ಮಂಗಳವಾರ, ಮೇ 29, 2007

ಕನವರಿಕೆಗಳು...

ಯಾಕೆ?

ಚಂದಿರನೆಂದರೆ ಎಲ್ಲರಿಗಿಷ್ಟ,
ಹುಣ್ಣಿಮೆ, ಬಿದಿಗೆ,
ಅಮವಾಸ್ಯೆ,
ಎಲ್ಲಕ್ಕೂ ಬರೆದಿದ್ದಾರೆ ಕವನ.
ಬೆಳದಿಂಗಳು, ಕತ್ತಲು
ಎಲ್ಲಕ್ಕೂ ಕೊಟ್ಟಿದ್ದಾರೆ ಉಪಮೆಗಳ.
ಕೇಳುವರೇ ಇಲ್ಲ ಪಾಪ,
ಅವನ ಪಕ್ಕ ನಿಂತು
ತನ್ನದೇ ಪ್ರಭೆಯೊಳಗೆ ಬೆಳಗುವ
ಒಂಟಿ ನಕ್ಷತ್ರವ.

ಅಲ್ಲವೆ?

ಅರಿವೆಂದರೇನೆಂದು
ಅರಿವಾಗೋ ಹೊತ್ತಿಗೆ,
ಉಟ್ಟರಿವೆ
ಹರಿದಿರುತ್ತದೆ.

ನನ್ನನೇ ಕೇಳಿಕೊಂಡಿದ್ದು.

ಭಾವಜೀವಿಗಳೆಂದು
ಕರೆದುಕೊಳ್ಳುವ
ಎಲ್ಲರಿಗೂ ಭಾವವೇ
ಇರುತ್ತದೆಂದೇನೂ ಇಲ್ಲ.
ಭಾವದ ಬಟ್ಟೆಯೊಳಗೆ
ಅಭಾವ ಜೀವಿಗಳೂ
ಇರಬಹುದು.
ನಾನು ಭಾವನೋ
ಅಭಾವನೋ?!

11 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ನೀಲಾಂಬರದ ಚಂದಿರನ ಸನ್ನಿಧಿಯಲ್ಲಿ ನಗುತ್ತ ನಿಂತ ರೋಹಿಣಿಯ ಉಪಮೆ - ಕೆ.ಎಸ್.ನ ಅವರ ಕವಿತೆಯದ್ದು ನನ್ನ ಬಹಳ ಇಷ್ಟದ ಸಾಲು.
ಸ್ವಯಂಪ್ರಭೆಯ ಚುಕ್ಕಿ ಸಮೂಹದ ಬಗ್ಗೆ ಬೇಂದ್ರೆಯವರದ್ದು ವಿಶಾಲ ನೋಟ..
ಹೀಗೇ ಇನ್ನೂ ಎಷ್ಟೋ..
ಆದ್ರೂ ಕಾವ್ಯದ ಬಾನಿನಲ್ಲಿ ಚಂದಿರನ ಬಾಡಿಗೆ ಪ್ರಭೆ ಈ ಎಲ್ಲ ಸ್ವಯಂಪ್ರಭಾ ತಾರೆಗಳನ್ನು ಡಲ್ಲು ಹೊಡೆಸಿರುವುದೂ ನಿಜ.. :)

ಎಲ್ಲ ಅರಿವಿಗೂ ಬಟ್ಟೆ ಹರಿಯಲೇ ಬೇಕಾ? ಅರಿಯುವುದು ಕಷ್ಟ.. ;) ಚಂದ ಪ್ರಾಸ.

ನಿಮಗೇ ಹೇಳಿದ್ದು:
ನಿಮ್ಮದು ಪ್ರಭಾವ.
ಭಾವೋದ್ದೀಪ್ತ ಪ್ರಭಾವ.

ಪ್ರೀತಿಯಿರಲಿ,

ಅನಾಮಧೇಯ ಹೇಳಿದರು...

ಶ್ರೀನಿಧಿಯವರೆ...ನಿಜಕ್ಕು ನಿಮ್ಮ ಮೊದಲಿನ ಮಾತು ನಿಜ...ನಾವು ನಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸಂತೋಷಗಳನ್ನ ಅನುಭವಿಸುವ ಬರದಲ್ಲಿ ಚಿಕ್ಕ ಚಿಕ್ಕ ಸಂತೋಷಗಳನ್ನ ನಿರ್ಲಕ್ಷಿಸಿಬಿಡುತ್ತೇವೆ...ನೋಡಿ ಪ್ರತಿಯೊಬ್ಬರೂ ಚಂದ್ರ ಬೆಳದಿಂಗಳು ಕತ್ತಲು ಬೆಳಕು ಇವುಗಳ ನೆನಪೊಳಗೆ ಅಸಾಂಖ್ಯಾತ ನಕ್ಷತ್ರಗಳನ್ನ ಮರೆತು ಬಿಡುತ್ತೇವೆ...ನಿಮ್ಮ ಈ ಕಲ್ಪನೆ ಕೇವಲ ನಕ್ಷತ್ರ ಬೆಳದಿಂಗಳು ಕತ್ತಲು ಬೆಳಕಿಗಷ್ಟೆ ಸೀಮಿತವಲ್ಲ ಅನ್ನುವುದು ನನ್ನ ಭಾವನೆ....ದೊಡ್ಡ ದೊಡ್ಡ ಸಂತೊಷಗಳ ಜೊತೆಗೆ ಚಿಕ್ಕ ಚ್ಚಿಕ್ಕ ಆನಂದಗಳ ಕಡೆಗೂ ನೋಡಬೇಕು ಅನ್ನುವುದು ನಿಮ್ಮ ಕವನದ ಸಾರಾಂಶ...[:)] ಅತುತ್ತಮ್ನವಾದ ಕಲ್ಪನೆ..ಬರೆಯುತ್ತಿರಿ ಒದುವ ಭಾಗ್ಯನಮ್ಮದಾಗಲಿ....

ನಿಮ್ಮ
ಸೋಮು

Unknown ಹೇಳಿದರು...

ಉಟ್ಟರಿವೆ ಹರಿದಿದ್ದು ನಮಗರಿವಾಗಲು ಮತ್ತೆಸ್ಟು ದಿನ ಬೆಕೊ ನಾವ್’ಅರಿವೆ’ ಶ್ರೀನಿಧಿ !!!!

ಶ್ಯಾಮಾ ಹೇಳಿದರು...

ನಕ್ಷತ್ರಗಳ ಬಗ್ಗೆ ಬರೆದೇ ಇಲ್ಲವಂತೇನಿಲ್ಲ, ಆದರೂ ಚುಕ್ಕೆಗಳು ಅಂತ ಕರೆಸಿಕೊಳ್ಳುವ ಈ ನಕ್ಷತ್ರಗಳು ಚಂದಿರನ ಬಾಡಿಗೆ ಕಾಂತೀಯೆದುರು ಸೊರಗಿ ಬರೀ ಚುಕ್ಕೆಗಳಾಗಿಯೇ ಇರುವುದಂತೂ ಸುಳ್ಳಲ್ಲ, ಜೀವನದಲ್ಲೂ ಅನೇಕ ಸಲ ಹೀಗಾಗುವುದು ಇದೆ,

ತುಂಬಾ ಸುಂದರ ಸಾಲುಗಳು

VENU VINOD ಹೇಳಿದರು...

ಸುಂದರ ಸಾಲುಗಳು. ಅದರಲ್ಲೂ ಮೊದಲ ಕವನ ಸೂಪರ್‍

Archu ಹೇಳಿದರು...

chandada kavitegaLu..

ವಿ.ರಾ.ಹೆ. ಹೇಳಿದರು...

ಕನವರಿಸಿದ್ದು ಚೆನಾಗಿದೆ.

ಎರಡನೆದು ಬಹಳ ಇಷ್ಟ ಆಯ್ತು.

ಹೀಗೆ ಆಗಾಗ ಕನವರಿಸುತ್ತಿರು.

ಅನಾಮಧೇಯ ಹೇಳಿದರು...

ಚಂದ್ರ ತಾರೆಗಳನ್ನ instances ಆಗಿ ತೆಗೆದುಕೊಂಡಿದ್ದೀರಾ ಅನ್ಸುತ್ತೆ ನನಗೆ. ಭಾವನೋ ಅಭಾವನೋ ಎಂದು ಕಾಡುವ ಪ್ರಶ್ನೆ very natural, ತುಂಬಾ emotional ಅಂತ ಕರೆಸಿಕೊಳ್ಳುವವರೂ ಬಹಳಷ್ಟು ಸಮಯಗಳಲ್ಲಿ ಅದಕ್ಕೆ ತದ್ವಿರುದ್ದವಾಗಿ behave ಮಾಡಿರುತ್ತಾರೆ. last one impressed me..ಭಾವಾಳೋ-ಅಭಾವಾಳೋ carry onn

ನಿ. ರಚಿತ ಹೇಳಿದರು...

WOW!!! chenda untu nimma kanavarike
kalpanege vaastavada kondi beresi, manava tampagisitu nimma saalugalu
coool!!!

Sandeepa ಹೇಳಿದರು...

ಚೆನ್ನಾಗಿವೆ.

ಮೊದಲ ಕವನಕ್ಕೆ ಪ್ರತಿಕ್ರಿಯೆ,
ನನ್ನ ಬ್ಲಾಗಿನಲ್ಲಿ.

ನಿರೀಕ್ಷಿಸಿ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಿಂಧು, ಸೋಮು,ಸುಬ್ಬು, ಶ್ಯಾಮಾ,ವೇಣು,ಅರ್ಚನಾ,
ವಿಕಾಸ,ಮಲ್ನಾಡ್ ಹುಡುಗಿ,ರಚಿತ,ಸಂದೀಪ-

ಪ್ರತಿಕ್ರಿಯಿಸಿದ ನಿಮಗೆ ನಾನು ಕೃತಜ್ಞ.