ಮಂಗಳವಾರ, ಡಿಸೆಂಬರ್ 21, 2010

ಸ್ಪರ್ಶ

ಪಾರಿಜಾತದ ಹೂವು ಕೈಯ ಸವರಿದ ಹಾಗೆ
ಜಂಗುಳಿಯ ಮಧ್ಯದೊಳಗೊಂದು ಸ್ಪರ್ಶ
ಯಾವುದೋ ಮೆಲುಕೆಲ್ಲ ಆ ಬೆರಳ ತುದಿಯಿಂದ
ತೆರೆದುಕೊಂಡಂದದಲಿ ನೆನಪ ವರ್ಷ

ಹಳೆಯ ಮಂಜೂಷೆಯಾ ಕಳೆದ ಕೀಲಿಯ ಕೈಯ
ಸಟ್ಟನೇ ಕೊಟ್ಟು ಹೋದಂತೆ ಯಾರೋ
ಕತ್ತಲಲಿ ಕಾಣದೆಯೆ ಕಳೆದು ಹೋಗುವ ಹೊತ್ತು
ತಿರುವಿನಲಿ ಕಂಡಂತೆ ಉರಿವ ಸೊಡರು

ಆಪ್ತ ಜೀವವೊಂದು ಹಿಂದೆ ಇಹವ ಮರೆವ ಸಮಯದಲ್ಲಿ
ಕೈಯನ್ನೊಮ್ಮೆ ಹಿಡಿದು, ಕಣ್ಣ ಮುಚ್ಚಿಕೊಂಡಿತು
ಯಾಕೋ ಇಂದು ಅಂಥದೊಂದು ಸೋಕು ತಾಕಿ
ನಡೆವ ದಾರಿಯೊಳಗೆ ಮನವು ಹೂತುಕೊಂಡಿತು

ಯಾರದೋ ನಡೆಯೊಂದು ಅವರ ತಿಳಿವಿಗೆ ಬರದೆ
ನನ್ನ ಪಥವ ಬದಲು ಮಾಡಿ ಹೊರಟುಬಿಟ್ಟಿತು
ಮರೆಯುತಿದ್ದ ಸ್ಮೃತಿಗೆ ಮತ್ತೆ ಜೀವ ಕೊಟ್ಟು ಮೆಲ್ಲ
ಜನರ ಸಂತೆಯೊಳಗೆ ಸ್ಪರ್ಶ ಕರಗಿ ಹೋಯಿತು..

ಮಂಗಳವಾರ, ಡಿಸೆಂಬರ್ 07, 2010

ಪ್ರಣತಿಯಿಂದ ಪ್ರಬಂಧ ಸ್ಪರ್ಧೆ



ಸಾಹಿತ್ಯ, ಸಂಸ್ಕೃತಿ, ಪ್ರಕೃತಿ -ಅಂಶಗಳನ್ನು ಧ್ಯೇಯವಾಗಿಸಿಕೊಂಡಿರುವ ನಮ್ಮ ಸಂಸ್ಥೆ ‘ಪ್ರಣತಿ’ಯಿಂದ, ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೇವೆ. ವಿದ್ಯಾರ್ಥಿಗಳು ‘ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ’ ಎಂಬ ವಿಷಯದ ಮೇಲೆ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಸ್ಫುಟವಾದ ಕೈಬರಹದಲ್ಲಿ ಅಥವಾ ಡಿ.ಟಿ.ಪಿ. ಮಾಡಿ ಕಳುಹಿಸಬಹುದು. ಪ್ರಬಂಧದ ಜೊತೆ ನಿಮ್ಮ ಕಾಲೇಜ್ ಐಡೆಂಟಿಟಿ ಕಾರ್ಡ್‌ನ ಪ್ರತಿ ಇರಿಸುವುದು ಕಡ್ಡಾಯ. ಸಂಪಾದಕ ಮಂಡಲಿ ಮತ್ತು ವಿಷಯ ತಜ್ಞರು ಆಯ್ದ ಪ್ರಬಂಧಕ್ಕೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಬಂಧವನ್ನು ಈ ವಿಳಾಸಕ್ಕೆ ಕಳುಹಿಸಬಹುದು ಅಥವಾ ಇ-ಮೇಲ್ ಮಾಡಬಹುದು. ಕೊನೆಯ ದಿನಾಂಕ: ೩೦ ಡಿಸೆಂಬರ್ ೨೦೧೦. ವಿಳಾಸ: ಪ್ರಣತಿ, ನಂ. ೪೪೮/ಎ, ೮ನೇ ಮೇನ್, ೭ನೇ ಕ್ರಾಸ್, ತ.ರಾ.ಸು. ರಸ್ತೆ, ಹನುಮಂತನಗರ, ಬೆಂಗಳೂರು - ೫೬೦ ೦೧೯. ಇ-ಮೇಲ್: prabandha@pranati.in. ಯಾವುದೇ ಮಾಹಿತಿಗೆ: ೯೬೧೧೪೫೮೬೯೮ / ೯೯೮೦೦೨೨೫೪೮.

ನೀವು ಕಾಲೇಜು ವಿದ್ಯಾರ್ಥಿಯಾಗಿದ್ದರೆ ನೀವೇ ಭಾಗವಹಿಸಿ. ಇಲ್ಲವೇ, ನಿಮ್ಮ ಪರಿಚಿತ ವಿದ್ಯಾರ್ಥಿಗಳಿಗೆ ತಿಳಿಸಿ. ;)