ಸೋಮವಾರ, ಆಗಸ್ಟ್ 07, 2017

ಧಾರಾವಾಹಿಗಳಿಗೆ ಬರೆಯೋದು ಹೇಗೆ?

               ಪ್ರಾಯಶಃ ಧಾರಾವಾಹಿಗಳನ್ನು ನೋಡದ ಮಂದಿಯೇ ಇಲ್ಲವೇನೋ. ಬೇಕೋ ಬೇಡವೋ, ಮನೆಯಲ್ಲಿ ಟೀವಿ ಇದೆ ಎಂದ ಮೇಲೆ ಮುಗಿಯಿತು ಬಿಡಿ, ಸೀರಿಯಲ್ಲುಗಳ ಮಾಯಾಜಾಲದಲ್ಲಿ ನೀವು ಕೂಡ ಬಂಧಿಯಾಗೇ ಇರುತ್ತೀರಿ. ಅಥವ ನಿಮ್ಮ ಪ್ರೀತಿಪಾತ್ರರು ಯಾರೋ ಧಾರಾವಾಹಿಗಳಿಗೆ ಅಂಟಿಕೊಂಡಿರುತ್ತಾರೆ ಕೂಡ. ಕನ್ನಡದಲ್ಲೇ ದಿನಕ್ಕೀಗ ಸುಮಾರು ಐವತ್ತಕ್ಕೂ ಹೆಚ್ಚಿನ ಧಾರಾವಾಹಿಗಳು ನಿತ್ಯ ಪ್ರಸಾರ ಕಾಣುತ್ತವೆ. ಪ್ರೈಮ್ ಟೈಮ್ ಮನರಂಜನೆಯ ನಿತ್ಯ ಸರಕು, ಸೀರಿಯಲ್ಲುಗಳದೇ ಆಗಿದೆ. ಸಂಜೆ ಆರು ಗಂಟೆಯಿಂದ ಹನ್ನೊಂದು ಗಂಟೆಯವರೆಗಿನ ಥರಹೇವಾರಿ ಕಥೆಗಳ ಲೋಕ, ಬರವಣಿಗೆಯ ಒಂದು ಪ್ರಮುಖ ಪ್ರಕಾರ ಕೂಡ ಆಗಿದೆ. ನಿತ್ಯವೂ ಇಷ್ಟೆಲ್ಲ ಸೀರಿಯಲ್ ಗಳು ಪ್ರಸಾರ ಕಾಣುತ್ತಿದೆ ಎಂದ ಮೇಲೆ- ಅಲ್ಲಿನ ಪಾತ್ರಗಳ ಬಾಯಲ್ಲಿ ಬರುವ ಸಂಭಾಷಣೆಯನ್ನ ಬರೆಯೋರು- ಚಿತ್ರಕಥೆಯನ್ನು ಬರೆಯೋರು ಕೂಡ ಅತ್ಯಂತ ಮುಖ್ಯವಾಗುತ್ತಾರೆ. ಯಾವ ಸಾಫ್ಟ್ ವೇರ್ ಇಂಜಿನಿಯರ್ ಗೆ ಕಡಿಮೆ ಇಲ್ಲದ ಸಂಬಳ ಕೂಡ ಈ ವಿಭಾಗದಲ್ಲಿದೆ ಎಂದರೆ ಅಚ್ಚರಿಯಾಗುವುದೇನೋ?

ಧಾರಾವಾಹಿ ಪ್ರಪಂಚ:
           ಬರವಣಿಗೆಯನ್ನು ಹವ್ಯಾಸಕ್ಕಷ್ಟೇ ಸೀಮಿತವಾಗಿಡದೇ, ಅದರಲ್ಲೇ ಹೊಟ್ಟೆಪಾಡನ್ನೂ ನೋಡಿಕೊಂಡು ಬೆಳೆಯುತ್ತೇನೆ ಎಂದು ನಿರ್ಧರಿಸಿದವರಿಗೆ ಹೊಸ ಹೊಸ ಅವಕಾಶಗಳು ಖಂಡಿತಕ್ಕೂ ತೆರೆದುಕೊಳ್ಳುತ್ತವೆ. ಸಿನಿಮಾ, ಧಾರಾವಾಹಿಗಳ ಚಿತ್ರಕಥೆ/ಸಂಭಾಷಣೆ ಬರೆಯುವುದು, ಅವುಗಳಲ್ಲೊಂದು.  ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳಿಗೆ ಆಕರ್ಷಕವಾಗಿ ಚಿತ್ರಕಥೆಯನ್ನೂ- ಸಂಭಾಷಣೆಯನ್ನೂ ಹೊಸೆಯುವ ಮಂದಿಗೆ ಬೇಡಿಕೆ ಇದ್ದೇ ಇದೆ. ಸಮಯಕ್ಕೆ ಸರಿಯಾಗಿ, ನೋಡುಗರನ್ನೂ ಗಮನದಲ್ಲಿರಿಸಿಕೊಂಡು ಸೊಗಸಾಗಿ ಬರೆಯುವವರನ್ನು ಈ ಕ್ಷೇತ್ರ ಎಂದಿಗೂ ನಿರಾಕರಿಸದು. ಶ್ರದ್ಧೆಯಿಂದ ಬರೆಯುತ್ತೇನೆ ಎಂಬ ಕೆಚ್ಚಿನ ಜೊತೆಗೆ, ಸರಿಯಾದ ಸಿದ್ಧತೆ ಬೇಕು ಅಷ್ಟೇ.
ಕನ್ನಡ ಕಿರುತೆರೆ, ಈಗ ಹಿಂದೆಂದೂ ಕಂಡು-ಕೇಳದಷ್ಟು ಮಟ್ಟಕ್ಕೆ ಬೆಳೆದಿದೆ, ಸಿನಿಮಾಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಧಾರಾವಾಹಿ ಸಂಚಿಕೆಗಳು ನಿರ್ಮಾಣಗೊಳ್ಳುತ್ತಿವೆ. ಕರ್ನಾಟಕದ ಆಚೆಗೆ- ವಿದೇಶಗಳಲ್ಲೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ನಟಿಸಿದ- ನಾಯಕ ನಾಯಕಿಯರು ಸೀರಿಯಲ್ ಕ್ಷೇತ್ರಕ್ಕೆ ಮರಳಿ ಬರುತ್ತಿದ್ದಾರೆ. ನೋಡುಗರ ಸ್ಪಂದನೆಯೂ ಚೆನ್ನಾಗಿದ್ದು ವಾಹಿನಿಗಳು ಕೂಡ ಜನರ ಮನಸ್ಥಿತಿಗೆ ಸ್ಪಂದಿಸುತ್ತ ಹೊಸ ಬಗೆಯ ಸೀರಿಯಲ್ಲುಗಳನ್ನ ನಿರ್ಮಾಣ ಮಾಡುವತ್ತ ಮುಂದಾಗುತ್ತಿವೆ.
             ಹೀಗಾಗಿಯೇ, ಬರವಣಿಗೆಯ ಮೇಲೆ ಹಿಡಿತ ಇರುವ ಬರಹಗಾರರಿಗೆ ನೆಲೆ ಕಂಡುಕೊಳ್ಳಲು ಇದೊಂದು ಉತ್ತಮ ಜಾಗ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಒಂದಾದ ಮೇಲೊಂದು ಧಾರಾವಾಹಿಗಳನ್ನು ನಿರ್ಮಿಸುವ ಮತ್ತು ಪ್ರಸಾರ ಮಾಡುವ ಒತ್ತಡದಲ್ಲಿರುವ ಮನರಂಜನಾ ವಾಹಿನಿಗಳು ಸದಾ ಕಾಲ ಬರಹಗಾರರ ಹುಡುಕಾಟದಲ್ಲಿರುತ್ತವೆ. ಏಕೆಂದರೆ ಎಷ್ಟೇ ಅದ್ಭುತವಾದ ನಿರ್ಮಾಣ- ಝಗಮಗಿಸುವ ಸೆಟ್ಟುಗಳು-ಎಲ್ಲ ಇದ್ದರೂ, ಧಾರಾವಾಹಿಯೊಂದರ ಆತ್ಮ ಇರುವುದು, ಅದರ ಬರವಣಿಗೆಯಲ್ಲೇ. ಅದರಲ್ಲಿ ಸತ್ವ ಇಲ್ಲವಾದರೆ, ಸೀರಿಯಲ್ ಒಂದು ಗೆಲ್ಲಲಾರದು.

ಅಧ್ಯಯನ ಅಗತ್ಯ
         ಹೀಗೆಂದ ಮಾತ್ರ ನಾಳೆ ಬೆಳಗಾಗೆದ್ದು ಸೀರಿಯಲ್ ಬರೆದುಬಿಡುತ್ತೇನೆ ಎಂದು ಎದ್ದು ಹೊರಟರೆ ಸಾಧ್ಯವಿಲ್ಲ. ಸರಿಯಾದ ಅಧ್ಯಯನ ಇದ್ದರೆ ಮಾತ್ರ ಇಲ್ಲಿ ಯಶಸ್ಸು ಸಾಧ್ಯ. ಇಲ್ಲವಾದರೆ ಬಂದ ದಾರಿಗೆ ಸುಂಕವಿಲ್ಲ- ಎಂಬ ಹಾಗೆ ಮನೆಯ ಹಾದಿ ಹಿಡಿಯಬೇಕಾಗುತ್ತದೆ. ಪ್ರತಿ ದಿನ ಕೂಡ ಸುಮಾರು ಹದಿನೈದರಿಂದ ಇಪ್ಪತ್ತು ಪುಟಗಳ ಸಂಭಾಷಣೆಯನ್ನು ಬಿಟ್ಟೂ ಬಿಡದಂತೆ ಬರೆಯುವ ತಾಳ್ಮೆ ನಿಮಗಿದೆಯೇ ಎಂಬ ಪ್ರಶ್ನೆಯನ್ನು ಮೊದಲು ಕೇಳಿಕೊಳ್ಳಿ, ಇಲ್ಲ ಎಂಬ ಉತ್ತರ ಬಂದರೆ, ಈ ಕ್ಷೇತ್ರ ನಿಮಗೆ ಹೇಳಿ ಮಾಡಿಸಿದ್ದಲ್ಲ, ಬಿಟ್ಟುಬಿಡಿ. ದಿನಂಪ್ರತಿ ಸುಮಾರು ಎಂಟರಿಂದ ಹತ್ತು ದೃಶ್ಯಗಳ ಚಿತ್ರೀಕರಣ ನಡೆದೇ ನಡೆಯುತ್ತದೆ ಮತ್ತು ಅದಕ್ಕಾಗಿ ಮೇಲೆ ಹೇಳಿದಷ್ಟು ಪುಟಗಳನ್ನ ಬರೆದೇ ತೀರಬೇಕಿರುತ್ತದೆ. ಇದು, ಇಲ್ಲಿರಬೇಕಾದ ಅತ್ಯಂತ ಮುಖ್ಯ ಅರ್ಹತೆಗಳಲ್ಲೊಂದು.
 ಕವಿತೆಯೊಂದನ್ನು ಸೂಕ್ಷ್ಮವಾಗಿ ಕೆತ್ತಿದಂತಹ ನಿಧಾನ, ಇಲ್ಲಿಗೆ ಸಲ್ಲುವುದಿಲ್ಲ. ಜನಮನವನ್ನು ಮುಟ್ಟುವ ಸಮರ್ಥ ಸಂಭಾಷಣೆಯನ್ನು ಬರೆಯುವ ಜೊತೆಗೆ- ಅದನ್ನ ಹೆಚ್ಚಿನ ಪ್ರಮಾಣದಲ್ಲಿ ಬರೆಯಬೇಕಾದ ಅನಿವಾರ್ಯತೆ ಇರುವುದು ಇಲ್ಲಿನ ವಾಸ್ತವ. ಅದನ್ನ ಧಿಕ್ಕರಿಸಿ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿಯೇ ಬಹಳ ಮಂದಿ ಇಲ್ಲಿ ಸೋಲುವ ಅಪಾಯ ಇದೆ. ಹೆಚ್ಚು ಹೆಚ್ಚು ಓದಿಕೊಂಡಷ್ಟೂ- ಸಿನಿಮಾಗಳನ್ನ/ಧಾರಾವಾಹಿಗಳನ್ನ ನೋಡಿದಷ್ಟೂ ಬರಹಗಾರನ ಜ್ಞಾನ ಹೆಚ್ಚುತ್ತದೆ. ಆಗ ಹೆಚ್ಚಿನ ಪುಟಗಳ ಸಂಭಾಷಣೆಯನ್ನೂ ಸಲೀಸಾಗಿ ಬರೆಯುವುದು ಸಾಧ್ಯ. ಏನನ್ನೇ ಓದಿಕೊಂಡರೂ, ನೋಡಿದ್ದರೂ- ಅದನ್ನೆಲ್ಲ ಬಹಳ ಸರಳವಾಗಿ ತಲುಪಿಸಬೇಕಾದ್ದು ಮುಖ್ಯ. ಗ್ರಾಂಥಿಕವಾದ,ಸಟ್ಟನೆ ಅರ್ಥವಾಗದ- ಬಹಳ ಗಂಭೀರವಾದ ಸಂಭಾಷಣೆಗಳು ನೋಡುಗರಿಗೆ ಅಷ್ಟೊಂದಾಗಿ ರುಚಿಸದು. ಇನ್ನುಕೆಲ ಬಾರಿ ಅಭಿನಯಿಸುವ ಪಾತ್ರಧಾರಿ- ಆತನ/ಆಕೆಯ ಸಂಭಾಷಣೆ ಹೇಳುವ ಪರಿಯನ್ನೂ ಗಮನಿಸಿಕೊಂಡು ಬರೆಯುವುದು ಮುಖ್ಯವಾಗುತ್ತದೆ.

ಆರಾಮಾಗಿರೋ ಸೀನೇ ಇಲ್ಲ!
              ನಿಮಗೆ ಜ್ವರ ಬಂದಿದ್ದರೂ, ಮದುವೆ ಸೀನಿನ ಡೈಲಾಗು ನಾಳೆಗೆ ಬೇಕು ಎಂದ ಮೇಲೆ- ಮುಗಿದೇ ಹೋಯಿತು. ಶತಾಯಗತಾಯ ಅದನ್ನ ಬರೆದು ಕಳಿಸಲೇಬೇಕು. ಏಕೆಂದರೆ ನಟರೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಜನ, ಸಂಭಾಷಣಕಾರ ಬರೆದು ಕಳಿಸುವ ಸೀನಿಗಾಗಿ ಸೆಟ್ ನಲ್ಲಿ ಕಾಯುತ್ತಿರುತ್ತಾರೆ. ಇದನ್ನ ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕಾಗಿರುವ ಆ ಹೊತ್ತಿನ ಅಗತ್ಯ. ಬಹಳ ಮಂದಿಗೆ, ಫ್ರೀಲ್ಯಾನ್ಸ್ ಬರಹಗಾರರು ಎಂದ ಮೇಲೆ- ಅಯ್ಯೋ ಬಿಡಯ್ಯ ಮಜಾ ಮಾಡ್ಕೊಂಡ್ ಇರ್ತಾರೆ, ಯಾವಾಗಲೂ ಫ್ರೀ ಟೈಮು ಎಂಬ ತಪ್ಪು ಕಲ್ಪನೆಯೊಂದಿದೆ. ಆರಾಮಾಗಿರಬಹುದು ಎಂದೇನಾದರೂ ಈ ಫೀಲ್ಡನ್ನ ಆರಿಸಿಕೊಳ್ಳುವ ಆಸೆಯಿದ್ದರೆ ಅದರಿಂದ ಹೊರಗೆ ಬನ್ನಿ! ಇದು ರಜೆಯೇ ಇಲ್ಲದ, ಮುನ್ನೂರ ಅರವತ್ತೈದು ದಿನ ಕೂಡ ಕೆಲಸವನ್ನು ಬೇಡುವ ಜಾಗ. ಹೊತ್ತಲ್ಲದ ಹೊತ್ತಿನಲ್ಲಿ ಹೊಸದೊಂದು ದೃಶ್ಯ ಬರೆದುಕೊಡುವ ಕರೆ ಬರುತ್ತದೆ. ಭಟ್ಕಳದ ಬಸ್ ಸ್ಟ್ಯಾಂಡಿನಿಂದ ತೊಡಗಿ, ಹಿಮಾಲಯದ ನದೀ ದಡದಲ್ಲಿ ಕೂತು ಕೂಡ ಸಂಭಾಷಣೆ ಬರೆದು ಕಳಿಸುವ ಅನಿವಾರ್ಯತೆಗೆ ನಾನೇ ಸಿಲುಕಿದ್ದೇನೆ. ನಿಮ್ಮ ಯಾವುದೇ ಜಂಜಡಗಳಲ್ಲಿ ನೀವು ಸಿಲುಕಿಕೊಂಡಿದ್ದರೂ- ಆ ಸಮಸ್ಯೆ ಸೀನ್ ಪೇಪರ್ ನಲ್ಲಿ ಕಾಣಿಸಬಾರದು! ್ಹಗಲು ರಾತ್ರಿಗಳ ಪರಿವೆ ಇಲ್ಲದೆಯೇ ಲ್ಯಾಪ್ ಟಾಪ್ ಮುಂದೆ ಕೂತು ಸೀನು ಕಟ್ಟುವ ಕೆಲಸ ಮಾಡುವ ಉಮೇದು ಇಲ್ಲಿ ಇರಲೇಬೇಕಾದ್ದು ಅವಶ್ಯಕ. ಹಾಗೆಂದು ನಿತ್ಯವೂ ಹೀಗೇ ಕೆಲಸವೇ ಎಂದುಕೊಳ್ಳಬೇಡಿ-ಖಂಡಿತ ಅಲ್ಲ. ಆದರೆ- ಈ ಅಂಚನ್ನೂ ತಿಳಿದುಕೊಂಡಿರಬೇಕಾದ್ದು ಅಗತ್ಯ.

ಬರೆಯುವ ಮುನ್ನ:
             ಧಾರಾವಾಹಿಯ ಸಂಭಾಷಣೆಕಾರನಾದವನು, ಚಿತ್ರಕಥೆಯನ್ನು ಬರೆಯುವವರ ಜೊತೆಗೆ ಹಾಗೂ ನಿರ್ದೇಶಕನ ಜೊತೆಗೆ ಉತ್ತಮ ಸಂವಹನ ಹೊಂದಿರಬೇಕು. ಕತೆಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಇದ್ದು, ಧಾರಾವಾಹಿಯು ಎತ್ತ ಸಾಗುತ್ತಿದೆ ಎನ್ನುವ ಅರಿವನ್ನ ಇಟ್ಟುಕೊಂಡಿರಬೇಕು. ಪಾತ್ರಗಳು-ಅವುಗಳ ಮಿತಿಯನ್ನ ಅರಿತುಕೊಂಡಿರಬೇಕು. ಯಾವ ಸನ್ನಿವೇಶ ಮುಖ್ಯವಾದದ್ದು- ಯಾವುದು ಅನಗತ್ಯ ಎನ್ನುವ ಜಾಣ್ಮೆ ಹೊಂದಿರಬೇಕಾದ್ದೂ ಅಗತ್ಯವೇ. ಪ್ರತೀ ದೃಶ್ಯದಲ್ಲೂ ಚುರುಕಾದ, ನೋಡುಗ- ಅರೇ ಎನ್ನುವಂತಹ ಸಂಭಾಷಣೆಯನ್ನು ಕಟ್ಟಿಕೊಡುವ ಪ್ರಯತ್ನವೂ ಇರಬೇಕು. ಹೀಗಿದ್ದಾಗ ಒಬ್ಬ ಉತ್ತಮ ಸಂಭಾಷಣೆಕಾರನಾಗಲು ಸಾಧ್ಯವಿದೆ.

ಚಿತ್ರಕಥೆ:
               ಸಂಭಾಷಣೆ ವಿಭಾಗ ನನಗೆ ಹೇಳಿ ಮಾಡಿಸಿದ್ದಲ್ಲ, ಆದರೆ ನಾನೊಬ್ಬ ಒಳ್ಳೆಯ ಕತೆಗಾರ ಅನ್ನುವ ಯೋಚನೆ ಇರುವವರು ಚಿತ್ರಕಥೆ ಬರೆಯುವುದರ ಬಗ್ಗೆ ಗಮನಹರಿಸಬಹುದು. ವಾಹಿನಿಗಳು ಒದಗಿಸುವ, ಅಥವ ನಿರ್ದೇಶಕನ ಮನದಲ್ಲಿರುವ ಕಥೆಯನ್ನ ವಿಸ್ತರಿಸಿ ಬರೆಯುವ ಶಕ್ತಿಯಿದ್ದಲ್ಲಿ, ಚಿತ್ರಕಥೆ ಬರೆಯುವುದು ಒಳಿತು. ಪ್ರತೀ ಸಂಚಿಕೆಗಳಿಗೆ ರೋಚಕವಾಗಿ ಸ್ಕ್ರೀನ್ ಪ್ಲೇ ಬರೆಯುವುದು ಕೂಡ ಬಹಳ ಆಸಕ್ತಿದಾಯಕ ವಿಷಯ. ನಿತ್ಯವೂ ಕೂತು ಬರೆಯುವ ಅಗತ್ಯ ಇಲ್ಲದೇ ಹೋದರೂ ಕೂಡ ಚಿತ್ರಕಥೆಯನ್ನ ಕಟ್ಟುವುದು ತುಂಬ  ಒತ್ತಡದ ಕೆಲಸ. ಧಾರಾವಾಹಿಯ ಮುಂದಿನ ಹರಿವನ್ನು ನಿರ್ಧರಿಸಬೇಕಾದ ಅನಿವಾರ್ಯತೆ ಚಿತ್ರಕಥೆಗಾರನಿಗಿರುತ್ತದೆ. ಪಾತ್ರಗಳು ಹುಟ್ಟುವುದೂ-ಸಾಯುವುದೂ ಈತನ ಕೈಯಲ್ಲೇ! ಬಹಳಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿರುವುದರಿಂದ, ಹೊಸತನವನ್ನು ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ. ಚಿತ್ರಕಥೆಯನ್ನ ಬರೆಯುವವನು ಸುತ್ತ ನಾಲ್ಕು ವಾಹಿನಿಗಳ ಧಾರಾವಾಹಿಗಳನ್ನೂ ಗಮನಿಸುತ್ತ- ಅವುಗಳಿಗಿಂತ ಭಿನ್ನವಾದ ಕಥಾಹಂದರವನ್ನು ಹುಟ್ಟುಹಾಕಬೇಕಾಗುತ್ತದೆ.
ನೋಡುಗರ ಅಭಿಪ್ರಾಯಕ್ಕೆ ತಕ್ಕ ಹಾಗೆ ಕಥೆಯನ್ನು ಬದಲಾಯಿಸುವ ಅನಿವಾರ್ಯತೆ ಕೆಲ ಬಾರಿ ಬಂದೊದಗುತ್ತದೆ. ಅಂದುಕೊಂಡ ಮಟ್ಟಕ್ಕೆ ಧಾರಾವಾಹಿ ನೋಡುಗನ ಮನಮುಟ್ಟದೇ ಹೋದರೆ, ಕಥೆಗೊಂದು ಹೊಸ ತಿರುವನ್ನ ಕೊಡುವುದು ಚಿತ್ರಕಥೆ ಬರೆವಾತನ ಕೆಲಸ. ಅದೂ ಅಲ್ಲದೇ, ತಕ್ಕನಾದ ರೇಟಿಂಗ್ ಬರದೇ ಹೋದರೆ ಆಗ ಕೂಡ ಕಥೆಯ ದಿಕ್ಕನ್ನ ಬದಲಾಯಿಸಬೇಕಾದ್ದು ಈತನದೇ ಜವಾಬ್ದಾರಿ.
ಇನ್ನೂ ಇದೆ!
             ಕೇವಲ ಧಾರಾವಾಹಿಗಳು ಮಾತ್ರವಲ್ಲದೇ ಮನರಂಜನಾ ವಾಹಿನಿಗಳಲ್ಲಿ ಇನ್ನೂ ಹಲ ಬಗೆಯ ಬರಹಗಾರರಿಗೆ ಅವಕಾಶವಿದೆ. ನಾನ್ ಫಿಕ್ಷನ್ ಶೋಗಳು- ರಿಯಾಲಿಟಿ ಶೋ ಗಳು ಕೂಡ ಬರಹಗಾರರನ್ನ ಪೋಷಿಸುತ್ತವೆ. ಡ್ಯಾನ್ಸ್ ಶೋ ಇರಲಿ, ಕಾಮಿಡಿ ಅಥವಾ ಟಾಕ್ ಶೋ ಇರಲಿ- ಅಥವಾ ಯಾವುದೇ ಬಗೆಯ ವಾರಾಂತ್ಯದ ವಿಶೇಷ ಕಾರ್ಯಕ್ರಮಗಳಿರಲಿ- ಎಲ್ಲದಕ್ಕೂ ಬರಹವೇ ಬೆನ್ನೆಲುಬು! ಯಾವನೇ ಸೆಲೆಬ್ರಿಟಿಯೊಬ್ಬ ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದಾನೆ ಎಂದರೆ- ಆತನ ಹಿಂದೊಬ್ಬ ರೈಟರು ಕೂತಿದ್ದಾನೆ ಎಂತಲೇ ಲೆಕ್ಕ!
             ಇದರ ಜೊತೆಗೀಗ ಬೆಳೆಯುತ್ತಿರುವ ಯೂಟ್ಯೂಬ್-ವೀಡಿಯೋ ಅಪ್ಲಿಕೇಶನ್ ಗಳಿಂದಾಗಿ ಶಾರ್ಟ್ ಫಿಲಂ ಗಳು- ವೆಬ್ ಸೀರೀಸ್ ಗಳನ್ನ ಮಾಡುವ ಹೊಸ ಆಸಕ್ತಿ ಕೂಡ ಬೆಳೆಯುತ್ತಿದೆ. ಬರವಣಿಗೆಯನ್ನೇ ವೃತ್ತಿಯಾಗಿಸಿಕೊಳ್ಳುವ ಆಸಕ್ತಿ ಇರುವವರಿಗೆ ಇವುಗಳು ಕೂಡ ಉತ್ತಮ ಮಾರ್ಗವೇ. ಡಾಕ್ಯುಮೆಂಟರಿಗಳಿಗೆ ಸ್ಕ್ರಿಪ್ಟ್ ಬರೆಯುವುದು-ಸ್ವತಂತ್ರವಾಗಿ ಕಾರ್ಯಕ್ರಮಗಳನ್ನ ನಿರ್ಮಿಸಿ ವಾಹಿನಿಗಳಿಗೆ ಒದಗಿಸುವುದು- ಇವೇ ಮೊದಲಾದ ಸಾಧ್ಯತೆಗಳು ಕೂಡ ಬರಹಗಾರನಾದವನಿಗಿದೆ.

ದಯವಿಟ್ಟು ಗಮನಿಸಿ:
             ಇಷ್ಟೆಲ್ಲ ಓದಿದ ಮೇಲೆ ಬರವಣಿಗೆಯನ್ನ ಪ್ರವೃತ್ತಿಯಿಂದ ವೃತ್ತಿಗೆ ಬದಲಾಯಿಸಿಕೊಳ್ಳುವ ಆಸಕ್ತಿ ಕೆಲವರಿಗಾದರೂ ಬಂದಿರಬಹುದು. ಆದರೆ ಮೇಲೆ ಹೇಳಿದ ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸಂಬಂಧಪಟ್ಟ ನಿರ್ಮಾಪಕರ ಬಳಿ ಸಂಬಳದ ಬಗ್ಗೆ ಸರಿಯಾಗಿ ಮಾತನಾಡಿ! ಈ ಕ್ಷೇತ್ರಕ್ಕೆ ಬರುವ ಬಹಳ ಮಂದಿಯನ್ನ ಅನುಭವ ಸಿಗುತ್ತದೆ, ಕೆಲಸ ಮಾಡಿ. ನಾವು ಕೊಡೋದೇ ಇಷ್ಟು ಕಣ್ರೀ ಮಾಡೋದಾದರೆ ಮಾಡಿ ಎಂದು ಜೀತಕ್ಕೆ ಹಚ್ಚುವ ಮಂದಿಯೂ ಇದ್ದಾರೆ. ಹೀಗಾಗಿ ಫ್ರೀಲ್ಯಾನ್ಸರಾಗಿ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಗಳಿಕೆಯ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿ. ಇಲ್ಲದೇ ಹೋದರೆ ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಶೆ ಹೊಂದುವ ಸಾಧ್ಯತೆಯೂ ಇದೆ.

              ಕೊನೆಯದಾಗಿ- ನಿಮ್ಮ ಬರವಣಿಗೆಯ ಮೇಲೆ ನಿಮಗೆ ನಂಬಿಕೆ ಇದೆ ಎಂದಾದರೆ ಖಂಡಿತವಾಗಿಯೂ ಇದನ್ನ ವೃತ್ತಿಯಾಗಿ ಸ್ವೀಕರಿಸಬಹುದು. ಏಕೆಂದರೆ ನಿಮ್ಮ ಜ್ಞಾನ ನಿಮ್ಮ ಕೈಬಿಡದು! ಎಂದಿಗೂ. 

3 ಕಾಮೆಂಟ್‌ಗಳು:

sunaath ಹೇಳಿದರು...

ಧಾರಾವಾಹಿ ರಚನೆಯ ರೀತಿ, ರಿವಾಜುಗಳನ್ನು ಓದಿ ಆಶ್ಚರ್ಯವಾಯಿತು. ಅಲ್ಲಾ, ಚಿತ್ರಕಥೆ, ದೃಶ್ಯಾವಳಿ, ಸಂಭಾಷಣೆ ಇವೆಲ್ಲವನ್ನು ಮೊದಲೇ ಸಿದ್ಧ ಮಾಡಿಟ್ಟುಕೊಳ್ಳಬೇಕಲ್ಲವೆ? ಸಂಭಾಷಣೆಗಳನ್ನು ತತ್‍ಕ್ಷಣದಲ್ಲಿ ಸಿದ್ಧ ಮಾಡುವುದಾದರೆ, ನಿರ್ದೇಶಕರು ನಿರ್ದೇಶನ ಮಾಡುವುದಾದರೂ ಹೇಗೆ? ಈ ಧಾರಾವಾಹಿ ನಿರ್ಮಾಣಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲುವಿರಾ?

Durgaprasad Diwana ಹೇಳಿದರು...

ಶ್ರೀನಿಧಿ ಅಣ್ಣಾ... ಸ್ಪೂರ್ತಿದಾಯಕ ಬರಹ... ನಾನೂ ಒಬ್ಬ ಬರಹಗಾರನಾಗಿ ಯೋಚಿಸಿದೆ... ನಿಜಕ್ಕೂ ಬರವಣಿಗೆ ಒಂದು evergreen field... ಧನ್ಯವಾದಗಳು ಲೇಖನಕ್ಕಾಗಿ...

Unknown ಹೇಳಿದರು...

inspirational