ಶುಕ್ರವಾರ, ಅಕ್ಟೋಬರ್ 27, 2006

ಆನೆಗಳ ಲೋಕದಲ್ಲಿ...

ಕಳೆದ ವಾರಾಂತ್ಯ ಕೇರಳ ತಿರುಗಾಟ, ಈ ಬಾರಿಯ ನೆಪ, ಸ್ನೇಹಿತ ಅರುಣ್ ಹುಟ್ಟಿದ ಹಬ್ಬ! ನನಗೆ ಸಂತೋಷ ಏನು ಅಂದ್ರೆ, ಎಲ್ಲೇ ತಿರುಗೋಕೆ ಹೊರಟರೂ ನೆಪಗಳು ಧಂಡಿಯಾಗಿ ಸಿಗುತ್ತವೆ! ಈ ನೆಪಗಳು ಅಮ್ಮನ ಹತ್ರ ಮಾತ್ರ ನಡೆಯಲ್ಲ, ಅದೇ ಸಮಸ್ಯೆ! ದೀಪಾವಳಿ ಗೆ ಮನೆಗೆ ಹೋಗದೆ ಬೈಸಿಕೊಂಡದ್ದಂತೂ ಆಗಿದೆ, ಅವಳ ಹತ್ರ.
ಇಡೀ ಕೇರಳ ಪ್ರವಾಸದ ಬಗ್ಗೆ ಅಂತೂ ಬರಿಯೋಕೆ ದೇವರಾಣೆ ಸಾಧ್ಯ ಇಲ್ಲ! ನಂಗೆ ತುಂಬಾ ಇಷ್ಟ ಅನ್ನಿಸಿದ ಗುರುವಾಯೂರು ಆನೆಗಳ ಬಗ್ಗೆ ಒಂದಿಷ್ಟು...
ಗುರುವಾಯೂರು ದೇವಸ್ಥಾನದಿಂದ ೩ ಕಿಲೊಮೀಟ್ರು ದೂರದಲ್ಲಿ ಈ "ಆನಕೋಟ" ಅನ್ನೋ ಸ್ಥಳ (ಅನಕೊಂಡ ಅಲ್ಲ ಮತ್ತೆ!). ಇಲ್ಲಿ ೬೪ ಆನೆ ಸಾಕಿದಾರೆ, ದೇವಳದವರು. ಭಕ್ತಾದಿಗಳು ದೇವಾಸ್ಥಾನಕ್ಕೆ ಕೊಟ್ಟಿರೋ ಆನೆಗಳನ್ನ ಇಲ್ಲಿ ನೋಡ್ಕೊತಾರೆ. ನಮ್ಮೂರ ಕೆಲವು ಬಡಪಾಯಿ ದೇವಸ್ಥಾನಗಳಿಗೆ ವರ್ಷಕ್ಕೆ ೨ ಕ್ವಿಂಟಾಲು ಅಕ್ಕಿ ದೇಣಿಗೆ ಬಂದರೇ ಹೆಚ್ಚು! ಇಲ್ಲಿ ನೋಡಿದರೆ ಆನೆಗೆ ಆನೆನೇ ಕೊಡ್ತಾರಲ್ಲ ಅಂತ ಆಶ್ಚ್ರರ್ಯ! ವರ್ಷಕ್ಕೆ ೩ ಕೋಟಿ ರುಪಾಯಿ ಖರ್ಚು ಮಾಡ್ತಾರಂತೆ, "maintanence"ಗೆ!
ನಾವು ಇಲ್ಲಿಗೆ ಹೋದ ದಿನ ಆನೆಗಳ ಸ್ನಾನದ ಪಾಳಿ!ಒಂದಿಷ್ಟು ಆನೆಗಳಿಗೆ ಅಭ್ಯಂಜನ ಆಗ್ತಾ ಇತ್ತು.. ಹರುಕು ಮುರುಕು ಮಲಯಾಳಮ್ ನಲ್ಲಿ ಆನೆಗಳಿಗೆ ಎಷ್ಟು ದಿನಕ್ಕೊಂಮ್ಮೆ ಸ್ನಾನ ಮಾಡಿಸ್ತೀರಿ ಅಂತ ಒಬ್ಬ ಮಾವುತನನ್ನ ಕೇಳಿದರೆ, "every day, every day" ಅಂದನಪ್ಪ! ದಿನಾ ಅವುಗಳ ಮೈನೆಲ್ಲ ತಿಕ್ಕಿ ತಿಕ್ಕಿ ಸ್ನಾನ ಮಾಡ್ಸಿದ್ದೆ ಹೌದಾದ್ರೆ!, ತಿಂಗಳೊಳಗಾಗಿ ಎಲ್ಲರೂ ಕೆಲ್ಸ ಬಿಟ್ಟು ಹೋದಾರೇನೊ! ಆ ಮಾವುತ ತಮ್ಮ, "reputation" ಉಳ್ಸಿಕೊಳ್ಳೋಕೆ ಹಾಗೆ ಹೇಳಿರಬೇಕು ಅನ್ನೋದು ನನ್ನ ಊಹೆ!
ಆನೆಗಳು ಮಾತ್ರ ಎನ್ ಚಂದ ಸ್ನಾನ ಮಾಡಿಸಿಕೋತಿದ್ದವು ಅಂದ್ರೆ! ಆಹ್! ನನಗೆ ಸಣ್ಣ ಮಕ್ಕಳನ್ನ ಮಲಗಿಸಿಕೊಂಡು ಅಮ್ಮಂದಿರು ನೀರು ಹೊಯ್ಯೋದೇ ನೆನಪಾಯಿತು! ನಾವೆಲ್ಲ ಸುಮಾರು ಹೊತ್ತು ನಿಂತು ಅದನ್ನೇ ನೋಡ್ತಾ ಇದ್ವಿ. ಒಂದು ಆನೇನ ಅಡ್ಡ ಮಲಗಿಸ್ಕೊಂಡು ಅದರ ಮೇಲೊಬ್ಬ ಕೂತು ಗಸ ಬಸ ಗಸ ಬಸ ಅಂತ ತೆಂಗಿನ ನಾರಲ್ಲಿ ಮೈನ ತಿಕ್ತಾ ಇದ್ದ, ಮಗದೊಬ್ಬ ಬೆಣಚುಕಲ್ಲಲ್ಲಿ ತಿಕ್ಕೋನು! ಆ ಆನೆ ಆರಾಮಾಗಿ ಮಲಕ್ಕೊಂಡು ಸ್ನಾನ ಮಾಡಿಸ್ಕೋತಾ ಇತ್ತು! ಒಂದು ಬದಿನ ತಿಕ್ಕಿತಿಕ್ಕಿ ತೊಳದಾದ ಮೇಲೆ, ಒಬ್ಬ ಮಾವುತ ಏನೋ ಸಂಜ್ಞೆ ಮಾಡಿದನಪ್ಪಾ! ತಕೋ! ಆ ಆನೆ ಧಡಕ್ಕಂತ ಎದ್ದು, ಮತ್ತೊಂದು ಕಡೆ ಹೊರಳಿ ಮಲಗಿ ಬಿಡಬೇಕೆ! ಎಷ್ಟ್ ಚಂದ!
ಸರಿಯಾಗಿ ಸ್ನಾನ ಮಾಡಿಸ್ಕೊಂಡು ಮೇಲೆ ಬಂದಾದ ಮೇಲೆ, ಆನೆಗಳಿಗೆ ಮತ್ತೊಮ್ಮೆ ಶುಧ್ಧ ನೀರಿಂದ "ಶವರ್ ಬಾತು"! ಆದ್ರೆ ಈ ಸಲ ಮಾತ್ರ, ಅವೇ ನೀರು ಹಾಕ್ಕೋ ಬೇಕು! ಆಮೇಲೆ ಮೃಷ್ಟಾನ್ನ ಭೋಜನ - ಅನ್ನದ ಉಂಡೆ, ಎಲೆ ಸೊಪ್ಪು ಸದೆ ಇತ್ಯಾದಿ.. ಮತ್ತೆ, ತನ್ನ ಮರದ ಬುಡಕ್ಕೆ! ಎಂದಿನ ಬಂಧನದೊಳಗೆ!
ಅಲ್ಲಿಂದ ಹೊರಡೋವಾಗ ತುಡಿತ ತಡೆಯಲಾರದೆ ಎಲ್ಲ ಸೇರಿ ಒಂದು ಆನೆಗೆ ಸ್ವಲ್ಪ ಸ್ನಾನ ಮಾಡ್ಸೇ ಬಂದ್ವಿ!, ಮಾವುತನಿಗೆ ೫೦ ರೂಪಾಯಿ ಕೊಟ್ಟು!

2 ಕಾಮೆಂಟ್‌ಗಳು:

Sushrutha Dodderi ಹೇಳಿದರು...

'ಕೃಷ್ಣೇಗೌಡನ ಆನೆ' ಕತೆ ನೆನಪಾಯ್ತು :)

ಶ್ರೀನಿಧಿ.ಡಿ.ಎಸ್ ಹೇಳಿದರು...

ಓ!ಅದೊಂದು ಚಂದ ಕಥೆ ಮಾರಾಯ...