ಆಮೇಲಾಮೇಲೆ ಟೀವಿಯ ಮಹಾಭಾರತದೆದುರು ಈ ಷಟ್ಪದಿ ಸಪ್ಪೆ ಅನ್ನಿಸತೊಡಗಿತು. ಅಪ್ಪ ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೂ, ಕೆಲ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ, ನೋಡುವುದು ಕೇಳುವುದಕ್ಕಿಂತ ಸುಲಭವಾಗಿ ಅರ್ಥವಾಗುತ್ತಿತ್ತು. ಆದರೂ, ಅಪ್ಪ ರಾಗಬದ್ಧವಾಗಿ ಹೇಳುತ್ತಿದ್ದ ಷಟ್ಪದಿಗಳೇ ಇವತ್ತಿಗೂ ಮನದೊಳಗೆ ಉಳಿದಿದೆ. ಆಮೇಲೆ ಇದೇ ಕುಮಾರವ್ಯಾಸ ಭಾರತದ ಹಲಭಾಗಗಳನ್ನು ಅವನೇ ತರಗತಿಯಲ್ಲಿ ಪಾಠ ಮಾಡಿದ್ದರೂ ಬಾಲ್ಯದ ನೆನಪೇ ಗಟ್ಟಿ.
ಆಮೇಲೆ ಹೈಸ್ಕೂಲಿಗೆ ಬಂದ ಮೇಲೆ ನಮ್ಮ ಕನ್ನಡ ಮಾಸ್ಟ್ರು ಲಕ್ಷ್ಮೀಶ ಶಾಸ್ತ್ರಿಗಳು, ಅದೆಷ್ಟ್ ಚನಾಗಿ ಷಟ್ಪದಿ ಹಾಡ್ತಿದ್ರು ಅಂದ್ರೆ, ಗಮಕ ಎನ್ನುವ ಈ ಕಲೆಯ ಬಗ್ಗೆ ಕ್ಲಾಸಿನ ಎಲ್ಲ ಮಕ್ಕಳು ಮರುಳಾಗಿಬಿಟ್ಟಿದ್ದರು. ವಿದುರನ ಮನೆಗೆ ಬಂದ ಕೃಷ್ಣನ ಮೈಗೆ ಹೇಗೆ ಧೂಳು ಮೆತ್ತಿಕೊಂಡಿತ್ತು ಅನ್ನುವುದನ್ನು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ನಾವೆಲ್ಲ ಮಾತಿಲ್ಲದೇ ಕುಳಿತುಬಿಡುತ್ತಿದ್ದೆವು.
ಬೇಸಿಗೆಯ ರಜೆಯಲ್ಲಿ ಅಮ್ಮ ಅದಾವಾಗ ಊಟಕ್ಕೆ ಕರೆಯುತ್ತಾಳೆ ಅಂತ ಕಾಯುತ್ತ ಕುಳಿತಿದ್ದಾಗ, ಮಂಗಳೂರು ಅಕಾಶವಾಣಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ, ಒಂದೂಹತ್ತರ ದೆಹಲಿ ನ್ಯೂಸಿನ ಮೊದಲು, ಹತ್ತು ನಿಮಿಷ ಗಮಕ ವಾಚನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಿರು ಬಿರು ಬಿಸಿಲಿನಲ್ಲಿ ಈ ತಂಪು ಗಮಕ ತುಣುಕಗಳು, ಅಹಾ ಅನ್ನಿಸುತ್ತಿದ್ದವು.
ಈ ಗಮಕದ ನೆನಪುಗಳನ್ನೆಲ್ಲ ಮತ್ತೆ ಹಸಿರು ಮಾಡಿಕೊಳ್ಳಲು, ನಾವು ಅಂದರೆ ಪ್ರಣತಿಯ ಗೆಳೆಯರು ನಾಡಿದ್ದು ಶನಿವಾರ ಒಂದು ಕಾರ್ಯಕ್ರಮ ಆಯೋಜಿಸಿದ್ದೇವೆ. ಕುವೆಂಪುರವರ ‘ರಾಮಾಯಣ ದರ್ಶನಂ’ನ ಅಯ್ದ ಭಾಗಗಳ ಗಮಕ ಮತ್ತು ವ್ಯಾಖ್ಯಾನ. ಆಹ್ವಾನ ಪತ್ರ ಇಲ್ಲೇ ಕೆಳಗಿದೆ. ಇಳಿಸಂಜೆಯ ಹನಿಗಳ ಜೊತೆ ನೀವೂ ನಮ್ಮೊಡನಿರಿ. ಬರುತ್ತೀರೆಂಬ ನಂಬಿಕೆಯೊಡನೆ, ಪ್ರಣತಿಯ ಗೆಳೆಯರು.

2 ಕಾಮೆಂಟ್ಗಳು:
ಶ್ರೀನಿಧಿ,
ಗಮಕ ಸಮಾರಂಭಕ್ಕೆ ಶುಭಾಶಯಗಳು.
ಜೈ ಹೋ :-)
ಕಾಮೆಂಟ್ ಪೋಸ್ಟ್ ಮಾಡಿ