ಮಂಗಳವಾರ, ಜುಲೈ 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***

ಶನಿವಾರ, ಜುಲೈ 25, 2009

ಮಳೆ ಅಡ್ರೆಸ್ಸು!

ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಸವಾರಿ. ಆಫೀಸು ಕೆಲಸ. ಒಂದಿಷ್ಟು ಶೂಟಿಂಗಿತ್ತು. ಸಾವಯವ ಕೃಷಿ ಬಗ್ಗೆ. ತೀರ್ಥಹಳ್ಳಿ ಹತ್ತಿರದ ಒಂದು ಹಳ್ಳಿ, ಚಕ್ಕೋಡಬೈಲು ಅಂತ. ಅಲ್ಲಿ ಆ ದಿನ ಶೂಟಿಂಗ್ ಮಾಡಿ, ಮಾರನೇ ದಿನ ಹಾಸನಕ್ಕೆ ಬರಬೇಕಿತ್ತು. ಇದ್ದ ಕಡಿಮೆ ಸಮಯದಲ್ಲೇ ಆದಷ್ಟೂ ಹೆಚ್ಚಿನ ಕೆಲ್ಸ ಆಗಬೇಕಿತ್ತು.. ಹೀಗಾಗಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಇಂಟರ್ವೂ,ವಿಶುವಲ್ಸು ಅಂತ, ಕ್ಯಾಮರಾಮನ್ ಗೆ ಪುರುಸೊತ್ತೇ ಕೊಡದೇ ಸತಾಯಿಸುತ್ತಿದ್ವಿ.

ಮಳೆಗಾಲದ ಆರಂಭದ ಸಮಯ. ಸಿಕ್ಕಾಪಟ್ಟೆ ಮೋಡಗಳು ಗುಂಪುಗೂಡಿ ನಮ್ಮ ಶೂಟಿಂಗ್ ನೋಡೋಕೆ ಬಂದವು. ನಂಗೆ ಒಳಗೊಳಗೇ ಹೆದರಿಕೆ ಶುರು. ಎರಡು ಕೊಡೆಗಳಿದ್ದರೂ, ಲಕ್ಷಾಂತರ ಬೆಲೆ ಬಾಳುವ ಕ್ಯಾಮರಾ ಬೇರೆ. ವಿಶಾಲ ಗದ್ದೆ ಬಯಲಿನ ಮಧ್ಯ ನಿಂತಿದೀವಿ ಬೇರೆ. ಮಳೆ ಏನಾದರೂ ಹುಚ್ಚುಕೊಡವಲು ಶುರು ಆದ್ರೆ, ಮಿನಿಮಮ್ ಅಂದ್ರೂ ಒಂದು ಕಿಲೋಮೀಟರು ಹೋದ ಮೇಲೇನೇ ಮನೆ ಸಿಗೋದು.

ಹೀಂಗೇ ಶೂಟಿಂಗು ಮುಂದುವರೀತಿತ್ತು. ಗದ್ದೆ ಕೋಣ ಗೊಬ್ಬರ-ಕ್ಲೋಸಪ್ಪು ಮಿಡ್ಡು ಲಾಂಗು ಇತ್ಯಾದಿ. ಹೀಂಗೇ ಒಂದ್ ಸಲ ಎಲ್ಲ ಸುಮ್ಮಗಾದ್ರು. ಏನಂತೀರಿ, ಜೋರು ಮಳೆ ಸದ್ದು ಕೇಳ್ತಿದೆ! ಆ ಗದ್ದೆ ಕೋವಿನ ಕೆಳಗೆ- ಭರ್ರೋ ಅಂತ ಮಳೆ ಸದ್ದು.ನಂಗೆ ಕೈ ಕಾಲೆಲ್ಲ ತಣ್ಣಗಾಗೋಕೆ ಶುರು.

ನನ್ನ ತಳಮಳ ಅರ್ಥ ಆಯ್ತು ಅನ್ನಿಸತ್ತೆ, ಅಲ್ಲೇ ಇದ್ದ ರೈತ ನಾಗರಾಜ ಮೇಲೆ ಆಕಾಶ ನೋಡುತ್ತ ತಣ್ಣಗೆ ಹೇಳಿದ.

"ನೀವೆಂತ ಹೆದ್ರ್ ಕ ಬೇಡಿ. ಈ ಮಳೆ, ಹಾಂಗೇ ಬ್ಯಾಣ ಹತ್ತಿ, ಶೀನಾಚಾರ್ರ ಮನೆ ಮೇಲಾಗಿ ಅವ್ರ ಕಣ ದಾಟಿ, ರಾಮ್ ಜೋಯ್ಸರ ತೋಟದ್ ಆಚಿಗಿಂದ ,ದೇವಸ್ತಾನದ್ ಬದಿಂಗಿಂದಾಗಿ ಗುಡ್ದಕ್ ಹೋಗತ್ತಂಗೆ ಕಾಣತ್ತಪ" .

ಶೀನಾಚಾರ್ ಮನಿಯಲ್ದ, ನಮ್ ವೆಂಕಪ್ಪನ್ ಮನಿ-ಮತ್ತೊಬ್ಬರ್ಯಾರೋ ತಿದ್ದಿದರು. ನಾನು ಬಿಟ್ಟ ಬಾಯಿ ಬಿಟ್ಟ ಹಾಗೇ.

ಮಳೆ ನಮ್ಮ ದಿಕ್ಕಿಗೆ ಬರಲೇ ಇಲ್ಲ .
ತೀರಾ ಬೆಂಗಳೂರಿನ ಬಸ್ಸಿನ ದಾರಿ ಹೇಳಿದ ಹಾಗೆ! ಅರೆ!.

ಮಂಗಳವಾರ, ಜುಲೈ 21, 2009

ನವಿಲಗರಿಗೆ ಪ್ರಶ್ನೆಗಳು

ಯಾವುದೋ ಮರದಡಿ ಉದುರಿದ ನೀನು,ಕೃಷ್ಣ ಮುಕುಟವಾಸಿ
ಆತನ ಪಯಣದಿ ನೀನೂ ಸಖನೇ,ಭೂಮಂಡಲ ಸಂಚರಿಸಿ

ಬಾಲಕೃಷ್ಣನ ನವನೀತದ ಕೈ,ನಿನ್ನನೂ ಸವರಿರಬೇಕಲ್ಲ
ಮುರಾರಿ ಸಂಗಡ ಕುಣಿದಿರಬೇಕು ನೀನೂ ಗೋಕುಲ ತುಂಬೆಲ್ಲ

ಚೆಲ್ವ ಮೋಹನನ ವೇಣುವಿನೋದಕೆ ನೀನೂ ತೊನೆದೂಗಿರಬೇಕು
ಗೋಪಿಕೆಯರನವ ಸರಸಕೆ ಎಳೆವೊಡೆ ನಿನದೂ ಪಾಲಿದ್ದಿರಬೇಕು

ಅನುಭವಿಸಿಹೆಯೇ ಮುರುಲೀಧರ ಸಖಿ ರಾಧೆವಿದಾಯದ ಕಣ್ಣೀರು
ಚಿಮ್ಮಿರಬೇಕು ಕಂಸರಕ್ತಹನಿ,ಮತ್ತೆ ಹೂಮಳೆ ತುಂತುರು ಪನ್ನೀರು

ಮೆತ್ತಿದೆ ನಿನಗೂ ದ್ವಾರಕೆ ಧೂಳು,ಹಸ್ತಿನೆ ಚಿನ್ನದ ರೇಕು
ಸಮರಾಂಗಣದಲಿ ಪಾಂಚಜನ್ಯದಾ ಘೋಷವ ಕೇಳಿರಬೇಕು

ಭಗವದ್ ಗೀತೆಗೆ ಗಾಂಡೀವಿಯ ಜೊತೆ ನೀನೂ ಸಹಪಾಠಿ
ವಿಶ್ವರೂಪನಾ ನೆತ್ತಿಯ ಮೇಲಿಂ,ಕಂಡಿತೆ ಕುರುಕ್ಷೇತ್ರ ಕೋಟಿ?

ಕರ್ಣ ಕುತಂತ್ರವ ಶ್ರೀಹರಿ ಹೆಣೆದುದು ನಿನಗಂತೂ ಗೊತ್ತು
ಕೃಷ್ಣ ಪ್ರತಿಜ್ಞೆಯ ಮುರಿದ ಭೀಷ್ಮ ಶರ,ಸ್ವಲ್ಪದಿ ನಿನ್ನನೆ ತಾಕಿತ್ತು!

ಹೇಗದು ನೋಡಿದೆ ಯುದ್ಧವಿನಾಶವ,ರುಧಿರ ರಾಡಿ ಬಯಲ
ಮುಳುಗಿದ ದ್ವಾರಕೆ, ಯಾದವ ಕಲಹವ ಮತ್ತೆ ಕಲಿಯ ಕಾಲ?

ಆಲದ ಮರದಡಿ ಮಲಗಿರೆ ಶ್ಯಾಮನು ಬಂತೆ ಜರನ ಬಾಣ ಪಾಶ
ನಕ್ಕನೆ ನೀಲನು ಆ ನೋವಿನಲೂ,ಕಂಡೆಯ ಕೊನೆಯ ಮಂದಹಾಸ?


ಭಾನುವಾರ, ಜುಲೈ 19, 2009

ಖುಷಿಗೊಂದು ಪದ್ಯ-೨

ರತ್ನಗಂಧಿಯ ಹಳದಿ
ನೆನೆದಿದೆ ಅಂಗಳದ ಅಂಚಲ್ಲಿ
ತುಂಬೆ ಗಿಡ ತುಂಬೆಲ್ಲ
ತೊನೆವ ಕೆಂಪು

ಹನಿಗೀತ ಹಾಡುತಿವೆ
ಕೆಸುವಿನೆಲೆಗಳ ಮೇಳ
ಗದ್ದೆಬದುವಿನ ಮೇಲೆ
ಕೊಕ್ಕರೆಯ ಹುಡುಕು

ನೀರದಾರಿಯ ಕೆಳಗೆ
ಫಳ್ಳ ಹೊಳೆಯುವ ಕಲ್ಲು
ಬೆಟ್ಟ ತಪ್ಪಲ ಬಳಿ
ಒದ್ದೆ ನವಿಲುಗರಿ

ಕರಗುಮಣ್ಣಿನ ಮೇಲೆ
ಬಿರಿದ ಮೊಳಕೆ
ಧರೆಯಂಚ ಗಿಡದೊಳಗೆ
ನೀಲಿಹೂವು

ದೂರಗದ್ದೆಯಲಿ
ನಟ್ಟಿತಂಡದ ಗೌಜು
ಅವರ ಹಾಡಿನ ಹುರುಪು
ನನ್ನೊಳಗೆ ಕೂಡ.



ಖುಷಿಗೊಂದು ಪದ್ಯ-೧

ಮಂಗಳವಾರ, ಜುಲೈ 14, 2009

ಗಮಕ ಸುಧಾ ಧಾರೆ

ನಾನು ಎರಡನೇ ಕ್ಲಾಸಿನಲ್ಲಿದ್ದ ಕಾಲದಿಂದಲೂ ಅಪ್ಪ ನನಗೆ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದ. ಕಥೆ ಎಫೆಕ್ಟಿವ್ ಆಗಿರಲಿ ಎಂಬ ಕಾರಣಕ್ಕೋ, ಅಥವಾ ಕೇಳೋಕೆ ಚೆನ್ನಾಗಿರುತ್ತದೆ ಎನ್ನುವ ಕಾರಣಕ್ಕೋ, ಕುಮಾರವ್ಯಾಸ ಭಾರತದ ಆಯ್ದ ಷಟ್ಪದಿಗಳನ್ನು ಈ ಕಥೆಗಳ ಮಧ್ಯೆ ಸೇರಿಸುತ್ತಿದ್ದ. ಯುದ್ಧ ಸನ್ನಿವೇಶಗಳ ವಿವರಣೆಯ ಮಧ್ಯೆ ಬರುವ ಎಂಥೆಥದೋ ವಿಚಿತ್ರ ಉಪಮೆಗಳು, ನನ್ನನ್ನು ಮಾಯಾಲೋಕಕ್ಕೆಳೆಯುತ್ತಿದ್ದವು. ಅವಾಗಿನ್ನೂ ನಾನು ಟೀವಿ ಮಹಾಭಾರತ ನೋಡೋದಿಕ್ಕೆ ಅರಂಭಿಸಿರಲಿಲ್ಲ.

ಆಮೇಲಾಮೇಲೆ ಟೀವಿಯ ಮಹಾಭಾರತದೆದುರು ಈ ಷಟ್ಪದಿ ಸಪ್ಪೆ ಅನ್ನಿಸತೊಡಗಿತು. ಅಪ್ಪ ಅದೆಷ್ಟು ಸರಳವಾಗಿ ವಿವರಿಸುತ್ತಿದ್ದರೂ, ಕೆಲ ಶಬ್ದಗಳು ಅರ್ಥವಾಗುತ್ತಿರಲಿಲ್ಲ. ಅದಕ್ಕೂ ಹೆಚ್ಚಾಗಿ, ನೋಡುವುದು ಕೇಳುವುದಕ್ಕಿಂತ ಸುಲಭವಾಗಿ ಅರ್ಥವಾಗುತ್ತಿತ್ತು. ಆದರೂ, ಅಪ್ಪ ರಾಗಬದ್ಧವಾಗಿ ಹೇಳುತ್ತಿದ್ದ ಷಟ್ಪದಿಗಳೇ ಇವತ್ತಿಗೂ ಮನದೊಳಗೆ ಉಳಿದಿದೆ. ಆಮೇಲೆ ಇದೇ ಕುಮಾರವ್ಯಾಸ ಭಾರತದ ಹಲಭಾಗಗಳನ್ನು ಅವನೇ ತರಗತಿಯಲ್ಲಿ ಪಾಠ ಮಾಡಿದ್ದರೂ ಬಾಲ್ಯದ ನೆನಪೇ ಗಟ್ಟಿ.

ಆಮೇಲೆ ಹೈಸ್ಕೂಲಿಗೆ ಬಂದ ಮೇಲೆ ನಮ್ಮ ಕನ್ನಡ ಮಾಸ್ಟ್ರು ಲಕ್ಷ್ಮೀಶ ಶಾಸ್ತ್ರಿಗಳು, ಅದೆಷ್ಟ್ ಚನಾಗಿ ಷಟ್ಪದಿ ಹಾಡ್ತಿದ್ರು ಅಂದ್ರೆ, ಗಮಕ ಎನ್ನುವ ಈ ಕಲೆಯ ಬಗ್ಗೆ ಕ್ಲಾಸಿನ ಎಲ್ಲ ಮಕ್ಕಳು ಮರುಳಾಗಿಬಿಟ್ಟಿದ್ದರು. ವಿದುರನ ಮನೆಗೆ ಬಂದ ಕೃಷ್ಣನ ಮೈಗೆ ಹೇಗೆ ಧೂಳು ಮೆತ್ತಿಕೊಂಡಿತ್ತು ಅನ್ನುವುದನ್ನು ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ, ನಾವೆಲ್ಲ ಮಾತಿಲ್ಲದೇ ಕುಳಿತುಬಿಡುತ್ತಿದ್ದೆವು.

ಬೇಸಿಗೆಯ ರಜೆಯಲ್ಲಿ ಅಮ್ಮ ಅದಾವಾಗ ಊಟಕ್ಕೆ ಕರೆಯುತ್ತಾಳೆ ಅಂತ ಕಾಯುತ್ತ ಕುಳಿತಿದ್ದಾಗ, ಮಂಗಳೂರು ಅಕಾಶವಾಣಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ, ಒಂದೂಹತ್ತರ ದೆಹಲಿ ನ್ಯೂಸಿನ ಮೊದಲು, ಹತ್ತು ನಿಮಿಷ ಗಮಕ ವಾಚನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಬಿರು ಬಿರು ಬಿಸಿಲಿನಲ್ಲಿ ಈ ತಂಪು ಗಮಕ ತುಣುಕಗಳು, ಅಹಾ ಅನ್ನಿಸುತ್ತಿದ್ದವು.

ಈ ಗಮಕದ ನೆನಪುಗಳನ್ನೆಲ್ಲ ಮತ್ತೆ ಹಸಿರು ಮಾಡಿಕೊಳ್ಳಲು, ನಾವು ಅಂದರೆ ಪ್ರಣತಿಯ ಗೆಳೆಯರು ನಾಡಿದ್ದು ಶನಿವಾರ ಒಂದು ಕಾರ್ಯಕ್ರಮ ಆಯೋಜಿಸಿದ್ದೇವೆ. ಕುವೆಂಪುರವರ ‘ರಾಮಾಯಣ ದರ್ಶನಂ’ನ ಅಯ್ದ ಭಾಗಗಳ ಗಮಕ ಮತ್ತು ವ್ಯಾಖ್ಯಾನ. ಆಹ್ವಾನ ಪತ್ರ ಇಲ್ಲೇ ಕೆಳಗಿದೆ. ಇಳಿಸಂಜೆಯ ಹನಿಗಳ ಜೊತೆ ನೀವೂ ನಮ್ಮೊಡನಿರಿ. ಬರುತ್ತೀರೆಂಬ ನಂಬಿಕೆಯೊಡನೆ, ಪ್ರಣತಿಯ ಗೆಳೆಯರು.