ಮಂಗಳವಾರ, ಜುಲೈ 14, 2009

ಗಮಕ ಸುಧಾ ಧಾರೆ

ನಾನು ಎರಡನೇ ಕ್ಲಾಸಿನಲ್ಲಿದ್ದ ಕಾಲದಿಂದಲೂ ಅಪ್ಪ ನನಗೆ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದ. ಕಥೆ ಎಫೆಕ್ಟಿವ್ ಆಗಿರಲಿ ಎಂಬ ಕಾರಣಕ್ಕೋ, ಅಥವಾ ಕೇಳೋಕೆ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೋ, ಕುಮಾರವ್ಯಾಸ ಭಾರತದ ಆಯ್ದ ಷಟ್ಪದಿಗಳನ್ನು ಈ ಕಥೆಗಳ ಮಧ್ಯೆ ಸೇರಿಸುತ್ತಿದ್ದ. ಯುದ್ಧ ಸನ್ನಿವೇಶಗಳ ವಿವರಣೆಯ ಮಧ್ಯೆ ಬರುವ ಎಂಥೆಥದೋ ವಿಚಿತ್ರ ಉಪಮೆಗಳು, ನನ್ನನ್ನು ಮಾಯಾಲೋಕಕ್ಕೆಳೆಯುತ್ತಿದ್ದವು. ಅವಾಗಿನ್ನೂ ನಾನು ಟೀವಿ ಮಹಾಭಾರತ ನೋಡೋದಿಕ್ಕೆ ಅರಂಭಿಸಿರಲಿಲ್ಲ.

ಆಮೇಲಾಮೇಲೆ ಟೀವಿಯ ಮಹಾಭಾರತದೆದುರು ಈ ಷಟ್ಪದಿ ಸಪ್ಪೆ ಅನ್ನಿಸತೊಡಗಿತು. ಅಪ್ಪ ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೂ, ಕೆಲ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ, ನೋಡುವುದು ಕೇಳುವುದಕ್ಕಿಂತ ಸುಲಭವಾಗಿ ಅರ್ಥವಾಗುತ್ತಿತ್ತು. ಆದರೂ, ಅಪ್ಪ ರಾಗಬದ್ಧವಾಗಿ ಹೇಳುತ್ತಿದ್ದ ಷಟ್ಪದಿಗಳೇ ಇವತ್ತಿಗೂ ಮನದೊಳಗೆ ಉಳಿದಿದೆ. ಆಮೇಲೆ ಇದೇ ಕುಮಾರವ್ಯಾಸ ಭಾರತದ ಹಲಭಾಗಗಳನ್ನು ಅವನೇ ತರಗತಿಯಲ್ಲಿ ಪಾಠ ಮಾಡಿದ್ದರೂ ಬಾಲ್ಯದ ನೆನಪೇ ಗಟ್ಟಿ.

ಆಮೇಲೆ ಹೈಸ್ಕೂಲಿಗೆ ಬಂದ ಮೇಲೆ ನಮ್ಮ ಕನ್ನಡ ಮಾಸ್ಟ್ರು ಲಕ್ಷ್ಮೀಶ ಶಾಸ್ತ್ರಿಗಳು, ಅದೆಷ್ಟ್ ಚನಾಗಿ ಷಟ್ಪದಿ ಹಾಡ್ತಿದ್ರು ಅಂದ್ರೆ, ಗಮಕ ಎನ್ನುವ ಈ ಕಲೆಯ ಬಗ್ಗೆ ಕ್ಲಾಸಿನ ಎಲ್ಲ ಮಕ್ಕಳು ಮರುಳಾಗಿಬಿಟ್ಟಿದ್ದರು. ವಿದುರನ ಮನೆಗೆ ಬಂದ ಕೃಷ್ಣನ ಮೈಗೆ ಹೇಗೆ ಧೂಳು ಮೆತ್ತಿಕೊಂಡಿತ್ತು ಅನ್ನುವುದನ್ನು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ನಾವೆಲ್ಲ ಮಾತಿಲ್ಲದೇ ಕುಳಿತುಬಿಡುತ್ತಿದ್ದೆವು.

ಬೇಸಿಗೆಯ ರಜೆಯಲ್ಲಿ ಅಮ್ಮ ಅದಾವಾಗ ಊಟಕ್ಕೆ ಕರೆಯುತ್ತಾಳೆ ಅಂತ ಕಾಯುತ್ತ ಕುಳಿತಿದ್ದಾಗ, ಮಂಗಳೂರು ಅಕಾಶವಾಣಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ, ಒಂದೂಹತ್ತರ ದೆಹಲಿ ನ್ಯೂಸಿನ ಮೊದಲು, ಹತ್ತು ನಿಮಿಷ ಗಮಕ ವಾಚನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಿರು ಬಿರು ಬಿಸಿಲಿನಲ್ಲಿ ಈ ತಂಪು ಗಮಕ ತುಣುಕಗಳು, ಅಹಾ ಅನ್ನಿಸುತ್ತಿದ್ದವು.

ಈ ಗಮಕದ ನೆನಪುಗಳನ್ನೆಲ್ಲ ಮತ್ತೆ ಹಸಿರು ಮಾಡಿಕೊಳ್ಳಲು, ನಾವು ಅಂದರೆ ಪ್ರಣತಿಯ ಗೆಳೆಯರು ನಾಡಿದ್ದು ಶನಿವಾರ ಒಂದು ಕಾರ್ಯಕ್ರಮ ಆಯೋಜಿಸಿದ್ದೇವೆ. ಕುವೆಂಪುರವರ ‘ರಾಮಾಯಣ ದರ್ಶನಂ’ನ ಅಯ್ದ ಭಾಗಗಳ ಗಮಕ ಮತ್ತು ವ್ಯಾಖ್ಯಾನ. ಆಹ್ವಾನ ಪತ್ರ ಇಲ್ಲೇ ಕೆಳಗಿದೆ. ಇಳಿಸಂಜೆಯ ಹನಿಗಳ ಜೊತೆ ನೀವೂ ನಮ್ಮೊಡನಿರಿ. ಬರುತ್ತೀರೆಂಬ ನಂಬಿಕೆಯೊಡನೆ, ಪ್ರಣತಿಯ ಗೆಳೆಯರು.

2 ಕಾಮೆಂಟ್‌ಗಳು:

sunaath ಹೇಳಿದರು...

ಶ್ರೀನಿಧಿ,
ಗಮಕ ಸಮಾರಂಭಕ್ಕೆ ಶುಭಾಶಯಗಳು.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಜೈ ಹೋ :-)