ಮಂಗಳವಾರ, ಜನವರಿ 30, 2007

ಸಾವು

ನೆಲೆಯ
ಬಲೆಯನು
ಕಳಚಿಯೋ ಉಳುಚಿಯೋ
ಹೊರಬಂದು,
ಪರಿಧಿಯನೊಮ್ಮೆ ದಾಟಿ,
ಭಯಗೊಂಡು
ಮತ್ತೆ
ಒಳಬಂದು
ಇದ್ದುದರಲ್ಲೆ ಹೊಸತನು
ಹುಡುಕಿ
ಬಿತ್ತಿ,ಬೆಳೆಸಿ,
ಉದ್ಧಾರಕೆ
ಉಸಿರಾಗುವ ಮುನ್ನವೇ,
ಮೂರು
ಎರಡು
ಒಂದು....

ಗುರುವಾರ, ಜನವರಿ 25, 2007

ರಜೆಯನೆದುರಿಟ್ಟುಕೊಂಡು...

ನಾಳೆ ಬೆಳಗ್ಗೆ ಅಂದ್ರೆ ಮನೆ. ಭರ್ಜರಿ ರೆಸ್ಟಿಂಗು , ಎಲ್ಲೂ trekking ಹೋಗದೆ, ತಿರುಗದೇ, ೩ ದಿನಗಳ ರಜೆಯನ್ನ ಈ ತರಹ ಉಪಯೋಗಿಸುತ್ತಿರುವುದು ಇದೇ ಮೊದಲು ಅಂತ ಕಾಣಿಸುತ್ತದೆ!ಮನೇಲೆ ಅದೂ ಇದೂ ಮಾಡ್ಕಂಡು ಆರಾಮಾಗಿರೋ ಯೋಚ್ನೆ. ಹಾಲು ಕರಿಯೋದು, ತೋಟಕ್ಕೆ ನೀರು ಬಿಡೋದು, ಗುಡ್ದ ಬೆಟ್ಟ ಸುತ್ತೋದು..

ಎಂಥಾ ವಿಪರ್ಯಾಸ ಅಲ್ವಾ?, ಮೊದ್ಲು ನಾನು ದಿನಾ ಮಾಡೊ ಕೆಲ್ಸ, duty ಆಗಿತ್ತು ಇದೆಲ್ಲ! ಆವಾಗ ಹಾಳಾದ್ದು ಈ ಕೆಲ್ಸ ಯಾಕೆ ನಾನು ಮಾಡಬೇಕು ಅಂತ ಆಲೋಚಿಸ್ತಾ ಇದ್ದೆ, ಒಮ್ಮೆ ಈ ರಗಳೆ ಮುಗಿದರೆ ಸಾಕು ಅನ್ನಿಸುತ್ತಿತ್ತು. ಅಪ್ಪ ಎಲ್ಲ ಬಿಟ್ಟು ಈ ಹಳ್ಳಿಯ ಮೂಲೆಯಲ್ಲಿ ಯಾಕಾದರೂ ಮನೆ ಮಾಡಿದರೂ ಅಂತಲೂ ಅನ್ನಿಸಿದ್ದಿದ್ದೆ. ಆದರೆ ಈಗ ಅವುಗಳೇ ನನ್ನ ಸಂತಸ ಹುಡುಕುವ ಮಾಧ್ಯಮಗಳಾಗಿವೆ. ಅಪ್ಪ ದಿನಾ ಬೆಳಗ್ಗೆದ್ದು "ಶ್ರೀನಿಧೀ, ಶ್ರೀನಿಧೀ, ಹಾಲು ಕರ್ಯಕು ಏಳಾ" ಅಂದಾಗ ಶಪಿಸುತ್ತಲೇ ಎದ್ದು ಆ ಕೆಲ್ಸ ಮಾಡಲು ಹೊರಡುತ್ತಿದ್ದೆ.

ಸಂಜೆ ನಾನು ಕ್ರಿಕೆಟ್ ಆಡುವ ಸಮಯಕ್ಕೇ, ಅಪ್ಪ ನೀರ ಪೈಪು ತಗೊಂಡು ಹೊರಡುತ್ತಿದ್ದ, ತೆಂಗಿನ ಮರಗಳಿಗೆ ನೀರಾಯಿಸಲು .ನಾನು ಬರುವುದಿಲ್ಲ ಎಂದರೆ ತಾನೇ ಎಲ್ಲ ಮರಗಳಿಗೆ ನೀರು ಹಾಕಿ ಸುಸ್ಥು ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ , ನಾನೇ ಹೋಗಿ ಎಲ್ಲ ತೆಂಗಿನ ಮರಗಳ ಸುತ್ತ, ನೀರು ಹಾರಿಸಿ, ಬುಡವನ್ನು ಒದ್ದೆ ಮಾಡಿ, ಆಡಲು ಓಡುತ್ತಿದ್ದೆ! ಬಹಳ ಕಾಲದ ಹಿಂದೇನೂ ಅಲ್ಲ, ಮೊನ್ನೆ ಮೊನ್ನೆ, ೨-೩ ವರ್ಷಗಳ ಹಿಂದಿನ ವರೆಗೂ!

ಇವತ್ತು ನಾನು ಮತ್ತೆ ಹಾಲು ಕರೀಬೇಕು, ನೀರು ಬಿಡಬೇಕು ಅಂತ ಅಲೋಚನೆ ಮಾಡುತ್ತೇನೆ, ಅಪ್ಪನಿಗೆ ಈಗಲೂ ಅದು ಕೆಲಸವೇ. ನಾನು ಮೂರು ದಿನ ಇದ್ದು, ಆ ಕೆಲಸದಲ್ಲಿ ಸಂತಸ ಅನುಭವಿಸಿ ವಾಪಾಸಾಗುತ್ತೇನೆ! ಅಪ್ಪನಿಗೂ ಅದು ಸಂತಸವೇ, ಆದರದು ಬೇರೆಯದೇ ತೆರನಾದ್ದು.

ತಂಗಿ, ನಾನೇನೋ ಅಲ್ಪ ಸ್ವಲ್ಪ ಬರೆಯುತ್ತೇನಾದ್ದರಿಂದ ಅವಳ ಸಂಶಯಗಳ ಬುಟ್ಟಿ ರೆಡಿ ಇಟ್ಟುಕೊಂಡು ಕಾಯುತ್ತಿರುತಾಳೆ. ಅಣ್ಣಾ, ಅದ್ಯಾಂಗೆ, ಇದ್ಯಾಂಗೆ ಅನ್ನುತ್ತಾ.. ಅವಳ ಜರ್ನಲಿಸಂ ನ ಕೊರೆತಗಳನ್ನು ಸಹಿಸಿಕೊಳ್ಳಲು ನಾನು ಈಗಿಂದಲೇ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ!

ಅಮ್ಮನ ಬಳಿ ಒಂದಿಷ್ಟು ಹೊಸ ಅಡುಗೆ ತಯಾರಿ ಬಗ್ಗೆ ಕಲೀಬೇಕು! ಮಾಡಿದ್ದೇ ಮಾಡಿಕೊಂಡು ಉಂಡು ಬೇಜಾರಾಗಿದೆ.
ಇಷ್ಟಾಗಿ ನಾಳೆ ಗಣರಾಜ್ಯೋತ್ಸವ, ಯಾವುದಾದರೂ ಹತ್ತಿರದ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದರೂ ಇತ್ತೇ, ಅದಕ್ಕೂ ಹಾಜರಿ ಹಾಕಬೇಕಾದ ಜವಾಬ್ದಾರಿ ಇದೆ!

ಇದೆಲ್ಲ ಮೂರು ದಿನಗಳ ಕಥೆಯಾಯಿತು. ಮುಂದೇನಾಗುತ್ತದೆ?

ಸಣ್ಣ ಸಣ್ಣ ರಜೆಗಳ ಖುಶಿ ಅನುಭವಿಸೋಕೆ ಮನೆಗೆ ಹೋಗುವ ನಾನು/ನಾವುಗಳು ನಮ್ಮ ಬೇರುಗಳಿಗೆ ಶಾಶ್ವತವಾಗಿ ಎಂದಾದರೂ ಹಿಂದಿರುಗುತ್ತೇವಾ?

ಗುರುವಾರ, ಜನವರಿ 11, 2007

ಸಾಗರ ಸಮ್ಮುಖದಲ್ಲಿ-೨

ಸಾಗರದ ದಂಡೆಯಲಿ, ಅವಳ ಜೊತೆ ಜೊತೆಯಲ್ಲಿ
ಸಾಗುತಿದ್ದೆನು ಹೀಗೇ, ಕೈಯ ಹಿಡಿದು.
ಕಾಲ ಕೆಳಗಡೆಯಲ್ಲ ಮರಳ ಕಣಗಳ ಹಾಸು
ಜೊತೆಗಿಹಳು ಮನದನ್ನೆ ಮಲ್ಲಿಗೆಯ ಮುಡಿದು.

ಎದುರುಗಡೆ ದಿನ್ನೆಯಲಿ ಕೋಟೆ ಕಟ್ಟುವ ಆಟ
ಬಾಲಕರ ನೆಗೆದಾಟ, ಹರ್ಷ ಸಂಭ್ರಮವು.
ಪಕ್ಕದಲಿ ನೋಡಿದರೆ ಶಂಖ ಹೆಕ್ಕುವ ಹುಡುಗಿ,
ಗಾಳಿಪಟ ಹಾರಿಹುದು ತೀರದುದ್ದಕ್ಕೂ.

ಬಯಲು ಸೀಮೆಯ ಹುಡುಗಿ, ಕಡಲು ಹೊಸದಿವಳಿಗೆ
ಬೆರಗುಗಣ್ಣಿನ ಒಳಗೆ ಶರಧಿ ಪ್ರತಿಬಿಂಬ.
ನೀರ ರಾಶಿಯ ನೋಡಿ, ಬಾಲ್ಯ ಒಡಮೂಡಿಹುದು
ಏನ ಮಾಡುವುದೆಂಬ ಗೊಂದಲವು ಮನತುಂಬ!

ಪಡುವಣದ ಅಂಚಲ್ಲಿ ಸೂರ್ಯ ಸ್ನಾನವಿದೀಗ
ಅವನ ಕೆಂಬಣ್ಣದಲೀಕೆ ಮಿಂದಿಹಳು ಮೊದಲೆ,
ನೇಸರನ ಸೊಬಗ ನೋಡುತಲಿ ಇವಳಿರೆ,
ನನಗೆ ಈಕೆಯ ಮೊಗವು, ಅದಕು ಸೊಗಸು!

ಮಂಗಳವಾರ, ಜನವರಿ 09, 2007

ಸಾಗರ ಸಮ್ಮುಖದಲ್ಲಿ. . .

ಮೊದಲ ಮಳೆ ಹನಿಗಳು,
ಹಣೆಯ ತಂಪಾಗಿಸಿ, ಉರುಳುತ್ತಿವೆ ಕೆಳಗೆ..
ಎದೆಯು ಖುಷಿಯೊಳಗರಳಿ, ಉಬ್ಬುತಿದೆ,
ನಾವಿಬ್ಬರೀಗ ಮತ್ತೂ ಸನಿಹ.

ಸಾಗರದ ಸಮ್ಮುಖದ ತಣ್ಣನೆಯ ಮಾರುತವು
ನನ್ನ ನೇವರಿಸಿ ತೆರಳುತಿಹುದು..
ಅಲೆಗಳ ನೃತ್ಯವಾ ಜೊತೆ ಸೇರಿ ನೋಡುತಿರೆ
ಸಮಯ ಸ್ತಬ್ದವು ಅಲ್ಲೆ, ನಾವು ಪ್ರೇಮಧ್ಯಾನಿಗಳು.

ಸಂಜೆ ಹೊತ್ತಿನ ಕಂಪು ತಂಗಾಳಿ ಮೊಗ ಸವರಿ
ತರಗೆಲೆಯ ಕಚಗುಳಿಗೆ, ಎಚ್ಚೆತ್ತುಕೊಂಡು
ತುಟಿಯಂಚಲೇ ನಕ್ಕು, ಕಣ್ಣ ತೆರೆಯೆ
ಪಕ್ಕದಲೆ ನೀನಿರುವೆ, ತಗೋ! ಪ್ರೀತಿಯಪ್ಪುಗೆಯು.

ನೀ ನನ್ನ ಜೊತೆಯಿರಲು, ಬಾಳು ಸುಂದರ ಗೆಳತಿ
ಹೂವ ಹಾಸಿಗೆಯಲ್ಲೆ, ಜೀವನವು ಕಳೆವುದು.
ಸಂತಸದಿ ಸಾಗುತಿರೆ ನಮ್ಮ ಜೀವನಗಾಥೆ
ಯಾವ ಕಿನ್ನರ ಕಥೆಗು, ಕಡಿಮೆಯಿರದು!

(ಸ್ನೇಹಿತನೊಬ್ಬನಿಂದ ಎರವಲು ಪಡೆದ ಇಂಗ್ಲೀಷು ಕವನವೊಂದರ ಭಾವಾನುವಾದ)

ಸೋಮವಾರ, ಜನವರಿ 08, 2007

ಅವಳ ಮನಸು

ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.

"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ಸುಮ್ಮಗೆ ಕರೆಯುವರೇ?, ನೋಡಬೇಕಾಯ್ತಲ್ಲ!

ಬೆಳಗಿಂದ ಅವನ ಜೊತೆ, ಮಾತಾಡಿಯೇ ಇಲ್ಲ,
ಸಣ್ಣ ಜಳಗ ಬಳಿಕ, ಪೂರ್ತಿ ಮೌನ.

ರಾಜಿಯಾಗುವ ಮನಸು ಬಂದಿಹುದೋ ಅವನಿಗೆ?
ನಾನು ಬಗ್ಗುವುದಿಲ್ಲ, ಏನಾದರಾಗಲಿ!

ಹೊರ ಬಂದು ನೋಡಿದರೆ, ಕಂಡುದಿನ್ನೇನು?
ಅವನ ಪಕ್ಕದಿ ಕತ್ತಿ, ಕೈಯೆಲ್ಲ ರಕ್ತ.

ಕಣ್ಣಾಲಿಗಳು ತುಂಬಿ ಮಾತೇ ಹೊರಡುತಲಿಲ್ಲ
ಇನಿಯನಾ ಪಾಡನು, ನೋಡುವುದು ಹೇಗೆ..

ಒಳಗೋಡಿ ತಂದಳು, ಹಳೆಯ ಸೀರೆಯ ಚೂರ
ರಕ್ತದಲಿ ಮುಳುಗೆದ್ದ ಬೆರಳಿಗುಪಚಾರ.

ನಿಮಗೇಕೆ ಬೇಕಿತ್ತು, ಸಲ್ಲದಾ ಈ ಕೆಲಸ
ಎಂದೂ ಮಾಡಿಲ್ಲ, ಇಂಥ ಸಾಹಸವ.

ಇನ್ನೊಮ್ಮೆ ಕತ್ತಿಯನು ಮುಟ್ಟಿದರೆ ನನ್ನಾಣೆ
ಗೊತ್ತಿಲ್ಲಾದ ಕೆಲಸ, ಮಾಡುವುದು ಬೇಡ

ನಿಮಗೇನೋ ಆದರೆ ನಡುಗುವುದು ನನ್ನೆದೆಯು
ಕೈಮುಗಿವೆ ದಮ್ಮಯ್ಯ, ಕ್ಷಮಿಸಿಬಿಡಿ ನನ್ನ.

ಇನ್ನೆಂದು ಜಗಳವನು ಮಾಡೆ ನಾ ನಿಮ್ಮ ಜೊತೆ,
ನಗುಲಿರುವೆನು ಎಂದೂ, ತಿಳಿಯಿತಲ್ಲ.

ಈಗೊಮ್ಮೆ ಒಳಬನ್ನಿ, ನನ್ನ ಜೀವವೇ ನೀವು
ಎನ್ನುತಲಿ ನಡೆದಳು, ಅವನ ಬಳಸಿ.

ಬುಧವಾರ, ಜನವರಿ 03, 2007

ಒಂದು ಬೆಳಗಿನ ಸಮಯ...

ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ
ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ..

ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ..

ಗೆಜ್ಜೆ ಘಲ್ಲೆನಿಸುತಲಿ, ತುಳಸಿಗೆ ಪ್ರದಕ್ಷಿಣೆಯು
ಧೂಪದಾ ಘಮವಿಹುದು ಅಂಗಳದ ತುಂಬಾ

ಆತ ಮಲಗಿಹನಲ್ಲಿ ಒಳಮನೆಯ ಕತ್ತಲಲಿ
ಕಳೆದ ರಾತ್ರಿಯ ಸುಖದ ಕನಸಿನೊಳಗೆ..

ಬಿಳುಪು ಪಾದಗಳನ್ನ, ಮೆಲುವಾಗಿ ನಡೆಸುತ್ತ
ಮೆಲ್ಲನುಸುರಿದಳಾಕೆ, ಕೋಣೆ ಪರದೆಯ ಸರಿಸಿ,

ಮುಂಜಾವು ಬಂದಿಹುದು ಮನೆಯ ಬಾಗಿಲ ಬಳಿಗೆ
ಏಳಬಾರದೆ ದೊರೆಯೆ, ಹೊತ್ತು ಮೀರುತಿದೆ.

ಆಕೆಯಿನಿ ದನಿಯು, ಅವನ ಕಿವಿಯನು ಸವರಿ
ಮೆಲ್ಲನೆದ್ದನು ಅವಳ ಸೊಬಗ ನೋಡುತಲಿ

ಬಳಿ ಬಾರೆ ಎಂದವಳ ಪ್ರೇಮದಲಿ ಕರೆದವನು
ಬಾಚಿ ತಬ್ಬಿದನವಳ, ಕದವ ಮುಚ್ಚುತ್ತ..

ಬಾಗಿಲಿನ ಸಂದಿಯಲಿ ಬಿಸಿಲಕೋಲೊಂದಿತ್ತು
ಕದ್ದು ನೋಡುತಲವರ ಸರಸವನ್ನು.