ಸೋಮವಾರ, ಅಕ್ಟೋಬರ್ 22, 2012

ಮರಳುವ ತುಡಿತ ಮತ್ತು ಇರುವ ಬಯಕೆ



ಹೊರಡುವುದು ಸುಲಭ. ವಾಪಸಾಗುವುದು ಕಷ್ಟ. ಹೊರಡುವಾಗ ಹೊತ್ತ ಕನಸುಗಳಿಗೆ ಮತ್ತು ಹೋದ ಮೇಲೆ ಕಾಣುವ ವಾಸ್ತವಗಳಿಗೆ ಅಜಗಜಾಂತರ ಅಂತ ಗೊತ್ತಾದ ಮೇಲೆ ಕೂಡ ಮರಳುವುದು ಕಷ್ಟ. ಕಂಡ ಕನಸುಗಳಿಗಿಂತ ನಿಜದ ನಡೆಯೇ ಆಪ್ಯಾಯಮಾನ ಅನ್ನಿಸತೊಡಗುವುದರಿಂದಲೋ ಅಥವಾ ಸಿಹಿಯಾದ ಅಪಕ್ವ ಸ್ವಪ್ನಗಳನ್ನು ಸೃಷ್ಟಿಸಿದ ಜಾಗಕ್ಕಿಂತ ಕಹಿಯಾದ ಸತ್ಯಗಳ ಜಾಗಕ್ಕೆ ಹೊಂದಿಕೊಂಡಿರುವುದರಿಂದಲೋ ಹೀಗಾದೀತು. ಬಾಲ್ಯದ ಆಮೋದಪ್ರಮೋದಗಳ ನೆನಪುಗಳನ್ನು ಆಗೀಗ ತಂದುಕೊಂಡು,  ಕಳೆದ ದಿನಗಳು ಎಷ್ಟು ಚೆನ್ನಾಗಿತ್ತು , ಸಣ್ಣವರಾಗಿದ್ದಾಗ ಹೇಗೆ ಗುಡ್ಡೆಯಲ್ಲಿ ಕೌಳಿ ಹಣ್ಣು ಕೀಳುತ್ತಿದ್ದೆವು ಗೊತ್ತಾ ಎಂದು ಎಲ್ಲರ ಅನುಭವವೂ ಹೆಚ್ಚು ಕಡಿಮೆ ಒಂದೇ ತೆರನಾಗಿರುವ ಸ್ನೇಹಿತರ ಗುಂಪಿನ ಸಂಜೆಯ ಕೂಟದಲ್ಲಿ ಇಪ್ಪತ್ಮೂರರ ವಯಸ್ಸಿಗೇ ಅಕಾಲ ವೃದ್ಧಾಪ್ಯ ಬಂದವರಂತೆ ಮಾತನಾಡುತ್ತ ಬದುಕನ್ನು ದೂಡುವುದು ಇಂದು ಹೆಚ್ಚಿನ ಮಂದಿಗೆ ಅಭ್ಯಾಸವಾಗಿ ಹೋಗಿದೆ. 

ಊರಲ್ಲಿನ ಅಕ್ಕ ಪಕ್ಕದ ಮನೆಗಳಂತೆ, ತಮ್ಮ ಮನೆಯಲ್ಲೂ ಇಬ್ಬರೇ ಇರುವ ಅಪ್ಪ ಅಮ್ಮನನ್ನು ವೀಕೆಂಡುಗಳಲ್ಲಿ ಕಾಣಲು ಹೋಗಿ ಬಂದು, “missing moms food.. had a great weekend in home” ಎಂದು ಸ್ಟೇಟಸ್ ಅಪ್ ಡೇಟ್ ಮಾಡಿದರೆ ಅದಕ್ಕೊಂದಿಷ್ಟು ಲೈಕು ಕಮೆಂಟುಗಳು. ಎಲ್ಲೋ ಪೇಪರಿನ ಕೃಷಿ ಪುರವಣಿಯಲ್ಲಿ ಎಂ.ಎಸ್ಸಿ ಮಾಡಿದ ಹುಡುಗನೊಬ್ಬ ಊರಿಗೆ ಮರಳಿ ಸ್ವಯಂ ಕೃಷಿಯಲ್ಲಿ ತೊಡಗಿಸಿಕೊಂಡು ಎಕರೆಗೆ ಅದೆಷ್ಟೋ ಕ್ವಿಂಟಾಲ್ ಹಣ್ಣು ತರಕಾರಿ ಬೆಳೆದ ಸುದ್ದಿಯನ್ನು ನೋಡಿ ಒಂದು ಕ್ಷಣಕ್ಕೆ ರೋಮಾಂಚನ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಹಳೇ ಸುಭಾಷಿತದ ನೆನಪು. ಮೊದಲು ಇರದುದರೆಡೆಗೆ ತುಡಿದ ಮನಸ್ಸಿಗೆ ನಂತರ ಇದ್ದದ್ದನ್ನಾದರೂ ಸರಿಯಾಗಿ ದಕ್ಕಿಸಿಕೊಳ್ಳಬೇಕಿತ್ತು ಎಂಬ ಕಸಿವಿಸಿ.ಆದರೆ ಮಾರನೆಯ ದಿನದ ಚಕ್ರಗತಿಯ ಭರಾಟೆಯಲ್ಲಿ ಮತ್ತೆ ಹಳಿಗೆ ಬರುವ ಮನಸ್ಸು. 

ಸಣ್ಣ ಪಟ್ಟಣಗಳಿಂದ, ಹಳ್ಳಿಗಳಿಂದ ಮಹಾನಗರಗಳಿಗೆ ತೆರಳಿ ಕೆಲಸದಲ್ಲಿರುವ ಬಹುಮಂದಿ, ಮತ್ತೆ ಮನೆಗೆ ಮರಳುವ ಬಗೆಗಿನ ಯೋಚನೆಯ ಸುಳಿಗೆ ಬಿದ್ದೇ ಬಿದ್ದಿರುತ್ತಾರೆ. ಆ ಸುಳಿ, ಹಲವರನ್ನ ಮತ್ತೆ ಅದೇ ನಗರದ ದಂಡೆಗೆ ಎತ್ತಿ ಎಸೆದಿದ್ದರೆ, ಎಲ್ಲೋ ಕೆಲ ಮಂದಿಗೆ ತಮ್ಮೂರಿಗೆ ತೆರಳುವ ದಾರಿ ಕಂಡಿದ್ದೀತು. ದಾರಿ ಕಂಡ ಮೇಲೂ ವಾಪಸ್ ಹೋದವರ ಸಂಖ್ಯೆ ಮತ್ತೂ ಕಡಿಮೆ. ಅದಕ್ಕೆ ಕೆಲಸ ,ಆರ್ಥಿಕ ಸ್ಥಿತಿಗತಿಗಳಿಂದ ತೊಡಗಿ ಕಂಫರ್ಟ್ ಝೋನ್ ವರೆಗೆ ಕಾರಣಗಳು ಹಲವು. ಹೀಗಾಗಿ ಹೆಚ್ಚಿನವರು ಚಕ್ರವ್ಯೂಹ ಹೊಕ್ಕ ಅಭಿಮನ್ಯುಗಳೇ. ಹೊರ ಬರುವ ದಾರಿ ತಿಳಿಯದೇ ಒಳಗೇ ಹೋರಾಡುತ್ತಿದ್ದಾರೆ. ಹೊರ ಬರುವ ಹೊತ್ತಿಗೆ ಯುದ್ಧ ಮುಗಿದಿರುತ್ತದೆ.

ವಾಪಸ್ಸು ಬರುವ ಮಕ್ಕಳ ದಾರಿ ಕಾಯುತ್ತ ಕೂತಿರುವ ವೃದ್ಧರ ಮನೆಗಳು ಪ್ರತಿ ಊರಲ್ಲೂ ಇವೆ ಎಂಬ ಮಾತು ಕೂಡ ಕ್ಲೀಷೆಯಾಗಿ ಹೋಗಿದೆ. ನಮ್ಮೂರಲ್ಲೇ ಈ ಕ್ಲೀಷೆಗೆ ಉತ್ತರ ಎಂಬಂತೆ ಹತ್ತತ್ತು ಫ್ಲೋರಿನ ಎರಡು ಮೂರು ಅಪಾರ್ಟ್ ಮೆಂಟುಗಳು ರೆಡಿಯಾಗಿದ್ದು ಹೆಚ್ಚಿನ ಅಪ್ಪ ಅಮ್ಮಂದಿರು ಅಲ್ಲಿಗೆ ಶಿಫ್ಟಾಗಿದ್ದಾರೆ. ಕೊನೆಯ ಮಹಡಿಯವರೆಗೂ ಲಿಫ್ಟ್ ವ್ಯವಸ್ಥೆ ಇದೆ. ಈ ಸ್ಥಿತ್ಯಂತರಗಳನ್ನೆಲ್ಲ ನೋಡುತ್ತಲೇ, ಅದೇ ಅಪಾರ್ಟ್ ಮೆಂಟಿನ ಹೊಸ ಗಂಡ ಹೆಂಡತಿ ತಮ್ಮ ಮಗನಿಗೆ ಮೆಟೀರಿಯಲ್ ಸೈನ್ಸ್ ಓದಿಸುವ ಮಾತನಾಡುತ್ತಾರೆ. ಅದಕ್ಕೆ ಕೆಲಸ ದೂರದ ಮುಂಬೈಲೋ, ಹೈದರಾಬಾದ್ ನಲ್ಲೋ ಸಿಗುತ್ತದೆ ಎಂಬುದೂ ಅವರಿಗೆ ಗೊತ್ತಿದೆ.ಅತ ಕೈಗೆ ಸಿಗಲಾರ ಅನ್ನುವುದೂ ತಿಳಿದಿದೆ.

ಹುಟ್ಟಿದಾಗಲೇ ಹೊಕ್ಕಳ ಬಳ್ಳಿಯನ್ನ ಕಡಿದುಕೊಂಡು ಹೊರಬರುವ ಜೀವಗಳು, ಮುಂದೆ ಶಾಲಾ ಕಾಲೇಜುಗಳಲ್ಲಿ ಓದುವ ಹತ್ತು –ಹದಿನೈದು ವರ್ಷಗಳಲ್ಲಿ ಕೂಡ ಬೇರನ್ನ ಕಡಿದುಕೊಂಡು ಹೋಗುವ ಅಸಂಖ್ಯ ಸಾಧ್ಯತೆಗಳನ್ನೇ ಗಮನಿಸುತ್ತವೆ. ಬೆಳೆಯುವ ವಾತಾವರಣವೂ ಅದಕ್ಕೆ ಪೂರಕ. ಎಲ್ಲ ಮುಗಿದು ಗಮ್ಯವನ್ನು ಅರಸಿಕೊಂಡು ಹೊರಟ ಮೇಲೆ, ಮತ್ತೆ ಮರಳುವ ತುಡಿತ ಆರಂಭವಾಗುತ್ತದೆ. ದೂರತೀರದ ಯಾನಕ್ಕೆ ಸಜ್ಜಾದ ಹಡಗು, ಹೊರಟ ದಡವನ್ನೇ ಹುಡುಕುತ್ತದೆ. ಬಿಲ್ಲಿನಿಂದ ಹೊರಟ ಬಾಣಕ್ಕೆ ಬತ್ತಳಿಕೆಯ ಕನವರಿಕೆ. 

ಆದರೆ ಬದುಕಿಗೆ ಬೇರಿನ ಅವಶ್ಯಕತೆ ಇದೆಯಾ? ಈಗಾಗಲೇ ’ಜಾಯಿಂಟ್’ ಎಂಬ ಕೀಲು ಕಳೆದುಕೊಂಡು ಕೇವಲ ’ನ್ಯೂಕ್ಲಿಯರ್’ ಆಗಿರುವ ಕುಟುಂಬಗಳು ಬೇರು-ಮೂಲ ಎನ್ನುವ ಆಲೋಚನೆಯನ್ನೇ ಬದಲಿಸುತ್ತಿವೆ. ಒಂದೂರಿನ ಜಾತ್ರೆ, ಯಕ್ಷಗಾನ, ನದಿದಂಡೆ, ದೀಪೋತ್ಸವ, ಗದ್ದೆ ಬಯಲು ಇವೆಲ್ಲ ಸೇರಿದರೆ ತಾನೆ ’ಬೇರು’? ಬೇರಿಗೆ ಮರಳುವುದು ಎಂದರೆ ಒಂದು ಸಂಸ್ಕೃತಿಗೆ-ಒಂದು ಜೀವನ ವಿಧಾನಕ್ಕೆ ಮರಳುವುದೋ ಅಥವಾ ಬರಿಯ ಇಟ್ಟಿಗೆ-ಸಿಮೆಂಟು ಇರುವ ಮನೆಗೋ? ಅಪ್ಪ ಅಮ್ಮನೇ ತಿರುಗಾಟದ ಕೆಲಸದಲ್ಲಿದ್ದು, ಕೊನೆಗೆ ಯಾವುದೋ ಊರಲ್ಲಿ ನೆಲೆನಿಂತರೆ, ಅದು ಮಗನದೋ, ಮಗಳದೋ ’ಬೇರು’ ಆಗುವುದು ಹೇಗೆ? ಅಲ್ಲಿನ ಜನ-ಬದುಕು ಒಮ್ಮೆಗೇ ತಮ್ಮದಾಗುವುದು ಹೇಗೆ? ಹೆತ್ತವರ ಮೇಲಿನ ಬಂಧಕ್ಕೆ ಮರಳಿ ಬಂದರೂ ಅದು ಬಂಧನವಾಗದೆ ಉಳಿಯಬೇಕು ಎಂದರೆ, ಸಂಸ್ಕೃತಿಯ ಆಸರೆ ಬೇಕಾದೀತು. 

ಒಲುಮೆಯ ಗೂಡಿಗೆ ಮರಳುವ ಪ್ರಯತ್ನದಲ್ಲಿರುವ ಎಲ್ಲರಿಗೂ, ಹೃದಯ ಗೀತೆಯನ್ನು ಹಾಡುವ ಹಕ್ಕಿಯ ದನಿ ಕೇಳಿಸಲಿ ಎಂದು ಹಾರಯಿಸುವುದಷ್ಟೇ ಈ ಹೊತ್ತಿಗೆ ಸಾಧ್ಯ.

(ಮುಗುಳು ಮಾಸ ಪತ್ರಿಕೆಗೆ ಬರೆದದ್ದು)

ಭಾನುವಾರ, ಅಕ್ಟೋಬರ್ 14, 2012

ಗಾಂಧಿ ಮರ



ಅಲ್ಲ ಮಾರಾಯಾ, ಪಾಸ್ಟು ಬಂದು ಎಂತ ಸಾದ್ನೆ ಮಾಡ್ಲಿಕ್ಕುಂಟು? ಮನೆಗೆ ಬೇಗ ಹೋಗಿ ನೀನು ಹೆಂಡ್ತಿಯ ಜಕ್ಕೆಲಲ್ಲಿ ಬೀಳುದಲ್ವಾ?” ಅಂತಂದು ವೆಂಕಟೇಶ್ವರ ಸ್ಟೋರಿನ ಕಿಣಿ ಮಾಮ್ ಜೋರು ನಗಾಡಿದಾಗ ಅದಕ್ಕೆ ಏನು ಉತ್ತರ ಕೊಡಬೇಕು ಎಂದು ದಾಮುವಿಗೆ ತಿಳಿಯಲಿಲ್ಲ. ಅಲ್ಲಿ ಕೂತಿದ್ದ ನಾಕಾರು ಮಂದಿ ಪಿಸಕ್ ಎಂದು ನಕ್ಕಾಗ ದಾಮುವಿಗೆ ಮತ್ತೂ ಮರ್ಯಾದಿ ಹೋದ ಹಾಗಾಯ್ತು. ಸ್ವಲ್ಪ ಹೊತ್ತಿಗಷ್ಟೇ ಮುಂಚೆ ಗ್ರಾಮಸಭೆ ಮುಗಿಸಿಕೊಂಡು ಬಂದಿದ್ದ ಪಂಚಾಯ್ತು ಮೆಂಬರ್ ದಾಮು ಗೋಳಿಬೈಲಿನ ಕಿಣಿಮಾಮ್ ಅಂಗಡಿ ಮುಂದೆ ಕೂತಿದ್ದ ನಾಲ್ಕಾರು ಜನರಿಗೆ ಬ್ರೇಕಿಂಗ್ ನ್ಯೂಸೊಂದನ್ನು ಕೊಡುವ ಉದ್ದೇಶ ಹೊಂದಿದ್ದ. ಸರಕಾರದ ಹೊಸ ಯೋಜನೆಯೊಂದರ ಅನ್ವಯ, ಅವನ ಹಳ್ಳಿಗೆ ಕಾಂಕ್ರೀಟ್ ರಸ್ತೆ ಮಂಜೂರಾಗಿತ್ತು. ವಿಚಾರವನ್ನು ಊರಲ್ಲಿ ಸುದ್ದಿಯಾಗಿಸಿ ತನ್ನ ಲೆವೆಲ್ ಹೆಚ್ಚಿಗೆ ಮಾಡಿಕೊಳ್ಳಬೇಕು ಎಂಬುದಷ್ಟೇ ಅವನ ತಲೆಯಲ್ಲಿತ್ತು. ಅಂಗಡಿಯೆದುರು ಬಂದವನೇನಮ್ಮೂರಿಗೆ ಕಾಂಕ್ರೀಟು ರೋಡು ಬರ್ಲಿಕ್ಕುಂಟುಎಂದು ಘೋಷಿಸಿದ . ಅವನ ಮಾತಿಗೆ ಯಾರಿಂದಲೂ ಪ್ರತಿಕ್ರಿಯೆಯೇ ಬರಲಿಲ್ಲ. ತಾನು ಹೇಳಿದ್ದು ಕೇಳಿಲ್ಲವೇನೋ ಅಂದುಕೊಂಡ ದಾಮು, ಅದನ್ನೇ ಮತ್ತೆ ದೊಡ್ಡದಾಗಿ ಹೇಳುತ್ತ, ಬೆಂಚಿನ ಮೇಲಿದ್ದ ಪೇಪರು ಕೈಗೆತ್ತಿಕೊಂಡು ಕೂತ. ಒಳಗೆ ಸಕ್ಕರೆ ತೂಗುತ್ತಿದ್ದ ಕಿಣಿ ಮಾಮ್, “ಆಯ್ತು ಮಾರಾಯ ಅದೆಂತ ದೊಡ್ಡ ಸಂಗ್ತಿ? ಮಂಗಳೂರು ಪೇಟೆ ತುಂಬ ಸಿಮೆಂಟಿಂದೇ ರಸ್ತೆ ಅಲ್ವಾ?ಮತ್ತೆ ನಮ್ಮ ಈಗಿನ ರಸ್ತೆಯೇ ಒಳ್ಳೆದುಂಟಲ್ಲ, ಕಾಂಕ್ರೀಟು ಯಾಕಂತೆ, ದುಡ್ಡು ತಿನ್ಲಿಕ್ಕಾ? ಅದೂ ಹುಚ್ಚು ಮಳೆಗಾಲದಲ್ಲಿ ಎಂತ ತೋಡಿಗೆ ಸಿಮೆಂಟು ಹಾಕ್ತಾರಾಎಂದಾಗ ದಾಮುಕಾಂಕ್ರೀಟು ರಸ್ತೆಯಲ್ಲಿ ಫಾಸ್ಟ್ ಹೋಗ್ಲಿಕ್ಕಾಗ್ತದೆ ಕಿಣಿಯವರೇಎಂದು ಕ್ಷಣಕ್ಕೆ ತೋಚಿದ್ದನ್ನು ಹೇಳಿದ್ದ. ಹೊಸದಾಗಿ ಮದುವೆ ಆಗಿದ್ದ ಆತನನ್ನು ಲೇವಡಿ ಮಾಡಲೆಂದೇ ಕಿಣಿ ಮಾಮ್ ಹೆಂಡತಿಯ ತೊಡೆ ವಿಷಯ ಎತ್ತಿ ಮುಜುಗರಕ್ಕೆ ಈಡು ಮಾಡಿದ್ದರು. ದಾಮುವಿಗೆ ನಾಲ್ಕು ಜನರೆದುರು ತನ್ನ ಮರ್ಯಾದೆಯನ್ನು ತೂಕಕ್ಕೆ ಹಾಕಿದ ಕಿಣಿ ಮಾಮ್ ಮೇಲೆ ಸಿಟ್ಟು ಬಂದರೂ, ಏನೂ ಮಾಡುವ ಹಾಗಿರಲಿಲ್ಲ. ಪುಣ್ಯಕ್ಕೆ ಅಲ್ಲಿದ್ದ ಉಳಿದವರೂ ಮಾತಿಗೆ ಹೆಚ್ಚೇನೂ ಒಗ್ಗರಣೆ ಹಾಕದೇ, ದಾಮುವಿನ ಹೋಗುತ್ತಿದ್ದ ಮರ್ಯಾದೆಗೆ ಒಡ್ಡು ಹಾಕಿ ನಿಲ್ಲಿಸಿದ್ದರು. “ಕೆಲ್ಸ ಮಾಡದಿದ್ರೆ ಸರ್ಕಾರಕ್ಕೆ ಬಾಯಿಗೆ ಬಂದ ಹಾಗೆ ಬೈಯುದೂ ನೀವೇ, ಎಂಥದೋ ಒಂದು ಹೊಸ್ತು ಬಂದ್ರೆ ಅದನ್ನು ಪುಸ್ಕು ಮಾಡುದೂ ನೀವೇಎಂದು ಗೊಣಗುತ್ತ ಪಿರಿಪಿರಿ ಮಳೆಯಲ್ಲಿಯೇ ಅಲ್ಲಿಂದ ಹೊರಟ ದಾಮು. ಹೊರಟ ಬೆನ್ನಲ್ಲಿ ಮತ್ತೆ ಕೇಳಿದ ನಗುವಿನ ಸದ್ದನ್ನು ಬೇಕೆಂದೇ ಅವನ ಕಿವಿ ಸ್ವೀಕರಿಸಲಿಲ್ಲ.
ಮಂಗಳೂರು ಹೊರವಲಯದ ಕೂಳೂರಿನಿಂದ ಪಶ್ಚಿಮಕ್ಕೆ ಐದು ಕಿಲೋಮೀಟರು ಹೋದರೆ ಸಿಗುವ ಗೋಳಿಬೈಲು ಸುತ್ತಲಿನ ಯಾವ ಮಹಾನಗರ ಪಾಲಿಕೆಯ, ಪುರಸಭೆಗಳ ವ್ಯಾಪ್ತಿಗೂ ಬರದೇ ಹಾಗೇ ಉಳಿದುಕೊಂಡಿರುವ ಮೂರ್ನಾಕು ಸಾವಿರ ಜನ ಇರುವ ಊರು. ಊರಿಗೆ ಬೇಕಾದ ಶಾಲೆ, ಪಂಚಾಯ್ತಿ , ನಾಲ್ಕಾರು ಅಂಗಡಿಗಳು, ಆರೋಗ್ಯ ಕೇಂದ್ರಗಳಿರುವ ಸಾದಾ ಸೀದಾ ಹಳ್ಳಿ. ಗೋಳಿಬೈಲಿನ ಜನಕ್ಕೆಲ್ಲ ಮಂಗಳೂರೇ ಮುಖ್ಯ ಪಟ್ಟಣ. ಏನೂ ಕೆಲ್ಸವಿಲ್ಲದೇ ಓಡಾಡಿಕೊಂಡಿರುವ ಒಂದಿಷ್ಟು ಜನರಲ್ಲಿ ದಾಮುವಿನಂತಹ ಕೆಲವರು. ಆದರೆ ದಾಮುವಿಗೆ ಪಂಚಾಯ್ತಿ ಮೆಂಬರು ಎಂಬ ಹಣೆಪಟ್ಟಿ ಅಂಟಿಕೊಂಡಿರುವುದರಿಂದ, ಸ್ವಲ್ಪ ತೂಕ.
ದಾಮು ಗ್ರಾಮ ಪಂಚಾಯತ್ ಮೆಂಬರಾದ್ದೇ ನಸೀಬಲ್ಲಿ. ಊರಲ್ಲಿ ಓಡಾಡಿಕೊಂಡಿದ್ದುಒಳ್ಳೆ ಹೆಸರುಮಾಡಿದ್ದ ಅವನ ಅಣ್ಣ ರಾಘವನಿಗೆ ದುಬೈಲಿ ಕೆಲಸ ಸಿಕ್ಕಿ, ಪೊಲಿಟಿಕ್ಸು ಬಿಟ್ಟು ಹೊರಟುಬಿಟ್ಟಿದ್ದ. ಅವ ಊರಲ್ಲಿದ್ರೆ ಎರಡು ಮೂರು ಕೇಸ್ ಜಡಿದು ಪೊಲೀಸ್ರು ಹಿಡ್ದು ಒಳಗೆ ಹಾಕುವ ಚಾನ್ಸಿತ್ತು ಅಂತ ಜನ ಮಾತಾಡಿಕೊಂಡಿದ್ದು ಹೌದಾದ್ರೂ, ಆಡಿಕೊಳ್ಳುವವರ ಮಾತು ಗಾಳಿಯಲ್ಲೇ ಕರಗಿಹೋಗಿತ್ತು. ಅರ್ಜೆಂಟಿಗೆ ಬೇರೆ ಯಾವ ಕ್ಯಾಂಡಿಡೇಟೂ ಸಿಗದೇ, ಅಲ್ಲಿ ಇಲ್ಲಿ ಓಡಾಡಿಕೊಂಡು ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ ಅವನ ತಮ್ಮ ದಾಮು ಎಲೆಕ್ಷನ್ನಿಗೆ ನಿಂತು, ಗೆದ್ದೂ ಬಿಟ್ಟಿದ್ದ. ಅದೃಷ್ಟದಲ್ಲಿ ಗೆದ್ದ ಅಂತ ಅಂದುಕೊಂಡರೂ, ದಾಮುವಿನ ಗೋವಿನಂತಹ ಸ್ವಭಾವ ಕೂಡ ಅದಕ್ಕೆ ಸಹಾಯ ಮಾಡಿತ್ತು. ಅಣ್ಣನ ಹಾಗೆ ಚಾಲೂ ಅಲ್ಲದಿದ್ದರೂ, ಗೋಳಿಬೈಲಿನ ಸಮಸ್ತ ಮನೆಗಳ ವಿದ್ಯುತ್ ಸಮಸ್ಯೆಗೆ ಪರಿಹಾರ ದಾಮುವಿನ ಕಿಸೆಯಲ್ಲಿದ್ದ ಕಟಿಂಗ್ ಪ್ಲೇಯರ್, ಟೆಸ್ಟರುಗಳಲ್ಲಿತ್ತು. ಪಕಪಕ ಗುಡುವ ಟ್ಯೂಬ್ ಲೈಟಿಂದ ಹಿಡಿದು ಭಡ್ ಭಡ್ ಅನ್ನುವ ಎರಡೆಚ್ಪಿ ಪಂಪಿನವರೆಗಿನ ರಿಪೇರಿ ಆತನಿಗೆ ಕರತಲಾಮಲಕ. ರಿಪೇರಿ ದುಡ್ಡು ಕೊಟ್ಟರೂ ನಡೆದೀತು, ಮರೆತರೂ ಅವನಿಗೆ ಬೇಜಾರಿಲ್ಲ. “ಎಮ್ಮೆಗೆ ಹಾಕಿದ ಹಿಂಡಿ ಎಲ್ಲಿಗೆ ಹೋಗ್ತದೆ? ಇವತ್ತಲ್ಲ ನಾಳೆ ಹಾಲು ಕರೀಲೇ ಬೇಕುಎನ್ನುವ ಜಾಯಮಾನ. ನಾಳೆ ಮತ್ತೆ ತಾನೇ ಅವರ ಮನೆಗೆ ಹೋಗಬೇಕು ಎನ್ನುವುದು ಗೊತ್ತಿರುವುದರಿಂದ ಧೈರ್ಯ. ತಡದು ಹೋದರೆ ಹತ್ತಿಪ್ಪತ್ತು ಹೆಚ್ಚಿಗೆಯೇ ಸಿಕ್ಕೀತು.ಅವರಿವರು ಗಾಳಿ ಹಾಕಿ ಎಲೆಕ್ಷನ್ನಿಗೆ ನಿಲ್ಲಿಸಿದ ಮೇಲೂ ದಾಮುವಿಗೆ ತಾನು ಗೆಲ್ಲುತ್ತೇನೆ ಎಂಬ ಗ್ಯಾರೆಂಟಿ ಇರಲಿಲ್ಲ. ಕೈಯಿಂದ ಖರ್ಚು ಮಾಡುವಷ್ಟು ದುಡ್ಡು ಮೊದಲೇ ಇಲ್ಲ. ಹೀಗಾಗಿ ಬರೀ ೪೦೦ ರೂಪಾಯಿ ಖರ್ಚು ಮಾಡಿ ಪ್ಯಾಂಪ್ಲೆಟು ಹಂಚಿದ್ದ ಅವನು.
ರಾಜಕೀಯದ ತಲೆಬುಡ ತಿಳಿಯದ ಪುಣ್ಯಾತ್ಮ ದಾಮು ಆತನ ಎದುರು ನಿಂತಿದ್ಧ ಹಳೆತಲೆಗಳಾದ ಬಾಂಬೈ ಫೆರ್ನಾಂಡಿಸ್, ಬೀಡಿ ಅಬ್ಬಾಸನನ್ನೆಲ್ಲ ಸೋಲಿಸಿ ಗೆದ್ದದ್ದು ಊರಲ್ಲಿ ನಾಲ್ಕಾರು ದಿನ ನಿಂತ ಸುದ್ದಿ. ಗೆದ್ದ ಮಾತ್ರಕ್ಕೆ ತಾನೇನು ದೊಡ್ಡ ಜನ ಆದೆ ಅಂತ ದಾಮುವೂ ಅಂದುಕೊಂಡಿರಲಿಲ್ಲ. ಹಾಗಂತ ಒಂದಿಷ್ಟು ದಿನ ಗೆದ್ದ ಅಮಲು ತಲೆಯಲ್ಲಿ ತೂಗಿದ್ದು ಹೌದು. ’ಹ್ವಾ, ಎಂತ ಮಾರ್ರೆ ಪಂಚಾಯ್ತಿ ಮೆಂಬರಂತೆ ಈಗ, ಭಾರಿ ಒಳ್ಳೆದಾಯ್ತು, ಊರಿಗೆ ಎಂತಾರು ಮಾಡ್ಸಿಅಂತ ಕೆಲವೊಂದು ಜನ ಸಡನ್ನಾಗಿ ಗೌರವ ಕೊಟ್ಟಾಗ ಖುಷಿಯಾದ್ದು ಸತ್ಯ. ಪಂಚಾಯ್ತಿ ಸಭೆಗೆ ಆವಾಗೀವಾಗ ಹೋಗುತ್ತಿದ್ದನಾದರೂ ಅಲ್ಲಿ ಎಲ್ಲ ಸೇರಿ ಮಾಡುವ ಗಲಾಟೆ ಗೌಜು ಇವನ ತಲೆಗೇ ಹತ್ತುತ್ತಿರಲಿಲ್ಲ. ಆದ್ರೆ ದಾಮ ವಿರೋಧ ಪಕ್ಷದಲ್ಲಿದ್ದ ನಾಲ್ಕೇ ಮಂದಿಯಲ್ಲಿ ಒಬ್ಬನಾದದ್ದಕ್ಕೆ, ಉಳಿದ ಮೂವರ ಜೊತೆ ಸೇರಿ ಗಲಾಟೆ ಮಾಡಬೇಕಿತ್ತು. ಹೆಚ್ಚಿನ ಸಲ ವಿಷ್ಯ ಏನೂ ಇಲ್ಲದಿದ್ದರೂ ಬೊಬ್ಬೆ ಹಾಕಬೇಕಾಗಿ ಬರುವುದು ಅವನ ಜಾಯಮಾನಕ್ಕೆ ಹೇಳಿಸಿದ್ದಾಗಿರಲಿಲ್ಲ. ಗ್ರಾಮ ಪಂಚಾಯತ್ ಸದಸ್ಯನಾಗುವುದು ಎಂದರೆ ಎಂ.ಎಲ್. ಸ್ಥಾನಕ್ಕೆ ಏರುವ ಮೊದಲ ಮೆಟ್ಟಿಲು ಇತ್ಯಾದಿಯಾಗಿ ಅವನ ತಲೆ ತಿಂದಿದ್ದ ಪಕ್ಷದ ಮುಖಂಡರು ಈಗ ಆತನ ಸುದ್ದಿಗೇ ಬರುತ್ತಿರಲಿಲ್ಲ. ಪಂಚಾಯ್ತಿ ಮೆಂಬ್ರಾದ್ರೆ ತಿಂಗಳೂ ತಿಂಗಳೂ ಒಳ್ಳೆ ಕಮಾಯಿ ಮಾರಾಯ ಅಂದಿದ್ದ ಸ್ನೇಹಿತರು ಅಡ್ರೆಸ್ಸಿಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದಿನಾ ಕೈತುಂಬ ಇರುತ್ತಿದ್ದ ಎಲೆಕ್ಟ್ರಿಕ್ ಕೆಲ್ಸ ಕಡಿಮೆಯಾಗಿತ್ತು. ಬಾಯಿಬಿಟ್ಟೇ ಯಾರಲ್ಲೋ ಕೇಳಿದಾಗ, “ನೀವೀಗ ಪಂಚಾಯ್ತು ಮೆಂಬ್ರು , ನಾವು ಹೇಗೆ ಸಣ್ಣ ಪುಟ್ಟ ಕೆಲ್ಸಕ್ಕೆಲ್ಲ ನಿಮ್ಮನ್ನು ಕರಿಯುದು?” ಎಂದು ಅಚಾನಕ್ ಬಹುವಚನದಲ್ಲಿ ಮಾತಾಡಿ ತಲೆ ಹಾಳು ಮಾಡಿದ್ದರು. ಹೀಗಾಗಿ ಪಂಚಾಯತ್ ರಾಜಕೀಯ ಮಾಡುವುದು ಬಿಟ್ಟು ಬೇರೇನೂ ಉಳಿಯಲಿಲ್ಲ ದಾಮುಗೆ. ಊರಿನ ದಾರಿಯ ಕರೆಂಟು ಕಂಬಕ್ಕೆ ಟ್ಯೂಬ್ ಲೈಟು ಹಾಕಿಸುವುದು, ಸಾರ್ವಜನಿಕ ಬೋರ್ ವೆಲ್ ತೋಡಿಸುವುದು ಇತ್ಯಾದಿ ಎಲ್ಲರಿಗೂ ಉಪಯುಕ್ತ ಕೆಲಸಗಳನ್ನ ಮಾಡಿಸಿಕೊಡುತ್ತ, ಅದರಲ್ಲೆ ಬಂದ ದುಡ್ಡು ಉಳಿಸಿಕೊಂಡು ಮದುವೆಯೂ ಆಗಿದ್ದ.
ಇಂತಹ ಸಂದರ್ಭದಲ್ಲೇ ಕಾಂಕ್ರೀಟು ರಸ್ತೆಯ ಹೊಸ ಯೋಜನೆ ಪ್ರಸ್ತಾಪಕ್ಕೆ ಬಂದದ್ದು. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಕಿಲೋಮೀಟರ್ ಉದ್ದದ ಕಾಂಕ್ರೀಟು ಮಾಡುವ ರಾಜ್ಯ ಸರಕಾರದ ಪ್ಲಾನಿಗೆ ಕೂಳೂರು ಗೋಳಿಬೈಲು ರಸ್ತೆ ಆಯ್ಕೆಯಾಗಿತ್ತು. ಸಾಮಾನ್ಯವಾಗಿ ಸಾವಿರಗಳಲ್ಲಿ ಖರ್ಚು ಮಾಡುವ ಪಂಚಾಯತಿನ ಮಿತಿಯನ್ನು ಮೀರಿ ಕೋಟಿಗಳಲ್ಲಿ ಕಾಣುತ್ತಿದ್ದ ದುಡ್ಡು ಎಲ್ಲ ಸದಸ್ಯರ ತಲೆ ಕೆಡಿಸಿತ್ತು. ಪಕ್ಷ ಬೇಧ ಮರೆತು ಎಲ್ಲ ಸದಸ್ಯರೂ ಒಟ್ಟಾಗಿ ರಸ್ತೆಯ ಅಭಿವೃದ್ಧಿಯೇ ತಮ್ಮ ಅಭಿವೃದ್ಧಿ ಎಂಬುದನ್ನ ಮನಗಂಡು, ಜೋರು ಮಳೆಗಾಲ ನಡೆಯುತ್ತಿದ್ದರೂ ಕೂಡ, ಕಾಂಕ್ರೀಟು ರಸ್ತೆಗೆ ಮಳೆಯ ತಲೆಬಿಸಿ ಇಲ್ಲ ಎಂದು ಹಸಿರು ನಿಶಾನೆ ತೋರಿಸಿದ್ದರು.
ದಾಮುವಿಗೆ ತಮಾಷೆ ಮಾಡಿದ್ದ ಕಿಣಿ ಮಾಮ್ ರಿಗೂ, ಅವರ ಅಂಗಡಿ ಕಟ್ಟೆಯ ಸಮಸ್ತ ಸದಸ್ಯರಿಗೂ ನಿಜಕ್ಕೂ ಆಶ್ಚರ್ಯ ಆದದ್ದು ಮರಳಿನ ಗುಪ್ಪೆ ಫರ್ಲಾಂಗು ದೂರಕ್ಕೆ ಒಂದೊಂದರಂತೆ ರಾಶಿ ಬಿದ್ದಾಗ. ಮಳೆಯಲ್ಲಿ ಚೂರು ಚೂರೇ ಮರಳು ತೋಡಿಗೂ ಸಮರ್ಪಣೆ ಆಗ ತೊಡಗಿತು. ಆದರೆ, ವಾರದೊಳಗೆ ಊರಿಗೆ ಬಸ್ಸು ಬರುವುದೂ ಬಂದ್ ಆಯಿತು. ಕಾಂಕ್ರೀಟು ರಸ್ತೆ ಹದಿನೈದೇ ದಿನದಲ್ಲಿ ಆಗ್ತದಂತೆ, ಅದ್ರದ್ದು ಫಾರಿನ್ ಮಿಶನ್ನಂತೆ, ರಸ್ತೆ ಆಗುವವರೆಗೆ ಎಂತ ವೆಹಿಕಲ್ ಸಾ ಓಡಾಡುದಿಲ್ಲ ಅಂತ ಕಿಣಿ ಮಾಮ್ ಖುದ್ದು ಎಲ್ಲರಿಗೆ ಹೇಳಲು ಶುರು ಮಾಡಿದ್ದರು. ಊರಿಗೆ ಬರುವವರು ಈಗ -೧೦ ಕಿಲೋಮೀಟರು ಸುತ್ತು ಹಾಕಿಕೊಂಡು ಕೆಸರು ಮಣ್ಣು ರಸ್ತೆಯಲ್ಲಿ, ಉಲ್ಟಾ ದಿಕ್ಕಲ್ಲಿ ಬರುವ ಹಾಗೆ ಬೇರೆ ಆಗಿತ್ತು. ಕೂಳೂರಿಗೆ ಹೋದವರು, ಮಂಗಳೂರಿಂದ ಬರುವವರು ಮಳೆಯ ಮಧ್ಯವೇ ಕಾಂಕ್ರೀಟ್ ರಸ್ತೆ ಆಗುವ ಚಂದ ನೋಡಿಕೊಂಡು ಬಂದಿದ್ದರು. “ಜೆಸಿಬಿ ರಪ ರಪಾಂತ ಡಾಂಬರು ಕಿತ್ತು ಬಿಸಾಡುದು, ಅಲ್ಲೇ ತಯಾರು ಮಾಡಿದ ಕಾಂಕ್ರೀಟ್ ಬ್ಲಾಕು ಪಟಕ್ಕಂತೆ ಇಡುದು, ಎಂತ ಮಳೆ ಸಾ ಕ್ಯಾರೇ ಇಲ್ಲ ಮಾರಾಯ್ರೇಎಂದು ದೂಜಪೊರ್ಬು ಕಿಣಿ ಮಾಮ್ ಗೆ ವಿವರಿಸಿದ್ದರು. ಮೂರೇ ದಿನದಲ್ಲಿ ಒಂದು ಕಿಲೋಮೀಟರ್ ಕಾಂಕ್ರೀಟಾಗಿ ಆಯ್ತು ಮಾರ್ರೇ ಅಂತ ಹೇಳಿದ ಪೊರ್ಬುಗಳು ಇನ್ನೇನು ನಾಳೆ ನಾಡಿದ್ದು ಊರೊಳಗೇ ಬರ್ತದೆ ನೋಡಿ ಅಂತಂದು ಎಂಥದೋ ಸೈನ್ಯ ಊರಿಗೆ ದಾಳಿ ಮಾಡಲು ಬರುವ ಹಾಗಿನ ಹೆದ್ರಿಕೆ ಹುಟ್ಟು ಹಾಕಿ ಹೋಗಿದ್ದರು.
ದಾಮುಗಂತೂ ಕೂರಲಿಕ್ಕೇ ಪುರ್ಸೊತ್ತು ಇರ್ಲಿಲ್ಲ. ಒಂದು ಎರಡು ಮೂರು ದಿನ ಇಡೀ ರಸ್ತೆಯ ಮೇಲ್ವಿಚಾರಣೆ ತನ್ನದೇ ಅನ್ನುವ ಹಾಗೆ ಬೆಳಗ್ಗಿಂದ ಸಂಜೆ ತನಕ ಓಡಾಟದ ಮೇಲೆ ಓಡಾಟ ಮಾಡಿದ್ದ. ಆದರೆ ಅವನ ಹಾರಾಟಕ್ಕೆ ಉಳಿದ ಮೆಂಬರುಗಳು ಸುಮಾರು ಕಡಿವಾಣ ಹಾಕಿದ್ದರು. ಶಾಲೆ ಮಕ್ಕಳು ಡೆಸ್ಕಿನಲ್ಲಿ ಗೆರೆ ಹಾಕಿ ಇದು ತಮ್ಮ ಜಾಗ ಎಂದು ಹೇಳುವ ಹಾಗೆ, ತಮ್ಮ ತಮ್ಮ ವಾರ್ಡಿನಲ್ಲಿ ಸಾಗಿ ಬರುವ ರಸ್ತೆಯ ಕೆಲ್ಸದ ಉಸ್ತುವಾರಿಯನ್ನ ಅವರವರೇ ವಹಿಸಿಕೊಂಡಿದ್ದರು. ರಸ್ತೆ ಇರದ ವಾರ್ಡಿನ ಸದಸ್ಯರು ಮಹಾಪಾಪ ಮಾಡಿದವರ ಮುಖ ಹೊತ್ತು ಓಡಾಡುತ್ತಿದ್ದರು. ದಾಮುಗೆ ಒಂದರ್ಧ ಕಿಲೋಮೀಟರು ದಕ್ಕಿತ್ತು. ತನ್ನ ಏರಿಯಾಕ್ಕೆ ಬಂದ ಕೂಡಲೇ ಮತ್ತೆ ಮೇಲುಸ್ತುವಾರಿ ಮಾಡುತ್ತೇನೆ ಅಂತ ಭೀಷ್ಮರ ಸೇನಾಧಿಪತ್ಯದಲ್ಲಿ ಯುದ್ಧಕ್ಕೆ ಹೋಗದ ಕರ್ಣನ ಹಾಗೆ ಸುಮ್ಮನಾದ. ಅವನ ಸರದಿಯೂ ಬಂತು.
ಕಿಣಿ ಮಾಮ್ ಅಂಗಡಿ ಎದುರು ಹಾದು ಹೋಗುವ ರಸ್ತೆ ದಾಮುವಿನ ವಾರ್ಡಿನ ಪಾಲಿಂದೇ ಆಗಿತ್ತು. ಹೀಗಾಗಿ ಕಿಣಿ ಮಾಮ್ ಅಂಗಡಿಯ ಸೋಡಾ ಕುಡಿದು, ಅವರನ್ನೇ ನೋಡಿ ಹುಬ್ಬು ಹಾರಿಸುತ್ತಹೇಗೆ?” ಎಂಬಂತೆ ವ್ಯಂಗ್ಯ ಮಾಡುವುದು ದಾಮುಗೊಂದು ರೀತಿ ಆಟವಾಗಿತ್ತು. ಆವತ್ತು ಬೆಳಗಿಂದ ಸಂಜೆಯೊಳಗೆ ನಾಲ್ಕನೇ ಬಾರಿ ನಡೆದ ದಾಮುವಿನ ಹುಬ್ಬಿನ ನೃತ್ಯ ನೋಡಿ ಸಿಟ್ಟಿಗೆದ್ದ ಕಿಣಿ ಮಾಮ್, “ಬಿಡಾ ಮಾರಾಯ, ಅದೆಂತದೋ ಕೋಟಿಗಟ್ಲೆ ದುಡ್ಡು ಸ್ಯಾಂಕ್ಷನ್ ಆಗಿದೆ, ಅದ್ರಲ್ಲಿ ಒಂದಿಷ್ಟು ದುಡ್ಡು ಎಲ್ಲ ಸೇರಿ ಹೊಡಿವ ಅಂತ ರಸ್ತೆ ಮಾಡುದಲ್ಲ ನೀವು? ಮಾನ ಮರ್ಯಾದೆ ಇಲ್ಲದವ್ರು.. ಒಂದು ರುಪಾಯಿ ಸಿಗುದಿಲ್ಲ ಅಂತಾದ್ರೆ ಇದ್ನೆಲ್ಲ ಮಾಡ್ಲಿಕ್ಕುಂಟಾ ನೀವು.. ನಿಮ್ಮ ಜನ್ಮಕ್ಕಿಷ್ಟು.. ರಸ್ತೆಯ ಮತ್ತೆಂತದ.. ಈಗ ನಾಳೆ ನೀನು ರಸ್ತೆಗೆ ಬೇಕು ಅಂತ ಎದ್ರಿನ ಗಾಂಧಿ ನೆಟ್ಟ ಗೋಳಿಮರಸಾ ಬೀಳಿಸ್ತಿ.. ಮುಂದಿನ ಶಾಲೆಯ ಗೋಡೆಸಾ ಜರಿಸ್ತೀ..ಥತ್ ನಿಮ್ಮಅಂದುಬಿಟ್ಟರು. ರಸ್ತೆಯಲ್ಲಿದ್ದವರೂ, ಅಕ್ಕಪಕ್ಕದವರೂ ಎಲ್ಲರೂ ಕಿಣಿಯವರ ಎತ್ತರಿಸಿದ ಧ್ವನಿ ಕೇಳಿ, ಒಮ್ಮೆ ನಿಂತು ಮತ್ತೆ ದಾಮುವನ್ನು ನೋಡಿ ಮುಂದುವರಿದರು. ದಾಮುವಿಗೆ ಕಿಣಿಯವರ ರೌದ್ರಾವತಾರ ನೋಡಿ ತಲೆಬಿಸಿಯಾದರೂ, “ಕಿಣಿ ಮಾಮ್ ಎಂತಕೆ ನೀವು ಇಷ್ಟೆಲ್ಲ ಬೊಬ್ಬೆ ಹಾಕುದು.. ಊರಿಗೆ ಒಳ್ಳೆದು ಮಾಡ್ಲಿಕ್ಕೆ ಅಲ್ವಾ ಮಾಡುದು ಇದನ್ನ, ಕೋಟಿ ರುಪಾಯಿ ಎಂತ ನಂಗೆ ಬಂದಿದಾ ತಿನ್ಲಿಕ್ಕೆ, ಅದು ಗೌರ್ಮೆಂಟಿದ್ದುಅಂತ ಹೇಳಿ ಮೆಲ್ಲ ಜಾಗ ಖಾಲಿ ಮಾಡಿದ. ಅವನು ಮುಖದಿಂದ ಒರೆಸಿಕೊಂಡು ಕಿಣಿಮಾಮ್ ಎಂಜಲಾ, ಅವರ ಅಂಗಡಿ ಮಾಡಿಂದ ಮಳೆಯ ನೀರಾ ಅಂತ ಸಮಾ ಗೊತ್ತಾಗಲಿಲ್ಲ.
ಆದರೆ ನಿಜಕ್ಕೂ ದಾಮುವಿನ ಗಂಟಲ ಪಸೆ ಆರಿದ್ದು ಮಾರನೇ ದಿನ ಬೆಳಿಗ್ಗೆ. “ರಸ್ತೆ ಅಗಲೀಕರಣ ವಿರೋಧ ಸಮಿತಿ ಗೋಳಿಬೈಲುಹೆಸರಿನ ಫ್ಲೆಕ್ಸ್ ಬ್ಯಾನರೊಂದು ಗೋಳಿಬೈಲಿನ ಬಸ್ಟ್ಯಾಂಡಿನ ಪಕ್ಕದ ಗೋಳಿ ಮರಕ್ಕೆ ನೇತು ಬಿದ್ದಿದ್ದು ಕಂಡಾಗ. “ಕಾಂಕ್ರೀಟೀಕರಣದ ನೆಪದಲ್ಲಿ ಮಹಾತ್ಮಾಗಾಂಧೀಜಿಯವರು ನೆಟ್ಟಿರುವ ನಮ್ಮೂರಿನ ಆಲದಮರವನ್ನು ಕಡಿಯಲಿದ್ದು ಇದನ್ನು ಗ್ರಾಮದ ಸಮಸ್ಥ ನಾಗರೀಕರ ಪರವಾಗಿ ವಿರೋಧಿಸುತ್ತಿದ್ದೇವೆಎಂಬ ಬರಹವನ್ನು ಓದಿದ ದಾಮುವಿಗೆ ಏನೆಂದೇ ಅರ್ಥವಾಗಲಿಲ್ಲ. ಊರೆದುರಿನ ಗೋಳಿಮರವನ್ನು ಗಾಂಧೀಜಿ ೧೯೨೦ರಲ್ಲೋ ೧೯೨೯ರಲ್ಲೋ ಬಂದಾಗ ನೆಟ್ಟಿದ್ದರಂತೆ ಎಂಬ ಕಥೆ ಜನಜನಿತವಾಗಿದ್ದರೂ ಕೂಡ, ಕಾಂಕ್ರೀಟು ರಸ್ತೆ ಮಾಡುವಾಗ ರಸ್ತೆಯ ಪಕ್ಕದಲ್ಲೇ ಇದ್ದ ಮರವನ್ನು ಕಡಿಯುವ ಪ್ರಸ್ತಾಪವೂ ಬಂದಿತ್ತು. ಬಗ್ಗೆ ಒಬ್ಬೇ ಒಬ್ಬನೂ ಬೇಡ ಅಂದಿರಲಿಲ್ಲ. ಅದೂ ಅಲ್ಲದೇ ಗೋಳಿಮರದಡಿಯಲ್ಲೇ ಇದ್ದ ಚಪ್ಪಲಿ ಹೊಲಿಯುವ ಕೃಷ್ಣನಿಗೆ ಬಸ್ಟ್ಯಾಂಡಿನಲ್ಲಿ ಟೆಂಪರರಿ ವ್ಯವಸ್ಥೆ ಮಾಡಿಕೊಟ್ಟಾಗಿತ್ತು. ಆಗಲೂ ಯಾರೂ ಅಲ್ಲ ಅನ್ನಲಿಲ್ಲ. ಈಗಾಗಲೇ ಸುಮಾರು ಮಳೆಗಾಲ ಕಂಡಿದ್ದ ಮರ ಗೆಲ್ಲುಗಳನ್ನ ಪದೇ ಪದೇ ರಸ್ತೆಗೆ ಬೀಳಿಸಿ ತೊಂದರೆ ಕೊಡುತ್ತಿತ್ತು. ಹಿಂದೆಯೇ ಅದನ್ನ ಕಡಿಯಬೇಕು ಎನ್ನುವ ಪ್ರಸ್ತಾಪ ಬಂದಿದ್ದರೂ, ಯಾಕೋ ಯಾರೂ ಮನಸ್ಸು ಮಾಡಿರಲಿಲ್ಲ.
ವಿಷಯ ಏನಾಗಿತ್ತೆಂದರೆ, ಹಿಂದಿನ ದಿನ ದಾಮುವಿಗೆ ಕಿಣಿಮಾಮ್ ಬೈಯುವಾಗ ಅದನ್ನು ಕೇಳಿಸಿಕೊಂಡವರಲ್ಲಿ ಬಾಂಬೇ ಫೆರ್ನಾಂಡಿಸ್ ಕೂಡ ಒಬ್ಬರು. ಯಾವಾಗ ಗಾಂಧಿ ನೆಟ್ಟ ಮರ ಹೋಗ್ತದೆ ಅನ್ನುವ ಪಾಯಿಂಟು ಕಿವಿಗೆ ಬಿತ್ತೋ, ರಾಜಕೀಯದಲ್ಲಿ ಸುಮಾರು ಪಳಗಿದ ಫೆರ್ನಾಂಡಿಸರಿಗೆ ಹೋರಾಟದ ಐಡಿಯಾ ಹೊಳೆದಿತ್ತು. ಅಲ್ಲದೇ ಅವರ ಹೆಸರೇ ಬಾಂಬೆ ಫೆರ್ನಾಂಡಿಸ್. ಬಾಂಬೆಯಲ್ಲಿ ಗಿರಣಿ ಕಾರ್ಮಿಕರ ಒಕ್ಕೂಟದ ಹೋರಾಟದಲ್ಲಿ ಭಾಗವಹಿಸಿ, ಕಾಲಕ್ಕೇ ಹೆಸರು ಮಾಡಿ-ಆದರೆ ಕೆಲ್ಸ ಕಳೆದುಕೊಂಡ ಊರಿಗೆ ವಾಪಸು ಬಂದ ಜನ. ದಾಮುವಿನ ಕೈಲಿ ಸೋತ ಉರಿ ಇನ್ನೂ ಮಾಸಿಲ್ಲದ ಫೆರ್ನಾಂಡಿಸ್ ಸಾಹೇಬರು ಸಂಜೆಗೇ ಮಂಗಳೂರಿಗೆ ಹೋದವರೇ ಬ್ಯಾನರು ಮಾಡಿಸಿ ತಂದಿದ್ದರು. ಬೆಳಗ್ಗೆ ಬೆಳಗ್ಗೆಯೇ ಒಂದಿಷ್ಟು ಜನ ಹುಡುಗರನ್ನ ಮರದ ಎದುರು ನಿಲ್ಲಿಸಿಕೊಂಡು ಫೆರ್ನಾಂಡಿಸರು ಗಾಂಧಿ ತತ್ವಗಳ ಬಗ್ಗೆ ಮಾತನಾಡಿ ಮರವನ್ನು ಕಡಿಯುವುದು ಅಂದ್ರೆ ಗಾಂಧಿಯನ್ನ ಮತ್ತೊಮ್ಮೆ ಕೊಂದ ಹಾಗೆ ಎಂದೆಲ್ಲ ಮಾತನಾಡಿದರು. ಯಾವಾಗಲೂ ಅಲ್ಲೇ ಪಕ್ಕದ ಖಾಲಿ ಜಾಗದಲ್ಲಿ ವಾಲಿಬಾಲ್ ಆಡುತ್ತಿದ್ದ ಹುಡುಗರು ಮರವನ್ನು ನೋಡುತ್ತ ಗಾಂಧೀಜಿಗೆ ಜೈ ಅಂದರು. ಸಂಜೆ ಹೊತ್ತಿಗೆ ಒಂದೆರಡು ಲೋಕಲ್ ಚಾನಲ್ ರಿಪೋರ್ಟರುಗಳೂ ಬಂದು ಹೋದರು. ಆವತ್ತು ಭಾನುವಾರ, ಕೆಲಸದವರಿಗೆ ರಜೆ ಇದ್ದದ್ದರಿಂದ ಏನೂ ವ್ಯತ್ಯಾಸವಾಗಲಿಲ್ಲ. ದಾಮು ಕೂಡಇದೆಲ್ಲ ಎಂತ ಮರ್ಲ್..ಮುದುಕನಿಗೆ ಮಂಡೆ ಸರಿ ಇಲ್ಲಎಂದು ಹೇಳಿಕೊಂಡು ಓಡಾಡಿದರೂ, ಒಳಗೇ ಅಳುಕು ಇದ್ದೇ ಇತ್ತು.
ಅಳುಕು ಮಾರನೇ ದಿನ ನಿಜವಾಯಿತು. ಬೆಳ್ಳಂಬೆಳಗ್ಗೆ ರಾಜ್ಯಮಟ್ಟದ ಸುದ್ದಿವಾಹಿನಿಯ ರಿಪೋರ್ಟರೊಬ್ಬ ಬಂದ. ಮರದ ಪಕ್ಕಕ್ಕೇ ನಿಂತುಕೊಂಡುಅಭಿವೃದ್ದಿಯ ಹೆಸರಲ್ಲಿ ಮಹಾತ್ಮನ ಸ್ಪರ್ಶ ಕಂಡಿದ್ದ ಮರವೊಂದು ಮಣ್ಣಾಗುತ್ತಿದೆ. ಕ್ಯಾಮರಾಪರ್ಸನ್ ಇಂತಿಂತವರ ಜೊತೆ ತಾನು ಇಂಥವನುಎಂದು ಹೇಳಿ ಹೋದ. ಬಾಂಬೇ ಫೆರ್ನಾಂಡಿಸ್ ಸಂರ್ದರ್ಶನದ ಜೊತೆಗೆ ಮಧ್ಯಾಹ್ನದ ನ್ಯೂಸಲ್ಲಿ ಗೋಳಿಬೈಲಿನ ಕಥೆ ಬಂತು. ಅದಾದ ಮೇಲೆ, ಸಂಜೆಗೆ ಇನ್ನೂ ನಾಲ್ಕು ಕ್ಯಾಮರಾ ಬಂತು. “ಹೀಗೆ ಮರದಿಂದ ತೊಟ್ಟಿಕ್ಕುತ್ತಾ ಇರುವುದು ಮಳೆಯ ನೀರೋ ಅಥವಾ ಮರದ ಕಣ್ಣೀರೋಎಂದು ಹುಡುಗಿಯೊಬ್ಬಳು ಮೂರನೇ ಟೇಕಿನಲ್ಲಿ ಸರಿಯಾಗಿ ಹೇಳಿದಳು. ಇದನ್ನೆಲ್ಲ ನೋಡಲು ಹೋದ ಯಾರೋ ಒಬ್ಬಾತ ಬಂದು ದಾಮುವಿಗೂ ಮೈಕು ಹಿಡಿದನಾದರೂ, ಅವನು ಏನೂ ಉತ್ತರ ಕೊಡದೇ ಅಲ್ಲಿಂದ ಓಡಿ ಹೋದ. “ಜನಪ್ರತಿನಿಧಿಗಳು ಬಗ್ಗೆ ಉತ್ತರಿಸುತ್ತಿಲ್ಲ”..ಎಂದು ಮತ್ಯಾರೋ ಮಾತು ಶುರು ಮಾಡಿದ್ದರು. ಎಲ್ಲ ಗೊಂದಲದ ಮಧ್ಯ ಜೆಸಿಬಿ, ಸಿಮೆಂಟು ಕಲಸುವ ಯಂತ್ರಗಳು ಕೆಲಸ ನಿಲ್ಲಿಸಿದ್ದವು. ಕಂಟ್ರಾಕ್ಟರು ಕೆಲಸದ ಗುಂಪಿಗೆ ಇವತ್ತು ಪೇಮೆಂಟ್ ಕೊಡುವುದೋ ಬೇಡವೋ ಎಂಬ ಟೆನ್ಶನಲ್ಲಿ ಓಡಾಡುತ್ತಿದ್ದ. ಊರಿಗೊದಗಿದ ಹೊಸ ಸಂಭ್ರಮಕ್ಕೆ ಸಂಜೆ ಹೊತ್ತಿಗೆ ಜೋರಾದ ಮಳೆ ನಿಜಕ್ಕೂ ತಣ್ಣೀರನ್ನೇ ಎರಚಿತ್ತು.
ರಾತ್ರಿ ಮನೆಯ ಟಿವಿಯಲ್ಲಿಗಾಂಧಿ ನೆಟ್ಟ ಮರಚರ್ಚೆಯನ್ನು ಯಾವುದೋ ಚಾನಲಿನಲ್ಲಿ ನೋಡುತ್ತಿದ್ದ ದಾಮುಗೆ ತಲೆ ಕಲಸಿ ಹೋಗಿತ್ತು. ಪಂಚಾಯ್ತಿ ಪ್ರೆಸಿಡೆಂಟು ಫೋನ್ ಮಾಡಿ, ನಿನ್ನ ವಾರ್ಡಿನ ಗಲಾಟೆ, ನೀನೇ ಸುಧಾರಿಸಬೇಕು. ಇದ್ರಲ್ಲಿ ನಾವ್ಯಾರೂ ತಲೆ ಹಾಕುವುದಿಲ್ಲ. ರೋಡು ಕೆಲ್ಸ ಅಲ್ಲಿಗೇ ನಿಂತರೇ ನೀನೇ ಜವಾಬ್ದಾರಿ ಇತ್ಯಾದಿಯಾಗಿ ಮಂಗಳಾರತಿ ಮಾಡಿದ್ದರು. ಜೊತೆಗೆ, “ನೋಡು ರೋಡಿನ ಕೆಲಸ ಸರಿಯಾಗಿ ಮುಗಿದಿದ್ದರೆ ನಿನಗೆ ನಿನ್ನ ಪಾಲು ಅಂತ ಎರಡು ಲಕ್ಷದ ಹತ್ತಿರ ಹತ್ತಿರ ಸಿಗ್ತಿತ್ತು. ನಿನ್ನ ಗ್ರಹಚಾರ ಹೇಗಿದೆ ನೋಡುವಎಂದಿದ್ದರು. ತನ್ನ ಪಾಲಿನ ದುಡ್ಡಿನ ಅಮೌಂಟು ಕೇಳಿ ಖುಶಿಯಾದರೂ ಅದು ಸಿಗುವುದು ಗ್ಯಾರೆಂಟಿ ಇಲ್ಲದ್ದಕ್ಕೆ, ಜೊತೆಗೆ ಇಷ್ಟೆಲ್ಲ ಗಲಾಟೆ ಗೌಜಿಗೆ ದಾಮು ದಿಕ್ಕೆಟ್ಟು ಹೋಗಿದ್ದ. ಟಿವಿಯಲ್ಲಿ ಫೆರ್ನಾಂಡಿಸ್ ಫೋನೋ ಬರ್ತಿತ್ತು. ಆಫ್ ಮಾಡಬೇಕೆಂದು ರಿಮೋಟ್ ಎತ್ತಿಕೊಳ್ಳುವುದಕ್ಕೂ, ಸಿಡಿಲು ಬಡಿದ ಸದ್ದು ಕೇಳುವುದಕ್ಕೂ, ಕರೆಂಟೂ ಹೋಗುವುದಕ್ಕೂ ಸರಿಯಾಯಿತು.
ಬೆಳಿಗ್ಗೆ ಎದ್ದವನಿಗೆ ತಲೆ ಹಿಡಿದುಕೊಂಡ ಹಾಗಾಗಿ, ದಾಮು ಹಾಸಿಗೆಯಲ್ಲೇ ಕೂತುಚಾ ಕೊಡಎಂದು ಕೂಗಿದರೆ ಊರು ಉದ್ಧಾರ ಮಾಡುವ ನಿಮಗೆ ಚಾಸೊಪ್ಪು ತರ್ಲಿಕ್ಕೆ ಟೈಮೆಲ್ಲಿ ಉಂಟು ಎಂಬ ಉರಿಉರಿ ಉತ್ತರ ಹೆಂಡತಿಯಿಂದ ವಾಪಾಸು ಬಂತು. ರಪಕ್ಕನೇ ಹಲ್ಲುಜ್ಜಿದವನೇ ಬೈಕು ಚಾಲು ಮಾಡಿ ಕಿಣಿಮಾಮ್ ಅಂಗಡಿ ಕಡೆಗೇ ಹೊರಟ. ಅಲ್ಲಿ ಹೋಗಿ ನೋಡಿದರೆ, ಕಂಡದ್ದೇನು! ಬೆಳಿಗ್ಗೆ ಬೆಳಿಗ್ಗೆಯೇ ಬಸ್ಟ್ಯಾಂಡಿನಲ್ಲಿ ನೂರು ಚಿಲ್ಲರೆ ಜನ ಸೇರಿದ್ದರು. ’ಗಾಂಧಿ ನೆಟ್ಟ ಮರಜೋರು ಮಳೆಗೋ, ಹೊಡೆದ ಸಿಡಿಲಿಗೋ ಬಿದ್ದು ಹೋಗಿತ್ತು. ಮರದ ಕಾಂಡ ಬಿದ್ದು ಅದರ ಕೆಳಗೆ ನಿಲ್ಲಿಸಿದ್ದ ಜೇಸಿಬಿ ಜಜ್ಜಿ ಹೋಗಿದ್ದರೆ, ಕಿಣಿ ಮಾಮ್ ಅಂಗಡಿಯ ಗೋಡೆ ಹಂಚುಗಳನ್ನ ಗೆಲ್ಲುಗಳು ಲಗಾಡಿ ತೆಗೆದಿದ್ದವು.
ತನ್ನ ಸಮಸ್ಯೆ ಬಗೆಹರಿಯಿತೋ, ಮತ್ತೂ ಜಟಿಲವಾಯಿತೋ ಎಂದು ಅರ್ಥವಾಗದ ದಾಮು ಸದ್ಯ ಚಾಪುಡಿ ತರ್ಲಿಕ್ಕೆ ಎಲ್ಲಿಗೆ ಹೋಗಲಿ ಎಂದು ಯೋಚಿಸುತ್ತ ನಿಂತ.


( ವರ್ತಮಾನ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ)