ಭಾನುವಾರ, ಜನವರಿ 18, 2009

ಯಾವ ಮೋಹನ ಮುರಲಿ ಕರೆಯಿತೋ...

ನಿನ್ನೆ ರಾತ್ರಿ ಪಾಳಿ,ನಮ್ಮ ಎಡಿಟರ್ ರೆಡ್ದಿ ಬೆಳಗಿನ ನ್ಯೂಸ್ ನ ಎಡಿಟಿಂಗ್ ಮಾಡ್ತಾ ಕೂತಿದ್ದರು. ರಾಜು ಅನಂತಸ್ವಾಮಿ ತೀರಿಕೊಂಡು ಸುಮಾರು ಹನ್ನೆರಡು ತಾಸು ಕಳೆದಿತ್ತು.. ಇಂದು ಬೆಳಗಿನ ವಾರ್ತೆಗೆ ಅವರ ಹಾಡುಗಳನ್ನು- ನಮ್ಮ ಸ್ಟುಡಿಯೋಗೆ ಬಂದು ಹಾಡಿದ್ದ ಹೆಂಡದ ಹಾಡು, ರಾಜು ಅನಂತ ಸ್ವಾಮಿಯವರ ವಿಶುವಲ್ ಗಳನ್ನ ಹಾಕಿ ಶ್ರದ್ಧೆಯಿಂದ ಎಡಿಟಿಂಗ್ ಸಾಗುತ್ತಿತ್ತು. ಆ ಸುದ್ದಿಯ ಕೊನೆಯಲ್ಲಿ, ಸ್ಟೋರಿ ಮುಗಿಸಲು - ಅವರೇ ಅಮೆರಿಕ ಅಮೆರಿಕ ಸಿನಿಮಕ್ಕೆ ಭಾವದುಂಬಿ ಹಾಡಿದ "ಯಾವ ಮೋಹನ ಮುರುಲಿ ಕರೆಯಿತೋ" ಆಡಿಯೋ ಸೇರಿಸಿದಾಗ ನನಗಂತೂ ಕಣ್ಣು ತುಂಬಿ ಬಂದು- ಎದ್ದು ಬಂದುಬಿಟ್ಟೆ.

ಗೆಳೆಯನೊಬ್ಬ ಮಧ್ಯಾಹ್ನ ವಿಲ್ ಸ್ಮಿತ್ ನ ಸೆವೆನ್ ಪೌಂಡ್ ನೋಡುತ್ತ ಕೂತಿದ್ದಾಗ ರಾಜು ಅನಂತಸ್ವಾಮಿ ತೀರಿಕೊಂಡ ಸುದ್ದಿ ತಲುಪಿಸಿದ. ಕ್ಷಣ ಹೊತ್ತು ಮನಸ್ಸು ಪರದೆಯ ಮೇಲೆ ಓಡುತ್ತಿದ್ದ ಚಿತ್ರಗಳನ್ನಷ್ಟೇ ನೋಡುತ್ತಿತ್ತು. ಈ ಸಿನಿಮಾದಲ್ಲಿ ಆದಂತೆ ಯಾರಾದರೂ ರಾಜುಗೆ ಕಿಡ್ನಿ ದಾನ ಮಾಡಬಾರದಿತ್ತೇ ಅಂತ ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಒಂದೂವರೆ ವರ್ಷದ ಹಿಂದೆ, ವಿದ್ಯಾರಣ್ಯ ಯುವಕ ಸಂಘದ ಗಣೇಶೋತ್ಸವದಲ್ಲಿ ತೀರಾ ಹೈರಾಣಾಗಿ ಹೋಗಿದ್ದ ರಾಜು, ನಿಂತುಕೊಳ್ಳಲೂ ಆಗದೆ, ಕೂರಲೂ ಆಗದೇ ಒದ್ದಾಡುತ್ತಿದ್ದರು. ಆವತ್ತು ಸುಶ್ರುತನಿಗೆ ಹೇಳಿದ್ದೆ, ಪ್ರಾಯಶ: ಇದು ರಾಜು ಕಡೆ ಕಾರ್ಯಕ್ರಮ ದೋಸ್ತಾ. ಇನ್ನು ಈ ಮನುಷ್ಯ ಹಾಡುವುದು ಡೌಟು.. ಆದರೆ ಆಮೇಲೆ ಸುಮಾರಿಗೆ ರಿಕವರ್ ಆಗಿದ್ದ ರಾಜು ಮತ್ತೆ ಚಿಗಿತುಕೊಂಡು ಹಳೇ ಉಮೇದಿನಿಂದಲೇ ಹಾಡಲು ತೊಡಗಿದ್ದರು. ಆದರೆ ಮೊದಲಿನ ಶಕ್ತಿ ಇಲ್ಲದ್ದು ಗೊತ್ತಾಗುತ್ತಿತ್ತು...

ನಾನು ಬಹುವಾಗಿ ಮೆಚ್ಚಿದ ಭಾವಗೀತೆಗಳ ಗಾಯಕ ರಾಜು ಅನಂತಸ್ವಾಮಿ. ನಾನು ಹೆಚ್ಚು "ಲೈವ್" ಕೇಳಿದ್ದು ಕೂಡ ರಾಜು ಅನಂತಸ್ವಾಮಿಯವರನ್ನೇ. ಬೆಂಗಳೂರಿಗೆ ಬಂದ ಮೇಲೆ ಏನಿಲ್ಲವೆಂದರೂ ಇಪ್ಪತ್ತಕ್ಕೂ ಹೆಚ್ಚು ಬಾರಿ ಇವರ ಕಾರ್ಯಕ್ರಮಗಳಿಗೆ ಹಾಜರಿ ಹಾಕಿದ್ದೆ. ರತ್ನನ ಪದಗಳು, ತಂದೆ ಸ್ವರ ಸಂಯೋಜಿಸಿದ ಎದೆ ತುಂಬಿ ಹಾಡುವೆನು.. ಬೇಂದ್ರೆಯವರ ಆವು ಈವಿನ.. ಇದನ್ನೆಲ್ಲ ಹೇಗೆ ಹಾಡುತ್ತಿದ್ದರು ರಾಜು! ವಿಚಿತ್ರ ಹಾಡುವ ಶೈಲಿ- ಥಟ್ ಅಂತ್ ಹಾಡು ನಿಲ್ಲಿಸಿಯೇ ಬಿಟ್ಟು ಅದನ್ನ ಮತ್ತೆ ಶುರು ಮಾಡಿ ನಗುವುದು.. ಇದನ್ನೆಲ್ಲ ಕೇವಲ ರಾಜು ಮಾತ್ರವೇ ಮಾಡಬಲ್ಲಂತದ್ದು.

ಹನುಮಂತ ನಗರ ಬಿಂಬದ ಅನಂತ ನಮನ ಕಾರ್ಯಕ್ರಮದಲ್ಲಿ ಸತತ ಒಂದು ವರ್ಷ ಪ್ರತಿ ತಿಂಗಳ ಒಂದು ಭಾನುವಾರ, ಹೊಸ ಗಾಯಕನೊಬ್ಬನ ಪರಿಚಯದ ವೇದಿಕೆಯಲ್ಲಿ, ರಾಜು ಪಕ್ಕ ಕೂತು ಹಾರ್ಮೋನಿಯಂ ಬಾರಿಸುತ್ತಿದ್ದರು. ಸಿಕ್ಕಾಪಟ್ಟೆ ಮೂಡು ಬಂದ ದಿನ ಕೋಳಿಕೇ ರಂಗನೋ, ನನ್ ಪುಟ್ನಂಜೀ ನೋ ಹಾಡುತ್ತಿದ್ದರು. ಯಾರಾದರೂ ಸಿಕ್ಕಾಪಟ್ಟೆ ಇಂತಾದ್ದೇ ಹಾಡು ಹಾಡಿ ಅಂತ ಕೋರಿದರೆ, ಖಂಡಿತವಾಗಲೂ ಆ ಹಾಡು ಹಾಡುವುದಿಲ್ಲ ಅಂತಲೇ ಲೆಕ್ಕ.

ಬಿಂಬದ ಕಾರ್ಯಕ್ರಮದಲ್ಲೇ ಒಂದು ದಿನ ಎ.ಎಸ್.ಮೂರ್ತಿ ಹೇಳಿದ್ದರು, "ದಿನಾ ಅಭಿಷೇಕ ಮಾಡಿಸುವಷ್ಟು ಬಾದಾಮಿ ಹಾಲು ಕೊಡಿಸ್ತೀನಿ ಮಾರಾಯ, ಪಾನಕ ಸೇವೆ ಬಿಡು"ಅಂತ. ಸುಮ್ನೆ ನಕ್ಕಿದ್ದರು ರಾಜು.

ನನಗೊಂದು ಆಸೆಯಿತ್ತು. ನಾನು ಬರೆದ ಕವನವೊಂದನ್ನು ರಾಜು ಅನಂತಸ್ವಾಮಿಯವರಿಗೆ ಕೊಟ್ಟು ಅವರ ರಾಗ ಸಂಯೋಜನೆ-ಧ್ವನಿಯಲ್ಲಿ ಆ ಹಾಡು ಕೇಳಬೇಕು.. ಆಸೆ... ಹಾಗೇ ಹೂತು ಹೋಯಿತು....ಬೃಂದಾವನ ಸೇರಿದ ಮಣ್ಣ ಕಣ್ಣಿನ ಜೊತೆಗೆ.

ಗುರುವಾರ, ಜನವರಿ 08, 2009

ಮೆಜೆಸ್ಟಿಕ್ ಮೋಸಗಳು...

ನಾನು ಬೆಂಗಳೂರಿಗೆ ಬಂದ ಆರಂಭದಲ್ಲಿ, ಮೆಜೆಸ್ಟಿಕ್ ನ ಸಮೀಪವೇ ಇರುವ ಗಾಂಧೀನಗರದಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನಿತ್ಯ ಮೆಜೆಸ್ಟಿಕ್ ಗೆ ಬೇಡವೆಂದರೂ ಹೋಗಲೇಬೇಕಿತ್ತು ಆ ಕಾಲದಲ್ಲಿ. ಬೆಳಗ್ಗೆ ಅಂತಿಲ್ಲ, ಸಂಜೆ ಅಂತಿಲ್ಲ, ಯಾವಾಗ ನೋಡಿದರೂ ಗಿಜಿಗಿಜಿ ಗುಡುತ್ತಲೇ ಇರುವ ಮೆಜೆಸ್ಟಿಕ್ ಗೆ ಕಾಲಿಡಲೇ ಮೊದಮೊದಲು ಹೆದರಿಕೆಯಾಗುತ್ತಿತ್ತು. ಬೆಂಗಳೂರಿಗೆ ಬಂದ ಕೂಡಲೇ ಮೆಜೆಸ್ಟಿಕ್ ಬಗ್ಗೆ ಒಂದಿಷ್ಟು ಜನ ಹೆದರಿಕೆ ಹುಟ್ಟಿಸಿಬಿಟ್ಟಿದ್ದರು- ಅದೊಂದು ಪಾಪಕೂಪವೇನೋ ಅನ್ನುವ ಹಾಗೆ. ದಿನವೂ ಮೆಜೆಸ್ಟಿಕ್ ಗೇ ಬಂದಿಳಿದು, ಗಾಂಧೀನಗರದವರೆಗೆ ಭುಜಕ್ಕೆ ಭುಜ ತಾಗುವ ಜಂಗುಳಿಯಲ್ಲೇ ನಡೆದು ಹೋಗುವ ಪರಿಸ್ಥಿತಿ ನನ್ನದು ಆಗ. ಮೊದಲೊಂದಿಷ್ಟು ಕಿರಿರಿಯಾದರೂ ನಂತರ ಒಗ್ಗಿಕೊಂಡೆ. ಅಲ್ಲಿನ ಕೆಲಸ ಆರು ತಿಂಗಳಿಗೇ ಬಿಟ್ಟಿದ್ದರಿಂದ ಮತ್ತೆ ಆ ಕಡೆ ತಲೆ ಹಾಕುವ ಕೆಲಸ ಬರಲಿಲ್ಲ ನನಗೆ.


ಇವತ್ತೂ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿಲ್ಲದಿದ್ದರೆ ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವೇ ಗತಿ. ಇಲ್ಲದೇ ಹೋದರೆ ಆ ಕಡೆ ಹೋಗುವುದು ಕಡಿಮೆ. ಇತ್ತೀಚಿಗೆ ಏನೋ ಕಾರಣಕ್ಕಾಗಿ ಒಂದೆರಡು ತಾಸು ಮೆಜೆಸ್ಟಿಕ್ ಅಲೆಯುವ ಪರಿಸ್ಥಿತಿ ಬಂತು. ಮತ್ತು, ಹಳೆಯ ಅನುಭವಗಳೆಲ್ಲ ಮತ್ತೆ ಒಂದು ರೌಂಡ್ ರಿಪೀಟಾಯಿತು. ಮೆಜೆಸ್ಟಿಕ್ ಇನ್ನೂ ಹಾಗೇ ಇದೆ, ಮತ್ತು ಇನ್ನು ಮುಂದೂ ಹಾಗೇ ಇರುತ್ತದೆ ಎನ್ನುವುದನ್ನು ನೆನಪಿಸಲೆಂಬಂತೆ. ನನಗಾದ ಅನುಭವಗಳೆಲ್ಲ ನಿಮ್ಮಲ್ಲಿ ಹೆಚ್ಚಿನವರಿಗೆ ಆಗಿಯೇ ಇರುತ್ತದೆ. .

೧. ಸಂಜೆ ಹೊತ್ತು, ಮೆಜೆಸ್ಟಿಕ್ಕಿನಲ್ಲಿ ನೀವು ಸ್ವಲ್ಪ ಠಾಕುಠೀಕಾಗಿ ಡ್ರೆಸ್ ಮಾಡಿಕೊಂಡು ನಿಮ್ಮ ಪಾಡಿಗೆ ನೀವು ಹೋಗುತ್ತಿದ್ದರೆ, ಸಟಕ್ಕನೆ ಒಬ್ಬಾತ ಬಂದು ನಿಮ್ಮನ್ನ ಸ್ವಲ್ಪಬದಿಗೆ ಕರೆಯುತ್ತಾನೆ- ಕತ್ತಲಿನ ಕಡೆಗೆ. ಮೆಲ್ಲನೆ ಅತ್ತ ಇತ್ತ ನೋಡುತ್ತಾ, ಯಾರೂ ತನ್ನನ್ನು ನೋಡುತ್ತಿಲ್ಲ ಅನ್ನುವುದನ್ನು ಖಚಿತ ಪಡಿಸಿಕೊಂಡು ಒಂದು ವೆಲ್ವೆಟ್ ಬಟ್ಟೆಯಲ್ಲಿ ಸುತ್ತಿದ ಮಿರಿಮಿರಿ ಮಿಂಚುವ ಹೊಚ್ಚ ಹೊಸ ಕಪ್ಪುಕನ್ನಡಕ ತೆಗೆಯುತ್ತಾನೆ. ನೀವೂ ಕುತೂಹಲದಿಂದ ನೋಡಲಾರಂಭಿಸಿದರೆ- "ಸರ್, ನಾನು ಕನ್ನಡಕದ ಶೋರೂಮಲ್ಲಿ ಕೆಲಸ ಮಾಡ್ತಿದೀನಿ, ಈ ಕನ್ನಡಕ ಕದ್ದುಕೊಂಡು ಬಂದಿದೀನಿ, ಇದು ಪಕ್ಕಾ ಶೋರೂಮ್ ಪೀಸ್, ೨ ಸಾವಿರ ರೂಪಾಯಿ ಆಗತ್ತೆ, ನಿಮಗೆ ೫೦೦ಕ್ಕೆ ಕೊಡ್ತೀನಿ.. ನಂಗೇನೋ ಮನಿ ಅರ್ಜೆನ್ಸಿ ಇದೆ, ಅದಕ್ಕೆ ಹೀಗೆ ಮಾಡ್ಬೇಕಾಗಿದೆ" ಅನ್ನುತ್ತಾನೆ. ಜೊತೆಗೆ ವಿಶ್ವಾಸಾರ್ಹತೆಯ ಪ್ರತೀಕವಾಗಿ ಶೋರೂಮೊಂದರ ವಿಸಿಟಿಂಗ್ ಕಾರ್ಡನ್ನೂ ನಿಮಗೆ ತೋರಿಸುತ್ತಾನೆ. ನೀವು ನಿಮ್ಮ ಅದೃಷ್ಟಕ್ಕೆ ಖುಷಿ ಪಡುತ್ತ ಕನ್ನಡಕ ಕೊಂಡಿರೋ, ಅಷ್ಟೇ- ಮುಗಿಯಿತು. ಕಮ್ಮಿ ಎಂದರೂ ೪೦೦ ರೂಪಾಯಿ ಕಳೆದುಕೊಂಡಿರಿ ಅಂತ ಅರ್ಥ. ಇದೇ ತರ ಕಂಪನಿ ವಾಚುಗಳನ್ನು ಮಾರುವವರು ಕೂಡ ಸಿಗುತ್ತಾರೆ. "Rado ವಾಚು ಸರ್.. "ಮತ್ತೆ ಅದೇ ಹಳೇ ಕಥೆ..

೨. ನೀವು ನ್ಯಾಷನಲ್ ಮಾರ್ಕೆಟ್ ಕಡೆಗೋ ಮತ್ತೆಲ್ಲಿಗೋ ಅರ್ಜೆಂಟಾಗಿ ಹೋಗುತ್ತಿದ್ದೀರಿ... ಮಳೆ ಬೇರೆ ಬರುವ ಹಾಗಿದೆ. ಪಕ್ಕದಲ್ಲೊಬ್ಬ ಒಂದಿಷ್ಟು ಕಣ್ಣಿಗೆ ಕುಕ್ಕುವ ಬಣ್ಣದ ಜರ್ಕಿನ್ ಗಳನ್ನು ರಾಶಿ ಹಾಕಿಕೊಂಡು ೫೦ ಕ್ ಒಂದು ಅಂತ ಕಿರುಚತ್ತ ನಿಂತಿದ್ದಾನೆ. ಹೋಗಿ ನೋಡಿದರೆ ಆಕರ್ಷಕ ಬಣ್ಣಗಳ- ನೋಡಲೂ ಪರವಾಗಿಲ್ಲ ಅನ್ನಬಹುದಾದ ಜರ್ಕಿನ್ ಗಳು. ನಿಮ್ಮ ಬಳಿ ಮಳೆ ತಡೆದುಕೊಳ್ಳಲು ಏನೂ ಇಲ್ಲ ಬೇರೆ. ಆತ ನಿಮಗೆ ೪೦ಕ್ಕೇ ಕೊಡಲೂ ಸಿದ್ಧನಿದ್ದಾನೆ. ನಿಮಗೀಗ ಅದನ್ನು ಕೊಳ್ಳದೇ ಬೇರೆ ವಿಧಿಯೇ ಇಲ್ಲ. ಮನೆಗೆ ಹೋಗುವ ದಾರಿಯಲ್ಲಿ ಮಳೆ ಬಂದಿದ್ದೇ ಹೌದಾದರೆ, ನೀವು ಹಾಕಿಕೊಂಡಿದ್ದ ಶರ್ಟನ್ನು ಎಸೆಯಲು ಅಡ್ಡಿಯಿಲ್ಲ.

೩. ಹತ್ರುಪಾಯ್ ಸಾಕ್ಸ್ ಹತ್ರುಪಾಯ್ ಸಾಕ್ಸ್ ಅಂತ ಕೂಗುವವರು ಅಡಿಗಡಿಗೆ ಸಿಕ್ಕಾರು ನಿಮಗಿಲ್ಲಿ. ಅರೇ, ನೋಡೋಣ- ಟ್ರೈ ಮಾಡಿದರೆ ಹೇಗೆ ಅಂತ ಕೊಂಡೊಯ್ದರೆ, ಮೊದಲ ಒಗೆತಕ್ಕೇ ಸಾಕ್ಸು ಒಂದೋ ಮೊರದಗಲ, ಇಲ್ಲವೋ ಬೆರಳಗಲ.

೪. ಇಂದು ರಾತ್ರಿಯೇ ನಿಮಗೆ ತಿರುಪತಿಗೋ, ಹೈದರಾಬಾದ್ ಗೋ , ಮಂತ್ರಾಲಯಕ್ಕೋ ಹೋಗಬೇಕಿದೆ. ಟಿಕೆಟ್ ಬುಕ್ ಆಗಿಲ್ಲ. ಮೆಜೆಸ್ಟಿಕ್ಕಿಗೆ ಹೋದರೆ ಸೀಟು ಸಿಗತ್ತೆ ಅಂತ ಯಾರೋ ಹೇಳುತ್ತಾರೆ. ಸರಕಾರೀ ಕೆ.ಎಸ್.ಆರ್.ಟಿ.ಸಿ ಬಗ್ಗೆ ನಿಮಗೆ ಒಳ್ಳೇ ಅಭಿಪ್ರಾಯವಿಲ್ಲ. ಖಾಸಗಿ ಟೂರಿಸ್ಟ್ ಬಸ್ಸುಗಳು ಸಿಗುವಲ್ಲಿಗೆ ಹೋಗುತ್ತೀರಿ. ನೀವು ಅಲ್ಲಿಗೆ ಹೋಗುತ್ತಿದ್ದ ಹಾಗೆ, "ಎಲ್ಲಿಗೆ ಸಾರ್, ಎಲ್ಲಿಗೆ ಮೇಡಮ್, ಎಷ್ಟ್ ಸೀಟ್ ಬೇಕು.. ಅಂತೆಲ್ಲ ಉಪಚಾರ ಮಾಡಿ ತಮ್ಮ ಕಿಷ್ಕಿಂದೆ ಆಫೀಸೊಳಗೆ ಕರೆದು, ತಮ್ಮ ಬಸ್ಸಿನ ಚಿತ್ರ ತೋರಿಸಿ, ಅವುಗಳ ಸುಖಾಸನಗಳ ಬಗ್ಗೆ ವಿವರಿಸಿ, ನಿಮಗೆ ಇದಕ್ಕೂ ಐಷಾರಾಮಿ ವ್ಯವಸ್ಥೆ ಮತ್ತೆಲ್ಲೂ ಸಿಗಲಾರದೆಂಬ ಅಶಾಭಾವನೆ ಮೂಡಿಸಿ, ಇನ್ನೇನು ಬಸ್ ಬರತ್ತೆ, ಹತ್ತಿಕೊಳ್ಳಿ ಅಂತ ರಸ್ತೆಗೆ ತಂದು ಬಿಡುತ್ತಾರೆ. ನೀವು ಟಿಕೆಟಿನ ಹಣ ಕೊಂಚ ದುಬಾರಿ ಅನ್ನಿಸಿದರೂ ಪಾವತಿಸಿ , ಬೆಳತನಕ ಹಾಯಾಗಿ ನಿದ್ರಿಸುವ ಕನಸು ಕಾಣುತ್ತ ಬಂದ ಬಸ್ಸು ಹತ್ತಿಕೊಂಡರೆ, ಅದೊಂದು ಸಾಮಾನ್ಯ - ಸೆಮಿ ಲಕ್ಷುರಿ ಬಸ್ಸು. ಕೇಳಿದರೆ, ಲಾಸ್ಟ್ ಮೊಮೆಂಟ್ ಗೆ ಆ ಬಸ್ಸು ಹಾಳಾಯ್ತು, ಸೋ ಈ ಬಸ್ ಬಂದಿದೆ ಅಂತೆಲ್ಲ ಕತೆ ಹೇಳಿ- ಬೆಳಗಾಗುವುದರೊಳಗೆ ತಿಗಣೆ ಕಡಿತ ಉಚಿತ ಮತ್ತು ಬೆನ್ನುನೋವು ಖಚಿತ.


ಎಲ್ಲರಿಗೂ ಇಂತಹ ಅನುಭವಗಳು ಆಗ್ಲೇಬೇಕು ಅಂತೇನೂ ಇಲ್ಲ.. ಎಲ್ಲ ನಿಮ್ಮ ನಿಮ್ಮ ಪುಣ್ಯಗಳ ಮೇಲೆ ಅವಲಂಬಿತ :)

ಬುಧವಾರ, ಜನವರಿ 07, 2009

ದಕ್ಷಿಣ ಬೆಂಗಳೂರಿನ ಆಹಾರ ಕೇಂದ್ರಗಳು

ಬೆಂಗಳೂರಿನ ಪ್ರಸಿದ್ಧ ಹೋಟೇಲುಗಳ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ಎಂ.ಟಿ.ಆರ್, ವಿದ್ಯಾರ್ಥಿ ಭವನ, ಇತ್ಯಾದಿ ಹಳೆಯ ಹೆಸರುಗಳೇ ನೆನಪಿಗೆ ಬರುತ್ತವೆ. ಆದರೆ ಅದೆಷ್ಟೋ ಪ್ರಚಾರವಿಲ್ಲದ ಹೋಟೇಲುಗಳ ತಿಂಡಿಗಳು ಪ್ರಸಿದ್ಧ ಹೋಟೆಲುಗಳ ದೋಸೆಗಳನ್ನು- ಇಡ್ಲಿ ಗಳನ್ನು ನಿವಾಳಿಸಿ ಎಸೀಬೇಕು ಹಾಂಗಿರುತ್ತದೆ. ಆದರೇನು ಮಾಡೋಣ, ಅವುಗಳನ್ನು ಗುರುತಿಸಿಯೇ ಇಲ್ಲವೇ..

ನಾನು ಕಳೆದ ಮೂರು ವರುಷಗಳಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರೋದ್ರಿಂದ, ಇಲ್ಲಿನ ಹಲವು ಹೋಟೇಲುಗಳ ಮೇಲೆ ನಂಗೆ ಋಣ ಇದೆ! ಪಾಪ, ಹೊತ್ತು ಹೊತ್ತಿಗೆ ನನ್ನಂತಹವರಿಗೆ ಬೇಕು ಬೇಕಾದ್ದನ್ನ ಮಾಡಿ ಹಾಕುತ್ತಿವೆ, ಈ ಹೋಟೇಲುಗಳು.


ಹಾಗಾಗಿ ಇಲ್ಲಿನ ವಿಶೇಷಗಳ ಕುರಿತ ಮಾಹಿತಿಯನ್ನ ನಿಮ್ಗೆ ಕೊಡೋಣ ಅನ್ನಿಸಿತು.


ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ:


ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ನಿಂದ ಸ್ವಲ್ಪ ಮುಂದೆ ಬಂದ್ರೆ, ಈ ಪುಟ್ಟ ಹೋಟೇಲ್ ಸಿಗತ್ತೆ. ಇಲ್ಲಿನ ಸ್ಪೆಷಲ್ಲ್- ಇಡ್ಲಿ,ವಡೆ ಮತ್ತು ಚಟ್ನಿ. ಬೆಳಗ್ಗಿಂದ ಸಂಜೆ ತನಕಾ ಎಷ್ಟು ಹೊತ್ತಿಗೆ ಬಂದ್ರೂ, ಇಡ್ಲಿ ವಡೆ ಲಭ್ಯ. ಇಲ್ಲಿನ ಮಸಾಲೆ ವಡೇ ಕೂಡ ಚೆನ್ನಾಗಿದೆ. ಈ ಹೋಟೆಲು ಸದಾ ಜನರಿಂದ ತುಂಬಿ ತುಳುಕುತ್ತಿದ್ದಂತೆ ಅನ್ನಿಸಿದರೂ, ಕ್ವಿಕ್ ಸರ್ವೀಸು ಇರೋ ಕಾರಣ, ತೊಂದರೆಯಿಲ್ಲ. ಈ ಕಡೆ ಏನಾದ್ರೂ ಬಂದ್ರೆ, ಖಂಡಿತಾ ಟ್ರೈ ಮಾಡಿ- ಹೊಟ್ಟೆ ತುಂಬಿದ್ದರೂ ತೊಂದರೆಯಿಲ್ಲ.


ಗಾಂಧಿ ಬಜಾರ್ ಮಹಾಲಕ್ಷ್ಮೀ ಟಿಫಿನ್ ರೂಮ್


ಈ ಹೋಟೇಲು ನಮ್ಮ ಪ್ರಣತಿ ತಂಡದ ಒಂಥರಾ ಅಫೀಷಿಯಲ್ ಮೀಟಿಂಗ್ ಪ್ಲೇಸು. ಗಾಂಧೀ ಬಜಾರು ಸರ್ಕಲ್ನಲ್ಲಿ ಎಡಕ್ಕೆ ಒಂದು ೧೦೦ ಮೀಟರ್ ದೂರ ಹೋದ್ರೆ ಈ ಹೋಟೆಲ್ ಸಿಗತ್ತೆ. ಇಲ್ಲಿನ ಖಾಲಿ ದೋಸೆ ಮತ್ತು ಚಟ್ನಿಯ ರುಚಿ, ಅದ್ಭುತ. ಜೊತೆಗೆ ಕಾಫಿ ಕೂಡ. ಆರಾಮಾಗಿ ಕೂತು ತಿನ್ನಬಹುದಾದ ವ್ಯವಸ್ಥೆ, ಇಲ್ಲಿನ ಪ್ಲಸ್ ಪಾಯಿಂಟು.


ಪುಳಿಯೋಗರೆ ಪಾಯಿಂಟ್- ಡಿ.ವಿ.ಜಿ ರೋಡ್ ಬಸವನಗುಡಿ

ಕಹಳೆಬಂಡೆ ಪಾರ್ಕ್ ಪಕ್ಕದಲ್ಲೇ ಇರುವ ಈ ಹೋಟೆಲ್ ಗೆ, ಡಿ.ವಿ.ಜಿ ರೋಡ್ ನಲ್ಲಿ ಸ್ವಲ್ಪ ದೂರ ಬಂದು ಎಡಗಡೆ ರೋಡಲ್ಲಿ ಬರಬೇಕು. ಹೆಸರೇ ಹೇಳುವ ಹಾಗೆ ಈ ಹೋಟೆಲ್, ಪುಳಿಯೋಗರೆ-ಮೊಸರಿಗೆ ಫೇಮಸ್ಸು. ಜೊತೆಗೆ ಇಲ್ಲಿನ ಸ್ವೀಟ್ ಪೊಂಗಲ್ ಕೂಡ ಸೂಪರ್ರು. ಚಿತ್ರಾನ್ನ, ಬಿಸಿಬೇಳೆ ಬಾತ್ ಕೂಡ ಚೆನ್ನಾಗಿರತ್ತೆ.


ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ

ನರಸಿಂಹ ರಾಜ ಕಾಲೋನಿಯ, ನೆಟ್ಟಕಲ್ಲಪ್ಪ ಬಸ್ ಸ್ಟ್ಯಾಂಡ್ ನ ಸಮೀಪವೇ ಇರುವ ಒಂದು ಪುಟ್ಟ ದರ್ಶಿನಿ ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೇ ದೋಸೆ ಹೋಟೇಲು. ಇಲ್ಲಿನ ಬೆಣ್ಣೆ ದೋಸೆ, ಬೆಣ್ಣೇ ಖಾಲಿ , ಓಪನ್ ದೋಸೆ, ಪಡ್ಡು ಎಲ್ಲವೂ ಸಖತ್! ತಿಂದು ಕೈತೊಳೆದ ಮೇಲೂ ಅದರ ಘಮ ಹಾಂಗೇ ಇರತ್ತೆ! ಸಂಜೆ ಹೊತ್ತು ಇಲ್ಲಿಗೆ ಬಂದರೆ ಮಂಡಕ್ಕಿ ಒಗ್ಗರಣೆ ಮತ್ತು ಹಲಸಿಂದಿ ವಡೆ ತಿಂದು ನೋಡಿ, ಆಮೇಲೆ ಹೇಳಿ. ಫುಟ್ ಪಾತ್ ನಲ್ಲೇ ನಿಂತುಕೊಂಡು ತಿನ್ನಬೇಕಾಗಿರೋದೊಂದೇ ಮೈನಸ್ ಪಾಯಿಂಟ್- ಅದೇನ್ ಸಮಸ್ಯೆ ಆಗಲ್ಲ ಬಿಡಿ.


ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್

ದಾ.ಬೇ.ದೋ ಹೋಟೇಲ್ ಎದುರಿಗೆ ನಿಲ್ಲೋಕೂ ಜಾಗ ಇಲ್ಲದಷ್ಟು ರಶ್ ಇದೆ ಅಂತಿಟ್ಟುಕೊಳ್ಳಿ. ಹಾಂಗೇ ಒಂದು ಸ್ವಲ್ಪ ಮುಂದೆ ಬಂದು ಡಿ.ವಿ.ಜಿ. ರೋಡ್ ಕಡೇ ಹೊರಳಿದರೆ ಅಲ್ಲಿ ಇನ್ನೊಂದು ರುಚ್ ರುಚಿಯಾದ್ ತಿಂಡಿ ಸಿಗೋ ಉಪಹಾರ ದರ್ಶಿನಿ ಇದೆ. ಇಲ್ಲಿನ ರವಾ ದೋಸೆ ಫೇಮಸ್ಸು.



ಹಳ್ಳಿ ತಿಂಡಿ, ಆಶ್ರಮ ಸರ್ಕಲ್

ಹೆಸರೇ ಹೇಳುವ ಹಾಗೆ ಹಳ್ಳಿ ತಿಂಡಿ- ಪತ್ರೊಡೆ, ಅಕ್ಕಿರೊಟ್ಟಿ, ಹಲಸಿನ ಹಣ್ಣಿನ ಕಡುಬು(ಸೀಸನಲ್ ಮತ್ತೆ!), ಸುಕ್ಕಿನುಂಡೆ, ಹಾಲ್ಬಾಯಿ, ಒಂದಾ ಎರಡಾ... ಇಲ್ಲಿನ ಬನ್ಸ್ ನ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗದು. ದೊಡ್ಡ ಗಣಪತಿ ದೇವಸ್ಥಾನದ ಸಮೀಪವೇ ಇದೆ ಈ ಹೋಟೆಲು.


ಎಸ್.ಎಲ್.ವಿ. ಆಶ್ರಮ

ಆಶ್ರಮ ಸರ್ಕಲ್ಲಿನಲಿರುವ ಈ ಹೋಟೇಲಿನ ಇಡ್ಲಿವಡೆ ಸಾಂಬಾರು ಸಖತ್! ಕಾಪೀನೂ ಅಷ್ಟೆ.

ಕೂಲ್ ಕಾರ್ನರ್- ಜೈನ್ ಕಾಲೇಜ್ ಹತ್ರ.

ಇಲ್ಲಿನ ಅಕ್ಕಿರೊಟ್ಟಿ ಸೂಪರ್ ಟೇಸ್ಟ್. ಜ್ಯೂಸ್ ಗಳೂ ಚೆನ್ನಾಗಿರುತ್ತವೆ. .


ಇವುಗಳನ್ನು ಬಿಟ್ಟರೆ ಚಾಮರಾಜಪೇಟೆಯ ಬ್ರಾಹ್ಮಿನ್ಸ್ ಕೆಫೆ, ಎನ್.ಆರ್ ಕಾಲನಿಯ ಐಯರ್ಸ್ ಮೆಸ್ಸು, ಮನೆಊಟ, ವಿ.ವಿ ಪುರಂ ನ ಫುಡ್ ಸ್ಟ್ರೀಟು... ಆಹಾರಪ್ರಿಯರಿಗೆ ಇನ್ನೊಂದಿಷ್ಟು ಉತ್ತಮ ಜಾಗಗಳು.

ಎಲ್ಲರಿಗೂ ಶುಭವಾಗಲಿ:)




ನಾರ್ತ್ ಬೆಂಗಳೂರಿನ ಬೆಸ್ಟ್ ಹೋಟೇಲುಗಳು