ಗುರುವಾರ, ಫೆಬ್ರವರಿ 28, 2008

ದೇಗುಲದ ಪ್ರೇಮಿಗಳು..

ದೇಗುಲದ ಗೋಪುರದ ಪಾರಿವಾಳದ ಜೋಡಿ

ನೋಡುತಿದ್ದವು ಹೀಗೇ, ಜನರ ಸಾಲು

ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ

ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.


ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ

ಎಂಥ ಹಬ್ಬಕು ಕೂಡ ಬಂದೆ ಬಹರು.

ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು

ನೋಡಿದವರನೆ ನೋಡಿ ಬಹಳ ಬೇಜಾರು


ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-

ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು

ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ

ಹುಡುಗ ಬಲುತುಂಟ, ಆಕೆ ಭಯದ ಗೂಡು.


ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ

ಬಲು ಚೆಲುವ ಜೋಡಿಯದು, ಮಾತೇ ಇಲ್ಲ!

ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ

ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.


ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ

ಇವನ ಕೈ ಬಳಸಿಹುದು ಅವಳ ಹೆಗಲು

ಪಿಸುಮಾತನಾಡುವರು, ಅತ್ತಿತ್ತ ನೋಡುವರು

ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.


"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ

ಸರಿಯಾಗುವುದು ಎಲ್ಲ, ದಿನವು ಕಳೆದಂತೆ"

ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.


ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು

ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು

ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ

ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.


ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ

ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.

ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು

ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.


ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು

ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ

ಗೋಪುರದ ಜೋಡಿಗಳು ಹಾರೈಸಿದವು ಅವರ

ಪ್ರೀತಿಝರಿಯಾ ಒರತೆ ಬತ್ತದಂತೆ.

ಟಿಪ್ಪಣಿ:

ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!

ಮಂಗಳವಾರ, ಫೆಬ್ರವರಿ 26, 2008

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

ಶನಿವಾರ, ಫೆಬ್ರವರಿ 16, 2008

ಜಂಗಮ ಬಿಂಬಗಳು -೩

ಅವನು ಬೈಕಿನ ಹಿಂದೆ ಬರೆದುಕೊಂಡಿದ್ದ - "ಐ ಡೋಂಟ್ ಕೇರ್"ಅಂತ. ಒಂದು ದಿನ ಬ್ಯಾಂಕಿನವರು ಬಂದು ಬೈಕು ಎತ್ತಿಕೊಂಡು ಹೋದರು. ಮೂರು ನಾಲ್ಕು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲವಂತೆ.

****

ಆತನಿಗೆ ಕೆಲದಿನಗಳ ಕಾಲ ಮುಖವಾಡ ಧರಿಸಿ ಬದುಕಬೇಕು ಅನ್ನುವ ಆಸೆಯಾಯಿತು. ಧರಿಸಿದ. ಎಷ್ಟೋ ದಿನಗಳ ನಂತರ ಮುಖವಾಡ ತೆಗೆಯಬೇಕನಿಸಿತು. ತೆಗೆದ. ಮುಖವಾಡದ ಜೊತೆಗೆ ಮುಖವೂ ಕಿತ್ತು ಬಂತು.

****

ಗುರುವಾರ, ಫೆಬ್ರವರಿ 14, 2008

ಅರ್ಧ ಕವಿತೆಗಳು

ಕಡಲು ಜಗದ ದೊಡ್ಡ ಪ್ರೇಮಿ
ನಿತ್ಯ ಮಿಲನ ಅದಕೆ.
ನದಿಗಳಿಹುದು ಲಕ್ಷ ಲಕ್ಷ
ತೀರದದರ ಬಯಕೆ.
****
ನಟ್ಟಿರುಳ ದಾರಿಯಲಿ ನಡೆಯುತ್ತಿದ್ದರು ಅವರು
ದೂರ ತಿರುವಿನಲೆಲ್ಲೋ ಕಂಡಿತ್ತು ಸೊಡರು.
ಬೆಳಕ ನೋಡಿದ್ದೇ ತಡ, ಕೈ ಬೆಸುಗೆ ಬಿಗಿಯಿತು
ಹೆಜ್ಜೆಗಳ ಪಥ ಮೆಲ್ಲ ಹಿಂದಕ್ಕೆ ತಿರುಗಿತು
****
ಕೆರೆಯ ಕಟ್ಟೆಯ ಮೇಲೆ ಅವಳು ನಡೆದಿದ್ದಳು.
ಮಿಂದೊದ್ದೆ ಪಾದಗಳ ಅಲ್ಲೆ ಊರಿದ್ದಳು.
ಹೂವು ತಂದಿದ್ದನವ ದೇವರಾ ಪೂಜೆಗೆ.
ಚೆಲ್ಲಿ ಹೋದವು ಎಲ್ಲ, ಒದ್ದೆ ಪಾದಗಳ ಜಾಡಿಗೆ
****

ಗುರುವಾರ, ಫೆಬ್ರವರಿ 07, 2008

ಚಿತ್ರ ಚಾಪ - ಬರಹದ ದಾರಿಯ ಮೇಲಿನ ಕಾಮನಬಿಲ್ಲು.

ನನಗೆ ಬರೆಯುವ "ಹುಚ್ಚು" ಆರಂಭವಾಗಿದ್ದು ನಾನು ಬಿ.ಎ ಓದುತ್ತಿದ್ದ ಕಾಲದಲ್ಲಿ. ಕವನ, ಕಥೆಯಂತದ್ದನ್ನು ಬರೆಯಲು ಆರಂಭಿಸಿದ್ದೆ ಆವಾಗ. ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು ಗೀಚುವುದು, ಸಿಕ್ಕಲ್ಲಿ ಎಸೆಯುವುದು ಮಾಮೂಲಾಗಿತ್ತು. ಇನ್ನು ನನಗೇ ತೀರಾ ಇಷ್ಟ ಅನ್ನಿಸಿದ್ದನ್ನು ಎಲ್ಲಾದರೂ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅಪ್ಪ ಒಂದಷ್ಟು ದಿನ "ಪುಣ್ಯಾತ್ಮಾ, ಬರೆದಿದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸೋ" ಅಂತ ಹೇಳೀ ಹೇಳೀ ಸೋತು ಹೋದರು.ನಾನು ನನ್ನ ಪಾಡಿಗೆ ಗೀಚಿ ಎಲ್ಲಾದರೂ ಹಾಕುವುದನ್ನು ಹಾಯಾಗಿ ಮುಂದುವರೆಸಿದ್ದೆ. ಅಮ್ಮ ಮನೆ ಗುಡಿಸುವಾಗ ನಾನು ಬರೆದು ಬಿಸಾಕಿದ ಹಾಳೆಗಳನ್ನು ತಂದು ನನ್ನ ಮುಂದಿಡುತ್ತಿದ್ದರು. ಅವರಿಗೂ ಭ್ರಮನಿರಸನವಾಗಿ, ನನ್ನ ಬರಹವನ್ನು "ಸೂಟ್ ಕೇಸ್ ಸಾಹಿತ್ಯ" ಅಂತ ನಾಮಕರಣ ಮಾಡಿದರು.

ಆಮೇಲೆ ಬೆಂಗಳೂರಿಗೆ ಬಂದು ಬ್ಲಾಗೂ ಅದೂ ಇದೂ ಅಂತ ಶುರು ಮಾಡಿಕೊಂಡು ಬರೆದದ್ದು ಉಳಿಯತೊಡಗಿತು. ತಂಗಿ ಮನೆಯಿಂದ ಆವಾಗಾವಾಗ ಫೋನ್ ಮಾಡಿ, "ಅಣ್ಣಾ, ನೀ ಬರ್ದ್ ಕವ್ನ ಸಿಕ್ಕಿದ್ದು, ಅರ್ಧ ಬರ್ದಿಟ್ಟ ಕಥೆ ಸಿಕ್ಕಿದ್ದು" ಅಂತ ಅವ್ಳು ಬೆಂಗಳೂರಿಗೆ ಬರೋವರೆಗೂ ಹೇಳುತ್ತಿದ್ದಳು. ಈ ಬರವಣಿಗೆ ಎಲ್ಲಿಗೆ ಹೋಗುತ್ತದೆ ಅನ್ನುವುದು ನಂಗೂ ಗೊತ್ತಿರಲಿಲ್ಲ.

ಇಂಟರ್ನೆಟ್ಟಿನಲ್ಲಿ ಜೀಮೇಲೂ,ಆರ್ಕುಟ್ಟು ಅಂತೆಲ್ಲ ಬಂದು, ನನ್ನ ಹಾಗಿದ್ದೇ ಇನ್ನೊಂದಿಷ್ಟು ಜನ ಹುಚ್ಚರ ಪರಿಚಯ ಆಯಿತು. ಚಾರಣ, ಹರಟೆ ಹೆಚ್ಚಿತು. ಯಾವುದೋ ಒಂದು ಭಯಂಕರ ಘಳಿಗೆಯಲ್ಲಿ ನಾವೊಂದಿಷ್ಟುಜನ ಸೇರಿ ಪುಸ್ತಕ ಯಾಕೆ ಬರೀಬಾರದು ಅನ್ನುವ ಆಲೋಚನೆ ಬಂತು. ತಿಂಗಳಾನುಗಟ್ಟಲೇ ತಪಸ್ಸಿನ ನಂತರ ನಾವು ಕಂಡ ಕನಸು ನನಸಾಗೋ ಸಮಯವೂ ಹತ್ತಿರ ಬರ್ತಿದೆ ಈಗ.

ನಾಡಿದ್ದು ಭಾನುವಾರ ಬೆಳಿಗ್ಗೆ, ನಾನು, ಅರುಣ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ್ ಸೇರಿ ಬರೆದಿರುವ "ಚಿತ್ರ ಚಾಪ" ಪುಸ್ತಕದ ಬಿಡುಗಡೆ. ಪರಿಸರ ನಮ್ಮ ಪುಸ್ತಕದ ವಿಷಯ. ನಮ್ಮ ಕಣ್ಣಿಗೆ ಹೇಗೆ ಪ್ರಕೃತಿ ಕಂಡಿದೆಯೋ , ಹಾಗೆ ಬರೆದಿದ್ದೇವೆ. ಲಲಿತ ಪ್ರಬಂಧ, ಅನುಭವ ಕಥನ, ಚಾರಣದ ಟ್ರಾವೆಲಾಗು, ಕವನಗಳು - ಹೀಗೆ ಏನೇನೋ ಇವೆ, ಪರಿಸರದ ಬಗೆಗೆ.





ಬೆಂಗಳೂರಿನ ಬಸವನಗುಡಿಯ ಬಿ.ಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ, ನಮ್ಮ ಕನಸು "ಚಿತ್ರಚಾಪ" ನನಸಾಗ್ತಿದೆ. ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ, ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಪುಸ್ತಕ ಬಿಡುಗಡೆ ಮಾಡಿ ನಮ್ಮ ಬೆನ್ನು ತಟ್ಟುತ್ತಾರೆ. ನಮ್ಮ ಪುಸ್ತಕಕ್ಕೆ ಬೆಳಕಾಗಿರುವುದು "ಪ್ರಣತಿ ಪ್ರಕಾಶನ ". ಪ್ರಣತಿಯ ಉದ್ಘಾಟನೆಯೂ ಅಂದೇ.

ಫೆಬ್ರವರಿ ೧೦ ನೇ ತಾರೀಕು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನೀವೆಲ್ಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುತ್ತೀರಿ ಅನ್ನುವುದು ನಮ್ಮ ವಿಶ್ವಾಸ. ಬ್ಲಾಗುಗಳಲ್ಲೇ ಮಾತನಾಡುವುದು ಹೇಗೂ ಇದೆ. ಎಲ್ರೂ ಬನ್ನಿ , ಕೂತು ಮಾತಾಡೋಣ. ನಂಗೆ ಮತ್ತೇನು ಹೇಳಬೇಕು ಅಂತ ತೋಚುತ್ತಿಲ್ಲ.

ಮಂಗಳವಾರ, ಫೆಬ್ರವರಿ 05, 2008

ಜಂಗಮ ಬಿಂಬಗಳು - ೨

ಟ್ರಾಫಿಕ್ ಜಾಮ್ ಆಗಿತ್ತು. ನನ್ನ ಬೈಕಿನ ಪಕ್ಕದ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ, ಸುಮ್ಮನೆ. ಐದು ಹತ್ತು ನಿಮಿಷ ಕಳೆಯಿತು ಹಾಗೇ. ನಾನು ನೋಡುತ್ತಿದ್ದ ಹಾಗೆಯೇ ಆ ಹುಡುಗ ಬ್ಯಾಗಿಂದ ಮೆಲ್ಲನೆ ನೋಟ್ ಬುಕ್ ತೆಗೆದ. ಅರೇ, ಇಲ್ಲೇ ಹೋಮ್ ವರ್ಕ್ ಮಾಡುತ್ತಾನಾ? ಅಂತ ಅಂದುಕೊಂಡೆ. ಆದರೆ ಅವನು ನೋಟ್ ಬುಕ್ಕಿಂದ ಹಾಳೆ ಹರಿದ. ಅಡ್ಡ ಉದ್ದ ಮಡಚಿ ರಾಕೆಟ್ ಮಾಡಿದ. ಕಿಟಕಿ ಮೆಲ್ಲನೆ ಇಳಿಸಿ, ಬೀಸಿ ಒಗೆದ. ಅದು ಎಷ್ಟು ದೂರ ಹಾರಿತು ಅನ್ನುವುದು ನನಗೆ ಮುಖ್ಯವಾಗಲಿಲ್ಲ.
**********
ನಾನು ಆಕೆಯನ್ನು ಮೊದಲು ನೋಡಿದ್ದು ಆ ಜಾಗದಲ್ಲಿ. ತುಂಬ ಬೇಸರದಲ್ಲಿದ್ದೆ ಮೊನ್ನೆ. ಬೈಕು ಅವಳನ್ನು ನೋಡಿದಲ್ಲೇ ಹಾದು ಹೋಗುತ್ತಿತ್ತು. ಅತ್ತ ತಿರುಗಿದರೆ, ಅವಳು ಕಂಡಳು.
**********
ಹೊಸದರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರಾದರೆ ಸಾಕು, ನುಗ್ಗಬೇಕು ಅನ್ನಿಸುತ್ತಿತ್ತು. ಈಗೀಗ ಅದು ಕೆಂಪಾಗಿಯೇ ಇರಲಿ ಅನ್ನಿಸುತ್ತದೆ.

ಶುಕ್ರವಾರ, ಫೆಬ್ರವರಿ 01, 2008

ಒಂದು ಬೆಳಕಿನ ಕಥೆ.

ನಡೆದ ಘಟನೆಯೊಂದರ ಬರಹ ರೂಪ...

ಐದಾರು ಜನ ಗೆಳೆಯರು, ಭದ್ರಾವತಿಗೆ ಹೋಗಿದ್ದರು. ಸ್ನೇಹಿತನೊಬ್ಬನ ಮದುವೆಯ ಸಲುವಾಗಿ. ವಾಪಾಸು ಬರುತ್ತಾ ಬೆಂಗಳೂರಿಗೆ ರೈಲು ಪ್ರಯಾಣ. ಬೀರೂರು ಜಂಕ್ಷನಿನಲ್ಲಿ ಯಾವುದೂ ವೇಗದೂತಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ಇವರಿದ್ದ ರೈಲು ನಿಂತಿತು. ಐದತ್ತು ನಿಮಿಷಗಳಾದರೂ ರೈಲು ಬರದ್ದನ್ನು ಕಂಡು ಇವರ ಠೋಳಿ ಮೆಲ್ಲನೆ ಕೆಳಗಿಳಿಯಿತು. ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿಯಾಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ಅಷ್ಟರಲ್ಲಿ ಗುಂಪಿನಲ್ಲಿನ ಒಬ್ಬಾತನಿಗೆ ಪ್ಲಾಟ್ ಫಾರಂನ ಕೊನೆಯಲ್ಲಿ, ಸ್ವಲ್ಪ ದೂರದಲ್ಲಿ ನೇರಳೆ ಮರವೊಂದು ಕಂಡಿತು. ಮರು ಮಾತಿಲ್ಲದೇ ಎಲ್ಲರೂ ಅತ್ತ ಹೊರಟರು.

ಆ ಮರ ರೈಲ್ವೇ ಸ್ಟೇಶನ್ನಿಗೆ ಒತ್ತಿಕೊಂಡಂತ್ತಿದ್ದ ಮನೆಯೊಂದರ ಬೇಲಿಯೊಳಗಿತ್ತು. ಆ ಮನೆಯೆದುರೇ ಹದಿನೈದು - ಹದಿನಾರರ ವಯಸ್ಸಿನ ಹುಡುಗಿಯೊಬ್ಬಳು ಹರಕು ಟೇಬಲೊಂದರ ಮೇಲೆ, ಗಾಜಿನ ಡಬ್ಬವೊಂದರಲ್ಲಿ ನೇರಳೆ ಹಣ್ಣುಗಳನ್ನು ಇಟ್ಟುಕೊಂಡು ಕೂತಿದ್ದಳು. ಪಕ್ಕದಲ್ಲೊಂದು ಅಳೆಯುವ ಪುಟ್ಟ ಡಬ್ಬ. ಇವರು ಹೋಗಿ ನೇರಳೆ ಹಣ್ಣು ಬೇಕು ಅಂದಿದ್ದೇ, ಡಬ್ಬದಲ್ಲಿದ್ದ ಹಣ್ಣುಗಳನ್ನು ಅಳೆದು ಕೊಡಲು ರೆಡಿಯಾದಳು. ಆದರೆ ಈ ಪಟಾಲಂಗೋ, ಬಾಟಲಿಯ ಬಾಡಿದ ಹಣ್ಣುಗಳಿಗಿಂತ ಮರದಲ್ಲಿ ಜೋತಾಡುತ್ತಿರುವ ರಸಭರಿತ ಹಣ್ಣುಗಳ ಮೇಲೆಯೇ ಕಣ್ಣು. ಮರ ಹತ್ತಿಕೊಂಡು ಕೊಯ್ದುಕೊಳ್ಳುತ್ತೇವೆ ಅಂದಿದ್ದಕ್ಕ ಆಕೆ, ಇಲ್ಲ, "ಅಪ್ಪ ಅಮ್ಮ ಬೈತಾರೆ, ಎಷ್ಟು ಬೇಕಿದ್ದರೂ ಇಲ್ಲಿಯೇ ಕೊಂಡುಕೊಳ್ಳಿ, ನಿಮ್ಮ ದಮ್ಮಯ್ಯ, ಮರ ಹತ್ತಿ ಹಾಳು ಮಾಡಬೇಡಿ" ಅಂತ ಬೇಡಿಕೊಂಡಳು.

ಅವರಲ್ಲೊಬ್ಬ ಆಕೆಯನ್ನು ಮೆಲ್ಲನೆ ಸಮಾಧಾನಿಸತೊಡಗಿದ. "ನೋಡು, ಏನೂ ಚಿಂತಿಸಬೇಡ, ನಿಂಗೆ ತೊಂದರೆ ಕೊಡಲ್ಲ, ನಾವು ಹಣ್ಣು ಕೊಯ್ದುಕೊಂಡರೆ ಅದಕ್ಕೆ ದುಡ್ಡು ಕೊಡುತ್ತೇವೆ,ಮೋಸ ಮಾಡುವುದಿಲ್ಲ".. ಆಕೆ "ಅಲ್ಲ.. ಅಲ್ಲ.. "ಅನ್ನುವಷ್ಟರಲ್ಲಿ ಒಂದಿಬ್ಬರು ಬೇಲಿ ಹಾರಿ ಮರ ಹತ್ತಿಯಾಗಿತ್ತು. ಇಷ್ಟೊಂದು ಜನರ ಮುಂದೆ ಆಕೆ ಏನು ಮಾಡಲು ಸಾಧ್ಯ?, ಅಳುಮೋರೆ ಹಾಕಿಕೊಂಡು ಮರವನ್ನೇ ನೋಡುತ್ತ ನಿಂತಳು.

ಅಷ್ಟು ಹೊತ್ತಿಗೆ ಮತ್ತೊಬ್ಬ ಆಕೆಯನ್ನು ಮಾತಿಗೆಳೆದ. ಶಾಲೆಗೆ ಹೋಗುತ್ತೀಯಾ, ಏನು ಓದುತ್ತಿದ್ದೀ, ಯಾಕೆ ಈ ಹಣ್ಣುಮಾರುವ ಕೆಲಸ ಇತ್ಯಾದಿ ಇತ್ಯಾದಿ. ಆಕೆ ಒಂದು ಕಣ್ಣನ್ನ ಮರದತ್ತಲೇ ಇರಿಸಿ ಉತ್ತರಿಸುತ್ತಿದ್ದಳು. ನಾನು ಫಸ್ಟ್ ಪೀಯುಸಿ ಮುಗಿಸಿದ್ದೇನೆ, ಈ ಸಲ ಸೆಕೆಂಡ್ ಪೀಯುಸಿ, ಫೀಸ್ ಕಟ್ಟೋಕೆ ಮೂರುವರೆ ಸಾವಿರ ಬೇಕು, ಹಾಗಾಗಿ ಈ ಕೆಲ್ಸ. . ಎಷ್ಟು ದುಡ್ ಆಗತ್ತಮ್ಮಾ ನಿಂಗೆ ಇದ್ನ ಮಾರೋದ್ರಿಂದ ಅಂತ ಕೇಳಿದ್ದಕ್ಕೆ ಏನೋ ನೂರೋ ಇನ್ನೂರೋ ಆಗಿದೆ, ಆದಷ್ಟು ಆಗ್ಲಿ ಅಂತ ಮಾಡ್ತಾ ಇದೀನಿ ಅಂದ್ಲು ಅವಳು.

ಸ್ವಲ್ಪ ಹೊತ್ತಿಗೆ ಬೇಕಷ್ಟು ಹಣ್ಣುಗಳನ್ನು ತಿಂದು ಕೈ ಬಾಯಿ ನೇರಳೆ ಮಾಡಿಕೊಂಡ ಗೆಳೆಯರು ಅವಳ ಬಳಿ ಬಂದರು. ಮರ ಅರ್ಧ ಖಾಲಿಯಾಗಿತ್ತು. ದುಡ್ದೆಷ್ಟು ಕೊಡಬೇಕಮ್ಮಾ ಅಂದ ಒಬ್ಬ. ಇವಳಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮರವೋ ಅರ್ಧ ಖಾಲಿ. "ನೋಡಿ ಸಾರ್. . ನೀವೇ ಕೊಡಿ" ಅಂದಳು ಅವಳು, ಬೇರೇನೂ ತೋಚದೆ!

ಅವಳು ಅವರನ್ನು ನೋಡುತ್ತಿದ್ದ ಹಾಗೆ ಅವರಲ್ಲೊಬ್ಬ ಪಟಪಟನೆ ದುಡ್ಡು ಕಲೆಕ್ಟ್ ಮಾಡಿದ. ಆಕೆಯ ಬಳಿ ಬಂದು ಆ ದುಡ್ಡನ್ನ ಕೈಗಿಟ್ಟ. ನೂರರ ನೋಟುಗಳು. ಮೂರುವರೆ ಸಾವಿರ ರೂಪಾಯಿಗಳು. "ತಗೋ,ನಿನ್ನ ಫೀಸಿಗೆ ".

ಅವಳು ಅಕ್ಷರಶಃ ದಿಗ್ಭ್ರಾಂತಳಾಗಿದ್ದಳು. ಮಾತು ನಿಂತೇ ಹೋದಂತಾಗಿತ್ತು. ಅವಳಿಗೆ ಏನನ್ನೂ ಮಾತನಾಡಲು ಬಿಡದ ಇವರುಗಳು "ಇಟ್ಕೋ , ಚೆನ್ನಾಗಿ ಓದು, ಸುಮ್ಮನೇ ಈ ಬಿಸಿಲಲ್ಲಿ ಕೂತು ನೇರಳೇ ಹಣ್ಣು ಮಾರುವ ಕೆಲಸ ಬೇಡ" ಅಂದರು. ಆಕೆ ಏನೋ ಹೇಳಲು ಬಾಯೆತ್ತುವ ಹೊತ್ತಿಗೆ ಜೋರು ಸದ್ದು ಮಾಡುತ್ತಾ ರೈಲು ಹಾದು ಹೋಯಿತು.

ಎಲ್ಲರೂ ಲಗುಬಗೆಯಲ್ಲಿ ತಮ್ಮ ರೈಲಿನತ್ತ ಹೊರಟರು. ಆಕೆ ರೈಲು ಹೋಗುವವರೆಗೂ ಅಲ್ಲಿನ ಕಂಬವೊಂದಕ್ಕೆ ಒರಗಿ ನಿಂತು ಇವರನ್ನೇ ನೋಡುತ್ತ ನಿಂತಿದ್ದಳು, ಎತ್ತಿದ ಕೈ ಮತ್ತು ತುಂಬಿದ ಕಣ್ಣಿನೊಂದಿಗೆ.