ಬುಧವಾರ, ಜುಲೈ 25, 2007

ಶಿಫಾರಸು ಪತ್ರ ಎನ್ನುವ ಹೊಸ HR ಕಥೆಯು.

ಏನೋ ಕೆಲಸದಲ್ಲಿದ್ದೆ. ಮೊಬೈಲ್ ಸದ್ದಾಯಿತು, ಎತ್ತಿಕೊಂಡೆ.

"ಶ್ರೀನಿಧಿಯವರಾ ಮಾತಾಡೋದು?"

ಹೌದು.

"ನಮಸ್ಕಾರ, ನಾನು ಸೀತಾರಾಮ್ (ಹೆಸರು ಬದಲಿಸಲಾಗಿದೆ) ಮಾತಾಡ್ತಿರೋದು, ನಿಮ್ ಹತ್ರ ಸ್ವಲ್ಪ ಮಾತಾಡ್ಬೇಕಿತ್ತಲ್ಲ.."

ಹೇಳಿ..

ಒಂದು ಕೆಲ್ಸ ಬೇಕಿತ್ತಲ್ಲ ನಮ್ ಹುಡುಗಂಗೆ?

ಅರೇ! ಅಂತಂದುಕೊಂಡೆ ಮನದಲ್ಲೇ, ಕೆಲ್ಸ ಕೇಳೋರು ಯಾರೂ ಕನ್ನಡದಲ್ಲಿ ಮಾತಾಡುವುದಿಲ್ಲ.

ಹಮ್, ಹೇಳಿ..

"ನೋಡಿ ಸಾರ್ ನಮ್ ಹುಡ್ಗ ಭಾಳ ಒಳ್ಳೇವ್ನು, ಏನೋ ಕಂಪ್ಯೂಟರ್ ಓದ್ಕಂಡಿದಾನೆ, ಒಳ್ಳೇ ಮನ್ತನ."

ಐಲಾ! ಥೇಟು ರಾಜಕಾರಣಿಗಳದೇ ಧಾಟಿ. ಅದೇ ಗತ್ತು. ಒಳ್ಳೇ ಮನೆತನ ಆದ್ರೆ ನಾನೇನು ಮಾಡ್ಲಿ, ಅವ್ನುಗೇನು ಹೆಣ್ಣು ಹುಡುಕ್ತೀನಾ ನಾನು?

ನೀವ್ಯಾರು ಮಾತಾಡ್ತಿರೋದು?

"ವಸಿ ತಡ್ಕಳಿ, ಹೇಳೋಗಂಟ ಕೇಳಿ"

ನನ್ಗೆ ಉರಿದು ಹೋಗುತ್ತಿತ್ತು.

"ನಮ್ ನಂಜುಡಪ್ನೋರ್ ಮಗ, ಶ್ರೀಕಾಂತು ನನ್ ಹತ್ರ ಬಂದಿದ್ದ, ನಿಮ್ ಕಂಪ್ನಿಯಿಂದೇನೋ ಮೇಲ್ ಬಂದಿತ್ತಂತೆ, ನಿಮ್ಮಲ್ ಕೆಲ್ಸ ಇದ್ಯಂತಲ್ಲಾ , ಅದ್ನ ಅವಂಗೆ ಕೊಡ್ಸೋಕಾಗತ್ತಾ?!!"
"ಭಾಳಾ ಕಷ್ಟಾ ಪಟ್ ಓದಿದಾನೆ ಹುಡ್ಗ, ನಾನು ನೋಡ್ತಾನೇ ಬಂದಿದೀನಿ ಅವನ್ನ. ಪರ್ವಾಗಿಲ್ಲ ನೀವು ನಿಶ್ಚಿಂತೆಲ್ ಕೆಲ್ಸ ಕೊಡ್ಬೋದು ಅವಂಗೆ..

ಅವನ ಮಾತನ್ನ ಅರ್ಧದಲ್ಲೇ ತಡೆದು ನಿಲ್ಲಿಸಿ ಹೆಚ್ಚು ಕಡಿಮೆ ಕಿರುಚಿದೆ!
"ತಾವ್ ಯಾರ್ ಸಾರ್ ಮಾತಾಡದು!?"

"ಒಹ್ ಸಾರೀ ಕಣ್ರೀ, ಹೇಳದೇ ಮರ್ತ್ ಬಿಟ್ಟಿದ್ದೆ, ನಾನು ಕುಮಾರ್ ಸ್ವಾಮಿ PA ಮಾತಾಡ್ತಿರೋದು ಈ ಕಡೆಯಿಂದ"

ಹಾನ್! ನಂಗೆ ಒಂದು ಘಳಿಗೆ ಏನು ಹೇಳಬೇಕೋ ತೋಚಲಿಲ್ಲ!

"ಏನು , ಕುಮಾರಸ್ವಾಮಿ PA ನಾ?"

"ಹೌದು ಸಾರ್, ಕುಮಾರ್ ಸ್ವಾಮಿ ಪೀಏನೇ.. ನಾನು ಅವರ ...ನಗರ ಮನೆಲೇ ಇರೋದು, ಅಲ್ಲೇ ಕೆಲ್ಸ ಮಾಡೋದು.. ನಮ್ ಹುಡ್ಗ ನಿಮ್ ನಂಬರ್ ಕೊಟ್ಟು ಮಸಿ ಮಾತಾಡಣ್ಣೋ, ನಂಗ್ಯಾಕೋ ಹೆದ್ರಿಕೆ ಅಂತಂದ, ಹಾಂಗಾಗಿ ಫೋನ್ ಮಾಡ್ದೆ"

.......... ನಾನು ಏನೂ ಹೇಳಲಿಲ್ಲ, ಅವನಾಗೇ ಮುಂದುವರೆಸಿದ.

"ಒಂದ್ ಕೆಲ್ಸ ಮಾಡ್ತೀನಿ ನಾನು , ಕುಮಾರಣ್ಣಂದು ಒಂದು ಲೆಟರ್ ಕೊಟ್ ಕಳುಸ್ತೀನಿ ನಮ್ ಹುಡ್ಗನತ್ರ, ಅದ್ನ ನೋಡ್ಬುಟ್ಟೇ ಕೆಲ್ಸ ಕೊಡಿ, ನನ್ ಮೇಲೆ ನಂಬ್ಕೆ ಬರ್ಲಿಲ್ಲ ಅಂದ್ರೆ.. "

ಏನ್ ಲೆಟರ್, ಯಾಕೆ ಲೆಟರ್?

"ಅದೇಯಾ, ಇವ್ನು ಒಳ್ಳೇ ಹುಡ್ಗ, ನನ್ನ ಶಿಫಾರಸು ಇದೆ..ಈ ತರ ಈ ತರ ಅಂತ.. ಈ ಮಮೂಲಿ ಶಿಫಾರಸು ಪತ್ರ "
ನಂಗೆ ಅಕ್ಷರಶಃ ಪರಚಿಕೊಳ್ಳುವ ಹಾಗಾಯಿತು. ಸಾಫ್ಟ್ ವೇರ್ ಕೆಲ್ಸನಾ ಗವರ್ಮೆಂಟು ಕೆಲ್ಸ ಅಂದುಕೊಂಡು ಬಿಟ್ಟಿದ್ದ ಈ ಮನುಷ್ಯ ಅನ್ನುವುದರಲ್ಲಿ ಡೌಟೇ ಇರ್ಲಿಲ್ಲ!

ಅಲ್ಲಾ ಇವ್ರೇ, ನಮ್ಮಲ್ಲಿ ಇಂಟರ್ವ್ಯೂ ಗೆ ಸುಮಾರು procedures ಇದೆ, ಅದೆಲ್ಲ ಪಾಸಾದ್ರೆ ಮಾತ್ರ ಕೆಲ್ಸ ಸಿಗತ್ತೆ.. ಟೆಸ್ಟ್ ಬರೀಬೇಕು, ಆಮೇಲೆ ಇನ್ನೇನೇನೋ ತರದ್ದೆಲ್ಲ ಇರತ್ತೆ..

"ಹೀಂಗ್ ಮಾಡಿ ಸಾರ್, ಅದೇನೇನ್ ಕ್ವಶ್ಚನ್ಸು ಇದಿಯೋ ಅದ್ನೆಲ್ಲ ಮೊದ್ಲೇ ಹೇಳ್ಬುಡಿ ನೀವು, ನಮ್ ಹುಡ್ಗಂಗೆ ಸುಲ್ಭಾ ಆಗತ್ತೆ, ಮತ್ತೆ ಸೀಯಮ್ ಕುಮಾರಣ್ಣನ್ ಲೆಟ್ರು ಹ್ಯಾಂಗೂ ಇರತ್ತಾ, ಕೆಲ್ಸ ಆರಾಮಾಗಿ ಸಿಗತ್ತೆ"

ಎಲಾ ಇವನಾ! ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ!

ಒಂದು ಕೆಲ್ಸ ಮಾಡಿ , ಅವನ್ನ ಇಂಟರ್ವ್ಯೂ ಗೆ ಕಳ್ಸಿ, ಹುಡ್ಗ ಚನಾಗಿದ್ರೆ, ಕೆಲ್ಸ ಸಿಗತ್ತೆ. ಅವ್ನಿಗೆ programming ಬಂದ್ರೆ, ಯಾರ ಶಿಫಾರಸು ಪತ್ರಾನೂ ಬೇಡ, ಕೆಲ್ಸ ಗೊತ್ತಿಲ್ಲಾ ಅಂದ್ರೆ ಕಲಾಮ್ ಶಿಫಾರಸು ಪತ್ರಾನೂ ನಡೆಯಲ್ಲ- ಅಂತಂದೆ.

ಆ ಆಸಾಮಿ ಇನ್ನೂ ಏನೇನೂ ಹಲುಬುತ್ತಿತ್ತು. "ನೋಡಿ, ನಿಮ್ಗೇ ಒಳ್ಳೇದು.. ಇಲ್ಲಾಂದ್ರೆ.. "

ನಾನು ಫೋನಿಟ್ಟೆ.

ಇವತ್ತಿನವರೆಗೂ ಯಾರೂ ಕುಮಾರಣ್ಣನ ಶಿಫಾರಸು ಪತ್ರ ಹಿಡಕೊಂಡು ಕೆಲಸ ಕೇಳುವುದಕ್ಕೆ ಬಂದಿಲ್ಲ.

ಬುಧವಾರ, ಜುಲೈ 18, 2007

ರಸ್ತೆಗಳೆಂದರೆ...

ರಸ್ತೆಗಳೆಂದರೆ ಭೂಮಿಗೆ
ಮನುಷ್ಯ ರಚಿಸಿಕೊಟ್ಟ
ಕೃತಕ ನಾಲಿಗೆಗಳು.
ಮೈಮೇಲೆಲ್ಲ ಕೆತ್ತಿದ್ದಾನೆ,ಕಡೆದಿದ್ದಾನೆ
ಸಿಮೆಂಟು,ಡಾಂಬರು ಮಣ್ಣು ಎಲ್ಲದರ ನಾಲಗೆಯ
ತನ್ನ ಸೃಷ್ಟಿಯ ರುಚಿ ತೋರಿಸಲು!

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.
ಇಲ್ಲಿ ಅವಳ ಈ ಕೃತಕ ನಾಲಗೆಯ ಗ್ರಂಥಿಗಳು
ಏನನ್ನ ಅನುಭವಿಸುತ್ತಿರಬಹುದು,
ರುಚಿ ಹೇಗಿರಬಹುದು ಎಂಬ ಸೋಜಿಗ ನನಗೆ.

ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು
ಶವಯಾತ್ರೆಯ ಮೆರವಣಿಗೆ,
ಅಪಘಾತದಿ ತೊಟ್ಟಿಕ್ಕುವ ರಕ್ತ,
ಪ್ರತಿಭಟನೆ ನಡೆಸುವ ಸಾಲು ಕಾಲುಗಳು
ಯಾರದೋ ಮನೆಯಿಂದ ಹೊರಬಿದ್ದ ಪಾತ್ರೆ ಪಗಡ.
ನಡು ರಾತ್ರೆ ತರಿದು ಬಿದ್ದ ಮಲ್ಲಿಗೆಯ ಮಾಲೆ..
ದಿಗಿಲಾಗುತ್ತದೆ ನನಗೆ.

ಸಮಾಧಾನ ಪಟ್ಟುಕೊಳ್ಳುತ್ತೇನೆ, ನೆನಪಿಸಿಕೊಂಡು
ಮಣ್ಣ ದಾರಿಯ ಮಳೆಯ ತಂಪು
ಹಳೆ ದಾರಿಯಲಿ ಸೈಕಲೋಡಿಸುವ ಹೊಸ ಹುಡುಗನ ಖುಷಿ
ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
ಇವೆಲ್ಲದರ ರುಚಿ ಅನುಭವಿಸುವಂತದ್ದೇ,
ಅಲ್ಲವೇ?
ರಸ್ತೆಗಳೆಂದರೆ .....

ಗುರುವಾರ, ಜುಲೈ 12, 2007

ಒಂದು ಫೋನ್ ಕಾಲು ಅಥವಾ ಮತ್ತೆ HR ಕಥೆಯು.

"ನಮಸ್ತೇ, ನಾನು ಸುನೀತಾ ಹತ್ರ ಮಾತಾಡ್ತಿದೀನಾ?"

ತುಸು ಮೌನ, ನಂತರ..

ನೀವ್ ಯಾರು ಮಾತಾಡೋದು?

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಿದೀನಿ, ಜಾಬ್ ಓಪನಿಂಗ್ ಬಗ್ಗೆ ಮಾತಾಡ್ಬೇಕಿತ್ತು ಅವರ ಹತ್ತಿರ,
ನೀವ್ಯಾರು ಮಾತಾಡೋದು, ಸುನೀತಾನೇನಾ?"

ಅಲ್ಲ, ನಾನು ಅವಳ ಫ್ರೆಂಡು, ರೂಪಾ ಅಂತ..

"ಹೌದಾ, ಓಕೆ ಅವರು ಎಷ್ಟ್ ಹೊತ್ತಿಗೆ ಸಿಗ್ತಾರೆ?, ಆಮೇಲ್ ಮಾಡ್ತೀನಿ ಬಿಡಿ"

ಓಕೆ.. ಹೇಯ್ ಸುರೇಶ್, ಒಂದ್ ನಿಮಿಷಾ.. ನಾನು ಸುನೀತಾನೇ ಮಾತಾಡ್ತಿರೋದು ಇಲ್ಲಿ..

"ನಾನು ಶ್ರೀನಿಧಿ, ಸುರೇಶ್ ಅಲ್ಲ.."

ಸುಮ್ನಿರೋ ಸುರೇಶಾ, ಸಾಕು ಕಂಡಿದೀನಿ... ಪ್ರತೀ ಸಲನೂ ನೀನು ನನ್ನ ಫೂಲ್ ಮಾಡೋಕಾಗಲ್ಲ! ಆವತ್ತೇನೋ ಗೊತಾಗಿಲ್ಲ, ಏನ್ ಇವತ್ತೂ ಆಗ್ ಬಿಡ್ತೀನಿ ಅಂದ್ಕೊಂಡಿದೀಯಾ?, ಹೋಗಲೇ..

"ಹೇ, ಇಲ್ಲ ನಾನು ಶ್ರೀನಿಧಿ, ಕಾಲಿಂಗ್ ಫ್ರಾಂ.. "

ಹಾ ಹಾ, ಶ್ರೀನಿಧಿ ಅಂತೆ ಶ್ರೀನಿಧಿ!ಹೆಸ್ರು ಚನಾಗಿದೆ! ಇದೇನಿದು ಈ ಸಲ ಕಂಪನಿ, ಕೆಲ್ಸ ಅಂತ ಹೊಸ ತರಾ ತಮಾಶೆ ಮಾಡ್ತಿದೀಯಾ?! ಈ ಸಲ ನನ್ನ ಫೂಲ್ ಮಾಡೋಕಾಗಲ್ವೋ ನಿನ್ ಕೈಲಿ! ನಾನೇ ಗೆದ್ದೆ.. ಯಾಹೂ!

" ಹಲೊ, ಒಂದ್ ನಿಮಿಷ , ನನ್ ಮಾತ್ ಸ್ವಲ್ಪ ಕೇಳ್ತೀರಾ?, ನಾನು ಸತ್ಯವಾಗ್ಲೂ ಶ್ರೀನಿಧಿ ಅಂತಾನೇ ಕಾಲ್ ಮಾಡಿರೋದು, ನಂಗೆ ಸುರೇಶ ಯಾರೋ ಗೊತ್ತಿಲ್ಲ ಕಣ್ರೀ... ನಮ್ ಕಂಪ್ನಿಲಿ ಕೆಲ್ಸ ಖಾಲಿ ಇದೆ , ನೋಡಿ ನಿಮ್ ಪ್ರೊಫೈಲ್ ಲಿ ಇಂತಿಂತಾ ಪ್ರೊಜೆಕ್ಟ್ ಡೀಟೈಲ್ಸ್ ಇವೆ... ಇದು ನಿಮ್ ಮೈಲ್ ಐಡಿ.."

ಹೆ ಹೆ ಹೆ.. ಹೌದಾ?.. ನಾನು.. ನಾನು.. ತಪ್ ತಿಳ್ಕೊಂಡೆ.. ಸಾರಿ.. just a sec..

ಆ ಕಡೆಯಿಂದ ಫೋನ್ ಲೈನ್ ಕಟ್, ಮತ್ತೆ ಮಾಡಿದರೆ ಸ್ವಿಚ್ ಆಫ್..

ಮತ್ತೆ ಹೊಸ ರೆಸ್ಯೂಮು ಹುಡುಕಿ ಕೆಲ್ಸ ಮುಂದುವರಿಸಿದೆ.

ಮಂಗಳವಾರ, ಜುಲೈ 10, 2007

ಖುಷಿಗೊಂದು ಪದ್ಯ.

ಮನೆಯ ಅಂಗಳದಂಚಿನ ಒದ್ದೆ ಮೆಟ್ಟಿಲು
ಹೆಜ್ಜೆ ಹಾಕುತ್ತ ಹೋದ ಹಾಗೆ
ಕೆಳಗೆಲ್ಲ ಹಸಿರು.
ಭಟ್ಟರ ಗದ್ದೆಯಲ್ಲಿ ನೇಜಿಯ ಹುರುಪು
ಸಂಪಿಗೆ ಮರದ ತುಂಬ ಹೂ ತೇರು.
ಕೊನೆಯ ಮೆಟ್ಟಿಲ ಸಂದಿಯಲ್ಲಿ, ಅಗೋ
ಬೆಳ್ಳಿಯಣಬೆ!


ತೆಂಗಿನ ಮರದ ಬುಡದಿ
ಸಣ್ಣ ಹುಲ್ಲ ಚಿಗುರು, ಅಲ್ಲೇ ಮುಂದೆ
ಹರಿವ ಹಳ್ಳ, ಜತೆಗೆ
ಮಣ್ಣ ಚಿತ್ರವ ಬಿಡಿಸಿದೇಡಿ ಬಿಲ.
ಪಕ್ಕದ ಬಂಡೆ ಕೆಳಗೀಗ ಪುಟ್ಟ ಒರತೆ.
ಹಲಸು ಮರದಲ್ಲಿ ಅಳಿಲಿನಾಟ.
ಬಾಳೆಗಿಡಗಳ ಸುತ್ತ ಹೊಸದು ಕಂದು.

ನಿತ್ಯ ನಡೆವ ಹಳೆ ಕಾಲು ಹಾದಿಯಲೂ
ಹೊಸ ಹೆಜ್ಜೆ ಗುರುತು.
ನೀರ ದಾರಿಗೆ ಸಿಕ್ಕ ತರಗೆಲೆಯಲಿ
ಬರಿ ಕಂದು ಪದರ-
ಹುಣಸೆ ಮರದ ಗೆಲ್ಲಲಿ ಸೀತಾಳೆ ದಂಡೆ
ಕೆಸುವಿನೆಲೆ ಮೇಲೆ ಸ್ಫಟಿಕ ಬಿಂದು.
ಜೊತೆಗೆ ಹೆಸರಿರದ ಹಳದಿ ಹೂವು.

ಎದುರು ಗದ್ದೆಯ ನಾಟಿ ಹೆಂಗಸು,
ಕೊರಳೆತ್ತಿ ಹಾಡುತ್ತಿದ್ದಾಳೆ,
ಅರ್ಥವಾಗದು ಸಾಹಿತ್ಯ.
ಆದರೆ ಅವಳ ಖುಷಿಯ ಏರು ದನಿ,
ಲವಲವಿಕೆ ರಾಗ,
ಈಗಷ್ಟೇ ಶುರುವಾದ ಹನಿ ಮಳೆ
ಎಲ್ಲ ಸೇರಿ ನನ್ನೊಳಗೆ ನವೋನ್ಮೇಷ.