದ ಹೊರಡಿಸಬಲ್ಲ ಆಸಾಮಿ ಶಿವಮಣಿ. ಆತನಿಗೆ ಸಾಥ್ ನೀಡಲು ಕೇರಳ ಚೆಂಡೆಯ ಭರ್ಜರಿ ತಂಡವಿತ್ತು.

ಭಾನುವಾರ ಅರಮನೆ ಮೈದಾನದಲ್ಲಿ ಬಿ.ಜಯಶ್ರೀ ತಂಡದಿಂದ ರಂಗಗೀತೆಗಳು, ನಂತರ ಪ್ರಸಾದ್ ಬಿಡ್ಡಪ್ಪನ ವಸ್ತ್ರ ಪ್ರದರ್ಶನ! ಅದನ್ನ ಮುಂದೆ ಬರುವ ಕೈಲಾಶ್ ಖೇರ್‍ನಿಗಾಗಿ ಕಾಯುತ್ತಾ ಸಹಿಸಿಕೊಂಡದ್ದಾಯ್ತು! ಜಯಶ್ರೀ ತಂಡಕ್ಕೆ ಕೇವಲ ಅರ್ಧ ತಾಸಿನ ಸಮಯ ಸಿಕ್ಕಿದ್ದು ಬಲು ಬೇಸರದ ವಿಷಯ. ನಡುವೆ ಹತ್ತು ನಿಮಿಷ ಮಲೈಕಾ ಅರೊರಾ, ಅರ್ಜುನ್ ರಾಂಪಾಲ್ ಬಂದು ಹೋದರು. ಕೊನೆಯಲ್ಲಿಕೈಲಾಶ್ ಖೇರ್ ಬಲು ಸೊಗಸಾಗಿ ಹಾಡಿದ. "ಅಲ್ಲಾ ಕೇ ಬಂದೇ" ಹಾಡಿನಿಂದ ಪ್ರಸಿದ್ಧನಾದ ಈತ ಮೊದಲು ಸೂಫಿ ಹಾಡುಗಳನ್ನ ಹಾಡುತ್ತಿದ್ದವನು.

ಸೋಮವಾರ ರಾತ್ರಿ ಕಲಾಕ್ಷೇತ್ರದಲ್ಲಿ ರೂಪಕಲಾ ಕುಂದಾಪುರದವರ ನಾಟಕ ಮೂರು ಮುತ್ತುಗಳು, ಅದಕ್ಕು ಹೋಗಿಬಂತು ನಮ್ಮ ಪಟಾಲಮ್ಮು, ಮಾರನೇ ದಿನ ಆಫೀಸು ಇದ್ದರೂ ಲೆಕ್ಕಿಸದೇ!
ಸದ್ಯಕ್ಕೆ ವಿರಾಮದ ಸಮಯ, ಮುಂದೊಂದು ವಾರ ಎಲ್ಲೂ ಹೋಗುವ ಪ್ಲಾನು ಇಲ್ಲಿವರೆಗಂತೂ ಇಲ್ಲ!