ಸೋಮವಾರ, ಅಕ್ಟೋಬರ್ 09, 2006

ಪುರಾಣದೊಳಗೊಂದು ಇಣುಕು-೧.

ಭಾರತೀಯ ಸಂಸ್ಕೃತಿ, ಸನಾತನವಾದುದು. ಇಲ್ಲಿನ ಧರ್ಮ ಒಬ್ಬ ವ್ಯಕ್ತಿಯ-ಒಂದು ವ್ಯವಸ್ಥೆಯ ಕಟ್ಟುಪಾಡಿಗೊಳಪಟ್ಟು ನಿರ್ಮಾಣವಾದುದಲ್ಲ. ಬದಲಿಗೆ, ಸಮಯದ - ಸಮಾಜದ ಜೊತೆಗೇ ಬೆಳೆದು, ಪಕ್ವಗೊಂಡ ಜೀವನ ಪದ್ದತಿ. ವೇದೋಪನಿಷತ್ತುಗಳು, ಹಲವು ಪುರಾಣಗಳು ಜನರ ನಿತ್ಯದ ಬದುಕಿನ ಜೊತೆ ಬೆರೆತು, ಮನೆಯ ಹಿರಿಯನಂತೆ ಕೈ ಹಿಡಿದು ನಡೆಸುತ್ತಾ ಬಂದಿದ್ದವು, ಬಹು ಕಾಲದವರೆಗೆ.

ಕಾಲಕ್ರಮೇಣ ಜೀವನ ಶೈಲಿ ಬದಲಾಯಿತು,ನಡೆ ನುಡಿಗಳಲ್ಲಿ ಹೊಸತನ ಬಂತು. ಮನೆಯ ಹಿರಿಯರು ಮರೆಯಾದರು. ಕಿರಿಯರು ಸಾಗುವ ದಾರಿ ತಪ್ಪಿತು. ಪುರಾಣ ಗ್ರಂಥಗಳು ಕೇವಲ ರಂಜನೆಯ ಮಾಧ್ಯಮಗಳಾಗಿ ಉಳಿದು ಹೋದವು. ಸಾಹಿತ್ಯಾಸಕ್ತರು, ವಿಮರ್ಶಕರು ಮಹಾಕಾವ್ಯಗಳನ್ನ ಆಧ್ಯಾತ್ಮ- ನೀತಿ ಧರ್ಮಗಳ ನೆಲೆಯಲ್ಲಿಯೆ ವಿಶ್ಲೇಷಿಸುತ್ತಾ, ಅವುಗಳ ಪ್ರಸ್ತುತ ಉಪಯುಕ್ತತೆಯ ಕುರಿತು ಬೆಳಕು ಹರಿಸುವುದನ್ನ ಕಡಿಮೆ ಮಾಡಿದರು.

ಒಮ್ಮೆ ನಮ್ಮ ಮಹಾ ಗ್ರಂಥಗಳಾದ ರಾಮಾಯಣ ಮಹಾಭಾರತಗಳನ್ನ ಇಂದಿನ ಸಾಮಾಜಿಕ ನೆಲೆಗಟ್ಟಿನ ಹಿನ್ನೆಲೆಯನ್ನ ಗಮನದಲ್ಲಿಟ್ಟುಕೊಂಡು ಓದಿ ನೋಡಿ, ಇಂದಿನ ಹಲವು ಸಮಸ್ಯೆಗಳಿಗೆ ಅತಿ ಸರಳ ಪರಿಹಾರೋಪಾಯಗಳು ಅಲ್ಲಿವೆ. ಇಂದಿನ ಕಣ್ಣುಗಳಿಂದ ಪುರಾಣಗಳೊಳಗೆ ಇಣುಕೋಣ, ಒಂದು ಹೊಸ ವಿಸ್ತಾರ ನಮ್ಮೆದುರು ಕಾಣುತ್ತದೆ.

ಈ ಜಗತ್ತನ್ನೊಮ್ಮೆ ನೋಡಿ, ಹೇಗೆ ಭಯೊತ್ಪಾದನೆಯ ಮಾರಣಾಂತಿಕ ಸುಳಿಯೊಳಗೆ ಮುಳುಗುತ್ತಿದೆ! ಎಷ್ಟೇ ವೈಜ್ನಾನಿಕ ಪ್ರಗತಿ, ವ್ಯಾಪಾರ ವಾಣಿಜ್ಯೋದ್ಯಮಗಳ ಬೆಳವಣಿಗೆ, ಕಂಪ್ಯೂಟರುಗಳ - ಸುಖ ಸಾಧನಗಳ ಅಭಿವೃದ್ಧಿ, ಏನೇ ಇರಲಿ, ಎಲ್ಲವೂ "ಬೇಲಿಯೇ ಇಲ್ಲದ ಹೊಲ" ದಂತಾಗಿದೆ! ಮತಾಂಧ ರಾಜಕೀಯತೆ, ದೇಶ ದೇಶಗಳನ್ನೆ ಕಬಳಿಸುವ ವಾಣಿಜ್ಯ ಜಾಲಗಳು ಎಲ್ಲೆಡೆ ಹಬ್ಬುತ್ತಿವೆ.

ರಾಮಾಯಣದ ಕಾಲದಲ್ಲಿ ರಾವಣನಿದ್ದ, ಈ ಆಧುನಿಕ ಜಗತ್ತಿನ ರಾವಣ ಒಸಮಾ ಬಿನ್ ಲಾಡೆನ್ ನೆ ಅಲ್ಲವೆ?! ರಾವಣನು ಯಾವ ವಿಧಿ ವಿಧಾನಗಳಂತೆ ಅಭಿಷಿಕ್ತನಾದ ದೊರೆಯೊ, ಜನ ಪ್ರೀತಿ ಗಳಿಸಿದ ನಾಯಕನೋ ಅಥವಾ ಯಾವುದೊಂದು ಪ್ರಜಾಹಿತಕ್ಕೆ ಬದ್ಧನಾದ ಹೊಣೆಗಾರ ಆಡಳಿತಗಾರನೋ ಆಗಿರಲಿಲ್ಲ! ಇಂದಿನ ಪುಂಡ, ದರೋಡೆಕೋರರ, ಭಯೋತ್ಪಾದಕರ ಜಾಲಗಳ ನಾಯಕರ ಲಕ್ಷಣಗಳೆಲ್ಲ ಅವನಲ್ಲಿ ಇದ್ದವು. ತನ್ನೆಲ್ಲ ಪ್ರತಿಸ್ಪರ್ಧಿಗಳನ್ನ ಮಟ್ಟ ಹಾಕಿ - ಕೊಂದು ನಿರ್ನಾಮ ಮಾಡಿ ತನ್ನ ಜೀವನ ಕ್ರಮಗಳನ್ನ ಜಗತ್ತಿನ ಮೇಲೆ ಹೇರಿ, ಸಾರ್ವಭೌಮನಾಗಿ ಮೆರೆಯುವ 'ಜಿಹಾದಿ' ಮಾದರಿಯ ಯುದ್ಧ ಅವನದಾಗಿತ್ತು.

ಇಂದು 'ಮಾಫಿಯಾ' ಎನ್ನುತ್ತೇವೆ, 'ತಾಲಿಬಾನ್' ಅನ್ನುತ್ತೇವೆ, 'ಎಲ್.ಟಿ.ಟಿ,ಇ ' ಎನ್ನುತ್ತೇವೆ, ಅಂದು ಈ ಯಾವ ಹೆಸರುಗಳು ಇಲ್ಲದೆಯೆ ಇವೆಲ್ಲ ಗುರಿ, ಲಕ್ಷಣಗಳನ್ನು ಹೊಂದಿದ್ದ ಬೃಹತ್ ಸೇನೆ, ಒಂದು ಸಕ್ರಿಯ ಸಫಲ ಜಾಲ ಅವನಲ್ಲಿತ್ತು. ಅದಕ್ಕೆಂದೇ ತರಬೇತಿ ಹೊಂದಿದ ಸಾವಿರಾರು ಸಂಖ್ಯೆಯ ಯುವಕ- ಯುವತಿಯರು ಅವನ ಬಳಿಯಿದ್ದರು.

ರಾವಣ ತನ್ನ ರಾಜ್ಯ ವಿಸ್ತಾರಕ್ಕಾಗಿ ದೇಶ ದೇಶ ತಿರುಗಿ, ಅಕ್ರಮ-ಘೋರ ಯುಧ್ಧ ಮಾಡಿ ಅಸಂಖ್ಯ ನಿರುಪದ್ರವಿಗಳನ್ನ ಋಷಿ ಮುನಿಗಳನ್ನ ಕೊಂದ. ಅವರ ಮೂಳೆಗಳ ರಾಶಿಯ ಮೇಲೆ ತನ್ನ ವಿಜಯ ಪತಾಕೆಯನ್ನ ಹಾರಿಸ ಹೊರಟ! ನಿರುಪದ್ರವಿ ಋಷಿ ಮುನಿಗಳು ಅವನಿಗೆ ಏನು ಅಪಕಾರ ಮಾಡಿದ್ದರು?, ಇಂದಿನ 'ಜಿಹಾದಿ' ಗಳಿಗೆ ಅಮೆರಿಕದ "WTC " ನಲ್ಲಿದ್ದ ಅಮಾಯಕ ಪ್ರಜೆಗಳು ಏನು ಮಾಡಿದ್ದರು?! , ನಿತ್ಯ ಮಾರಣ ಹೋಮಕ್ಕೆ ಬಲಿಯಾಗುತ್ತಿರುವ ಕಾಶ್ಮೀರದ ಬಡಪಾಯಿ ಹಳ್ಳಿಗರ ತಪ್ಪೇನಿದೆ! ಇಲ್ಲಿ ಧರ್ಮಾಂಧತೆಯ ಉಗ್ರವಾದವೇ ಪ್ರಚೋದಕವಾದಂತೆ, ರಾವಣನಿಗೆ, ಅವನ ಪಡೆಗಳಿಗೆ , ಸನಾತನ ಸಂಸ್ಕೃತಿಯ ದ್ವೇಷ ಮತ್ತು ಅದು ತಮ್ಮ ಭೋಗ ಜೀವನದ ಪ್ರಚಾರಕ್ಕೆ ಅಡಚಣೆ , ಅದು ಇರಬಾರದು ಎಂಬ ದೀಕ್ಷೆಯೇ ಕಾರಣವಾಗಿತ್ತು!

ಅಂದು ರಾವಣನ ಕೈಯಲ್ಲಿ ಹತರಾದ ಋಷಿಗಳ ಮೂಳೆರಾಶಿಯನ್ನು ಇತರ ಮುನಿಗಳು ರಾಮನಿಗೆ ತೋರಿಸಿ ಮರುಗುತ್ತಾರೆ.ಒಂದು ಕಟ್ಟಡವುರುಳಿ ಆರೆಂಟು ಸಾವಿರ ಜನ ಸತ್ತದ್ದಕ್ಕೆ, ಕಾಶ್ಮ್ಮೀರ, ವಾರಣಾಸಿ ಮುಂತಾದ ಧಾರ್ಮಿಕ ಸ್ಥಳಗಳಲ್ಲಿನ ಮಾರಣ ಹೋಮಕ್ಕೆ ಜಿಹಾದಿಗಳ ವಿನ: ಜಗತ್ತೇ ಕಣ್ಣೀರು ಸುರಿಸುತ್ತದೆ. ಅಂದು ಅಳುವವರು ಯಾರೂ ಇರಲಿಲ್ಲ, ಒಬ್ಬ ರಾಮ ಅತ್ತ, ಅದು ರಾಕ್ಷಸ ನಿರ್ಮೂಲನೆಗೆ ನಾಂದಿಯಾಯಿತು!

ನಮ್ಮೊಳಗೂ ರಾಮನಿಲ್ಲವೆ?.

ಕಾಮೆಂಟ್‌ಗಳಿಲ್ಲ: