ಶನಿವಾರ, ಮೇ 31, 2008

ಫೇಕ್ ಮೈಲ್ಸ್....

ನಾವೊಂದಿಷ್ಟು ಜನ ಸ್ನೇಹಿತರು- ನಾನು, ಅರುಣ, ಹರ್ಷ, ಸುಶ್ರುತ ಹೆಚ್ಚಾಗಿ ನಮಗೆ ಬರುವ ಫೇಕ್ ಮತ್ತು ಜಂಕ್ ಮೇಲ್ಸ್ ಗಳನ್ನು ಪರಸ್ಪರ ಫಾರ್ವರ್ಡ್ ಮಾಡಿಕೊಂಡು ನಗಾಡುತ್ತಿರುತ್ತೇವೆ. ಕೆಲವು ಈ-ಮೇಲುಗಳು ಪದೇ ಪದೇ ತಿರುಗಿ ಬರುತ್ತಿರುತ್ತವೆ. ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ!, ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇತ್ಯಾದಿ ಇತ್ಯಾದಿ...

ಇನ್ನು ಪ್ರವಾಸಿ ಸ್ಥಳಗಳ ಮತ್ತು ಟ್ರೆಕ್ಕಿಂಗು ಸ್ಪಾಟುಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಅಮೆರಿಕ ಯಾವುದೋ ಜಲಪಾತ ಬೆಂಗಳೂರಿನ ಸಮೀಪದ ಮುತ್ಯಾಲ ಮಡುವು ಅನ್ನುವ ಹಣೆಪಟ್ಟಿ ಹೊತ್ತುಕೊಂಡಿತ್ತು ಮೊನ್ನೆಯಷ್ಟೇ. ಜೊತೆಗೆ "ರತ್ನಘಡ ಎನ್ನುವ ಭೂಮಿಯ ಮೇಲಿನ ಸ್ವರ್ಗ" ಅನ್ನುವ ಹೆಸರು ಹೊತ್ತ ಈಮೇಲು ಬಗ್ಗೆ ಹೇಳಿ ಪ್ರಯೋಜ್ನಿಲ್ಲ! ಆ ಸ್ವರ್ಗ ಇರುವ ಜಾಗ ಪ್ರತಿ ಮೇಲ್ ನಲ್ಲೂ ಬದಲಾಗುತ್ತಿರುತ್ತದೆ! ಭಾರತದ ಎಲ್ಲಾ ರಾಜ್ಯಗಳನ್ನು ದಾಟಿ , ಈಗ ಈ ಸ್ಥಳ ಶ್ರೀಲಂಕಾದಲ್ಲಿದೆ ಎನ್ನುವ ಹೊಸ ಶೋಧವೂ ಆಗಿದೆ.

ಇನ್ನು ಈ ಈ ಮೇಲ್ ನ ೧೫ ಜನಕ್ಕೆ - ೨೦ ಜನಕ್ಕೆ ಕಳಿಸಿ , ಇಲ್ಲದಿದ್ದರೆ ಅದಾಗುತ್ತದೆ , ಇದಾಗುತ್ತದೆ ಎಂಬ ಧಮಕೀ ಹೊತ್ತು ಬರುವ ಮಿಂಚೆಂಚೆಗಳು ಮತ್ತೊಂದು ಗ್ರಹಚಾರ. ಅವುಗಳನ್ನು ಕಳಿಸಿದವರಿಗೇ ತಿರುಗಿ ೩೦ ಸಲ ಕಳಿಸಿದರೆ ಮುಗಿಯಿತು. ಮತ್ತೆ ಆ ತಪ್ಪು ಆತನಿಂದ ಆಗದು.ಇಂತವೆಲ್ಲ ನಿರುಪದ್ರವಿ ಮೇಲ್ ಗಳು ಅಂತ ಸುಮ್ಮನಿದ್ದು ಬಿಡಬಹುದು. ಆದರೆ, ಈಗೀಗ ತೊಂದರೆ ಉಂಟುಮಾಡುವ ಮೇಲ್ ಗಳೂ ಬರೋಕೆ ಶುರುವಾಗಿದೆ.

ಈ ಕೆಳಗಿನ ಸಬ್ಜೆಕ್ಟ್ ಲೈನು ಹೊತ್ತ ಮೇಲ್ ಗಮನಿಸಿರುತ್ತೀರಿ:

Please Pass this Message "1098"
dial 1098 for givin ur left over food to the diprieved ..

Need one small promise from you....!

Helping Hands Are Better Than Praying Lips.............
Not liking the food you have daily????


ಭಾರತದಲ್ಲಿನ ಬಡತನವನ್ನು ಅತ್ಯಂತ ಗಾಢವಾಗಿ ಬಿಂಬಿಸುವ ಒಂದಿಷ್ಟು ಚಿತ್ರಗಳನ್ನು ಮತ್ತು ಹಸಿವಿಂದ ಸಾಯುತ್ತಿರುವವರ ಅಂಕಿ ಅಂಶಗಳನ್ನು ಹೊತ್ತಿರುವ ಮೇಲ್ ಇದು. ಆ ಮೇಲ್ ನ ಸಾರಂಶ ಇಷ್ಟೇ. ನಿಮ್ಮ ಮನೆಯಲ್ಲೋ, ಅಥವ ಯಾವುದೇ ಸಮಾರಂಭಗಳಲ್ಲೇಸಿದ್ಧ ಪಡಿಸಿದ ಆಹಾರ ಉಳಿದು ಹೋಯಿತು ಅಂದರೆ ಅದನ್ನ ಹಾಳು ಮಾಡಬೇಡಿ, 1098 ಅನ್ನುವ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ಹೇಳಿ, ಅಲ್ಲಿನ ಸಂಬಂಧಿಸಿದ ವ್ಯಕ್ತಿಗಳು ಬಂದು ಆ ಅಳಿದುದ್ದನ್ನ ತಗೊಂಡು ಹೋಗಿ, ಏನೂ ಊಟಕ್ಕಿಲ್ಲದ ಮಕ್ಕಳಿಗೆ ಕೊಡುತ್ತಾರೆ, ನಾಲ್ಕು ಮಕ್ಕಳಿಗೆ ಉಪಕಾರ ಆಗ್ಲೀ, ದಯವಿಟ್ಟು ಸಾಧ್ಯ ಆದಷ್ಟ್ ಜನಕ್ ಕಳ್ಸೀ ಅಂತ ಈ ಅಂಚೆ ನಿಮ್ಮನ್ನು ಬೇಡಿಕೊಳ್ಳುತ್ತದೆ. ಮತ್ತು ನಾವು -ನೀವುಗಳು ಅದನ್ನು ಯಥಾಸಾಧ್ಯ ಜನಕ್ಕೆ ಫಾರ್ವರ್ಡ್ ಮಾಡಿ ಸುಮ್ಮನಾಗುತ್ತೇವೆ.

ಯಾರಾದರೂ , ಒಮ್ಮೆಯಾದರೂ 1098 ಗೆ ಫೋನ್ ಮಾಡಿದ್ದೀರಾ?

1098 ಅನ್ನುವುದು ಚೈಲ್ಡ್ ಲೈನ್ ಅನ್ನುವ ಸರಕಾರ ಮತ್ತು ಎನ್ ಜಿ ಓ ಗಳ ಸಹಕಾರದಿಂದ ನಡೆಯುವ, ಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಿರುವ ಸಂಸ್ಥೆಯ ದೂರವಾಣಿ ಸಂಖ್ಯೆ. ತೊಂದರೆಗೊಳಗಾದ ಮಕ್ಕಳಿಂದ ಅಂದರೆ- ಬಾಲ ಕಾರ್ಮಿಕರಾಗಿರುವವರು, ಮನೆಯಿಂದ ಓಡಿ ಬಂದು ದಿಕ್ಕುಗಾಣದವರದು, ಅಥವಾ ಪರೀಕ್ಷೆ ಅಂತ ಹೆದರಿ ಕೂತಿರುವವರಿಂದ- ದಿನವೊಂದಕ್ಕೆ 300-400 ಫೋನುಗಳು ಹಗಲು ರಾತ್ರಿ ಅನ್ನದೇ ಬರುತ್ತಲೇ ಇರುತ್ತದೆ. ಈ ಸಂಸ್ಥೆಗೆ ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ. ಅವರುಗಳಿಗೆ ಊರಲ್ಲಿನ ಉಳಿದ ಆಹಾರವನ್ನು ಸಂಗ್ರಹಿಸಿ ತಮ್ಮಲ್ಲಿನ ಮಕ್ಕಳಿಗೆ ನೀಡುವ ಅವಶ್ಯಕತೆ ಖಂಡಿತಕ್ಕೂ ಇಲ್ಲ.

ಈ ಈ ಮೈಲ್ ಏನು ತೊಂದರೆ ಮಾಡುತ್ತಿದೆ ಗೊತ್ತಾ?- ದಿನವೊಂದಕ್ಕೆ 60-70 ದೂರವಾಣಿ ಕರೆಗಳು, "ನಮ್ಮನೇಲಿ ಮೂರು ಜನಕ್ಕಾಗೋ ಅಷ್ಟ್ ಅನ್ನ ಸಾಂಬಾರು ಇದೆ, ತಗೊಂಡೋಗಿ", "ನೋಡೀ, ಇಂತಾ ಛತ್ರಕ್ಕೆ ಬನ್ನೀ, ಮೂವತ್ತು ಊಟ ಕೊಡ್ತೀವೀ ತಗಂಡು ಹೋಗೀ" ಅನ್ನೋ ತರದವೇ ಆಗಿವೆ. ಮತ್ತು ಇಂತಹ ಕರೆಗಳು ಬರುತ್ತಿರುವಾಗ,

ಅಲ್ಲೆಲ್ಲೋ ಜೀತ ಮಾಡುವ ಹುಡುಗನೊಬ್ಬ, ಅಥವಾ ದುಡ್ದಿಗಾಗಿ ಯಾರಿಗೋ ಮಾರಲ್ಪಟ್ಟಿರುವ ಹುಡುಗಿ, ತನ್ನನ್ನ ಬಚಾವು ಮಾಡೀ ಅಂತ ಕೋರಿಕೊಳ್ಳಲು ಫೋನ್ ಮಾಡುತ್ತಿರುತ್ತಾರೆ ಮತ್ತು ಈ ನಂಬರು ಪದೇ ಪದೇ ಎಂಗೇಜು ಬರುತ್ತದೆ.

ಸ್ನೇಹಿತರೇ, ಅವರುಗಳಿಗೆ ಆ ಹೊತ್ತಿಗೆ ಡಯಲ್ ಮಾಡಲು ಸಾಧ್ಯವಾಗದೇ ಹೋದರೆ. . .ಮತ್ತೆಂದೂ ಮಾಡಲಾಗದೇ ಹೋದೀತು.

ಯೋಚಿಸಿ..

ನಿಮಗೆ ಮೇಲ್ ಕಳಿಸೋರಿಗೆ, ಇದು ಸುಳ್ಳು ಮಾಹಿತಿ ಅನ್ನೋ ವಿಷ್ಯ ತಿಳಿಸಿ, ಮತ್ತು ನಿಜಕ್ಕೂ ಕಷ್ಟದಲ್ಲಿರೋ ಮಕ್ಕಳು ಕಣ್ಣಿಗೆ ಬಿದ್ದಾಗ ಮಾತ್ರ ಚೈಲ್ಡ್ ಲೈನ್ ಗೆ ಫೋನ್ ಮಾಡಿ.

(ನಾನು ಸ್ನಾತಕೋತ್ತರ ಪದವಿ ಓದುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಚೈಲ್ಡ್ ಲೈನ್ ಸಂಸ್ಥೆಯಲ್ಲಿ ಒಂದು ವರುಷ, ಫೀಲ್ಡ್ ವರ್ಕ್ ಮಾಡಿದ್ದೆ.)

ಚೈಲ್ಡ್ ಲೈನ್ ವೆಬ್ ಸೈಟ್.

ಬುಧವಾರ, ಮೇ 14, 2008

ಹೇರೂರು ತೇರಿಗೆ ನಾನೂ ಹೋದೆ!

ವಿಷ್ಯ ಅಂತಂದ್ರೆ,ನಾನು ಮೊನ್ನೆ ಮೊನ್ನೆ ಹೇರೂರು ತೇರಿಗೆ ಹೋಗಿದ್ದೆ. ಮತ್ತು, ಹೇರೂರು ತೇರಿಗೆ ಹೋದಾಗ ಏನು ಮಾಡಲೇ (ಆಡಲೇ)ಬೇಕೋ ಅದನ್ನ ಮಾಡಿ(ಆಡಿ) ಬಂದೆ.

ಗುರುವಾರ, ಮೇ 01, 2008

ಏನನ್ನುತ್ತೀರಿ ಇದಕ್ಕೆ?

ಯಡಿಯೂರಪ್ಪ ಸಾರಥ್ಯದ ಬಿಜೆಪಿ ಗವರ್ಮೆಂಟು ಬಿದ್ದು ಹೋಗಿ ಸ್ವಲ್ಪ ದಿನಕ್ಕೇ ಆ ಪಕ್ಷ ಬೆಂಗಳೂರಿನಲ್ಲಿ ರಾಜಭವನ ಚಲೋ ಕಾರ್ಯಕ್ರಮ ಮಾಡಿತು. ಎಲ್ಲೆಂಲ್ಲಿಂದಲೋ ಬಂದ ಬಾಡಿಗೆ ಭಂಟರು ಕಾರ್ಪೋರೇಷನ್ನು, ಕಬ್ಬನ್ ಪಾರ್ಕು ತುಂಬಿಕೊಂಡು ಗಲಭೆ ಎಬ್ಬಿಸಿದರು. ಟ್ರಾಫಿಕ್ಕು ಮೂರ್ನಾಲ್ಕು ತಾಸು ಗಬ್ಬೆದ್ದು ಹೋಯಿತು. ಎಲ್ಲ ಟಿ.ವಿ.ಚಾನಲ್ಲುಗಳು, ಪತ್ರಿಕೆಗಳೂ ಈ ಟ್ರಾಫಿಕ್ ಜಾಮ್ ಸುದ್ದಿಗೆ ಒಂದಿಷ್ಟು ಜಾಗ ಮೀಸಲಿಟ್ಟವು. ಜನರೂ ಉಗಿದರು. ಸಂತೋಷ. ಒಂದು ರಾಜಕೀಯ ಪಕ್ಷಕ್ಕೆ ಸ್ವಲ್ಪವಾದರೂ ಸಾಮಾಜಿಕ ಜವಾಬ್ದಾರಿ ಅನ್ನುವುದು ಬೇಕಿತ್ತು.

ಹೋದವಾರದ ಒಂದು ದಿನ, ಬೆಳಗ್ಗೆ ಹತ್ತು ಗಂಟೆಗೆ ಮನೆಯಿಂದ ಆಫೀಸಿಗೆ ಹೊರಟೆ. ಸಜ್ಜನ ರಾವ್ ಸರ್ಕಲ್ಲಿನ ಬಳಿಯೇ ಟ್ರಾಫಿಕ್ ನಿಧಾನಗತಿಯಲ್ಲಿತ್ತು. ತೆವಳಿಕೊಂಡು ಜೇಸೀ ರೋಡು ಸೇರಿದೆ. ಮಾಮೂಲಿ ಸ್ಲೋ ಟ್ರಾಫಿಕ್ ಅಂತಂದುಕೊಂಡೆ. ಆದರೆ ಜೆ.ಸಿ ರೋಡಿಗೆ ಬಂದ ಮೇಲೆ ವಾಹನಗಳು ಒಂದಿಂಚೂ ಕದಲಲಿಲ್ಲ. ನೆತ್ತಿಯ ಮೇಲೆ ಸುಡು ಸುಡು ಬಿಸಿಲು. ಯಾಕೆ ಟ್ರಾಫಿಕ್ ಜಾಮಾಗಿದೆ ಅಂತ ಅಲ್ಲಿದ್ದ ಯಾರಿಗೂ ಗೊತ್ತಿಲ್ಲ. ಪಕ್ಕದ ಡಬ್ಬಲ್ ರೋಡ್ ಕೂಡ ಜಾಮ್ ಆಗಿದೆ ಅನ್ನುವ ಸುದ್ದಿ ಬಂತು.

ನನ್ನೆದುರಿಗೆ ವೃದ್ಧ ದಂಪತಿ ಸ್ಕೂಟರಲ್ಲಿದ್ದರು. ಹಿಂದುಗಡೆ ಕೂತಿದ್ದಾಕೆ, ಬಿಸಿಲಿಗೆ ತಲೆಸುತ್ತಿ ಹಿಂದಕ್ಕೆ ಬಿದ್ದೇಬಿಟ್ಟರು. ಸ್ಕೂಟರನ್ನ ಸಂಭಾಳಿಸಲಾಗದೇ ಆ ವೃಧ್ಧರೂ ಬಿದ್ದರು, ಸ್ಕೂಟರೂ ಬಿತ್ತು. ಆಕೆಗೆ ಪಾಪ ಹಣೆಗೆ ಪೆಟ್ಟಾಗಿ ರಕ್ತ ಸುರಿಯತೊಡಗಿತು. ಅಲ್ಲೆಲ್ಲೂ ಸುತ್ತ ಮೆಡಿಕಲ್ಲೂ ಇಲ್ಲ. ಕರ್ಚೀಫು ಕಟ್ಟಿ, ಬದಿಗೆ ಕೂರಿಸಿದ್ದಾಯಿತು. ಸುಮಾರು ಒಂದು ಒಂದೂವರೆ ಗಂಟೆಗಳ ಕಾಲ - ಕಾಲ ಸ್ತಬ್ಧ.ಅಷ್ಟು ಹೊತ್ತಿಗೆ ವಿಷಯವೂ ತಿಳಿಯಿತು, ಕನ್ನಡಕ್ಕಾಗಿ ಓರಾಡುವ ಸಂಘಟನೆಯ ಜಾಥಾವೇನೋ ನಡೆಯುತ್ತಿದೆ ಮುಂದೆ ಅಂತ.

ಒಂದು ಕೆಲಸದ ದಿನ, ಸಾವಿರಾರು ಜನರ ಅಮೂಲ್ಯ ಸಮಯ ಹಾಳಾಗಿ ಹೋಗಿತ್ತು. ಜೊತೆಗೆ ಉರಿ ಬಿಸಿಲಲ್ಲಿ ಒಣಗಿದ್ದು ಬೇರೆ.ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕಾಳಜಿ ಹೊಂದಿರುವ ಸಂಘಟನೆಗಳ ಬಗ್ಗೆ ನನಗೂ ಗೌರವವಿದೆ. ಆದರೆ ಮೊನ್ನೆಯ ಘಟನೆ ನಿಜಕ್ಕೂ ಬೇಸರ , ಸಿಟ್ಟು ತರಿಸಿತು. ಅವರ ಈ ಕಾರ್ಯದಿಂದಾಗಿ ತೊಂದರೆಗೊಳಗಾಗಿದ್ದು ಕನ್ನಡದ ಜನತೆಯೇ ಅಲ್ಲವೇ? ಕನ್ನಡದ ಕೆಲಸ ಮಾಡೋಕೆ ಉದ್ದುದ್ದ ಜಾಥಾ, ಒಂದು ಕೆಲಸದ ಬೆಳಗೇ ಆಗಬೇಕಿತ್ತೇ?

ಕನ್ನಡ ಪರ ಸಂಘಟನೆಯಿಂದಾದ ಈ ತೊಂದರೆಯ ಬಗ್ಗೆ , ಯಾವುದೇ ಮಾಧ್ಯಮಗಳು ತುಟಿ ಪಿಟಕ್ ಅನ್ನಲಿಲ್ಲ. ಯಾಕೆ ಸುಮ್ಮನಿದ್ದರು ಅಂದರೆ, ಹೆದರಿಕೆ. ಈಗೀಗ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಕೆಲ್ಸ ಮಾಡುವ ಯಾರ ಬಗ್ಗೆಯಾದರೂ ನೀವೇನಾದರೂ ಸ್ವಲ್ಪ ವಿಮರ್ಶೆ ಮಾಡುವ , ಅಥವಾ ಪ್ರಶ್ನೆ ಮಾಡುವ ಧಾಟಿಯಲ್ಲಿ ಬರೆದಿರಿ, ಹೇಳಿದಿರಿ ಅಂದರೆ ನಿಮಗೆ ಕನ್ನಡ ವಿರೋಧಿ ಹಣೆಪಟ್ಟಿ ಹಚ್ಚಲಾಗುತ್ತದೆ.

ಇಂತಹ ಆಷಾಢಭೂತಿತನಕ್ಕೆ ನನ್ನ ಧಿಕ್ಕಾರವಿದೆ.

ಗುರುವಾರ, ಏಪ್ರಿಲ್ 17, 2008

ಸರಕಾರದ ಕೆಲಸ, ದೇವರ ಕೆಲಸ.

ಪೋಸ್ಟಾಫೀಸಿಗೆ ಹೋಗಿದ್ದೆ. ಹಿಂದಿನ ದಿನ ರಿಜಿಸ್ಟರ್ ಪೋಸ್ಟ್ ಬಂದಿತ್ತು, ನಾನು ಮನೆಯಲ್ಲಿರಲಿಲ್ಲ. ಒಂದು ಹರಕು ಚೀಟಿಯಲ್ಲಿ ಪೋಸ್ಟ್ ಮ್ಯಾನ್ ಸುಬ್ರಮಣ್ಯಂ ( ಆ ಚೀಟೀಲೇ ಇತ್ತು ಅವನ ಹೆಸರು) ಏನೋ ಬರೆದು ಕೊಟ್ಟು ಹೋಗಿದ್ದ, ಇಂತಿಂತಾ ಪೋಸ್ಟಾಫೀಸಿಗೆ ಬಂದು ಕಲೆಕ್ಟ್ ಮಾಡಿಕೋಬೇಕು ಅಂತ. ಬೆಳಿಗ್ಗೆ ಆಫೀಸಿಗೆ ಹೊರಟವನು ಹೋದೆ ಅಲ್ಲಿಗೆ.

ಗಂಟು ಮುಖದ ಹೆಂಗಸು ಬಾಗಿಲಲ್ಲೇ ಕೂತಿದ್ದಳು."ಸುಬ್ರಮಣ್ಯಂ ಬೇಕಿತ್ತು, ರಿಜಿಸ್ಟರ್ ಪೋ.." ಮಾತು ಮುಗಿಯುವುದರೊಳಗೆ ಆಕೆ ಕೈ ಮೇಲೆತ್ತಿದ್ದಳು.ಅಂಪೈರು ಔಟು ಕೊಡುವ ಹಾಗೆ. ಅರ್ಥವಾಗಲಿಲ್ಲ. "ಮೇಡಮ್, ಸುಬ್ರಮಣ್ಯಂ ಅವರಿದಾರ?" ಅವಳು ತನ್ನ ಬರೆಯುವ ಕೆಲಸ ಮುಂದುವರೆಸುತ್ತ ಕೈ ಮತ್ತೊಮ್ಮೆ ಮೇಲೆತ್ತಿದಳು, ಈ ಬಾರಿಪುಣ್ಯಕ್ಕೆ ಮಾತಾಡಿದಳು. - ಮೇಲಿರ್ತಾರೆ ಹೋಗ್ರೀ.. ನಾನು ಮೇಲೆ ಹೋಗುವ ದಾರಿ ಹಿಡಿದೆ. ಮೇಲೊಂದು ಕುರುಕ್ಷೇತ್ರ. ಒಂದಿಷ್ಟು ಜನ ಪತ್ರಗಳ ಕಟ್ಟನ್ನ ಇತ್ತಿಂದತ್ತ, ಅತ್ತಿಂದಿತ್ತ ಎಸೆಯುತ್ತ ಕೂತಿದ್ದರು.

"ಸಾರ್, ಸುಬ್ರಮಣ್ಯಂ ಅವ್ರು ಇದಾರಾ.."

ಯಾರಿಗೂ ನನ್ನ ಮಾತೇ ಕೇಳಲಿಲ್ಲ, ಸಿಕ್ಕ ಸಿಕ್ಕ ಚೀಲಕ್ಕೆ ಪತ್ರಗಳನ್ನ ಗುರಿಯಿಟ್ಟು ಎಸೆಯುವುದರಲ್ಲೇ ತಲ್ಲೀನರು. ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ. ಒಬ್ಬಾತ ತಣ್ಣಗೆ, ನನ್ನ ಮುಖವನ್ನೂ ನೋಡದೇ, ಕೆಳಗಿರ್ತಾರೆ ಹೋಗಿ ಅಂದ. "ಇಲ್ಲಾ ಸಾರ್, ಅಲ್ಲಿಂದಲೇ ಬಂದೆ" ಅಂದೆ. ಕೆಳಗಿರ್ತಾರೆ ಹೋಗೀ ಅಂತು ಇನ್ನೊಂದು ಶರೀರ, ಮತ್ತೊಮ್ಮೆ. ನಾನು ಮತ್ತೆ ಕೆಳಗಿಳಿದೆ.

ಈ ಬಾರಿ ಗಂಟು ಮೇಡಮ್ ನ ಮಾತಾಡ್ಸೋಕೆ ಧೈರ್ಯ ಸಾಲಲಿಲ್ಲ. ಎದ್ದು ಬಾರಿಸಿದರೆ ಅನ್ನುವ ಅಳುಕು. ಪಕ್ಕದಲ್ಲಿದ್ದ ಮತ್ತೊಬ್ಬ ಪುಣ್ಯಾತ್ಮರನ್ನ ಕೇಳಿದೆ."ಸುಬ್ರಮಣ್ಯಂ.." ಅನ್ನುತಿದ್ದ ಹಾಗೆ, ಅವ್ರು ಹೇಳಿಲ್ವೇನ್ರೀ- ಮೇಲಿರ್ತಾರೆ...ಹೋಗಿ.

ಮತ್ತೆ ಮೇಲೆ- ಅಲ್ಲಿಯಾತ ಹೆಚ್ಚೂ ಕಡಿಮೆ ಕಿರುಚಿಯೇ ಬೆಟ್ಟ. ಹೋಗುತ್ತಿಯೋ ಇಲ್ಲವೋ ಕೆಳಗಡೆಗೆ ಅನ್ನುವ ಹಾಗೆ. ಅವನು ಕಿರುಚಿದ್ದು ನೋಡಿ ಆ ರೂಮುಲ್ಲಿ ಅವರು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಏನಾದರೂ ಕಾಗದ ಪತ್ರಗಳ ವಿಲೇವಾರಿ ಮಾಡುತ್ತಿದ್ದಾರೋ ಅನ್ನುವ ಅನುಮಾನ ಬಂತು. ಮತ್ತೆ ಕೆಳಗೆ. ಹುಚ್ಚು ಹಿಡಿಯುವ ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಬಾರಿ ಕೆಳಗಿನ ಮೇಡಮ್, ಅವ್ರು ಕಾಪಿಗ್ ಹೋಗಿದಾರೆ ಅನ್ಸತ್ತೆ.. ಅನ್ನುವ ರಾಗ ಎತ್ತಿದರು.

ಕಾದೆ. ಹತ್ತು ನಿಮಿಷ. ಕಾಲ ನಿಂತೇ ಹೋದ ಅನುಭವ. ಮತ್ತೆ ಅಲ್ಲಿದ್ದೊಬ್ಬ ಪುಣ್ಯಾತ್ಮ ಬಳಿ ಕೇಳಿದರೆ, ಮೈ ಪರಚಿಕೊಳ್ಳುವುದೊಂದು ಬಾಕಿ. ಈಗಷ್ಟೇ ಬಂದ್ರಲ್ಲ..ಮೇಲೆ ಹೋದ್ರು ನೋಡಿ. ಓಡಿದೆ ಮೇಲೆ. ಯಾವನೋ ಅಡ್ಡ ಬಂದ. ಜಸ್ಟ್ ಮಿಸ್ಸು. ಬಿದ್ದೇ ಹೋಗ್ತಿದ್ದ. ಮೇಲೆ ಇದ್ದವರಿಂದ ಐಸಿನಂತ ಉತ್ತರ ಬಂತು, ಈಗಷ್ಟೇ ಕೆಳಗೆ ಹೋದ್ರು ನೋಡಿ, ಅವರೇ ಸುಬ್ರಮಣ್ಯಂ!

ಅಂತೂ ಆ ಪುಣ್ಯಾತ್ಮನ್ನ ಹಿಡಿದೆ. ಆ ಸಾವ್ಕಾರ್ರು ಮತ್ತೆ ಹತ್ತು ನಿಮಿಷ ನನ್ನ ರಿಜಿಸ್ಟರ್ ಪೋಸ್ಟ್ ಹುಡುಕಿ, ಕಾಣಿಸ್ತಿಲ್ಲ ಸಾರ್, ಮಧ್ಯಾಹ್ನ ಬನ್ನಿ ಅಂದ್ರು.

ಇಲ್ಲಣ್ಣಾ ದಮ್ಮಯ್ಯ ಅಂತೆಲ್ಲ ಹೇಳಿ ಹುಡುಕ್ಸಿ, ಅದ್ನ ಕೈಲ್ ಹಿಡ್ಕೊಂಡು ಹೊರಡಬೇಕಿದ್ರೆ... ಉಫ್..

*******

ಶಾಸಕರ ಭವನಕ್ಕೆ ಯಾರದೋ ಸಂದರ್ಶನ ಮಾಡೋಕೆ ಹೋಗಬೇಕಿತ್ತು. ಆ ಮಾಜಿ ಎಂ.ಎಲ್.ಎ ಅಲ್ಲಿರುವ ಮೂರು ಬಿಲ್ಡಿಂಗ್ ಗಳಲ್ಲಿ ಎಲ್ಲಿರುತ್ತಾರೆ ಅಂತ ಗೊತ್ತಿರಲಿಲ್ಲ. ಸುಮ್ನೆ ಬ್ಲೈಂಡಾಗಿ ಒಂದು ಕಟ್ಟಡಕ್ಕೆ ನುಗ್ಗಿದೆ. ಒಬ್ಬ ಪೋಲೀಸು ಪೇದೆ ಬಾಗಿಲಲ್ಲೇ ಕೂತಿದ್ದ.

"..... ಅವರು ಇಲ್ಲಿ ಇರ್ತಾರ"

ನಿಮ್ಮ ಹೆಸರು? -ಶ್ರೀನಿಧಿ

ಎಲ್ಲಿಂದ ಬಂದಿದೀರಿ?- ಹೆಸರು ಹೇಳಿದೆ.

ಯಾಕೆ?- ಅವರ ಸಂದರ್ಶನ ಮಾಡಬೇಕಿತ್ತು.

ನಿಮ್ಮ ಹೆಸರು ಈ ರಿಜಿಸ್ಟರಲ್ಲಿ ಬರೀರಿ- ಬರೆದೆ.

ವಿಳಾಸನೂ ಬರೀರಿ,ಹಾಂ, ಹಾಗೆ.. - ಅದ್ನೂ ಬರೆದೆ.

ಪೂರ್ತಿ ಬರೀರಿ ಸಾರ್, ವಿದ್ ಪಿನ್ ಕೋಡ್.- ಓಕೆ, ಅದ್ನೂ..

ಯಾರನ್ನ ಮೀಟಾಗಕ್ ಬಂದಿದ್ದೊ ಅಂತ್ಲೂ ಬರೀರಿ- ಹುಂ..

ಯಾಕೆ, ಏನು, ಏತ್ತ ಎಲ್ಲದ್ನೂ ಬರೀರಿ- ಬರ್ದೆ.

"ಎಲ್ಲದೂ ಆಯ್ತಾ?- ಕೇಳಿದೆ. ಆಯ್ತು ಸಾರ್.

"ಅವ್ರು ಇಲ್ಲೇ ಇರ್ತಾರ, ಇದೇ ಬಿಲ್ಡಿಂಗಲ್ಲಿ?"

ಓ ಅಲ್ಲಿ ರಿಸೆಪ್ಶನ್ ಕೌಂಟರ್ ಇದೆ, ಅಲ್ ಹೋಗಿ ಕೇಳಿ- ಹೇಳ್ತಾರೆ!!!

ಸರಕಾರದ ಕೆಲಸ, ದೇವರ ಕೆಲಸ.

ಶನಿವಾರ, ಏಪ್ರಿಲ್ 12, 2008

ಪೂರ್ಣಚಂದ್ರ ತೇಜಸ್ವಿ ಮತ್ತೆ ಬಂದಿದ್ದಾರೆ!

ಸುಮ್ನೆ ಮಾಡೋಕೇನೂ ಕೆಲಸ ಇಲ್ಲದಿದ್ದಾಗ, ಅಥವಾ ಆಫೀಸಿಂದ ಬೇಗ ಹೊರಟರೆ ಗಾಂಧೀ ಬಜಾರಲ್ಲಿ ಒಂದ್ ಸುತ್ ಹೊಡೆಯೋದು ಅಭ್ಯಾಸ ನನಗೆ. ಗಾಂಧಿ ಬಜಾರು ಅಂದರೆ ಐಸ್ ಥಂಡರು, ಮಹಾಲಕ್ಷ್ಮೀ ಟಿಫನ್ ರೂಮು ಮತ್ತು ಅಂಕಿತ ಬುಕ್ ಸ್ಟಾಲು.

ಮೊನ್ನೆ ಹೀಗೇ ಅಂಕಿತಕ್ಕೆ ಹೋದೆ, ವಿನಾಕಾರಣ. ಯಾವುದಾದರೂ ಹೊಸ ಪುಸ್ತಕ ಇದೆಯಾ ಅಂತ ಹುಡುಕಾಡಿದೆ. ಕಾಣಲಿಲ್ಲ. ಬೇಕಾದ್ದು ಇರಲಿಲ್ಲ. ಎಂದಿನ ಹಾಗೆ ತೇಜಸ್ವಿ ಪುಸ್ತಕ ಇದ್ದ ಸಾಲುಗಳನ್ನು ನೋಡಿದೆ. ಅದೊಂದು ಅಭ್ಯಾಸ ನನಗೆ. ಎಟ್ ಲೀಸ್ಟ್ ಅವರ ಹಳೆಯ ಪುಸ್ತಕಗಳ ಹೊಸ ಮುಖಪುಟ ವಿನ್ಯಾಸಗಳನ್ನಾದರೂ ನೋಡಿ, ಹಾಗೇ ಆ ಪುಸ್ತಕಗಳನ್ನ ಮತ್ತೆ ಎಲ್ಲಿತ್ತೋ ಅಲ್ಲಿಡುತ್ತೇನೆ. ಮೊನ್ನೆ ಮಾತ್ರ ಅತ್ಯಂತ ಅಚ್ಚರಿ ಕಾದಿತ್ತು ನನಗೆ. ತೇಜಸ್ವಿಯವರ ಹೊಸ ಪುಸ್ತಕವೊಂದು ಬೆಚ್ಚಗೆ ಕುಳಿತಿತ್ತು ಅಲ್ಲಿ. ಹೌದು ಕಣ್ರೀ, ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಹೊಸ- ಹೊಚ್ಚ ಹೊಸ ಪುಸ್ತಕ! ಖುಷಿಯಿಂದ ಕಿರಿಚುವುದೊಂದು ಬಾಕಿ. ನನ್ನ ಯದ್ವಾ ತದ್ವಾ ಹಾವಭಾವದ ಕಣ್ಣು- ಮುಖಗಳನ್ನು ನೋಡಿ ಶ್ರೀಮತಿ ಕಂಬತ್ತಳ್ಳಿಯವರು , "ಇವತ್ತಷ್ಟೇ ಬಂತು ಈ ಪುಸ್ತಕ" ಅಂದರು.

"ಪಾಕಕ್ರಾಂತಿ ಮತ್ತು ಇತರ ಕಥೆಗಳು" ಅನ್ನುವುದು ಕಥಾ ಸಂಕಲನದ ಹೆಸರು. 1998 ರಿಂದ 2007ರ ವರೆಗೆ - ಲಂಕೇಶ್ ಪತ್ರಿಕೆಯಿಂದ ಹಿಡಿದು ವಿಕ್ರಾಂತ ಕರ್ನಾಟಕದವರೆಗೆ ಪ್ರಕಟವಾದ ಎಂಟು ಕಥೆಗಳಿವೆ ಇದರಲ್ಲಿ. ನಾನಂತೂ ದೇವರಾಣೆಯಾಗೂ ಒಂದೂ ಕಥೆಯನ್ನು ಈ ಮೊದಲು ಓದಿರಲಿಲ್ಲ. ತೇಜಸ್ವಿ ಈಗತಾನೇ ಕೂತು ಈ ಕಥೆಗಳನ್ನ ಬರೆದು ಮುಗಿಸಿ, ಪಬ್ಲಿಶ್ ಮಾಡಿಸಿದ್ದಾರೆ ಅನ್ನಿಸಿತು ನನಗಂತೂ. ಪುಸ್ತಕ ಪ್ರಕಾಶನಕ್ಕೆ ಸಾವ್ರ ಧನ್ಯವಾದ!

ಬೆನ್ನುಡಿಯಲ್ಲಿ ಹೇಳಿದ ಹಾಗೆ, " ಪೂರ್ಣಚಂದ್ರ ತೇಜಸ್ವಿಯವರು ನಮ್ಮ ತಲೆಮಾರಿನ ಒಂದು ಅದ್ಭುತ ಪ್ರತಿಭೆ ಹಾಗೂ ಪ್ರಕ್ರಿಯೆ. ಅವರ ಅನುಪಸ್ಥಿತಿಯಲ್ಲಿ ಅವರು ಸೃಷ್ಟಿಸಿರುವ ಲೋಕದ ಬಂಧಿಗಳು ನಾವು".

ನಾನಂತೂ ಇಲ್ಲಿನ ಕಥೆಗಳಲ್ಲಿ ಏನಿದೆ ಅಂತ ಒಂದು ಸಾಲೂ ಹೇಳುವುದಿಲ್ಲ. ತಗಂಡು ಓದಿ. ಅಂಕಿತಕ್ಕೋ, ಸಪ್ನಾಕ್ಕೋ ಹೋಗಿ, ಬೆಂಗಳೂರಿಗರು. ಮಂಗಳೂರಿಗರಿಗೆ ಅತ್ರಿ, ಮೈಸೂರಲ್ಲಿ ಗೀತಾ ಬುಕ್ ಹೌಸು..

ಪೋಸ್ಟ್ ಮುಖಾಂತರ:
ಪುಸ್ತಕ ಪ್ರಕಾಶನ,
ಬುಕ್ ಪೋಸ್ಟ್ ಸರ್ವೀಸ್,
ಪೋಸ್ಟ್ ಬಾಕ್ಸ್ ನಂ:58,
ಮೂಡಿಗೆರೆ-577132,
ಚಿಕ್ಕಮಗಳೂರು ಜಿಲ್ಲೆ,
ಫೋನು- 08263-228353,240202

ಹ್ಯಾಪಿ ರೀಡಿಂಗು!.

ಸೋಮವಾರ, ಏಪ್ರಿಲ್ 07, 2008

ಬೆಂಗಳೂರಿನ ಹೂಗಳು

ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.













ಎಲ್ಲರಿಗೂ ಯುಗಾದಿಯ ಶುಭಾಶಯಗಳು.

ಮಂಗಳವಾರ, ಮಾರ್ಚ್ 25, 2008

"ಷ".

ನಾನು ಆಗ ಒಂದನೇ ಕ್ಲಾಸ್ ನಲ್ಲಿದ್ದೆ. ಟೀಚರ್ರು ಎಲ್ಲರಿಗೂ ಕನ್ನಡದ ಒಂದೊಂದು ಅಕ್ಷರವನ್ನು ತೋರಿಸಿ ಅದನ್ನು ಗುರುತಿಸಲು ಹೇಳುತ್ತಿದ್ದರು. ನನ್ನ ಪಾಳಿ ಬಂತು. ಅವರು "ಷ" ಅಕ್ಷರವನ್ನು ತೋರಿಸಿ ಓದು ಅಂದರು. ನನಗೆ ಏನಾಯಿತು ಅಂತ ಗೊತ್ತಿಲ್ಲ, ಯಾಕೆ ಹಾಗಾಯಿತು ಅಂತಲೂ ಗೊತ್ತಿಲ್ಲ, ಏನು ಮಾಡಿದರೂ ಈ ಅಕ್ಷರವನ್ನು ಗುರುತಿಸಲೇ ಆಗಲಿಲ್ಲ. ನಾನು ಅವರನ್ನೂ , ಆ ಅಕ್ಷರವನ್ನೂ ನೋಡುತ್ತ ಸುಮ್ಮನೇ ನಿಂತುಬಿಟ್ಟೆ. ಟೀಚರ್ ನನ್ನ ಕನ್ನಡ ಪುಸ್ತಕದ, "ಷ" ಅಕ್ಷರದ ಎದುರಿಗೆ ಕೆಂಪು ಶಾಯಿಯಲ್ಲಿ ತಪ್ಪು ಮಾರ್ಕ್ ಹಾಕಿದರು. ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು. ಆಮೇಲೆ ಬಹುಕಾಲ ನನ್ನನ್ನು ಆ ಟೀಚರ್ರು "ಕನ್ನಡ ಮಾಸ್ಟ್ರ ಮಗನಾಗಿ ಕನ್ನಡ ಅಕ್ಷರನೇ ಓದೋಕೆ ಬರೋದಿಲ್ಲ ನಿಂಗೆ" ಅಂತ ಹೀಯಾಳಿಸುತ್ತಲೇ ಇದ್ದರು. ಇವತ್ತಿಗೂ ಆ ಕೆಂಪು ಶಾಯಿಯ ತಪ್ಪು ಗುರುತು, ನನ್ನ ಕಣ್ಣೆದುರಿಗೇ ಇದೆ.


******

ನಾನು ಐದನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಶಿಕ್ಷಕರ ದಿನಾಚರಣೆಯ ದಿನ ಇಷ್ಟವಿದ್ದವರು ಭಾಷಣ ಮಾಡಬಹುದು ಅಂತ ನಮ್ಮ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ಹೇಳಿದ್ದರು. ನಾನು ಮನೆಗೆ ಹೋಗಿ ಅಪ್ಪನಿಗೆ ಹೇಳಿದೆ ಮತ್ತು ಅವರು ಆಗಿನ ನನ್ನ ಲೆವೆಲ್ಲಿಗೆ ತಕ್ಕ ಹಾಗೆ, "ಗುರು ಬ್ರಹ್ಮಾ, ಗುರೂರ್ ವಿಷ್ಣು.. ಇತ್ಯಾದಿಯಿಂದ ಶುರುವಾಗುವ ಭಾಷಣವೊಂದನ್ನು ತಯಾರು ಮಾಡಿಕೊಟ್ಟಿದ್ದರು. ನಾನೂ ಬಾಯಿಪಾಠ ಮಾಡಿಕೊಂಡು ತಯಾರಾದೆ. ಶಿಕ್ಷಕರ ದಿನಾಚರಣೆಯ ಬೆಳಿಗ್ಗೆ ಫಂಕ್ಷನ್ನು ಶುರುವಾಗುವ ಕೊಂಚ ಮುನ್ನ ಹೆಡ್ ಸಿಸ್ಟರ್ ಬಳಿಗೆ ಹೋಗಿ ನಾನೂ ಭಾಷಣ ಬರೆದುಕೊಂಡು ಬಂದಿದ್ದೇನೆ, ಅಂದೆ. ನನ್ನ ಎದುರಿಗೆ ಒಂದು ಸಲ ಓದಬೇಕಿತ್ತಲ್ಲಾ... ಈಗ ಟೈಮಿಲ್ಲ, ಸರಿಯಾಗಿ ಬಾಯ್ಪಾಠ ಮಾಡಿದೀಯಲ್ಲ ? ಅಂತ ಕೇಳಿದ್ರು. ಹುಂ ಅಂದೆ. ನನ್ನ ಗ್ರಾಚಾರಕ್ಕೆ ಸ್ಟೇಜಿನ ಮೇಲೆ ಯಾಕೋ ಒಂದೆರಡು ಸಾಲು ಮರೆತು ಹೋಗಿ ಬೆಬ್ಬೆಬ್ಬೆ ಆಯ್ತು. ಹೆಡ್ ಸಿಸ್ಟರ್ ಪ್ರೋಗ್ರಾಮು ಮುಗಿದು ಹೋದ ಮೇಲೆ ತಮ್ಮ ಚೇಂಬರಿಗೆ ಕರೆದು, ಉಗಿದು ಉಪ್ಪಿನಕಾಯಿ ಹಾಕಿದ್ರು. ಅವರ ದೊಡ್ಡ ನಾಗರ ಬೆತ್ತ ತೆಗೆದು ಎರಡು ಹೊಡೆದರು. ಆಮೇಲೆ ಮತ್ತೆ ಯಾವತ್ತೂ ನಾನು ಭಾಷಣ ಮಾಡಲಿಲ್ಲ, ಹೈಸ್ಕೂಲು ಮುಗಿಯುವವರೆಗೆ. ಆಮೇಲೆ ಸ್ಟೇಜು ಹತ್ತಿದರೂ ಕೈ ಕಾಲು ನಡುಗುತ್ತಿತ್ತು ಸ್ವಲ್ಪ ದಿನ.

*****


ಮೊನ್ನೆ ನನ್ನ ಚಿಕ್ಕಮ್ಮ ಮನೆಗೆ ಬಂದಿದ್ದರು, ಅವರಿಗೊಬ್ಬ ಪುಟ್ಟ ಮಗಳು, ೪ ವರ್ಷದವಳು. ಅವಳು ಚೆನ್ನಾಗಿ ಸಿನಿಮಾ ಹಾಡೆಲ್ಲ ನೆನಪಿಟ್ಟುಕೊಂಡು ಹಾಡುತ್ತಾಳೆ ಅಂತಿದ್ದರು ಅವರು. ಇಲ್ಲ ಚಿಕ್ಕಮ್ಮಾ, ನಾಡಿದ್ದು ಶಾಲೆಗೆ ಸೇರಿದ ಮೇಲೆ ನಿನ್ನ ಮಗಳು ಹಾಡುವ ಉಲ್ಲಾಸದ ಹೂಮಳೇ.. ವರ್ಕೌಟ್ ಆಗುವುದಿಲ್ಲ, ಬೇರೇನಾದರೂ ಬೇಕಾಗುತ್ತದೆ ಅಂದೆ. ಆವಾಗ ಇದೆಲ್ಲ ನೆನಪಾಯಿತು.


ಭಾನುವಾರ, ಮಾರ್ಚ್ 09, 2008

ಬನ್ನಿ, ಭೇಟಿಯಾಗೋಣ.

ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.

ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ.

ಗುರುವಾರ, ಫೆಬ್ರವರಿ 28, 2008

ದೇಗುಲದ ಪ್ರೇಮಿಗಳು..

ದೇಗುಲದ ಗೋಪುರದ ಪಾರಿವಾಳದ ಜೋಡಿ

ನೋಡುತಿದ್ದವು ಹೀಗೇ, ಜನರ ಸಾಲು

ಅಂದು ಮಂಗಳದ ದಿನ, ಭಕ್ತ ಸಾಗರವಲ್ಲಿ

ಸಾಲು ಹೂಗಳ ದಂಡೆ, ಮತ್ತೆ ಪಂಚೆ ಶಾಲು.


ಎಲ್ಲ ದಿನವೂ ಹೀಗೆ, ಅದದೇ ಭಕ್ತರ ಚಕ್ರ

ಎಂಥ ಹಬ್ಬಕು ಕೂಡ ಬಂದೆ ಬಹರು.

ಗಂಡು ಪಕ್ಷಿಯು ಮೆಲ್ಲನಾಕಳಿಸಿ ನುಡಿಯಿತು

ನೋಡಿದವರನೆ ನೋಡಿ ಬಹಳ ಬೇಜಾರು


ಹೆಣ್ಣು ಹಕ್ಕಿಯ ದೃಷ್ಟಿ ಬೇರೆಲ್ಲೊ ಇದ್ದಿತ್ತು-

ಹಾಗಿಲ್ಲ ಈ ದಿನವು, ಚಂದ್ರಶಾಲೆಯ ನೋಡು

ನವ ಜೋಡಿ ಕೂತಿಹುದು ಕಂಬಸಾಲಿನ ಮಧ್ಯ

ಹುಡುಗ ಬಲುತುಂಟ, ಆಕೆ ಭಯದ ಗೂಡು.


ಗಂಡುಪಕ್ಕಿಯು ಕೂಡ ಮೆಲ್ಲ ನೋಡಿತು ಅವರ

ಬಲು ಚೆಲುವ ಜೋಡಿಯದು, ಮಾತೇ ಇಲ್ಲ!

ಕೇಸರಿಯ ಸೀರೆಯಲಿ ಅಡಗಿಹಳು ಆ ಹುಡುಗಿ

ಅವಳನೇ ನೋಡುತಲಿ, ಮೈಮರೆತಿಹನು ನಲ್ಲ.


ಆಕೆಗೋ ನಾಚಿಕೆಯು, ತಲೆಯನೆತ್ತುವುದಿಲ್ಲ

ಇವನ ಕೈ ಬಳಸಿಹುದು ಅವಳ ಹೆಗಲು

ಪಿಸುಮಾತನಾಡುವರು, ಅತ್ತಿತ್ತ ನೋಡುವರು

ಕಣ್ಣಪಾಪೆಗಳಲ್ಲಿ ಸಣ್ಣ ದಿಗಿಲು.


"ಹೊಸ ಜೋಡಿಯಿರಬೇಕು, ಹೆದರಿಕೆಯು ಸಹಜ

ಸರಿಯಾಗುವುದು ಎಲ್ಲ, ದಿನವು ಕಳೆದಂತೆ"

ಹೆಣ್ಣುಪಕ್ಷಿಯ ನುಡಿಗೆ ಹೌದೆಂತು ಗಂಡು,

ಧೈರ್ಯ ಬರುವುದು ನೋಡು, ಪ್ರೀತಿ ಬೆಳೆದಂತೆ.


ನೋಡುತಿರುವಂತೆ ಇವು, ಮೆಲ್ಲನೆದ್ದರು ಅವರು

ಸೇರಿಕೊಂಡರು ಮೆಲ್ಲ, ಪ್ರದಕ್ಷಿಣೆಯ ಸಾಲು

ಕೈಕೈಯು ಬೆಸೆದಿತ್ತು, ಎಂದೂ ಜೊತೆಗಿದ್ದಂತೆ

ಮೈಮೇಲೆ ಚೆಲ್ಲಿತ್ತು, ಬಿಸಿಲ ಕೋಲು.


ದೇವರಲದೇನು ಕೇಳಿದರೋ, ಗೊತ್ತಾಗಲಿಲ್ಲ

ಅವನಿಗದು ಕೇಳಿಸಿತೋ, ತಿಳಿಯಲಿಲ್ಲ.

ಇವರ ಮೊಗದೊಳು ತುಂಬು ನೆಮ್ಮದಿಯ ಕಳೆಯಿತ್ತು

ಅಷ್ಟಿದ್ದರದೇ ಸಾಕು, ಬೇರೆ ಬೇಕಿಲ್ಲ.


ಜನರ ಜಂಗುಳಿ ದಾಟಿ ಹೊರಗೆ ಹೊರಟರು ಅವರು

ತಲೆಯೆತ್ತಿ ನಡೆಯುತ್ತ, ಜಗವ ಗೆದ್ದಂತೆ

ಗೋಪುರದ ಜೋಡಿಗಳು ಹಾರೈಸಿದವು ಅವರ

ಪ್ರೀತಿಝರಿಯಾ ಒರತೆ ಬತ್ತದಂತೆ.

ಟಿಪ್ಪಣಿ:

ಈ ಕವನ ಬರೆದಿದ್ದು ವಾರದ ಹಿಂದೆ. ಯಾವತ್ತೋ ತಲೆಯೊಳಗೆ ಕೂತಿದ್ದ ವಿಷಯವನ್ನು ಹಾಳೆಗಿಳಿಸಿದ್ದೆ. ಆಮೇಲೆ ಅರುಣನಿಗೆ ಓದಿ ಹೇಳಿ, ಮತ್ತಾವುದೋ ಕಾರಣಕ್ಕೆ ಬೇಕಿರುವುದರಿಂದ ಬ್ಲಾಗಿಗೆ ಹಾಕುವುದಿಲ್ಲ ಅಂತ ಅಂದುಕೊಂಡಿದ್ದೆ. ಸುಶ್ರುತ ತಾನೂ ಕವನ ಬರಿಯೋ ಪ್ರಯತ್ನ ಮಾಡ್ತಾ ಇದೀನಿ ಅಂತ ನಿನ್ನೆ ಹೇಳುತ್ತಿದ್ದ. ಇವತ್ತು ಈ ಪುಣ್ಯಾತ್ಮ ಬರೆದ ಕವನ ಓದುತ್ತಿದ್ದರೆ, ನಾನು ಬರೆದ ಈ ಕವನ ಮತ್ತು ಅವನ ಕವನ - ಎಲ್ಲೋ ಹುಟ್ಟುತ್ತಲೇ ಬೇರೆಯಾದ ಮಕ್ಕಳ ಹಾಗೆ ಕಂಡವು! ನಮ್ಮಿಬ್ಬರ ಕವನಗಳೂ ಒಂದು ಮತ್ತೊಂದರ ಮುಂದರಿಕೆಯಂತೆಯೋ ಅಥವಾ ಎರಡನ್ನೂ ಮಧ್ಯದಲ್ಲೆಲ್ಲೋ ಸೇರಿಸಿಕೊಂಡು ಓದಬಹುದಾದಂತೆ ಕಾಣಬಹುದು. ನನಗಂತೂ ಇದು ದೊಡ್ಡ ಅಚ್ಚರಿ!

ಮಂಗಳವಾರ, ಫೆಬ್ರವರಿ 26, 2008

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

ಶನಿವಾರ, ಫೆಬ್ರವರಿ 16, 2008

ಜಂಗಮ ಬಿಂಬಗಳು -೩

ಅವನು ಬೈಕಿನ ಹಿಂದೆ ಬರೆದುಕೊಂಡಿದ್ದ - "ಐ ಡೋಂಟ್ ಕೇರ್"ಅಂತ. ಒಂದು ದಿನ ಬ್ಯಾಂಕಿನವರು ಬಂದು ಬೈಕು ಎತ್ತಿಕೊಂಡು ಹೋದರು. ಮೂರು ನಾಲ್ಕು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲವಂತೆ.

****

ಆತನಿಗೆ ಕೆಲದಿನಗಳ ಕಾಲ ಮುಖವಾಡ ಧರಿಸಿ ಬದುಕಬೇಕು ಅನ್ನುವ ಆಸೆಯಾಯಿತು. ಧರಿಸಿದ. ಎಷ್ಟೋ ದಿನಗಳ ನಂತರ ಮುಖವಾಡ ತೆಗೆಯಬೇಕನಿಸಿತು. ತೆಗೆದ. ಮುಖವಾಡದ ಜೊತೆಗೆ ಮುಖವೂ ಕಿತ್ತು ಬಂತು.

****

ಗುರುವಾರ, ಫೆಬ್ರವರಿ 14, 2008

ಅರ್ಧ ಕವಿತೆಗಳು

ಕಡಲು ಜಗದ ದೊಡ್ಡ ಪ್ರೇಮಿ
ನಿತ್ಯ ಮಿಲನ ಅದಕೆ.
ನದಿಗಳಿಹುದು ಲಕ್ಷ ಲಕ್ಷ
ತೀರದದರ ಬಯಕೆ.
****
ನಟ್ಟಿರುಳ ದಾರಿಯಲಿ ನಡೆಯುತ್ತಿದ್ದರು ಅವರು
ದೂರ ತಿರುವಿನಲೆಲ್ಲೋ ಕಂಡಿತ್ತು ಸೊಡರು.
ಬೆಳಕ ನೋಡಿದ್ದೇ ತಡ, ಕೈ ಬೆಸುಗೆ ಬಿಗಿಯಿತು
ಹೆಜ್ಜೆಗಳ ಪಥ ಮೆಲ್ಲ ಹಿಂದಕ್ಕೆ ತಿರುಗಿತು
****
ಕೆರೆಯ ಕಟ್ಟೆಯ ಮೇಲೆ ಅವಳು ನಡೆದಿದ್ದಳು.
ಮಿಂದೊದ್ದೆ ಪಾದಗಳ ಅಲ್ಲೆ ಊರಿದ್ದಳು.
ಹೂವು ತಂದಿದ್ದನವ ದೇವರಾ ಪೂಜೆಗೆ.
ಚೆಲ್ಲಿ ಹೋದವು ಎಲ್ಲ, ಒದ್ದೆ ಪಾದಗಳ ಜಾಡಿಗೆ
****

ಗುರುವಾರ, ಫೆಬ್ರವರಿ 07, 2008

ಚಿತ್ರ ಚಾಪ - ಬರಹದ ದಾರಿಯ ಮೇಲಿನ ಕಾಮನಬಿಲ್ಲು.

ನನಗೆ ಬರೆಯುವ "ಹುಚ್ಚು" ಆರಂಭವಾಗಿದ್ದು ನಾನು ಬಿ.ಎ ಓದುತ್ತಿದ್ದ ಕಾಲದಲ್ಲಿ. ಕವನ, ಕಥೆಯಂತದ್ದನ್ನು ಬರೆಯಲು ಆರಂಭಿಸಿದ್ದೆ ಆವಾಗ. ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು ಗೀಚುವುದು, ಸಿಕ್ಕಲ್ಲಿ ಎಸೆಯುವುದು ಮಾಮೂಲಾಗಿತ್ತು. ಇನ್ನು ನನಗೇ ತೀರಾ ಇಷ್ಟ ಅನ್ನಿಸಿದ್ದನ್ನು ಎಲ್ಲಾದರೂ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅಪ್ಪ ಒಂದಷ್ಟು ದಿನ "ಪುಣ್ಯಾತ್ಮಾ, ಬರೆದಿದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸೋ" ಅಂತ ಹೇಳೀ ಹೇಳೀ ಸೋತು ಹೋದರು.ನಾನು ನನ್ನ ಪಾಡಿಗೆ ಗೀಚಿ ಎಲ್ಲಾದರೂ ಹಾಕುವುದನ್ನು ಹಾಯಾಗಿ ಮುಂದುವರೆಸಿದ್ದೆ. ಅಮ್ಮ ಮನೆ ಗುಡಿಸುವಾಗ ನಾನು ಬರೆದು ಬಿಸಾಕಿದ ಹಾಳೆಗಳನ್ನು ತಂದು ನನ್ನ ಮುಂದಿಡುತ್ತಿದ್ದರು. ಅವರಿಗೂ ಭ್ರಮನಿರಸನವಾಗಿ, ನನ್ನ ಬರಹವನ್ನು "ಸೂಟ್ ಕೇಸ್ ಸಾಹಿತ್ಯ" ಅಂತ ನಾಮಕರಣ ಮಾಡಿದರು.

ಆಮೇಲೆ ಬೆಂಗಳೂರಿಗೆ ಬಂದು ಬ್ಲಾಗೂ ಅದೂ ಇದೂ ಅಂತ ಶುರು ಮಾಡಿಕೊಂಡು ಬರೆದದ್ದು ಉಳಿಯತೊಡಗಿತು. ತಂಗಿ ಮನೆಯಿಂದ ಆವಾಗಾವಾಗ ಫೋನ್ ಮಾಡಿ, "ಅಣ್ಣಾ, ನೀ ಬರ್ದ್ ಕವ್ನ ಸಿಕ್ಕಿದ್ದು, ಅರ್ಧ ಬರ್ದಿಟ್ಟ ಕಥೆ ಸಿಕ್ಕಿದ್ದು" ಅಂತ ಅವ್ಳು ಬೆಂಗಳೂರಿಗೆ ಬರೋವರೆಗೂ ಹೇಳುತ್ತಿದ್ದಳು. ಈ ಬರವಣಿಗೆ ಎಲ್ಲಿಗೆ ಹೋಗುತ್ತದೆ ಅನ್ನುವುದು ನಂಗೂ ಗೊತ್ತಿರಲಿಲ್ಲ.

ಇಂಟರ್ನೆಟ್ಟಿನಲ್ಲಿ ಜೀಮೇಲೂ,ಆರ್ಕುಟ್ಟು ಅಂತೆಲ್ಲ ಬಂದು, ನನ್ನ ಹಾಗಿದ್ದೇ ಇನ್ನೊಂದಿಷ್ಟು ಜನ ಹುಚ್ಚರ ಪರಿಚಯ ಆಯಿತು. ಚಾರಣ, ಹರಟೆ ಹೆಚ್ಚಿತು. ಯಾವುದೋ ಒಂದು ಭಯಂಕರ ಘಳಿಗೆಯಲ್ಲಿ ನಾವೊಂದಿಷ್ಟುಜನ ಸೇರಿ ಪುಸ್ತಕ ಯಾಕೆ ಬರೀಬಾರದು ಅನ್ನುವ ಆಲೋಚನೆ ಬಂತು. ತಿಂಗಳಾನುಗಟ್ಟಲೇ ತಪಸ್ಸಿನ ನಂತರ ನಾವು ಕಂಡ ಕನಸು ನನಸಾಗೋ ಸಮಯವೂ ಹತ್ತಿರ ಬರ್ತಿದೆ ಈಗ.

ನಾಡಿದ್ದು ಭಾನುವಾರ ಬೆಳಿಗ್ಗೆ, ನಾನು, ಅರುಣ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ್ ಸೇರಿ ಬರೆದಿರುವ "ಚಿತ್ರ ಚಾಪ" ಪುಸ್ತಕದ ಬಿಡುಗಡೆ. ಪರಿಸರ ನಮ್ಮ ಪುಸ್ತಕದ ವಿಷಯ. ನಮ್ಮ ಕಣ್ಣಿಗೆ ಹೇಗೆ ಪ್ರಕೃತಿ ಕಂಡಿದೆಯೋ , ಹಾಗೆ ಬರೆದಿದ್ದೇವೆ. ಲಲಿತ ಪ್ರಬಂಧ, ಅನುಭವ ಕಥನ, ಚಾರಣದ ಟ್ರಾವೆಲಾಗು, ಕವನಗಳು - ಹೀಗೆ ಏನೇನೋ ಇವೆ, ಪರಿಸರದ ಬಗೆಗೆ.





ಬೆಂಗಳೂರಿನ ಬಸವನಗುಡಿಯ ಬಿ.ಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ, ನಮ್ಮ ಕನಸು "ಚಿತ್ರಚಾಪ" ನನಸಾಗ್ತಿದೆ. ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ, ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಪುಸ್ತಕ ಬಿಡುಗಡೆ ಮಾಡಿ ನಮ್ಮ ಬೆನ್ನು ತಟ್ಟುತ್ತಾರೆ. ನಮ್ಮ ಪುಸ್ತಕಕ್ಕೆ ಬೆಳಕಾಗಿರುವುದು "ಪ್ರಣತಿ ಪ್ರಕಾಶನ ". ಪ್ರಣತಿಯ ಉದ್ಘಾಟನೆಯೂ ಅಂದೇ.

ಫೆಬ್ರವರಿ ೧೦ ನೇ ತಾರೀಕು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನೀವೆಲ್ಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುತ್ತೀರಿ ಅನ್ನುವುದು ನಮ್ಮ ವಿಶ್ವಾಸ. ಬ್ಲಾಗುಗಳಲ್ಲೇ ಮಾತನಾಡುವುದು ಹೇಗೂ ಇದೆ. ಎಲ್ರೂ ಬನ್ನಿ , ಕೂತು ಮಾತಾಡೋಣ. ನಂಗೆ ಮತ್ತೇನು ಹೇಳಬೇಕು ಅಂತ ತೋಚುತ್ತಿಲ್ಲ.

ಮಂಗಳವಾರ, ಫೆಬ್ರವರಿ 05, 2008

ಜಂಗಮ ಬಿಂಬಗಳು - ೨

ಟ್ರಾಫಿಕ್ ಜಾಮ್ ಆಗಿತ್ತು. ನನ್ನ ಬೈಕಿನ ಪಕ್ಕದ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಹುಡುಗನೊಬ್ಬ ಕೂತಿದ್ದ, ಸುಮ್ಮನೆ. ಐದು ಹತ್ತು ನಿಮಿಷ ಕಳೆಯಿತು ಹಾಗೇ. ನಾನು ನೋಡುತ್ತಿದ್ದ ಹಾಗೆಯೇ ಆ ಹುಡುಗ ಬ್ಯಾಗಿಂದ ಮೆಲ್ಲನೆ ನೋಟ್ ಬುಕ್ ತೆಗೆದ. ಅರೇ, ಇಲ್ಲೇ ಹೋಮ್ ವರ್ಕ್ ಮಾಡುತ್ತಾನಾ? ಅಂತ ಅಂದುಕೊಂಡೆ. ಆದರೆ ಅವನು ನೋಟ್ ಬುಕ್ಕಿಂದ ಹಾಳೆ ಹರಿದ. ಅಡ್ಡ ಉದ್ದ ಮಡಚಿ ರಾಕೆಟ್ ಮಾಡಿದ. ಕಿಟಕಿ ಮೆಲ್ಲನೆ ಇಳಿಸಿ, ಬೀಸಿ ಒಗೆದ. ಅದು ಎಷ್ಟು ದೂರ ಹಾರಿತು ಅನ್ನುವುದು ನನಗೆ ಮುಖ್ಯವಾಗಲಿಲ್ಲ.
**********
ನಾನು ಆಕೆಯನ್ನು ಮೊದಲು ನೋಡಿದ್ದು ಆ ಜಾಗದಲ್ಲಿ. ತುಂಬ ಬೇಸರದಲ್ಲಿದ್ದೆ ಮೊನ್ನೆ. ಬೈಕು ಅವಳನ್ನು ನೋಡಿದಲ್ಲೇ ಹಾದು ಹೋಗುತ್ತಿತ್ತು. ಅತ್ತ ತಿರುಗಿದರೆ, ಅವಳು ಕಂಡಳು.
**********
ಹೊಸದರಲ್ಲಿ ಟ್ರಾಫಿಕ್ ಸಿಗ್ನಲ್ ಹಸಿರಾದರೆ ಸಾಕು, ನುಗ್ಗಬೇಕು ಅನ್ನಿಸುತ್ತಿತ್ತು. ಈಗೀಗ ಅದು ಕೆಂಪಾಗಿಯೇ ಇರಲಿ ಅನ್ನಿಸುತ್ತದೆ.

ಶುಕ್ರವಾರ, ಫೆಬ್ರವರಿ 01, 2008

ಒಂದು ಬೆಳಕಿನ ಕಥೆ.

ನಡೆದ ಘಟನೆಯೊಂದರ ಬರಹ ರೂಪ...

ಐದಾರು ಜನ ಗೆಳೆಯರು, ಭದ್ರಾವತಿಗೆ ಹೋಗಿದ್ದರು. ಸ್ನೇಹಿತನೊಬ್ಬನ ಮದುವೆಯ ಸಲುವಾಗಿ. ವಾಪಾಸು ಬರುತ್ತಾ ಬೆಂಗಳೂರಿಗೆ ರೈಲು ಪ್ರಯಾಣ. ಬೀರೂರು ಜಂಕ್ಷನಿನಲ್ಲಿ ಯಾವುದೂ ವೇಗದೂತಕ್ಕೆ ದಾರಿ ಬಿಟ್ಟುಕೊಡುವ ಸಲುವಾಗಿ ಇವರಿದ್ದ ರೈಲು ನಿಂತಿತು. ಐದತ್ತು ನಿಮಿಷಗಳಾದರೂ ರೈಲು ಬರದ್ದನ್ನು ಕಂಡು ಇವರ ಠೋಳಿ ಮೆಲ್ಲನೆ ಕೆಳಗಿಳಿಯಿತು. ಸ್ವಲ್ಪ ಹೊತ್ತು ಅತ್ತಿತ್ತ ತಿರುಗಾಡಿಯಾಯಿತು. ಏನು ಮಾಡಲೂ ತೋಚುತ್ತಿರಲಿಲ್ಲ. ಅಷ್ಟರಲ್ಲಿ ಗುಂಪಿನಲ್ಲಿನ ಒಬ್ಬಾತನಿಗೆ ಪ್ಲಾಟ್ ಫಾರಂನ ಕೊನೆಯಲ್ಲಿ, ಸ್ವಲ್ಪ ದೂರದಲ್ಲಿ ನೇರಳೆ ಮರವೊಂದು ಕಂಡಿತು. ಮರು ಮಾತಿಲ್ಲದೇ ಎಲ್ಲರೂ ಅತ್ತ ಹೊರಟರು.

ಆ ಮರ ರೈಲ್ವೇ ಸ್ಟೇಶನ್ನಿಗೆ ಒತ್ತಿಕೊಂಡಂತ್ತಿದ್ದ ಮನೆಯೊಂದರ ಬೇಲಿಯೊಳಗಿತ್ತು. ಆ ಮನೆಯೆದುರೇ ಹದಿನೈದು - ಹದಿನಾರರ ವಯಸ್ಸಿನ ಹುಡುಗಿಯೊಬ್ಬಳು ಹರಕು ಟೇಬಲೊಂದರ ಮೇಲೆ, ಗಾಜಿನ ಡಬ್ಬವೊಂದರಲ್ಲಿ ನೇರಳೆ ಹಣ್ಣುಗಳನ್ನು ಇಟ್ಟುಕೊಂಡು ಕೂತಿದ್ದಳು. ಪಕ್ಕದಲ್ಲೊಂದು ಅಳೆಯುವ ಪುಟ್ಟ ಡಬ್ಬ. ಇವರು ಹೋಗಿ ನೇರಳೆ ಹಣ್ಣು ಬೇಕು ಅಂದಿದ್ದೇ, ಡಬ್ಬದಲ್ಲಿದ್ದ ಹಣ್ಣುಗಳನ್ನು ಅಳೆದು ಕೊಡಲು ರೆಡಿಯಾದಳು. ಆದರೆ ಈ ಪಟಾಲಂಗೋ, ಬಾಟಲಿಯ ಬಾಡಿದ ಹಣ್ಣುಗಳಿಗಿಂತ ಮರದಲ್ಲಿ ಜೋತಾಡುತ್ತಿರುವ ರಸಭರಿತ ಹಣ್ಣುಗಳ ಮೇಲೆಯೇ ಕಣ್ಣು. ಮರ ಹತ್ತಿಕೊಂಡು ಕೊಯ್ದುಕೊಳ್ಳುತ್ತೇವೆ ಅಂದಿದ್ದಕ್ಕ ಆಕೆ, ಇಲ್ಲ, "ಅಪ್ಪ ಅಮ್ಮ ಬೈತಾರೆ, ಎಷ್ಟು ಬೇಕಿದ್ದರೂ ಇಲ್ಲಿಯೇ ಕೊಂಡುಕೊಳ್ಳಿ, ನಿಮ್ಮ ದಮ್ಮಯ್ಯ, ಮರ ಹತ್ತಿ ಹಾಳು ಮಾಡಬೇಡಿ" ಅಂತ ಬೇಡಿಕೊಂಡಳು.

ಅವರಲ್ಲೊಬ್ಬ ಆಕೆಯನ್ನು ಮೆಲ್ಲನೆ ಸಮಾಧಾನಿಸತೊಡಗಿದ. "ನೋಡು, ಏನೂ ಚಿಂತಿಸಬೇಡ, ನಿಂಗೆ ತೊಂದರೆ ಕೊಡಲ್ಲ, ನಾವು ಹಣ್ಣು ಕೊಯ್ದುಕೊಂಡರೆ ಅದಕ್ಕೆ ದುಡ್ಡು ಕೊಡುತ್ತೇವೆ,ಮೋಸ ಮಾಡುವುದಿಲ್ಲ".. ಆಕೆ "ಅಲ್ಲ.. ಅಲ್ಲ.. "ಅನ್ನುವಷ್ಟರಲ್ಲಿ ಒಂದಿಬ್ಬರು ಬೇಲಿ ಹಾರಿ ಮರ ಹತ್ತಿಯಾಗಿತ್ತು. ಇಷ್ಟೊಂದು ಜನರ ಮುಂದೆ ಆಕೆ ಏನು ಮಾಡಲು ಸಾಧ್ಯ?, ಅಳುಮೋರೆ ಹಾಕಿಕೊಂಡು ಮರವನ್ನೇ ನೋಡುತ್ತ ನಿಂತಳು.

ಅಷ್ಟು ಹೊತ್ತಿಗೆ ಮತ್ತೊಬ್ಬ ಆಕೆಯನ್ನು ಮಾತಿಗೆಳೆದ. ಶಾಲೆಗೆ ಹೋಗುತ್ತೀಯಾ, ಏನು ಓದುತ್ತಿದ್ದೀ, ಯಾಕೆ ಈ ಹಣ್ಣುಮಾರುವ ಕೆಲಸ ಇತ್ಯಾದಿ ಇತ್ಯಾದಿ. ಆಕೆ ಒಂದು ಕಣ್ಣನ್ನ ಮರದತ್ತಲೇ ಇರಿಸಿ ಉತ್ತರಿಸುತ್ತಿದ್ದಳು. ನಾನು ಫಸ್ಟ್ ಪೀಯುಸಿ ಮುಗಿಸಿದ್ದೇನೆ, ಈ ಸಲ ಸೆಕೆಂಡ್ ಪೀಯುಸಿ, ಫೀಸ್ ಕಟ್ಟೋಕೆ ಮೂರುವರೆ ಸಾವಿರ ಬೇಕು, ಹಾಗಾಗಿ ಈ ಕೆಲ್ಸ. . ಎಷ್ಟು ದುಡ್ ಆಗತ್ತಮ್ಮಾ ನಿಂಗೆ ಇದ್ನ ಮಾರೋದ್ರಿಂದ ಅಂತ ಕೇಳಿದ್ದಕ್ಕೆ ಏನೋ ನೂರೋ ಇನ್ನೂರೋ ಆಗಿದೆ, ಆದಷ್ಟು ಆಗ್ಲಿ ಅಂತ ಮಾಡ್ತಾ ಇದೀನಿ ಅಂದ್ಲು ಅವಳು.

ಸ್ವಲ್ಪ ಹೊತ್ತಿಗೆ ಬೇಕಷ್ಟು ಹಣ್ಣುಗಳನ್ನು ತಿಂದು ಕೈ ಬಾಯಿ ನೇರಳೆ ಮಾಡಿಕೊಂಡ ಗೆಳೆಯರು ಅವಳ ಬಳಿ ಬಂದರು. ಮರ ಅರ್ಧ ಖಾಲಿಯಾಗಿತ್ತು. ದುಡ್ದೆಷ್ಟು ಕೊಡಬೇಕಮ್ಮಾ ಅಂದ ಒಬ್ಬ. ಇವಳಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಮರವೋ ಅರ್ಧ ಖಾಲಿ. "ನೋಡಿ ಸಾರ್. . ನೀವೇ ಕೊಡಿ" ಅಂದಳು ಅವಳು, ಬೇರೇನೂ ತೋಚದೆ!

ಅವಳು ಅವರನ್ನು ನೋಡುತ್ತಿದ್ದ ಹಾಗೆ ಅವರಲ್ಲೊಬ್ಬ ಪಟಪಟನೆ ದುಡ್ಡು ಕಲೆಕ್ಟ್ ಮಾಡಿದ. ಆಕೆಯ ಬಳಿ ಬಂದು ಆ ದುಡ್ಡನ್ನ ಕೈಗಿಟ್ಟ. ನೂರರ ನೋಟುಗಳು. ಮೂರುವರೆ ಸಾವಿರ ರೂಪಾಯಿಗಳು. "ತಗೋ,ನಿನ್ನ ಫೀಸಿಗೆ ".

ಅವಳು ಅಕ್ಷರಶಃ ದಿಗ್ಭ್ರಾಂತಳಾಗಿದ್ದಳು. ಮಾತು ನಿಂತೇ ಹೋದಂತಾಗಿತ್ತು. ಅವಳಿಗೆ ಏನನ್ನೂ ಮಾತನಾಡಲು ಬಿಡದ ಇವರುಗಳು "ಇಟ್ಕೋ , ಚೆನ್ನಾಗಿ ಓದು, ಸುಮ್ಮನೇ ಈ ಬಿಸಿಲಲ್ಲಿ ಕೂತು ನೇರಳೇ ಹಣ್ಣು ಮಾರುವ ಕೆಲಸ ಬೇಡ" ಅಂದರು. ಆಕೆ ಏನೋ ಹೇಳಲು ಬಾಯೆತ್ತುವ ಹೊತ್ತಿಗೆ ಜೋರು ಸದ್ದು ಮಾಡುತ್ತಾ ರೈಲು ಹಾದು ಹೋಯಿತು.

ಎಲ್ಲರೂ ಲಗುಬಗೆಯಲ್ಲಿ ತಮ್ಮ ರೈಲಿನತ್ತ ಹೊರಟರು. ಆಕೆ ರೈಲು ಹೋಗುವವರೆಗೂ ಅಲ್ಲಿನ ಕಂಬವೊಂದಕ್ಕೆ ಒರಗಿ ನಿಂತು ಇವರನ್ನೇ ನೋಡುತ್ತ ನಿಂತಿದ್ದಳು, ಎತ್ತಿದ ಕೈ ಮತ್ತು ತುಂಬಿದ ಕಣ್ಣಿನೊಂದಿಗೆ.

ಬುಧವಾರ, ಜನವರಿ 23, 2008

ಜಂಗಮ ಬಿಂಬಗಳು - ೧

ಅದು ಅವರಿಬ್ಬರ ಕೊನೆಯ ಭೇಟಿ. ಇಬ್ಬರೂ ಕೂತು ಮಾತಾಡಿದರು. ಕಣ್ಣು ತುಂಬಿಕೊಂಡರು. ಪರಸ್ಪರ ಬೇರೆಯಾಗಿ ಹೊರಟರು. ಮರುದಿನ ಬೆಳಿಗ್ಗೆ , ಆಕೆ ಅವನಿಗೆ ಮತ್ತೆ ಸಿಕ್ಕಳು.
******
ಅವನಿಗೆ ಕನಸುಗಳು ಬೀಳುತ್ತಿಲ್ಲ ಅಂತ ಚಿಂತೆ. ನಿತ್ಯವೂ ಅದನ್ನೇ ಯೋಚಿಸುತ್ತ ಕೂರುತ್ತಿದ್ದ. ಕಣ್ಣೆದುರಿದ್ದ ನನಸೂ ಕಮರಿ ಹೋಯಿತು.
******
ಹೋಟಿಲಿನ ಹೊರಗೆ ಭಿಕ್ಷುಕಿಯಂತೆ ಕಾಣುವಾಕೆ ನಿಂತಿದ್ದಳು. ಮನದಲ್ಲೇ ಅಂದುಕೊಂಡೆ, "ಇವರ ಗೋಳು ತಪ್ಪಿದ್ದಲ್ಲ ನಿತ್ಯ". ಅಷ್ಟು ಹೊತ್ತಿಗೆ ಹೋಟೇಲಿನ ಹುಡುಗ, ಏನೋ ಪಾರ್ಸೆಲ್ ತಂದು ಆಕೆಯ ಕೈಗಿತ್ತ. ಆಕೆ ಮೆಲ್ಲನೆ ಅಲ್ಲಿಂದ ಹೊರಟಳು. ಛೇ, ತಪ್ಪು ತಿಳಿದೆನಲ್ಲಾ ಅಂತ ಬೇಸರವಾಯಿತು. ಬೈಕು ಹತ್ತ ಹೊರಟಾಗ ಎದುರಿಗೆ ಅವಳು ನಿಂತಿದ್ದಳು - ಕೈ ನನ್ನೆದುರು ಚಾಚಿ.
******
- ಇದೊಂದು ಹೊಸ ಯತ್ನ. ಮನಸ್ಸಿಗೆ, ಕಣ್ಣಿಗೆ ಕಂಡ ಒಂದಿಷ್ಟು ಜಂಗಮ ಬಿಂಬಗಳು.. ಆವಾಗಾವಾಗ, ನಿಮ್ಮ ಮುಂದೆ.
( ಇದು ನನ್ನ ನೂರನೇ ಪೋಸ್ಟು!)

ಭಾನುವಾರ, ಜನವರಿ 20, 2008

ಗಾಳಿಪಟ - ನನಗೆ ಕಂಡಂತೆ.

"ಏನ್ ಸಾರ್, ವ್ಹೀಲ್ ಚೇರ್ ಮೇಲೆ ಸೆಟ್ಲಾಗ್ ಬಿಟ್ಟಿದೀರಾ"? - ಅಸಹಾಯಕವಾಗಿ ಗಾಲಿ ಕುರ್ಚಿಯ ಮೇಲೆ ಕುಳಿತ ವೃದ್ಧನನ್ನು ಸಿಟಿ ಹುಡುಗ ಮಾತಾಡಿಸುವ ರೀತಿ ಇದು.

"ಹುಡುಗೀರು ಯಾವ್ ಏಜ್ ಆದ್ರೂ ಓಕೆ ಕಣೋ, ಎಲ್ಲಾ ಒಂದೇ..."ಅನ್ನುತ್ತಾ ಅರ್ಥಗರ್ಭಿತವಾಗಿ ನಗುತ್ತಾನೆ ಹೀರೋ..

"ಕರೆಕ್ಟಾಗಿ ಕಾಳ್ ಹಾಕ್ಬೇಕು ಮಗಾ".. ಅನ್ನುವುದು ಪ್ರೀತಿ ಬಗ್ಗೆ ನಾಯಕನಾಡುವ ಮಾತು...

ಯೋಗರಾಜ ಭಟ್ಟರ ಗಾಳಿಪಟ ಸಿನಿಮಾದ "ಉತ್ತಮ ಸಂಭಾಷಣೆ" ಗಳ ಮಧ್ಯದ ಕೆಲವು ಸಾಲುಗಳಿವು.


ಗಾಳಿಪಟ ಚಲನಚಿತ್ರದ ಕೆಲವು ಕುತೂಹಲ ಮೂಡಿಸುವ ಸೀನುಗಳನ್ನೂ, ಹಾಡುಗಳನ್ನೂ ಈ ಮೊದಲೇ ನೋಡಿದ್ದೆನಾದ್ದರಿಂದ ಮತ್ತು ಈ ಸಿನಿಮಾದ ಬಗ್ಗೆ ಎಲ್ಲರಂತೆಯೇ ನನಗೂ ಬಹಳ ನಿರೀಕ್ಷೆಗಳು ಇದ್ದಿದ್ದರಿಂದ ಮೊದಲ ದಿನವೇ ಚಿತ್ರ ವೀಕ್ಷಿಸಿದೆ.

ದಿಗಂತ್, ಕಿಟ್ಟಿ ಮತ್ತು ಗಣಿ ಬೆಂಗಳೂರಿನಲ್ಲಿ ವಾಸವಾಗಿರುವ ಮೂರು ಜನ ಸ್ನೇಹಿತರು. ಕಿಟ್ಟಿ ಸಾಫ್ಟ್‌ವೇರ್ ಇಂಜಿನಿಯರ್, ಗಣಿ ಕ್ರೆಡಿಟ್ ಕಾರ್ಡ್ ಮಾರುವಾತ , ದಿಗಂತ್ ಇನ್ನೂ ಮೆಡಿಕಲ್ ಓದುವ ಹುಡುಗ. ಎಲ್ಲರಿಗೂ ಸಿಟಿ ಜೀವನದ ಏಕತಾನತೆ ಬೇಜಾರು ಬಂದು ದಿಗಂತನ ಅಜ್ಜನ ಮನೆ, ಮೋಡಗಳೇ ತುಂಬಿಕೊಂಡಿರುವ ಹಳ್ಳಿ ಮುಗಿಲುಪೇಟೆಗೆ ಹೊರಡುತ್ತಾರೆ.

ಅವನ ಅಜ್ಜನ ಮನೆಯ ಪಕ್ಕದ ಎಸ್ಟೇಟಿನಲ್ಲಿ ಮೂರು ಜನ ಹುಡುಗಿಯರು ಇರುವ, ಬೇಟೆಯ ಹುಚ್ಚಿನ ಅನಂತನಾಗ್ ಮನೆ ಯಜಮಾನರಾಗಿರುವ ಸಂಸಾರವೊಂದಿರುತ್ತದೆ.ಅನಂತನಾಗ್ ಹಂದಿಯೊಂದರ ಬೇಟೆಯಾಡಲು ಹೋಗಿ ಕಾಲಿನ ಸ್ವಾಧೀನ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮನುಷ್ಯ. ಮನೆಯ ಮೂರು ಹೆಣ್ಣು ಮಕ್ಕಳೂ ಮೂರು ತರಹದ ಗುಣ ಸ್ವಭಾವದವರು. ಈ ಹುಡುಗರು ಅವರ ಮನೆ ಸೇರಿಕೊಂಡು, ಸಿಕ್ಕ ಸಿಕ್ಕ ಹಾಗೆ ಚೇಷ್ಟೆ ಮಾಡಿಕೊಂಡು, ಹಂದಿ ಗಿಂದಿ ಓಡಿಸಿಕೊಂಡು ಒಂದಿಷ್ಟು ಕಾಲ ಹಾಯಾಗಿ ಕಾಲ ಕಳೆಯುತ್ತಾರೆ. ಈ ಮಧ್ಯೆ ಏನೇನೋ ಆಗಿ ಮೂರು ಜನ ಹುಡುಗರಿಗೂ ಈ ಮೂರು ಹುಡುಗಿಯರ ಮೇಲೆ ಪ್ರೀತಿ ಹುಟ್ಟುತ್ತದೆ. ಎರಡು ಜೋಡಿಗಳು ಮನೆಯವರನ್ನೂ ಒಲಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಬ್ಬನ ಕಥೆ ಏನಾಗುತ್ತದೆ ಅನ್ನುವುದು ಗಾಳಿಪಟದ ಕೊನೆಗೆ ತಿಳಿಯುತ್ತದೆ.

ಇದು ಸಿನಿಮಾದ ಒಟ್ಟು ಸಾರಾಂಶ.ಯೋಗರಾಜ ಭಟ್ಟರು ಮುಂಗಾರು ಮಳೆಯ ನಂತರ ನಿರ್ದೇಶಿಸಿದ ಬಹು ಚರ್ಚಿತ ಸಿನಿಮಾ ಗಾಳಿಪಟ. ಹಿಂದಿನ ಸಿನಿಮಾ ಮುಂಗಾರು ಮಳೆ ಯದ್ವಾ ತದ್ವಾ ಹಿಟ್ ಆಗಿದ್ದರಿಂದ ಭಟ್ಟರು ಹಳೆಯ ಸಿದ್ಧ ಸೂತ್ರಕ್ಕೇ ಅಂಟಿಕೊಂಡಿದ್ದು ಮೇಲ್ನೋಟಕ್ಕೇ ಗೋಚರವಾಗುತ್ತದೆ. ಅದೇ ಮುಂಗಾರು ಮಳೆಯ ಧಾಟಿಯ ಹಲವು ಡೈಲಾಗುಗಳು, ಮಳೆ, ಬೆಟ್ಟ, ಜಲಪಾತ. ಆದರೆ ಕೇವಲ ಅವುಗಳನ್ನು ತೋರಿಸುವ ಭರದಲ್ಲಿ ಬಿಗಿಯಾದ ಕಥೆಯನ್ನು ಹೆಣೆಯುವ ಹೊಣೆಗಾರಿಕೆಯನ್ನು ಭಟ್ಟರು ಮರೆತು ಬಿಟ್ಟಿದ್ದಾರೆ. ಇಡಿಯ ಸಿನಿಮಾದಲ್ಲಿ ಏನೂ ಕೂಡಾ ಸಂಭವಿಸುವುದೇ ಇಲ್ಲ. ಕೊನೆಗೂ!

ಮುಂಗಾರು ಮಳೆಯ ಜಪ ಮಾಡಿಕೊಂಡು ನೀವು ಥಿಯೇಟರ್‌ಗೆ ಕಾಲಿಟ್ಟರೆ ನಿರಾಸೆ ಖಚಿತ. ಏಕೆಂದರೆ ಈ ಚಿತ್ರ ಅದರ ಸನಿಹಕ್ಕೂ ಬಂದು ನಿಲ್ಲುವುದಿಲ್ಲ. ಅಲ್ಲಿನ ಬಿಗಿ ನಿರೂಪಣೆಯಿಲ್ಲ , ಅಲ್ಲಿನ ಅದ್ಭುತ ಅನ್ನಿಸುವಂತಹ ಡೈಲಾಗುಗಳಿಲ್ಲ ಮತ್ತು ಇಡಿಯ ಚಿತ್ರದಲ್ಲಿ ಏನೂ ಘಟಿಸುವುದೇ ಇಲ್ಲ. ಕ್ಲೈಮ್ಯಾಕ್ಸು ಯಾವುದೋ ಹಳೆಯ ಕನ್ನಡ ಚಿತ್ರವನ್ನು ನೆನಪಿಗೆ ತರಿಸಬಹುದಾದ ಸಾಧ್ಯತೆಗಳಿವೆ.ಗಣೇಶ್, ರಾಜೇಶ್ ಕೃಷ್ಣ, ದಿಗಂತ್ , ಡೈಸಿ ಬೋಪಣ್ಣ , ನೀತು, ಭಾವನಾ, ಅನಂತ್ ನಾಗ್, ರಂಗಾಯಣ ರಘು – ಎಲ್ಲರದೂ ಓಕೆ ಅನ್ನಿಸುವ ಅಭಿನಯ. ಗಣೇಶ್‌ಗೆ ಮಳೆಯಲ್ಲಿ ನೆನೆದುಕೊಂಡು ಡೈಲಾಗು ಹೇಳುವುದು ಮೊದಲೇ ಅಭ್ಯಾಸವಾಗಿರುವುದರಿಂದ ಎಲ್ಲರಿಗೂ ಸ್ವಲ್ಪ ಹೆಚ್ಚು ಪ್ರಿಯ ಅನ್ನಿಸಬಹುದು, ಅಷ್ಟೇ.

ಹಾಗೆಂದು ಗಾಳಿಪಟವನ್ನು ಸಾರಾಸಗಟಾಗಿ ತಿರಸ್ಕರಿಸುವ ಹಾಗಿಲ್ಲ. ಚಿತ್ರದ ಲೊಕೇಶನ್‌ಗಳು ಅದ್ಭುತ. ನವಿರು ಹಾಸ್ಯದಿಂದ ಕೂಡಿದ ಭಟ್ಟರ ಸಂಭಾಷಣೆ, ಕಾಯ್ಕಿಣಿ ಹಾಡುಗಳು, ಹರಿಕೃಷ್ಣ ಸಂಗೀತ ಮನಕ್ಕೆ ತಟ್ಟುತ್ತವೆ. ನೂರಾರು ಯಕ್ಷಗಾನ ವೇಷಧಾರಿಗಳು ಕುಣಿಯುವ “ನಧೀಂಧೀಂತನಾ" ಹಾಡಂತೂ ಕಣ್ಣಿಗೆ ಹಬ್ಬ. ಕಾಡುಹಂದಿ ನಿಮಗೆ ಗ್ರಾಫಿಕ್ಸ್ ಅನ್ನಿಸುವುದೇ ಇಲ್ಲ.

ಚಿಕ್ಕಮಗಳೂರಿನ ಎಸ್ಟೇಟು, ಹೊರಗೆ ಕಾಲಿಟ್ಟರೆ ಕೊಡಚಾದ್ರಿ ಬೆಟ್ಟ, ಅಲ್ಲಿ ನಿಂತು ನೋಡಿದರೆ ಶಿವನಸಮುದ್ರ ಜಲಪಾತ - ಹೀಗೊಂದು ಕಲ್ಪನೆ ಭಟ್ಟರಿಗೆ ಬಂದಿದ್ದಾದರೂ ಹೇಗೆ ಅಂತ! ನಿಮಗೆಲ್ಲೂ ಇದು ಅಸಹಜ ಅನ್ನಿಸುವುದಿಲ್ಲ. ಭೌಗೋಳಿಕ ಜ್ಞಾನ ಬದಿಗಿಟ್ಟು ಸಿನಿಮಾ ನೋಡುವ ಮನಸ್ಥಿತಿ ಬೇಕು ಅಷ್ಟೆ.

ಆದರೆ ಬರಿಯ ಬೆಟ್ಟ ಗುಡ್ಡ, ಜಲಪಾತ, ಮೋಡ, ಮಳೆ, ಛಾಯಾಗ್ರಹಣ ಮತ್ತು ಸಂಗೀತ ಒಂದು ಚಿತ್ರವನ್ನು ಉತ್ತಮವಾಗಿಸಲು ಸಾಧ್ಯವಿಲ್ಲ ಅನ್ನುವ ಸತ್ಯದ ಅರಿವು ಯೋಗರಾಜ ಭಟ್ಟರಿಗೆ ಆಗಿದ್ದರೆ ಚೆನ್ನಾಗಿತ್ತು.

ಇಷ್ಟಾಗಿ, ನಾನೇನೇ ಬರೆದರೂ ನೀವು ಈ ಸಿನಿಮಾ ನೋಡೇ ನೋಡುತ್ತೀರಿ, ಅದು ನನಗೆ ಗೊತ್ತು!

ಮಂಗಳವಾರ, ಜನವರಿ 01, 2008

ಹೊಸ ಸಿಂಚನ - ನವ ಲಹರಿಯ ಆಶಯದೊಡನೆ..


ಹೊಸ ವರುಷ ಕಣ್ಣೆದುರಿದೆ.

ಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.

ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು ಸಂಭ್ರಮ, ಒಂದು ನವಿರು ಭಾವ ಗರಿಗೆದರುವ ಸಮಯ. ಎಲ್ಲದನ್ನ ಸಂತಸದ ಕಣ್ಣಲ್ಲಿ ನೋಡುವ ಆತುರ.

ಹೊಸ ವರ್ಷದ ಹಿಂದಿನ ದಿನದ ಸಂಜೆಯ ಸಂತೋಷಕೂಟದಲ್ಲಿ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಅವಸರ ಆತನಿಗೆ, ಇಂತಹ ಮಧುರ ಘಳಿಗೆಯಲ್ಲಿ ಆಕೆ ತನ್ನನ್ನ ತಿರಸ್ಕರಿಸಲಾರಳು ಅನ್ನುವ ಆಶಯ. ಆರೆಂಟು ತಿಂಗಳಿಂದ ಕಣ್ಣಲ್ಲೇ ಮಾತಾಡಿದ್ದು ಸಾಕಾಗಿದೆ ಅವನಿಗೆ.

ಆಕೆಗೆ, ಅವನು ತನ್ನ ಕೈಯನ್ನ ಇಂದಾದರೂ ಹಿಡಿದು ಪ್ರೀತಿಸುವ ಸಂಗತಿಯನ್ನ ಹೇಳಬಾರದೇ ಅನ್ನುವ ಆಸೆ. ತನಗೆ ಅದನ್ನ ಹೇಳುವ ಧೈರ್ಯ ಖಂಡಿತಾ ಇಲ್ಲ, ಅದು ಆತನಿಗೂ ತಿಳಿದಿಲ್ಲವೇ?, ಹೊಸ ವರುಷ ಆ ಧೈರ್ಯ ಅವನಿಗಾದರೂ ಕೊಡಬಾರದೇ?

ಹಲವು ಕಾಲದ ಮೇಲೆ ಭೇಟಿಯಾಗುತ್ತಿರುವ ಜೀವದ ಗೆಳೆಯರ ಜೊತೆ ಕೂತು ಮಾತಾಡುವ ಸಂಭ್ರಮ ಇವನಿಗೆ. ಚಳಿಯ ರಾತ್ರಿಯಲ್ಲಿ ಯಾವುದೋ ಶಿಖರಾಗ್ರದಲ್ಲಿ ಬೆಂಕಿಯ ಸುತ್ತ ಕೂತು ಅದರ ಬೆಳಕೊಳಗೆ ಬೆಳಗು ಮಾಡುವ ಕಾತರ.. ಯಾವ ಗಲಾಟೆ, ಗೌಜೂ ಇಲ್ಲದೇ.

ಇಂದು ತನ್ನಿನಿಯ ಅಮೇರಿಕದಿಂದ ಬರುತ್ತಿದ್ದಾನೆ, ವರುಷದ ಕೆಲಸ ಮುಗಿಸಿ. ಆತ ಹೊಸವರುಷದಂದು ನನ್ನ ಜೊತೆ ಇರುತ್ತಾನೆ. ಅದಕ್ಕಿಂತ ಬೇರೇನು ಬೇಕು ಅನ್ನುವವಳು ಈ ಹುಡುಗಿ. ಅವನ ಹಿತಕರ ಅಪ್ಪುಗೆಯಲ್ಲಿ ಬೆಳಗು ಮಾಡಿದರೆ, ಅದುವೇ ಸ್ವರ್ಗ ಈಕೆಗೆ.

ಈ ಹುಡುಗನಿಗೆ ಹೊಸ ಕೆಲಸ ಸಿಕ್ಕಿದೆ, ಹೊಸ ವರುಷದಂದೇ ಸೇರಬೇಕಂತೆ, ರಜೆ ಇಲ್ಲ ಆವತ್ತು. ಅವನಿಗದು ಬಲು ಖುಷಿಯೇ! ನಾಳಿನಿಂದ ಕೆಲಸ ಹುಡುಕಿಕೊಂಡು ಫೈಲು ಹಿಡಿದು ಸುತ್ತ ಬೇಕಿಲ್ಲ. ಅಮ್ಮನನ್ನ ಕರೆದುಕೊಂಡು ದೇವಸ್ಥಾನಕ್ಕೆ ಹೋಗಬೇಕು ಅಂದು ಬೆಳಗು. ಪಾಪ ಅವಳು ಬಹಳ ಕಷ್ಟ ಪಟ್ಟಿದ್ದಳು ತನ್ನ ಒಳಿತಿಗೆ. ಆಕೆಗಿದು ಹೊಸ ವರ್ಷದ ಕಾಣಿಕೆ, ತನಗೂ ಕೂಡ.

ವಾರದ ಹಿಂದಷ್ಟೇ ಹೊಸ ಬೇಕರಿ ತೆರೆದಾತ ಈಗಾಗಲೇ ಖುಷಿಯಲ್ಲಿದ್ದಾನೆ, ಕೇಜಿಗಟ್ಟಲೆ ಕೇಕು ಖಾಲಿಯಾಗಿವೆ. ನಾಡಿದ್ದು ಅರ್ಧದಿನ ಅಂಗಡಿಯನ್ನ ಮುಚ್ಚಿ, ಹೆಂಡತಿಯನ್ನ ಸಿನಿಮಾಕ್ಕೆ ಕರೆದೊಯ್ಯುವ ಆಲೋಚನೆ ಅವನಿಗೆ. ಮಾಡಿದ ಸಾಲ ಬೇಗನೆ ತೀರುವಂತೆ ಕಾಣುತ್ತಿದೆ.

ಬ್ಲಾಕ್ ಟಿಕೇಟು ಮಾರುವ ಹುಡುಗನಿಗೆ ಸ್ವರ್ಗಕ್ಕೆ ಮೂರೇ ಗೇಣು, ಮುಂದಿನೆದಡು ದಿನದಲ್ಲಿ ತುಂಬ ದುಡ್ಡು ಮಾಡಿಬಿಡಬಹುದು, ಎಲ್ಲರಿಗೂ ರಜೆ, ಸಿನಿಮಾ ನೋಡಲು ಬಂದೇ ಬರುತ್ತಾರೆ. ತಮ್ಮನಿಗೆ ಸೈಕಲ್ಲು ತೆಗೆಸಿಕೊಡಲು ತನಗೆ ಇನ್ನು ೫೦೦ ರೂಪಾಯಷ್ಟೇ ಬೇಕಾಗಿರುವುದು. ಅದನ್ನ ಹೇಗಾದರೂ ತನಗೆ ಹೊಸ ವರ್ಷ ಕೊಟ್ಟೇ ಕೊಡುತ್ತದೆ.

ರಸ್ತೆ ಬದಿಯಲ್ಲಿ ಭಜ್ಜಿ ಮಾಡುವ ಹೆಂಗಸಿಗೂ ಕೈ ತುಂಹ ಕೆಲಸ. ಮೊದಲೇ ಚಳಿ, ಜನ ತಡರಾತ್ರಿಯ ವರೆಗೂ ರಸ್ತೆಯಲ್ಲಿರುತ್ತಾರೆ. ಎಂದಿಗಿಂತ ಹೆಚ್ಚಿನ ವ್ಯಾಪಾರ ಆಗಲೇ ಬೇಕು. ಮಗಳಿಗೆ ಹೊಸ ಬಟ್ಟೆ ಕೊಡಿಸಬೇಕು. ಹೊಸ ವರ್ಷ ತನಗೇನಾದಾರೂ ಕೊಟ್ಟರೆ, ತಾನು ಮಗಳಿಗೆ ಕೊಟ್ಟೇನು.

ಹೊಸ ವರ್ಷಕ್ಕೆ ಹಲವು ಬಣ್ಣ, ಹಚ್ಚುವವರೂ ಹಲವರು.
ಬನ್ನಿ, ನಾವೂ ಏನಾದರೂ ಬಣ್ಣ ಹಚ್ಚೋಣ, ಖುಷಿಯ ಕುಂಚ ಹಿಡಿದು, ಬದುಕ ಫಲಕದಲ್ಲಿ.

ಸೋಮವಾರ, ಡಿಸೆಂಬರ್ 31, 2007

ಕಳೆದ ನಿನ್ನೆಗಳು ಮತ್ತೆ ಬರುವವು....

ಕಳೆದ ನಿನ್ನೆಗಳು ಮತ್ತೆ ಬರುವವು ಕನಸ ಬುಟ್ಟಿ ಹೊತ್ತು
ಸುಳಿವ ಬೇಸರವ ಬದಿಗಿಡು ಗೆಳೆಯಾ ಆಸೆ ಬೀಜ ಬಿತ್ತು

ಕಾವಳ ಕಳೆಯಲು ಬೆಳಕು ಹರಿವುದು ಕಳವಳ ಬೇಕಿಲ್ಲ
ನೋವೊಳು ನಗುವುದ ಕಲಿಯದೆ ಇದ್ದರೆ ಬದುಕಿಗರ್ಥವಿಲ್ಲ

ಕಟ್ಟಿದ ಮೋಡವು ಕರಗಲು ನೋಡು ಮಳೆ ತಾನಾಗೇ ಸುರಿಯುವುದು
ಮೆಟ್ಟಿದ ಬೀಜವೆ ಮೊಳಕೆ ರೂಪದಲಿ ತಲೆಯೆತ್ತಲ್ಲೇ ನಿಲ್ಲುವುದು

ಸುತ್ತಿಗೆ ಪೆಟ್ಟನು ತಿಂದರೆ ತಾನೆ ಮೊಳೆಯದು ಭದ್ರ ಗೋಡೆಯಲಿ?
ಮೆತ್ತಗೆ ಕುಳಿತೇ ಇದ್ದರೆ ನೀನು ಯಶವು ಸಿಗುವುದೇ ಯಾನದಲಿ?

ಇದ್ದಲ್ಲಿಂದ ಹೊರಟು ಬಿಡು ಹೋರಾಡೋ ಛಲವನು ತೊಟ್ಟುಬಿಡು
ಬಿದ್ದಿರೋ ಬದುಕನು ಎತ್ತಿಬಿಡು, ಗುರಿಯಲಿ ಕಣ್ಣನು ನೆಟ್ಟುಬಿಡು

ಮಾಲೆಯಾಗಲಿ ಬಾಳಿನ ಕೊರಳಿಗೆ ಇಂಥ ಯಶೋಸೂತ್ರ
ಸೋಲೇ ಇಲ್ಲದೆ ಸಾಗಲಿ ಮುಂದೆ ನಿನ್ನ ಯಶೋ ಯಾತ್ರ!


ಎಲ್ಲರಿಗೂ ಹೊಸ ವರುಷದ ಶುಭಾಶಯಗಳು.. ನಿಮ್ಮೆಲ್ಲ ಕನಸುಗಳಿಗೆ ನವ ವರುಷವು ಹೊಸ ದಾರಿ ತೋರಲಿ.

ಗುರುವಾರ, ಡಿಸೆಂಬರ್ 06, 2007

ಚಳಿಯ ಬೆಳಗಲಿ...

ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲ
ಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.

ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ

ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?

ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.

ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!

ಮುನಿಸೇನಾದರೂ ಇದೆಯೆ ?ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.


ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶೃದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.