ಮಂಗಳವಾರ, ಅಕ್ಟೋಬರ್ 13, 2009

ಹಬ್ಬದ ಸಂಜೆ

ಬೆಟ್ಟ ತಪ್ಪಲಿನಾಚೆ ಕರಿಮೋಡ ಕವಿಯುತಿದೆ
ಇಲ್ಲಿ ಹೊಳೆಯುವ ಬೆಳಕು, ಮಾಗು ಬೈಗು
ನೆಟ್ಟನೋಟದ ಕಣ್ಣು ಬಯಲಾಚೆ ನೋಡುತಿದೆ
ಹೊಸ್ತಿಲಿನ ಹುಡುಗಿಗೆ, ಅವನದೇ ಗುಂಗು

ಮನೆಯ ಮಂದಿಯ ಗೌಜು ಹಬ್ಬವಾಗಿದೆಯಿಲ್ಲಿ
ಇವನ ಬರವಿನ ಅರಿವು ಯಾರಿಗಿಲ್ಲ
ಕತ್ತಲಿನ ನಡೆಯವಗೆ ಹೆಚ್ಚು ತಿಳಿಯದು ಬೇರೆ
ಮುಗಿಲೊಡೆಯುವಾ ಮೊದಲೆ ಬರುವನಲ್ಲ?

ಮುಂಜಾವು ಕಟ್ಟಿದ್ದ ಬಾಗಿಲಿನ ಹೂಮಾಲೆ,
ಈಕೆ ವದನದ ಹಾಗೆ ಮೆಲ್ಲ ಬಾಡುತಿದೆ
ಕುರುಡುದೀಪಗಳೆಲ್ಲ ಕಣ್ಣ ಬೆಳಕಿಗೆ ಕಾದು
ಇವಳಂತೆಯೇ ಪಾಪ, ಸುಸ್ತಾಗಿವೆ

ಶಂಖದನಿಗಳ ಮಧ್ಯೆ ಪೂಜೆ ಮಂಗಲ ಕಾರ್ಯ
ದೇವರೆದುರಲೂ ಮನ ಹರಿವ ಝರಿಯು
ಹೊರಗೆ ಏನೋ ಮಾತು, ಸಣ್ಣ ಸರಭರದೋಡು
ನಡೆದಿಹುದು ಮೆಲ್ಲ, ಉಭಯಕುಶಲೋಪರಿಯು

ಆರತಿಯ ತಟ್ಟೆಯನು ಹಿಡಿದು ನಡೆಯುತಲಿರಲು
ತಡೆದ ಕೈಗಳ ಬಿಸುಪು ಲಜ್ಜೆ ತರಿಸಿತ್ತು
ಸಾಲುದೀಪಗಳೆಲ್ಲ ಒಂದೊಂದೇ ನಗುತಿರಲು
ಹೊರಗೆ ಅಂಗಳದಲ್ಲಿ ನೆಲವು ನೆನೆದಿತ್ತು..

ಬುಧವಾರ, ಅಕ್ಟೋಬರ್ 07, 2009

ಕೆರೆಯ ನೀರನು ಕೆರೆಗೆ ಚೆಲ್ಲಿ

ಎಲ್ಲ ಕಡೆ ನೆರೆ ಪರಿಹಾರ ನಿಧಿ ಸಂಗ್ರಹಣೆ ಜೋರಾಗಿ ನಡೆಯುತ್ತಿದೆ. ಬೆಂಗಳೂರಿನಲ್ಲೂ ಕೂಡ ಇವತ್ತು ಭರ್ಜರಿ ಜಾಥಾ ಇತ್ಯಾದಿಗಳು ನಡೆದು ಕೋಟ್ಯಾಂತರ ರೂಪಾಯಿ ಸಂಗ್ರಹ ಆಗಿರುವುದು ಸಂತಸದ ವಿಚಾರ.

ಏನಾಗಿದೆ ಅಂದ್ರೆ, ಎಲ್ಲ ಪಕ್ಷಗಳೂ ಕೂಡ ಗಲ್ಲಿ ಗಲ್ಲಿ, ಬೀದಿ ಬೀದಿ, ಮುಖ್ಯ ರಸ್ತೆಗಳಲ್ಲಿ ಸುತ್ತುತ್ತಿದ್ದು, ಕೆಲ ಪುಂಡು ಲೀಡರುಗಳಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಇದು ಸದವಕಾಶ. ಇವತ್ತು ಹೀಗೊಂದು ಘಟನೆ ಆಯಿತು.

ಘನತೆವೆತ್ತ ಪಕ್ಷದ ಘನತೆವೆತ್ತ ಮುಖಂಡರೊಬ್ಬರು ನಿಧಿ ಸಂಗ್ರಹದ ಡಬ್ಬಿ ಹಿಡಿದು ಅಂಗಡಿ ಅಂಗಡಿ ಬಾಗಿಲಿಗೆ ಹೋಗುವುದೂ, ಅವರು ಹೋದಕೂಡಲೇ ಅಂಗಡಿ ಮಾಲಿಕ ಹತ್ತೋ, ಐವತ್ತೋ, ನೂರೋ ರೂಪಾಯಿ ಹಾಕುವುದೂ ನಡೆದೇ ಇತ್ತು. ಟೀವೀ ಚಾನಲಿನ ಕ್ಯಾಮರಾಗಳೂ ಹಿಂಬಾಲಿಸಿದ್ದವು.

ಒಂದೆಡೆ ಕ್ಯಾಮರಾಗಳು ಮುಂದೆ ಹೋದವು, ಶ್ರೀಯುತರೂ ಕ್ಯಾಮರಾಗೆ ಪೋಸುಕೊಡುತ್ತ ಶಾಪ್ ಓನರ್ ಎದುರು ಡಬ್ಬಿ ಹಿಡಿದರು, ಅವರು ಅದೆಷ್ಟೋ ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು. ಮುಖಂಡ ಮಹಾಶಯರು, "ದೇಣಿಗೆ ನೀಡಿದ್ದಕ್ಕೆ ಸಂತೋಷ, ಥ್ಯಾಂಕ್ಸು" ಅಂದಾಗ ಆ ಪುಣ್ಯಾತ್ಮ - ಅಯ್ಯ ನಿಮ್ದೇ ದುಡ್ಡು ನಿಮ್ದೇ ಡಬ್ಬಿ ಅದಿಕ್ಕೆಲ್ಲ ಯಾಕೆ ಥ್ಯಾಂಕ್ಸು ಬಿಡೀ ಸಾರ್" ಅಂದು ಬಿಟ್ಟರು! ಪಾಪ, ಲೀಡರ್ರು ತಬ್ಬಿಬ್ಬು! ಅದ್ನೆಲ್ಲ ಏನ್ ಹೇಳ್ತೀರಿ ಮರ್ಯಾದಿ ಕಳೀಬೇಡಿ ಅಂತ ಬಡಬಡನೆ ಮುಂದೋಡಿತು ಸವಾರಿ..

ವಿಷ್ಯ ಏನೂಂತ ಕೇಳಿದ್ರೆ, ಈ ಮುಖಂಡರಿಗೆ ಮೂರು ಚೇಲಾಗಳು.. ಅವರು, ಎಲ್ಲರಿಗಿಂತ ಮೊದಲು ಅಂಗಡಿಗಳಿಗೆ ಹೋಗಿ, ವಿಶ್ಯ ಹೀಗೀಗೆ, ದುಡ್ಡು ಕೊಡಿ ಅನ್ನೋದು.. ಅಲ್ಲಿದ್ದವ್ರು ಜೈ ಅಂದ್ರೆ ಸಂತೋಷ.. ಇಲ್ಲದೇ ಇದ್ದರೆ, ಆ ಶಾಪ್ ನ ಗೆಟಪ್ ನೋಡಿ ಯಥಾಸಾದ್ಯ ದುಡ್ಡು ಕೈಲಿ ಹಿಡಿಸಿ, ಹಾಕಿ ಇದ್ನ ಪ್ಲೀಸ್, ನಮ್ ಸಾಯಬ್ರುದು ಮರ್ಯಾದೆ ಪ್ರಶ್ನೆ ಅನ್ನೋದು..

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ!

ಸೋಮವಾರ, ಅಕ್ಟೋಬರ್ 05, 2009

ಆಗ್ರಹ

ಇಂಥ ಹುಚ್ಚು ಮಳೇಲಿ
ಮನೇ ತಂಕ
ಬಿಟ್ಟು , ಚೂರಾದ್ರೂ
ಅಪ್ಪಿಕೊಳೇ
ಇಲ್ಲ ಪಪ್ಪಿ ಕೊಡೇ
ಅಂದ್ರೆ,
ತಪ್ಪಿಸಿಕೊಂಡು ಹೋದಳಲ್ಲ,
ಹೀಗೆಲ್ಲ ಮಾಡಬಾರದು ಅಂತ
ನ್ಯೂಟನ್ನು, ಐನ್ ಸ್ಟೀನು
ಬರೆದಿಲ್ಲವ ಎಂಥದೂ ತತ್ವ?
ಹೊರಡಿಸಬೇಕಿದೆ ಇಂಥ
ಅನ್ಯಾಯಕ್ಕೆಲ್ಲ
ಅರ್ಜೆಂಟಾಗಿ, ಫತ್ವಾ!