ಗುರುವಾರ, ಸೆಪ್ಟೆಂಬರ್ 25, 2008

ಬೇರು ಬಂದಿದೆ..

ಬೇರು ಬಂದಿದೆ ಅವಳಿಗೆ
ಕಾಲಕಾಲಗಳಿಂದ
ಕೂತಲ್ಲಿಯೇ ಕೂತು
ಹೂತು
ಬೇರು ಬಂದಿದೆ ಅವಳಿಗೆ

ನಾಭಿಯಿಂದ ಹೊರಟು
ಕೆಳಗಿಳಿದು
ಬೇರು ಹೊರಟಿದೆ
ಆಳಕೆ,
ಮಣ್ಣ ಕಣಕಣದಾಚೆಗೆ

ಇರುವ ನೆಲನೆಲೆಯಾಚೆ
ಅಲ್ಲೆಲ್ಲೋ ತಾಕುತಿದೆ
ಬೇರ ತುದಿ
ಅವಳಿಗೆ ಇಲ್ಲಿ
ಸಂಚಲನ

ಹೊರಟ ಬೇರಿಗೆ
ನೂರು ದಾರಿ
ನೂರು ಟಿಸಿಲು..
ಕೂತಲ್ಲಿಯೇ
ಅವಳು
ಸರ್ವಗ್ರಾಹಿ,
ಸಮಸ್ತ ಧಾತ್ರಿ.

ಮಂಗಳವಾರ, ಸೆಪ್ಟೆಂಬರ್ 16, 2008

ಮತಾಂತರ- ನನ್ನ ಅನುಭವಗಳು

ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದ ಸಮಯ. ಫೀಲ್ಡ್ ವರ್ಕು, ಸರ್ವೇ ಅಂತ ಮಂಗಳೂರು ನಗರದ ಗಲ್ಲಿ ಗಲ್ಲಿಗಳನ್ನು ಸುತ್ತುವ ಕೆಲಸವಿತ್ತು. ಉರ್ವ ಸ್ಟೋರ್ ಸಮೀಪ, ಅಶೋಕ ನಗರ ಅಂತ ಇದೆ, ಅಲ್ಲಿನ ಗಲ್ಲಿಯೊಂದಕ್ಕೆ ನುಗ್ಗಿದೆವು, ನಾನು ಮತ್ತು ನನ್ನ ಜೊತೆಗಿದ್ದ ಒಂದಿಷ್ಟು ಜನ. ನಮಗೆ ಬೇಕಿದ್ದ ಪ್ರಶ್ನೆಗಳನ್ನ ಕೇಳಿ, ಹೆಸರು ಬರೆದುಕೊಳ್ಳಲು ಹೊರಟೆವು. ಮನೆ ಹಿರಿಯ ಉತ್ತರಿಸತೊಡಗಿದ. ನಿಮ್ಮ ಹೆಸರು- ಮರಿಯಪ್ಪ, ಹೆಂಡತಿದು? ಸೀತಮ್ಮ, ಮಗಂದು?- ಅಲೆಗ್ಸಾಂಡರ್. ಬರೆಯುತ್ತಿದವನು ದಂಗಾಗಿ ಪೆನ್ನು ಹಾಂಗೇ ಬಿಟ್ಟು ಮೇಲೆ ನೋಡಿದೆ. ಅಲೆಗ್ಸಾಂಡರು ಸಾರೂ, ಬರ್ಕಳಿ ಅಂದ ಅವನು. ಅಲ್ಲ ನಿಮ್ಮಿಬ್ಬರ ಹೆಸರು ಹೀಗಿದೆ.. ಹೂಂ ಸಾ, ನಾವು ಕಿರಸ್ತಾನ್ ಆಗಿದೀವಿ ಈಗ. ಉತ್ರಕರ್ನಾಟಕ್ದಿಂದ ಕೆಲ್ಸಕ್ಕೆ ಅಂತ ಬಂದಿದ್ವಾ, ಇಲ್ ಬಂದು ಹತ್ತಿಪ್ಪತ್ ವರ್ಷ ಆಯ್ತು. ಹೋದೊರ್ಷಾ ಕಿರಸ್ತಾನ್ರಾದ್ವಿ. ನಮ್ದೂ ಹೆಸ್ರು ಚೇಂಜ್ ಮಾಡ್ಕಬೇಕು, ರೇಶನ್ ಕಾರ್ಡಲ್ಲಿ ಇನ್ನೂ ಇದೇ ಹೆಸ್ರದೆ, ಹಾಂಗಾಗಿ.. ಅಂತಂದ. ಅವರ ಮನೆಯಲ್ಲಿ, ಏಸುವಿನ ಚಿತ್ರದ ಪಕ್ಕಕ್ಕೆ ಲಕ್ಷ್ಮೀ ಫೋಟೋ ಇನ್ನೂ ಉಳಿದುಕೊಂಡಿತ್ತು.

ಇದು ಇವರೊಬ್ಬರ ಮನೆಯ ಕಥೆಯಾ ಅಂತ ನೋಡಿದರೆ, ಅಲ್ಲ! ಅಲ್ಲಿನ ಸುತ್ತಮುತ್ತಲಿನ ಹೆಚ್ಚಿನ ಮನೆಗಳ ಕಥೆ ಇದೇ, ಅಪ್ಪ ರಾಮನಾದರೆ, ಮಗಳು ಮೇರಿ, ಅಮ್ಮ ಕೆಂಪಮ್ಮ,ಮಗ ರೋಶನ್! ಇನ್ನೂ ಹಿಂದೂ ಧರ್ಮವನ್ನ ಸಂಪೂರ್ಣ ಬಿಟ್ಟಿರದ, ಹಾಗೆಂದು ಪ್ರತಿನಿತ್ಯ ಮಕ್ಕಳನ್ನು ಚರ್ಚಿಗೆ ಕರೆದುಕೊಂಡು ಹೋಗುವ ಸಂಸಾರ. ಅಕ್ಕ ಪಕ್ಕ ವಿಚಾರಿಸಿದಾಗ ತಿಳಿದದ್ದು, ಎರಡು ವರ್ಷಗಳಿಂದ ಅಲ್ಲಿನ ಬಡ ಹಿಂದೂಗಳಿರುವ ಕಾಲನಿಗಳಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಲೇ ಇತ್ತಂತೆ. ಪ್ರತಿ ತಿಂಗಳೂ ಮನೆಗೆ ದಿನಸಿ ಬರುತ್ತದೆಂಬ ಆಸೆಗೋ, ಮನೆಯ ಗಂಡಸಿಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆಂಬ ಆಸೆಗೋ ಅಲ್ಲಿನ ಜನ, ಧರ್ಮಾಂತರ ಆಗುತ್ತಿದ್ದರು. ಮೊದಮೊದಲು ಪ್ರತಿಭಟಿಸಿದರೂ, ಅಕ್ಕಪಕ್ಕದ ಮನೆಯವರಿಗೆ ಸಿಕ್ಕ ಸೌಲಭ್ಯಗಳನ್ನು ನೋಡಿದ ಮೇಲೆ, ತಾವೂ ನಿಧಾನಕ್ಕೆ ಚರ್ಚಿಗೆ ಹೋಗಲು ಆರಂಭಿಸಿದರು... ಉತ್ತರ ಕರ್ನಾಟಕದ ಕಡೆಯಿಂದ ಏನೋ ಒಂದು ಕೆಲಸ ಹುಡುಕಿಕೊಂಡು ವಲಸೆ ಬಂದಿರುವುದರಿಂದ, ಮತ್ತೆ ಬೇರಿಗೆ ಮರಳವುದಿಲ್ಲ ಇವರು,ಯಾವ ಧರ್ಮದಲ್ಲಿದ್ದರೇನು-ದುಡ್ಡು-ಕೆಲಸ ಸಿಗುವುದಾದಾರೆ ಅನ್ನುವುದು ಅವರ ಯೋಚನೆ.

ಇದು ಒಂದು ಉದಾಹರಣೆಯಷ್ಟೇ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹುಟ್ಟಿಬೆಳೆದವನು ನಾನು.ಮತಾಂತರ ಪ್ರಕ್ರಿಯೆ ಹೇಗೆ ಜರುಗುತ್ತದೆ ಎನ್ನುವುದನ್ನು ಬಹಳ ಚೆನ್ನಾಗಿ ನೋಡುತ್ತ ಬಂದಿದ್ದೇನೆ. ಹೊರ ಜಿಲ್ಲೆಗಳಿಂದ ಬಂದ ಬಡ ಕೂಲಿಕಾರ್ಮಿಕರು, ಮತಾಂತರ ಮಾಡ ಹೊರಡುವವರ ಮೊದಲ ಟಾರ್ಗೆಟ್ಟು. ಅವರುಗಳಿಗೆ ಹಣದ ಆಸೆ ತೋರಿಸಲಾಗುತ್ತದೆ, ಕೇವಲ ಅದೊಂದಕ್ಕೆ ಬಹಳ ಸಂಸಾರಗಳು ದಿಕ್ಕು ತಪ್ಪುತ್ತವೆ.ಇನ್ನು ಉಳಿದವರಿಗೆ, ಹಿಂದೂ ಧರ್ಮದ ದೇವರುಗಳು ಕೈಲಾಗದವರು, ಲಂಪಟರು, ಅವರುಗಳಿಗೆ ತಮ್ಮನ್ನು ತಾವು ಸರಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ, ಇನ್ನು ನಿಮ್ಮನ್ನು ಹೇಗೆ ಚೆನ್ನಾಗಿ ನೋಡಿಕೊಂಡಾರು, ನೀವು ಇಷ್ಟೆಲ್ಲ ಕಷ್ಟದಲ್ಲಿರುವುದಕ್ಕೆ ಈ ಧರ್ಮವನ್ನು ನೀವು ನಂಬಿದ್ದೇ ಕಾರಣ ಅನ್ನುವ ಪುಂಗಿ ಊದಲಾಗುತ್ತದೆ.ಒಂದೆರಡು ಸಂಸಾರಗಳು ಬಲೆಗೆ ಬಿದ್ದರೆ ಸಾಕು, ಇನ್ನುಳಿದವು ತಾನೇ ತಾನಾಗಿ ಬರುತ್ತವೆ ಜಾಲದೊಳಗೆ. ಮೊದಲು ಕನ್ವರ್ಟ್ ಆದ ಕುಟುಂಬಗಳಿಂದಾಗಿ , ಮತ್ತೆ ಯಾರಾದರೂ ಮತಾಂತರ ಹೊಂದಿದರೆ, ಆ ಕುಟುಂಬಕ್ಕೆ ಬೋನಸ್ ದುಡ್ಡೂ ಸಿಗುತ್ತದೆ. ಮಂಗಳೂರು, ಉಡುಪಿಗಳ ಹೊರವಲಯದಲ್ಲಿ ವರುಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡೇ ಬಂದಿದೆ.

ನಾನು ಕ್ರಿಶ್ಚಿಯನ್ ಧರ್ಮ ವಿರೋಧಿಯಲ್ಲ. ಬಹಳಷ್ಟು ವರುಷ ಅವರುಗಳ ಜೊತೆಗೇ ಬೆಳೆದಿದ್ದೇನೆ. ಅವರುಗಳ ಆಚಾರ ವಿಚಾರಗಳ ಬಗ್ಗೆ ಚೆನ್ನಾದ ಅರಿವೂ ನನಗಿದೆ. ನೆನಪಿದೆ ನನಗೆ,ಅಮ್ಮ ಕ್ರಿಸ್ಮ್‌ಸ್ ಹಬ್ಬಕ್ಕೂ ಮನೆಯಲ್ಲಿ ಪಾಯಸ ಮಾಡುತ್ತಿದ್ದಳು. ನಾನು ಸ್ನೇಹಿತರ ಜೊತೆ ಅದೆಷ್ಟೋ ಸಲ ಚರ್ಚುಗಳಿಗೆ ಹೋಗಿದ್ದೇನೆ. ಅವರ ಮನೆಗಳಲ್ಲೇ ಲೆಕ್ಕವಿಲ್ಲದಷ್ಟು ಬಾರಿ ಊಟ ಮಾಡಿದ್ದೇನೆ. ಆದರೆ, ಮತಾಂತರ ಅನ್ನುವ ವಿಷಯ ಬಂದಾಗ, ನಾನು ಅದರ ವಿರೋಧಿಯೇ.

ಬೇಸಿಗೆಯ ರಜೆಗಳಲ್ಲಿ ಕ್ರಿಶ್ಚಿಯನ್ ಯುವಕರ, ಮಕ್ಕಳ ದಂಡು ಮನೆಮನೆ ತಿರುಗುವ ಕೆಲಸ ಮಾಡುತ್ತದೆ. ಕೈಯಲ್ಲಿ "ಶುಭ ಸಂದೇಶ" ಪುಸ್ತಕ ಹೊತ್ತು, ನೀವು ಬೇಡವೆಂದರೂ ನಿಮ್ಮ ಕೈಯಲ್ಲಿ ಆ ಪುಸ್ತಕ ಇಟ್ಟುಏಸುವಿನ ಗುಣಗಾನ ಮಾಡುತ್ತದೆ. ನಮ್ಮ ಮನೆಗೂ ಅದೆಷ್ಟೋ ಸಲ ಇಂತಹ ತಂಡಗಳು ಬಂದಿವೆ, ನಮ್ಮ ಮನೆಯ ಅಟ್ಟದಲ್ಲಿ ನಾಲ್ಕಾರು ಶುಭ ಸಂದೇಶಗಳಾದರೂ ಧೂಳು ತಿನ್ನುತ್ತ, ಗೆದ್ದಲು ಹಿಡಿಸಿಕೊಂಡು ಬಿದ್ದಿರಬೇಕು. ಈ ತಂಡದ ವಿಶೇಷತೆ ಏನೆಂದರೆ, ಇವರೆಲ್ಲ ತಾವು ಯಾರ ಮನೆಯ ಅಂಗಳದಲ್ಲಿ ನಿಂತಿದ್ದೇವೆ ಅನ್ನುವುದನ್ನು ಮೊದಲು ಸರಿಯಾಗಿ ಗಮನಿಸುತ್ತಾರೆ. ಎದುರಿಗೆ ಇರುವವರು ತಮಗಿಂತ ಹೆಚ್ಚು ತಿಳಿದುಕೊಂಡವರು, ಬಗ್ಗಲಾರದವರು ಅನ್ನುವುದು ಗೊತ್ತಾದ ತಕ್ಷಣ, "ಎಂತ ಇಲ್ಲ,ಸುಮ್ಮನೆ ಬಂದದ್ದು ಇದೊಂದು ಪುಸ್ತಕ ಇಟ್ಟುಕೊಳ್ಳಿ"ಅಂತ ಜಾಗ ಖಾಲಿ ಮಾಡುತ್ತಾರೆ. ತಮ್ಮ ಪಟ್ಟಿಗೆ ಸಿಲುಕುವ ಜನ ಎನ್ನೋದು ತಿಳಿದರೆ, ಮಿಕ ಖೆಡ್ಡಾಕ್ಕೆ ಬೀಳುವವರೆಗೆ ಬಿಡುವುದಿಲ್ಲ! ನಿಮ್ಮ ಕೃಷ್ಣನಿಗೆ ಸಾವಿರಗಟ್ಟಲೆ ಹೆಂಡತಿಯರು, ಅವನು ಲಂಪಟ, ಅವನ್ಯಾಕೆ ನಿಮಗೆ ದೇವರು, ರಾಮನ ಗುರು ವಸಿಷ್ಠರು ವೇಶ್ಯೆಯಾದ ಊರ್ವಶಿಗೆ ಹುಟ್ಟಿದ್ದು, ಇನ್ನೂ ಏನೇನೋ,ಇಲ್ಲಿ ಬರೆಯಲೂ ಆಗದಂತಹವು.. ಅವುಗಳನ್ನೆಲ್ಲ ತಲೆಗೆ ತುಂಬುತ್ತಾರೆ, ಜೊತೆಗೆ ಇದ್ದೇ ಇದೆ,ಹಣದಾಮಿಷ.

ಇನ್ನು ಕೆಲ ಚರ್ಚುಗಳೋ,ಕ್ರಿಶ್ಚಿಯನ್ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳಲ್ಲಿ ಒಂದು ಹುಂಡಿ ಇಟ್ಟಿರುತ್ತಾರೆ. ಬಡ ರೋಗಿಗಳ ಬಳಿ ಬಂದು,ನಿಮ್ಮ ಆಸೆಯನ್ನ ಆ ಚೀಟಿಯಲ್ಲಿ ಬರೆದು ಹಾಕಿ, ಯೇಸು ನಿಮ್ಮ ಆಸೆಯನ್ನ, ಕಷ್ಟಗಳನ್ನು ಪರಿಹರಿಸುತ್ತಾನೆ ಎಂದು ಹೇಳಲಾಗುತ್ತದೆ. ಸಣ್ಣ ಆಸೆಗಳಿ,ಕಷ್ಟಗಳು ಪರಿಹಾರವಾಗುತ್ತವೆ ಕೂಡ! ನನಗೆ ತಿಳಿದಿದ್ದ ಕೂಲಿ ಮಾಡುತ್ತಿದ್ದ ಹೆಂಗಸೊಬ್ಬಳು, ಮಗನಿಗೆ ಸೈಕಲ್ ಬೇಕಂತೆ ಎಂದು ಬರೆದು ಹಾಕಿ, ಮಾರನೇ ದಿನ ಅವಳ ಮನೆ ಬಾಗಿಲಲ್ಲಿ ಸೈಕಲ್ ಇದ್ದದ್ದು ನೋಡಿ, ಯೇಸುವಿನ ಭಕ್ತಳಾಗಿ, ದಿನದೊಳಗೆ ಬದಲಾಗಿಬಿಟ್ಟಳು!.

ಮತಾಂತರ ದಂಧೆಯಲ್ಲಿ ಪ್ರಮುಖವಾಗಿ ತೊಡಗಿರುವದು ನ್ಯೂ ಲೈಫ್ ಅನ್ನುವ ಸಂಸ್ಥೆ. ಇವರುಗಳು ದೊಡ್ಡ ದೊಡ್ಡ ಚರ್ಚುಗಳನ್ನೇನೂ ಹೊಂದಿರುವುದಿಲ್ಲ. ಸಣ್ಣ ಸಣ್ಣ 'ಪ್ರಾರ್ಥನಾ ಕೇಂದ್ರಗಳು' ಇವರ ಅಡ್ಡಾ. ಅಲ್ಲಿಗೆ ಪ್ರತಿದಿನ ಒಂದಿಷ್ಟು ಜನ ಹಿಂದೂಗಳನ್ನ ಹೇಗಾದರೂ ಕರೆದುಕೊಡು ಬಂದು ಬ್ರೈನ್ ವಾಶಿಂಗ್ ಕೆಲಸ ಮಾಡುತ್ತಾರೆ. ತಮ್ಮ ಸಾಹಿತ್ಯವನ್ನ ಅವರುಗಳಿಗೆ ಹಂಚುತ್ತಾರೆ. ಮತಾಂತರ ಹೊಂದುತ್ತಿರುವ ಬಡಪಾಯಿಗಳಿಗೆ ಅರಿವಿಲ್ಲದ ಒಂದು ಸತ್ಯ ಎಂದರೆ, ಮತಾಂತರ ಹೊಂದಿ ಕ್ರಿಶ್ಚಿಯನ್ ಆದವರನ್ನು ಅಲ್ಲಿ ಅನಾದರದಿಂದಲೇ ಕಾಣಲಾಗುತ್ತದೆ. ಹಿಂದೂ ಧರ್ಮದಲ್ಲಿ ಮೂಲೆಗುಂಪಾಗಿದ್ದೇವೆ ಅನ್ನುವ ಕಾರಣಕ್ಕೆ ಅಲ್ಲಿಗೆ ಹೋಗುವ ಹಲಮಂದಿಗೆ, ಇಲ್ಲಿ ನಾವು ನಿಕೃಷ್ಟರು ಎಂದು ಅರಿವಾಗಲು ಹೆಚ್ಚಿಗೆ ದಿನ ಬೇಕಿಲ್ಲ.ಮತಾಂತರ ಹೊಂದಿದವರಿಗೆ, ಚರ್ಚುಗಳಲ್ಲಿ ಕೊನೆಯ ಜಾಗ. ಅವರನ್ನು ಇತರರು ಪ್ರೀತಿಯಿಂದ ಮಾತನಾಡಿಸುವುದೂ ಇಲ್ಲ.

ಕ್ರಿಶ್ಚಿಯನ್ ಮಿಷನರಿಗಳಿಗೆ ವಿದೇಶದಿಂದ ಹಣ ಹರಿದುಬರುವುದರಿಂದ , ಅವರುಗಳು ಧಂಡಿಯಾಗಿ ಮತಾಂತರಕ್ಕೆ ಹಣ ಖರ್ಚು ಮಾಡುತ್ತಾರೆ. ಮತ್ತು ಈ ಕ್ರಿಯೆ, ಮುಸುಕಿನೊಳಗೇ ನಡೆಯುವುದರಿಂದ ಹೊರ ಜಗತ್ತಿಗೆ ಈ ಬಗ್ಗೆ ಸರಿಯಾಗಿ ಗೊತ್ತಾಗುವುದೇ ಇಲ್ಲ. ವಾರಕ್ಕೊಂದು ತಂಡವಾದರೂ ಸಿಕ್ಕಿಬಿದ್ದುಪೆಟ್ಟು ತಿನ್ನುತ್ತಿರುತ್ತದೆ, ಮತ್ತು ಈ ತರದ ನೂರಾರು ತಂಡಗಳು ಕೆಲಸ ಮಾಡುತ್ತಿರುವುದರಿಂದ, ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅವರುಗಳು ಒಳ ಹೋದಷ್ಟೇ ಬೇಗ, ಜಾಮೀನಿನ ಮೇಲೆ ಹೊರಬರುತ್ತಾರೆ, ಮತ್ತು ಕ್ರಿಸ್ತಪುಣ್ಯಕಥೆಯನ್ನು ಜನಕ್ಕೆ ತಿಳಿಸುವ ಕೆಲಸದಲ್ಲಿ ತೊಡಗುತ್ತಾರೆ.. ಪೆಟ್ಟು ಕೊಟ್ಟವರು ಪೆಕರುಗಳಂತೆ, ಹಾಡೇ ಹಗಲೇ ಅವರುಗಳು ನಡುಬೀದಿಯಲ್ಲಿ ಅಲೆಯುವುದನ್ನು ನೋಡುತ್ತ ನಿಂತಿರಬೇಕಾಗುತ್ತದೆ.

ನಾನು ಹಿಂದೂ ಮೂಲಭೂತವಾದಿಯೂ ಅಲ್ಲ,ಮತ್ತು ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತನೂ ಅಲ್ಲ ಅನ್ನುವುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಹಲವು ವರುಷಗಳಿಂದ ಇದೆಲ್ಲವನ್ನು ನೋಡುತ್ತ ಬಂದಿದ್ದೇನಾದ್ದರಿಂದ, ಮತ್ತು ಈಗ ಮಂಗಳೂರಿನಲ್ಲಾಗುತ್ತಿರುವ ಗಲಭೆಗೆ ಕಾರಣವಾಗಿರುವ, ಸಹನೆ ತಪ್ಪಿರುವ ಮನಸ್ಥಿತಿಗಳ ಬಗ್ಗೆ ಅರಿವಿರುವುದರಿಂದ, ಇದನ್ನೆಲ್ಲ ಬರೆಯಬೇಕಾಯಿತು.

ದಟ್ಸ್ ಕನ್ನಡ- ಕಾಡು ಹರಟೆ ಅಂಕಣಕ್ಕೆ ಬರೆದಿದ್ದು.

ಸೋಮವಾರ, ಸೆಪ್ಟೆಂಬರ್ 01, 2008

ಎರಡು ವರುಷಗಳ ನಂತರ..

ತುಂತುರು ಹನಿಗಳು ಎರಡು ವರ್ಷ ಪೂರೈಸಿದೆ. ನಾನು ಬ್ಲಾಗು ಆರಂಭಿಸಿದಾಗ ಇಷ್ಟು ದೂರ ಪಯಣಿಸುತ್ತೇನೆ ಅಂದುಕೊಂಡಿರಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕಂದರೆ,ಬ್ಲಾಗು ಶುರು ಮಾಡಬೇಕು ಅನ್ನುವ ಉದ್ದೇಶವೂ ನನಗಿರಲಿಲ್ಲ. ಗೆಳೆಯ ಚಿನ್ಮಯ ತಲೆ ತಿಂದೂ ತಿಂದೂ, ಒಂದು ದಿನ ಬ್ಲಾಗು ಆರಂಭಿಸಿದೆ. ಆವಾಗ ಸಾಫ್ಟ್ ವೇರ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಮಾಧ್ಯಮ ಜಗತ್ತಿನಲ್ಲಿದ್ದೇನೆ.

ಮಧ್ಯ ಬರೆಯುವುದನ್ನು ಸ್ವಲ್ಪ ಕಾಲ ನಿಲ್ಲಿಸಿದ್ದೆ. ಆದರೆ ಚಟ ಬಿಡಬೇಕಲ್ಲ, ಮತ್ತೆ ಎಳೆದುಕೊಂಡು ಬಂತು, ಇಲ್ಲಿಗೇ.

ಬ್ಲಾಗ್ ಬಂಧುಗಳಿಂದ ಅದೆಷ್ಟೋ ಕಲಿತಿದ್ದೇನೆ ಕಳೆದೆರಡು ವರುಷಗಳಿಂದ. ನನ್ನ ಕವನಗಳನ್ನ, ನೀವು ಬರಹಗಳನ್ನ ಸಹಿಸಿಕೊಂಡಿದ್ದೀರಿ,ಮೆಚ್ಚಿಕೊಂಡಿದ್ದೀರಿ. ತಪ್ಪಿದ್ದರೆ ಗದರಿದ್ದೀರಿ, ತಿದ್ದಿದ್ದೀರಿ, ನಿಮಗೆಲ್ಲ ನಾನು ಕೃತಜ್ಞ. ಈ ಬ್ಲಾಗು ಅದೆಷ್ಟೋ ಸ್ನೇಹಿತರುಗಳನ್ನ ಕೊಟ್ಟಿದೆ ನಂಗೆ. ಅದೆಷ್ಟೋ ಹೊಸ ವಿಷಯಗಳನ್ನ ಬ್ಲಾಗು ಲೋಕದಿಂದ ತಿಳಿದುಕೊಂಡಿದ್ದೇನೆ.

ಈ ಪಯಣ ಹೀಗೇ ಸಾಗುತ್ತಿರಲಿ.. ಮತ್ತೊಮ್ಮೆ, ಥ್ಯಾಂಕ್ಸ್.