ಶುಕ್ರವಾರ, ಮಾರ್ಚ್ 30, 2007

ನಗುವ ಮುಖದ ಹಿಂದೆ...


ನಾನಾಗ ಎರಡನೇ ವರ್ಷದ ಬಿ ಎ ಓದುತ್ತಿದ್ದೆ. ಎನ್ ಎಸ್ಸೆಸ್ಸು, ಸಾಂಸ್ಕೃತಿಕ ಕಾರ್ಯಕ್ರಮ ಅದೂ ಇದೂ ಮಣ್ಣಾಂಗಟ್ಟಿ ಅಂತ ಕ್ಲಾಸಿಗಿಂತ ಹೊರಗೆ ತಿರುಗುತ್ತಿದ್ದುದೇ ಹೆಚ್ಚು. ನಮ್ಮ ಟೀಮೂ ಚೆನ್ನಾಗಿಯೇ ಇತ್ತು. ಎಲ್ಲರೂ ಖುಷಿ ಖುಷಿಯಾಗಿ ತಿರುಗಾಡುತ್ತಿದ್ದೆವು, ಜಾತ್ರೆ, ನಾಟ್ಕ, ಸಮಾಜ ಸೇವೆ ....

ಒಂದು ದಿನ ನನ್ನ ಜೂನಿಯರ್ ಶಿವಪ್ಪ ಬಂದು "ಬ್ಲಡ್ ಡೊನೇಟ್" ಮಾಡೋರು ಒಂದು ನಾಲ್ಕು ಜನ ಬೇಕಾಗಿತ್ತು ಅಂದ. ಶಿವಪ್ಪ ಅಂದ್ರೆ ನಮಗೆಲ್ಲ ಅಚ್ಚುಮೆಚ್ಚು. ಇಡೀ ದಿನ ನಗು ನಗುತ್ತಾ, ಇದ್ದವರ ಕಾಲೆಳೆದುಕೊಂಡು ಕಾಲೇಜು ತುಂಬಾ ಪುಟು ಪುಟು ಓಡಾಡಿಕೊಂಡಿದ್ದವನು . ಹೃದಯ ಶ್ರೀಮಂತಿಕೆ ಇರುವಾತ. ನಮ್ಮ ಕಾಲೇಜಿನ ಕಲ್ಚರಲ್ ಟೀಮು ಅವನಿಲ್ಲದೇ ಇದ್ದರೆ ಅಪೂರ್ಣ. ಮಿಮಿಕ್ರಿ, ಮೈಮು, ನಾಟ್ಕ, ಯಾವುದಕ್ಕಾದರೂ ಸೈ! ಅವನು ಬ್ಲಡ್ ಡೊನೇಟ್ ಮಾಡೋಕೆ ಕೇಳ್ಕೋತಾ ಇದಾನೆ ಅಂದ ಮೇಲೆ ನಿರಾಕರಿಸೋ ಮಾತೇ ಇರಲಿಲ್ಲ.

ನಮ್ಮ ಕಾಲೇಜಿಗೆ ಈ ತರಹ "ರಕ್ತದಾನ ಮಾಡಿ" ಅಂತ ಮನವಿಗಳು ಯಾವಾಗಲೂ ಬರುತ್ತಿರುತ್ತವೆ. ಒಂದು ಬಾಟಲಿ ರಕ್ತಕ್ಕೆ, ೧೦೦೦ ರೂಪಾಯಿಗಳವರೆಗೆ ಚಾರ್ಜ್ ಮಾಡುತ್ತಾರೆ ಆಸ್ಪತ್ರೆಯವರು. ಯಾರಾದರೂ ದಾನಿಗಳು ದೊರಕಿದಲ್ಲಿ ಅವರ ರಕ್ತ ಪಡೆದುಕೊಂಡು, ರೋಗಿಗೆ ಬೇಕಾದ ರಕ್ತವನ್ನ ೩೫೦-೪೦೦ರೂಗಳಿಗೆ ನೀಡುತ್ತಾರೆ. ಬಡ ಕುಟುಂಬಗಳಿಗೆ ಸಾವಿರಗಟ್ಟಲೆ ಮೊತ್ತವನ್ನು ಭರಿಸುವ ಶಕ್ತಿ ಇರುವುದಿಲ್ಲ. ಕೆಲಬಾರಿ ೨೦-೩೦ ಬಾಟಲಿ ರಕ್ತದ ಅವಶ್ಯಕತೆಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಸಹಾಯಕ್ಕೆ ಬರುವುದು ದೊಡ್ಡ ಸಂಖ್ಯೆಯಲ್ಲಿ ಲಭ್ಯವಿರುವ ಕಾಲೇಜಿನ ಮಕ್ಕಳು. ಹಾಗಂತ ಎಲ್ಲ ಮಕ್ಕಳೂ ರೆಡಿ ಇರುತ್ತಾರೆ ರಕ್ತದಾನಕ್ಕೆ ಅಂತಲ್ಲ, ಒಂದಿಷ್ಟು ಜನರಾದರೂ ಸಿಗುತ್ತಾರೆ ಕಾಲೇಜುಗಳಲ್ಲಿ.

ಈ ಬಾರಿ ನಾನು, ವ್ಯಾಸ, ಮತ್ತೊಂದೆರಡು ಜನ ಹೊರಟೆವು. ಶಿವಪ್ಪ ಅದೇ ಊರಿನವನಾದ್ದರಿಂದ, ಯಾರೋ ಬಂದು ಅವನ ಬಳಿ ಕೇಳಿಕೊಂಡಿರುತ್ತಾರೆ ಅಂತ ಅಂದುಕೊಂಡೆ. ಮಂಗಳೂರಿನ ಬಸ್ಸು ಹತ್ತಿ ಕೂತಾದ ಮೇಲೆ ಗೊತ್ತಾಯಿತು, ಶಿವಪ್ಪನ ತಂದೆಯವರಿಗೇ ಹುಷಾರಿಲ್ಲವಂತೆ ಅಂತ. ಶಿವಪ್ಪನನ್ನ ನೋಡಿದೆ, ಅವನು ಎದುರುಗಡೆ ಸೀಟಲ್ಲಿ ಭಯಂಕರ ಜೋಕು ಹೇಳಿ ಯಾರನ್ನೋ ನಗಿಸುತ್ತಿದ್ದ!

ಮಂಗಳೂರಿನ ಆಸ್ಪತ್ರೆ ತಲುಪುತ್ತಿದ್ದಂತೆ ಶಿವಪ್ಪ ಹೇಳಿದ, ನನ್ನ ತಂದೆಯವರಿಗೆ ಕ್ಯಾನ್ಸರ್ ಆಗಿದೆ, ಅವರಿಗೆ ಆಪರೇಷನ್ ಮಾಡುತ್ತಾರಂತೆ, ನಾಳೆ ನಾಡಿದ್ದಿನ ಹಾಗೆ. ೪-೫ ಬಾಟಲು ರಕ್ತ ಬೇಕಾಗಬಹುದೇನೋ ಅಂತ. ಶಿವಪ್ಪನ ತಂದೆಗೆ ಕ್ಯಾನ್ಸರ್ ಅನ್ನೋದೇ ನನಗೆ ಅರಗದ ವಿಷಯವಾಗಿತ್ತು. ಅವರು ಅಡ್ಮಿಟ್ ಆಗಿ ವಾರಗಟ್ಟಲೆ ಆಗಿತ್ತಂತೆ. ನಮಗ್ಯಾರಿಗೂ ಅದರ ಸುಳಿವು ಕೂಡಾ ಇರಲಿಲ್ಲ. ಅವನು ಕಾಲೇಜಿನಲ್ಲಿ ದಿನಾ "ಗಮ್ಮತ್" ಮಾಡಿಕೊಂಡಿದ್ದ!

ರಕ್ತ ಕೊಟ್ಟಾದಮೇಲೆ ನಾವೆಲ್ಲ ಅವನ ತಂದೆಯನ್ನ ನೋಡಲು ಹೋದೆವು. ಅವರು ಆ ಆಸ್ಪತ್ರೆಯ ತೀರಾ ಸಾಮಾನ್ಯ ವಾರ್ಡಿನ ಮತ್ತೂ ಸಾಮಾನ್ಯ ಬೆಡ್ದೊಂದರ ಮೇಲೆ ಮಲಗಿದ್ದರು. ಮುಖದ ಕ್ಯಾನ್ಸರ್ ಆಗಿತ್ತು . ಮಾತಾಡುವ ಸ್ಥಿತಿಯಲ್ಲಿಯೂ ಇರಲಿಲ್ಲ.. ಕಾಯಿಲೆ ಅಷ್ಟು ಉಲ್ಬಣಗೊಂಡಿತ್ತು. ನಮಗೆಲ್ಲ ಅರಿವಾಯಿತು, ಇನ್ನು ಇವರು....

ಶಿವಪ್ಪ ಅವರಿಗೆ ನಮ್ಮನ್ನೆಲ್ಲ ತೋರಿಸಿ, "ನಿಮಗೆ ರಕ್ತ ಕೊಡೋಕೆ ಬಂದಿದ್ದು ಇವರೆಲ್ಲ, ನನ್ನ ಫ್ರೆಂಡ್ಸು.." ಅಂತ ಪರಿಚಯ ಮಾಡಿಕೊಟ್ಟ... ನಾವು ಸುಮ್ಮನೆ ನೋಡುತ್ತ ನಿಂತಿದ್ದೆವು.

ಅವರಿಗೆ ಏನನ್ನಿಸಿತೋ, ಕುಳಿತಲ್ಲಿಯೇ ಕಣ್ಣ ತುಂಬ ನೀರು ತುಂಬಿಕೊಂಡು ನಮಗೆ ಕೈ ಮುಗಿದು ಬಿಟ್ಟರು.

ಶಿವಪ್ಪ ಕಂಬವೊಂದರ ಹಿಂದೆ ನಿಂತು ಕಣ್ಣೊರೆಸಿಕೊಳ್ಳುತ್ತಿದ್ದ. ನಮಗಾರಿಗೂ ಮಾತೇ ಹೊರಡಲಿಲ್ಲ..

ಅವನ ತಂದೆ ಆರ್ತ ಸ್ಥಿತಿಯಲ್ಲಿ ನಮಗೆ ಕೈ ಮುಗಿದ ಆ ಒಂದು ಕ್ಷಣವನ್ನ ನೆನಪಿಸಿಕೊಂಡರೆ ಇವತ್ತಿಗೂ ನನ್ನ ಮನಸ್ಸು ಒದ್ದೆಯಾಗುತ್ತದೆ.

ನಗುವ ಮುಖದ ಹಿಂದಿರುವ ಸತ್ಯದ ದರ್ಶನ ಒಮ್ಮೆಗೇ ಆಗುವುದಿದೆಯಲ್ಲ... ಅಬ್ಬಾ!!

ಬುಧವಾರ, ಮಾರ್ಚ್ 28, 2007

ಶಿಕ್ಷಕರೆಂದರೆ...

ಮಿತ್ರ ರಾಘವೇಂದ್ರ ಹೆಗ್ಡೆ , ನಾನು ಮೊನ್ನೆ ಸಿಕ್ಕಿ- ಸಿಕ್ಕಿದ್ದು ಹರಟುತ್ತಿದ್ದೆವು, ಎಂದಿನಂತೆ. ಮಾತು ಶಿಕ್ಷಕರು, ಅವರ ಬವಣೆಗಳು ಇತ್ಯಾದಿಗಳ ಕುರಿತು ಹೊರಳಿತು. ಅವನೂ ಕೂಡಾ ಪ್ರಾಧ್ಯಾಪಕನೇ, ಆರ್ಟ್ ಕಾಲೇಜಿನಲ್ಲಿ. ನನ್ನ ಅಪ್ಪನೂ ಕೂಡಾ ಅಧ್ಯಾಪಕರೇ ಆಗಿರುವುದರಿಂದ ಅದೂ ಇದೂ ಘಟನೆಗಳನ್ನ ಹಂಚಿಕೊಳ್ಳುತ್ತಿದ್ದೆವು.

ಅವನು ಒಂದು ದಿನ ಯಾವುದೋ ಕ್ಲಿಷ್ಟಕರ ಡಿಸೈನ್ ಮಾಡಿಕೊಂಡು ಹೋಗಿದ್ದನಂತೆ ತರಗತಿಗೆ. ಆ ಇಡೀ ಪಿರಿಯಡ್ಡು ವಿದ್ಯಾರ್ಥಿಗಳು ಅವೇ ಚಿತ್ರ ಬಿಡಿಸಬೇಕು, ಆಮೇಲೆ ಅದರ ಬಗ್ಗೆ ಮಾತಾಡೋಣ ಅನ್ನುವುದು ಪ್ಲಾನು. ಆ ಡಿಸೈನನ್ನು ಅವರೆದುರಿಗಿಟ್ಟು, ನೀವೆಲ್ಲ ಬಿಡಿಸಿ ಅಂತ ಹೇಳಿ ಮುಗಿಸುವುದರೊಳಗೆ, ಒಬ್ಬಾತ ಎದ್ದು, ಕಿಸೆಯಿಂದ ಸಟಕ್ಕನೆ ಮೊಬೈಲ್ ತೆಗೆದು, ಆ ಡಿಸೈನ್ ನ ಫೋಟೋ ತೆಗೆದು "ಸರ್ ನಾನಿದನ್ನ ಎಲ್ಲರಿಗೂ ಮೈಲ್ ಮಾಡ್ತೀನಿ ಸಾರ್, ನೀವೀಗ ಹೊಸ ವಿಷಯ ಹೇಳ್ಕೊಡಿ" ಅಂದನಂತೆ! ರಾಘುವಿನ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿತ್ತು.

ಶಿಕ್ಷಕರ ಶ್ರಮ ಹೆಚ್ಚಾಗಿ ಗಮನಕ್ಕೆ ಬಾರದೆಯೇ ಉಳಿಯುತ್ತದೆ. ಒಂದನೇ ಕ್ಲಾಸು ಓದುತ್ತಿದ್ದಾಗಿನ ಟೀಚರು, ಇನ್ನೂ ಅಲ್ಲಿಯೇ ಇರುತ್ತಾರೆ, ಹೊಸ ಮಕ್ಕಳಿಗೆ ಅ ಆ ಇ ಈ ಕಲಿಸುತ್ತಾ. ನಾವು ಯಾವುದೋ ದೊಡ್ಡ ಕಂಪನಿಯ ಕೆಲಸದೊಳಗಿರಬಹುದು.

ಗುರುರಾಜ ಕರ್ಜಗಿ ಎಂಬ ಕಲಾವಿದರಿಗೆ, ಹುಟ್ಟೂರಿನ ಶಾಲೆಯಲ್ಲ್ಲಿ ಸನ್ಮಾನ ಮಾಡಿದರಂತೆ, ಅವರ ಸಾಧನೆಗಾಗಿ. ಆಗ ಅವರು ಗುರುಗಳ ಬಗ್ಗೆ ಹೇಳಿದ ಮಾತುಗಳಿವು:

"ಶಿಕ್ಷಕರು ಎಂದರೆ ನಮಗೆಲ್ಲ ಒಂದು ತೆರನಾದ ಔದಾಸೀನ್ಯ ಭಾವ. ನಾವು ಬೆಳೆದು ಎಲ್ಲೋ ಹೋಗಿದ್ದರೂ, ಈ ಅಧ್ಯಾಪಕರುಗಳು ಅಲ್ಲೇ ಇರುತ್ತಾರಲ್ಲ ಅಂತ. ಆದರೆ ಸತ್ಯ ಅದಲ್ಲ, ಶಿಕ್ಷಕರು ಅಂದರೆ, 'ಕೈಮರ' (ದಿಕ್ಸೂಚಿ) ಇದ್ದ ಹಾಗೆ. ಅವರು ನೀವು ಈ ಕಡೆ ಹೋಗಿ , ಆ ಕಡೆ ಹೋಗಿ ಎಂದು ದಿಕ್ಕು ತೋರಿಸುತ್ತ ಸದಾ ಕಾಲ ನಿಂತಲ್ಲೇ ನಿಂತಿರುತ್ತಾರೆ. ನಾವು ಅವರು ಹೇಳಿದ ಕಡೆಗೆ ಸಾಗುತ್ತೇವೆ. ಒಂದು ವೇಳೆ ಆ ಕೈಮರದ, ದಿಕ್ಸೂಚಿಯ ದಿಕ್ಕು ಬದಲಾದರೆ, ಅಥವಾ ತಪ್ಪು ದಾರಿ ತೋರಿಸಿದರೆ ಜೀವನ ಪರ್ಯಂತ ಗುರಿ ಮುಟ್ಟದೆ ಅಲೆಯಬೇಕಾಗುತ್ತದೆ"!

ಈ ಮಾತುಗಳಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ!

ಮಂಗಳವಾರ, ಮಾರ್ಚ್ 27, 2007

ಕುಡುಕರ್ ಸಾವಾಸ ಅಲ್ಲ!

ಏನೇ ಹೇಳಿ, ಈ ಕುಡುಕರಿದಾರಲ್ಲ, ಅವರ ಸಹವಾಸ ಮಾತ್ರ ಅಲ್ಲ ನೋಡಿ. ಅವರಿಗೆ ಬೈಯೋ ಹಾಂಗೂ ಇಲ್ಲ, ಬೈದ್ರೆ ಅರ್ಥ ಆಗೋದೋ ಇಲ್ಲ!

ನಾನು ಮತ್ತು ದಯಾನಂದ ಒಂದಿನ ರಾತ್ರೆ ೧೦ ಗಂಟೆ ಸುಮಾರಿಗೆ ಯಾರದೋ ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುತ್ತಿದ್ದೆವು. ದಯಾನಂದ ಬೈಕ್ ಹೊಡೀತಾ ಇದ್ದ. ಅದೂ ಇದು ಹರಟೆ ಹೊಡ್ಕೊಂಡು ಅರಾಮಾಗಿ ಬರ್ತಾ ಇದ್ವಿ. ರಸ್ತೆ ಬೇರೆ ಖಾಲಿ ಇತ್ತು. ಶಂಕರ್ನಾಗ್ ಸರ್ಕಲ್ ನ ಅರಳೀ ಮರಕ್ಕೆ ಒಂದು ಸುತ್ತು ಹೊಡೆದು ಮುಂದೆ ಬಂದ್ರೆ, ನಮ್ಮಿಂದ ಒಂದು ೧೦ ಮೀಟರ್ ದೂರದಲ್ಲಿ ಒಬ್ಬ ಕುಡುಕ ಮಹಾಶಯ, ತಾನು ಜೋಲಿ ಹೊಡೆಯುತ್ತ, ತನ್ನ ಜೊತೆ ಇರುವ ಲಡಕಾಸಿ ಸೈಕಲ್ಲನ್ನೂ ಕೂಡ ಹೇಗೋ ಬ್ಯಾಲೆನ್ಸ್ ಮಾಡುತ್ತಾ, ನಡು ರಸ್ತೆಯಲ್ಲಿ ಒದ್ದಾಡುತ್ತಿದ್ದ. ನಾವೇನಾದರೂ ಅದೇ ವೇಗದಲ್ಲಿ ಹೋಗಿದಿದ್ದರೆ ಅವನಿಗೇ ಗುರಿಯಿಟ್ಟು ಢಿಕ್ಕಿ ಹೊಡೆಯೋದು ಖಾತ್ರಿಯಾಗಿತ್ತು. ದಯಾ ಅನಿವಾರ್ಯವಾಗಿ ಬ್ರೇಕ್ ಹಾಕಿದ, ನಾವಿಬ್ಬರೂ ಬಿದ್ದೆವು, ಬೈಕ್ ಸಮೇತ.

ನಾವು ಎದ್ದು, ಬೈಕನ್ನೂ ಎಬ್ಬಿಸಿ, ಧೂಳು ಕೊಡವಿಕೊಂಡು ನಿಲ್ಲುವ ಹೊತ್ತಿಗೆ ಆ ಕುಡುಕ ನಮ್ಮ ಬಳಿಗೇ ಬಂದ, ಅವನ ತಗಡು ಸೈಕಲ್ ಜೊತೆಗೆ, ಮತ್ತು ಬಹಳ ಸವಿನಯದಲ್ಲಿ ಕೇಳಿದ,

"ನಾಯಿ ಅಡ್ಡ ಬಂತಾ ಸಾರ್?, ಭಾಳ ಬೇವರ್ಸಿಗಳು ಈ ನಾಯಿ ಮುಂಡೇವು, ಏನ್ ಮಾಡೋದು ಹೇಳಿ..
ಚೇ, ಎಲ್ಲಾದ್ರು ಪೆಟ್ಟಾಯ್ತಾ?"

ನಮಗೆ ಏನು ಉತ್ತರಿಸಬೇಕೆಂದೇ ತಿಳಿಯಲಿಲ್ಲ!

ಗುರುವಾರ, ಮಾರ್ಚ್ 22, 2007

ಸಲ್ಲಾಪ

ಗೆಳೆಯಾ ನಿನ್ನ ಒಲವ ಮಾತು, ನನ್ನ ಜೀವ ತುಂಬಿದೆ
ಪ್ರೇಮ ಭಾವ ಸುರಿದು ಒಳಗೆ, ನಾನು ಇಲ್ಲೇ ಕರಗಿದೆ

ಎಷ್ಟೇ ಕರಗಿದರು ನೀನು ಕರಗುವುದು ನನ್ನೆದೆಯ ಒಳಗೆ
ಧಮನಿಗಳ ಒಳಸೇರಿ ಹರಿಯುತ್ತಿ,ಜೀವನದ ಕೊನೆಯವರೆಗೆ.

ಅಯ್ಯೋ ಇನಿಯಾ ನಾನು ಯಾಕೆ ದೇಹದೊಳಗೆ ಹರಿಯುವೆ?
ಎದೆಯಗೂಡು ಸಾಕು ನನಗೆ, ಅಲ್ಲೆ ಮುದುಡಿಕೊಳ್ಳುವೆ!

ಆತ್ಮ ಸಖೀ, ನಿನ್ನ ಮುಗ್ಧ ಪ್ರೇಮಕೇನ ಹೇಳಲಿ
ನನ್ನ ಹೃದಯ ಬಡಿತದಲ್ಲಿ ನಿನ್ನ ಹೆಸರೇ ಕೇಳಲಿ.

ಮಾತು ಸಾಕೋ ಸುಮ್ಮನಿರೋ, ಭುಜಕೆ ಹಾಗೇ ಒರಗುವೆ
ನಿನ್ನ ತೋಳ ಬಿಸುಪಿನಲ್ಲಿ, ಜಗವನಿಲ್ಲೆ ಮರೆಯುವೆ.

ಇವತ್ತು "ವಿಶ್ವ ಕವನ ದಿನ"! ಆ ನೆಪದಲ್ಲೊಂದು ಕವನ..

ಮಂಗಳವಾರ, ಮಾರ್ಚ್ 20, 2007

ನಗುವ ಮುದುಕ

ನಾನು ನೋಡುತ್ತಿರುವ ದಿನದಿಂದಲೂ,
ಈ ಮುದುಕ ಹಾಗೆಯೇ ಇದ್ದಾನೆ
ಮಣ್ಣು ಬಣ್ಣದ ಲುಂಗಿ,ಹಳೆಯ ಹರಿದಂಗಿ.
ಜೊತೆಗೊಂದು ಬಾಗಿದ ಬಿದರ ಕೋಲು,
ಅವನಂತೆಯೇ..
ನಡೆಯುತ್ತಲಿರುತ್ತಾನೆ,
ಅವನ ಮನೆಯೆದುರಿನ ಇಳಿಜಾರ ಹಾದಿಯಲಿ.

ಸೋಜಿಗವೆಂದರೆ,
ನಾ ನೋಡಿದಾಗಲೆಲ್ಲ ಇವನು
ನಗುತ್ತಿರುತ್ತಾನೆ, ಹಲ್ಲಿಲ್ಲದ ಬಾಯ ತೋರಿಸುತ್ತಾ,
ಕನ್ನಡಕದೊಳಡಗಿದ ಗುಳಿ ಕಣ್ಣಲ್ಲಿ ದಿಟ್ಟಿಸುತ್ತಾ.
ಮಗ ಮನೆಯಲಿಲ್ಲ,ಹೆಂಡತಿ ಸತ್ತು
ದಶಕವಾಯಿತಂತೆ.
ಹೊತ್ತು ಕೂಳಿಗೆ ಗತಿ ಯಾರೋ,
ಆದರೂ ನಗುತಾನಲ್ಲ ಮುದುಕ
ಅಂತ ಆಶ್ಚರ್ಯ ನನಗೆ!

ದಿನ ಕಳೆದ ಹಾಗೆ ಗೊತ್ತಾಯಿತು,
ಅದು ನಗುವಲ್ಲ, ಮೊಗದ ಸ್ನಾಯು ಬಿಗಿದು,
ನಗುವ ರೂಪ ಪಡೆದಿದೆ!
ಹಾಗಾಗಿ ಆತ ನಗುತ್ತಲೇ ಇರುತ್ತಾನೆ,
ಎಂದೆಂದಿಗೂ..
ಅಚ್ಚಿನೊಳಗಿಂದ ಬಂದ ಮೂರ್ತಿಯಂತೆ!

ಶುಕ್ರವಾರ, ಮಾರ್ಚ್ 16, 2007

"ಹಳದೆಂದು ನೀನದನು ಕಳೆಯುವೆಯ ಮರುಳೆ"

ಅದು ಯುಗಾದಿ. ಸಿಹಿಕಹಿಯನ್ನು ಸಮಾನವಾಗಿ ಸ್ವೀಕರಿಸುತ್ತೇವೆಂಬ ಆಶಯದೊಂದಿಗೆ ಬೇವು-ಬೆಲ್ಲವನ್ನೂ ಹಂಚಿಕೊಳ್ಳುತ್ತೇವೆ. ದೇವಸ್ಥಾನದಲ್ಲೊಂದು ಪೂಜೆ ಮಾಡಿಸಿ, ಹಣ್ಣು-ಕಾಯಿ ಮನೆಗೆ ತಂದು, ಪಾಯಸದ ಊಟ ಮಾಡಿ ಮನೆಮಂದಿಯೆಲ್ಲಾ ಒಟ್ಟಾಗಿ ಕೂತು ಪಂಚಾಂಗ ಶ್ರವಣ ಮಾಡುತ್ತೇವೆ. ಆದರೆ ಎಷ್ಟು ಮನೆಗಳಲ್ಲಿ ಇವೆಲ್ಲಾ ನಿಜವಾಗಿಯೂ ನಡೆಯುತ್ತಿದೆ? ನಮ್ಮ ಯುಗಾದಿ ತೊಡಗುವುದು ಯಾವುದೋ ವ್ಯಕ್ತಿಯ ಜನ್ಮದಿನದಿಂದಲೋ, ಶಕಪುರುಷನ ಪಟ್ಟಾಭಿಷೇಕದಿಂದಲೋ ಅಲ್ಲ. ಮಾನವ ಕೇಂದ್ರಿತವಾದ `ಹುಚ್ಚಾಟ'ಗಳ ಪ್ರದರ್ಶನವೂ ಇದಲ್ಲ. ಇದಕ್ಕೊಂದು ಪಾವಿತ್ರ್ಯ ಇದೆ. ವಸಂತೋದಯದ ಕಾಲ ಇದು. ಸೂರ್‍ಯಚಂದ್ರರ ಗತಿಯನ್ನು ಅವಲಂಬಿಸಿ ಸೌರಮಾನ, ಚಾಂದ್ರಮಾನ ಎಂಬೆರಡು ಯುಗಾದಿಗಳ ಆಚರಣೆ ಹುಟ್ಟಿಕೊಂಡದ್ದು.

ಚಾಂದ್ರಮಾನ ರೀತ್ಯಾ ಹೊಸ ಸಂವತ್ಸರದ ಆರಂಭ ಚೈತ್ರ ಶುದ್ಧ ಪಾಡ್ಯದಂದು. ಇದೇ ಚಾಂದ್ರಮಾನ ಯುಗಾದಿ. ಮೇಷಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ಭೂಮಿಯ ಮೇಲೆ ನಡೆಯುವ ಹಲವು ವೈಜ್ಞಾನಿಕ ಕ್ರಿಯೆಗಳಿಗೆ ಸೂರ್ಯಚಂದ್ರರೇ ಆಧಾರವಾಗಿರುವುದರಿಂದ ಈ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವೂ ಇದೆ.ಆದರೆ ಈಗ ಏನಿದ್ದರೂ ಜನವರಿ ಒಂದೇ ಹೊಸವರ್ಷ. ಡಿಸೆಂಬರ್ ೩೧ರಂದು ರಾತ್ರಿ ಹನ್ನೆರಡರವರೆಗೆ ಕುಡಿದು ಕುಣಿಯುತ್ತಾ ಬರಲಿರುವ ವರ್ಷವನ್ನು ಸ್ವ್ವಾಗತಿಸುವುದೇ ಕ್ರಮವಾಗಿ ಬಿಟ್ಟಿದೆ. ಪಾಡ್ಯ, ಬಿದಿಗೆ ಮೂಲೆಗುಂಪಾಗಿ ನಾವು `ಸಂಡೇ' `ಮಂಡೇ'ಗಳಾಗಿದ್ದೇವೆ. ಒಂದು ನೆನಪಿರಲಿ. ಸಾವಿರಾರು ವರ್ಷಗಳ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾಷೆಗಳೇ ಹುಟ್ಟದಿದ್ದ ಕಾಲದಲ್ಲಿ ನಮ್ಮ `ಆದಿತ್ಯ'ವಾರ (`ಸನ್'ಡೇ) `ಸೋಮ'ವಾರ (`ಮೂನ್'ಡೇ) ಗಳಿದ್ದವು! ರಾಮಾಯಣದ ಕಾಲದಲ್ಲೇ ತಿಥಿ, ನಕ್ಷತ್ರ, ಋತು, ಸಂವತ್ಸರಗಳಿದ್ದವು. ಭಾರತೀಯ ಆಚರಣೆಗಳ ಪ್ರಾಚೀನತೆ ಇವುಗಳಿಂದಲೇ ಅರಿವಿಗೆ ಬರುತ್ತದೆ.

ಮುಸ್ಲಿಂ ರಾಷ್ಟ್ರಗಳಲ್ಲಿ ಈಗಲೂ ಶುಕ್ರವಾರವೇ ರಜೆ. ಕ್ರೈಸ್ತರಿಗೆ ಭಾನುವಾರ ಪವಿತ್ರ. ನಮಗೇ......? ನಾಗರಿಕರಾಗುವ ಭರದಲ್ಲಿ ಅಲ್ಲೂ ಅಲ್ಲದ, ಇಲ್ಲೂ ಸಲ್ಲದ ಎಡಬಿಡಂಗಿಗಳಾಗಿದ್ದೇವೆ. ನಾವು ಎಡವಿದ್ದೇ ಇಲ್ಲಿ. ಬೇರೆ ಸಂಸ್ಕೃತಿಯಲ್ಲಿರುವ ಒಳ್ಳೆಯದನ್ನು ಪಡೆದುಕೊಳ್ಳೋಣ. ನಮ್ಮದನ್ನು ಬಿಡದಿರೋಣ ಎಂಬ ಮನೋಧರ್ಮವೇ ಮಾಯವಾಗಿದೆ. ಬಹು ಸುಂದರವಾದ ನಮ್ಮ ಸಂಸ್ಕೃತಿಯ ಯುಗಾದಿಯಂತಹ ಆಚರಣೆಗಳನ್ನು ಪರಕೀಯರ ಅನುಕರಣೆಯಿಂದ ಮರೆತಿದ್ದೇವೆ. ಇಲ್ಲವೇ ಬಿಟ್ಟುಬಿಟ್ಟಿದ್ದೇವೆ.

ಸಿಹಿಕಹಿ ಹಂಚಿಕೊಳ್ಳುತ್ತಾ ಆರಂಭವಾಗುವ ಯುಗಾದಿ ಎಲ್ಲಿ? ಅಮಲೇರಿ ಕುಣಿಯುವ ಜನವರಿ ೩೧ ಎಲ್ಲಿ?ಕಷ್ಟನಷ್ಟಗಳೆಲ್ಲಾ `ವ್ಯಯ'ಗೊಂಡು ಸರ್ವರಿಗೂ ಜಯ ದೊರಕಲೆಂಬ ಆಶಯದೊಂದಿಗೆ `ಸರ್ವಜಿತ್' ಸಂವತ್ಸರ ಆಗಮಿಸುತ್ತಲಿದೆ. ಹೊಸ ವಸಂತೋದಯದೊಂದಿಗೆ ಹೊಸ ಕನಸುಗಳೂ ಚಿಗುರಲಿ. ಹಳೆಯ ಕನಸುಗಳು ನನಸಾಗಲಿ.

"ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತು
ಹಳದೆಂದು ನೀನದನು ಕಳೆಯುವೆಯ, ಮರುಳೆ?
ತಳಹದಿಯದಲ್ತೆ ನಮ್ಮೆಲ್ಲ ಹೊಸತಿಳಿವಿಂಗೆ
ಹಳೆ ಬೇರು ಹೊಸ ತಳಿರು-ಮಂಕುತಿಮ್ಮ ''

(ಬರಹ ಕೃಪೆ- ತಂಗಿ ಶ್ರೀಕಲಾ)

ಯುಗಾದಿಗೆ ಏನು ಬರೆಯೋದು ಅಂತ ಆಲೋಚನೆ ಮಾಡ್ತಾ ಇದ್ದಾಗ, ತಂಗಿ ಏನೋ ಬರೀತಿದ್ದಳಲ್ಲ ಅಂತ ನೆನಪಾಯಿತು, ಅವಳ ಬರಹ ಕದ್ದು, ಇಲ್ಲಿ ಹಾಕಿದ್ದೇನೆ! ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಗುರುವಾರ, ಮಾರ್ಚ್ 15, 2007

ಪ್ಲಾಟ್ ಫಾರಂ......

ಭೂಸಾವಾಳದ ರೈಲ್ವೇ ಸ್ಟೇಷನ್ ನ over bridge, ಭಾರತದ ದು:ಸ್ಥಿತಿಯನ್ನು ಬಿಂಬಿಸುವ ಒಂದು ಜಾಗ. ಸುಮಾರು ನೂರು- ನೂರೈವತ್ತು ಮೀಟರ್ ಉದ್ದ ಇರುವ ಈ ಸೇತುವೆ, ದಿನವೂ ಎಷ್ಟೋ ಜನರ ಕಾಲ್ತುಳಿತ ಅನುಭವಿಸುತ್ತದೆ. ಮೂರು ಮೀಟರ್ ಅಗಲದ ಈ ಸೇತುವೆ, ರೈಲು ಬಂದಾಗ ಮತ್ತಷ್ಟು ರಷ್ಶು. ಹೋಗುವುದಕ್ಕೆ ಜಾಗ ಇರುವುದಿಲ್ಲ, ಅಷ್ಟು ಅರ್ಜೆಂಟು ಎಲ್ಲರಿಗೂ. ನೂಕುನುಗ್ಗಲು. ಓಡುವವರು, ನಡೆಯುವವರು, ಕುರುಡರು, ಕುಂಟರು , ದೇಶದ ಎಲ್ಲ ಕಡೆಯ ಜನರು ಬರುತ್ತಾರೆ- ಹೋಗುತ್ತಾರೆ. ಬ್ರಿಡ್ಜ್ ಯಾವಾಗಲೂ ಧಡ್ ಧಡ್ ಸದ್ದು ಮಾಡುತ್ತಲೇ ಇರುತ್ತದೆ.

ಇದೇನೇ ಆದರೂ, ಇಲ್ಲಿನ ಒಂದು ಘಟನೆ ಮಾತ್ರ, ಒಂದು ಕ್ರೂರ ಸ್ವಪ್ನದಂತೆ ನನ್ನ ಮನಸ್ಸನ್ನು ಆವಾಗಾವಾಗ ಹಾದು ಹೋಗುತ್ತಲೇ ಇರುತ್ತದೆ.

ಆ ದಿನ , ಇನ್ನೂ ನೆನಪಿದೆ. ಎಂದಿನಂತೆ ೭.೨೦ರ ದಾದರ್ ಗಾಡಿಯನ್ನು ಹಿಡಿಯಲು ಓಡುತ್ತಿದ್ದೆ. ತನ್ನ ಮಗಳನ್ನು ಮಲಗಿಸಿ ಕುಳಿತಿದ್ದ ಒಬ್ಬ ಹೆಂಗಸು ಇದ್ದಕ್ಕಿಂದ್ದಂತೆ ಅವಳನ್ನು ಎಬ್ಬಿಸಲು ಶುರು ಮಾಡಿದಳು. ಮಗು ಏಳಲಿಲ್ಲ. ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನಿಸಿದಳು, ಯಾವುದೇ response ಇಲ್ಲ! ಎದೆಯ ಮೇಲೆ ಕೈಯಿಟ್ಟಳು, ಕೈ ಮುಟ್ಟಿ ನೋಡಿದಳು, ಬಹುಶಃ ತಣ್ಣಗಿತ್ತು. ಯಾವುದೇ ಉಸಿರಾಟದ ಲಕ್ಷಣ ಸಹಃ ಕಾಣಲಿಲ್ಲ. ಒಮ್ಮೆಗೇ ತಾಯಿಯ ಮುಖಚರ್ಯೆಯೂ ಬದಲಾಯಿತು. ಜೋರಾಗಿ ಅಳತೊಡಗಿದಳು. ಮಗಳು ಈ ಭೂಮಿಯನ್ನ ತ್ಯಜಿಸಿದ್ದಳು. ರೋದನ ಇನ್ನೂ ಜೋರಾಯ್ತು. ಜನರೆಲ್ಲ ಏನಾಯ್ತೆಂದು ನೋಡಲು ಅವಳನ್ನ ಮುತ್ತಿದರು. " ರೋನಾ ಮತ್ ತೇರಿ ಬೇಟಿ ಮರ್ ಗಯಿ ಹೈ" ಎಂದ ಒಬ್ಬ. "ಹೇ ಶೋರ್ ಬಂದ್ ಕರೋ" ಅಂದ ಇನ್ನೊಬ್ಬ.

ಸ್ವಲ ಹೊತ್ತಿನಲ್ಲಿ RPF ಬಂತು. "ಏಯ್ ಚಲ್ ಹಟ್!! ಲಾಶ್ ಲೇಕೇ ಚಲ್!" ಎಂದು ಗದರಿದರು. ಅವಳು ಸುಮ್ಮನೆ ಮಗಳ ಶರೀರವನ್ನು ಹೊತ್ತು,ಸ್ಟೇಶನ್ ನಿಂದ ಹೊರ ನಡೆದಳು, ಅಳುತ್ತಾ... ನಾನು ಇವನೆಲ್ಲ ನೋಡಿ ಪ್ಲಾಟ್ ಫಾರಂ ನಂಬರ್ ೩ಕ್ಕೆ ಹೋಗಿ, trainನಲ್ಲಿ ಕುಳಿತೆ..

ಮರುದಿನ ಬೆಳಗ್ಗೆ ಎಂದಿನಂತೆ ಪ್ಲಾಟ್ ಫಾರಂ ಇವನ್ನೆಲ್ಲ ಮರೆತು, ಜನರ ಕಾಲ್ತುಳಿತ ಅನುಭವಿಸುತ್ತಾ ಬಿದ್ದುಕೊಂಡಿತ್ತು...

Life is Different than what you think, right?!

( ಈ ಘಟನೆ, ನನ್ನ ಸ್ನೇಹಿತ ನಾಣಿಯ ಅನುಭವ. ಅವನದೇ ಬರಹ ಕೂಡಾ. ನಾನು net ಗೆ ಏರಿಸಿದ್ದೇನೆ , ಅಷ್ಟೆ.)

ಗುರುವಾರ, ಮಾರ್ಚ್ 08, 2007

ಭಾವ-೧೦

ತಮ್ಮ ಪಾತ್ರೆ ಪಗಡ,ಮುರುಕಲು ಕುರ್ಚಿ ಮತ್ತಿತರ ಗಂಟು ಮೂಟೆಗಳ ಸಹಿತ ರಸ್ತೆ ಬದಿಯಲ್ಲಿ ಕುಳಿತಿದ್ದ ಆ ಅಮ್ಮ ,ಮಗಳು ಹೊಟ್ಟೆ ತುಂಬ ನಗುತಿದ್ದರು. ಬದುಕು ಸುಂದರವಾಗಿದೆ,ಅಲ್ಲವೆ?!

ಶುಕ್ರವಾರ, ಮಾರ್ಚ್ 02, 2007

ಹೋಳಿಗೊಂದು ಚಂದದ ಹಾಡು



ಹೋಲಿಗೆ ಎಂಥ ಸುಂದರ ಹಾಡು ನೋಡಿ, ಇದಕ್ಕೂ ಮಿಗಿಲಾದ , ಇಷ್ಟು ಸೊಗಸಾದ ಬಣ್ಣಗಳ ಮಿಶ್ರಣ ಇನ್ನೆಲ್ಲೂ ಕಾಣುವುದಿಲ್ಲ!


ಗೆಳೆಯ ಚಿನ್ಮಯನಿಗೆ ಧನ್ಯವಾದ! ಅವನೇ ಈ ಲಿಂಕು ಕೊಟ್ಟವನು.

ಎಲ್ಲರಿಗೂ ಹೋಳಿಯ- ಕಾಮನ ಹುಣ್ಣಿಮೆಯ ಶುಭಾಷಯಗಳು..

ಎತ್ತಣ ಮಾಮರ..

ನನ್ನ ಹಳೆಯ ಕಂಪನಿಯಲ್ಲಿದ್ದಾಗ ನಡೆದ ಘಟನೆ.

ಒಂದು ದಿನ ಮಧ್ಯಾಹ್ನ, ಯಾವ್ದೋ ನಂಬರ್ ಗೆ ಕಾಲ್ ಮಾಡಿದೆ. ಎಂದಿನಂತೆ ಕೆಲಸ ಖಾಲಿ ಇತ್ತು ( ಸಾಫ್ಟ್ ವೇರ್ ಉದ್ಯಮದಲ್ಲಿ ಯಾವಾಗಲು ಕೆಲಸಗಳು ಖಾಲಿ ಇರುತ್ತವೆ, ಬಿಡಿ). ರಿಂಗ್ ಆಯಿತು. ಫೋನ್ ಆ ಕಡೆಯಿದ್ದದ್ದು ನಡುಗುವ ದನಿ.
"ಸರ್, ಕ್ಯಾನ್ ಇ ಸ್ಪೀಕ್ ಟು ......"
"ಯಾರಪ್ಪಾ ಮಾತಡೋದು?" ಅಚ್ಚ ಕನ್ನಡದಲ್ಲಿ ಉತ್ತರ ಬಂತು.

"ನಾನು ಶ್ರೀನಿಧಿ ಅಂತ, ಒಂದು ಕಂಪನಿಯಿಂದ ಕಾಲ್ ಮಾಡ್ತಾ ಇದೀನಿ. ಒಂದು ಕೆಲಸದ ವಿಚಾರವಾಗಿ ಇಂತವರ ಬಳಿ ಮಾತಾಡಬೇಕಿತ್ತು ..".

"ಹಮ್, ನಾನು ಅವನ ತಂದೆ ಕಣಪ್ಪಾ" ಅಂದ್ರು.

ಸರ್ ಹಾಗಾದರೆ ನಿಮ್ಮ ಮಗ ಬಂದ ಮೇಲೆ ಒಂದು ಫೋನ್ ಮಾಡೋಕೆ ಹೇಳಿ ಅಂತಂದು, ಮಾತು ಮುಗಿಸುವವನಿದ್ದೆ. ಅವರು,
"ಒಂದು ನಿಮಿಷ ..."ಅಂದ್ರು.

"ನಿಮಗೆ ಈ ನಂಬರ್ರು ಹೇಗೆ ಸಿಕ್ಕಿತು?"- ಅವರ ಬಯೋ ಡಾಟದಲ್ಲಿ ಇತ್ತು. ಅದರಿಂದ ತಗೊಂಡೆ"
"ಅದರಲ್ಲಿ ಬೇರೆ ವಿಳಾಸ ಇದೆಯಾ ನೋಡ್ತೀರಾ?"- ನನಗೆ ಅರ್ಥವಾಗಲಿಲ್ಲ. ಹಾ, ಏನು ಅಂದೆ. ಸಂಬಂಧ ಪಡದವರಲ್ಲಿ ಮಾತು ಲಂಬಿಸಲು ಕಿರಿಕಿರಿ ಅನ್ನಿಸುತ್ತದೆ. ದಿನಕ್ಕೆ ಇಂತಹ ಹಲವು ಫೋನ್ ಮಾಡಬೇಕು.

"ನೀನು ನಂಗೆ ಮಗ ಇದ್ದ ಹಾಗೆ ಕಣಪ್ಪ, ವಿಷಯ ಹೇಳ್ತೀನಿ ಕೇಳು, ನನ್ನ ಮಗ, ಅವರ ಅಮ್ಮನ ಹತ್ತಿರ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ, ಹ್ಯಾಗಾದರೂ ಹುಡುಕಿ ಕೊಡೋಕೆ ಆಗತ್ತಾ?, ಮಗ ಬೆಳೆದು ದೊಡ್ಡವನಾದ ಮೇಲೆ ಏನೆಲ್ಲ ಕಷ್ಟ ಪಡಬೇಕು ನೋಡು.."

ನನಗೆ ಏನು ಹೇಳಲೂ ತೋಚಲಿಲ್ಲ. "ಆಯಿತು ಸಾರ್ ನೋಡ್ತೀನಿ, ಪ್ರಯತ್ನ ಪಡ್ತೀನಿ" ಅಂದೆ , ನನ್ನ ಫೋನ್ ನಂಬರನ್ನ ಆ ಹಿರಿಯರಿಗೆ ಕೊಟ್ಟೆ.

"ನಿನಗೆ ಹೇಗಾದರೂ ಅವನನ್ನ ಕಾಂಟಾಕ್ಟ್ ಮಾಡೋಕೆ ಆಗಬಹುದು, ಈ ನಂಬರು ಸಿಕ್ಕಿದೆ ನಿಮಗೆ, ಬೇರೆ ನಂಬರು ಕಂಡು ಹಿಡಿಯೋದು ಕಷ್ಟವಲ್ಲ ಅಲ್ವೇನೋ " ಅಂದರು. ಏನು ಹೇಳೋಣ ಅವರಿಗೆ?

"ನನ್ನಿಂದ ಆದಷ್ಟು ಪ್ರಯತ್ನ ಮಾಡ್ತೀನಿ ಸಾರ್ ..", ಅಂತೆಲ್ಲ ಏನೇನೋ ಸಮಾಧಾನ ಮಾಡಿ ಫೋನ್ ಇಟ್ಟೆ. ಹೇಗಪ್ಪಾ ಇವರ ಮಗನನ್ನ ಹುಡುಕುವುದು?, ಅಂತ ಅಲೋಚನೆ ಶುರು ಮಾಡಿದೆ, ಏನೋ ಒಂದು ಸಾಹಸ ಕಾರ್ಯ ಮಾಡುತ್ತೇನೆ ಅನ್ನುವ ಖುಷಿ ಹುಟ್ಟಿಕೊಂಡಿತು.

ಒಳ್ಳೆಯ ಉಪಾಯವೂ ಹೊಳೆಯಿತು. ನಾನೂ, ಪ್ರವೀಣ ಎಲ್ಲ ಮಾತಾಡಿ ಒಂದು ಪ್ಲಾನು ರೆಡಿ ಮಾಡಿ, ಆ ಪುಣ್ಯಾತ್ಮನಿಗೆ, ಭಯಂಕರ ಆಮಿಷ ಹುಟ್ಟುವ ಹಾಗೆ, ಒಂದು ಮೇಲ್ ಮಾಡಿದೆವು. ಒಳ್ಳೆಯ ಕಂಪನಿ, ಒಳ್ಳೆಯ ಸಂಬಳ ಹಾಗೇ ಹೀಗೆ ಅಂತ . ಒಟ್ಟಿನಲ್ಲಿ ಆ ಈ- ಮೇಲ್ ನೋಡಿಯೇ ಆತ ನಮ್ಮನ್ನ ಸಂಪರ್ಕಿಸಬೇಕು , ಆ ತರ.

ದಿನಾ ನನಗೆ ಅವನ ಮೇಲ್ ಬಂತಾ ಅಂತ ನೋಡುವುದೇ ಕೆಲಸ. ಒಂದು ವಾರದ ಮೇಲೆ ರಿಪ್ಲೈ ಬಂತು!ಅದರಲ್ಲಿ ಇನ್ಯಾವುದೋ ನಂಬರನ್ನ ಕೊಟ್ಟಿದ್ದ ಅವನು. ಅದಕ್ಕೆ ಫೋನ್ ಹೊಡೆದು ಮಾತಾಡಿಸಿದೆ. ಎಲ್ಲಿದ್ದೀಯಾ ಅಂದಿದ್ದಕ್ಕೆ, "ಬೆಂಗಳೂರು"ಅನ್ನುವ ಉತ್ತರವೇ ಬಂತು. ಅವನ ಹತ್ತಿರ ಮಾತಾಡಿ ಮುಗಿಸಿದ್ದೇ, ಅವರ ತಂದೆಗೆ ಫೋನಿಸಿ, ಈ ಹೊಸ ನಂಬರು ಕೊಟ್ಟೆ. ನಾಲ್ಕು ದಿನ ಬಿಟ್ಟು ಅವರು ನನಗೆ ಫೋನ್ ಮಾಡಿ "ಮಗ ಮನೆಗೆ ಬಂದ ಕಣಪ್ಪ", ಅಂತ ತುಂಬಿದ ಕಂಠದಿಂದ ಹೇಳಿದರು. ಅವರು ಅವನ ಬಳಿ ಏನು ಮಾತಾಡಿದರೋ ನನಗೆ ಹೇಳಲಿಲ್ಲ, ನಾನು ಕೇಳಲೂ ಇಲ್ಲ.

ನಾನು ಒಬ್ಬ ಕ್ಯಾಂಡಿಡೇಟು ಕಳೆದುಕೊಂಡಿರಬಹುದು... ಇರ್ಲಿ ಬಿಡಿ ಪರ್ವಾಗಿಲ್ಲ! ಅಲ್ವಾ?

ಶುಕ್ರವಾರ, ಫೆಬ್ರವರಿ 23, 2007

ನೋಟೀಸು ಪಿರಿಯಡ್ಡು ಮತ್ತು ಉರ್ಲು !

ನಾನು ಸಾಫ್ಟ್ ವೇರ್ ಕಂಪನಿಯ hr ವಿಭಾಗದಲ್ಲಿರುವವನು. ದಿನಾ ಒಬ್ಬರಲ್ಲ ಒಬ್ಬರ ಜೊತೆ ಫೋನಿನಲ್ಲಿ ಮಾತಾಡೋದು, ಸಂದರ್ಶನಗಳನ್ನ schedule ಮಾಡೋದು ಇದ್ದಿದ್ದೇ. ದಿನಾ ಒಂದೇ ತೆರನಾದ ಕೆಲ್ಸ ಆದರೂ, ಏನಾದರೂ ವಿಶೇಷ ಘಟಿಸಿಯೇ ಘಟಿಸುತ್ತದೆ.

ಇಂಟರ್ವ್ಯೂ ಗೆ ಬಾರದ ಕ್ಯಾಂಡಿಡೇಟುಗಳು, ನಾವು ಫೋನಿಸಿದ ಕೂಡಲೇ, ತಮಗೆ accident ಆಗಿ ಬಿಟ್ಟಿದೆಯೆಂದೂ, ಸಿಕ್ಕಾಪಟ್ಟೇ ಪೆಟ್ಟಾಗಿದೆಯೆಂದೂ ಮರುಕ ಹುಟ್ಟಿಸುವ ಭಾಷೆಯಲ್ಲಿ ಮಾತನಾಡಲು ಶುರು ಮಾಡಿಕೊಳ್ಳುತ್ತಾರೆ. ಎಂತವನ ಹೃದಯವೇ ಆದರೂ ಕರಗಲೇ ಬೇಕು! "ಸಾರ್, ಸೀವಿಯರ್ ವೂಂಡ್ ಸಾರ್ , ಸಾರಿ ಸಾರ್ " , "ಸರ್ ಐ ಆಮ್ ನಾಟ್ ಏಬಲ್ ಟು ವಾಕ್ ಸರ್, ಐ ವಿಲ್ ಡೆಫೆನೆಟ್ಲ್ಲಿ ಮೇಕ್ ಇಟ್ ಟುಮಾರೋ" ಅಂತೆಲ್ಲ ವದರುತ್ತಾರೆ. ಅವನಿಗೆ ಅದು ಮೊದಲ ಆಕ್ಸಿಡೆಂಟು! ಪಾಪ.. ನಮ್ಮ ಕಿಸೆಯೊಳಗೆ ಇಂತಹ ೫೦- ೬೦ ಆಕ್ಸಿಡೆಂಟುಗಳು ಈಗಾಗಲೇ ಇರುತ್ತವೆ. ಇಂಟರ್ವ್ಯೂ ಗೆ ಬರಲಾಗದ ಶೇಕಡಾ ೭೫% ಜನಕ್ಕೆ ಆಕ್ಸಿಡೆಂಟೇ ಆಗಿರುವುದು ವಿಶೇಷ. ಮತ್ತೆ ಕೆಲ ಜನರ ಸಂಬಂಧಿಕರಿಗೆ ಕಾಯಿಲೆಯಾಗಿರುತ್ತದೆ.... ನಮ್ಮ ಪ್ರವೀಣನೋ, ಸಂತೃಪ್ತಿಯೋ ಫೋನಿಟ್ಟು "ಆಕ್ಸಿಡೆಂಟು" ಅಂದರೆ ಸಾಕು, ಮುಂದೇನೂ ಯಾರೂ ಹೇಳಬೇಕಾಗಿಯೇ ಇಲ್ಲ! ಬಿದ್ದು ಬಿದ್ದು ನಗುವುದೇ ಕೆಲಸ. ನಾನು, ಪ್ರವೀಣ ಇಬ್ಬರೂ ೧೦೦ ಆಕ್ಸಿಡೆಂಟಾದ ಮೇಲೆ ಒಂದು ಸಮಾರಂಭ ಮಾಡಬೇಕು ಅಂತ ತೀರ್ಮಾನಿಸಿದ್ದೇವೆ!

ಮೊನ್ನೆ ಒಬ್ಬ ಪುಣ್ಯಾತ್ಮನಿಗೆ ಫೋನ್ ಮಾಡಿದ್ದೆ "ನಿನ್ನ ಈಗಿನ ಸಂಬಳ ಎಷ್ಟು?, ಎಷ್ಟು ಬೇಕು ಎಲ್ಲ ಕೇಳಿಯಾದ ಮೇಲೆ", "What is your notice period" ಅಂದೆ. ( ಬೇರೆ ಕೆಲಸಕ್ಕೆ ಸೇರಲು ಎಷ್ಟು ದಿನ ಬೇಕು ಅಂತ) ಇದು ಎಲ್ಲ ಕಡೆಯೂ, ಎಲ್ಲರೂ ಕೇಳುವ ಅತ್ಯಂತ ಮಾಮೂಲಿ ಪ್ರಶ್ನೆ. ಅದಕ್ಕಾತ," from morning 9 to evening 6pm sir" ಅಂದು ಬಿಡಬೇಕೆ! ನಗು ತಡೆದುಕೊಂಡು , "ನೋ ನೋ, i am asking about your notice period" ಅಂತ ಮತ್ತೊಮ್ಮೆ ಬಿಡಿಸಿ ಹೇಳಿದೆ.. "sometime it varries sir, from 9am till 8-9pm sir", "i am ready to work for overtime".. ಆಹ್! ನಂಗೆ ಬರುವ ನಗು ತಡೆದುಕೊಳ್ಳಲಾಗದೆ, "i will call you later" ಅಂತಂದು ಫೋನ್ ಇಟ್ಟೆ.

ಒಂದಿನ ಬೆಳಗ್ಗೆ ಯಾರೋ ಒಬ್ಬಾತ ,ಫೋನ್ ಮಾಡಿ " ನಿಮ್ಮ ಕಂಪನಿಯ ಉರ್ಲ್ ಕೊಡಿ"ಅಂದ! ಅರೇ, ನಮ್ಮ ಕಂಪನಿ ಸಾಫ್ಟ್ ವೇರ್ ಬಿಟ್ಟು ನೇಣಿನ ಹಗ್ಗ ತಯಾರ್ ಮಾಡೋದು ಯಾವಾಗ ಶುರು ಮಾಡಿತಪ್ಪ ಅಂತ ಅಂದುಕೊಂಡು "ಸಾರಿ, i did'nt get u" ಅಂದೆ. ಅವನೋ ಮತ್ತೆ ಮತ್ತೆ " please give your ಉರ್ಲ್" ಅಂತಿದಾನೆ. ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು, ಅವನು ಕೇಳಿದ್ದು "url" ಅಂತ. ಯು ಆರ್ ಎಲ್ ನ ಅವನು "ಉರ್ಲ್" ಮಾಡಿ ಬಿಟ್ಟಿದ್ದ!

ಮತ್ತೆ ಯಾರದೋ ಫೋನ್ ಬರ್ತಿದೆ, ಯಾರಿಗೆ ಏನು ಬೇಕೋ, ಎಲ್ಲಿ ಯಾರಿಗೆ ಆಕ್ಸಿಡೆಂಟಾಯ್ತೋ...

ಬುಧವಾರ, ಫೆಬ್ರವರಿ 21, 2007

ಗೆಳತೀ ಎಲ್ಲಡಗಿರುವೆ?

ಎಲ್ಲಿ ಹುಡುಕಲೇ ಗೆಳತಿ ನಾನು ನಿನ್ನ?
ನಿನಗಿಂತ ಸುಲಭದಲಿ ದೊರಕುವುದು ಚಿನ್ನ!

ಕನಸೊಳಗೆ ಹುಡುಕಿದೆ, ಮನಸೊಳಗೆ ಅರಸಿದೆ
ಸಾಗರದ ಗರ್ಭದಲಿ, ಆಳದಾ ಕಣಿವೆಯಲಿ

ಹುಡುಕುಡುಕಿ ಬಳಲಿ ಬೆಂಡಾಗಿ ಹೋಗಿಹೆನು
ಬಿಟ್ಟಿಲ್ಲ ಈ ಜಗದ ಯಾವುದೇ ಮೂಲೆಯನು..

ಆಗಸದ ಆಂತರ್ಯ, ಕತ್ತಲಿನ ಸಹಚರ್ಯ
ವಿಪಿನದಾ ಒಳ ಹೊರಗು ನಿನ್ನ ಹುಡುಕುವ ಕಾರ್ಯ

ಕಳೆದುಕೊಂಡೆನೆ ನಿನ್ನ,ಅಳುವೊಂದೆ ಉಳಿದಿಹುದು
ನೀ ದೊರಕದಿದ್ದರೆ, ಸಾವೊಂದೆ ಗತಿಯಹುದು..

ನಾನಂದು ಹೀಗೆಯೇ ನಿನ್ನ ಧ್ಯಾನದೊಳಿರಲು,
ಕನ್ನಡಿಯನೊಂದನ್ನು ಒಮ್ಮೆಗೇ ನೋಡಿದೆನು

ಅರರೆ! ನಾನಲ್ಲಿ ಕಂಡುದಿನ್ನೇನು?
ನನ್ನ ದೇಹಕೆ ಇಹುದು ನಿನ್ನದೇ ಬಿಂಬ!

ನನ್ನೊಳಗೆ ನೀನೀರುವೆ ಅರಿಯದೇ ಹೋದೆನೇ!
ನಿನ್ನ ಹುಡುಕುವ ತಪ್ಪನಿನ್ನೆಂದೂ ಮಾಡೆನೇ..

(ಮೂಲ ಇಂಗ್ಲೀಷು ಕವನ, ಭಾವಾನುವಾದ).

ಮಂಗಳವಾರ, ಫೆಬ್ರವರಿ 13, 2007

ಈ ಪ್ರೀತಿ ಒಂಥರಾ. . .




ಪ್ರೀತಿ.. ಈ ಪದವೇ ಒಂದು ಸಮ್ಮೋಹಿನಿ, ಅಲ್ವಾ?! ಜಗತ್ತಲ್ಲಿ ಪ್ರಾಯಶ: ಅತ್ಯಂತ ಹೆಚ್ಚು ಚರ್ಚೆಗೊಳಗಾಗುವ, ಮತ್ತು ಇಷ್ಟೊಂದು ಚರ್ಚೆ ಮಾಡಿದ್ರೂ ಯಾರಿಗೂ ಸರಿಯಾಗಿ ಅರ್ಥ ಆಗದ ವಿಷ್ಯ ಅಂದ್ರೆ ಈ ಪ್ರೇಮ ನೋಡ್ರಿ! ಪ್ರತಿ ಒಬ್ಬರ ಬಳಿಯೂ, ಒಂದೊಂದು ತೆರನಾದ ಅಭಿಪ್ರಾಯ ಇದೆ, ಪ್ರೀತಿ,ಪ್ರೇಮದ ಬಗ್ಗೆ. ನಾನು ಏನು ಹೇಳ್ತೀನೋ, ಅದರ ಸಂಪೂರ್ಣ ವಿರುದ್ಧ ಇರಬಹುದು, ನಿಮ್ಮ ಕೋನ. ಪ್ರೀತಿ ಅನ್ನುವ ಈ ಚೇತೋಹಾರಿ ಭಾವ ಇದೆಯಲ್ಲ, ಇದು ಎಲ್ಲರ ಹೃದಯದಲ್ಲೂ ದೀಪ ಬೆಳಗಲೂ ಬಹುದು, ಅಥವ ಕಿಚ್ಚು ಹತ್ತಿಸಲೂಬಹುದು. ಅವರವರ ಭಾವಕ್ಕೆ, ಅವರವರ ಭಕುತಿಗೆ!...

ಬದುಕಿನ ಹಾದಿಯಲ್ಲಿ ಎಲ್ಲರೂ ಒಮ್ಮೆಯಾದರೂ ಪ್ರೀತಿಯ ಸಾಂಗತ್ಯವನ್ನ ಬಯಸಿರುತ್ತಾರೆ, ಬಯಸುತ್ತಾರೆ, ಎಂತವರೇ ಆಗಲಿ.. ಬಾಳ ಪಯಣದ ಪ್ರಯಾಣದಲ್ಲಿ ಸ್ನೇಹಿತರೆಂಬ ಪಯಣಿಗರು ಇದ್ದರೂ, ಕೊನೆ ತನಕ ಜೊತೆ ನೀಡುವ ಸಂಗಾತಿ ಇರಬೇಕೆಂಬ ಆಸೆ ತಪ್ಪಲ್ಲ, ಅಲ್ಲವೇ? ನಮ್ಮ ಏಳು ಬೀಳುಗಳಲ್ಲಿ ಪ್ರೀತಿ ಪಾತ್ರರು ಜೊತೆಗಿದ್ದಾಗ ಆಗುವ ಸಂತಸವೇ ಬೇರೆಯ ತೆರನಾದ್ದು. ಪ್ರೇಮಿಸೋ ಜೀವ, ಬೆನ್ನ ಮೇಲೊಮ್ಮೆ ಕೈಯಿಟ್ಟು ಹಣೆಗೊಂದು ಹೂ ಮುತ್ತು ಕೊಟ್ಟರೆ, ಅದಕ್ಕಿಂತ ಬೇರೆಯ ಸಾಂತ್ವನ ಬೇಕೆ?!


ಪ್ರೀತಿ ಅಂದರೆ ಮನಸುಗಳ ಮಿಲನ. ಪ್ರೀತಿ ಬಿಡದೆ ಕಾಡುವ ಮಗುವಿನ ಹಾಗೆ. ಪ್ರೇಮದ ಕಾರಂಜಿಯ ನೀರು ಎಂದಿಗೂ ಚಿಮ್ಮುತ್ತಲೇ ಇರುತ್ತದೆ. ಪ್ರೇಮಕ್ಕೆ ಯಾವುದೇ ರೂಪವಿಲ್ಲ, ಅದು ನೀರಿನ ಹಾಗೆ. ಹಾಕಿದ ಪಾತ್ರೆಯ ರೂಪವನ್ನೇ ಪಡೆಯುತ್ತದೆ ! ಪ್ರೀತಿ ಆಕಸ್ಮಿಕ, ಕ್ಷಣ ಮಾತ್ರದ ದೃಷ್ಟಿ ಮಿಲನ, ಜೀವನದ ಗತಿಯನ್ನೇ ಬದಲು ಮಾಡಿಬಿಡಬಹುದು!. ಪ್ರೀತಿ ಪರಿಶುದ್ಧ, ದಟ್ಟ ಕಾಡಿನ ಹಸಿರು ಗಿಡದ ಮೇಲಿನ ಇಬ್ಬನಿಯ ಹಾಗೆ.

ಪ್ರೀತಿ ಸೋನೆಮಳೆಯ ಹಾಗೆ, ಬಿಡದೆ ಸುರಿಯುತ್ತಲೇ ಇರಬೇಕು ತುಂತುರು ತುಂತುರಾಗಿ. ದಿನಗಳ ಒಳಗೆ ಪ್ರೀತಿಯನ್ನ ಬಂಧಿಸೋದಕ್ಕಿಂತಾ ದೊಡ್ಡ ಮೂರ್ಖತನ ಬೇರೊಂದಿದೆಯಾ?!ದಿನಾ ಪ್ರೀತಿ ಮಾಡ್ರೀ! ಸುಮ್ ಸುಮ್ನೆ ಯಾಕೆ ಅದ್ಕೆ ಒಂದು ದಿನ ಅಂತ ಇಟ್ಕೊಂಡು ಆಚರಣೆ ಮಾಡಿ ಅದರ ಪವಿತ್ರತೆನ ಹಾಳ್ ಮಾಡ್ತೀರ?! ಪಾಪಾ, ಈ ವಿದೇಶಿಗರಿಗೆ ಯಾವಾಗ ನೋಡಿದ್ರೂ ಸಿಕ್ಕಾಪಟ್ಟೆ ಕೆಲ್ಸ! ಅವರಿಗೆ , ಎಲ್ಲದಕ್ಕೂ ಒಂದು ದಿನ ಬೇಕು. ಅಪ್ಪಂದ್ರ ದಿನ, ಅಮ್ಮಂದ್ರ ದಿನ, ಅಜ್ಜಂದ್ರ ದಿನ .. ಹೀಗೇ! ಪ್ರೀತಿಗೂ ಒಂದು ದಿನವನ್ನ ನಿಗದಿ ಪದಿಸಿ ಬಿಟ್ಟಿದಾರೆ ಅದಕ್ಕಾಗೇನೆ. ಏನ್ ಮಾಡ್ತೀರಾ ಹೇಳಿ! ನಾವೂ ಅದ್ನ ಹಾಗೆ ಶಿರಸಾ ವಹಿ ಪಾಲಸ್ತಾ ಬಂದ್ ಬಿಟ್ಟಿದೀವಿ.

ಪ್ರೇಮಿಗಳ ದಿನದ ತನ್ನ ಅರ್ಥನೇ ಕಳದ್ಕೋತಾ ಇದೆ ಈಗ. ಪ್ರೀತಿನ ವ್ಯಕ್ತ ವಡಿಸುವ ದುಬಾರಿ ವಿಧಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಈ ಆಚರಣೆ. ಹೆಚ್ಚು ಬೆಲೆ ಬಾಳುವ ಕಾಣಿಕೆ ಕೊಡುವಾತ ನಿಜವಾದ ಪ್ರೇಮಿ! ನಾಲ್ಕು ಜನರೆದುರು, ಐ ಲವ್ ಯೂ ಅಂತ ಕಿರಿಚೋನು ಬಹಳ ಗಟ್ಟಿಗ!.. ಪ್ರೇಮವನ್ನ ಹೊರ ಪ್ರಪಂಚಕ್ಕೆ ತೋರಿಸಿಕೊಂಡು ಮಾಡೂವುದು ಒಂದು ಫ್ಯಾಷನ್ನಾಗಿ ಬಿಟ್ಟಿದೆ. ರೇಡಿಯೋ ಚಾನಲ್ಲುಗಳಲ್ಲಿ , ಟಿ.ವಿಗಳಲ್ಲಿ "ಇಂತವಳನ್ನ ಇಷ್ಟಿಷ್ಟು ವರ್ಷಗಳಿಂದ ಹೀಗೀಗೆ ಪ್ರೇಮಿಸುತ್ತಿದ್ದೇನೆ" ಅಂತ ಹೇಳಿಕೊಳ್ಳೋದು ದೊಡ್ದ ಸಾಧನೆ!

ಪ್ರೀತಿಯೂ ಕೂಡಾ ಈ ವ್ಯಾಪಾರೀ ಯುಗದಲ್ಲಿ ಹಣ ಗಳಿಸುವ ಮಾಧ್ಯಮ ಆಗಿಬಿಟ್ಟಿದೆ. ಬೆಸ್ಟ್ ಕಪಲ್ಸದೂ ಇದೂ ಅಂತ ಸ್ಪರ್ಧೆಗಳು ಶುರು ಆಗಿರುತ್ತವೆ, ಈಗಾಗಲೇ! ನಿಜಕ್ಕೂ ಪ್ರೀತಿ ಮಾಡೋರಿಗೆ ಇದೆಲ್ಲದರ ಅವಶ್ಯಕತೆ ಇದೆಯಾ?! ನಿಮ್ಮ ಒಲುಮೆಯ ಜೀವ ನಿಮಗೆ ಬೆಸ್ಟ್ ಆಗಿದ್ದರೆ ಸಾಕು, ಅದನ್ನ ಜಗತ್ತಿಗೆ ತಿಳಿಸುವ ತೋರಿಕೆ ಏಕೆ ಬೇಕು?.. ಪ್ರೀತಿಯನ್ನ ಹೊರ ಜಗತ್ತಿಗೆ ತೆರೆದಿಟ್ಟಷ್ಟೂ, ಅದರ ಬೆಲೆ ಕಡಿಮೆ ಆಗುತ್ತ ಹೋಗುತ್ತದೆ, ಅಲ್ಲವೆ? ನಮ್ಮ ಸೆಲೆಬ್ರಿಟಿಗಳು ಪ್ರೀತೀನ ಮಾಧ್ಯಮಗಳ ಬಾಯಿಗೆ ಬೇಕಂತಲೇ ಕೊಟ್ಟು ಸುಮ್ಮಗೆ ಕೂರುತ್ತಾರೆ!.

ಪ್ರೇಮಿಗಳ ದಿನ ತನ್ನ ಮೂಲ ನೆಲೆಯಿಂದ ಹೊರ ಬಂದು ಏನೇನೋ ಆಗಿ ಬಹು ಕಾಲವೇ ಆಗಿ ಬಿಟ್ಟಿದೆ! ಫಾದರ್ ವ್ಯಾಲಂಟೈನ್ ಯಾರಿಗೂ ನೆನಪಿಲ್ಲ ಈಗ. ಆತನ ತ್ಯಾಗ ಎಲ್ಲೋ ಮಾಯವಾಗೇ ಹೋಗಿದೆ. ಆತನ ಮಾತುಗಳು ಅರ್ಥ ಕಳೆದುಕೊಂದು ಬಿಟ್ಟಿವೆ, ಹೆಸರು ಮಾತ್ರಾ ಹಾಗೇ ಉಳಿದಿದೆ!.

ಹಮ್, ಈಗ ಇನ್ನು ನಾನು ಹೀಗೆಲ್ಲ ಹೇಳೋದ್ರಿಂದ, ಆಚರಣೆ ಏನ್ ಕಡ್ಮೆ ಆಗಲ್ಲ, ನಿಂತೂ ಹೋಗಲ್ಲ.. ಸುಮ್ ಸುಮ್ನೆ ಬುದ್ಧಿ ಹೇಳೋದ್ ಯಾಕೆ?..

ಆದ್ರೆ, ಪ್ರೇಮಿಗಳಾ ದಿನಾನ , ಸ್ವಲ್ಪ ಅರ್ಥಪೂರ್ಣವಾಗಿ ಆಚರಣೆ ಮಾಡೋಕೆ ನೋಡಿ. ದುಬಾರಿ ಗಿಫ್ಟುಗಳನ್ನೆಲ್ಲಾ ಕೊಡಲೇ ಬೇಕಾ? ಪ್ರೀತ್ಸೋ ಹೃದಯಕ್ಕೆ ಲಂಚ ಬೇಕಾಗಲ್ಲ ಅಂತ ಅನ್ಸತ್ತೆ! ಅರ್ಚೀಸು ಗ್ಯಾಲರಿಯ ಬೆಲೆಬಾಳುವ ಗ್ರೀಟಿಂಗ್ ಕಾರ್ಡಿಗಿಂತಾ, ಒಂದು ಪುಟ್ಟ ನವಿಲುಗರಿ ಮನಸ್ಸನ್ನ ಅರಳಿಸಬಲ್ಲದು, ಯಾವುದೋ ಪಬ್‌ನಲ್ಲಿ ಕುಣಿಯುವುದಕ್ಕಿಂತಾ, ಮರದ ನೆರಳಿನ ಕೆಳಗಿನ ಪಿಸುಮಾತು ಪ್ರೀತಿಪಾತ್ರರನ್ನ ಅರ್ಥ ಮಾಡಿಕೊಳ್ಳಲು ಸಹಕರಿಸಬಹುದು. ನರಸಿಂಹ ಸ್ವಾಮಿಯವರ ಗೀತೆಗಳದೋ, ಲಕ್ಷ್ಮಣರಾಯರ ಪ್ರೇಮ ಕವಿತೆಗಳ ಸಿ.ಡಿ ಯೋ, ದುಬಾರಿ ಶಾಪಿಂಗುಗಳಿಗಿಂತ ಬೆಲೆಬಾಳಬಹುದು! ಪ್ರೀತಿ ಬಗ್ಗೆ ಯಾರಾದ್ರೂ ಬರ್ದಿರೋ ಸೊಗಸಾದ ಪುಸ್ತಕ ಕೊಟ್ಟು ನೋಡಿ, ಅದು ನೀವು ಕೊಡೋ ಸುಗಂಧ ದ್ರವ್ಯಗಳಿಗಿಂತ ಹೆಚ್ಚು ಕಾಲ ಇರುತ್ತದೆ!

ಈ ಪ್ರೇಮದ ದಿನದ ಸಂಜೆ ನಿಮ್ಮ ನಲುಮೆಯ ಜೀವದ ಜೊತೆ, ಭುಜ ಆನಿಸಿ ಸುಮ್ಮನೆ ಕುಳಿತು ಮೌನದಲ್ಲೇ ಮಾತಾಡಿ. ನಿಮ್ಮ ಪ್ರೀತಿಯ ಜೀವ, ಬಾಳ ಮುಸ್ಸಂಜೆಯವರೆಗೂ ನಿಮ್ಮ ಜೊತೆ ಹೀಗೇ ಪಕ್ಕದಲ್ಲೇ ಇರಲಿ ಅಂತ ಆಶಿಸುತ್ತೇನೆ. . .





ಗುರುವಾರ, ಫೆಬ್ರವರಿ 08, 2007

ಹೀಗೊಂದು ಪ್ರವಾಸದ ಕಥೆ.

ಬಿದಿರ ಮಟ್ಟಿಗಳನ್ನ ದಾಟಿ ಅಲ್ಲಿಗೆ ಬಂದು ನಿಂತಾಗ , ನಡು ಮಧ್ಯಾಹ್ನ ೨ ಗಂಟೆ. ಹೊಳೆ ದಾಟಿ ಆ ಹಳ್ಳಿಗೆ ಹೋಗಬೇಕೆಂದರೆ ಗಂಟಲು ಹರಿದು ಹೋಗುವ ಥರಾ ಕಿರುಚಬೇಕು ಬೇರೆ. ಹೊಟ್ಟೆ ತುಂಬಾ ಊಟ ಆಗಿದ್ದರಿಂದ ಏನೂ ತೊಂದರೆ ಆಗಲಿಲ್ಲ! ಅರ್ಧ ತಾಸಿನ ಪ್ರಯತ್ನ, ನಾನೂ, ಅನಾ, ಡೀನು ಎಲ್ಲಾ ಬೇರೆ ಬೇರೆ ವಿಧಾನದಲ್ಲಿ ಕಿರುಚಿದೆವು! ಗೋವಿಂದ ರಾಜ್ ಅಂತೂ "ಮಾದಾ, ಕೆಂಚಾ" ಅಂತೆಲ್ಲ ಕರೆದರು, ಆ ಹೆಸರಿನವರು ಖಂಡಿತಾ ಅಲ್ಲಿರುತ್ತಾರೆ ಎಂಬ ಭರವಸೆಯಲ್ಲಿ. ಅಂತೂ ಮೊದಲಿಗೆ ದೂರದಲ್ಲೊಂದು ನಾಯಿ ಕಂಡಿತು, ನಾಯಿಯ ಬೆನ್ನ ಹಿಂದೇ ಮನುಷ್ಯಾಕೃತಿಯೂ ಬಂತು. ಆ ಆಕೃತಿಯ ಹೆಸರು ಕೃಷ್ಣ ಅಂತ ಆಮೇಲೆ ಗೊತ್ತಾಯ್ತು. ಆ ಜೀವ, ಆ ದಂಡೆಯಲ್ಲಿ ಕಟ್ಟಿದ್ದ ದೋಣಿಯೊಂದನ್ನು ಬಿಚ್ಚಿ, ಮೆಲ್ಲನೆ ನಮ್ಮ ತೀರದತ್ತ ಹುಟ್ಟು ಹಾಕತೊಡಗಿತು.


ಹಳೇ ಮರದ ದೋಣಿ ಅದು. ನಾವಾರೂ ಜನರೂ ಕಷ್ಟ ಪಟ್ಟು ಕೂತಾಯ್ತು. ಆತ ಹೇಳುತ್ತಿದ್ದ, "ನಮ್ಮರೇ ಆದ್ರೆ ೧೫ ಜನ ಹಾಕತ್ ನಾವ್" ಅಂತ! ಆ ಇರುಕಲು ದೋಣಿ ಅತ್ತಿತ್ತ ಸ್ವಲ್ಪ ಅಲುಗಾಡಿದರೂ ಇನ್ನೇನು ಮುಳುಗೇ ಹೋಗುತ್ತೇನೋ ಅನ್ನುವಷ್ಟು ವಾಲಾಡುತ್ತಿತ್ತು ಬೇರೆ. ಅಂತೂ ಇಂತೂ ಆ ದಡಕ್ಕೆ ಹೋಗಿ ಉಸಿರು ಬಿಟ್ಟಾಯ್ತು.

ಆಹ್! ಎಂತ ಸುಂದರ ತಾಣ ಇದು! ಸುತ್ತುವರಿದ ಗುಡ್ಡಗಳ ಮಧ್ಯೆ, ಒಂದು ಪುಟ್ಟ, ಶಾಂತ ಊರು. ಮೂವತ್ತು ಮನೆಗಳಿವೆ, ಹೆಚ್ಚೆಂದರೆ. ದೋಣಿ ಕೃಷ್ಣ ನಮಗೆ ದಾರಿ ತೋರಿಸಿದ, ಊರೊಳಗೆ ಹೋಗಲು. ಮುಳುಗಡೆ ಊರಲ್ಲಿ ಬದುಕುವ ಕಷ್ಟಗಳ ಬಗ್ಗೂ ಹೇಳಿದ. 'ಒಂದ್ ಕಟ್ ಬೀಡಿಗೆ ೧೦ ಕಿಲೋಮೀಟರ್ ನಡೀಬೇಕು" ಅನ್ನೋದು ಅವನ ಬೇಜಾರು.



ಮೂರು ಸುತ್ತಲೂ ನೀರು, ಇನ್ನೊಂದು ಕಡೆ ನಿರ್ಭಂದಿತ ಪ್ರದೇಶ. ೨ ದಿನಗಳ ಪ್ರವಾಸಕ್ಕೆ ಹೋಗುವ ನಮಗೆ ಬಹಳ ಸಂತಸ ತರುವ ತಾಣ ಇದು.. ಎಲ್ಲೇ ಕಣ್ಣು ಹಾಯಿಸಿದರೂ ಹಸಿರು, ಹರಿಯೋ ನೀರು, ದನ ಕರು, ಗದ್ದೆ.. ಒಳ್ಳೇ ಕಥೆಗಳಲ್ಲಿ ಬರುವ ಊರಿನಂತೇ ಇದೆ . ಆದರೆ ಪಾಪ, ಅಲ್ಲಿರುವವರ ಪಾಡು ಹೇಳ ತೀರದು. ಏನೇ ಬೇಕಾದರೂ ಕಿಲೋಮೀಟರುಗಟ್ಟಲೇ ನಡೀಬೇಕು. ಇನ್ನು ಹೆಚ್ಚು ದಿನ ಇಲ್ಲ ಅವರ ಕಷ್ಟ, ಅದು ಬೇರೆ ವಿಚಾರ.

ನಮ್ಮನ್ನ ಆ ಊರಿನ ವ್ಯಕಿಯೊಬ್ಬರು ಅಲ್ಲೇ ಇರುವ ಜಲಪಾತದ ಕಡೆಗೆ ಹೋಗಲು ಸಹಕರಿಸಿದರು. ಅವರ ಸಂಬಂಧಿಕರ ಮನೆಯಲ್ಲೇ ನಮ್ಮ ಬ್ಯಾಗುಗಳನ್ನ ಇಟ್ಟು ಜಲಪಾತದ ಕಡೆ ಹೊರಟದ್ದಾಯಿತು ನೀರು ಕುಡಿದು, ದಣಿವಾರಿಸಿಕೊಂಡು. ಪ್ರಕೃತಿ ಇಲ್ಲೇ ಮನೆ ಮಾಡಿದ್ದಾಳೆ, ತನ್ನ ಸಂಸಾರ ಸಮೇತ. ಯಾಕೋ ಒಂದು ನಿಗೂಢತೆ ಇದೆ ಈ ಜಾಗದಲ್ಲಿ ಅಂತ ನನಗನ್ನಿಸಿತು. ದಟ್ಟ ಕಾಡು, ಆದರೂ ಜಲಪಾತಕ್ಕೆ ಸಾಗುವ ದಾರಿ ಸುಗಮವಾಗೇ ಇದೆ.



ಅರುಣ, ಸುಬ್ಬಿ ಮತ್ತೆ ಗೋವಿಂದ ರಾಜು ಹಿಂದೇ ಉಳಿದರು. ಗೋವಿಂದ ರಾಜು ವಾರ್ನಿಂಗು ಬೇರೆ, "come back, ಲೇಟ್ ಆದ್ರೆ ಕಷ್ಟ" ಅಂತ. ಅವರ ಬಳಿ ಆಯ್ತು ಸಾರ್ ಅಂತಲೇ ಹೇಳಿ ಮುನ್ನಡೆದದ್ದಾಯ್ತು, ನಾನು, ಡೀನು, ಅನಾ. ಜಲಪಾತದ ಪಾತ್ರದಲ್ಲೇ ಸಾಗಬೇಕು, ಪೂರ್ಣ ಪ್ರಮಾಣದ ಜಲಪಾತವನ್ನ ನೋಡಲು. ನಡು ನಡುವೆ ಪುಟ್ಟ ಪುಟ್ಟ ಮಡುಗಳು, ಝರಿಗಳು ಬೇರೆ.


ಜಲಪಾತ ಸಂಪೂರ್ಣ ಕಾಣುವವರೆಗೂ ತೆರಳಿ , ಚಿತ್ರಗಳನ್ನ ತೆಗೆದು, ಒಲ್ಲದ ಮನಸ್ಸಿನಿಂದ ಹಿಂದೆ ಬಂದು, ಸ್ನಾನದ ಶಾಸ್ತ್ರ ಮಾಡಿ ಮರಳಿ ಊರಿಗೆ ಬಂದದ್ದಾಯ್ತು. ಸಂಜೆಗತ್ತಲಲ್ಲಿ ಸಹೃದಯರೊಬ್ಬರ ಮನೆ ಅಂಗಳದಲ್ಲಿ ಕೂತು ಹರಟಿದ್ದಾಯ್ತು. ಸಂಪೂರ್ಣ ಶಾಂತ, ಈ ಪರಿಸರ. ಪ್ರಾಯಶ: ನಮ್ಮ ಗಲಾಟೆ ಇತರರಿಗೆ ಭಂಗ ತರುತ್ತಿತ್ತೋ ಏನೋ!. ನಾನೂ, ಡೀನು ಮನೆಯಿಂದ ಹೊರಟು ಹೊರಗಿನ ಗದ್ದೆ ಬಯಲಲ್ಲಿ ತಿರುಗಾಡುತ್ತಿದ್ದೆವು.. ಹೀಗೇ ಮಾತಾಡುತ್ತಾ ಮೇಲೆ ನೋಡಿದರೆ, ಬೆಟ್ಟವೊಂದರ ಮರೆಯಿಂದ ಮೂಡುತ್ತಿರುವ ಬೆಳ್ಳಿ ಚಂದ್ರ!. ನನ್ನ ಜೀವನ ಅತ್ಯಂತ ಸುಂದರ ಚಂದ್ರೋದಯ ಅದು. ಡೀನ್ ಖುಷಿಯಲ್ಲಿ ಹೇಳುತ್ತಿದ್ದರು " ಹೋದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೂ ಇಂತಹುದೇ ಚಂದ್ರೋದಯ ನೋಡಿದೆ" ಅಂತ.

ಚಂದಿರನ ಬೆಳಕಲ್ಲಿ ಎಲ್ಲ ಕೂತು ಹರಟಿ, ಸೊಗಸಾದ ಊಟವನ್ನೂ ಮುಗಿಸಿ ಮಲಗಿದೆವು, ಗೋವಿಂದರಾಜರ ಗೊರಕೆಯ ಹಿಮ್ಮೇಳದ ಜೊತೆ! ಅವರ ಗೊರಕೆ ನಿಲ್ಲಿಸಲು ನಾನು ಏನೆನೆಲ್ಲ ಪ್ರಯತ್ನ ಮಾಡಿದೆ, ಆದರೆ ಯಶಸ್ವಿಯಾಗಲಿಲ್ಲ.

ಬೆಳಗ್ಗೆದ್ದು ನೋಡಿದರೆ ಅನಾ, ಗದ್ದೆ ಬದುವಿನ ಕೂತು, ಯಾವುದೋ ಒಂದು ಬೆಟ್ಟವನ್ನೇ ದಿಟ್ಟಿಸುತ್ತಿದಳು. ( ಯಾವುದೋ ಒಂದು ಅಂತ ಯಾಕೆ ಅಂದೆ ಅಂದ್ರೆ, ಇಲ್ಲಿ ಸುತ್ತಲೂ ಬೆಟ್ಟಗಳೇ ಇರೋದು)ಏನು ನೋಡುತ್ತಿದ್ದೀಯಾ ಅಂದಿದ್ದಕ್ಕೆ, "ಹಂತ ಹಂತವಾಗಿ ಬೆಳಗಾಗುವದನ್ನ ನೋಡ್ತಾ ಇದೀನಿ, ನಿಧಾನವಾಗಿ ಬೆಳಗಾಗ್ತಾ ಇದೆ".. ಅಂತೆಲ್ಲ ಏನೋ ಅಂದಳು. ನಾನೂ ಸ್ವಲ ಹೊತ್ತು ಕೂತು ಅದನ್ನ ನೋಡಿ, ಮತ್ತೆ ಬಂದು ಮಲಗಿದೆ. ಸ್ವಲ್ಪ ಹೊತ್ತಿಗೇ ಸ್ಲೀಪಿಂಗ್ ಬ್ಯಾಗುಗಳಿಂದ ಎಲ್ಲ ಜೀವಿಗಳೂ ಹೊರ ಬಂದವು.




ಉಪಹಾರಕ್ಕೆ ಭರ್ಜರಿ ನೀರುದೋಸೆ. ಎಂದೂ ಹಾಲು ಹಾಕಿ ಮಾಡಿದ ದ್ರವ ಪದಾರ್ಥ ಕುಡಿಯದ ಡೀನ್, ಇಲ್ಲಿ ಕಷಾಯ ಕುಡಿದುಬಿಟ್ಟರು.ಆ ಹಿರಿಯರು ನಮಗೆ ಆ ಊರಿನ ದೇವಸ್ಥಾನ ತೋರಿಸುತ್ತೇನೆ ಅಂತ ಅಂದಿದ್ದರು. ಮನೆಯೊಡತಿಗೆ ವಂದನೆ ಸಲ್ಲಿಸಿ, ಅಲ್ಲಿಂದ ಗಂಟು ಮೂಟೆ ಕಟ್ಟಿ ಹೊರಟಿದ್ದಾಯ್ತು.
ಜಲಪಾತದಿಂದಲೇ ಬರುವ ಹಳ್ಳ ದಾಟಿ, ದೇವಸ್ಥಾನಕ್ಕೆ ಬಂದೆವು.


ಸಣ್ಣ ಅಂದ್ರೆ ಸಣ್ಣ ದೇವಸ್ಥಾನ ಇದು. ಗರ್ಭಗುಡಿಯಲ್ಲಿರುವ ಲಿಂಗ ರಾಮಲಿಂಗೇಶ್ವರನದು. ರಾಮ- ಸೀತೆ ಇಲ್ಲಿ ಲಿಂಗ ಸ್ಥಾಪನೆ ಮಾಡಿದರೆಂದೂ, ನಂತರ ಪಾಂಡವರು ಈ ದೇವಸ್ಥಾನ ಕಟ್ಟಿದರೆಂದೂ ಊರವರು ಐತಿಹ್ಯ ಹೇಳುತ್ತಾರೆ.ಹೊರಗಡೆ ಒರಟು ಕಲ್ಲಿನಂತೆ ಕಂಡರೂ ಗರ್ಭಗುಡಿಯ ಒಳಮೈ ನುಣುಪಾಗಿದೆ. ಈ ಕುಗ್ರಾಮದಲ್ಲಿರುವ ದೇವಳವೂ, ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದು ಸ್ಪಷ್ಟವಿದೆ. ಅಂಗಳದಲ್ಲಿನ ನಂದಿ, ಗರ್ಭಗುಡಿಯ ಹೊರಗಿರುವ ಪಾರ್ವತಿ(?) ಯ ವಿಗ್ರಹಗಳು ದುರುಳರ ಹೊಡೆತಕ್ಕೆ ಸಿಕ್ಕಿವೆ.









ಇಲ್ಲಿನ ದೇವಳದ ಆವರಣದಲ್ಲಿ ವೀರಗಲ್ಲುಗಳೂ ಇವೆ. ಆ ವೀರಗಲ್ಲುಗಳ ಬಗ್ಗೆ ಸರಿಯಾದ ಮಾಹಿತಿ ನಮಗೆ ಸಿಗಲಿಲ್ಲ.




ಇನ್ನು ವಾರ ಬಿಟ್ಟರೆ, ಅಲ್ಲಿನ ದೇವರಿಗೆ ಜಾತ್ರೆಯ ಸಂಭ್ರಮ. ನಾಲ್ಕಾರು ಜನ ಸೇರಿ ದೇವಸ್ಥಾನದ ಆವರಣವನ್ನು ಸಗಣಿ ಸಾರಿಸಿ ಶುಚಿ ಮಾಡುತ್ತಿದ್ದರು. ಒಬ್ಬ ಸಣ್ಣ ಹುಡುಗ,ನಾನು ಫೋಟೋ ತೆಗೆಯುದನ್ನೇ ಕುತೂಹಲದಿಂದ ನೋಡುತ್ತಿದ್ದ. ಅವನ ತಂಗಿಯನ್ನೂ ಕರೆತಂದು ತೋರಿಸಿದ. ಅವನ ಫೋಟೋ ತೆಗೆದು ತೋರಿಸಿದೆ. ಇಷ್ಟಗಲ ಬಾಯಿ ಬಿಟ್ಟು ನಕ್ಕ.


ನಮ್ಮ ಜೊತೆ ಬಂದವರು ಅಲ್ಲಿಂದ ನಾವು ಹೇಗೆ ಮುಂದುವರಿಯಬೇಕು ಅಂತ ದಾರಿ ತೋರಿಸಿದರು. ಅವರಿಗೆ ಮನ:ಪೂರ್ವಕ ಕೃತಜ್ಞತೆಗಳನ್ನ ತಿಳಿಸಿ, ಭಾರ ಬ್ಯಾಗುಗಳ ಜೊತೆ, ಅಲ್ಲೇ ಕೂತಿದ್ದ ನಮ್ಮ ಭಾರ ಮನಸ್ಸುಗಳನ್ನು ಹಠ ಮಾಡಿ ಎಬ್ಬಿಸಿ ಕರೆದುಕೊಂಡು ಹೊರಟೆವು, ಕಳೆದ ದಿನವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಾ..

ಮಂಗಳವಾರ, ಜನವರಿ 30, 2007

ಸಾವು

ನೆಲೆಯ
ಬಲೆಯನು
ಕಳಚಿಯೋ ಉಳುಚಿಯೋ
ಹೊರಬಂದು,
ಪರಿಧಿಯನೊಮ್ಮೆ ದಾಟಿ,
ಭಯಗೊಂಡು
ಮತ್ತೆ
ಒಳಬಂದು
ಇದ್ದುದರಲ್ಲೆ ಹೊಸತನು
ಹುಡುಕಿ
ಬಿತ್ತಿ,ಬೆಳೆಸಿ,
ಉದ್ಧಾರಕೆ
ಉಸಿರಾಗುವ ಮುನ್ನವೇ,
ಮೂರು
ಎರಡು
ಒಂದು....

ಗುರುವಾರ, ಜನವರಿ 25, 2007

ರಜೆಯನೆದುರಿಟ್ಟುಕೊಂಡು...

ನಾಳೆ ಬೆಳಗ್ಗೆ ಅಂದ್ರೆ ಮನೆ. ಭರ್ಜರಿ ರೆಸ್ಟಿಂಗು , ಎಲ್ಲೂ trekking ಹೋಗದೆ, ತಿರುಗದೇ, ೩ ದಿನಗಳ ರಜೆಯನ್ನ ಈ ತರಹ ಉಪಯೋಗಿಸುತ್ತಿರುವುದು ಇದೇ ಮೊದಲು ಅಂತ ಕಾಣಿಸುತ್ತದೆ!ಮನೇಲೆ ಅದೂ ಇದೂ ಮಾಡ್ಕಂಡು ಆರಾಮಾಗಿರೋ ಯೋಚ್ನೆ. ಹಾಲು ಕರಿಯೋದು, ತೋಟಕ್ಕೆ ನೀರು ಬಿಡೋದು, ಗುಡ್ದ ಬೆಟ್ಟ ಸುತ್ತೋದು..

ಎಂಥಾ ವಿಪರ್ಯಾಸ ಅಲ್ವಾ?, ಮೊದ್ಲು ನಾನು ದಿನಾ ಮಾಡೊ ಕೆಲ್ಸ, duty ಆಗಿತ್ತು ಇದೆಲ್ಲ! ಆವಾಗ ಹಾಳಾದ್ದು ಈ ಕೆಲ್ಸ ಯಾಕೆ ನಾನು ಮಾಡಬೇಕು ಅಂತ ಆಲೋಚಿಸ್ತಾ ಇದ್ದೆ, ಒಮ್ಮೆ ಈ ರಗಳೆ ಮುಗಿದರೆ ಸಾಕು ಅನ್ನಿಸುತ್ತಿತ್ತು. ಅಪ್ಪ ಎಲ್ಲ ಬಿಟ್ಟು ಈ ಹಳ್ಳಿಯ ಮೂಲೆಯಲ್ಲಿ ಯಾಕಾದರೂ ಮನೆ ಮಾಡಿದರೂ ಅಂತಲೂ ಅನ್ನಿಸಿದ್ದಿದ್ದೆ. ಆದರೆ ಈಗ ಅವುಗಳೇ ನನ್ನ ಸಂತಸ ಹುಡುಕುವ ಮಾಧ್ಯಮಗಳಾಗಿವೆ. ಅಪ್ಪ ದಿನಾ ಬೆಳಗ್ಗೆದ್ದು "ಶ್ರೀನಿಧೀ, ಶ್ರೀನಿಧೀ, ಹಾಲು ಕರ್ಯಕು ಏಳಾ" ಅಂದಾಗ ಶಪಿಸುತ್ತಲೇ ಎದ್ದು ಆ ಕೆಲ್ಸ ಮಾಡಲು ಹೊರಡುತ್ತಿದ್ದೆ.

ಸಂಜೆ ನಾನು ಕ್ರಿಕೆಟ್ ಆಡುವ ಸಮಯಕ್ಕೇ, ಅಪ್ಪ ನೀರ ಪೈಪು ತಗೊಂಡು ಹೊರಡುತ್ತಿದ್ದ, ತೆಂಗಿನ ಮರಗಳಿಗೆ ನೀರಾಯಿಸಲು .ನಾನು ಬರುವುದಿಲ್ಲ ಎಂದರೆ ತಾನೇ ಎಲ್ಲ ಮರಗಳಿಗೆ ನೀರು ಹಾಕಿ ಸುಸ್ಥು ಮಾಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ , ನಾನೇ ಹೋಗಿ ಎಲ್ಲ ತೆಂಗಿನ ಮರಗಳ ಸುತ್ತ, ನೀರು ಹಾರಿಸಿ, ಬುಡವನ್ನು ಒದ್ದೆ ಮಾಡಿ, ಆಡಲು ಓಡುತ್ತಿದ್ದೆ! ಬಹಳ ಕಾಲದ ಹಿಂದೇನೂ ಅಲ್ಲ, ಮೊನ್ನೆ ಮೊನ್ನೆ, ೨-೩ ವರ್ಷಗಳ ಹಿಂದಿನ ವರೆಗೂ!

ಇವತ್ತು ನಾನು ಮತ್ತೆ ಹಾಲು ಕರೀಬೇಕು, ನೀರು ಬಿಡಬೇಕು ಅಂತ ಅಲೋಚನೆ ಮಾಡುತ್ತೇನೆ, ಅಪ್ಪನಿಗೆ ಈಗಲೂ ಅದು ಕೆಲಸವೇ. ನಾನು ಮೂರು ದಿನ ಇದ್ದು, ಆ ಕೆಲಸದಲ್ಲಿ ಸಂತಸ ಅನುಭವಿಸಿ ವಾಪಾಸಾಗುತ್ತೇನೆ! ಅಪ್ಪನಿಗೂ ಅದು ಸಂತಸವೇ, ಆದರದು ಬೇರೆಯದೇ ತೆರನಾದ್ದು.

ತಂಗಿ, ನಾನೇನೋ ಅಲ್ಪ ಸ್ವಲ್ಪ ಬರೆಯುತ್ತೇನಾದ್ದರಿಂದ ಅವಳ ಸಂಶಯಗಳ ಬುಟ್ಟಿ ರೆಡಿ ಇಟ್ಟುಕೊಂಡು ಕಾಯುತ್ತಿರುತಾಳೆ. ಅಣ್ಣಾ, ಅದ್ಯಾಂಗೆ, ಇದ್ಯಾಂಗೆ ಅನ್ನುತ್ತಾ.. ಅವಳ ಜರ್ನಲಿಸಂ ನ ಕೊರೆತಗಳನ್ನು ಸಹಿಸಿಕೊಳ್ಳಲು ನಾನು ಈಗಿಂದಲೇ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇನೆ!

ಅಮ್ಮನ ಬಳಿ ಒಂದಿಷ್ಟು ಹೊಸ ಅಡುಗೆ ತಯಾರಿ ಬಗ್ಗೆ ಕಲೀಬೇಕು! ಮಾಡಿದ್ದೇ ಮಾಡಿಕೊಂಡು ಉಂಡು ಬೇಜಾರಾಗಿದೆ.
ಇಷ್ಟಾಗಿ ನಾಳೆ ಗಣರಾಜ್ಯೋತ್ಸವ, ಯಾವುದಾದರೂ ಹತ್ತಿರದ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದರೂ ಇತ್ತೇ, ಅದಕ್ಕೂ ಹಾಜರಿ ಹಾಕಬೇಕಾದ ಜವಾಬ್ದಾರಿ ಇದೆ!

ಇದೆಲ್ಲ ಮೂರು ದಿನಗಳ ಕಥೆಯಾಯಿತು. ಮುಂದೇನಾಗುತ್ತದೆ?

ಸಣ್ಣ ಸಣ್ಣ ರಜೆಗಳ ಖುಶಿ ಅನುಭವಿಸೋಕೆ ಮನೆಗೆ ಹೋಗುವ ನಾನು/ನಾವುಗಳು ನಮ್ಮ ಬೇರುಗಳಿಗೆ ಶಾಶ್ವತವಾಗಿ ಎಂದಾದರೂ ಹಿಂದಿರುಗುತ್ತೇವಾ?

ಗುರುವಾರ, ಜನವರಿ 11, 2007

ಸಾಗರ ಸಮ್ಮುಖದಲ್ಲಿ-೨

ಸಾಗರದ ದಂಡೆಯಲಿ, ಅವಳ ಜೊತೆ ಜೊತೆಯಲ್ಲಿ
ಸಾಗುತಿದ್ದೆನು ಹೀಗೇ, ಕೈಯ ಹಿಡಿದು.
ಕಾಲ ಕೆಳಗಡೆಯಲ್ಲ ಮರಳ ಕಣಗಳ ಹಾಸು
ಜೊತೆಗಿಹಳು ಮನದನ್ನೆ ಮಲ್ಲಿಗೆಯ ಮುಡಿದು.

ಎದುರುಗಡೆ ದಿನ್ನೆಯಲಿ ಕೋಟೆ ಕಟ್ಟುವ ಆಟ
ಬಾಲಕರ ನೆಗೆದಾಟ, ಹರ್ಷ ಸಂಭ್ರಮವು.
ಪಕ್ಕದಲಿ ನೋಡಿದರೆ ಶಂಖ ಹೆಕ್ಕುವ ಹುಡುಗಿ,
ಗಾಳಿಪಟ ಹಾರಿಹುದು ತೀರದುದ್ದಕ್ಕೂ.

ಬಯಲು ಸೀಮೆಯ ಹುಡುಗಿ, ಕಡಲು ಹೊಸದಿವಳಿಗೆ
ಬೆರಗುಗಣ್ಣಿನ ಒಳಗೆ ಶರಧಿ ಪ್ರತಿಬಿಂಬ.
ನೀರ ರಾಶಿಯ ನೋಡಿ, ಬಾಲ್ಯ ಒಡಮೂಡಿಹುದು
ಏನ ಮಾಡುವುದೆಂಬ ಗೊಂದಲವು ಮನತುಂಬ!

ಪಡುವಣದ ಅಂಚಲ್ಲಿ ಸೂರ್ಯ ಸ್ನಾನವಿದೀಗ
ಅವನ ಕೆಂಬಣ್ಣದಲೀಕೆ ಮಿಂದಿಹಳು ಮೊದಲೆ,
ನೇಸರನ ಸೊಬಗ ನೋಡುತಲಿ ಇವಳಿರೆ,
ನನಗೆ ಈಕೆಯ ಮೊಗವು, ಅದಕು ಸೊಗಸು!

ಮಂಗಳವಾರ, ಜನವರಿ 09, 2007

ಸಾಗರ ಸಮ್ಮುಖದಲ್ಲಿ. . .

ಮೊದಲ ಮಳೆ ಹನಿಗಳು,
ಹಣೆಯ ತಂಪಾಗಿಸಿ, ಉರುಳುತ್ತಿವೆ ಕೆಳಗೆ..
ಎದೆಯು ಖುಷಿಯೊಳಗರಳಿ, ಉಬ್ಬುತಿದೆ,
ನಾವಿಬ್ಬರೀಗ ಮತ್ತೂ ಸನಿಹ.

ಸಾಗರದ ಸಮ್ಮುಖದ ತಣ್ಣನೆಯ ಮಾರುತವು
ನನ್ನ ನೇವರಿಸಿ ತೆರಳುತಿಹುದು..
ಅಲೆಗಳ ನೃತ್ಯವಾ ಜೊತೆ ಸೇರಿ ನೋಡುತಿರೆ
ಸಮಯ ಸ್ತಬ್ದವು ಅಲ್ಲೆ, ನಾವು ಪ್ರೇಮಧ್ಯಾನಿಗಳು.

ಸಂಜೆ ಹೊತ್ತಿನ ಕಂಪು ತಂಗಾಳಿ ಮೊಗ ಸವರಿ
ತರಗೆಲೆಯ ಕಚಗುಳಿಗೆ, ಎಚ್ಚೆತ್ತುಕೊಂಡು
ತುಟಿಯಂಚಲೇ ನಕ್ಕು, ಕಣ್ಣ ತೆರೆಯೆ
ಪಕ್ಕದಲೆ ನೀನಿರುವೆ, ತಗೋ! ಪ್ರೀತಿಯಪ್ಪುಗೆಯು.

ನೀ ನನ್ನ ಜೊತೆಯಿರಲು, ಬಾಳು ಸುಂದರ ಗೆಳತಿ
ಹೂವ ಹಾಸಿಗೆಯಲ್ಲೆ, ಜೀವನವು ಕಳೆವುದು.
ಸಂತಸದಿ ಸಾಗುತಿರೆ ನಮ್ಮ ಜೀವನಗಾಥೆ
ಯಾವ ಕಿನ್ನರ ಕಥೆಗು, ಕಡಿಮೆಯಿರದು!

(ಸ್ನೇಹಿತನೊಬ್ಬನಿಂದ ಎರವಲು ಪಡೆದ ಇಂಗ್ಲೀಷು ಕವನವೊಂದರ ಭಾವಾನುವಾದ)

ಸೋಮವಾರ, ಜನವರಿ 08, 2007

ಅವಳ ಮನಸು

ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.

"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ಸುಮ್ಮಗೆ ಕರೆಯುವರೇ?, ನೋಡಬೇಕಾಯ್ತಲ್ಲ!

ಬೆಳಗಿಂದ ಅವನ ಜೊತೆ, ಮಾತಾಡಿಯೇ ಇಲ್ಲ,
ಸಣ್ಣ ಜಳಗ ಬಳಿಕ, ಪೂರ್ತಿ ಮೌನ.

ರಾಜಿಯಾಗುವ ಮನಸು ಬಂದಿಹುದೋ ಅವನಿಗೆ?
ನಾನು ಬಗ್ಗುವುದಿಲ್ಲ, ಏನಾದರಾಗಲಿ!

ಹೊರ ಬಂದು ನೋಡಿದರೆ, ಕಂಡುದಿನ್ನೇನು?
ಅವನ ಪಕ್ಕದಿ ಕತ್ತಿ, ಕೈಯೆಲ್ಲ ರಕ್ತ.

ಕಣ್ಣಾಲಿಗಳು ತುಂಬಿ ಮಾತೇ ಹೊರಡುತಲಿಲ್ಲ
ಇನಿಯನಾ ಪಾಡನು, ನೋಡುವುದು ಹೇಗೆ..

ಒಳಗೋಡಿ ತಂದಳು, ಹಳೆಯ ಸೀರೆಯ ಚೂರ
ರಕ್ತದಲಿ ಮುಳುಗೆದ್ದ ಬೆರಳಿಗುಪಚಾರ.

ನಿಮಗೇಕೆ ಬೇಕಿತ್ತು, ಸಲ್ಲದಾ ಈ ಕೆಲಸ
ಎಂದೂ ಮಾಡಿಲ್ಲ, ಇಂಥ ಸಾಹಸವ.

ಇನ್ನೊಮ್ಮೆ ಕತ್ತಿಯನು ಮುಟ್ಟಿದರೆ ನನ್ನಾಣೆ
ಗೊತ್ತಿಲ್ಲಾದ ಕೆಲಸ, ಮಾಡುವುದು ಬೇಡ

ನಿಮಗೇನೋ ಆದರೆ ನಡುಗುವುದು ನನ್ನೆದೆಯು
ಕೈಮುಗಿವೆ ದಮ್ಮಯ್ಯ, ಕ್ಷಮಿಸಿಬಿಡಿ ನನ್ನ.

ಇನ್ನೆಂದು ಜಗಳವನು ಮಾಡೆ ನಾ ನಿಮ್ಮ ಜೊತೆ,
ನಗುಲಿರುವೆನು ಎಂದೂ, ತಿಳಿಯಿತಲ್ಲ.

ಈಗೊಮ್ಮೆ ಒಳಬನ್ನಿ, ನನ್ನ ಜೀವವೇ ನೀವು
ಎನ್ನುತಲಿ ನಡೆದಳು, ಅವನ ಬಳಸಿ.

ಬುಧವಾರ, ಜನವರಿ 03, 2007

ಒಂದು ಬೆಳಗಿನ ಸಮಯ...

ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ
ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ..

ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು
ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ..

ಗೆಜ್ಜೆ ಘಲ್ಲೆನಿಸುತಲಿ, ತುಳಸಿಗೆ ಪ್ರದಕ್ಷಿಣೆಯು
ಧೂಪದಾ ಘಮವಿಹುದು ಅಂಗಳದ ತುಂಬಾ

ಆತ ಮಲಗಿಹನಲ್ಲಿ ಒಳಮನೆಯ ಕತ್ತಲಲಿ
ಕಳೆದ ರಾತ್ರಿಯ ಸುಖದ ಕನಸಿನೊಳಗೆ..

ಬಿಳುಪು ಪಾದಗಳನ್ನ, ಮೆಲುವಾಗಿ ನಡೆಸುತ್ತ
ಮೆಲ್ಲನುಸುರಿದಳಾಕೆ, ಕೋಣೆ ಪರದೆಯ ಸರಿಸಿ,

ಮುಂಜಾವು ಬಂದಿಹುದು ಮನೆಯ ಬಾಗಿಲ ಬಳಿಗೆ
ಏಳಬಾರದೆ ದೊರೆಯೆ, ಹೊತ್ತು ಮೀರುತಿದೆ.

ಆಕೆಯಿನಿ ದನಿಯು, ಅವನ ಕಿವಿಯನು ಸವರಿ
ಮೆಲ್ಲನೆದ್ದನು ಅವಳ ಸೊಬಗ ನೋಡುತಲಿ

ಬಳಿ ಬಾರೆ ಎಂದವಳ ಪ್ರೇಮದಲಿ ಕರೆದವನು
ಬಾಚಿ ತಬ್ಬಿದನವಳ, ಕದವ ಮುಚ್ಚುತ್ತ..

ಬಾಗಿಲಿನ ಸಂದಿಯಲಿ ಬಿಸಿಲಕೋಲೊಂದಿತ್ತು
ಕದ್ದು ನೋಡುತಲವರ ಸರಸವನ್ನು.