ಶನಿವಾರ, ಮೇ 31, 2008

ಫೇಕ್ ಮೈಲ್ಸ್....

ನಾವೊಂದಿಷ್ಟು ಜನ ಸ್ನೇಹಿತರು- ನಾನು, ಅರುಣ, ಹರ್ಷ, ಸುಶ್ರುತ ಹೆಚ್ಚಾಗಿ ನಮಗೆ ಬರುವ ಫೇಕ್ ಮತ್ತು ಜಂಕ್ ಮೇಲ್ಸ್ ಗಳನ್ನು ಪರಸ್ಪರ ಫಾರ್ವರ್ಡ್ ಮಾಡಿಕೊಂಡು ನಗಾಡುತ್ತಿರುತ್ತೇವೆ. ಕೆಲವು ಈ-ಮೇಲುಗಳು ಪದೇ ಪದೇ ತಿರುಗಿ ಬರುತ್ತಿರುತ್ತವೆ. ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ!, ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇತ್ಯಾದಿ ಇತ್ಯಾದಿ...

ಇನ್ನು ಪ್ರವಾಸಿ ಸ್ಥಳಗಳ ಮತ್ತು ಟ್ರೆಕ್ಕಿಂಗು ಸ್ಪಾಟುಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಅಮೆರಿಕ ಯಾವುದೋ ಜಲಪಾತ ಬೆಂಗಳೂರಿನ ಸಮೀಪದ ಮುತ್ಯಾಲ ಮಡುವು ಅನ್ನುವ ಹಣೆಪಟ್ಟಿ ಹೊತ್ತುಕೊಂಡಿತ್ತು ಮೊನ್ನೆಯಷ್ಟೇ. ಜೊತೆಗೆ "ರತ್ನಘಡ ಎನ್ನುವ ಭೂಮಿಯ ಮೇಲಿನ ಸ್ವರ್ಗ" ಅನ್ನುವ ಹೆಸರು ಹೊತ್ತ ಈಮೇಲು ಬಗ್ಗೆ ಹೇಳಿ ಪ್ರಯೋಜ್ನಿಲ್ಲ! ಆ ಸ್ವರ್ಗ ಇರುವ ಜಾಗ ಪ್ರತಿ ಮೇಲ್ ನಲ್ಲೂ ಬದಲಾಗುತ್ತಿರುತ್ತದೆ! ಭಾರತದ ಎಲ್ಲಾ ರಾಜ್ಯಗಳನ್ನು ದಾಟಿ , ಈಗ ಈ ಸ್ಥಳ ಶ್ರೀಲಂಕಾದಲ್ಲಿದೆ ಎನ್ನುವ ಹೊಸ ಶೋಧವೂ ಆಗಿದೆ.

ಇನ್ನು ಈ ಈ ಮೇಲ್ ನ ೧೫ ಜನಕ್ಕೆ - ೨೦ ಜನಕ್ಕೆ ಕಳಿಸಿ , ಇಲ್ಲದಿದ್ದರೆ ಅದಾಗುತ್ತದೆ , ಇದಾಗುತ್ತದೆ ಎಂಬ ಧಮಕೀ ಹೊತ್ತು ಬರುವ ಮಿಂಚೆಂಚೆಗಳು ಮತ್ತೊಂದು ಗ್ರಹಚಾರ. ಅವುಗಳನ್ನು ಕಳಿಸಿದವರಿಗೇ ತಿರುಗಿ ೩೦ ಸಲ ಕಳಿಸಿದರೆ ಮುಗಿಯಿತು. ಮತ್ತೆ ಆ ತಪ್ಪು ಆತನಿಂದ ಆಗದು.ಇಂತವೆಲ್ಲ ನಿರುಪದ್ರವಿ ಮೇಲ್ ಗಳು ಅಂತ ಸುಮ್ಮನಿದ್ದು ಬಿಡಬಹುದು. ಆದರೆ, ಈಗೀಗ ತೊಂದರೆ ಉಂಟುಮಾಡುವ ಮೇಲ್ ಗಳೂ ಬರೋಕೆ ಶುರುವಾಗಿದೆ.

ಈ ಕೆಳಗಿನ ಸಬ್ಜೆಕ್ಟ್ ಲೈನು ಹೊತ್ತ ಮೇಲ್ ಗಮನಿಸಿರುತ್ತೀರಿ:

Please Pass this Message "1098"
dial 1098 for givin ur left over food to the diprieved ..

Need one small promise from you....!

Helping Hands Are Better Than Praying Lips.............
Not liking the food you have daily????


ಭಾರತದಲ್ಲಿನ ಬಡತನವನ್ನು ಅತ್ಯಂತ ಗಾಢವಾಗಿ ಬಿಂಬಿಸುವ ಒಂದಿಷ್ಟು ಚಿತ್ರಗಳನ್ನು ಮತ್ತು ಹಸಿವಿಂದ ಸಾಯುತ್ತಿರುವವರ ಅಂಕಿ ಅಂಶಗಳನ್ನು ಹೊತ್ತಿರುವ ಮೇಲ್ ಇದು. ಆ ಮೇಲ್ ನ ಸಾರಂಶ ಇಷ್ಟೇ. ನಿಮ್ಮ ಮನೆಯಲ್ಲೋ, ಅಥವ ಯಾವುದೇ ಸಮಾರಂಭಗಳಲ್ಲೇಸಿದ್ಧ ಪಡಿಸಿದ ಆಹಾರ ಉಳಿದು ಹೋಯಿತು ಅಂದರೆ ಅದನ್ನ ಹಾಳು ಮಾಡಬೇಡಿ, 1098 ಅನ್ನುವ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ಹೇಳಿ, ಅಲ್ಲಿನ ಸಂಬಂಧಿಸಿದ ವ್ಯಕ್ತಿಗಳು ಬಂದು ಆ ಅಳಿದುದ್ದನ್ನ ತಗೊಂಡು ಹೋಗಿ, ಏನೂ ಊಟಕ್ಕಿಲ್ಲದ ಮಕ್ಕಳಿಗೆ ಕೊಡುತ್ತಾರೆ, ನಾಲ್ಕು ಮಕ್ಕಳಿಗೆ ಉಪಕಾರ ಆಗ್ಲೀ, ದಯವಿಟ್ಟು ಸಾಧ್ಯ ಆದಷ್ಟ್ ಜನಕ್ ಕಳ್ಸೀ ಅಂತ ಈ ಅಂಚೆ ನಿಮ್ಮನ್ನು ಬೇಡಿಕೊಳ್ಳುತ್ತದೆ. ಮತ್ತು ನಾವು -ನೀವುಗಳು ಅದನ್ನು ಯಥಾಸಾಧ್ಯ ಜನಕ್ಕೆ ಫಾರ್ವರ್ಡ್ ಮಾಡಿ ಸುಮ್ಮನಾಗುತ್ತೇವೆ.

ಯಾರಾದರೂ , ಒಮ್ಮೆಯಾದರೂ 1098 ಗೆ ಫೋನ್ ಮಾಡಿದ್ದೀರಾ?

1098 ಅನ್ನುವುದು ಚೈಲ್ಡ್ ಲೈನ್ ಅನ್ನುವ ಸರಕಾರ ಮತ್ತು ಎನ್ ಜಿ ಓ ಗಳ ಸಹಕಾರದಿಂದ ನಡೆಯುವ, ಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಿರುವ ಸಂಸ್ಥೆಯ ದೂರವಾಣಿ ಸಂಖ್ಯೆ. ತೊಂದರೆಗೊಳಗಾದ ಮಕ್ಕಳಿಂದ ಅಂದರೆ- ಬಾಲ ಕಾರ್ಮಿಕರಾಗಿರುವವರು, ಮನೆಯಿಂದ ಓಡಿ ಬಂದು ದಿಕ್ಕುಗಾಣದವರದು, ಅಥವಾ ಪರೀಕ್ಷೆ ಅಂತ ಹೆದರಿ ಕೂತಿರುವವರಿಂದ- ದಿನವೊಂದಕ್ಕೆ 300-400 ಫೋನುಗಳು ಹಗಲು ರಾತ್ರಿ ಅನ್ನದೇ ಬರುತ್ತಲೇ ಇರುತ್ತದೆ. ಈ ಸಂಸ್ಥೆಗೆ ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ. ಅವರುಗಳಿಗೆ ಊರಲ್ಲಿನ ಉಳಿದ ಆಹಾರವನ್ನು ಸಂಗ್ರಹಿಸಿ ತಮ್ಮಲ್ಲಿನ ಮಕ್ಕಳಿಗೆ ನೀಡುವ ಅವಶ್ಯಕತೆ ಖಂಡಿತಕ್ಕೂ ಇಲ್ಲ.

ಈ ಈ ಮೈಲ್ ಏನು ತೊಂದರೆ ಮಾಡುತ್ತಿದೆ ಗೊತ್ತಾ?- ದಿನವೊಂದಕ್ಕೆ 60-70 ದೂರವಾಣಿ ಕರೆಗಳು, "ನಮ್ಮನೇಲಿ ಮೂರು ಜನಕ್ಕಾಗೋ ಅಷ್ಟ್ ಅನ್ನ ಸಾಂಬಾರು ಇದೆ, ತಗೊಂಡೋಗಿ", "ನೋಡೀ, ಇಂತಾ ಛತ್ರಕ್ಕೆ ಬನ್ನೀ, ಮೂವತ್ತು ಊಟ ಕೊಡ್ತೀವೀ ತಗಂಡು ಹೋಗೀ" ಅನ್ನೋ ತರದವೇ ಆಗಿವೆ. ಮತ್ತು ಇಂತಹ ಕರೆಗಳು ಬರುತ್ತಿರುವಾಗ,

ಅಲ್ಲೆಲ್ಲೋ ಜೀತ ಮಾಡುವ ಹುಡುಗನೊಬ್ಬ, ಅಥವಾ ದುಡ್ದಿಗಾಗಿ ಯಾರಿಗೋ ಮಾರಲ್ಪಟ್ಟಿರುವ ಹುಡುಗಿ, ತನ್ನನ್ನ ಬಚಾವು ಮಾಡೀ ಅಂತ ಕೋರಿಕೊಳ್ಳಲು ಫೋನ್ ಮಾಡುತ್ತಿರುತ್ತಾರೆ ಮತ್ತು ಈ ನಂಬರು ಪದೇ ಪದೇ ಎಂಗೇಜು ಬರುತ್ತದೆ.

ಸ್ನೇಹಿತರೇ, ಅವರುಗಳಿಗೆ ಆ ಹೊತ್ತಿಗೆ ಡಯಲ್ ಮಾಡಲು ಸಾಧ್ಯವಾಗದೇ ಹೋದರೆ. . .ಮತ್ತೆಂದೂ ಮಾಡಲಾಗದೇ ಹೋದೀತು.

ಯೋಚಿಸಿ..

ನಿಮಗೆ ಮೇಲ್ ಕಳಿಸೋರಿಗೆ, ಇದು ಸುಳ್ಳು ಮಾಹಿತಿ ಅನ್ನೋ ವಿಷ್ಯ ತಿಳಿಸಿ, ಮತ್ತು ನಿಜಕ್ಕೂ ಕಷ್ಟದಲ್ಲಿರೋ ಮಕ್ಕಳು ಕಣ್ಣಿಗೆ ಬಿದ್ದಾಗ ಮಾತ್ರ ಚೈಲ್ಡ್ ಲೈನ್ ಗೆ ಫೋನ್ ಮಾಡಿ.

(ನಾನು ಸ್ನಾತಕೋತ್ತರ ಪದವಿ ಓದುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಚೈಲ್ಡ್ ಲೈನ್ ಸಂಸ್ಥೆಯಲ್ಲಿ ಒಂದು ವರುಷ, ಫೀಲ್ಡ್ ವರ್ಕ್ ಮಾಡಿದ್ದೆ.)

ಚೈಲ್ಡ್ ಲೈನ್ ವೆಬ್ ಸೈಟ್.

ಬುಧವಾರ, ಮೇ 14, 2008

ಹೇರೂರು ತೇರಿಗೆ ನಾನೂ ಹೋದೆ!

ವಿಷ್ಯ ಅಂತಂದ್ರೆ,ನಾನು ಮೊನ್ನೆ ಮೊನ್ನೆ ಹೇರೂರು ತೇರಿಗೆ ಹೋಗಿದ್ದೆ. ಮತ್ತು, ಹೇರೂರು ತೇರಿಗೆ ಹೋದಾಗ ಏನು ಮಾಡಲೇ (ಆಡಲೇ)ಬೇಕೋ ಅದನ್ನ ಮಾಡಿ(ಆಡಿ) ಬಂದೆ.

ಗುರುವಾರ, ಮೇ 01, 2008

ಏನನ್ನುತ್ತೀರಿ ಇದಕ್ಕೆ?

ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.

ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.

ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.

ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?

ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.

ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.