ಮಂಗಳವಾರ, ಆಗಸ್ಟ್ 01, 2017

ಛಾಯಾಗ್ರಹಣವೆಂಬ ಕ್ಷಣ ಕ್ಷಣದ ಧ್ಯಾನ

“It is an illusion that photos are made with the camera… they are made with the eye, heart and head.” – Henri Cartier-Bresson

ತಾನು ಸ್ಥಿರವಾಗಿದ್ದೂ, ನೋಡುಗನ ಬದುಕನ್ನ ಅಲುಗಾಡಿಸಬಲ್ಲ ವಿಶಿಷ್ಠ ಶಕ್ತಿ ಛಾಯಾಗ್ರಹಣಕ್ಕಿದೆ. ಕಾಲಪ್ರವಾಹದಲ್ಲಿ ಮಿಂಚಿ ಮರೆಯಾಗಬಹುದಾಗಿದ್ದ ಕ್ಷಣವೊಂದನ್ನು ಅನಂತವಾಗಿ ಸೆರೆಹಿಡಿದಿಡಬಲ್ಲ ಈ ಅನ್ಯೂಹ್ಯ ಕ್ರಿಯೆಯೇ ಒಂದು ಅಚ್ಚರಿ. ಭೂತಕಾಲದ ಕಿಟಕಿ, ವರ್ತಮಾನದ ಕನ್ನಡಿ ಮತ್ತು ಭವಿಷ್ಯತ್ತಿಗೆ ಬಾಗಿಲು ಛಾಯಾಗ್ರಹಣ.ಸೂಕ್ಷ್ಮ ಗಮನಿಸುವಿಕೆಗಳ ಮೂಲಕ  ಏಕಾಗ್ರತೆಯನ್ನ ಹೆಚ್ಚಿಸುವ, ಪ್ರಕೃತಿಯೊಡನೆ ನಾವೂ ಪ್ರಕೃತಿಯೇ ಆಗಿಬಿಡುವ ಸಾಧ್ಯತೆ ಇರುವ, ನಿರಂತರ ಪ್ರಯೋಗಗಳ ಮೂಲಕ ನಮ್ಮನ್ನ ನಾವು ಅರಿತುಕೊಳ್ಳುವಂತೆ ಮಾಡುವ ಶಕ್ತಿ ಫೋಟೋಗ್ರಫಿಗಿದೆ.  ನೆರಳು ಬೆಳಕುಗಳ ಬೆರಗಿನಾಟವು ಅಂತರಂಗವನ್ನು ಮುಟ್ಟುವ, ತಟ್ಟುವ ಮತ್ತು ಆ ಮೂಲಕ ಮನಸ್ಸಿನ ಕವಾಟವನ್ನು ತಣ್ಣಗೆ ತೆರೆಯುವ ಛಾಯಾಗ್ರಹಣವು ಧ್ಯಾನವೇ ಹೌದು.
            ಫೋಟೋಗ್ರಫಿಯನ್ನ ನಾನೆಂದೂ ಹವ್ಯಾಸವಾಗಿಯೇ ಪರಿಗಣಿಸಿದವನಾಗಿರಲಿಲ್ಲ. ನನ್ನ ಮೊದಲ ಆಸಕ್ತಿ ಕೂಡ ಅದಾಗಿರಲಿಲ್ಲ. ಆದರೆ ಮೆತ್ತಗೆ ಅದಾಗಿಯೇ ನನ್ನನ್ನ ಆವರಿಸಿಕೊಂಡಿತು. ಬದುಕನ್ನ ನೋಡುವ ಹೊಸದೊಂದು ಸಾಧ್ಯತೆಯನ್ನು ಕ್ಯಾಮರಾದ ಕಣ್ಣು ಕಲಿಸಿಕೊಟ್ಟಿತು. ಯಾವುದೋ ಬೆಟ್ಟದಲ್ಲಿ ಮರವೊಂದರಲ್ಲಿ ತನಗೆ ತಾನೇ ತೊನೆದುಕೊಳ್ಳುತ್ತಿರುವ ಪಾಚಿಕಟ್ಟಿಕೊಂಡಿರುವ ಗಂಟೆ, ನೀಲಿಹೂವೊಂದರ ಮೇಲೆ ಕೂತಿರುವ ದುಂಬಿ, ಸೂರ್ಯನೆದುರಾಗಿ ಕುಳಿತು ಬೆಳಕನ್ನೇ ಆಪೋಶನ ತೆಗೆದುಕೊಳ್ಳುವಂತೆ ಕೂತಿರುವ ಸನ್ಯಾಸಿ, ಹುಲ್ಲುಗರಿಕೆ ಹಾರುಹಕ್ಕಿ ನಭದ ಚುಕ್ಕಿ ಒಂದೇ ಎರಡೇ! ಎಂದು ನಾನು ಹಾರುವ ಚಿಟ್ಟೆಗಳ ಹಿಂದೆ ಹೋಗುತ್ತ ಹೋಗುತ್ತ ಧ್ಯಾನಸ್ಥ ಸ್ಥಿತಿಯನ್ನ ಅನುಭವಿಸಿದ್ದೆನೋ, ಅಂದೇ ಅಂದುಕೊಂಡೆ, ಇದು ನನ್ನೊಡನೆ ಇರಲೆಂದೇ ಬಂದಿದೆ!

           ಒಂದಂತೂ ಹೌದು. ಛಾಯಾಗ್ರಹಣವೆಂದರೆ ಕೇವಲ ಸಾಧನವೊಂದನ್ನು ಬಳಸಿ- ಚಿತ್ರವೊಂದನ್ನು ತೆಗೆಯುವ ಬರಿದೆ ತಾಂತ್ರಿಕ ಕಾರ್ಯವಂತೂ ಅಲ್ಲ. ನಮ್ಮನ್ನ ಮತ್ತೊಂದೇ ವಿಶ್ವಕ್ಕೆ ಕರೆದೊಯ್ಯುವ, ಇಂದ್ರಿಯಗಳ ಹಂಗನ್ನ ಮೀರಿದ ಅನುಭೂತಿ. ಚಿತ್ರವೊಂದನ್ನ ತೆಗೆಯುತ್ತಿರುವ ಆ ಕ್ಷಣದಲ್ಲಿ- ಆ- ಆ ಫಕ್ಕನೆ ಮಿಂಚಿ ಮರೆಯಾಗುವ ಸೆಕೆಂಡಿನಷ್ಟು ಕಾಲದಲ್ಲಿ ನಾವು, ನಾವಾಗಿರುವುದಿಲ್ಲ. ನಮ್ಮ ಗುರಿ, ಕನಸುಗಳು, ಶತ್ರುಗಳು ಮಿತ್ರರು ಬ್ಯಾಂಕ್ ಬ್ಯಾಲೆನ್ಸು ನಾಳಿನ ಚಿಂತೆ – ಯಾವುದೂ ಕೂಡ ಆ ಒಂದು ದಿವ್ಯ ಘಳಿಗೆ ನಮ್ಮ ಮನದೊಳಗೆ ಇರುವುದಿಲ್ಲ. ಆ ಕ್ಷಣಕ್ಕೆ ಅದೊಂದು ಖಾಲಿ ಕ್ಯಾನ್ ವಾಸ್. ಈಗಷ್ಟೇ ತೆಗೆದ ಚಿತ್ರವನ್ನು ತನ್ನೊಳಗೆ ಇಳಿಸಿಕೊಳ್ಳಲು ಸಿದ್ಧವಾಗಿರುವ ಹಾಳೆ. ನಿಮ್ಮ ಸುತ್ತಲಿನ ಸಂತೆಯ ಮಧ್ಯದಲ್ಲೂ ನೀವು ನೀವಾಗಷ್ಟೇ ಉಳಿದಿರುವ ಆನಂದದ ಚಣ ಅದು. ಹೊರ ಜಗತ್ತಿನ ಜೊತೆಗೆ ಆತ್ಮಸಂಪರ್ಕ ಕಡಿದು ಹೋಗಿ ಪುಟ್ಟ ನಿರ್ವಾತ ಉಂಟಾಗುವ ಹೊತ್ತು. ಅಲ್ಲಿ  ನಾನು ಮಾತ್ರವೇ ಇದ್ದೇನೆ ಮತ್ತು ನನಗೆ ಮಾತ್ರ ಅಲ್ಲೇನಾಗುತ್ತಿದೆ ಎನ್ನುವುದು ಗೊತ್ತು. ಕ್ಯಾಮರಾದ ವ್ಯೂ ಫೈಂಡರೊಳಗೆ ನನ್ನನ್ನು ನಾನು ಕಂಡುಕೊಳ್ಳುವ ಈ ಮಾಯೆಯೇ ಧ್ಯಾನವಲ್ಲವೇ?

             ಹಿಂದು ಮುಂದುಗಳ ಚಿಂತೆಯಿಲ್ಲದೇ ಈ ಕ್ಷಣದಲ್ಲಿ ಬದುಕಬೇಕೆನ್ನುವ ಯೋಗಿಗಳು ಕಂಡುಕೊಂಡ ಸತ್ಯವನ್ನೇ ಛಾಯಾಗ್ರಹಣ ಹೇಳಿಕೊಡುತ್ತದೆ! ಕಣ್ಣೆದುರಿಗಿನ ಘಟನೆಯೊಂದನ್ನು ಸಾಕ್ಷಿಪ್ರಜ್ಞೆಯಂತೆ ಗಮನಿಸುತ್ತ ಅದನ್ನು ದಾಖಲಿಸಿಕೊಳ್ಳುವ ಪುಣ್ಯವೂ ದೊರಕುವ ಈ ಹವ್ಯಾಸಕ್ಕೆ ಎಣೆಯೇ ಇಲ್ಲ! ಕ್ಯಾಮರಾದ ಹಿಂದಿನ ಧ್ಯಾನದಲ್ಲಿ ನಾನು ಬದುಕನ್ನ ಬದಲಿಸಬಲ್ಲ ಕ್ಷಣಗಳನ್ನ ಕಂಡುಕೊಂಡಿದ್ದೇನೆ. ಈಗ ತಾನೇ ಅರಳಿದ ಹೂವು, ಇನ್ನೇನು ಕರಗಿ ಹೋಗಲಿರುವ , ಆದರೂ ಮಿನುಗುತ್ತಿರುವ ಇಬ್ಬನಿಯ ಬಿಂದು, ಕಣ್ಣೆದುರೇ ಬಣ್ಣ ಬದಲಿಸುತ್ತಿರುವ ಆ ಮಾಯಾವಿ ಗೋಸುಂಬೆ, ಯಾವ ಚಿಂತೆಯೂ ಇಲ್ಲದೇ ಮಧು ಹೀರುತ್ತಿದ್ದ ಮಿಡತೆಯೊಂದನ್ನ ಸಟಕ್ಕನೆ ಹಿಡಿದು ನುಂಗಿದ ಹಸಿರು ಹಾವು- ಇವೆಲ್ಲವೂ ನಮ್ಮದೇ ಜೀವನದ ಬೇರೆ ಬೇರೆ ಅಧ್ಯಾಯಗಳನ್ನ ನಮ್ಮೆದುರಿಗೆ ತೆರೆದು ತೋರಿಸುತ್ತ ಕ್ಯಾಮರಾದೊಳಗೆ ಬಂಧಿಯಾಗುತ್ತ- ಬದುಕಿನ ಆತ್ಯಂತಿಕ ಸತ್ಯಗಳನ್ನ ಹೇಳುತ್ತವೆ. ಕೈಯೊಳಗೆ ಕ್ಯಾಮರಾ ಇಲ್ಲದೇ ಹೋಗಿದ್ದರೆ ಖಂಡಿತಕ್ಕೂ ಇವನ್ನೆಲ್ಲ ನಾನು ಗಮನಿಸುತ್ತಲೇ ಇರಲಿಲ್ಲ! ಪ್ರಾಯಶಃ ಕ್ಯಾಮರಾ ಎಂಬೀ ಸಲಕರಣೆ ಆಧುನಿಕ ಯೋಗಿಯೇ ಸರಿ! ಆ ಹೊತ್ತಿನಲ್ಲಿ- ಅಲ್ಲಿ- ಇದ್ದುಕೊಂಡು ಸುಮ್ಮಗೆ ನಡೆಯುತ್ತಿರುವ ಒಂದು ಪುಟ್ಟ ಸುಂದರ ನೈಸರ್ಗಿಕ ಕ್ರಿಯೆಗೆ ಸಾಕ್ಷಿಯಾಗುವುದರಲ್ಲಿರುವ ಭಾವವನ್ನ ಅಕ್ಷರದಲ್ಲಿ ಹಿಡಿದಿಡಲಾರದು. ಸಾಧ್ಯವಿಲ್ಲದ ಮಾತದು.

               ಸಾಗರದ ಅಲೆಗಳ ಮುಂದೆ ನಿಂತು, ಅವುಗಳ ಆಗಮನ ನಿರ್ಗಮನಕ್ಕೆ ತಕ್ಕ ಹಾಗೆ ನಮ್ಮ ಉಸಿರೂ ಕೂಡ ಬದಲಾಗುವ ಸತ್ಯವನ್ನು ನಾನು ಕಂಡುಕೊಂಡಿದ್ದೇನೆ. ಮಳೆ ಹನಿಗಳ ತೊಟ್ಟಿಕ್ಕುವಿಕೆಯಲ್ಲಿನ ಸಂಗೀತ, ಹುಲ್ಲ ಎಲೆಯೊಂದರ ಮೃದುತ್ವ, ಮರಕ್ಕಂಟಿಕೊಂಡ ಪಾಚಿಯ ಹರಡುವಿಕೆಯಲ್ಲೂ ಅಡಗಿರುವ ಚಿತ್ರ, ಹಿನ್ನೀರ ಮರದ ತುಂಬ ತಾವೇ ಎಲೆಯಂತೆ ಕುಳಿತ ಹಕ್ಕಿಗಳ ಹಿಂಡು-ಒಂದೇ ಎರಡೇ? ಕ್ಯಾಮರಾ ಇಲ್ಲದೆಯೂ ಇವೆಲ್ಲವೂ ಕಾಣುತ್ತವೆ, ಅನುಭವಿಸಬಹುದು ಎಂದು ಹೇಳುವವರಿಗೆ ನನ್ನದೊಂದೇ ಉತ್ತರ. ಹೆಗಲ ಮೇಲೆ ಕ್ಯಾಮರಾ ಇದ್ದ ಕಾರಣಕ್ಕೆಯೇ ಇವೆಲ್ಲವನ್ನು ಹುಡುಕಿ ಹೊರಟಿದ್ದು ನಾನು! ಇಲ್ಲವಾದರೆ ಅವೆಲ್ಲ ಅವರ ಪಾಡಿಗೆ ಇದ್ದಲ್ಲೇ ಇರುತ್ತಿದ್ದವು, ನೋಡಲು- ಮತ್ತು ಆ ಕ್ಷಣ ಸೆರೆ ಹಿಡಿಯಲು ಅಲ್ಲಿ ನಾನು ಇರುತ್ತಿರಲಿಲ್ಲ, ಅಷ್ಟೇ.
ಜಂಗಮ ಜೀವನಕ್ಕೆ ಕ್ಯಾಮರಾಕ್ಕಿಂತ ಒಡನಾಡಿ ಬೇರೆ ಇಲ್ಲ. ಕಳೆದ ಹತ್ತು ವರುಷಗಳಲ್ಲಿ ಫೋಟೋಗಳನ್ನ ತೆಗೆಯುವ ಆಸೆಗೆ ಹಿಮಾಲಯದ ವರೆಗೂ ಹೋಗಿ ಬಂದ ನನಗೆ ಆದ ಅನುಭವಗಳೆಷ್ಟೋ, ದೊರಕಿದ ಸ್ನೇಹಿತರೆಷ್ಟೊ. ನನ್ನ ಕುಬ್ಜತನ ಏನು, ಎಂಥ ಹುಲುಮಾನವ ನಾನು ಎಂಬುದು ಅರ್ಥವಾಗಿದ್ದರೆ, ಅದಕ್ಕೆ ನನ್ನ ಈ ಛಾಯಾಗ್ರಹಣದ ಹವ್ಯಾಸವೇ ಮುಖ್ಯ ಕಾರಣ. ಉದ್ದುದ್ದ ಚಾಚಿಕೊಂಡಿರುವ ಹಿಮಪರ್ವತದೆದುರು ನಿಂತು ನೋಡಿದಾಗ, ಈ ನನ್ನ ಪುಟ್ಟ ಪೆಟ್ಟಿಗೆಯೊಳಗೆ ದಕ್ಕುವ ಹಿಮಾಲಯವಷ್ಟೇ ನನ್ನ ಹಿಮಾಲಯ- ದಕ್ಕದ್ದು ಅಗಾಧ ಎಂಬರ್ಥವಾಗಿ ನೆಲಕ್ಕೆ ಮತ್ತೂ ಹತ್ತಿರವಾಗುವ ಬಯಕೆ ತಾನಾಗೇ ಮೂಡುತ್ತದೆ.

              ನಮ್ಮ ಕಲ್ಪನೆಗಳಿಗೆ ರೆಕ್ಕೆ ಮೂಡಿಸುವ ಈ ಹವ್ಯಾಸದ ಇನ್ನೊಂದು ಬಹುಮುಖ್ಯ ಅಂಶವೆಂದರೆ, ಹತ್ತಿರವಾಗುವ ಕ್ರಿಯೆ. ನಿಸರ್ಗದ ಜೊತೆಗೋ, ಜೊತೆಗಿರುವ ಒಡನಾಡಿಗಳ ಜೊತೆಗಿನ ಸಂಸರ್ಗವನ್ನು- ಫೋಟೋಗ್ರಫಿ ಇನ್ನಷ್ಟು ಹತ್ತಿರವಾಗಿಸುತ್ತವೆ. ಒಂದು ಮುಗ್ಧ ಕಿರುನಗೆ, ಕಣ್ಣ ಮಿಂಚು- ನಿಮ್ಮನ್ನ ಸೆಳೆಯುವ ಬಗೆಯೇ ಬದಲಾಗುತ್ತದೆ! ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಕಗ್ಗದ ಮಾತು ಸಗ್ಗ ಎನ್ನುವುದು ಅರ್ಥವಾಗುತ್ತದೆ. ಜನಜಂಗುಳಿಯ ಮಧ್ಯೆ ನಿಂತು ಕ್ಯಾಮರಾ ಕ್ಲಿಕ್ಕಿಸುವುದು ನನಗೆ ಅತ್ಯಂತ ಇಷ್ಟ ಕೊಡುವ ಕೆಲಸ. ಚಹದಂಗಡಿಯ ಹುಡುಗ, ಕಸ ಗುಡಿಸುತ್ತಿರೋ ಆ ಹೆಂಗಸು, ಚಪ್ಪಲಿ ಹೊಲಿಯುತ್ತಿರುವ ವೃದ್ಧ, ಹಸ್ತಸಾಮುದ್ರಿಕೆ ಹೇಳುತ್ತಿರುವ ಜ್ಯೋತಿಷಿ- ಅರೆರೆ! ನಮ್ಮ ಮಧ್ಯೆಯೇ ಎಷ್ಟೊಂದು ಜಗತ್ತುಗಳಿವೆ! ಸುಮ್ಮಗೆ ಹಾದು ಹೋಗುವಾಗ ಎಂದೂ ಕಾಣದ ಇವರುಗಳು ಯಾರೂ- ಕ್ಯಾಮರಾ ಕೈಗೆ ಬಂದ ಕೂಡಲೇ ಜೀವಂತವಾದಂತೆ ಕಾಣುತ್ತಾರೆ. ಮತ್ತು ಹೀಗೆ ಕಂಡು ಹಾಗೆ ಮರೆಯಾಗುವುದರ ಒಳಗೆ ಅವರ ಕಥೆಗಳನ್ನೂ ನಮ್ಮೊಳಗೆ ಇಳಿಸಿ ಹೋಗಿಬಿಡುತ್ತಾರೆ.
ಈ ಎಲ್ಲ ಕಾರಣಗಳಿಗಾಗಿ ನನ್ನ ಪಾಲಿಗೆ ಕ್ಯಾಮರಾ ಒಂದು ಧ್ಯಾನದ ಸಲಕರಣೆಯೇ.              ಅದಿಲ್ಲವಾಗಿದ್ದರೆ ನಾನು ಎಷ್ಟೆಲ್ಲ ಕಲಿಕೆಯನ್ನು ಕಳೆದುಕೊಂಡು ಬಿಡುತ್ತಿದ್ದೆನೋ ಏನೋ. ಬದುಕಿನ ಒಪ್ಪಓರಣಗಳನ್ನ ಮಾತ್ರವಲ್ಲದೇ ಓರೆಕೋರೆಗಳನ್ನೂ ಈ ಪುಟ್ಟ ಯಂತ್ರ ಎತ್ತಿ ಹಿಡಿದು ಸರಿದಾರಿಯನ್ನ ತೋರಿಸುತ್ತದೆ. ಸುಖದಂತೆಯೇ ದುಃಖವನ್ನೂ ಸೆರೆ ಹಿಡಿಯುತ್ತದೆ. This too Shall Pass- ಎಂಬ ಮಾತನ್ನ ವಿರೋಧಿಸಲೋ ಎಂಬಂತೆ- ಮರೆಯಾಗುವ ಮಾಂತ್ರಿಕ ಕ್ಷಣವನ್ನು ಹಿಡಿದಿಟ್ಟು ಬೀಗುತ್ತದೆ! 
            ಮುಗಿಸುವ ಮುನ್ನ, ಒಂದು ಘಟನೆಯನ್ನ ಹಂಚಿಕೊಳ್ಳಲೇ ಬೇಕು. ಹೀಗೇ ಎಲ್ಲೋ ಹೋಗಿದ್ದಾಗ- ದಾರಿಯಲ್ಲೊಬ್ಬರು ವೃದ್ಧೆ ಯಾರದೋ ಬಳಿ ಏನನ್ನೋ ಮಾತನಾಡುತ್ತಿದ್ದರು. ಅವರ ಮಾತಿನಲ್ಲಿ ದೈನ್ಯವಿತ್ತು- ವಿನಂತಿಯಿತ್ತು. ಪಾಪ ಎದುರಿಗಿದ್ದವರ ಬಳಿ ಏನೋ ಕಷ್ಟ ಹಂಚಿಕೊಳ್ಳುತ್ತಿದ್ದರು. ಸುಮ್ಮನೆ ಕೊಂಚ ದೂರ ನಿಂತೇ ಅವರ ಚಿತ್ರವನ್ನ ಕ್ಲಿಕ್ಕಿಸುತ್ತಿದ್ದೆ. ನಾನು ಫೋಟೋ ತೆಗೆಯುವುದನ್ನ ನೋಡಿದ ಆಕೆಯ ಮುಖಚರ್ಯೆ ಬದಲಾಯಿತು. ನಾನು ಏನೂ ಕೇಳದೆಯೇ ಇದ್ದರೂ- ಅವರಾಗೇ  “ ನಮ್ಮ ಕಷ್ಟ ಪಟದಲ್ಲಿ ಯಾಕೆ ಗೊತ್ತಾಗ್ಬೇಕು ಹೇಳಿ” ಎಂದು ಅಮಾಯಕವಾಗಿ ನಕ್ಕು ಬಿಟ್ಟರು. ಈಗ ಫೋಟೋ ತೆಗೆ-ಎಂಬ ಹಾಗೆ. ಆ ನಕ್ಕ ಕ್ಷಣದಲ್ಲಿತ್ತು ಬದುಕಿನ ಸಾರ್ಥಕತೆ. ಧ್ಯಾನವನ್ನೂ ಮೀರಿದ ಭಾವ. ಮತ್ತು ಅಂತಹ ಭಾವಗಳೇ ಮತ್ತೆ ಹೊಸ ನಡಿಗೆಗೆ ಪ್ರೇರೇಪಿಸುವ ಉದ್ದೀಪನದ ಮದ್ದು!


 ವಿಶ್ವವಾಣಿಯ ಗುರು ಪುರವಣಿಯಲ್ಲಿ ಪ್ರಕಟಿತ


3 ಕಾಮೆಂಟ್‌ಗಳು:

sunaath ಹೇಳಿದರು...

ಈ ವೃದ್ಧೆಯ ಮುಖಚಿತ್ರವಂತೂ ಅದ್ಭುತವಾಗಿದೆ. ಒಂದು ವಿಷಯ ನಿಮಗೆ ಹೇಳಲೇ ಬೇಕು: ಅನೇಕ ವರ್ಷಗಳ ಹಿಂದೆ, (--ಆಗಿನ್ನೂ smart phones ಇರಲಿಲ್ಲ--) ಹಳ್ಳಿಗಾಡಿನ ಒಂದು ರಸ್ತೆಯಲ್ಲಿ ನಾನು ವಾಹನದಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಮಧ್ಯವಯಸ್ಸಿನ ಓರ್ವ ಮಹಿಳೆ ಬರುತ್ತಿರುವುದನ್ನು ನೋಡಿದೆ. She was a picture of humility. ಥಟ್ಟನೆ ನನಗೆ ಭಾರತಮಾತೆಯನ್ನು ನೋಡುತ್ತಿರುವೆ ಎಂದೆನಿಸಿತು. ಫೋಟೋಗ್ರಾಫಿಯು ಲಗ್ಝುರಿಯಾದ ಆ ಕಾಲದಲ್ಲಿ ಅವಳ ಛಾಯಾಚಿತ್ರವನ್ನು ತೆಗೆದಿಟ್ಟುಕೊಳ್ಳುವ ಮಾತೇ ಇರಲಿಲ್ಲ. Coincidentally, ಬಳಿಕ ಎರಡೇ ದಿನಗಳ ನಂತರ ನಾನು ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಡೆಯುತ್ತಿದ್ದಾಗ, ಚಲಿಸುತ್ತಿರುವ ಕಾರಿನಲ್ಲಿ, ಓರ್ವ ಮಹಿಳೆ ತನ್ನ ಜೊತೆಗಾರನನ್ನು(=ಸಾರಥಿಯನ್ನು) ಉನ್ಮತ್ತಳಂತೆ ಮುತ್ತಿಕ್ಕುತ್ತಿರುವುದನ್ನು ನೋಡಿದೆ. ‘ಹಾಯ್! ಭಾರತಮಾತೆ!’ ಎಂದೆನಿಸಿತು.
ನನ್ನದು old fashioned thinking ಎನಿಸಿದರೆ, ದಯವಿಟ್ಟು ಕ್ಷಮಿಸಿ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗೆ! ಕ್ಷಮಿಸೋ ಮಾತೆಲ್ಲ ಯಾಕೆ.. ನಿಮ್ಮ ಅನುಭವದೆದುರಿಗೆ ನಾನು ಸೊನ್ನೆ!

Unknown ಹೇಳಿದರು...

nice interesting travel blog..found similar blog here