ಸೋಮವಾರ, ಮೇ 16, 2011

ಫಲಕ ಪ್ರಪಂಚ

ಕತ್ತಲ ನಾಭಿಯನ್ನು ಸೀಳಿಕೊಂಡು ಸಾಗುತ್ತಿರುವ ಬಸ್ಸು, ಮಧ್ಯ ರಾತ್ರಿಯಲ್ಲೋ, ಬೆಳಗಿನ ಜಾವದಲ್ಲೋ ಎಲ್ಲೋ ಗಕ್ಕನೆ ನಿಲ್ಲುತ್ತದೆ. ಜಾಗೃತ ನಿದ್ರಾವಸ್ಥೆಯ ಆ ಸಂದರ್ಭದಲ್ಲಿ ನಾನು ಮಾಡುವ ಮೊದಲ ಕೆಲಸ ಕಿಟಿಕಿಯಾಚೆಗಿನ ಲೋಕದೊಳಕ್ಕೆ ಕಣ್ಣು ಕೀಲಿಸಿ, ಅದ್ಯಾವ ಊರೆಂದು ನೋಡುವುದು. ಗಮ್ಯಕ್ಕಿನ್ನೂ ಎಷ್ಟು ದೂರ ಎಂದರಿತುಕೊಳ್ಳುವ ಬಯಕೆಗೆ ಸಹಕರಿಸೋದು ಹೊರಗೆ ನೇತುಕೊಂಡಿರುವ ಬ್ಯಾಂಕಿನದೋ, ಹೊಟೇಲಿನದೋ, ಮತಾöವುದರದೋ ಫ‌ಲಕ. ಬಸ್ಸಿನ ಇಂಡಿಕೇಟರಿನ ಮಿಣಮಿಣ ಬೆಳಕಿನಲ್ಲಿ ಕಾಣುವ, ಕೆಂಪೋ ಕಪ್ಪೋ ಹಳದಿಯದೋ ಬೋರ್ಡಿನ ಕೆಳಭಾಗದಲ್ಲಿ ಪುಟ್ಟಗೆ ಬರೆದುಕೊಂಡಿರುವ ಆ ಊರಿನ ಹೆಸರು ನನ್ನ ಮುಂದಿನ ದೂರವನ್ನು ನೆನಪಿಸಿ-ಸಂದರ್ಭಕ್ಕೆ ತಕ್ಕ ಹಾಗೆ ಪ್ರಯಾಣವನ್ನು ಸಹ್ಯವಾಗೋ, ತಲೆಬಿಸಿ ಆಗುವ ಹಾಗೋ ಮಾಡುತ್ತದೆ.

ಕೆಲಬಾರಿ ಹಾಗೆ ಬಸ್ಸು ನಿಂತಾಗ ಬೋರ್ಡಿನಲ್ಲಿ ಊರಿನ ಹೆಸರೇ ಕಾಣುವುದಿಲ್ಲ. ಬರೀ ರಾಘವೇಂದ್ರ ಹೊಟೇಲೋ, ಮಹಾಲಕ್ಷ್ಮಿ ಸಾರಿ ಸೆಂಟರೋ ಮಾತ್ರ ಇದ್ದು ನನ್ನ ಕಿರಿಕಿರಿ ಹೆಚ್ಚು ಮಾಡುತ್ತವೆ. ಬಸ್ಸಿನ ಬೆಳಕಿನ ಪರಿಧಿಯ ಆಚೆಗೆಲ್ಲೋ ಇರುವ ಅಂಗಡಿಯ ಫ‌ಲಕದ ಮೇಲೆ ಇರುವ ಹೆಸರು ನೋಡಲು ನಿದ್ದೆಗಣ್ಣಿನಲ್ಲಿ ಅನಿವಾರ್ಯವಾಗಿ ಕೆಳಗಿಳಿಯಬೇಕು. ಊರ ಹೆಸರು ಇಲ್ಲದೇ ಇದ್ದ ಮೇಲೆ ಆ ಬೋರ್ಡಿದ್ದು ಏನು ಪ್ರಯೋಜನ?

ಬೋರ್ಡುಗಳು ಅಂದಮೇಲೆ ಅವಕ್ಕೊಂದಿಷ್ಟು ಮಾನದಂಡಗಳು ಇದ್ದೇ ಇರುತ್ತವೆ... ಅವು ಯಾವುದರ ದ್ದಾದರೂ ಆಗಿರಲಿ. ವೈನ್‌ಶಾಪಿನಿಂದ ತೊಡಗಿ ದೇವಸ್ಥಾನದ ವರೆಗೂ. ಮಧ್ಯದಲ್ಲಿ ಸಂಬಂಧಪಟ್ಟ ಪ್ರಾಪರ್ಟಿಯ ಹೆಸರು, ಕೆಳಗೆ ಅದಿರುವ ಊರು ರಸ್ತೆ ಕ್ರಾಸು ವಿವರ ಮತ್ತೆ ಅಲ್ಲೇ ಬಲಧ್ದೋ ಎಡಧ್ದೋ ಮೂಲೆಯಲ್ಲಿ ಶುರುವಾದ ವರ್ಷ ಇತ್ಯಾದಿ. ಈ ಸ್ಥಾಪನೆಯ ವರ್ಷ ಹಲವು ದುಕಾನುಗಳ ಪ್ರತಿಷ್ಠೆಯ ಪ್ರತೀಕವೂ ಹೌದು. ಹಳೆಯದಾದ ಹಾಗೆ ನಂಬಿಕೆ ಹೆಚ್ಚು. ನಂಬಿಕೆ ಹೆಚ್ಚಾದ ಹಾಗೆ, ವ್ಯಾಪಾರ ಹೆಚ್ಚು. ಇನ್ನು ಕೆಲ ಅಂಗಡಿ ಬೋರ್ಡುಗಳ ಮೇಲೆ ಪ್ರೊಪರೈಟರು ಹೆಸರೂ ಇರುತ್ತದೆ. ಇನ್ನು ಆ ಬೋರ್ಡು ತಯಾರಿಸಿದವನ ವಿವರವೂ ಪುಟ್ಟದಾಗಿ ಅಲ್ಲೇ ಲಭ್ಯ.

ನಮ್ಮೂರು ಕರಾವಳಿಯ ಬೆಲ್ಟಿನಲ್ಲಿರೋದು. ಇಲ್ಲಿನ ಎಲ್ಲ ಅಂಗಡಿಗಳೂ, ಬ್ಯಾಂಕುಗಳೂ, ಶಾಲೆಗಳೂ, ಡಾಕ್ಟ್ರ ಶಾಪುಗಳೂ, ನಾನು ನೋಡಿದಾವಾಗಿನಿಂದಲೂ ತಗಡಿನ ಬೋರ್ಡುಗಳನ್ನೇ ಹೊತ್ತುಕೊಂಡಿದ್ದವು. ಇವೆಲ್ಲ ಮಳೆಗಾಲದಲ್ಲಿ ರಪರಪಾಂತ ಹೊಡೆಯುವ ಮಳೆಯ ಪೆಟ್ಟಿಗೆ ಕಂಗಾಲಾಗಿ, ಅಕ್ಟೋಬರು ಬರುವ ಹೊತ್ತಿಗೆ ಬಿರುದು ಬಾವಲಿ ಅಲಂಕಾರಗಳನ್ನೆಲ್ಲ ಕಳೆದುಕೊಂಡು ತುಕ್ಕುಹಿಡಿದು ಹ್ಯಾಪು ಹ್ಯಾಪಾಗಿ ನಿಂತಿರುತ್ತಿದ್ದವು. ಪೈಂಟರ್‌ ಚಂದ್ರಕಾಂತನಿಗೆ ಆವಾಗ ಭರ್ಜರಿ ಕೆಲಸ. ಅವನು ಅವಕ್ಕೆಲ್ಲ ಮತ್ತೆ ಬಣ್ಣ ಬಳಿದು, ಎಲ್ಲ ಬೋರ್ಡುಗಳ ಎಡಗಡೆ ಮೂಲೆಯಲ್ಲಿ ತನ್ನ ಹೆಸರು ಬರೆದು, ಲ್ಯಾಂಡ್ಲೆ„ನು ನಂಬರು ಬರೆದಿಡುತ್ತಿದ್ದ. ಈಗಲೂ ಹುಡುಕಿದರೆ ಸಿಗಬಹುದೇನೋ. ಆದರೆ ಲ್ಯಾಂಡ್‌ ಲೈನು ಕೆಲಸ ಮಾಡೊದು ಅನುಮಾನ.

ನಮ್ಮೂರಿನ ಚಪ್ಪಲಂಗಡಿ ಹುಸೇನು, ಮೊತ್ತಮೊದಲ ಬಾರಿಗೆ ಈ ತಗಡಿನ ಬೋರ್ಡಿನ ಹಂಗು ತೊರೆದಿದ್ದ. ನಾನಾಗ ಹೈಸ್ಕೂಲಿಗೆ ಕಾಲಿಟ್ಟಿದ್ದೆ ಅನ್ನಿಸತ್ತೆ. ಒಂದು ಸಂಜೆ ಹೊತ್ತಿಗೆ ಅವನ ಅಂಗಡಿ ಹೊರಗೆ ಜನರ ಗುಂಪು.ನಾನೂ ಕುತೂಹಲದಿಂದ ಹೋಗಿ ಇಣುಕಿದರೆ ಅಲ್ಲಿ ಕುಳಿತಿತ್ತು, ಜೈ ಹಿಂದ್‌ ಫ‌ೂಟ್‌ ವೇರ್‌ ಅನ್ನುವು ಕೆಂಪು-ಬಿಳಿ ಬಣ್ಣದ ಫ‌ಲಕ. ಮುದ್ದುಮುದ್ದಾಗಿ ಸ್ಟಿಕ್ಕರ್‌ ಕಟ್ಟಿಂಗ್‌ ಮಾಡಿಸಿಕೊಂಡ ಬೋರ್ಡು. ಆತ ಅದನ್ನ ಮಂಗಳೂರಿನಿಂದ ಮಾಡಿಸಿಕೊಂಡು ತಂದ ಬಗೆಯನ್ನು ಅಲ್ಲಿ ನೆರೆದಿದ್ದ ಮಹಾ ಜನಗಳಿಗೆ ವಿವರಿಸುತ್ತಿದ್ದ. ಬೋರ್ಡಿನೊಳಗೆ ಲೈಟು ಕಲಕ್ಷನ್‌ ಕೊಟ್ಟರೆ ರಾತ್ರಿ ಪೂರಾ ಹೆಸರು ಕಾಣಿಸುತ್ತದೆಯೆಂದ ಅವನಿಗೆ ಅಲ್ಲೇ ಇದ್ದ ಬೀಡದಂಗಡಿ ದಾಸಪ್ಪಣ್ಣ, "ಹೋಗಾ ಮಾರಾಯಾ, ನಮ್ಮ ಇಡೀ ಪೇಟೆಯೇ ರಾತ್ರಿ ಎಂಟಕ್ಕೆ ಬಂದಾಗುತ್ತದೆ, ಆಮೇಲೆ ನಿನ್ನ ಬೋರ್ಡು ನೋಡಿ ಎಂತ ಪಂಜುರ್ಲಿ ದೈವ ಬರ್ತದನ ಮಧ್ಯರಾತ್ರಿಯಲ್ಲಿ ಸ್ಲಿಪ್ಪರು ತಗೊಳ್ಳಲಿಕ್ಕೆ' ಅಂತ ಛೇಡಿಸಿದ್ದ. ಅವನಂಗಡಿ ಬೋರ್ಡಿಗೆ ಕೆಲದಿನ ಎಲ್ಲರೂ ಪಂಜುರ್ಲಿ ಬೋರ್ಡು ಅಂತಲೇ ಕರೀತಿದ್ದರು.

ಆಮೇಲಾಮೇಲೆ ನಮ್ಮ ಊರಿನ ಎಲ್ಲ ಬೋರ್ಡುಗಳೂ ಹಾಗೆಯೇ ಬದಲಾಗಿದ್ದವು. ಸ್ಟಿಕ್ಕರ್‌ ಬೋರ್ಡುಗಳಲ್ಲಿ ಮಾರ್ಪಾಟೂ ಆದವು. ಕಟ್ಟಿಂಗ್‌ ಶಾಪಿನ ರಾಮಣ್ಣ ಶಾರುಖ್‌ ಖಾನ್‌ನ ಫೋಟೋವನ್ನ ತನ್ನ ಫ‌ಲಕಕ್ಕೆ ಹಾಕಿಸಿಕೊಂಡರೆ, ಜ್ಯೋತಿ ಗಿಫ್ಟ್ ಸೆಂಟರ್‌ ಹೆಸರಿನ ಪಕ್ಕ ಐಶ್ವರ್ಯಾ ರೈ ನಗುತ್ತಿದ್ದಳು. ಇವರೆಲ್ಲ ನಮ್ಮ ದೇಶದ ಅದೆಷ್ಟು ಇಂತಹ ಬೋರ್ಡುಗಳಲ್ಲಿ ನಗುತ್ತ ನಿಂತು, ಯಾರು ಯಾರಿಗೆ ಹೇಗೆಲ್ಲ ಲಾಭ ಮಾಡಿಕೊಡುತ್ತಿದ್ದಾರೋ ಏನೋ.

ಬರೀ ಬೋರ್ಡಿನಿಂದಲೇ ಲಾಭ ಮಾಡಿಕೊಳ್ಳುವುದನ್ನು ನಾನು ಸರಿಯಾಗಿ ಗಮನಿಸಿದ್ದು$ಮಾತ್ರ ಬೆಂಗಳೂರಿಗೆ ಬಂದ ಮೇಲೆಯೇ. ಒಂದು ಅಂಗಡಿಗೆ ಒಂದಕ್ಕಿಂತ ಹೆಚ್ಚು ಬೋರ್ಡುಗಳಿರಬಹುದು ಅಂತ ಗೊತ್ತಾಗಿದ್ದೂ ಇಲ್ಲಿಯೇ. ಒಂದರಲ್ಲಿ ಅಂಗಡಿ ಹೆಸರು, ಮತ್ತೂಂದರಲ್ಲಿ ಅಲ್ಲಿನ ಆಫ‌ರುಗಳ ವಿವರಣೆ.
ರಿಯಾಯಿತಿ ದರದಲ್ಲಿ ಮಾರಾಟ, ಕೇವಲ ಕೆಲವೇ ದಿನ ಎಂಬ ಶಾಶ್ವತವಾದ ಟೆಂಪರರಿ ಬೋರ್ಡುಗಳನ್ನ ಇಲ್ಲಿ ಬೇಕಷ್ಟು ಕಂಡಿದ್ದೇನೆ, ನೀವುಗಳೂ ಕಂಡಿರುತ್ತೀರಿ. ಅಮೋಘ ಆಫ‌ರುಗಳ ಆಸೆ ಹುಟ್ಟಿಸಿ, ಬನಿಯನ್ನು ಕೊಳ್ಳೋಕೆ ಬಂದವರು ಅರ್ಧ ಅಂಗಡಿ ಖರೀದಿಸಿ ಹೋಗುವಂತೆ ಮಾಡಲು ಇವುಗಳೇ ಕಾರಣ. ಹೀಗೆ, ಇಲ್ಲಿನ ಫ‌ಲಕಗಳಿಗೆ ಬರಿಯ ಗುರುತು ಹೇಳುವುದಕ್ಕಿಂತ ಗುರುತರವಾದ ಜವಾಬ್ದಾರಿ ಇದೆ.

ಜವಾಬ್ದಾರಿ ಇಲ್ಲದ ಬೋರ್ಡುಗಳಿಂದ ಗಲಾಟೆ ಆಗಿದ್ದೂ ಉಂಟು. ದೇವರ ಹೆಸರಿಟ್ಟ ಬಾರು ವೈನ್‌ ಶಾಪುಗಳ ಬಗ್ಗೆ ನಮ್ಮಲ್ಲೆಲ್ಲ ದೊಂಬಿ ಆಗಿದ್ದೂ ಇದೆ. ಆದರೆ ಈಗೀಗ ಅದನ್ನೆಲ್ಲ ಜನ ಎಷ್ಟು ಆರಾಮಾಗಿ ತಗೊಂಡಿದ್ದಾರೆಂದರೆ, ಅಂದು ಗಲಾಟೆಯಲ್ಲಿ ಬೆಂಕಿ ಹಚ್ಚಿದ ವ್ಯಕ್ತಿಯೇ ಇಂದು ಶ್ರೀ... ಬಾರ್‌ನ ಒಡೆಯ.
ಅವನಪ್ಪ$ಈಗ ಬಾರ್‌ ಇರೋ ಜಾಗದಲ್ಲಿ 20-30 ವರ್ಷಗಳಿಂದ ದೇವಪ್ಪಣ್ಣ ಅಂಡ್‌ ಸನ್ಸ್‌ ಅನ್ನೋ ಹೆಸರಿನ ದಿನಸಿ ಅಂಗಡಿ ನಡೆಸುತ್ತಿದ್ದರು. ಮಗರಾಯ ಒಂದು ರೌಂಡ್‌ ಬೊಂಬಾಯಿಯೆಲ್ಲ ತಿರುಗಿ ದುಡ್ಡು ಮಾಡಿಕೊಂಡು ಬಂದ. ಅಪ್ಪನಿಗೆ ವಯಸೂÕ ಆಗಿತ್ತು. ದಿನಸಿ ಅಂಗಡಿ ಕೆಡವಿದ ಮಗ ಇಷ್ಟದೇವರ ಹೆಸರಲ್ಲಿ ಬಾರು ಮಾಡಿಕೊಂಡು ಆರಾಮಾಗಿದ್ದಾನೆ. ಪೇಟೆಯ ಮಧ್ಯದಲ್ಲಿ ನೊರೆ ತುಂಬಿದ ಬಿಯರ್‌ ಮಗ್‌ ಹಿಡಿದ ಸುಂದರಿ ನಿಂತಿದ್ದಾಳೆ,ಫ‌ಲಕದೊಳಗೆ.

ಮೊದಲೆಲ್ಲ ಬೇಕರಿಯ ಫ್ರಿಡಿjನೊಳಗೆ, ಬಟ್ಟೆಯಂಗಡಿಯ ಕಪಾಟಿನೊಳಗೆ, ಆರಾಮಾಗಿ ಕೂತಿರುತ್ತಿದ್ದ ಕೂಲ್‌ ಡ್ರಿಂಕು, ಚಡ್ಡಿ ಬನೀನುಗಳು ಬೋರ್ಡಿಗೇ ಬಂದು ಕೂತಿವೆ. ಬರೀ ದುರ್ಗಾ ಕೂಲ್‌ ಡ್ರಿಂಕ್ಸ್‌ ಅಂದ್ರೆ ಸಾಲದು ಈಗ! ಆ ಬೋರ್ಡಲ್ಲಿ ಯಾವುದೋ ಬಹುರಾಷ್ಟ್ರೀಯ ಕಂಪನಿಯ ಬ್ರಾಂಡಿನ, ಐಸ್‌ ಬಕೇಟಿನಲ್ಲಿಟ್ಟ ಬಾಟಲಿಂದ ಕಪ್ಪೋ, ಆರೆಂಜೋ ಬಣ್ಣದ ನೀರು ಹಾರುತ್ತಿರಬೇಕು- ಸದಾ ಕಾಲ. ಅವರ ಕಂಪನಿಯ ಜಾಹೀರಾತಿನ ಕೆಳಗೆ ಪುಟ್ಟದಾಗಿ, ಕೆಟ್ಟ ಕನ್ನಡದಲ್ಲಿ ಬರೆದ ಶಾಪ್‌ನ ಹೆಸರು ಕಂಡರೆ ಪುಣ್ಯ. ಅಂದು ಹುಸೇನಂಗೆ ಬೈದಿದ್ದ ದಾಸಪ್ಪಣ್ಣನೂ ಈಗ ತನ್ನ ಬೀಡಾ ಅಂಗಡಿಯ ಮೇಲೆ, ದೊಡ್ಡದೊಂದು ಸಿಗರೇಟು ಕಂಪನಿಯ ಬೋರ್ಡು ಹಾಕಿಕೊಂಡು ಬೀಡಾ ಶಾಪ್‌ ಹೆಸರನ್ನು ಕೆಳಗೆ ಸಣ್ಣಕೆ ಬರೆಸಿಕೊಂಡಿದ್ದಾರೆ. ದಸ್‌ ಪಾನ್‌ ಶಾಪೇ ಅಂತ. ದಾಸ್‌ ಹೋಗಿ ದಸ್‌ ಆಗಿ, ಅಂಗಡಿ ಶಾಪೇಯಾಗಿ ಒಟ್ಟಾರೆ ಕನ್ನಡಕ್ಕೇ ಶಾಪ ತಟ್ಟಿದಂತೆ ಕಾಣುತ್ತದೆ. ಅವರ ಹೆಸರಿನ ಕತ್ತು ಹಿಸುಕಿದ್ದನ್ನು ಹೇಳಲು ಹೋದರೆ ಆ ಸಿಗರೇಟು ಜಾಹೀರಾತಿನಿಂದಾಗಿ ತನಗೆ ಆದ ಲಾಭವನ್ನು ನನಗೆ ವಿವರಿಸಿ ನನ್ನ ಹೆಸುÅ ಎಲ್ಲರಿಗು ಗೊತ್ತುಂಟು ಮಾರ್ರೆà, ಅಷ್ಟಕ್ಕೂ ಜನ ನನ್ನ ಅಂಗಡಿ ಬೋರ್ಡು ನೋಡಿ ಬರುದಿಲ್ಲ. ನಾನು ಕೊಡೊ ಬೀಡದ ರುಚಿಗೆ ಬರುದು. ಬೋರ್ಡಿನಲ್ಲಿ ಎಂತ ಸಂಕಪಾಶಾಣ ಬರೆದಾದ್ರೂ ಸಾಯ್ಲಿ ಅವ್ರು ಎಂದು ಬಾಯಿ ಮುಚ್ಚಿಸಿದ್ದರು.

ಆದರೆ, ಬೆಂಗಳೂರಿನ ತುಂಬ ತುಂಬಿರುವ ಲಕ್ಷಗಟ್ಟಲೆ ಬೋರ್ಡುಗಳ ಕೋಟಿಗಟ್ಟಲೆ ತಪ್ಪುಗಳನ್ನು ನೋಡಿದ ಮೇಲೆ, ದಾಸಪ್ಪಣ್ಣ ಹೇಳಿದ್ದು ಸತ್ಯ ಅನ್ನಿಸಿದ್ದಂತೂ ಹೌದು. ಅತಿ ಕೆಟ್ಟ ಕನ್ನಡದಲ್ಲಿ, ತಮಗೆ ಬೇಕಾದಲ್ಲಿ ಮಹಾಪ್ರಾಣ ಅಲ್ಪಪ್ರಾಣ ಒತ್ತಕ್ಷರಗಳನ್ನು ತುಂಬಿಕೊಂಡು ಕನ್ನಡವನ್ನು ನಿಧಾನ ಕೊಲ್ಲುತ್ತಿವೆ, ಇಲ್ಲಿನ ಫ‌ಲಕ ಸಾಮ್ರಾಜ್ಯ. ಅದರ ಬಗ್ಗೆ ಬರೆಯೋಕೆ, ಮತ್ತೂಂದೇ ಪ್ರಬಂಧ ಬೇಕು. ಈಗೀಗ ಈ ಮೇಲ್‌ಗ‌ಳಲ್ಲಿ ಕೂಡ ಸ್ಪೆಲ್ಲಿಂಗು ಮಿಸ್ಟೇಕು ಹೊತ್ತಿರುವ, ಚಿತ್ರ ವಿಚಿತ್ರ ಅಸಂಬಂದ್ಧ ಬೋರ್ಡು ಬರಹಗಳ ಫಾರ್ವರ್ಡುಗಳೂ ಬರುತ್ತವೆ. ಅವುಗಳಲ್ಲಿ ಚೀನಾ, ಜಪಾನಿಂದ ಹಿಡಿದು ಅಮೆರಿಕದ ಅಪಸವ್ಯಗಳೂ ತುಂಬಿರುವುದರಿಂದ ನಮ್ಮಲ್ಲಿ ಮಾತ್ರ ಹೀಗಲ್ಲವಲ್ಲ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳುವಂತಾಗಿದೆ. ಗೆಳತಿಯೊಬ್ಬಳು ಇದಕ್ಕಾಗೇ ಬ್ಲಾಗೊಂದನ್ನೂ ನಡೆಸುತ್ತಿದ್ದಾಳೆ!

ನಾನು, ನನ್ನ ಗೆಳೆಯ ಹರ್ಷ ಒಂದು ದಿನ ಫ್ಲೆಕ್ಸ್‌ ಫ‌ಲಕಗಳನ್ನ ತಯಾರು ಮಾಡುವ ಅಂಗಡಿಯ ಎದುರೇ ಹಾದು ಹೋಗುತ್ತಿದೆವು. ಹರ್ಷನ ಗಮನ ಆ ಅಂಗಡಿಯ ಬೋರ್ಡಿನ ಕಡೆ ಹೋಗಿ, ಅದನ್ನ ನನಗೆ ತೋರಿಸಿ ನಕ್ಕ. ಪಲಕ ಪ್ರಪಂಚ ಎಂಬ ನಾಮಧೇಯ ಹೊತ್ತು ನಿಂತಿತ್ತು ಆ ಶಾಪ್‌. ಉತ್ತರಕರ್ನಾಟಕದ ಕಡೆ, ಪಲಕ ಅಂದ್ರೆ ರವಿಕೆ ಅಂತ ಅರ್ಥ. ತನ್ನ ಅಂಗಡಿಯ ಫ್ಲೆಕ್ಸನ್ನೇ ತಪ್ಪು$ಬರಕೊಂಡೊನು, ಉಳಿದೋರಿಗೇನು ಮಾಡಿ ಕೊಟ್ಟಾನು!

ಹೊಸ ತಂತ್ರಜಾnನ ಬಂದ ಹಾಗೆ ಬೋರ್ಡುಗಳ ಸೊಗಸು ಕೂಡ ಬದಲಾಗಿದೆ. ಒಳಗೆಲ್ಲ ಪಕಪಕ ಲೈಟು ಕುಣಿಯುವ, ಬದಲಾಗುವ ಬಣ್ಣದ, ವರ್ಣಮಯ ಫ‌ಲಕಗಳು ಅಡಿಗೊಂದಾಗಿವೆ. ಬ್ರಿಗೇಡು ಎಂಜಿ ರೋಡಿರಲಿ, ಬೆಂಗಳೂರಿನಾಚೆಗಿನ ಪುಟ್ಟ ಪಟ್ಟಣಗಳೂ, ಕೊನೆಕೊನೆಗೆ ರಾಮೋಹಳ್ಳಿ, ಸೋಮನಹಳ್ಳಿಗಳು ಕೂಡ ಇಂತಹ ಟ್ರೆಂಡೀ ಬೋರ್ಡುಗಳನ್ನ ತುಂಬಿಕೊಂಡು ಲಕಲಕಿಸುತ್ತಿವೆ. ಸಿದ್ದರಾಮ ಅಂಡ್‌ ಸನ್ಸ್‌ ಪ್ರಾವಿಷನಲ್‌ ಸ್ಟೋರ್‌ಗಳು, ಎಸ್‌ ಅಂಡ್‌ ಎಸ್‌ ಸೂಪರ್‌ ಬಜಾರ್‌ಗಳಾಗಿ ಬದಲಾಗಿ ಹೊಸ ರೂಪ ತೊಟ್ಟಿವೆ. ಈಗ ತಾನೇ ದಿನಸಿಯಂಗಡಿಗೆ ಕಾಯಕಲ್ಪ$ ಮಾಡಿದ ಯಜಮಾನನಿಗೆ ನೆತ್ತಿಯ ಫ‌ಲಕದಲ್ಲಿ ಮಿನುಗುತ್ತಿರುವ ಬಲ್ಪಿನ ಬೆಳಕು, ಉಜ್ವಲ ಭವಿಷ್ಯದ ಪ್ರತೀಕವಾಗಿ ಕಾಣುತ್ತದೆ.

ಇತ್ತೀಚಿಗೆ ಊರಿಗೆ ಹೋಗಿದ್ದೆ. ಊರಿನಲ್ಲಿ ಬಸ್ಸಿಳಿದ ಸಂತಸದಲ್ಲೇ ಹೆಜ್ಜೆ ಹಾಕುತ್ತ ಸುತ್ತಮುತ್ತ ಕಣ್ಣಾಡಿಸಿದೆ. ನೋಡಿದರೆ, ಏನೆಲ್ಲ ಬದಲಾದರೂ, ವರುಷಗಟ್ಟಲೆಯಿಂದ ಎಂಥದೂ ಬದಲಾವಣೆಯಿಲ್ಲದೆ ಹಾಗು ಹಾಗೇ ಇದ್ದ ನನ್ನ ನೆಚ್ಚಿನ ಟೈಲರಂಗಡಿಯ ಬೋರ್ಡು ಬದಲಾಗಿತ್ತು. ಕಾರ್ತಿಕ್‌ ಟೈಲರ್‌ ಎಂಬ ಅತ್ಯಂತ ಸರಳ ನಾಮಧೇಯದೊಂದಿಗೆ, ಬಸ್ಟ್ಯಾಂಡಿನ ಪಕ್ಕದಲ್ಲಿದ್ದ ಪುಟ್ಟ ಟೆನ್‌ ಬೈ ಟೆನ್‌ ಜಾಗದಲ್ಲಿ ಆ ಅಂಗಡಿ ನನಗೆ ಬುದ್ಧಿ ತಿಳಿದಾಗಿನಿಂದಲೂ ಇತ್ತು. ವರುಷಗಟ್ಟಲೆಯ ಧೂಳು ತಿಂದ ಪುಟ್ಟದೊಂದು ಮರದ ಬೋರ್ಡಲ್ಲಿ ಢಾಳು ನೀಲಿಯಲ್ಲಿ ಬರೆದ ಕಾರ್ತಿಕ್‌ ಟೈಲರ್‌ ಎಂಬ ಸೊಟ್ಟ ಅಕ್ಷರಗಳು ಯಾರಿಗಾದರೂ ಕಂಡೇ ಕಾಣುತ್ತಿತ್ತು. ಆ ಬೋರ್ಡಿನ ಬದಲು ಅಲ್ಲೀಗ, ಕಾರ್ತಿಕ್‌ ಮೆನ್ಸ್‌ ವೇರ್‌, ಸ್ಪೆಷಲಿಸ್ಟ್ಸ್ ಇನ್‌ ಸೂಟ್ಸ್‌... ಇತ್ಯಾದಿ ಇತ್ಯಾದಿ ಇಂಗ್ಲೀಷ್‌ ವಿಶೇಷಣಗಳನ್ನೆಲ್ಲ ಆರೋಪಿಸಿಕೊಂಡ ಫ‌ಳ ಫ‌ಳಿಸೋ ಫ್ಲೆಕ್ಸ್‌ ಫ‌ಲಕ ಎದ್ದು ನಿಂತಿತ್ತು.

ಸಂಜೆ ತಿರುಗಿ ಪೇಟೆ ಕಡೆ ಬಂದಾಗ ಕೇಳಿದರೆ ಅಲ್ಲಿನ ಟೈಲರ್‌ ಸಂಜೀವಣ್ಣ ಅತ್ಯಂತ ಸರಳವಾಗಿ, "ಕಾಲ ಬದಲಾಗಿದೆ ಮಾರ್ರೆ. ಗಿರಾಕಿ ಬೇಕೂಂದ್ರೆ ಹೀಗೆಲ್ಲ ಮಾಡ್ಬೇಕು ನಾನು. ಒಳಗೆ ಗೋಳಿಸೊಪ್ಪಿದ್ರೂ ತೊಂದ್ರೆಯಿಲ್ಲ, ಹೊರಗೆ ಶೃಂಗಾರ ಬೇಕಲ್ಲ... ನಿಮೆªàನಾದ್ರೂ ಬಟ್ಟೆ ಉಂಟೂ ಹೊಲೀಲಿಕ್ಕೆ? ಮೊದಲೆಲ್ಲ ಯುನಿಫಾರ್ಮಿನಿಂದ ಹಿಡಿದು ನಿಮ್ಮ ಎಲ್ಲ ಶರಟು -ಪ್ಯಾಂಟು ಹೊಲಿದುಕೊಟ್ಟಿದ್ದೆ. ಈಗೆಲ್ಲ ಬಿಡಿ, ನೀವು ಆ ಬೆಂಗಳೂರಿನ ದೊಡ್ಡ ದೊಡ್ಡ ಹೆಸರಿರೋ ಶೋ ರೂಮಿನಲ್ಲಿ ರೆಡಿಮೇಡ್‌ ಶರ್ಟು ಪ್ಯಾಂಟು ಒಂದಕ್ಕೆರಡು ಕೊಟ್ಟು ತಗೊಳ್ಳುದೇನೋ ಅಲ್ವಾ?' ಅಂದರು. ಸಂಜೀವಣ್ಣನ ಅಂಗಡಿಯ ಬೋರ್ಡು ಬದಲಾಗಿದ್ದಕ್ಕೂ, ನಾನು ಬದಲಾಗಿದ್ದಕ್ಕೂ ಎಷ್ಟು ಸಂಬಂಧ ಇದೆ ಅಂತ ಯೋಚಿಸುತ್ತ ಮನೆ ಕಡೆ ಹೊರಟೆ.

ದಾರಿಯಲ್ಲಿ ಬಸ್ಸು ನಿಲ್ಲದ ಶಿಥಿಲ ಬಸ್‌ಸ್ಟ್ಯಾಂಡಿನ ಮೇಲಿದ್ದ ಮರದ ಹಳೆಯ ಫ‌ಲಕದ ಪಕ್ಕ , ಅಲ್ಲೇ ಹುಟ್ಟಿದ್ದ ಎಳೆಯ ಅರಳಿ ಗಿಡವೊಂದು ಸಂಜೆ ಸೂರ್ಯನ ಬಿಸಿಲಿಗೆ ಮೈಕಾಯಿಸಿಕೊಳ್ಳುತ್ತಿತ್ತು.

5 ಕಾಮೆಂಟ್‌ಗಳು:

Unknown ಹೇಳಿದರು...

nice read. andhage palaka prapancha namma kadenoo jariliddu mararre:-)

ಶ್ರೀನಿಧಿ.ಡಿ.ಎಸ್ ಹೇಳಿದರು...

thanks krishna!

ಅನಾಮಧೇಯ ಹೇಳಿದರು...

ಒಳ್ಳೆಯ ಲೇಖನ.
ಕಾಲದ ನದಿ ಹರಿದಂತೆ ಕಲ್ಲೂ ಮರಳಾಗುತ್ತೆ. ಮರಳೂ ಮಣ್ಣಾಗುತ್ತೆ.
ನಿಧಾನವಾಗಿ ಎಲ್ಲವೂ ಬದಲಾಗುತ್ತೆ. ನಾವೂ ಬದಲಾಗ್ತೀವಿ. ಹಾಗೇ ಉಳಿಯೋದು ನೆನಪುಗಳು ಮಾತ್ರ.

ಅನಾಮಧೇಯ ಹೇಳಿದರು...

ಒಳ್ಳೆಯ ಲೇಖನ.
ಕಾಲದ ನದಿ ಹರಿದಂತೆ ಕಲ್ಲೂ ಮರಳಾಗುತ್ತೆ. ಮರಳೂ ಮಣ್ಣಾಗುತ್ತೆ.
ನಿಧಾನವಾಗಿ ಎಲ್ಲವೂ ಬದಲಾಗುತ್ತೆ. ನಾವೂ ಬದಲಾಗ್ತೀವಿ. ಹಾಗೇ ಉಳಿಯೋದು ನೆನಪುಗಳು ಮಾತ್ರ.

Anuradha ಹೇಳಿದರು...

ನಿಮ್ಮ ಫಲಕ ಪ್ರಪಂಚ ನನ್ನ ಕಣ್ಣ ಮುಂದೆ ಹೊಸ ಪ್ರಪಂಚವನ್ನೇ ಸೃಷ್ಟಿಸಿದೆ ...ಯಾವತ್ತೂ ಫಲಕಗಳನ್ನು ನೋಡದಿದ್ದವಳು ಈಗ ಹೊರಗಡೆ ಬೋರ್ಡುಗಳನ್ನು ನೋಡುವಂತಾಗಿದೆ .ಊರಿನ ಪ್ರಯಾಣದಲ್ಲಿ ..ಮಧ್ಯೆ ಬರುವ ಊರುಗಳಲ್ಲಿ ನಿಂತಾಗ ಊರಿನ ಹೆಸರು ಕಾಣದಿದ್ದರೆ ..ಒಂದು ತರಹ ಆಗುತ್ತದೆ .ಅದನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ .ನಿದ್ರೆಯೂ ಅಲ್ಲ ,ಎಚ್ಚರವೂ ಅಲ್ಲ ,ಆ ಸ್ಥಿತಿ ಯಲ್ಲಿರುತ್ತೇವೆ ...ಈಗ ಹಾಗಿಲ್ಲ ,ಹಗಲಿನಲ್ಲೇ ಪ್ರಯಾಣ .
ಅಭಿನಂದನೆಗಳು .