ಗುರುವಾರ, ಜನವರಿ 25, 2007

ರಜೆಯನೆದುರಿಟ್ಟುಕೊಂಡು...

ನಾಳೆ ಬೆಳಗ್ಗೆ ಅಂದ್ರೆ ಮನೆ. ಭರ್ಜರಿ ರೆಸ್ಟಿಂಗು , ಎಲ್ಲೂ trekking ಹೋಗದೆ, ತಿರುಗದೇ, ೩ ದಿನಗಳ ರಜೆಯನ್ನ ಈ ತರಹ ಉಪಯೋಗಿಸುತ್ತಿರುವುದು ಇದೇ ಮೊದಲು ಅಂತ ಕಾಣಿಸುತ್ತದೆ!ಮನೇಲೆ ಅದೂ ಇದೂ ಮಾಡ್ಕಂಡು ಆರಾಮಾಗಿರೋ ಯೋಚ್ನೆ. ಹಾಲು ಕರಿಯೋದು, ತೋಟಕ್ಕೆ ನೀರು ಬಿಡೋದು, ಗುಡ್ದ ಬೆಟ್ಟ ಸುತ್ತೋದು..

ಎಂಥಾ ವಿಪರ್ಯಾಸ ಅಲ್ವಾ?, ಮೊದ್ಲು ನಾನು ದಿನಾ ಮಾಡೊ ಕೆಲ್ಸ, duty ಆಗಿತ್ತು ಇದೆಲ್ಲ! ಆವಾಗ ಹಾಳಾದ್ದು ಈ ಕೆಲ್ಸ ಯಾಕೆ ನಾನು ಮಾಡಬೇಕು ಅಂತ ಆಲೋಚಿಸ್ತಾ ಇದ್ದೆ, ಒಮ್ಮೆ ಈ ರಗಳೆ ಮುಗಿದರೆ ಸಾಕು ಅನ್ನಿಸುತ್ತಿತ್ತು. ಅಪ್ಪ ಎಲ್ಲ ಬಿಟ್ಟು ಈ ಹಳ್ಳಿಯ ಮೂಲೆಯಲ್ಲಿ ಯಾಕಾದರೂ ಮನೆ ಮಾಡಿದರೂ ಅಂತಲೂ ಅನ್ನಿಸಿದ್ದಿದ್ದೆ. ಆದರೆ ಈಗ ಅವುಗಳೇ ನನ್ನ ಸಂತಸ ಹುಡುಕುವ ಮಾಧ್ಯಮಗಳಾಗಿವೆ. ಅಪ್ಪ ದಿನಾ ಬೆಳಗ್ಗೆದ್ದು "ಶ್ರೀನಿಧೀ, ಶ್ರೀನಿಧೀ, ಹಾಲು ಕರ್ಯಕು ಏಳಾ" ಅಂದಾಗ ಶಪಿಸುತ್ತಲೇ ಎದ್ದು ಆ ಕೆಲ್ಸ ಮಾಡಲು ಹೊರಡುತ್ತಿದ್ದೆ.

ಸಂಜೆ ನಾನು ಕ್ರಿಕೆಟ್ ಆಡುವ ಸಮಯಕ್ಕೇ, ಅಪ್ಪ ನೀರ ಪೈಪು ತಗೊಂಡು ಹೊರಡುತ್ತಿದ್ದ, ತೆಂಗಿನ ಮರಗಳಿಗೆ ನೀರಾಯಿಸಲು .ನಾನು ಬರುವುದಿಲ್ಲ ಎಂದರೆ ತಾನೇ ಎಲ್ಲ ಮರಗಳಿಗೆ ನೀರು ಹಾಕಿ ಸುಸ್ಥು ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ , ನಾನೇ ಹೋಗಿ ಎಲ್ಲ ತೆಂಗಿನ ಮರಗಳ ಸುತ್ತ, ನೀರು ಹಾರಿಸಿ, ಬುಡವನ್ನು ಒದ್ದೆ ಮಾಡಿ, ಆಡಲು ಓಡುತ್ತಿದ್ದೆ! ಬಹಳ ಕಾಲದ ಹಿಂದೇನೂ ಅಲ್ಲ, ಮೊನ್ನೆ ಮೊನ್ನೆ, ೨-೩ ವರ್ಷಗಳ ಹಿಂದಿನ ವರೆಗೂ!

ಇವತ್ತು ನಾನು ಮತ್ತೆ ಹಾಲು ಕರೀಬೇಕು, ನೀರು ಬಿಡಬೇಕು ಅಂತ ಅಲೋಚನೆ ಮಾಡುತ್ತೇನೆ, ಅಪ್ಪನಿಗೆ ಈಗಲೂ ಅದು ಕೆಲಸವೇ. ನಾನು ಮೂರು ದಿನ ಇದ್ದು, ಆ ಕೆಲಸದಲ್ಲಿ ಸಂತಸ ಅನುಭವಿಸಿ ವಾಪಾಸಾಗುತ್ತೇನೆ! ಅಪ್ಪನಿಗೂ ಅದು ಸಂತಸವೇ, ಆದರದು ಬೇರೆಯದೇ ತೆರನಾದ್ದು.

ತಂಗಿ, ನಾನೇನೋ ಅಲ್ಪ ಸ್ವಲ್ಪ ಬರೆಯುತ್ತೇನಾದ್ದರಿಂದ ಅವಳ ಸಂಶಯಗಳ ಬುಟ್ಟಿ ರೆಡಿ ಇಟ್ಟುಕೊಂಡು ಕಾಯುತ್ತಿರುತಾಳೆ. ಅಣ್ಣಾ, ಅದ್ಯಾಂಗೆ, ಇದ್ಯಾಂಗೆ ಅನ್ನುತ್ತಾ.. ಅವಳ ಜರ್ನಲಿಸಂ ನ ಕೊರೆತಗಳನ್ನು ಸಹಿಸಿಕೊಳ್ಳಲು ನಾನು ಈಗಿಂದಲೇ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ!

ಅಮ್ಮನ ಬಳಿ ಒಂದಿಷ್ಟು ಹೊಸ ಅಡುಗೆ ತಯಾರಿ ಬಗ್ಗೆ ಕಲೀಬೇಕು! ಮಾಡಿದ್ದೇ ಮಾಡಿಕೊಂಡು ಉಂಡು ಬೇಜಾರಾಗಿದೆ.
ಇಷ್ಟಾಗಿ ನಾಳೆ ಗಣರಾಜ್ಯೋತ್ಸವ, ಯಾವುದಾದರೂ ಹತ್ತಿರದ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದರೂ ಇತ್ತೇ, ಅದಕ್ಕೂ ಹಾಜರಿ ಹಾಕಬೇಕಾದ ಜವಾಬ್ದಾರಿ ಇದೆ!

ಇದೆಲ್ಲ ಮೂರು ದಿನಗಳ ಕಥೆಯಾಯಿತು. ಮುಂದೇನಾಗುತ್ತದೆ?

ಸಣ್ಣ ಸಣ್ಣ ರಜೆಗಳ ಖುಶಿ ಅನುಭವಿಸೋಕೆ ಮನೆಗೆ ಹೋಗುವ ನಾನು/ನಾವುಗಳು ನಮ್ಮ ಬೇರುಗಳಿಗೆ ಶಾಶ್ವತವಾಗಿ ಎಂದಾದರೂ ಹಿಂದಿರುಗುತ್ತೇವಾ?

8 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

All shld think abt it..........

"Returning to the roots for once & for all" whether it will ever be possible or will become "Mission Impossible"

Avani ಹೇಳಿದರು...

Its Nice to imagination..........

This blog gives us strong review of childhood........dayssss

ಅನಾಮಧೇಯ ಹೇಳಿದರು...

ತುಂಬಾ ಚೆನ್ನಾಗಿದೆ.

Shree ಹೇಳಿದರು...

ಪ್ರಾಯೋಗಿಕವಾಗಿ ಅಸಾಧ್ಯ.. ಆಧುನಿಕ ಜೀವನ ಶೈಲಿ ಅದೇನೋ ನಮ್ಮಿ೦ದ ಕಸಿದುಕೊಳ್ತಿದೆ.. ಅದನ್ನ ತಡೆಯಲು ನಾವು ಅಸಮರ್ಥರಾಗಿ ಬಿಡ್ತೀವಿ... ಅನಿವಾರ್ಯತೆ.. ಆದರೆ ಅದರ ಬಗ್ಗೆ ಯೋಚನೆ ಮಾಡೋದಕ್ಕೂ ಸಮಯ ಇರದಿರುವುದು ವಿಪರ್ಯಾಸ...

Unknown ಹೇಳಿದರು...

dostaa yento baradde neenu .. aadre yenge vodale aagtaa ille !?

ಶ್ರೀನಿಧಿ.ಡಿ.ಎಸ್ ಹೇಳಿದರು...

santripthi, praveen, ಅರ್ಚನಾ,
ನಿಮ್ಮ ವಿಚಾರಗಳನ್ನ ಹಂಚಿಕೊಂಡಿದ್ದಕ್ಕೆ ಕೃತಜ್ಞ!
@Shree..

ನೀವು ಹೇಳಿದ್ದು ಸತ್ಯ,
"ಆಧುನಿಕ ಜೀವನ ಶೈಲಿ ಅದೇನೋ ನಮ್ಮಿ೦ದ ಕಸಿದುಕೊಳ್ತಿದೆ.. ಅದನ್ನ ತಡೆಯಲು ನಾವು ಅಸಮರ್ಥರಾಗಿ ಬಿಡ್ತೀವಿ... "

ಅಥವಾ, ಸಮರ್ಥರಿದ್ದರೂ ಕೂಡಾ, ಸುಮ್ಮನಿದ್ದು ಬಿಡುತ್ತೇವೆ,ಹೆಚ್ಚಿನ ಬಾರಿ, ಅಲ್ವಾ?

ಮನಸ್ವಿನಿ ಹೇಳಿದರು...

ಶ್ರೀನಿಧಿ,

ಒಂದು ಕಾಲದಲ್ಲಿ ಬೇಸರದಿಂದ ಮಾಡ್ತಾ ಇದ್ದ ಮನೆ ಕೆಲಸನ ಈಗ ಮಾಡೋವಾಗ ಆಗೋ ಖುಶಿನೇ ಬೇರೆ.

"ಸಣ್ಣ ಸಣ್ಣ ರಜೆಗಳ ಖುಶಿ ಅನುಭವಿಸೋಕೆ ಮನೆಗೆ ಹೋಗುವ ನಾನು/ನಾವು ನಮ್ಮ ಬೇರುಗಳಿಗೆ ಶಾಶ್ವತವಾಗಿ ಎಂದಾದರೂ ಹಿಂದಿರುಗುತ್ತೇವಾ? " ಇದು ನಮ್ಮ ಆದ್ಯತೆಯನ್ನ ಅವಲಂಬಿಸಿದೆ.

Annapoorna Daithota ಹೇಳಿದರು...

ಸುಂದರ ಚಿತ್ರಣ ಶ್ರೀನಿಧಿ....
ಆದರೆ ಇಲ್ಲಿರುವಾಗ ಅಲ್ಲಿಯದು ಅಲ್ಲಿರುವಾಗ ಇಲ್ಲಿಯದು ಬೇಕೆನಿಸುತ್ತದೆ. ಇದು ಜೀವನದ ಸತ್ಯ.... ಯಾವುದು ಇಲ್ಲವೋ ಅದೇ ಬೇಕು ಎನ್ನುತ್ತದೆ ಮನುಷ್ಯನ ಮನಸ್ಸು. ಯಾವುದೇ ಆದರೂ ಸ್ವಲ್ಪ ದಿನ ಖುಶಿ ತರುತ್ತದೆ, ಆಮೇಲೆ ಅದು ಯಾಂತ್ರಿಕ ಎನ್ನಿಸಿಬಿಡುತ್ತದೆ, ಹಾಗಾಗದಂತೆ ನಾವು ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ...
ಅದೂ ಅಲ್ದೆ, ನಮಗೇನಿಷ್ಟವೋ, ಹಿಡಿಸುತ್ತದೋ ಅದನ್ನು ಮಾಡಬೇಕು. ಮಾಡುವ ಕೆಲಸ, ಅಥವಾ ಇರುವ ಸ್ಥಳ ಯಾವುದೇ ಆದರೂ ನಾವು ಇಚ್ಛೆಪಟ್ಟರೆ ಮಾತ್ರ ಅದು ಸಹ್ಯವಾಗುತ್ತದೆ. ಒತ್ತಾಯವಿದ್ದರೆ ಅದು ಅ-ಸಹ್ಯವಾಗುತ್ತದೆ, ಏನಂತೀರಾ... :-)