ಶನಿವಾರ, ಆಗಸ್ಟ್ 25, 2018

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ- ಒಂದು ವಿಮರ್ಶೆ




ಸಿನಿಮಾವೊಂದು ಸರಳವಾಗಿ, ಬಿಡಿಬಿಡಿಯ ಭಾವ ಗುಚ್ಛಗಳೊಡನೆ ನಮ್ಮನ್ನ ಹೇಗೆ ಹಿಡಿದಿಡಬಹುದು ಎಂಬುದಕ್ಕೆ ಈ ಚಿತ್ರ ಸುಂದರ ಉದಾಹರಣೆ. ಕರಾವಳಿ ಕರ್ನಾಟಕದ ಸೊಗಡನ್ನ ತನ್ನೊಳಗೆ ಸೊಗಸಾಗಿ ಮಿಳಿತಗೊಳಿಸಿಕೊಂಡಿರುವ ಈ ಚಲನಚಿತ್ರ ನನಗೆ ಬಹಳ ಇಷ್ಟವಾಯಿತು. ನಾನು ಕರಾವಳಿಗನಾಗಿರುವುದು ಇದಕ್ಕೆ ಮೊದಲ ಕಾರಣ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕರ್ನಾಟಕದ ಉಳಿದ ಪ್ರಾಂತ್ಯದವರಿಗೆ ಈ ಚಿತ್ರ ನನ್ನಷ್ಟೇ ಇಷ್ಟವಾದೀತೇ ಎಂಬುದರ ಬಗ್ಗೆ ನನಗೆ ಪ್ರಶ್ನೆಗಳಿವೆ. ನಾನು ಓದಿದ ಶಾಲೆ, ನಾನು ಬೆಳೆದ ವಾತಾವರಣ ಈ ಚಿತ್ರದಲ್ಲಿನ ಸನ್ನಿವೇಶಗಳಿಗೆ ಹತ್ತಿರದಲ್ಲಿಯೇ ಇದ್ದ ಕಾರಣಕ್ಕಾಗಿ ಈ ಚಿತ್ರದ ಬಗ್ಗೆ ನನ್ನ ಪ್ರೀತಿ ಹೆಚ್ಚೇ ಇರಬಹುದು. ಆದರೆ, ಒಂದು ಉತ್ತಮ ಸಿನಿಮಾವನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವ ಯತ್ನವನ್ನು ರಿಶಭ್ ಶೆಟ್ಟಿ ನಿರ್ದೇಶನದ ಈ ಚಿತ್ರ ಮಾಡಿರುವುದಂತೂ ಹೌದು.

ಕಾಸರಗೋಡಿನ ಕನ್ನಡ ಶಾಲೆಯೊಂದರ ಸಮಸ್ಯೆಗಳನ್ನು ಹೇಳುವುದರ ಜೊತೆಗೆ ಎಳೆಯ ಪ್ರಾಯದ ಪ್ರೇಮ, ಊರಿನ ರಾಜಕೀಯ, ಸಾಮಾಜಿಕ ಸಮಸ್ಯೆಗಳು - ಇವೆಲ್ಲವನ್ನೂ ಚಿತ್ರಕಥೆಯೊಳಗೆ ಹೆಣೆದುಕೊಂಡು ರಸಮಯ ನಿರೂಪಣೆಯ ಜೊತೆಗೆ ಚಿತ್ರ ಸಾಗುತ್ತದೆ. ಲವಲವಿಕೆಯ ಸಂಭಾಷಣೆ ಮತ್ತು ಅಷ್ಟೇ ಲವಲವಿಕೆಯ ಸಂಗೀತ, ಚಿತ್ರದ ಧನಾತ್ಮಕ ಅಂಶಗಳು. ಹಾಡಿನ ಸಾಹಿತ್ಯ ಕೂಡ ಚೆನ್ನಾಗಿವೆ. ವಾಸುಕಿ ವೈಭವ್ ಸಂಗೀತ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತಕ್ಕೆ ಫುಲ್ ಮಾರ್ಕ್ಸ್.

ಸಣ್ಣಸಣ್ಣ ಘಟನೆಗಳು, ತುಂಡು ಸಂಭಾಷಣೆಗಳು, ತುಳು ನಾಟಕದ ಶೈಲಿಯ ಒನ್ ಲೈನರ್ ಗಳು ಚಿತ್ರದ ಜೀವಾಳ. ಹೆಚ್ಚು ಪರಿಚಯವಿಲ್ಲದ ಸ್ಥಳೀಯ ಕಲಾವಿದರುಗಳ ಚಂದದ ಅಭಿನಯ ಕೂಡ ಚಿತ್ರದ ಪ್ಲಸ್ ಪಾಯಿಂಟ್. ಮಲಯಾಳಂ ಭಾಷೆಯ ಹಿತಮಿತ ಬಳಕೆ, ಅಲ್ಲಲ್ಲಿ ಬಂದು ಹೋಗುವ ತುಳು ಭಾಷೆ ಚಿತ್ರಕ್ಕೆ ಸಹಜ ಚೌಕಟ್ಟನ್ನು ಒದಗಿಸಿವೆ. ದಕ್ಷಿಣ ಕನ್ನಡದ ಭಾಷೆಯನ್ನೇ ಇಡಿಯ ಚಿತ್ರದಲ್ಲಿ ಬಳಸಿಕೊಂಡಿರುವುದು ಅಲ್ಲಿನವರಿಗೆ ಖುಷಿಯಾದರೂ ಇತರರಿಗೆ ಸಣ್ಣ ತೊಡಕಾಗುವುದೋ ಏನೋ.

ಪಾತ್ರಧಾರಿಗಳಂತೂ- ಶಾಲೆಯ ಮಕ್ಕಳೂ, ಅಧ್ಯಾಪಕರೂ- ಎಲ್ಲರೂ ಕೂಡ ರೂ ಅಭಿನಯಿಸಿದಂತೆ ಕಾಣದೇ, ನೈಜವಾಗಿ ಕಾಣಿಸಿಕೊಂಡು ದೈನಿಕದ ಭಾಗದಂತೆಯೇ ಕಂಡು ನಮ್ಮ ಖುಷಿಯನ್ನು ಹೆಚ್ಚು ಮಾಡುತ್ತಾರೆ. ಹಾಗೆ ನೋಡಿದರೆ ಅನಂತನಾಗ್ ಪಾತ್ರವೇ, ಅರೇ- ಈ ಪಾತ್ರ ಈ ಚಿತ್ರದೊಳಕ್ಕೆ ಒಗ್ಗುತ್ತಿಲ್ಲವೇನೋ ಎಂದು ಒಂದು ಕ್ಷಣಕ್ಕೆ ಅನ್ನಿಸಿದರೂ ನಂತರ ನೋಡಿಸಿಕೊಂಡು ಹೋಗುತ್ತದೆ. ರಮೇಶ್ ಭಟ್ ಪಾತ್ರ ಅನಗತ್ಯವಾಗಿತ್ತು ಎಂದು ನನಗನ್ನಿಸಿತು. ಅವರಿಲ್ಲದೆಯೂ ಚಿತ್ರದ ಓಘಕ್ಕೇನೂ ತೊಂದರೆಯಾಗುತ್ತಿರಲಿಲ್ಲ. ಎಲ್ಲ ಪಾತ್ರಧಾರಿಗಳೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದ ಅವರುಗಳ ಬಗ್ಗೆ ಪ್ರತ್ಯೇಕ ವಿವರಣೆ ಅಗತ್ಯವಿಲ್ಲ.

ನೀವು ಕರಾವಳಿಯಲ್ಲಿ ನಿಮ್ಮ ಬಾಲ್ಯವನ್ನು ಕಳೆದಿರುವಿರದಾರೆ, ಅಲ್ಲಿನ ಸರ್ಕಾರೀ ಪ್ರಾಥಮಿಕ ಶಾಲೆಗಳಲ್ಲಿ ತೊಂಬತ್ತರ ದಶಕದ ಎಡಬಲದಲ್ಲಿ ನಿಮ್ಮ ಶಿಕ್ಷಣ ಆಗಿದ್ದರೆ ಈ ಚಿತ್ರ ನಿಮಗೆ ಮೃಷ್ಟಾನ್ನ ಭೋಜನ. ಇಲ್ಲದೇ ಹೋದರೂ ಕೂಡ, ಯಾವು ಕೊಂಬು ಕಹಳೆಗಳಿಲ್ಲದ ಪ್ರಾಮಾಣಿಕ ಚಲನಚಿತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ.

ಐದಕ್ಕೆ ನಾಲ್ಕೂವರೆ ಸ್ಟಾರ್ಸ್!
(ದಕ್ಷಿಣ ಕನ್ನಡಿಗನಾಗಿದ್ದಕ್ಕೆ ಅರ್ಧ ಮುಕ್ಕಾಲು ಸ್ಟಾರ್ ಎಕ್ಸ್ಟ್ರಾ ಅಂತ ಅಂದುಕೊಳ್ಳಿರಿ) :)