ಗುರುವಾರ, ಏಪ್ರಿಲ್ 17, 2008

ಸರಕಾರದ ಕೆಲಸ, ದೇವರ ಕೆಲಸ.

ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.

ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.

"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."

ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.

ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.

ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.

ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!

ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.

ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..

*******

ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.

"..... ಅವರು ಇಲ್ಲಿ ಇರ್ತಾರ"

ನಿಮ್ಮ ಹೆಸರು? -ಶ್ರೀನಿಧಿ

ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.

ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.

ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.

ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.

ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..

ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..

ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.

"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.

"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"

ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!

ಸರಕಾರದ ಕೆಲಸ, ದೇವರ ಕೆಲಸ.

ಶನಿವಾರ, ಏಪ್ರಿಲ್ 12, 2008

ಪೂರ್ಣಚಂದ್ರ ತೇಜಸ್ವಿ ಮತ್ತೆ ಬಂದಿದ್ದಾರೆ!

ಸುಮ್ನೆ ಮಾಡೋಕೇನೂ ಕೆಲಸ ಇಲ್ಲದಿದ್ದಾಗ, ಅಥವಾ ಆಫೀಸಿಂದ ಬೇಗ ಹೊರಟರೆ ಗಾಂಧೀ ಬಜಾರಲ್ಲಿ ಒಂದ್ ಸುತ್ ಹೊಡೆಯೋದು ಅಭ್ಯಾಸ ನನಗೆ. ಗಾಂಧಿ ಬಜಾರು ಅಂದರೆ ಐಸ್ ಥಂಡರು, ಮಹಾಲಕ್ಷ್ಮೀ ಟಿಫನ್ ರೂಮು ಮತ್ತು ಅಂಕಿತ ಬುಕ್ ಸ್ಟಾಲು.

ಮೊನ್ನೆ ಹೀಗೇ ಅಂಕಿತಕ್ಕೆ ಹೋದೆ, ವಿನಾಕಾರಣ. ಯಾವುದಾದರೂ ಹೊಸ ಪುಸ್ತಕ ಇದೆಯಾ ಅಂತ ಹುಡುಕಾಡಿದೆ. ಕಾಣಲಿಲ್ಲ. ಬೇಕಾದ್ದು ಇರಲಿಲ್ಲ. ಎಂದಿನ ಹಾಗೆ ತೇಜಸ್ವಿ ಪುಸ್ತಕ ಇದ್ದ ಸಾಲುಗಳನ್ನು ನೋಡಿದೆ. ಅದೊಂದು ಅಭ್ಯಾಸ ನನಗೆ. ಎಟ್ ಲೀಸ್ಟ್ ಅವರ ಹಳೆಯ ಪುಸ್ತಕಗಳ ಹೊಸ ಮುಖಪುಟ ವಿನ್ಯಾಸಗಳನ್ನಾದರೂ ನೋಡಿ, ಹಾಗೇ ಆ ಪುಸ್ತಕಗಳನ್ನ ಮತ್ತೆ ಎಲ್ಲಿತ್ತೋ ಅಲ್ಲಿಡುತ್ತೇನೆ. ಮೊನ್ನೆ ಮಾತ್ರ ಅತ್ಯಂತ ಅಚ್ಚರಿ ಕಾದಿತ್ತು ನನಗೆ. ತೇಜಸ್ವಿಯವರ ಹೊಸ ಪುಸ್ತಕವೊಂದು ಬೆಚ್ಚಗೆ ಕುಳಿತಿತ್ತು ಅಲ್ಲಿ. ಹೌದು ಕಣ್ರೀ, ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹೊಸ- ಹೊಚ್ಚ ಹೊಸ ಪುಸ್ತಕ! ಖುಷಿಯಿಂದ ಕಿರಿಚುವುದೊಂದು ಬಾಕಿ. ನನ್ನ ಯದ್ವಾ ತದ್ವಾ ಹಾವಭಾವದ ಕಣ್ಣು- ಮುಖಗಳನ್ನು ನೋಡಿ ಶ್ರೀಮತಿ ಕಂಬತ್ತಳ್ಳಿಯವರು , "ಇವತ್ತಷ್ಟೇ ಬಂತು ಈ ಪುಸ್ತಕ" ಅಂದರು.

"ಪಾಕಕ್ರಾಂತಿ ಮತ್ತು ಇತರ ಕಥೆಗಳು" ಅನ್ನುವುದು ಕಥಾ ಸಂಕಲನದ ಹೆಸರು. 1998 ರಿಂದ 2007ರ ವರೆಗೆ - ಲಂಕೇಶ್ ಪತ್ರಿಕೆಯಿಂದ ಹಿಡಿದು ವಿಕ್ರಾಂತ ಕರ್ನಾಟಕದವರೆಗೆ ಪ್ರಕಟವಾದ ಎಂಟು ಕಥೆಗಳಿವೆ ಇದರಲ್ಲಿ. ನಾನಂತೂ ದೇವರಾಣೆಯಾಗೂ ಒಂದೂ ಕಥೆಯನ್ನು ಈ ಮೊದಲು ಓದಿರಲಿಲ್ಲ. ತೇಜಸ್ವಿ ಈಗತಾನೇ ಕೂತು ಈ ಕಥೆಗಳನ್ನ ಬರೆದು ಮುಗಿಸಿ, ಪಬ್ಲಿಶ್ ಮಾಡಿಸಿದ್ದಾರೆ ಅನ್ನಿಸಿತು ನನಗಂತೂ. ಪುಸ್ತಕ ಪ್ರಕಾಶನಕ್ಕೆ ಸಾವ್ರ ಧನ್ಯವಾದ!

ಬೆನ್ನುಡಿಯಲ್ಲಿ ಹೇಳಿದ ಹಾಗೆ, " ಪೂರ್ಣಚಂದ್ರ ತೇಜಸ್ವಿಯವರು ನಮ್ಮ ತಲೆಮಾರಿನ ಒಂದು ಅದ್ಭುತ ಪ್ರತಿಭೆ ಹಾಗೂ ಪ್ರಕ್ರಿಯೆ. ಅವರ ಅನುಪಸ್ಥಿತಿಯಲ್ಲಿ ಅವರು ಸೃಷ್ಟಿಸಿರುವ ಲೋಕದ ಬಂಧಿಗಳು ನಾವು".

ನಾನಂತೂ ಇಲ್ಲಿನ ಕಥೆಗಳಲ್ಲಿ ಏನಿದೆ ಅಂತ ಒಂದು ಸಾಲೂ ಹೇಳುವುದಿಲ್ಲ. ತಗಂಡು ಓದಿ. ಅಂಕಿತಕ್ಕೋ, ಸಪ್ನಾಕ್ಕೋ ಹೋಗಿ, ಬೆಂಗಳೂರಿಗರು. ಮಂಗಳೂರಿಗರಿಗೆ ಅತ್ರಿ, ಮೈಸೂರಲ್ಲಿ ಗೀತಾ ಬುಕ್ ಹೌಸು..

ಪೋಸ್ಟ್ ಮುಖಾಂತರ:
ಪುಸ್ತಕ ಪ್ರಕಾಶನ,
ಬುಕ್ ಪೋಸ್ಟ್ ಸರ್ವೀಸ್,
ಪೋಸ್ಟ್ ಬಾಕ್ಸ್ ನಂ:58,
ಮೂಡಿಗೆರೆ-577132,
ಚಿಕ್ಕಮಗಳೂರು ಜಿಲ್ಲೆ,
ಫೋನು- 08263-228353,240202

ಹ್ಯಾಪಿ ರೀಡಿಂಗು!.

ಸೋಮವಾರ, ಏಪ್ರಿಲ್ 07, 2008

ಬೆಂಗಳೂರಿನ ಹೂಗಳು

ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.













ಎಲ್ಲರಿಗೂ ಯುಗಾದಿಯ ಶುಭಾಶಯಗಳು.