ಮಂಗಳವಾರ, ಏಪ್ರಿಲ್ 24, 2012

ತೂಗುಮಂಚದಲ್ಲಿ ಕೂತು...



ನ್ನ ಪ್ರೀತಿಯ ಕವಿ ಮತ್ತು ಬರಹಗಾರ ಎಚ್ಚೆಸ್ವಿಯವರು, ತೂಗುಮಂಚದಲ್ಲಿ ಕೂತು, ಮೇಘಶ್ಯಾಮ ರಾಧೆಗಾತು ಎಂಬ ಸೊಗಸಾದ ಕವಿತೆ ಬರೆದಿದ್ದಾರೆ. ಅದು ಭಾವಗೀತೆಯಾಗಿಯೂ ಜನಪ್ರಿಯವಾಗಿದೆ. ಹಾಡಿನಲ್ಲಿ ಬರುವಂತದ್ದೇ ಒಂದು ಒಂದು ತೂಗುಮಂಚ ನಮ್ಮ ಮನೆಯಲ್ಲಿ ಕೂಡ ಇದೆ. ಹೊಸದಾಗಿ ಅದನ್ನು ಕಂಡಾಗ ನಮಗೆ ಭಾರೀ ಆನಂದವಾಗಿತ್ತು. ಅಲ್ಲಿಯ ತನಕ ಸಿನಿಮಾದಲ್ಲಿ ಮಾತ್ರ ಕಂಡಿದ್ದ ಅಂತ ದೊಡ್ಡ ತೂಗುಮಂಚ ನಮ್ಮ ಮನೆಯೊಳಗೇ ಇತ್ತು! ಅಂತಿಂಥ ತೂಗುಮಂಚ ಅಲ್ಲ. ಪಾರ್ಕಲ್ಲೆಲ್ಲ ಇರುವ ಪುಟ್ಟ ಚಿಕಣಿ ಉಯ್ಯಾಲೆಗಳನ್ನೆಲ್ಲ ಕಲ್ಪಿಸಿಕೊಳ್ಳಲೇ ಬೇಡಿ. ತೂಗುಯ್ಯಾಲೆಯಲ್ಲಿ ಮೂರು ಜನ ಆರಾಮಾಗಿ ಕೂರಬಹುದಾಗಿತ್ತು, ಕೂರುವುದೇನು ಮಲಗಲೂ ಬಹುದಾಗಿತ್ತು. 

ಬಲವಾದ ಕಬ್ಬಿಣದ ಸರಪಳಿಗಳನ್ನು ಮಂಚದ ನಾಲ್ಕೂ ಮೂಲೆಗೆ ಜೋಡಿಸಲಾಗಿತ್ತು. ಪ್ರಾಯಶಃ ಆ ಮಂಚದ ಮೇಲೆ ಒಳ್ಳೆಯ ಕೆತ್ತನೆ ಕೆಲಸವನ್ನು ಯಾವುದೋ ಕಾಲದಲ್ಲಿ ಮಾಡಿರಬೇಕು. ಆದರೆ, ಅದರ ಹಲಗೆಗೆ ಬಣ್ಣ ಹೊಡೆದೂ ಹೊಡೆದೂ, ಬಣ್ಣದ ಲೇಪದ ಕೆಳಗೆಲ್ಲೋ ಇದ್ದಿರಬಹುದಾದ ಹೂಬಳ್ಳಿಯ ರಚನೆಯ ಅಂದಾಜು ಮಾತ್ರ ನಮಗಾಗುತ್ತಿತ್ತು. ಮೊದಲಿಗೆ ಕೂತ ಕೂಡಲೇ ಕಯ್ ಅಂತ ಸದ್ದು ಮಾಡುತ್ತಿದ್ದ ತೂಗುಯ್ಯಾಲೆ, ಅದರ ಅಗತ್ಯ ಸಂದುಗೊಂದುಗಳಿಗೆ ಎಣ್ಣೆ ಸ್ನಾನ ಮಾಡಿಸಿದ ಮೇಲೆ ಸುಮ್ಮನಾಯಿತು. ಆಮೇಲೆ, ತೂಗುಮಂಚದ ಬಾಬ್ತಿಗೆ ಅಂತಲೇ ಅಮ್ಮ ಕಾದೆಣ್ಣೆ ತೆಗೆದಿಡಲು ಆರಂಭಿಸಿದಳು.

ಟಿವಿ, ತೂಗುಮಂಚದ ಮುಂದೆಯೇ ಸ್ಥಾಪಿಸಲ್ಪಟ್ಟಿತು. ಟಿವಿ ನೋಡುವುದಕ್ಕಿಂತ ಮುಖ್ಯವಾಗಿ, ಯಾರಿಗೆ ತೂಗುಯ್ಯಾಲೆಯ ಸೀಟು ಸಿಗುತ್ತದೆ ಎಂಬುದು ಮುಖ್ಯವಾಗಿತ್ತು. ಎಲ್ಲ ಆರಾಮಾಗಿ ಅಲ್ಲಿ ಕೂಡಬಹುದಾಗಿದ್ದರೂ ಸುಮ್ಮನೆ ಅನಗತ್ಯ ಗೌಜಿ ನಡೆಯುತ್ತಿತ್ತು. ಅಪ್ಪ ಕೂಡ ಈ ಸೀಟಿನ ಕಾಂಪಿಟೀಶನ್ನಿಗೆ ಬೀಳುತ್ತಿದ್ದರು. ಅಮ್ಮ ಹಗಲು ಹೊತ್ತಿನಲ್ಲಿ ತೂಗುಮಂಚದಲ್ಲಿ ಕೂತು ನಿಧಾನಕ್ಕೆ ತೂಗಿಕೊಳ್ಳುತ್ತಿದ್ದರೆ ಏನೋ ಭಾರೀ ಗಹನವಾದ್ದನ್ನು ಆಲೋಚನೆ ಮಾಡುತ್ತಿದ್ದಾಳೆ ಮತ್ತು ನಾವು ಅಣ್ಣ ತಂಗಿ ಅವರಿಗೆ ತೊಂದರೆ ಕೊಡಬಾರದು ಎಂಬುದು ನಮಗೆ ಅರ್ಥವಾಗಿತ್ತು. ಕೆಲ ಬಾರಿ ಅವಳು ಒಂದಿಷ್ಟು ಹೂವು ತುಳಸಿ ಎಲ್ಲ ಗುಪ್ಪೆ ಹಾಕಿಕೊಂಡು ಅಲ್ಲಿ ಮಾಲೆ ನೇಯುತ್ತಿದ್ದಳು.  ಅಪ್ಪ ಸಂಜೆಗಳಲ್ಲಿ ಕನ್ನಡಕ ಏರಿಸಿ, ಏನೋ ಪುಸ್ತಕ ಹಿಡಿದು ಅಲ್ಲಿ ಕೂತರೆ, ನಾನು ಸದ್ದಿಲ್ಲದೇ ಕ್ರಿಕೆಟ್ ಆಡಲು ಹೋಗಬಹುದು.

ನನ್ನಮ್ಮನ ಅಪ್ಪ ನಮ್ಮ ಮನೆಗೆ ಬಂದಿದ್ದಾಗ, ಅವರಿಗೆ ಈ ತೂಗುಮಂಚ ಬಹಳ ಇಷ್ಟವಾಗಿ ಹೋಗಿತ್ತು. ಎಲ್ಲೋ ಪೇಟೆಯಲ್ಲಿ ಮನೆ ಮಾಡಿರಬೇಕು ಎಂದುಕೊಂಡು ಬಂದಿದ್ದ ಅವರಿಗೆ ನಮ್ಮ ಈ ಹಳ್ಳಿ ಮನೆ, ಇಲ್ಲಿನ ವಾತಾವರಣ ಖುಷಿ ಕೊಟ್ಟಿತ್ತು. ತೂಗುಮಂಚವನ್ನ ನಿಧಾನವಾಗಿ ತೂಗಿಕೊಳ್ಳುತ್ತಾ, ಕೆಳಗೆ ನನ್ನನ್ನೂ, ನನ್ನ ಪಕ್ಕದ ಮನೆಯ ಗೆಳೆಯ ಶಿವನನ್ನೂ ಕೂರಿಸಿಕೊಂಡು ಭಗವದ್ಗೀತೆಯ ಶ್ಲೋಕಗಳು, ಗಣಪತಿ ಉಪನಿಷತ್ತು ಇತ್ಯಾದಿ ವಿಚಾರಗಳ ಬಗ್ಗೆ ಪ್ರತಿದಿನ ಉಪನ್ಯಾಸ ನೀಡುತ್ತಿದ್ದರು. ನಮಗೆ ಇಷ್ಟವಿದ್ದರೂ, ಇಲ್ಲದೇ ಹೋದರೂ ಅವರು ಹೇಳಿದ್ದನ್ನು ಕಡ್ಡಾಯ ಕೇಳಿಸಿಕೊಳ್ಳಲೇ ಬೇಕಿತ್ತು. ಕೆಲಸಲ ಮಾರನೇ ದಿನ ಸರ್ಪ್ರೈಸ್ ಟೆಸ್ಟುಗಳೂ ನಡೆದು ನಾವು ಕಂಗಾಲಾಗುತ್ತಿದ್ದೆವು. ಅವರು ಹೇಳಿಕೊಟ್ಟ ಶ್ಲೋಕಗಳು ಬಾಯಿಗೆ ಬಾರದೇ ಬೈಸಿಕೊಳ್ಳುತ್ತಿದ್ದೆವು. ಅವರು ತೂಗುಮಂಚದ ಮೇಲೆ ಕೂತಿದ್ದು ಕಂಡರೆ ನಾನು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೆ.

ನಮ್ಮ ಮನೆಯಲ್ಲಿ ಖಂಡಿತ ಸಿನಿಮಾ ಶೂಟಿಂಗ್ ಮಾಡಬಹುದು ಎಂದು ನಾನಂತೂ ಕೇವಲ ತೂಗುಮಂಚದ ಕಾರಣದಿಂದಲೇ ನಿರ್ಧರಿಸಿಬಿಟ್ಟಿದ್ದೆಕಲಾತ್ಮಕ ಸಿನಿಮಾಗಳಲ್ಲಿ ಕಾಣುವ ಹಾಗಿನ, ತೂಗುಮಂಚದ ಸರಪಳಿಗೆ ಒರಗಿಕೊಂಡ ಹೀರೋಯಿನ್ನು, ಮೆಲ್ಲನೆ ಹಿಂದಿನಿಂದ ಬಂದು ಅಪ್ಪಿಕೊಳ್ಳುವ ಹೀರೋ.. ಇತ್ಯಾದಿ ಸೀನುಗಳು ನಮ್ಮ ಮನೆಯಲ್ಲಿ ಕೂಡ ಶೂಟಿಂಗು ಆಗಬಹುದು ಎಂಬ ಹಗಲುಗನಸುಗಳನ್ನು ಕೂಡ ಕಂಡಿದ್ದೆ. ಸುಮ್ಮನೆ ಯಾವಾಗಲೋ ಒಂದು ದಿನ ಅಪ್ಪನ ಬಳಿ ಯಾಕೆ ಸಿನಿಮಾ ಶೂಟಿಂಗು ಮಾಡಬಾರದು ಎಂದು ಕೇಳಿದ್ದಕ್ಕೆ, ಯಾವಾಗಲೂ ಸಿಟ್ಟಾಗದ ಆತ ಕೆಕ್ಕರಿಸಿಕೊಂಡು ನೋಡಿದ್ದ. ಅದು ಅಮ್ಮನವರೆಗೂ ಹೋಗಿ, ಅವಳಂತೂ ನಾನು ಸಂಪೂರ್ಣ ನೀತಿಗೆಡುತ್ತಿದ್ದೇನೆ ಇತ್ಯಾದಿ ಆರೋಪಗಳನ್ನೆಲ್ಲ ಮಾಡಿ, ರಾದ್ಧಾಂತವೇ ಆಗಿ ಹೋಯಿತು.

ದಿನಗಳೆದಂತೆ, ತೂಗುಮಂಚ ನಮ್ಮ ಮನೆಯಲ್ಲಿನ ಇತರೆಲ್ಲ ಸ್ಥಿರಾಸ್ತಿಗಳ ಗುಂಪಿಗೆ ಸೇರುತ್ತ ಹೋಯಿತು. ದಿನಾ ಅದನ್ನೇ ನೋಡಿ ನೋಡಿ, ಕೂತು ತೂಗಿಕೊಂಡು ಬೇಸರ ಬರಲು ಆರಂಭವಾಯಿತು. ಮೊದಲು ಮನೆಯ ಅತ್ಯಂತ ಪ್ರಮುಖ ಆಕರ್ಷಣೆಯಾಗಿದ್ದ ಅದು ಅನಂತರ ಪ್ರಮುಖ ಅಡಚಣೆಗಳಲ್ಲಿ ಒಂದಾಯಿತು. ಮನೆಗೆ ಬಂದವರು, ನಾವು ಮನೆಮಂದಿ ಎಲ್ಲ ಅದರ ಮೇಲೆ ಕೂತು ಎರ್ರಾಬಿರ್ರಿ ತೂಗಿ ತೂಗಿ ತೂಗುಮಂಚವನ್ನು ಹಿಡಿದುಕೊಂಡಿದ್ದ ಜಂತಿ ಕುಸಿಯತೊಡಗಿತು. ಸಿಮೆಂಟು ಹಿಸಿದು, ಗೋಡೆಯಲ್ಲಿ ದೊಡ್ಡ ಡೊಗರಾಯಿತು. ಏನೇ ಸಿಮೆಂಟು ತಂದು ಹಚ್ಚಿದರೂ ಮತ್ತೆ ಮತ್ತೆ ಅದು ಕಿತ್ತು ಹೋಗುತ್ತಿತ್ತು.
ಅಲ್ಲದೇ ಈ ತೂಗುಮಂಚ, ಜಗಲಿಯ ಮಧ್ಯದಲ್ಲಿ ಇದ್ದಿದ್ದರಿಂದ, ಓಡಾಟಕ್ಕೆ ಬಹಳ ತೊಂದರೆ ಆಗುತ್ತಿತ್ತು. ಅಪ್ಪ ಅದನ್ನ ಅಲ್ಲಿಂದ ಎತ್ತಂಗಡಿ ಮಾಡಿ, ಸರಪಳಿ ಕಿತ್ತು ತೆಗೆದು ಉಗ್ರಾಣದ ಮೂಲೆಗೆ ಹಾಕಿ ಬಿಟ್ಟರು. ತೂಗುಮಂಚವನ್ನು ಕಳೆದುಕೊಂಡ ಜಗಲಿ ಈಗ ವಿಸ್ತಾರವಾಗಿ ಕಾಣಲು ತೊಡಗಿತು. ಅಮ್ಮನಿಗೆ ಜಗಲಿ ಗುಡಿಸಿ ಒರೆಸಲು ಭಾರೀ ಆರಾಮಾಗಿ, ಮೊದಲೇ ಯಾಕೆ ಅದನ್ನ ತೆಗೆಯಲಿಲ್ಲ ಎಂದು ಬೈದುಕೊಂಡರು. ಹುಡುಗಾಟಿಕೆಯ ಪ್ರಾಯ ದಾಟಿದ ನನಗೂ, ತೂಗುಮಂಚ ಮೂಲೆಗೆ ಹೋಗಿದ್ದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ, ಏನೂ ಅನ್ನಿಸಲಿಲ್ಲ. ಹಗಲು ಮನೆಯಲ್ಲಿದ್ದರೆ ತಾನೆ, ತೂಗುಯ್ಯಾಲೆಯ ಉಲ್ಲಾಸ?

ತೂಗುಮಂಚಕ್ಕೆ ಅಜ್ಞಾತವಾಸ ಆರಂಭವಾಗಿ ಎರಡು ಮೂರು ವರ್ಷಗಳೇ ದಾಟಿದ್ದವು. ಅಲ್ಲೆಲ್ಲೋ ಮೂಲೆಯಲ್ಲಿ ಬಿದ್ದುಗೊಂಡಿದ್ದ ಅದನ್ನು ನೋಡುವವರೂ ಇರಲಿಲ್ಲ. ಆದರೆ ಬೇಸಗೆಯ ರಜೆಯಲ್ಲಿ ನಮ್ಮ ಮನೆಗೆ ಬರುವ ನೆಂಟರ ಮಕ್ಕಳಿಗೆ ಮಾತ್ರ ಈ ಮಂಚದ ಅನುಪಸ್ಥಿತಿ ಕಾಡತೊಡಗಿತು. ಪದೇ ಪದೇ ಬಹಳಷ್ಟು ಜನ ತೂಗುಮಂಚದ ಪುನರ್ ಪ್ರತಿಷ್ಠಾಪನೆಗೆ ಒತ್ತಡ ತಂದಿದ್ದರಿಂದ ಅಪ್ಪ ಅದನ್ನ ನಮ್ಮ ಅಡುಗೆ ಮನೆ ಪಕ್ಕದ, ತೆರೆದ ಜಾಗದಲ್ಲಿ ಮತ್ತೆ ತೂಗು ಹಾಕಲಾಯಿತು. ನಮ್ಮ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳ ದಿನ, ಇಲ್ಲವಾದರೆ ಅಕ್ಕ ಪಕ್ಕದ ಮನೆಯ ಮತ್ತೆ ಮಕ್ಕಳು ಅದರ ಮೇಲೆ ಜೀಕಿಕೊಂಡು ಗೌಜಿಗಲಾಟೆ ಮಾಡುವುದು ನಡೆಯಿತು. ಅದೂ ಕೆಲ ದಿನಗಳು,ಅಷ್ಟೆ.

ಈಗ ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೇ ಇದ್ದಾರೆ. ತೂಗುಮಂಚದ ಮೇಲೆ ಅಮ್ಮ ಹಳೆಯ ಕಿತ್ತು ಹೋದ ಬಕೇಟಿನಲ್ಲಿ ಉಪ್ಪು ಹುಣಸೇಹಣ್ಣು ಹಾಕಿಟ್ಟಿದ್ದಾಳೆ. ಒಂದು ನಾಲ್ಕು ಬುಟ್ಟಿಗಳೂ, ಹಳೆಯ ಬಟ್ಟೆಯ ಗಂಟೂ ಅಲ್ಲಿ ಆಶ್ರಯ ಪಡೆದಿದೆ. ಕತ್ತಿ, ಸುತ್ತಿಗೆಯಂತಹ ಹತಾರಗಳನ್ನ ಇಡಲೂ ತೂಗುಯ್ಯಾಲೆಯೇ ಜಾಗ. ಸರಪಳಿಗೆ ಮತ್ತೆ ನಿಧಾನಕ್ಕೆ ತುಕ್ಕು ಹಿಡಿಯುತ್ತಿದೆ. ಮನೆಯಲ್ಲಂತೂ ಮಕ್ಕಳಿಲ್ಲ, ಅಕ್ಕಪಕ್ಕದಲ್ಲೂ ಇಲ್ಲ. ಇದ್ದವರೂ ಬರಿಯ ಓದಿನ ಪ್ರಪಂಚದೊಳಗೆ ಮುಳುಗಿಕೊಂಡು ಇದನ್ನೆಲ್ಲ ಮರೆತಿದ್ದಾರೆ.

ಎಲ್ಲಾದರೂ ಜೋರು ಗಾಳಿ ಬೀಸಿದರೆ, ತೂಗುಮಂಚ ತನ್ನನ್ನು ತಾನೇ ಸಣ್ಣಗೆ ತೂಗಿಕೊಳ್ಳುತ್ತದೆ. ಆಗ ಅದರ ಮೇಲಿಟ್ಟ ಯಾವುದೋ ಖಾಲಿ ಬುಟ್ಟಿಯೋ, ಕೆಲ ಬಾಳೆ ಎಲೆಗಳೋ ಕೆಳಗೆ ಬಿದ್ದು ಉರುಳಾಡುತ್ತವೆ. ಅಮ್ಮ ಬೈದುಕೊಂಡು ಅವನ್ನೆಲ್ಲ ಮತ್ತೆ ಸರಿಪಡಿಸಿಟ್ಟು ನಿಟ್ಟುಸಿರು ಬಿಡುತ್ತಾಳೆ. ತೂಗುಮಂಚ,ಮತ್ತೆ ನಿಶ್ಚಲವಾಗುತ್ತದೆ.



 (ವಿಜಯ ಕರ್ನಾಟಕ ಸಾಪ್ತಾಹಿಕ ಲವ್ ಲವಿಕೆಯಲ್ಲಿ ಪ್ರಕಟವಾದ ಬರಹ)

ಸೋಮವಾರ, ಏಪ್ರಿಲ್ 09, 2012

ಬಿಟ್ಟೆನೆಂದರೂ ಬಿಡದೀ ಮಾಯೆ!

ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು.ಆದರೆ ಆ ಆಸೆಯನ್ನು ಮನೆಯಲ್ಲಿ ಹೇಳಿಕೊಳ್ಳಲು ಧೈರ್ಯವಿಲ್ಲದೇ ಯಾವುದೋ ಒಂದು ಕೋರ್ಸು ಮಾಡಿ ಮುಗಿಸಿದೆ. ಒಂದಿಷ್ಟು ದಿನ ಅದೂ ಇದೂ ಕೆಲಸ ಮಾಡಿದ್ದಾಯಿತು. ಆದರೆ, ಮಾಧ್ಯಮಕ್ಕೆ ಸೇರಿಕೊಳ್ಳಬೇಕು ಎಂಬ ಹಪಹಪಿ ಬಿಡಲಿಲ್ಲ. ಕೊನೆಗೆ ಚಟ ಮತ್ತು ಹಠ ಬಿಡದೇ ಒಂದು ಟಿವಿ ಚಾನಲ್ಲಿನಲ್ಲಿ ಹೇಗೋ ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ಡೆಸ್ಕು, ನಂತರ ನಿಧಾನಕ್ಕೆ ರಿಪೋರ್ಟಿಂಗು ಮಾಡಲು ತೊಡಗಿದೆ. ಮೊದಮೊದಲಿಗೆ ಭಾರೀ ಖುಷಿಯಾಯಿತು. ಆದರದು ಕೆಲವೇ ದಿನ. ಯಾವಾಗ ಮದುವೆ, ಮುಂಜಿಗೆ ಹೋದಲ್ಲೆಲ್ಲ ನನ್ನನ್ನ ಸೈಡಿಗೆ ಕರೆದು ದೇಶದ,ರಾಜ್ಯದ ಆಗುಹೋಗುಗಳ ಬಗ್ಗೆ ಘನವಾದ ಚರ್ಚೆ ಶುರು ಮಾಡಿದರೋ, ಆಗ ವರದಿಗಾರನೊಬ್ಬನ ತೊಂದರೆಗಳು ಅರಿವಾಗುತ್ತ ಹೋದವು. ಯಾರದೋ ಸಚಿವ ಸ್ಥಾನ ಹೋಗುವ ಬಗ್ಗೆಯೋ, ಇನ್ನಾರದೋ ಮನೆ ಮೇಲೆ ಐಟಿ ರೈಡ್ ಆಗುತ್ತದಂತೆ ಹೌದಾ ಎಂದೆಲ್ಲ ಕೇಳಿ, ನಾನು ಅದರ ಬಗ್ಗೆ ಗೊತ್ತಿಲ್ಲ ಎಂದು ತಲೆಯಲ್ಲಾಡಿಸಿದರೂ ಬಿಡದೇ, ನಿಮಗೆ ಗೊತ್ತಿಲ್ಲದ್ದು ಏನಿರತ್ತೆ ಹೇಳಿ, ನೀವು ಸುಮ್ಮನೆ ಗುಟ್ಟು ಮಾಡುತ್ತಿದ್ದೀರಿ ಅಲ್ವಾ? ಏನೋ ಭಾರೀ ಡೆವಲಪಮೆಂಟ್ ಇರಬೇಕು ಸದ್ಯದಲ್ಲೇ ಎಂದು ನನ್ನ ಮೌನಕ್ಕೂ ಅರ್ಥ ಕಲ್ಪಿಸುತ್ತಿದ್ದರು.

ಒಂದಿಷ್ಟು ದಿನ ಈ ಕೆಲಸ ಮಾಡಿದ ಮೇಲೆ, ಇದ್ಯಾಕೋ ನನಗೆ ಹೇಳಿಸಿದ್ದಲ್ಲ ಎಂದು ಅನುಮಾನ ಬರಲು ಆರಂಭವಾಯಿತು. ಆದರೆ ಅಷ್ಟು ಸುಲಭಕ್ಕೆ ಹೊರಬರಲು ಸಾಧ್ಯವಿಲ್ಲದ ಸೆಳೆತ ಮಾಧ್ಯಮದಲ್ಲಿದೆ. ಹೀಗಾಗಿ ಆಲೋಚನೆ ಮಾಡಿ, ಟೀವಿ ಚಾನಲ್ಲಿನಲ್ಲೇ ಕೆಲಸವನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ, ವರದಿಗಾರನಾಗಿಯಲ್ಲ. ಮತ್ತೊಂದು ಚಾನಲ್ಲಿನಲ್ಲಿ ಧಾರಾವಾಹಿಗಳ ವಿಭಾಗಕ್ಕೆ ಸೇರಿಕೊಂಡೆ. ಯಾರೋ ಹೇಳಿದ್ದರು, ಅಲ್ಲಿ ಸ್ವಂತಿಕೆಗೆ, ಕ್ರಿಯೇಟಿವಿಟಿಗೆಲ್ಲ ಜಾಸ್ತಿ ಅವಕಾಶ ಇದೆ, ಕಥೆ ಗಿಥೆ ಬರಕೊಂಡು ಹಾಯಾಗಿರಬಹುದು ಇತ್ಯಾದಿ. ಆದರೆ, ನಾನು ಬೆಂಕಿಯಿಂದ ಬಾಣಲೆಗೆ ಹೈಜಂಪ್ ಮಾಡಿದ್ದೇನೆ ಅನ್ನೋದು ಗೊತ್ತಾಗುವುದಕ್ಕೆ ಹೆಚ್ಚೇನೂ ಕಾಲ ಬೇಕಾಗಲಿಲ್ಲ.

ಧಾರಾವಾಹಿಗಳ ಬಗ್ಗೆ ನನಗೆ ಪ್ರೀತಿ ಇಲ್ಲ ಅಂತೇನೂ ಅಲ್ಲ. ಮಹಾಭಾರತದಿಂದ ತೊಡಗಿ ಮಾಯಾಮೃಗದವರೆಗೂ ಸುಮಾರು ಧಾರಾವಾಹಿಗಳನ್ನ ಬೆನ್ನುಬಿಡದೇ ನೋಡಿದ್ದು ಹೌದು. ಆಮೇಲೆ ಆ ಬಗೆಗಿನ ಆಸಕ್ತಿಯೇ ಕುಂದಿಹೋಗಿತ್ತು. ಆದರೆ ಈಗ ಮತ್ತೆ ಸೀರಿಯಲ್ಲುಗಳ ಬೆನ್ನು ಬೀಳುವ ಗ್ರಹಚಾರ ಆರಂಭವಾಯಿತು. ನಮ್ಮ ಚಾನಲ್ಲಿನ ಸೀರಿಯಲ್ಲುಗಳು,ಎದುರಾಳೀ ವಾಹಿನಿಗಳ ಸೀರಿಯಲ್ಲು ಅವುಗಳ ಟಿ,ಆರ್,ಪಿ ಎಷ್ಟು,ನಮಗೆ ಹೆಚ್ಚು ಬಂದಿದ್ದರೆ ಏನು ಕಾರಣ,ಕಡಿಮೆಯಾದರೆ ಯಾಕೆ? ಅದರ ಕಥೆ ಏನು? ಅಲ್ಲಿ ಸೊಸೆಯನ್ನು ಅತ್ತೆ ಕೊಂದಳಾ ಇಲ್ಲವಾ?ಕಳೆದು ಹೋಗ ಮಗ ಸಿಕ್ಕನೋ ಇಲ್ಲವೋ? ಆ ಚಾನಲ್ಲಿನ ಸೀರಿಯಲ್ಲಿನಲ್ಲಿ ಮಂತ್ರಶಕ್ತಿಯಿಂದ ಸತ್ತು ಮೂರು ದಿನದ ಮೇಲೆ ಅವಳ್ಯಾವಳೋ ಬದುಕಿದ್ದಕ್ಕೆ ನಮ್ಮ ಸೀರಿಯಲ್ಲಿನ ರೇಟಿಂಗು ಕಡಿಮೆಯಾಯಿತಾ? ನಮ್ಮ ಧಾರಾವಾಹಿಯಲ್ಲಿ ನಾವು ಗಂಡ ಹೆಂಡತಿ ಅನ್ಯೋನ್ಯವಾಗಿದ್ದಾರೆ ಎಂದು ತೋರಿಸಿದ್ದು ತಪ್ಪಾ? ಹೀಗೆ ಪ್ರಾಯಶಃ ತಲೆ ಬುಡ ಇದ್ದಿರಬಹುದಾದ,ಆದರೆ ನಮಗೆ ಅರ್ಥವಾಗಲು ಕಷ್ಟವಾಗುತ್ತಿದ್ದ ವಿಚಾರಗಳನ್ನು ಗುಡ್ಡೆ ಹಾಕಿಕೊಂಡು ಅವುಗಳ ಪೋಸ್ಟ್ ಮಾರ್ಟಂ ಮಾಡಬೇಕಿತ್ತು.

ದಿನವೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಂದ ಸೀರಿಯಲ್ಲುಗಳ ಟೇಪು ನೋಡಿ, ಅಲ್ಲಿರಬಹುದಾದ ತಪ್ಪುಗಳನ್ನ ಹುಡುಕಿ, ಸರಿಪಡಿಸಲು ಹೆಣಗುವುದು ಒಂದು ತೂಕವಾದರೆ, ಹೊಸ ಸೀರಿಯಲ್ಲು ಮಾಡುತ್ತೇವೆ ಅಂತ ಕಥೆ ಹಿಡಿದುಕೊಂಡು ಬರುವವರನ್ನು ನಿಭಾಯಿಸುವುದು ಮತ್ತೊಂದು ತೂಕ! ಯಾರ ಬಳಿ ಬೇಕಾದರೂ ಅದ್ಭುತ ಕಥೆ ಇರುವ ಸಾಧ್ಯತೆ ಇರುವುದರಿಂದ, ನಿರ್ಲಕ್ಷ್ಯ ಮಾಡುವ ಹಾಗೇ ಇಲ್ಲ.

ತಮಿಳು ಕಥೆಗಾರನೊಬ್ಬ ಒಂದು ದಿನ ಬಂದು ತನ್ನ ಸೀರಿಯಲ್ಲಿನ ಕಥೆ ಹೇಳುತ್ತಿದ್ದ. ಮೊದಲ ವಾರವೇ ಲವ್ ಮ್ಯಾರೇಜು, ಅತ್ತೆ ವಿರೋಧ, ಸೊಸೆಗೆ ಹಿಂಸೆ ಇತ್ಯಾದಿ ಕಥೆಯೆಲ್ಲ ಇದ್ದು ಹೆಂಗಳೆಯರ ಕರುಳನ್ನ ಕಿತ್ತು ಕೈಯಲ್ಲಿ ಕೊಟ್ಟು ಅಳಿಸುವುದಾಗಿ ಶ್ರೀಯುತ ನಿರ್ದೇಶಕರು ನಮಗೆ ಪ್ರಾಮಿಸ್ ಮಾಡುತ್ತಿದ್ದರು. ನಮ್ಮಲ್ಲಿನ ಬರಹಗಾರರ ಬಗ್ಗೆ ಯಾವತ್ತೂ ವಿಶ್ವಾಸ ಇಟ್ಟಿರದ ಆ ಮಹಾನುಭಾವರು ಚೆನ್ನೈನಿಂದ ಕಥೆಗಾರರನ್ನೂ, ಕಥೆಗಳನ್ನೂ ಆಮದು ಮಾಡಿಕೊಳ್ಳುತ್ತಾರಂತೆ.

“ಸರ್.. ಅವ್ಳು ಮೆಲ್ಲ ವರುವಳ್ ಸಾರ್.. ಕೈಲೆ ನೈಪು.. ಮೆಲ್ಲ ಅಂದರೆ ಮೆಲ್ಲ ವರ್ತಾಳೆ.. ನೈಪು ಕ್ಲೋಸಪ್ ಶಾಟ್ ಸಾರ್.. ಅಂಗೇ ಪ್ಯಾನು.. ಮುಕ ರಿವೀಲ್ ಪಣ್ಣಕೂಡಾದ್ ಸಾರ್.. ಅದು ತೋರಿಸಲ್ಲ.. ಗೊತ್ತು ಸರ್ ಎನಕು.. ಅಲ್ಲಿ ಹೀರೋಯಿನ್ ಕೂತು ಬಿಟ್ಟಿದಾಳೆ.. ನೈಫು ಬ್ಯಾಕ್ ಸೈಡಿಂದ ಬರತ್ತೆ ಸರ್.. ಹೀರೋಯಿನ್ ಶಾಟ್, ನೈಫ್ ಶಾಟ್.. ಫ್ರೈಡೇ ಎಪಿಸೋಡ್ ಎಂಡ್ ಸಾರ್!  ವೊಳ್ಳೆ ಟೆನ್ಶನ್ ಅಲ್ಲ ಸಾರ್?” ಎಂದ. ಸೋಮವಾರದ ಎಪಿಸೋಡ್ ಏನು ಎಂದು ತಡೆಯಲಾರದೆ ಕೇಳಿದೆ ನಾನು. ಸಾರ್, ಅದು ಸುಮ್ಮಗೆ ಸಾ.. ಫ್ರೈಡೇ ಕಿಕ್ ಗೆ! ಮಂಡೇ ಓಪನಿಂಗ್ ಲೆ ಅತ್ತೆ ವಂದು ಮೆಲ್ಲ ಆಪಲ್ ಕಟ್ಟ್ ಮಾಡ್ತಾರೆ ಸಾರ್ ನೈಪ್ ಲೆ.. ಅಂದ ಮಹಾಶಯ! ಪುಣ್ಯಕ್ಕೆ ನನ್ನ ಪಕ್ಕದಲ್ಲಿ ಯಾವುದೇ ಚೂರಿ ಇರಲಿಲ್ಲ.

ಇಂತಹ ಕಥೆಗಳನ್ನು ಪ್ರಾಯಶಃ ವಾರಕ್ಕೆ ಹತ್ತಿಪ್ಪತ್ತು ಕೇಳಿ ಕೇಳಿ, ಅಥವಾ ನೋಡೀ ನೋಡೀ ನವರಸಗಳನ್ನು ಗುರುತಿಸುವ ಇಂದ್ರಿಯಗಳು ನನ್ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿವೆ. ಮನೆಯಲ್ಲಿ ಹೆಂಡತಿ ಒಂದು ದಿನ ಏನೋ ಬೇಸರ ತೋಡಿಕೊಳ್ಳುತ್ತಿದ್ದಳು. ನಾನೋ, ನನ್ನ ಎದುರಾಳೀ ವಾಹಿನಿಯಲ್ಲಿನ ಸೀರಿಯಲ್ ನ ಗಮನವಿಟ್ಟು ನೋಡುತ್ತಿದ್ದೆ. ಮಾರನೇ ದಿನ ಬಾಸು ಕಥೆ ಕೇಳುವ ಎಲ್ಲ ಸಾಧ್ಯತೆಗಳಿದ್ದವು. ನಿನಗೆ ಪ್ರಾಯಶಃ ನನ್ನ ಕಷ್ಟ ಅರ್ಥ ಆಗೋಕೆ ಅಲ್ಲಿ ಸೀರಿಯಲ್ಲಿನಲ್ಲಿ ತೋರಿಸೋ ಹಾಗೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ಕು ಬೇಕೇನೋ ಅಲ್ಲವಾ ಎಂದು ಬಾಗಿಲು ಧಡಾರನೆ ಹಾಕಿಕೊಂಡಳು. ಅವಳು ಬಾಗಿಲು ಹಾಕಿಕೊಳ್ಳೋದಕ್ಕೋ ಸೀರಿಯಲ್ಲಿನಲ್ಲಿ  ಸೊಸೆ ಬಾಗಿಲು ಹಾಕಿಕೊಳ್ಳೋದಕ್ಕೂ ಸರಿಯಾಗಿ ಹೊಂದಿಕೆಯಾಯಿತು. ನಾನು ಬ್ರೇಕ್ ಬಂದ ಕೂಡಲೇ ಎದ್ದು ಹೋಗಿ ಹೆಂಡತಿಯ ಸಮಾಧಾನ ಮಾಡಿದೆ.

ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದಳು, ನಮ್ಮ ಚಾನಲ್ಲಿನ ಒಂದು ಸೀರಿಯಲ್ಲು ಆಕೆಗೆ ಬಹಳ ಫೇವರಿಟ್ಟು. ಮುಂದೇನಾಗತ್ತೆ ಅದರ ಕಥೆ ಹೇಳು ಮಾರಾಯ, ಮಗಳಿಗೆ ಪರೀಕ್ಷೆ ಬೇರೆ ಇದೆ, ನೀನು ಕಥೆ ಹೇಳಿದರೆ ನಾನು ಸೀರಿಯಲ್ಲೇ ನೋಡಲ್ಲ ಒಂದು ತಿಂಗಳು ಅಂತ ಅವಳು. ನೀನೇ ಗೆಸ್ ಮಾಡು ಏನಾಗತ್ತೆ ಅನ್ನೋದನ್ನ ಅಂದೆ. ಹಿಂದಿನ ದಿನ ತಾನೇ ನಾವು-ಡೈರೆಕ್ಟರು ಬೆಳಗ್ಗಿಂದ ಸಂಜೆಯವರೆಗೆ ಕೂತು, ಆ ಧಾರಾವಾಹಿಗೆ ಊಹಿಸಲು ಅಸಾಧ್ಯವಾದ ಭಯಾನಕ ತಿರುವುಗಳನೆಲ್ಲ ಆಲೋಚಿಸಿ, ಅದಕ್ಕೊಂದು ಅಂತಿಮ ರೂಪ ಕೊಟ್ಟಿದ್ದೆವು. ಚಿಕ್ಕಮ್ಮ ಇದ್ದೋಳು, “ಏನಿಲ್ಲ ಹೆಚ್ಚಾಗಿ ಆ ಸುನೀತಾ ಇದಾಳಲ್ಲ, ಅವಳ ನಿಜವಾದ ಅಮ್ಮ ಸಿಕ್ಕಿಬಿಡ್ತಾರೆ, ಆದ್ರೆ ಈಗಿರೋ ಅಮ್ಮ ಅವಳನ್ನ ಚೆನ್ನಾಗಿ ನೋಡ್ಕೊಂಡಿರೋದ್ರಿಂದ ನಿಜವಾದ ಅಮ್ಮ ವಾಪಸ್ ಹೋಗ್ತಾರೆ ಅಥವಾ ಏನೋ ಕಾಯಿಲೆ ಕಸಾಲೆ ಬಂದು ಸತ್ತೇ ಹೋಗ್ತಾರೇನೋ” ಅಂದಳು. ನನಗೆ ತಲೆ ಚಚ್ಚಿಕೊಳ್ಳುವಂತಾಯಿತು. ನಾವು ಇಡೀ ದಿನ ಕೂತು ತೌಡು ಕುಟ್ಟಿ ಇದೇ ಕತೆ ಆಲೋಚನೆ ಮಾಡಿದ್ದವು! “ನೀನು ಬಂದು ನಮ್ಮ ಟೀಮು ಸೇರ್ಕೋ ಮಾರಾಯ್ತಿ” ಅಂತಂದು ಸುಮ್ಮನಾದೆ.

ಸೀರಿಯಲ್ಲುಗಳ ಜಗತ್ತಿಗೂ ಮಹಿಳೆಯರಿಗೂ ಅವಿನಾಭಾವ ಸಂಬಂಧ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಅದರ ನಿಜವಾದ ಅರ್ಥ ಆಗಿದ್ದ ಮಾತ್ರ ನನಗೆ ಈ ಕೆಲಸ ಮಾಡಲು ಆರಂಭಿಸಿದ ಮೇಲೆಯೇ. ನಮ್ಮ ಸೀರಿಯಲ್ಲುಗಳ ಬಗ್ಗೆ ಜನಾಭಿಪ್ರಾಯ ಕೇಳಲು ಆಗೀಗ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಒಮ್ಮೆ ಹಾಸನದಲ್ಲಿ, ಒಬ್ಬ ಹೆಂಗಸು ಬಂದು ಆಗತಾನೇ ನಿಲ್ಲಿಸಿದ್ದ ನಮ್ಮ ಸೀರಿಯಲ್ ಒಂದರ ಹೆಸರು ಹೇಳಿ,”ಸಾರ್, ಅದ್ಯಾಕ್ ಆ ಧಾರ್ವಾಹಿ ನಿಲ್ಸಿದ್ರಿ” ಅಂದಳು.. ನಾನು ಅವಳಿಗೆ “ಟಿ.ಆರ್.ಪಿ ಇರಲಿಲ್ಲ..ಹಾಗಾಗಿ ನಿಲ್ಲಿಸಬೇಕಾಯ್ತು” ಅಂದೆ. ಏನ್ ಟೀಆರ್ಪಿ ಗೀಆರ್ಪಿ ಎಲ್ಲ ನಂಗೊತ್ತಿಲ್ಲ..ಅಂತಾ ಒಳ್ಳೇ ಸೀರಿಯಲ್ಲು ಅಣ್ಣ.. ನನ್ ಸಂಸಾರಾ ಉದ್ದಾರ ಮಾಡಿದ್ ಧಾರವಾಹೀನ ಅಂಗೆಲ್ಲ ನಿಲ್ಲುಸ್ ಬುಟ್ರಲ್ಲಣ್ಣ ಅಂತ ಭಾವುಕಳಾಗಿ ಹೇಳುತ್ತ ಕಣ್ಣಲ್ಲೆಲ್ಲ ನೀರು ತಂದುಕೊಂಡಳು. ವಿಷ್ಯ ಏನು ಅಂದ್ರೆ ಅವಳ ಗಂಡ ಕುಡೀತಿದ್ದನಂತೆ.ಸಿಕ್ಕಾಪಟ್ಟೆ. ಒಂದು ದಿನ ನಮ್ಮ ಸೀರಿಯಲ್ಲಿನ ಹೀರೋಯಿನ್ನು ಕುಡಿದು ಬಂದ ತನ್ನ ಗಂಡನಿಗೆ ಪೊರಕೆಯಲ್ಲಿ ಹೊಡೆದದ್ದನ್ನು ನೋಡಿ ಈಕೆ ಧೈರ್ಯ ತಂದುಕೊಂಡು ತನ್ನ ಗಂಡನಿಗೂ ಅದೇ ಗತಿ ಕಾಣಿಸಿದ್ದಾಳೆ. ವಠಾರದ ಅಕ್ಕಪಕ್ಕದ ಜನಗಳೆದುರು ಅವನ ಮರ್ಯಾದೆ ಹೋಗಿದೆ. ಮಾರನೇ ದಿನದಿಂದ ಕುಡಿತ ಹದಕ್ಕೆ ಬಂದಿದೆ! “ಏನಾರ ಮಾಡಿ ಮತ್ತೆ ಆ ಧಾರ್ವಾಹಿ ಶುರು ಮಾಡಿ” ಅಂತ ಗೋಗರೆದಳು ಆಕೆ. ನಾನು ಈ ಕಥೆಯನ್ನ ನಮ್ಮ ಮಾರ್ಕೆಟಿಂಗ್ ವಿಭಾಗದೋರಿಗೆ ಹೇಳಿದರೆ, ಅವರು ನನಗೆ ಪೊರಕೆ ಸೇವೆ ಮಾಡುವ ಸಾಧ್ಯತೆ ಇದ್ದದ್ದರಿಂದ, ಅವಳನ್ನ ಏನೋ ಸಮಾಧಾನ ಮಾಡಿ ಸಾಗಹಾಕಿದೆ.

ಪ್ರಾಯಶಃ ಎಲ್ಲ ವರ್ಗದ ಹೆಂಗಸರೂ ಕೂಡ ಈ ಸೀರಿಯಲ್ಲುಗಳನ್ನು ತಮ್ಮದೇ ಭಾವ ವಲಯದೊಳಗೆ ತಂದುಕೊಂಡು ನೋಡುತ್ತಾರೆ. ಅಲ್ಲಿನ ಪಾತ್ರಗಳು ಅವರನ್ನೇ ಪ್ರತಿನಿಧಿಸುತ್ತವೆ. ತಾವು ಕಂಡ ಕನಸುಗಳನ್ನು, ತಮ್ಮಿಂದ ಎಂದಿಗೂ ಮಾಡಲಾಗದ ಕೆಲಸವನ್ನು ಧಾರಾವಾಹಿಯ ಪಾತ್ರವೊಂದು ನನಸಾಗಿಸುತ್ತಿದೆ ಎಂಬುದೇ ಹೆಚ್ಚಿನವರಿಗೆ ಅತ್ಯಂತ ಖುಷಿ ಕೊಡುವ ವಿಚಾರ. ಎಂದೆಂದಿಗೂ ಅತ್ತೆಗೆ ಎದುರಾಡದ ಸೊಸೆಯೊಬ್ಬಳಿಗೆ, ಸೀರಿಯಲ್ಲಿನ ಸೊಸೆ ಅತ್ತೆಗೇ ಎದುರುನಿಂತರೆ ಆ ಪಾತ್ರದೊಳಗೆ ತಾನೇ ಆವಾಹನೆಯಾದಂತೆ ಅನ್ನಿಸುತ್ತದೆ. ಅಷ್ಟರಮಟ್ಟಿಗಾದರೂ ನೆಮ್ಮದಿ ಆಕೆಗೆ. ಅಪ್ಪನ ನೆರಳು ಕಂಡರೆ ಹೆದರುವ ಹುಡುಗಿಗೆ, ಮನೆಯವರನ್ನು ವಿರೋಧಿಸಿ ಮದುವೆಯಾದ ಧಾರಾವಾಹಿಯ ಹುಡುಗಿ ಆದರ್ಶಪ್ರಾಯಳು! ಒಬ್ಬಬ್ಬೊರಿಗೂ ಒಂದೊಂದು ಕಾರಣಗಳಿವೆ, ಧಾರಾವಾಹಿ ನೋಡಲು. ಹೀಗಾಗಿ ಕೊನೆಗೆ ಬೈದುಕೊಂಡಾದರೂ ಮಂದಿ ಸೀರಿಯಲ್ ನೋಡೇ ನೋಡುತ್ತಾರೆ!

ನನ್ನ ತಂಗಿಯ ಬಾಣಂತನಕ್ಕೆ, ಊರಿಂದ ಒಬ್ಬಾಕೆ ಬಂದಿದ್ದರು. ಆಕೆಗೆ ಅದೇನೋ ತೊಂದರೆಯಾಗಿ ಕಳೆದ ನಾಲ್ಕೆಂಟು ವರ್ಷದಿಂದ ಕಿವಿ ಕೇಳಿಸುವುದಿಲ್ಲ. ಅದೇ ಕಾರಣಕ್ಕೆ ಕುಟುಂಬಸ್ಥರೂ ಅವರನ್ನ ದೂರ ಮಾಡಿದ್ದಾರೆ.  ಇನ್ನೂ ನಲವತ್ತು-ನಲ್ವತ್ತೈದರ ಪ್ರಾಯದ ಆಕೆ ಅವರಿವರಿಗೆ ಹೆರಿಗೆ ಬಾಣಂತನಕ್ಕೆ ಸಹಾಯ ಮಾಡುತ್ತ, ಅಡುಗೆ ಮಾಡಿಕೊಡುತ್ತ ಜೀವನ ಸಾಗಿಸುತ್ತಾರೆ.

ಅವರು ದಿನಾ ಸಂಜೆ ತಮ್ಮ ಒಂದು ಹಂತದ ಕೆಲಸ ಮುಗಿದ ಮೇಲೆ ಕಡ್ಡಾಯವಾಗಿ ಕೂತು ಮನೆ ಮಂದಿಯ ಜೊತೆಗೆ ಯಾವುದೋ ಒಂದು ಸೀರಿಯಲ್ ನೋಡುತ್ತಿದ್ದರು. ಕಿವಿ ಕೇಳದವರು ಸೀರಿಯಲ್ ಯಾಕೆ ನೋಡುತ್ತಾರೆ ಅನ್ನುವುದು ನಮ್ಮೆಲ್ಲರ ಪ್ರಶ್ನೆ.  ತೀರಾ ಕಿವಿ ಹತ್ತಿರ ಹೋಗಿ ಕೂಗಿದರೆ ಮಾತ್ರ ನಾವು ಹೇಳುವುದು ಕೇಳುತ್ತಿತ್ತು. ಒಂದು ದಿನ ಆಕೆಗೆ ಯಾವುದೋ ಕಾರಣಕ್ಕೆ ಸಂಚಿಕೆಯೊಂದನ್ನು ನೋಡಲಾಗಿಲ್ಲ. ಮಾರನೇ ದಿನ ತಂಗಿಯ ಬಳಿ, “ರಾಘವೇಂದ್ರನಿಗೆ ಏನಾಯ್ತು ನಿನ್ನೆ? ಅಶ್ವಿನಿನ ಮದುವೆಯಾಗ್ತಾನಂತ ಅವನು? ಅಂತ ಕೇಳಿದರು. ಇವಳಿಗೆ ತಲೆಬುಡ ಅರ್ಥವಾಗಲಿಲ್ಲ! ಆ ಹೆಸರಿನ ಯಾವ ಪಾತ್ರಗಳೂ ಅವರು ನೋಡುವ ಸೀರಿಯಲ್ಲಿನಲ್ಲಿ ಇಲ್ಲ.

ಆಮೇಲೆ ನಿಧಾನಕ್ಕೆ ನಮಗೆ ಹೊಳೆದದ್ದೇನೆಂದರೆ, ಸೀರಿಯಲ್ ನೋಡುತ್ತ ನೋಡುತ್ತ ಆಕೆ ತನ್ನದೇ ಕಥೆಯೊಂದನ್ನು ಮನಸ್ಸಿನಲ್ಲಿ ಹೆಣೆದುಕೊಂಡಿದ್ದರು. ಅಲ್ಲಿನ ಚಲಿಸುವ ಚಿತ್ರಗಳಿಗೆ ಇವರದೇ ಚಿತ್ರಕಥೆ. ಪಾತ್ರಗಳಿಗೊಂದೊಂದು ಹೆಸರು. ಕಣ್ಣಿಗೆ ಕಾಣುವ ಪಾತ್ರಗಳಿಗೆ ತಮ್ಮದೇ ಕಥೆಯನ್ನು ಆರೋಪಿಸಿಕೊಳ್ಳುತ್ತ ಆಕೆ ಧಾರಾವಾಹಿ ನೋಡುತ್ತಿದ್ದರು. ಪ್ರಪಂಚದ ಯಾವ ಶಬ್ದಗಳೂ ಅವರನ್ನು ತಲುಪುವುದಿಲ್ಲವಾದರೂ, ಅವರ ಒಳಗಿನ ಮಾತುಗಳಿಗೆ-ಕಲ್ಪನೆಗಳಿಗೆ ಈ ಧಾರಾವಾಹಿ ಸೇತುವೆಯಂತೆ ಕೆಲಸ ಮಾಡುತ್ತಿತ್ತು!

ಪ್ರಾಯಶಃ ಅವರ ಮನಸ್ಸಿನಲ್ಲಿ ನಮ್ಮ ಬಳಿ ಇದ್ದಿರಬಹುದಾದ ಕಥೆಗಳನ್ನು ಮೀರಿಸುವ ಕಥೆ ಇತ್ತೋ ಏನೋ? ಆದರೆ ನನಗೆ ಕೇಳುವ ಧೈರ್ಯ ಬರಲಿಲ್ಲ. ಹೊರ ಜಗತ್ತಿಗೆ ಬಂದು ಆ ಕಥೆ ಹಾಳಾಗುವುದಕ್ಕಿಂತ, ಅವರೊಳಗೇ ಅದು ಧಾರೆಯಾಗಿ ಪ್ರವಹಿಸಲಿ ಅಂದುಕೊಂಡು ಸುಮ್ಮನಾದೆ.

ಈಗ ನಾನು ಕೆಲವು ಸಲ ಟಿವಿಯ ಧ್ವನಿಯನ್ನು ಮ್ಯೂಟ್ ಮಾಡಿಕೊಂಡು ಧಾರಾವಾಹಿ ನೋಡಲು ಯತ್ನಿಸುತ್ತೇನೆ. ಏನೂ ಅರ್ಥವಾಗುವುದಿಲ್ಲ.


(ಕನ್ನಡ ಪ್ರಭ ಯುಗಾದಿ ಲಲಿತಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಬರಹ)