ಮಂಗಳವಾರ, ಅಕ್ಟೋಬರ್ 17, 2006

ಪಶ್ಚಿಮ ವಾಹಿನಿಯ ಚಿತ್ರಗಳು...

ಮೊನ್ನೆ ಮೊನ್ನೆ ಶ್ರೀರಂಗ ಪಟ್ಟಣ ದ ಕಡೆ ಹೋಗಿದ್ದೆ, ಧಾರ್ಮಿಕ ಕಾರ್ಯಕ್ರಮವಿತ್ತು.. ( ಅದೊಂದು ನೆಪ ಅಷ್ಟೆ!) ತಿರುಗೋದು ಅಂದರೆ ಇಷ್ಟ ನನಗೆ, ಮೊದಲೇ ಹೇಳಿದಂತೆ.. ಮಿತ್ರ ವ್ಯಾಸ ಬಾ ಅಂದಾಗ ಹೋಗದೆ ಇರಲಾಗಲಿಲ್ಲ.
ಪಶ್ಚಿಮ ವಾಹಿನಿ , ಶ್ರೀರಂಗ ಪಟ್ಟಣದ ಸಮೀಪವಿರುವ ಪುಟ್ಟ ಹಳ್ಳಿ.ಬೆಂಗಳೂರು- ಮೈಸೂರು ಹೆದ್ದಾರಿಗೆ ತಾಗಿಕೊಂಡೇ ಇದೆ... ಶಂಕರ ನಾಗ್ ಪ್ರಾಯಶ: ಈ ಊರು ನೋಡಿದ್ದಿದ್ದರೆ, ಮಾಲ್ಗುಡಿ ಡೇಸ್ ಇಲ್ಲೇ ಚಿತ್ರಿತವಾಗುತ್ತಿತ್ತೇನೋ! ಒಂದು ಸುಂದರ ಪುಟ್ಟ ಊರು ಇದು. ನಾನು ಯಾವುದೇ ಸ್ಥಳಕ್ಕೆ ಹೋದರೂ, ವಾಪಾಸು ಬರುವಾಗ ನನ್ನ ಜೊತೆ ಒಂದಿಷ್ಟು ನೆನಪಿನ ಚಿತ್ರಗಳನ್ನ ತಂದಿರುತ್ತೇನೆ. ಈ ಬಾರಿಯ ನೆನಪಿನ ಭಿತ್ತಿಯೊಳಗೆ ಚಿತ್ರಿಸಿಕೊಂಡ ಕೆಲವು ಚಿತ್ರಗಳು..
ದಿಕ್ಕು ತಪ್ಪಿ ತಣ್ಣಗೆ ಹರಿಯುವ ಕಾವೇರಿ ನದಿ,{ ಇಲ್ಲಿ ಕಾವೇರಿ ನದಿ ಪಶ್ಚಿಮಕ್ಕೆ ಹರಿಯುತ್ತದೆ.} ನದಿಯ ದಂಡೆಯ ಮೇಲಿನ ಹಳೆಯ ಛತ್ರಗಳು.. ಅನತಿ ದೂರದಲ್ಲೆ ಇರುವ ಶ್ರೀರಂಗಪಟ್ಟಣದ ರೈಲ್ವೇ ಸ್ಟೇಷನ್ನು, ಬ್ರಿಟೀಷರ ಕಾಲದ ಹಳೆಯ ಸೇತುವೆ,..
ನದೀ ಮಧ್ಯದ ಮಂಟಪ, ಕಾವೇರಿ ನದಿಯೊಳಗೆ ನಿಂತು ತನ್ನ ಅಗಲಿದ ಹಿರಿಯರಿಗೆ ತರ್ಪಣ ನೀಡುತ್ತಿರುವ ಯುವಕ, ಬೆಳಗಿನ ಕೊರೆಯುವ ಚಳಿಗೆ , ನೀರೊಳಗೆ ಮುಳುಗಲು ಅಂಜುತ್ತಿರುವ ಮಹಿಳೆ.. ಸೇತುವೆಯ ಮೇಲೆ ಕೊರಳ ಘಂಟೆಯನ್ನ ಅಲುಗಿಸುತ್ತ, ನಿಧಾನಕ್ಕೆ ಸಾಗುತ್ತಿದ್ದ ಎತ್ತುಗಳು...
ಅರಳೀ ಕಟ್ಟೆಯ ನೆರಳಲ್ಲಿ ಮೊಸರನ್ನ ತಿನ್ನುತ್ತಿದ್ದ ಹುಡುಗ.. ರಂಗನ ತಿಟ್ಟಿಗೆ ಹೋಗೊ ದಾರಿಯಲ್ಲಿ ಕಬ್ಬು ತಿನ್ನಲು ಕೊಟ್ಟ ಅನಾಮಧೇಯ ಕೃಷಿಕ, ಗೋಪುರವೊಂದರ ಕಿಂಡಿಯೊಳಗಿಂದ ತಲೆ ಹೊರಹಾಕಿ ನೋಡುತಿದ್ದ ಹೆಂಗಸು.. ಟಿಪ್ಪುವಿನ ಕೋಟೆಯ ಪಾಳು ಗೋಡೆಯ ಮೇಲೆ ನಿಂತು ಆಗಸ ದಿಟ್ಟಿಸುತ್ತಿದ್ದ ಅಸ್ಟಷ್ಟ ಮುಖ..
ಇವು ಈ ಬಾರಿಯ ಕೆಲವು ಚಿತ್ರಗಳು, ಎಂದಿಗೂ ಮರೆಯದ್ದು.

3 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

very nice.. u made me remember those places again.. thanks..

ಅನಾಮಧೇಯ ಹೇಳಿದರು...

sakathagi bardidira!!!

Sushrutha Dodderi ಹೇಳಿದರು...

ಚಿತ್ರಗಳು ಚಿತ್ರವತ್ತಾಗಿವೆ (!)