ಸೋಮವಾರ, ಜನವರಿ 30, 2012

ದಣಪೆ ಸರಿಯುವುದಿಲ್ಲ..


ನಿತ್ಯದಂತೆ ಇಂದೂ ಹೊಸಿಲ ಮೇಲಿನ
ದೀಪದ ಜ್ವಲನ ನೋಡುತ್ತ
ಕೂತಿದ್ದಾನೆ ಹಿರಿಯ,ನಿರೀಕ್ಷೆಗಳ ಹೊತ್ತು
ಹೊರಗೆ ಯಾರೂ ದಣಪೆ
ಸರಿಸಿದ ಸದ್ದೂ ಕೇಳುವುದಿಲ್ಲ

ಮೂರುಸಂಜೆಯ ಮೇಲೆ ಬೆಳಕು
ಕಡಿಮೆ, ಕಡಿಮೆ ಮಾತು
ಕಡಿಮೆ ನಿರೀಕ್ಷೆ
ಇನ್ನು ಮೇಲೆ ಈ ಕಡೆಗೆ
ಯಾರೂ ಹಾಯುವುದಿಲ್ಲ ಗಾಳಿಯೊಂದು
ಬಂದೀತು ಆರಿಸಲು ದೀಪ

ಒಳಗೇನೋ ಸದ್ದು ಬಿದ್ದಿದ್ದು
ಪಾತ್ರೆಯೋ, ಅಥವ ಅದನ್ನು ಹಿಡಿದ ಅವಳೊ?
ದಣಪೆಯ ಸದ್ದಿನ ನಿರೀಕ್ಷೆಯಲ್ಲಿ
ಬೇರೆ ಶಬ್ದ ಕೇಳದೆ ಕಿವಿ ಮಂದ
ಅಥವಾ ಅವಳು ಮಾತುಬಿಟ್ಟಿರಲೂ ಬಹುದು

ಟಪಾಲುಗಳಲ್ಲಿ ಬರುವುದೀಗ ಬರಿಯ
ಸಾವಿನ ದಿನ ನೆನಪಿಸುವ ಪಾಲಿಸಿ
ಯ ಕಂತು ತುಂಬುವ ಪತ್ರ, ಬೆಳೆ
ಸಾಲದ ನೋಟೀಸು
ಎಂದೂ ತೆರೆಯದ ಮದುವೆ ಕಾಗದ

ಮೇಲೆಲ್ಲೋ ಮರ ಬಿದ್ದು
ಸತ್ತಿದ್ದು ಫೋನು
ಮಗ ಕೊಡಿಸಿ ಹೋದ
ಮೊಬೈಲಿಗೆ
ಗುಡ್ಡದ ಮೇಲೆ ಮಾತ್ರ ಮಾತು

ಈ ಸಂಜೆ ಯಾರಾದರೂ ಬರಬಹುದಿತ್ತು
ಕೊನೆ ಪಕ್ಷ ಬೀಡಾಡಿ ದನವಾದರೂ ನುಗ್ಗಬಹುದಿತ್ತು
ಒಳಗೆ, ಅದೂ ಬರುವುದಿಲ್ಲ
ದಣಪೆಯನ್ನು ಯಾರೂ
ಸ ರಿ ಸು ವು ದಿ ಲ್ಲ.

13 ಕಾಮೆಂಟ್‌ಗಳು:

sunaath ಹೇಳಿದರು...

ಶ್ರೀನಿಧಿ,
ಉತ್ತಮ ಕವನ. ಅವರ ಬದುಕಿನ ಅಂಗಳಕ್ಕೆ ಹಾಕಿದ ದಣಪೆಯನ್ನು ನೀವು ಕವನದ ಮೂಲಕ ಸರಿಸಿದ್ದೀರಿ.

ತೇಜಸ್ವಿನಿ ಹೆಗಡೆ ಹೇಳಿದರು...

Sakat! double liked!

ಸಿಂಧು sindhu ಹೇಳಿದರು...

ನಿಧೀ,
ಬ್ಯೂಟಿ! ಅಂದರೆ ಒಂದ್ರೀತಿ ಸ್ತುತಿ ನಿಂದೆ ಈ ಕವಿತೆಯ ಭಾವಕ್ಕೆ.
ಸುಧನ್ವ ದೇರಾಜೆ ಒಂದಷ್ಟು ವರ್ಷಗಳ ಕೆಳಗೆ ಈ ಮೂಡಿನ ಪದ್ಯ ಬರೆದು ಎಷ್ಟೋ ದಿನದವರೆಗೆ ಅಮ್ಮ ಕಾಯುತ್ತಿದ್ದ ಕಾಲು ಹಾದಿಯ ನೆನಪು ಮನಸ್ಸಿಗೆ ಅಟ್ಟುತ್ತಿತ್ತು
http://deraje.blogspot.com/2007/12/blog-post.html
ನಾವು ಕಾಯುವ ಕಾಲಕ್ಕೆ ದಣಪೆಗಳು ecstinct ಆಗಿ, ವೆಬ್ ಕ್ಯಾಮಿನ ಕಿಂಡಿಗೆ ಕಣ್ಣು ನೆದುವುದೇ ಉಳಿಯೋದು ಅನ್ಸುತ್ತಿದೆ.
ಕಣ್ಣು ಕಟ್ಟುವ ಚಿತ್ರಣವನ್ನ ಭಾವದ ಕುಂಚದಲ್ಲದ್ದಿ ತೋಯಿಸಿ ಒದ್ದೆ ಒದ್ದೆಯಾಗಿ ಕೊಟ್ಟಿರುವುದಕ್ಕೆ ಥ್ಯಾಂಕ್ಯು ವೆರಿ ಮಚ್.

ಪ್ರೀತಿಯಿಂದ,
ಸಿಂಧು

ವಿಕ್ರಮ ಹತ್ವಾರ ಹೇಳಿದರು...

chennaaaaagide!!!

ಶ್ರೀನಿಧಿ.ಡಿ.ಎಸ್ ಹೇಳಿದರು...

@sunaath
ಥನ್ಯೋಸ್ಮಿ!
@ತೇಜಸ್ವಿನಿ ಹೆಗಡೆ ಧನ್ಯವಾದಗಳು..
@ಸಿಂಧು, ನಿನ್ನ ಕಮೆಂಟೇ ಕವನ ಇದ್ದಾಂಗೆ ಇರತ್ತಲಾ ಅಂತ!
@ವಿಕ್ರಮ ಹತ್ವಾರ-ಥ್ಯಾಂಕ್ಸ್ ಗುರುವೇ!

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

ಅವಧಿಯಲ್ಲಿ ಓದಿದ್ದೆ ಈ ಕವನವನ್ನ.. ತುಂಬಾ ಚೆನ್ನಾಗಿದೆ.. ಭಾವ ತುಂಬಾ ಇಷ್ಟವಾಯಿತು...:)

ಈಶ್ವರ ಹೇಳಿದರು...

ಚೆನ್ನಾಗಿದೆ ಕವನ ..

ದಣಪೆಯನ್ನು ಯಾರೂ
ಸ ರಿ ಸು ವು ದಿ ಲ್ಲ.

ಬಿಡಿಸಿ ಬರೆದಿದ್ದಕ್ಕೇ ಜಾಸ್ತಿ ತೂಕ .

shriram bhat ಹೇಳಿದರು...

ಏನಂತ ಹೇಳಬೇಕೋ ಗೊತ್ತಾಗಲ್ಲ ಶ್ರೀನಿಧಿ . ಅರ್ಥ ಮಾಡ್ಕೊಂಡ್ರೆ ಕಷ್ಟ ಆಗತ್ತೆ ಮನಸಿಗೆ , ಆದ್ರೆ ಯಾರೇ ಓದಿದರು ಅರ್ಥ ಆಗೋತರ ಬರ್ದಿದೀರ . ಗಾಂಧಿ,ಬೋಸರು ಹುಟ್ಬೇಕು ಆದ್ರೆ ಪಕ್ಕದ್ಮನೇಲಿ ಅನ್ನೋತರ ಆಗಿದೀವಿ ನಾವೆಲ್ಲ . ಇವತ್ತಿನ ನಮ್ಮೂರಿನ ಪರಿಸ್ಥಿತಿ ಹಿಂಗಾಗಿದೆ. ಊರಲ್ಲಿ ಕೊನೆಕೊಯ್ಲು ಅಂತ ಅಮ್ಮ ಫೋನ್ ಮಾಡಿದಾಗ ಹೇಳಿದ್ರು !!!!!!

Shriram Bhat

ಶ್ರೀಪಾದು ಹೇಳಿದರು...

ಚನ್ನಾಗಿದ್ದು ::)

ಮಧು ದೊಡ್ಡೇರಿ ಹೇಳಿದರು...

ಸೂಪರ್...
ತುಂಬಾ ಇಷ್ಟ ಆತು...
>>ಮಧು ದೊಡ್ಡೇರಿ

Sudhee ಹೇಳಿದರು...

Super dosta...

ashwini ಹೇಳಿದರು...

super like!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಂಧ್ಯಾ, ಈಶ್ವರ ಭಟ್,ಶ್ರೀರಾಮ ಭಟ್, ಶ್ರೀಪಾದು, ಸುಧಿ, ಅಶ್ವಿನಿ ಎಲ್ಲರಿಗೂ ಧನ್ಯವಾದಗಳು.

ನಾವೆಲ್ಲ ಪ್ರಾಯಶಃ ಇಂತಹ ತೊಳಲಾಟದಿಂದ ಮುಕ್ತಿ ಪಡೆಯುವ ಹಾಗಾಗಲಿ ಎಂಬುದೇ ನನ್ನ ಆಶಯ.