ಶುಕ್ರವಾರ, ನವೆಂಬರ್ 30, 2018

ಭಾರತೀಯ ಕ್ರಿಕೆಟ್ ನ ಹೊಳೆಯುವ ರತ್ನ: ವಿರಾಟ್ ಕೋಹ್ಲಿ




ಸಚಿನ್ ತೆಂಡುಲ್ಕರ್ ನಂತರ ಭಾರತೀಯ ಕ್ರಿಕೆಟ್ ಗೆ ಸ್ಟಾರ್ ಡಂ ಒದಗಿಸಬಲ್ಲ ಒಬ್ಬ ಕ್ರಿಕೆಟರ್ ಸಿಕ್ಕಾನೇ ಎಂಬ ಪ್ರಶ್ನೆಗೆ ಕಾಲ ಉತ್ತರವನ್ನು ನೀಡಿಯಾಗಿದೆ. ಸಾಮರ್ಥ್ಯದಲ್ಲಿ ಸಚಿನ್ ಗೆ ಸರಿ ಸಾಟಿಯಾಗಿ ನಿಲ್ಲಬಲ್ಲ, ಇನ್ನು ಕೊಂಚ ಸಮಯ ಸರಿದರೆ ತೆಂಡುಲ್ಕರ್ ಅಂಕಿಅಂಶಗಳನ್ನೂ ದಾಟಿ ಮುಂದಕ್ಕೆ ಹೋಗಬಲ್ಲ ಪ್ರಬಲ ಪ್ರತಿಭೆ, ವಿರಾಟ್ ಕೊಹ್ಲಿ. ಭಾರತದ ಕ್ರಿಕೆಟ್ ಆಗಸದ ಮಿನುಗುತಾರೆಗಳಾದ ಸಚಿನ್, ದ್ರಾವಿಡ್, ಗಂಗೂಲಿ, ಲಕ್ಷ್ಮಣ್ ಮೊದಲಾದ ಅತಿರಥರುಗಳೆಲ್ಲ ಮಸುಕಾಗುವ ಹೊತ್ತಿಗೆ ಮುನ್ನೆಲೆಗೆ ಬಂದ ಕೊಹ್ಲಿ, ಇಂದು ವಿಶ್ವ ಕ್ರಿಕೆಟ್ ನ ಬಹುಮುಖ್ಯ ಹೆಸರು. ಮೂವತ್ತರ ಗಡಿಯನ್ನು ಮುಟ್ಟುತ್ತಿರುವ ವೇಳೆಗಾಗಲೇ ಕೋಹ್ಲಿ ಅನೇಕ ದಾಖಲೆಗಳ ಸರದಾರ. ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ, ಒಂದಾದ ಮೇಲೊಂದರಂತೆ ಎಂಟು ಟೆಸ್ಟ್ ಸರಣಿಗಳನ್ನು ಗೆದ್ದ, ಟೆಸ್ಟ್-ಒನ್ ಡೇ- ಟ್ವೆಂಟಿ ಮೂರರಲ್ಲೂ  ೫೦ ರ ಸರಾಸರಿಯನ್ನು ಹೊಂದಿರುವ ಏಕೈಕ ಆಟಗಾರ ಈತ.ಟೆಸ್ಟ್ ಮತ್ತು ಏಕದಿನಗಳೆರಡೂ ಸೇರಿದಂತೆ ೫೮ ಶತಕಗಳನ್ನು ತನ್ನ ಲೆಕ್ಕಕ್ಕೆ ಬರೆಸಿಕೊಂಡಿರುವ ಕೊಹ್ಲಿ , ಭಾವನೆಗಳ ತೀವ್ರ ಸ್ಪಂದನಕ್ಕೆ ಹೆಸರುವಾಸಿ.

ತಾಂತ್ರಿಕವಾಗಿ ಸೊಗಸಾದ ಆಟವನ್ನಾಡುವ ವಿರಾಟ್, ತನ್ನ ತಲೆಮಾರಿನ ಆಟಗಾರರುಗಳ ಪೈಕಿ ಅಗ್ರಗಣ್ಯ. ಆರಂಭದ ದಿನಗಳಿಂದಲೇ ತನ್ನ ಆಕ್ರಮಣಕಾರೀ ಆಟದಿಂದಾಗಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಈ ದೆಹಲಿಯ ಹೈದ, ನಿಧಾನವಾಗಿ ಯಶಸ್ಸಿನ ಉತ್ತುಂಗದ ಕಡೆಗೆ ಹೆಜ್ಜೆ ಹಾಕತೊಡಗಿದ್ದ. ಹತ್ತೊಂಬರ ವಯೋಮಾನದ ವಲ್ಡ್ ಕಪ್ ಗೆದ್ದ ಭಾರತ ತಂಡದ ಕಪ್ತಾನನಾಗಿದ್ದ ವಿರಾಟ್ ಕೋಹ್ಲಿ, ಆಗಿನಿಂದಲೇ ತನ್ನ ಮನಮೋಹಕ ಆಟಕ್ಕೆ ಹೆಸರುವಾಸಿ. ಭಾರತದ ಮುಖ್ಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಿ ನಾಲ್ಕು ವರ್ಷಗಳ  ನಂತರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶತಕ ಬಾರಿಸುವ ಮೂಲಕ ಮುನ್ನೆಲೆಗೆ ಬಂದ ಕೊಹ್ಲಿ, ನಂತರ ತಿರುಗಿ ನೋಡಿದ್ದೇ ಇಲ್ಲ. ಏಕ ದಿನ ಸರಣಿಗಳಲ್ಲೂ, ಟೆಸ್ಟ್ ನಲ್ಲೂ ಒಂದೇ ತೆರನಾದ ಆಟದ ಮೂಲಕ ಜನ ಮನ ಗೆದ್ದ ಈ ನಿಪುಣ ಆಟಗಾರ, ಅಂದಿನಿಂದ ಇಂದಿನವರೆಗೂ ಅದೇ ಫಾರ್ಮ್ ಮುಂದುವರಿಸಿಕೊಂಡು ಬಂದಿರುವುದು  ಅಚ್ಚರಿ. ಮೈದಾನದ ಎಲ್ಲ ಮೂಲೆಗಳಿಗೂ ಚೆಂಡನ್ನಟ್ಟುವ ವಿರಾಟ್- ವೇಗದ ಮತ್ತು ಸ್ಪಿನ್- ಎರಡೂ ಬಗೆಯ ಬೌಲಿಂಗ್ ಗನ್ನು ಕರಾರುವಕ್ಕಾಗಿ ಎದುರಿಬಲ್ಲ ಛಾತಿಯುಳ್ಳಾತ. ಧೋನಿಯ ನಂತರ ಭಾರತ ತಂಡದ ನೇತೃತ್ವ ವಹಿಸಿರುವ ಕೊಹ್ಲಿ ತನ್ನ ಬ್ಯಾಟಿಂಗ್ ನ ಯಶಸ್ಸಿನ ಜೊತೆ ಜೊತೆಗೇ ತಂಡದ ಯಶಸ್ಸಿಗೂ ಕಾರಣಕರ್ತ.

ಧೋನಿ ಕ್ಯಾಪ್ಟನ್ ಕೂಲ್ ಆಗಿಯೇ ಪ್ರಸಿದ್ಧರಾಗಿದ್ದರೆ, ಕೋಹ್ಲಿ ತನ್ನ ಭಾವನೆಗಳನ್ನು ನೇರವಾಗಿ ಹೊರಹಾಕುವ ಕಾರಣಕ್ಕಾಗಿಯೇ ಹೆಸರುವಾಸಿ. ತಪ್ಪಾಗಿ ಬೌಲ್ ಮಾಡಿದ ತನ್ನದೇ ತಂಡದ ಬೌಲರ್ ಗೆ ಮೈದಾನದಲ್ಲೇ ಬೈಯಲೂ ಕೂಡ ಕೋಹ್ಲಿ ಹೇಸುವುದಿಲ್ಲ. ಅದೇ ರೀತಿ ಎದುರು ತಂಡದ ಸ್ಲೆಡ್ಲಿಂಗ್ ಗೂ ಕೂಡ ವಿರಾಟ್ ಸೈ. ಹಿಂದು ಮುಂದಿಲ್ಲದೇ ನೇರವಾಗಿ ಮಾತನಾಡುವ ಕೊಹ್ಲಿಗೆ ಯಾರೂ ಎದುರಿಲ್ಲ. ಕೆಲ ಬಾರಿ ವಿದೇಶೀ ತಂಡಗಳು ಕೊಹ್ಲಿಯ ಈ ಕೆಚ್ಚಿನ  ಎದುರು ಕೊಂಚ ಮಂಕಾಗಿಯೇ ಕಾಣುವುದಿದೆ. ಆಕ್ರಮಣಕಾರೀ ಸ್ವಭಾವ ಕೊಹ್ಲಿಯ ರಕ್ತದಲ್ಲಿಯೇ ಇದೆ ಎನ್ನಿಸುತ್ತದೆ. ಕ್ರಿಕೆಟ್ ದೇವರಾದ ತೆಂಡುಲ್ಕರ್, ಕೋಹ್ಲಿಯ ಈ ಗುಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ ಎಂದ ಮೇಲೆ ಕೇಳಬೇಕೇ? "ವಿರಾಟ್ ಕೋಹ್ಲಿಯಲ್ಲಿ ಒಂದು ಬಗೆಯ ಕೆಚ್ಚು ಮತ್ತು ಆಕ್ರಮಣಕಾರೀ ಧೋರಣೆ ಇದೆ. ಎಲ್ಲರೂ ಇದನ್ನು ಸರಿ ಎನ್ನಲಾರರೇನೋ. ಆದರೆ, ಕೋಹ್ಲಿಯ ಈ ಗುಣವೇ ಇಂದು ಭಾರತ ತಂಡದ ಯಶಸ್ಸಿಗೆ ಕಾರಣವಾಗಿದೆ" ಎಂದಿದ್ದಾರೆ ಸಚಿನ್. ವಿರಾಟ್ ತಂಡಕ್ಕೆ ಸೇರಿಕೊಂಡಾಗಿನಿಂದಲೂ ಕೂಡ ಇದೇ ಬಗೆಯ ಮನಸ್ಥಿತಿಯನ್ನು ಹೊಂದಿದ್ದರೂ- ಆತನ ಬ್ಯಾಟಿಂಗ್ ಮೇಲಾಲಾಗೀ, ಕಪ್ತಾನಿಕೆಯ ಮೇಲಾಗಲೀ ಅದರಿಂದ ಯಾವ ನೇತ್ಯಾತ್ಮಕ ಪರಿಣಾಮ ಕೂಡ ಆಗಿಲ್ಲ. ಅಂಡರ್-೧೯ ಕಪ್ತಾನನಾಗಿದ್ದಾಗಲೇ ತನ್ನನ್ನು ತಾನು ಒರಟ ಎಂದು ಕರೆದುಕೊಂಡಿದ್ದ ಈತ! ಆಸ್ಟ್ರೇಲಿಯಾದಂತಹ ತಂಡಕ್ಕೆ, ಅವರದೇ ರೀತಿಯ ಸ್ಲೆಡ್ಜಿಂಗ್ ಮತ್ತು ಒರಟು ಆಟದ ಮೂಲಕ ಉತ್ತರ ಹೇಳಿದ ಭೂಪ, ಕೋಹ್ಲಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಚ ಮಟ್ಟಿನ ಮೃದು ತಂಡ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತದ ಕುರಿತಾದ ಮನಸ್ಥಿತಿ ಕೋಹ್ಲಿ ಕಟ್ಟಿರುವ ಈ ತಂಡದಿಂದಾಗಿ ಬದಲಾಗಿರುವುದಂತೂ ಹೌದು. ಸೌರವ್ ಗಂಗೂಲಿ ನಂತರ, ಕೆಚ್ಚಿನ ಕ್ಯಾಪ್ಟನ್ ಆಗಿ ಕಂಡುಬಂದಿದ್ದು ವಿರಾಟ್ ಕೋಹ್ಲಿಯೇ.

ತನ್ನ ಮೂಗಿನ ನೇರಕ್ಕೆ ಸರಿಹೋಗುವ ಕಾರ್ಯಗಳನ್ನಷ್ಟೇ ಕೋಹ್ಲಿ ಮಾಡುತ್ತಾನೆ ಎಂಬುದು ಕೂಡ ಆತನ ಮೇಲಿರುವ ಆಪಾದನೆಗಳಲ್ಲಿ ಒಂದು. ಅನಿಲ್ ಕುಂಬ್ಳೆ ಮತ್ತು ಕೋಹ್ಲಿ ಮಧ್ಯದ ಮನಸ್ತಾಪ ಭಾರತೀಯ ಕ್ರಿಕೆಟ್ ಜಗತ್ತಿನ ಕೆಟ್ಟ ಕಲಹಗಳಲ್ಲೊಂದು. ಜಗತ್ತಿನ ಅಪ್ರತಿಮ ಕ್ರಿಕೆಟಿಗರಾಗಿದ್ದ ಕುಂಬ್ಳೆಯ ಕೋಚಿಂಗ್ ಅನ್ನು- ಹೆಡ್ ಮಾಸ್ತರಿಕೆ ಎಂದು ವಿರೋಧಿಸಿದ್ದು ಕೋಹ್ಲಿ.  ಕೊನೆಗೂ ತನ್ನ ಹಠವನ್ನೇ ಸಾಧಿಸಿಕೊಂಡು ಅನಿಲ್, ಆ ಹುದ್ದೆಯಿಂದ ಕೆಳಗಿಳಿಯುವಂತೆ ಮಾಡಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಸರಿ ಬಂದಿರಲಿಲ್ಲ. ತಾವು ಹೊಸ ತಲೆಮಾರಿನ ಹುಡುಗರು, ತಮಗೆ ಹಳೆಯ ಶಿಸ್ತಿನ ಕೋಚಿಂಗ್ ನ ಅವಶ್ಯಕತೆ ಇಲ್ಲ ಎನ್ನುವ ರೀತಿ ವರ್ತಿಸಿದ್ದ ಕೋಹ್ಲಿ ಮತ್ತವನ ತಂಡದ ಬಗ್ಗೆ ಅಸಮಾಧಾನ ಹೊಂದಿದ್ದ ಎಲ್ಲರಿಗೂ ಮುಂದೇನಾಗುವುದು ಎಂಬ ಪ್ರಶ್ನೆ ಕಾಡಿತ್ತು. ಏಕೆಂದರೆ ಅನಿಲ್ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿತ್ತು. ವಿದೇಶಗಳಲ್ಲಿ ಸರಣಿ ಜಯಿಸಿತ್ತು.  ಆಡಳಿತ ಮಂಡಳಿಯಲ್ಲಿ ಕೋಹ್ಲಿ ಹಿಡಿತವೇ ಬಿಗಿಯಾಗಿದ್ದ ಕಾರಣಕ್ಕೆ, ಕುಂಬ್ಳೆ ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಗಿತ್ತು.ಆದರೆ ಕೊನೆಗೂ, ಗೆಲುವಿನ ಬಗೆ ಬೀರಿದ್ದು ವಿರಾಟ್. ಏಕೆಂದರೆ ರವಿ ಶಾಸ್ತ್ರಿ ಕೋಚ್ ಆಗಿ ಮುಂದುವರಿದ ಮೇಲೆ ಕೂಡ ಭಾರತ ತಂಡದ ಗೆಲುವಿನ ಓಟಕ್ಕೆ ಯಾವ ತಡೆ ಕೂಡ ಬೀಳಲಿಲ್ಲ.

ಗೆಲುವಿನ ಹಸಿವು ವಿರಾಟ್ ಪ್ರಮುಖ ಗುಣಗಳಲ್ಲೊಂದು. ಯಾವುದೇ ಎದುರಾಳಿಯಾದರೂ ಸರಿ, ಅವರುಗಳ ಮೇಲೆ ಪ್ರಹಾರ ಮಾಡುವಂತೆಯೇ ಎರಗುವ ಕೋಹ್ಲಿ, ಅದೇ ಮನಸ್ಥಿತಿಯಿಂದಾಗಿಯೇ ಭಾರತದ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಿದ್ದಾನೆ. ಬಾಂಗ್ಲಾದೇಶವೇ ಇರಲಿ, ಆಸ್ಟ್ರೇಲಿಯಾವೇ ಇರಲಿ- ಆಡುವ ಆಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ವರ್ತಿಸುವ ಕೊಹ್ಲಿ- ತನ್ನ ಕೆಚ್ಚನ್ನು ತಂಡಕ್ಕೂ ದಾಟಿಸಿದ್ದಾನೆ. ರವೀಂದ್ರ ಜಡೇಜಾ, ರೋಹಿತ್ ಶರ್ಮಾ, ಶಿಖರ್ ಧವನ್ ಮೊದಲಾದ ಆಟಗಾರರೂ ಕೂಡ ಕೋಹ್ಲಿಯಂತೆಯೇ ವರ್ತಿಸುವುದನ್ನು-ಆಡುವುದನ್ನು ಭಾರತೀಯ ಕ್ರಿಕೆಟ್ ನ ಅಭಿಮಾನಿಗಳು ಗಮನಿಸಿರುತ್ತಾರೆ. ಮೊದ ಮೊದಲು ತನ್ನ ಮುಂಗೋಪದಿಂದಾಗಿ ಕೋಹ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ಧೂ ಹೌದು. ಮೈದಾನದ ಆಚೆಯೆಲ್ಲೋ ಕೂತ ಯಾರದೋ ಮಾತಿಗೂ ಮೈ ಮೇಲೆ ಏರಿ ಹೋಗುವಂತೆ ವರ್ತಿಸುತ್ತಿದ್ದ ಕೋಹ್ಲಿ- ಅದೇ ಸಿಟ್ಟಿನಿಂದಾಗಿಯೇ ಬೇಗನೇ ತನ್ನ ವಿಕೆಟ್ ಕಳೆದುಕೊಂಡದ್ದೂ ಇದೆ. ಆದರೆ ಕ್ರಮೇಣವಾಗಿ ತನ್ನ ಸಿಟ್ಟನ್ನು ಹತ್ತಿಕ್ಕಿಕೊಂಡು, ಅದನ್ನು ಆಟದೊಳಗೆ ಅಳವಡಿಸಿಕೊಂಡ ವಿರಾಟ್, ಎದುರಾಳೀ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿ-  ಆ ಕಾರಣಕ್ಕಾಗಿಯೇ ಎಲ್ಲರಿಂದ ಮೆಚ್ಚುಗೆಗೂ ಒಳಗಾದ.

ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪುರಾತನ ಸಮಸ್ಯೆ ಎಂದರೆ, ಚೇಸಿಂಗ್ ನಲ್ಲಿ ಮುಗ್ಗರಿಸುವುದು. ಸಚಿನ್, ದ್ರಾವಿಡ್, ಗಂಗೂಲಿ ಕಾಲದಿಂದಲೂ ಕೂಡ ಈ ಸಮಸ್ಯೆಗೆ ಪರಿಹಾರ ಸರಿಯಾಗಿ ದಕ್ಕಿರಲಿಲ್ಲ. ಎಂತಹುದೇ ಎದುರಾಳಿ ಇರಲಿ, ರನ್ ಬೆನ್ನಟ್ಟುವಾಗ ಎಡವಿ ಬೀಳುವ ಭಾರತ ತಂಡದ ಚಟ, ಎಲ್ಲರಿಗೂ ಗೊತ್ತಿರುವಂತದ್ದೇ. ಬಾಂಗ್ಲಾ, ಜಿಂಬಾಬ್ವೆಯಂತಹ ತಂಡಗಳ ವಿರುದ್ಧ ಕೂಡ ಹೀನಾಯವಾಗಿ ಸೋತ ದಾಖಲೆ ಭಾರತದ್ದು. ವಿರಾಟ್ ಕೋಹ್ಲಿಯ ಆಗಮನದ ನಂತರ, ಆ ಭಯದಿಂದ ನಮ್ಮ ತಂಡ ದೂರವಾಗಿದೆ. ವಿರಾಟ್ ಕೋಹ್ಲಿ ತಂಡದಲ್ಲಿದ್ದಾಗ ಚೇಸ್ ಎಂದರೆ ಹೆದರಿಕೆ ಇಲ್ಲ ಎನ್ನುವಂತಾಗಿದೆ. ಕೋಹ್ಲಿ ತಂಡದಲ್ಲಿರುವಾಗ ಸುಮಾರು ೧೨೦ ಏಕದಿನ ಪಂದ್ಯಗಳನ್ನು ಗೆದ್ದಿರುವ ಭಾರತ, ಅದರಲ್ಲಿ ೭೨ ಪಂದ್ಯಗಳನ್ನು ಚೇಸ್ ಮಾಡಿಯೇ ಗೆದ್ದಿದೆ! ಮತ್ತು ಅಷ್ಟು ಪಂದ್ಯಗಳಲ್ಲಿ ಕೋಹ್ಲಿ ಸುಮಾರು ೯೫ ರ ಸರಾಸರಿಯಲ್ಲಿ ನಾಲ್ಕು ಸಾವಿರ ರನ್ ಗಳನ್ನು ತಾನೊಬ್ಬನೇ ಹೊಡೆದಿದ್ದಾನೆ. ಈ ಕಾರಣಕ್ಕಾಗಿಯೇ ಕೋಹ್ಲಿಗೆ 'ಚೇಸ್ ಮಾಸ್ಟರ್' ಎನ್ನುವ ಬಿರುದೂ ಲಭ್ಯವಾಗಿದೆ.

ತಂಡದ ನಾಯಕನಾದ ಮೇಲೆ ಆಟಗಾರನೊಬ್ಬನು ಒತ್ತಡಕ್ಕೆ ಒಳಗಾಗಿ, ಬ್ಯಾಟಿಂತ್ ಅಥವಾ ಬೌಲಿಂಗ್ ಗೆ ಸರಿಯಾದ ನ್ಯಾಯ ಸಲ್ಲಿಸುವುದಿಲ್ಲ ಎಂಬ ಮಾತಿದೆ. ಆದರೆ ಕೊಹ್ಲಿ, ಅದಕ್ಕೆ ವ್ಯತಿರಿಕ್ತ. ಕಪ್ತಾನನಾದ ಮೇಲೂ ಕೂಡ ೭೦ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಭೂಪ ಈತ!  ತಾನು ಕ್ಯಾಪ್ಟನ್ ಆಗಿರುವ ರಾಯಲ್ ಚಾಲೆಂಜರ್ಸ್ ಐಪಿಎಲ್ ತಂಡಕ್ಕೆ ಪ್ರಶಸ್ತಿ ಒದಗಿಸಿಕೊಡಲು ವಿಫಲನಾಗಿರುವುದು ವಿರಾಟ್ ಮೇಲಿರುವ ಆಪಾದನೆಗಳಲ್ಲೊಂದು. ಐಪಿಎಲ್ ಎಂಬ ಅಬ್ಬರದ ಆಟದಲ್ಲಿ ಮಾತ್ರ ಕೋಹ್ಲಿ ಎಂಬ ಕುದುರೆ ಗೆಲ್ಲಲು ಸಾಧ್ಯವಾಗಿಲ್ಲ! ವೈಯಕ್ತಿಕವಾಗಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹೊಡಿಬಡಿಯ ಆಟವನ್ನೇ ಆಡಿರುವ ಈತ, ಅಲ್ಲಿ ರನ್ನುಗಳ ರಾಶಿಯನ್ನೇ ಪೇರಿಸಿದ್ದರೂ ಕೂಡ ತಂಡಕ್ಕೆ ಫೈನಲ್ ತನಕ ತಲುಪಿಸಿಯೂ ಗೆಲ್ಲಿಸಲಾಗಿಲ್ಲ. ಆದರೆ ಈಗಾಗಲೇ ವಿಶ್ವಕಪ್ ಸೇರಿದಂತೆ ಹಲವಾರು ಪ್ರತಿಷ್ಠಿತ ಟೂರ್ನಿಗಳ ಗೆಲುವಿನ ರುಚಿ ಕಂಡಿರುವ ವಿರಾಟ್ ಗೆ, ಐ ಪಿ ಎಲ್ ಎಂಬುದು ದಕ್ಕದ ಕನಸಾಗಿರಲು ಸಾಧ್ಯವಿಲ್ಲ!

ತನ್ನ ಆಟಕ್ಕಾಗಿ ಐಸಿಸಿ ವರ್ಷದ ಕ್ರಿಕೆಟಿಗ (೨೦೧೨, ೨೦೧೭ ), ವಿಸ್ಡನ್ ಪ್ರಶಸ್ತಿ ( ೨೦೧೬, ೨೦೧೭) ಅರ್ಜುನ ಪ್ರಶಸ್ತಿ  ( ೨೦೧೩) ಪಡೆದುಕೊಂಡಿರುವ ವಿರಾಟ್, ಪದ್ಮಶ್ರೀ ಪುರಸ್ಕೃತನೂ ಹೌದು. ಜಾಹೀರಾತು ಜಗತ್ತಿನಲ್ಲಿರೂ ಮಿನುಗುತ್ತಿರುವ ಕೊಹ್ಲಿ, ಟೈಮ್ ಮ್ಯಾಗಜೀನ್ ನ ೨೦೧೮ ರ ನೂರು ಮಂದಿ ಪ್ರಭಾವಶೀಲಿ ವ್ಯಕ್ತಿಗಳ ಪಟ್ಟಿಯಲ್ಲೂ ಜಾಗ ಪಡೆದಿದ್ದಾನೆ. ಭಾರತೀಯ ಕ್ರಿಕೆಟ್ ನ ಅವಿಭಾಜ್ಯ ಅಂಗವಾಗಿರುವ ಕೊಹ್ಲಿಗೆ ಈಗ ಅರ್ಹವಾಗಿಯೇ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕೂಡ ಒಲಿದು ಬಂದಿದೆ. ಕ್ರಿಕೆಟ್ ಅನ್ನು ತಮ್ಮ ದೈನಿಕ ಭಾವಲೋಕದ ಭಾಗವಾಗಿಯೇ ಪರಿಗಣಿಸುವ ಭಾರತದ ಸಮಸ್ತ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ಇದು ಸಂತಸದ ವಿಷಯವೇ. ದಾಖಲೆಗಳ ಶೃಂಗದ ಮೇಲೆ ಕಣ್ಣಿಟ್ಟಿರುವ ಈ ಕೆಚ್ಚೆದೆಯ ಕಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಾಧನೆಗಳೊಂದಿಗೆ ಮುನ್ನುಗ್ಗಲಿ ಎಂಬುದು ಎಲ್ಲರ ಹಾರಯಿಕೆ.