ಸೋಮವಾರ, ಅಕ್ಟೋಬರ್ 01, 2012

ವೇಷ



ಹಬ್ಬದೂಟದ ಮಧ್ಯಾಹ್ನ ಎಳೆಯುತ್ತಿದ್ದರೆ ಜೊಂಪು
ಹೊರಗೆ ವೇಷಗಳ ಮೆರವಣಿಗೆ
ತಮಟೆ ಸದ್ದು ರಾಮ
ರಾವಣ ಭೀಮ ಹನುಮಂತ
ಹುಲಿ ಕರಡಿ ಬೇಟೆಗಾರ
ಒಬ್ಬರ ಮೇಲೊಬ್ಬರು ಅಂಗಳ ರಂಗಸ್ಥಳ

ಕರೆಯದೆಯೆ ಬಂದು ದಿಗಿಣ
ರಿಂಗಣ ಬಿಸಿಲ ಹೊತ್ತಲೆ
ಬಲವಂತ ಯಕ್ಷಲೋಕ
ಕಾಂಪೌಂಡು ತುಂಬೆಲ್ಲ ಹಳದಿ ಹುಲಿಬಣ್ಣ
ಲಿಂಬೆಹಣ್ಣ ಕಚ್ಚಿಕೊಂಡು
ನಾವಿಟ್ಟ ನೋಟಿನ ಮೇಲೆಯೆ ಹಾರಿ ನೆಗೆದು
ದ್ರಾವಿಡ ಪ್ರಾಣಾಯಾಮ

ಮುಗಿದ ಮೇಲೆ ನಿಮಿಷಗಳ ಕೋಲಾಹಲ, ಹಗಲ ಆವೇಶ
ಅನಿಮಿಷರ ಮುಖದ ರಂಗೂ
ಮೀರಿ ಕಾಣುವ ದೈನ್ಯ.
ಈಗಷ್ಟೇ ಮೂರು ಲೋಕದ ಗಂಡನಾದವ
ಕೈಚಾಚಿ ಹಲ್ಕಿಸಿದು ಚಿಲ್ಲರೆ ಇಸಿದುಕೊಂಡು
ಹೋದರೆ, ಮತ್ತೊಂದು ವೇಷಕ್ಕೆ ಅಂಗಳ ಸಜ್ಜು

ಸಂಜೆವರೆಗೂ ಕಂಡದ್ದು ಮಹಾನವಮಿಯ
ಬಗೆಬಗೆಯ ವೇಷ
ಕೊಟ್ಟ ದುಡ್ಡಿಗೆ ಮಾತ್ರ ಲೆಕ್ಕ ಬಂದು ಹೋದವರಿಗಿಲ್ಲ
ಕೊನೆಗೆ ಬಂದಿದ್ದ ಹನುಮಂತ ತೆರೆದಿಟ್ಟು ಹೋಗಿದ್ದ ಗೇಟು
ಮುಚ್ಚಲೆಂದು ಹೋದರೆ ಅಂಗಳದ ಅಂಚಲ್ಲಿ
ಕಂಡಿದ್ದು ಯಾವನದೋ ಬಾಡಿಗೆ ಮುಕುಟದಿಂದುದುರಿದ ಮಣಿ

ಎಲ್ಲ ತೋರಿಕೆಗಳಿಂದ ಬಿಡುಗಡೆ ಪಡೆದಿದ್ದ
ಆ ಪುಟ್ಟ ಮಣಿಯನ್ನು
ಹಿಡಿದ ನಾನು ಸ್ವಯಂ ನನಗೇ ಮತ್ತೊಂದು ವೇಷ
ದಂತೆ ಕಂಡು ದಿಗಿಲಾಗಿ ರಪಕ್ಕನೆ ಅದನ್ನೆಸೆದು
ಒಳ ಬಂದು ಬಾಗಿಲು ಹಾಕಿಕೊಂಡೆ.
ಬಂಧನ,ಸಮಾಧಾನ.

2 ಕಾಮೆಂಟ್‌ಗಳು:

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಉದರ ನಿಮಿತ್ತಂ ಬಹುಕೃತ ವೇಷಂ..

Nice poem....

maanasa saarovra ಹೇಳಿದರು...

kavana chennagide. nice...